ಬೌದ್ಧ ಮಾರ್ಗದಲ್ಲಿ ಹೆಜ್ಜೆಯಿಡುವ ಮೊದಲು ಒಂದು ಸಮಾಲೋಚನೆ

ದೈನಂದಿನ ಜೀವನದ ಸವಾಲುಗಳನ್ನು ಎದುರಿಸುವಲ್ಲಿ, ತೊಂದರೆಗಳನ್ನು ತಪ್ಪಿಸಲು, ಬೌದ್ಧಧರ್ಮವು ಪ್ರಾಯೋಗಿಕವಾದ ತಡೆಗಟ್ಟುವ ಕ್ರಮಗಳನ್ನು ಕಲಿಸುತ್ತದೆ. ಇದು ನಮ್ಮ ಗೊಂದಲಮಯ ಆಲೋಚನೆಗಳಲ್ಲಿರುವ ನಮ್ಮ ಸಮಸ್ಯೆಗಳ ಮೂಲವನ್ನು ಮತ್ತು ನಮ್ಮ ಭಾವನಾತ್ಮಕ ಅಸಮಾಧಾನಗಳು ಮತ್ತು ಪ್ರಚೋದಿತ ನಡವಳಿಕೆಯನ್ನು ಚಲಾಯಿಸುವ ನಮ್ಮ ಅವಾಸ್ತವಿಕ ವರ್ತನೆಗಳನ್ನು ಗಮನಿಸುತ್ತದೆ. ಧ್ಯಾನದ ಮೂಲಕ ನಮ್ಮ ಅಭ್ಯಾಸದಲ್ಲಿರುವ ಅಸಮರ್ಪಕ ಚಿಂತನೆ ಮತ್ತು ನಡವಳಿಕೆಯನ್ನು ಎದುರಿಸಬಹುದು ಮತ್ತು ಪ್ರೀತಿಯಿಂದ ಕೂಡಿದ ಮತ್ತು ಸಕಾರಾತ್ಮಕವಾಗಿರುವ ಇತರರಿಂದ ಸ್ಫೂರ್ತಿಗೊಂಡು, ನಮ್ಮ ದೈನಂದಿನ ಜೀವನದ ಗುಣಮಟ್ಟವನ್ನು ಸುಧಾರಿಸಲು ನಾವು ನಮ್ಮ ಮನಸ್ಸನ್ನು ಪರಿವರ್ತಿಸಬಹುದು.

ಬೌದ್ಧಧರ್ಮ ಮತ್ತು ಅದು ನಮ್ಮ ದೈನಂದಿನ ಜೀವನಕ್ಕೆ ಹೇಗೆ ಅನ್ವಯಿಸುತ್ತದೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಲು ಬಯಸಿದರೆ, ಬೌದ್ಧ ಬೋಧನೆಗಳು ಮತ್ತು ಅದರ ಆಚರಣೆಗಾಗಿ ಬಳಸಲಾಗುವ ಸಾಂಪ್ರದಾಯಿಕ ಪದಗಳ ಅರ್ಥವನ್ನು ತಿಳಿದುಕೊಳ್ಳುವುದು ಉತ್ತಮ: ಇದೇ ಧರ್ಮ. "ಧರ್ಮ" ಎಂಬುದು ಸಂಸ್ಕೃತ ಪದವಾಗಿದ್ದು, ಇದು ಅಕ್ಷರಶಃ "ತಡೆಗಟ್ಟುವ ಕ್ರಮ" ಎಂಬುದನ್ನು ಅರ್ಥೈಸುತ್ತದೆ. ಸಮಸ್ಯೆಗಳನ್ನು ತಪ್ಪಿಸುವ ಸಲುವಾಗಿ ಇದನ್ನು ಅನುಸರಿಸುತ್ತೇವೆ. ಇದನ್ನು ನಾವು ಅರ್ಥಮಾಡಿಕೊಂಡರೆ, ಬುದ್ಧನು ಕಲಿಸಿದ ಎಲ್ಲಾ ವಿಷಯಗಳ ಹಿಂದಿನ ಉದ್ದೇಶವನ್ನು ನಾವು ಅರ್ಥಮಾಡಿಕೊಳ್ಳುತ್ತೇವೆ. 

ತಡೆಗಟ್ಟುವ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ಯಾವುದೇ ಆಸಕ್ತಿಯನ್ನು ಬೆಳೆಸಿಕೊಳ್ಳಲು, ಜೀವನದಲ್ಲಿ ಸಮಸ್ಯೆಗಳಿವೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ನಿಜವಾಗಿಯೂ ಇದಕ್ಕಾಗಿ ಸಾಕಷ್ಟು ಧೈರ್ಯ ಬೇಕಾಗಿರುತ್ತದೆ. ಬಹಳಷ್ಟು ಜನರು ತಮ್ಮನ್ನು ಅಥವಾ ತಮ್ಮ ಜೀವನವನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಅವರು ದಿನವಿಡೀ ಬಹಳಾ ಕಷ್ಟಪಟ್ಟು ಕೆಲಸ ಮಾಡುತ್ತಾರೆ ಮತ್ತು ನಂತರ, ಅವರು ದಣಿದಿರುವ ಕಾರಣ, ಸಂಜೆಯ ಸಮಯದಲ್ಲಿ ಮನರಂಜನೆ ಮತ್ತು ಇತರ ವಿಷಯಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ತಮ್ಮನ್ನು ತಾವು ವಿಚಲಿತಗೊಳಿಸಿಕೊಳ್ಳುತ್ತಾರೆ. ಪ್ರಾಮಾಣಿಕತೆಯಿಂದ, ತಮ್ಮ ಜೀವನದಲ್ಲಿನ ಸಮಸ್ಯೆಗಳ ಬಗ್ಗೆ ಪ್ರತಿಫಲನ ಮಾಡುವುದಿಲ್ಲ. ತಮ್ಮ ಸಮಸ್ಯೆಗಳನ್ನು ನೋಡಿದರೂ ಸಹ, ಅವರ ಜೀವನವು ತೃಪ್ತಿಕರವಾಗಿಲ್ಲ ಎಂದು ಒಪ್ಪಿಕೊಳ್ಳಲು ಅವರು ನಿಜವಾಗಿಯೂ ಬಯಸುವುದಿಲ್ಲ, ಏಕೆಂದರೆ ಅದು ಚಿಂತಾಕ್ರಾಂತ ವಿಷಯವಾಗಿರುತ್ತದೆ. ನಮ್ಮ ಜೀವನದ ಗುಣಮಟ್ಟವನ್ನು ಪರಿಶೀಲಿಸುವುದು ಮತ್ತು ಅದು ಅತೃಪ್ತಿಕರವಾಗಿದೆ ಎಂಬುದನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳಲು ಧೈರ್ಯ ಬೇಕಾಗಿರುತ್ತದೆ. 

ಅತೃಪ್ತಿಕರ ಸಂದರ್ಭಗಳು ಮತ್ತು ಅವುಗಳ ಕಾರಣಗಳು 

ಸಹಜವಾಗಿ, ಅತೃಪ್ತಿಕರ ವಿಷಯಗಳ ಹಂತಗಳಿರುತ್ತವೆ. ನಾವು ಹೀಗೆ ಹೇಳಬಹುದು, “ಕೆಲವೊಮ್ಮೆ ನನ್ನ ಮನಸ್ಥಿತಿ ಹದಗೆಟ್ಟಿರುತ್ತದೆ ಮತ್ತು ಕೆಲವೊಮ್ಮೆ ನನ್ನ ದಿನ ಸರಾಗವಾಗಿ ನಡೆಯುತ್ತದೆ. ಪರವಾಗಿಲ್ಲ, ಅದೇ ಜೀವನ." ನಾವು ಇದರ ಬಗ್ಗೆ ತೃಪ್ತಿಯಿಂದಿದ್ದರೆ, ಒಳ್ಳೆಯದು. ನಾವು ವಿಷಯಗಳನ್ನು ಸ್ವಲ್ಪಮಟ್ಟಿಗೆ ಸುಧಾರಿಸಬಹುದು ಎಂಬ ಭರವಸೆಯಿದ್ದರೆ, ಹಾಗೆ ಮಾಡಲು ಒಂದು ಮಾರ್ಗವನ್ನು ಹುಡುಕುವಂತೆ ಅದು ನಮ್ಮನ್ನು ಪ್ರರೇಪಿಸುತ್ತದೆ. ನಮ್ಮ ಜೀವನದ ಗುಣಮಟ್ಟವನ್ನು ಸುಧಾರಿಸುವ ವಿಧಾನಗಳನ್ನು ಕಂಡುಹಿಡಿಯಲು, ನಾವು ನಮ್ಮ ಸಮಸ್ಯೆಗಳ ಮೂಲವನ್ನು ಗುರುತಿಸಬೇಕು. ಹೆಚ್ಚಿನ ಜನರು ತಮ್ಮ ಸಮಸ್ಯೆಗಳ ಮೂಲಗಳಿಗಾಗಿ ತಮ್ಮ ಹೊರಗೆ ನೋಡುತ್ತಾರೆ. "ನಿಮ್ಮಿಂದಾಗಿ, ನಿಮ್ಮೊಂದಿಗಿನ ನನ್ನ ಸಂಬಂಧದಲ್ಲಿ ಕಷ್ಟಗಳಿವೆ! ನಾನು ಬಯಸಿದಂತೆ ನೀವು ನಡೆದುಕೊಳ್ಳುತ್ತಿಲ್ಲ.” ರಾಜಕೀಯ ಅಥವಾ ಆರ್ಥಿಕ ಪರಿಸ್ಥಿತಿಯ ಮೇಲೆ ನಾವು ನಮ್ಮ ಕಷ್ಟಗಳನ್ನು ದೂಷಿಸಬಹುದು. ಕೆಲವು ಮನೋವಿಜ್ಞಾನದ ಶಾಲೆಗಳ ಪ್ರಕಾರ, ನಾವು ನಮ್ಮ ಬಾಲ್ಯದಲ್ಲಿನ ಆಘಾತಕಾರಿ ಘಟನೆಗಳನ್ನು ವಿಶ್ಲೇಷಿಸಿ, ಇಂದು ನಮಗಿರುವ ಸಮಸ್ಯೆಗಳ ಕಾರಣಗಳನ್ನು ಹುಡುಕಬಹುದು. ನಮ್ಮ ದುಃಖವನ್ನು ಇತರರ ಮೇಲೆ ದೂಷಿಸುವುದು ಬಹಳಾ ಸುಲಭ. ಇತರರ ಮೇಲೆ ಅಥವಾ ಸಾಮಾಜಿಕ ಅಥವಾ ಆರ್ಥಿಕ ಅಂಶಗಳ ಮೇಲೆ ಆರೋಪವನ್ನು ಹೇರಿಸುವುದರಿಂದ ಯಾವುದೇ ಪರಿಹಾರ ಸಿಗುವುದಿಲ್ಲ. ಈ ಪರಿಕಲ್ಪನಾ ಚೌಕಟ್ಟನ್ನು ಅನುಸರಿಸಿದರೆ, ನಾವು ದಯಾಮಯಿಯಾಗಬಹುದು ಮತ್ತು ಅದರಿಂದ ಸ್ವಲ್ಪ ಪ್ರಯೋಜನವಾಗಬಹುದು, ಆದರೆ ಕೇವಲ ಈ ಕ್ರಮದಿಂದ, ಮಾನಸಿಕ ಸಮಸ್ಯೆಗಳು ಮತ್ತು ಅತೃಪ್ತಿಯಿಂದ ಮುಕ್ತಿ ಸಿಗುವುದಿಲ್ಲ ಎಂದು ಹೆಚ್ಚಿನ ಜನರು ಕಂಡುಕೊಳ್ಳುತ್ತಾರೆ. 

ಇತರರು, ಸಮಾಜ ಮತ್ತು ಇತರ ವಿಷಯಗಳು ನಮ್ಮ ಸಮಸ್ಯೆಗಳ ಕಾರಣವಾಗಿದ್ದರೂ, ಅವುಗಳು ನಿಜವಾದ, ಆಳವಾದ ಮೂಲವಾಗಿರುವುದಿಲ್ಲ ಎಂದು ಬೌದ್ಧಧರ್ಮ ಹೇಳುತ್ತದೆ. ನಮ್ಮ ಕಷ್ಟಗಳ ಆಳವಾದ ಮೂಲವನ್ನು ಕಂಡುಹಿಡಿಯಲು ನಾವು ಆಂತರಿಕವಾಗಿ ನೋಡಬೇಕು. ಅಂತಿಮವಾಗಿ, ನಾವು ಜೀವನದಲ್ಲಿ ಅತೃಪ್ತರಾಗಿದ್ದರೆ, ಅದು ನಮ್ಮ ಪರಿಸ್ಥಿತಿಗಾಗಿ ಇರುವ ಪ್ರತಿಕ್ರಿಯೆಯಾಗಿರುತ್ತದೆ. ವಿಭಿನ್ನ ಜನರು ಒಂದೇ ಪರಿಸ್ಥಿತಿಗೆ ವಿಭಿನ್ನವಾಗಿ ಪ್ರತಿಕ್ರಿಯಿಸುತ್ತಾರೆ. ಕೇವಲ ನಮ್ಮನ್ನೇ ಪರಿಗಣಿಸಿದರೂ ಸಹ, ಒಂದು ದಿನದಿಂದ ಮುಂದಿನ ದಿನಕ್ಕೆ, ನಾವು ಕಷ್ಟಗಳಿಗೆ ವಿಭಿನ್ನವಾಗಿ ಪ್ರತಿಕ್ರಿಯಿಸುತ್ತೇವೆ. ಸಮಸ್ಯೆಯ ಮೂಲವು ಕೇವಲ ಬಾಹ್ಯ ಪರಿಸ್ಥಿತಿಯಾಗಿದ್ದರೆ, ನಾವು ಎಲ್ಲಾ ಸಮಯದಲ್ಲೂ ಒಂದೇ ರೀತಿಯಲ್ಲಿ ಪ್ರತಿಕ್ರಿಯಿಸಬೇಕು, ಆದರೆ ನಾವು ಹಾಗೆ ಮಾಡುವುದಿಲ್ಲ. ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ ಎಂಬುದರ ಮೇಲೆ ಪರಿಣಾಮ ಬೀರುವ ಅಂಶಗಳಿವೆ, ಉದಾಹರಣೆಗೆ ಕೆಲಸದ ದಿನಚರಿ ಉತ್ತಮವಾಗಿರಬಹುದು, ಆದರೆ ಇವು ಕೇವಲ ಬಾಹ್ಯ ಕಾರಣಗಳ ಅಂಶಗಳಾಗಿವೆ. ಅವುಗಳು ಬೇಕಾದಷ್ಟು ಗಹನವಾಗಿರುವುದಿಲ್ಲ. 

ನಾವು ಸರಿಯಾಗಿ ಗಮನಸಿದರೆ, ನಮ್ಮ ಜೀವನ, ನಮ್ಮ ಬಗ್ಗೆ ಮತ್ತು ನಮ್ಮ ಸನ್ನಿವೇಶಗಳ ಬಗೆಗಿನ ನಮ್ಮ ವರ್ತನೆಗಳು, ನಾವು ಹೇಗೆ ಭಾವಿಸುತ್ತೇವೆ ಎಂಬುದರ ಮೇಲೆ ಬಹಳಾ ಅವಲಂಬಿತವಾಗಿರುತ್ತವೆ. ಉದಾಹರಣೆಗೆ, ನಮ್ಮ ದಿನವು ಉತ್ತಮವಾಗಿರುವಾಗ, ನಾವು ಪ್ರತಿಕ್ಷಣವು ನಮ್ಮ ಬಗ್ಗೆ ವಿಷಾದಿಸುವುದಿಲ್ಲ; ಆದರೆ ನಮ್ಮ ದಿನವು ಚೆನ್ನಾಗಿಲ್ಲದಿದ್ದಾಗ, ಸ್ವಯಂ ಕನಿಕರದ ಭಾವನೆ ಮರುಕಳಿಸುತ್ತದೆ. ನಾವು ಜೀವನದ ಬಗ್ಗೆ ಹೊಂದಿರುವ ಮೂಲಭೂತ ವರ್ತನೆಗಳು, ನಾವು ಜೀವನವನ್ನು ಹೇಗೆ ಅನುಭವಿಸುತ್ತೇವೆ ಎಂಬುದನ್ನು ರೂಪಿಸುತ್ತವೆ. ನಾವು ಹೆಚ್ಚು ಆಳವಾಗಿ ಪರಿಶೀಲಿಸಿದರೆ, ನಮ್ಮ ವರ್ತನೆಗಳು ಗೊಂದಲವನ್ನು ಆಧರಿಸಿವೆ ಎಂದು ನಾವು ಕಂಡುಕೊಳ್ಳುತ್ತೇವೆ. 

ಸಮಸ್ಯೆಗಳ ಮೂಲವಾಗಿ ಗೊಂದಲ 

ನಾವು ಗೊಂದಲವನ್ನು ಪರಿಶೀಲಿಸಿದರೆ, ನಡವಳಿಕೆಯ ಕಾರಣ ಮತ್ತು ಪರಿಣಾಮದ ಬಗೆಗಿರುವ ಗೊಂದಲವು ಅದರ ಒಂದು ಅಂಶವಾಗಿದೆ ಎಂದು ನಾವು ಗಮನಿಸುತ್ತೇವೆ. ಏನು ಮಾಡಬೇಕು ಅಥವಾ ಏನು ಹೇಳಬೇಕು ಮತ್ತು ಅವುಗಳ ಪರಿಣಾಮವಾಗಿ ಏನಾಗುತ್ತದೆ ಎಂಬುದರ ಕುರಿತು ನಾವು ಗೊಂದಲಕ್ಕೊಳಗಾಗಿರುತ್ತೇವೆ. ಯಾವ ರೀತಿಯ ಕೆಲಸ ಪಡೆಯಬೇಕು, ಮದುವೆಯಾಗಬೇಕೇ, ಮಕ್ಕಳು ಬೇಕೇ, ಇತ್ಯಾದಿಗಳ ಬಗ್ಗೆ ನಾವು ತುಂಬಾ ಗೊಂದಲಕ್ಕೊಳಗಾಗಬಹುದು. ನಮಗೆ ಗೊತ್ತಿಲ್ಲ. ನಮ್ಮ ಆಯ್ಕೆಗಳನ್ನು ಏನು ಅನುಸರಿಸುತ್ತದೆ ಎಂಬುದರ ಕುರಿತಾದ ನಮ್ಮ ಆಲೋಚನೆಗಳು ಕೇವಲ ಕಲ್ಪನೆಗಳಾಗಿದ್ದು, ಅವು ಆಶಾವಾದಿ ಚಿಂತನೆ ಅಥವಾ ಭಯ ಮತ್ತು ಮತಿವಿಕಲ್ಪವನ್ನು ಆಧರಿಸಿರುತ್ತವೆ. ನಾವು ಒಬ್ಬ ವ್ಯಕ್ತಿಯೊಂದಿಗೆ ಆಳವಾದ ಸಂಬಂಧವನ್ನು ಬೆಳೆಸಿದರೆ, ನಾವು ಅವರೊಂದಿಗೆ ಎಂದೆಂದಿಗೂ ಸಂತೋಷವಾಗಿ ಬದುಕುತ್ತೇವೆ ಎಂಬ ಕಟ್ಟುಕಥೆಯನ್ನು ನಂಬಬಹುದು. ಅಥವಾ ಅವರು ನಮ್ಮನ್ನು ಬಿಟ್ಟುಹೋಗುತ್ತಾರೆ ಎಂದು ನಾವು ಭಯಪಟ್ಟು ಅವರಿಂದ ಭಾವನಾತ್ಮಕವಾದ ಅಂತರವನ್ನು ಕಾಪಾಡಿಕೊಳ್ಳಬಹುದು. ನಾವು ಒಂದು ಸನ್ನಿವೇಶದ ಬಗ್ಗೆ ಅಸಮಾಧಾನಗೊಂಡರೆ, ಕಿರುಚಾಡುವುದು ಅದನ್ನು ಉತ್ತಮಗೊಳಿಸುತ್ತದೆ ಎಂದು ನಾವು ಭಾವಿಸುತ್ತೇವೆ. ನಮ್ಮ ಕೆಲಸಕ್ಕೆ ಇನ್ನೊಬ್ಬರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದರ ಕುರಿತು ನಮಗೆ ತುಂಬಾ ಗೊಂದಲಮಯವಾದ ಕಲ್ಪನೆಯಿದೆ. ನಾವು ಗಲಾಟೆ ಮಾಡಿ, ನಮ್ಮ ಮನಸಿನ ಮಾತುಗಳನ್ನಾಡಿದರೆ ನಮಗೆ ಒಳ್ಳೆಯದಾಗುತ್ತದೆ ಮತ್ತು ಎಲ್ಲವೂ ಸರಿಯಾಗುತ್ತದೆ ಎಂದು ನಾವು ಭಾವಿಸುತ್ತೇವೆ, ಆದರೆ ಹಾಗೆ ಎಲ್ಲವೂ ಸರಿಯಾಗುವುದಿಲ್ಲ. ಮುಂದೆ ಏನಾಗುತ್ತದೆ ಎಂದು ತಿಳಿಯಲು ನಾವು ಬಯಸುತ್ತೇವೆ. ನಾವು ಹತಾಶರಾಗಿ ಜ್ಯೋತಿಷ್ಯಕ್ಕೆ ತಿರುಗುತ್ತೇವೆ ಅಥವಾ ದಿ ಬುಕ್ ಆಫ್ ಚೇಂಜಸ್, ಚಿಂಗ್‌ನಂತಹ ಪುಸ್ತಕಗಳ ಮೇಲೆ ಹಣ ಖರ್ಚುಮಾಡುತ್ತೇವೆ. ನಾವು ಅಂತಹ ಕೆಲಸಗಳನ್ನು ಏಕೆ ಮಾಡುತ್ತೇವೆ? ಮುಂದೆ ಏನಾಗುತ್ತದೆ ಎಂಬುದು ನಮ್ಮ ನಿಯಂತ್ರಣದಲ್ಲಿರಬೇಕೆಂದು ನಾವು ಬಯಸುತ್ತೇವೆ. 

ನಾವು ಮತ್ತು ಇತರರು ಹೇಗೆ ಅಸ್ತಿತ್ವದಲ್ಲಿದ್ದೇವೆ ಮತ್ತು ಪ್ರಪಂಚವು ಹೇಗೆ ಅಸ್ತಿತ್ವದಲ್ಲಿದೆ ಎಂಬುದರ ಕುರಿತಾದ ಗೊಂದಲವು, ಆಳವಾದ ಮಟ್ಟದ ಗೊಂದಲವಾಗಿರುತ್ತದೆ ಎಂದು ಬೌದ್ಧಧರ್ಮ ಹೇಳುತ್ತದೆ. ನಿಯಂತ್ರಣದ ಸಂಪೂರ್ಣ ಸಮಸ್ಯೆಯ ಬಗ್ಗೆ ನಾವು ಗೊಂದಲಕ್ಕೊಳಗಾಗಿದ್ದೇವೆ. ನಮಗೆ ಏನಾಗುತ್ತದೆ ಎಂಬುದನ್ನು ಸಂಪೂರ್ಣವಾಗಿ ನಿಯಂತ್ರಿಸಲು ಸಾಧ್ಯವಿದೆ ಎಂದು ನಾವು ಭಾವಿಸುತ್ತೇವೆ. ಉದಾಹರಣೆಗೆ, ಬೇರೆಯವರಿಗೆ ನಮ್ಮ ಕಂಪ್ಯೂಟರ್ ಅನ್ನು ಬಳಸಲು ಬಿಡದಿದ್ದರೆ, ಅದು ಎಂದಿಗೂ ಕ್ರ್ಯಾಶ್ ಆಗುವುದಿಲ್ಲ ಎಂದು ನಾವು ಭಾವಿಸಬಹುದು. ಇದರಿಂದಾಗಿ, ನಾವು ನಿರೀಕ್ಷಿಸಿದಂತೆ ಆಗದಿದ್ದಾಗ ನಾವು ನಿರಾಶೆಗೊಳ್ಳುತ್ತೇವೆ. ನಾವು ಯಾವಾಗಲೂ ನಿಯಂತ್ರಣದಲ್ಲಿರಲು ಸಾಧ್ಯವಿಲ್ಲ. ಅದು ವಾಸ್ತವವಲ್ಲ. ವಾಸ್ತವವು ಬಹಳ ಸಂಕೀರ್ಣವಾಗಿರುತ್ತದೆ. ನಾವು ಏನು ಮಾಡುತ್ತೇವೆ ಎಂಬುದು ಮಾತ್ರವಲ್ಲದೆ ಏನಾಗುತ್ತದೆ ಎಂಬುದರ ಮೇಲೆ ಸಹ ಅನೇಕ ವಿಷಯಗಳು ಪ್ರಭಾವ ಬೀರುತ್ತವೆ. ನಾವು ಸಂಪೂರ್ಣವಾಗಿ ನಿಯಂತ್ರಣದಲ್ಲಿರದ ಅರ್ಥವು ಬಾಹ್ಯ ಶಕ್ತಿಗಳ ಸ್ವಾಧೀನದಲ್ಲಿದ್ದೇವೆ ಎಂದಲ್ಲ. ಏನಾಗುತ್ತದೆ ಎಂಬುದರಲ್ಲಿ ನಾವು ಸಹಭಾಗಿಗಳಾಗಿರುತ್ತೇವೆ, ಆದರೆ ಏನಾಗುತ್ತದೆ ಎಂಬುದನ್ನು ನಿರ್ಧರಿಸುವ ಏಕೈಕ ಅಂಶವಾಗಿರುವುದಿಲ್ಲ. 

ನಮ್ಮ ಗೊಂದಲ ಮತ್ತು ಅಭದ್ರತೆಯ ಕಾರಣವಾಗಿ, ನಾವು ವಿನಾಶಕಾರಿ ನಡವಳಿಕೆಯ ಬಗ್ಗೆ ತಿಳಿಯದೆ, ವಿನಾಶಕಾರಿಯಾಗಿ ವರ್ತಿಸುತ್ತೇವೆ. ಏಕೆಂದರೆ ನಾವು ಗೊಂದಲದ ಭಾವನೆಗಳು, ಗೊಂದಲದ ವರ್ತನೆಗಳು ಮತ್ತು ನಮ್ಮ ಅಭ್ಯಾಸದ ನಡವಳಿಕೆಯ ಪ್ರಚೋದಿತ ಪ್ರಭಾವಕ್ಕೆ ಒಳಗಾಗಿರುತ್ತೇವೆ. ನಾವು ಕೇವಲ ಇತರರ ಕಡೆಗೆ ವಿನಾಶಕಾರಿಯಾಗಿ ವರ್ತಿಸುವುದಲ್ಲದೆ, ನಾವು ಪ್ರಾಥಮಿಕವಾಗಿ ಸ್ವಯಂ-ವಿನಾಶಕಾರಿ ರೀತಿಯಲ್ಲಿ ವರ್ತಿಸುತ್ತೇವೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ನಮಗೆ ನಾವೇ ಹೆಚ್ಚು ಸಮಸ್ಯೆಗಳನ್ನು ಸೃಷ್ಟಿಸಿಕೊಳ್ಳುತ್ತೇವೆ. ನಾವು ಕಡಿಮೆ ಸಮಸ್ಯೆಗಳನ್ನು ಅಥವಾ ನಮ್ಮ ಸಮಸ್ಯೆಗಳಿಂದ ವಿಮೋಚನೆಯನ್ನು ಬಯಸಿದರೆ, ಅಥವಾ ಇನ್ನೂ ಹೆಚ್ಚಿನದಾಗಿ, ಇತರರಿಗೆ ಅವರ ಸಮಸ್ಯೆಗಳಿಂದ ಹೊರಬರಲು ಸಹಾಯ ಮಾಡುವ ಸಾಮರ್ಥ್ಯವನ್ನು ಬಯಸಿದರೆ, ನಮ್ಮ ಮಿತಿಗಳ ಮೂಲವನ್ನು ನಾವು ಒಪ್ಪಿಕೊಳ್ಳಬೇಕು. 

ನಮ್ಮನ್ನು ಗೊಂದಲದಿಂದ ಮುಕ್ತಗೊಳಿಸುವುದು 

ನಮ್ಮ ಸಮಸ್ಯೆಗಳ ಮೂಲ ಗೊಂದಲ ಎಂದು ನಾವು ಗುರುತಿಸಬಹುದು ಎಂದು ಹೇಳೋಣ. ಇದು ತುಂಬಾ ಕಷ್ಟವಾಗಿರುವುದಿಲ್ಲ. ಅನೇಕರು ಹೀಗೆ ಹೇಳುವ ಹಂತವನ್ನು ತಲುಪುತ್ತಾರೆ, "ನಾನು ನಿಜವಾಗಿಯೂ ಗೊಂದಲಕ್ಕೊಳಗಾಗಿದ್ದೇನೆ. ನಾನು ಗಲಿಬಿಲಿಗೊಂಡಿದ್ದೇನೆ.” ಅದಾದ ನಂತರ ಏನಾಗುತ್ತದೆ? ನಾವು ಈ ಕೋರ್ಸ್‌ ಅಥವಾ ಆ ಹಿಮ್ಮೆಟ್ಟುವಿಕೆಯ ಮೇಲೆ ಹಣವನ್ನು ಖರ್ಚು ಮಾಡುವ ಮೊದಲು, ನಮ್ಮ ಗೊಂದಲವನ್ನು ನಿವಾರಿಸಲು ಸಾಧ್ಯವಿದೆ ಎಂದು ನಮಗೆ ನಿಜವಾಗಿಯೂ ಮನವರಿಕೆಯಾಗಿದೆಯೇ ಎಂಬುದನ್ನು ನಾವು ಗಂಭೀರವಾಗಿ ಪರಿಗಣಿಸಬೇಕಾಗಿದೆ. ಗೊಂದಲವನ್ನು ನಿವಾರಿಸಲು ಸಾಧ್ಯವಿಲ್ಲ ಎಂದು ನಾವು ಭಾವಿಸಿದರೆ, ನಾವು ಏನು ಮಾಡಲು ಪ್ರಯತ್ನಿಸುತ್ತಿದ್ದೇವೆ? ನಮ್ಮ ಗೊಂದಲವನ್ನು ಹೋಗಲಾಡಿಸಲು ಸಾಧ್ಯವಾಗಬಹುದೇನೋ ಎಂಬ ಭಾವನೆಯೊಂದಿಗೆ ನಾವು ಹೋದರೆ, ಅದು ಧೃಡವಾದ ನಿರ್ಧಾರವಾಗಿರುವುದಿಲ್ಲ. ಅದು ಆಶಾವಾದಿ ಚಿಂತನೆಯಾಗಿರುತ್ತದೆ. 

ಸ್ವಾತಂತ್ರ್ಯವು ಹಲವಾರು ವಿಧಗಳಲ್ಲಿ ಬರಬಹುದು ಎಂದು ನಾವು ಭಾವಿಸಬಹುದು. ಯಾರಾದರೂ ನಮ್ಮನ್ನು ಉಳಿಸುತ್ತಾರೆ ಎಂದು ನಾವು ಭಾವಿಸಬಹುದು. ಇದು ದೇವರಂತಹ ಉನ್ನತವಾದ, ದೈವಿಕ ಜೀವಿಯಾಗಿರಬಹುದು ಎಂದು ಭಾವಿಸಿ, ನಾವು ಆಸ್ತಿಕರಾಗಿ ಮರುಕಳಿಸಬಹುದು. ಪರ್ಯಾಯವಾಗಿ, ನಮ್ಮ ಗೊಂದಲದಿಂದ ನಮ್ಮನ್ನು ರಕ್ಷಿಸಲು, ಒಬ್ಬ ಆಧ್ಯಾತ್ಮಿಕ ಶಿಕ್ಷಕ, ಸಹಪಾಠಿ ಅಥವಾ ಇನ್ನಿತರರ ಕಡೆಗೆ ತಿರುಗಬಹುದು. ಅಂತಹ ಸಂದರ್ಭಗಳಲ್ಲಿ, ಇತರ ವ್ಯಕ್ತಿಗಳ ಮೇಲೆ ಅವಲಂಬಿತರಾಗಿ, ಅಪಕ್ವವಾಗಿ ವರ್ತಿಸುವುದು ಸಹಜವಾಗಿರುತ್ತದೆ. ನಮ್ಮನ್ನು ಉಳಿಸುವ ಸಲುವಾಗಿ ಒಬ್ಬರನ್ನು ಹುಡುಕಲು ನಾವು ಎಷ್ಟು ಹತಾಶರಾಗಿರುತ್ತೇವೆ ಎಂದರೆ, ನಾವು ಯಾರ ಕಡೆಗೆ ತಿರುಗುತ್ತಿದ್ದೇವೆ ಎಂಬುದರ ಕುರಿತು ನಮಗೆ ವಿವೇಚನೆಯಿರುವುದಿಲ್ಲ. ಸ್ವತಃ ಗೊಂದಲದಿಂದ ಮುಕ್ತರಾಗದ ಮತ್ತು ಅವರ ಸ್ವಂತ ಗೊಂದಲದ ಭಾವನೆಗಳು ಮತ್ತು ವರ್ತನೆಗಳಿಂದಾಗಿ ನಮ್ಮ ನಿಷ್ಕಪಟ ಅವಲಂಬನೆಯನ್ನು ದುರುಪಯೋಗ ಪಡಿಸಿಕೊಳ್ಳಬಹುದಾದ ವ್ಯಕ್ತಿಯನ್ನು ನಾವು ಆಯ್ಕೆ ಮಾಡಬಹುದು. ಇದು ಮುಂದುವರಿಯಲು, ಭದ್ರತೆಯಿಂದ ಕೂಡಿದ ಮಾರ್ಗವಾಗಿರುವುದಿಲ್ಲ. ನಮ್ಮ ಎಲ್ಲಾ ಗೊಂದಲಗಳನ್ನು ನಿವಾರಿಸಲು ನಾವು ಆಧ್ಯಾತ್ಮಿಕ ಗುರು ಅಥವಾ ಒಂದು ಸಂಬಂಧದ ಮೇಲೆ ಅವಲಂಬಿತರಾಗುವುದು ಸಾಧ್ಯವಿಲ್ಲ. ನಮ್ಮ ಗೊಂದಲವನ್ನು ನಾವೇ ನಿವಾರಿಸಿಕೊಳ್ಳಬೇಕು. 

ಆಧ್ಯಾತ್ಮಿಕ ಶಿಕ್ಷಕ ಅಥವಾ ಸಹಪಾಠಿಯೊಂದಿಗಿನ ಸಂಬಂಧವು ಸಹಾಯಕವಾದ ಸಂದರ್ಭಗಳನ್ನು ಒದಗಿಸುತ್ತದೆ, ಆದರೆ ಈ ಸಂಬಂಧವು ಆರೋಗ್ಯಕರವಾಗಿರುವಾಗ ಮಾತ್ರ. ಅದು ಅನಾರೋಗ್ಯಕರವಾಗಿದ್ದಲ್ಲಿ, ಇದು ನಮ್ಮ ಗೊಂದಲಗಳನ್ನು ಮತ್ತಷ್ಟು ಹದಗೆಡಿಸುತ್ತದೆ. ಇದು ಇನ್ನಷ್ಟು ಗೊಂದಲಕ್ಕೆ ಕಾರಣವಾಗುತ್ತದೆ. ಆರಂಭದಲ್ಲಿ, ಈ ಶಿಕ್ಷಕರು ಅತ್ಯುನ್ನತವಾಗಿದ್ದಾರೆ, ನಮ್ಮ ಸಹಪಾಠಿ ಅತ್ಯುನ್ನತವಾಗಿದ್ದಾರೆ ಎಂಬ ನಿರಾಕರಣೆಯ ಭಾವನೆಯಲ್ಲಿ ನಾವು ಆಳವಾಗಿ ಮುಳುಗಿರಬಹುದು; ಆದರೆ ಅಂತಿಮವಾಗಿ ನಮ್ಮ ನಿಷ್ಕಪಟತೆಯು ಕಳಚಿಹೋಗುತ್ತದೆ. ಇನ್ನೊಬ್ಬ ವ್ಯಕ್ತಿಯಲ್ಲಿನ ದೌರ್ಬಲ್ಯಗಳನ್ನು ನಾವು ನೋಡಲು ಪ್ರಾರಂಭಿಸಿದಾಗ ಮತ್ತು ಇನ್ನೊಬ್ಬ ವ್ಯಕ್ತಿಯು ನಮ್ಮ ಎಲ್ಲಾ ಗೊಂದಲಗಳಿಂದ ನಮ್ಮನ್ನು ರಕ್ಷಿಸಲಾಗುವುದಿಲ್ಲ ಎಂದು ತಿಳಿದಾಗ ನಾವು ಕುಸಿದುಹೋಗುತ್ತೇವೆ. ನಾವು ದ್ರೋಹವನ್ನು ಅನುಭವಿಸುತ್ತೇವೆ. ನಮ್ಮ ನಂಬಿಕೆ ಮತ್ತು ವಿಶ್ವಾಸಕ್ಕೆ ದ್ರೋಹ ಬಗೆದಂತೆ ಅನುಭವವಾಗುತ್ತದೆ. ಅದೊಂದು ಭಯಾನಕ ಭಾವನೆ! ಇದನ್ನು ತಪ್ಪಿಸಲು ಮೊದಲಿನಿಂದಲೂ ಪ್ರಯತ್ನಿಸುವುದು ಬಹಳ ಮುಖ್ಯ. ನಾವು ತಡೆಗಟ್ಟುವ ಕ್ರಮಗಳನ್ನು ತೆಗೆದುಕೊಳ್ಳಬೇಕು. ಯಾವುದು ಸಾಧ್ಯ ಮತ್ತು ಯಾವುದು ಅಲ್ಲ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಆಧ್ಯಾತ್ಮಿಕ ಶಿಕ್ಷಕರೊಬ್ಬರು ಏನು ಮಾಡಬಹುದು ಮತ್ತು ಏನು ಮಾಡಲಾಗುವುದಿಲ್ಲ? ಕುಸಿತವನ್ನು ತಪ್ಪಿಸಲು ನಾವು ತಡೆಗಟ್ಟುವ ಕ್ರಮಗಳನ್ನು ತೆಗೆದುಕೊಳ್ಳಬೇಕು. 

ಗೊಂದಲವಿಲ್ಲದ ಮನಸ್ಥಿತಿಯನ್ನು ನಾವು ಬೆಳೆಸಿಕೊಳ್ಳಬೇಕು. ಗೊಂದಲಕ್ಕೆ ವಿರುದ್ಧವಾದ ತಿಳುವಳಿಕೆಯು, ಗೊಂದಲವನ್ನು ಉದ್ಭವಿಸದಂತೆ ತಡೆಯುತ್ತದೆ. ಬೌದ್ಧಧರ್ಮದಲ್ಲಿನ ನಮ್ಮ ಅಭ್ಯಾಸವು ಆತ್ಮಾವಲೋಕನದ ಮೇಲೆ ಮತ್ತು ನಮ್ಮ ವರ್ತನೆಗಳು, ನಮ್ಮ ಗೊಂದಲದ ಭಾವನೆಗಳು ಮತ್ತು ನಮ್ಮ ಹಠಾತ್ತಾದ, ಪ್ರಚೋದಿತ ಅಥವಾ ನರಸಂಬಂಧಿ ನಡವಳಿಕೆಗಳ ಮೇಲೆ ಗಮನ ಹರಿಸುವುದಾಗಿರುತ್ತದೆ. ಇದರರ್ಥ ನಮ್ಮಲ್ಲಿರುವ ಉತ್ತಮವಲ್ಲದ ವಿಷಯಗಳನ್ನು, ನಾವು ನಿರಾಕರಿಸಲು ಇಷ್ಟಪಡುವ ವಿಷಯಗಳನ್ನು ನೋಡಲು ಸಿದ್ಧರಾಗಿರುವುದು. ನಮ್ಮ ಸಮಸ್ಯೆಗಳನ್ನು ಉಂಟುಮಾಡುವ ವಿಷಯಗಳನ್ನು ಅಥವಾ ನಮ್ಮ ಸಮಸ್ಯೆಗಳ ಲಕ್ಷಣಗಳನ್ನು ನಾವು ಗಮನಿಸಿದಾಗ, ಅವುಗಳನ್ನು ಜಯಿಸಲು, ಅವುಗಳ ವಿರೋಧಿಗಳನ್ನು ನಾವು ಅನ್ವಯಿಸಬೇಕಾಗುತ್ತದೆ. ಇದೆಲ್ಲವೂ ಅಧ್ಯಯನ ಮತ್ತು ಧ್ಯಾನವನ್ನು ಆಧರಿಸಿರುತ್ತದೆ. ಗೊಂದಲದ ಭಾವನೆಗಳು ಮತ್ತು ವರ್ತನೆಗಳು ಮತ್ತು ಅವು ಎಲ್ಲಿಂದ ಬರುತ್ತವೆ ಎಂಬುದನ್ನು ಗುರುತಿಸಲು ನಾವು ಕಲಿಯಬೇಕು. 

ಧ್ಯಾನ 

ಧ್ಯಾನ ಎಂದರೆ ನಾವು ವಿವಿಧ ವಿರೋಧಿಗಳನ್ನು ನಿಯಂತ್ರಿತ ಪರಿಸ್ಥಿತಿಯಲ್ಲಿ ಅನ್ವಯಿಸುವುದನ್ನು ಅಭ್ಯಾಸ ಮಾಡುತ್ತೇವೆ, ಇದರಿಂದ ನಾವು ಅವುಗಳೊಂದಿಗೆ ಪರಿಚಿತರಾಗಿ, ಅವುಗಳನ್ನು ನಿಜ ಜೀವನದಲ್ಲಿ ಹೇಗೆ ಅನ್ವಯಿಸಬೇಕು ಮತ್ತು ಹೇಗೆ ಅಭ್ಯಾಸ ಮಾಡಬೇಕು ಎಂಬುದನ್ನು ತಿಳಿಯುತ್ತೇವೆ. ಉದಾಹರಣೆಗೆ, ಇತರರು ನಾವು ಬಯಸಿದ ರೀತಿಯಲ್ಲಿ ವರ್ತಿಸದಿರದ ಕಾರಣವಾಗಿ ನಾವು ಅವರ ಮೇಲೆ ಕೋಪಗೊಂಡರೆ, ಧ್ಯಾನದಲ್ಲಿ ನಾವು ಈ ಸಂದರ್ಭದ ಬಗ್ಗೆ ಯೋಚಿಸುತ್ತೇವೆ ಮತ್ತು ಅವುಗಳನ್ನು ವಿಭಿನ್ನ ದೃಷ್ಟಿಕೋನದಿಂದ ನೋಡಲು ಪ್ರಯತ್ನಿಸುತ್ತೇವೆ. ಇತರ ವ್ಯಕ್ತಿಯು ವಿವಿಧ ಕಾರಣಗಳಿಂದಾಗಿ, ನಮಗೆ ಒಪ್ಪಲಾಗದ ರೀತಿಯಲ್ಲಿ ವರ್ತಿಸುತ್ತಿರುತ್ತಾರೆ. ಅವರು ನಮ್ಮನ್ನು ಪ್ರೀತಿಸದ ಕಾರಣದಿಂದಾಗಿ ಅಥವಾ ನಮ್ಮ ಮೇಲಿನ ದ್ವೇಷದಿಂದ ಹಾಗೆ ವರ್ತಿಸುತ್ತಿರುವುದಿಲ್ಲ. "ಇನ್ನು ಮುಂದೆ ನನ್ನ ಸ್ನೇಹಿತರು ನನ್ನನ್ನು ಪ್ರೀತಿಸುವುದಿಲ್ಲ ಏಕೆಂದರೆ ಅವರು ನನ್ನನ್ನು ಕರೆಯಲಿಲ್ಲ." – ಧ್ಯಾನದಲ್ಲಿ, ನಾವು ಇಂತಹ ವರ್ತನೆಗಳನ್ನು ನಿವಾರಿಸಲು ಪ್ರಯತ್ನಿಸುತ್ತೇವೆ. 

ಈ ರೀತಿಯ ಪರಿಸ್ಥಿತಿಯನ್ನು ನಾವು ಹೆಚ್ಚು ಶಾಂತ, ತಿಳುವಳಿಕೆ ಮತ್ತು ತಾಳ್ಮೆಯ ಮನಸ್ಥಿತಿಯೊಂದಿಗೆ ಅಭ್ಯಾಸ ಮಾಡಬಹುದಾದರೆ, ಆ ವ್ಯಕ್ತಿಯು ನಮ್ಮನ್ನು ಒಂದು ವಾರದವರೆಗೆ ಕರೆಯದಿದ್ದರೂ, ನಾವು ಅಸಮಾಧಾನಗೊಳ್ಳುವುದಿಲ್ಲ. ನಾವು ಅಸಮಾಧಾನಗೊಳ್ಳಲು ಪ್ರಾರಂಭಿಸಿದಾಗ, ‘ಬಹುಶಃ ಈ ವ್ಯಕ್ತಿಯು ಬಹಳಾ ಕಾರ್ಯನಿರತರಾಗಿರಬಹುದು ಮತ್ತು ಅವರ ಜೀವನದಲ್ಲಿ ನಾವೇ ಅತ್ಯಂತ ಪ್ರಮುಖ ವ್ಯಕ್ತಿ ಎಂಬ ಯೋಚನೆ ಅಹಂಕಾರದಿಂದ ಕೂಡಿದೆ’ ಎಂದು ನಾವು ನೆನಪಿಸಿಕೊಳ್ಳುತ್ತೇವೆ. ಇದು ನಮ್ಮ ಭಾವನಾತ್ಮಕ ಅಸಮಾಧಾನವನ್ನು ತಣ್ಣಗಾಗಿಸಲು ಸಹಾಯ ಮಾಡುತ್ತದೆ. 

ಬೌದ್ಧ ಆಚರಣೆಯು ಪರಿಪೂರ್ಣವಾದ ವ್ಯವಹಾರ 

ಬೌದ್ಧ ಆಚರಣೆಯು ಹವ್ಯಾಸವಲ್ಲ. ಇದು ನಾವು ಕ್ರೀಡೆಯಾಗಿ ಅಥವಾ ವಿಶ್ರಾಂತಿಗಾಗಿ ಮಾಡುವ ಕಾರ್ಯವಲ್ಲ. ಬೌದ್ಧ ಆಚರಣೆಯು ಪೂರ್ಣ ಸಮಯದ ಕಾರ್ಯವಾಗಿರುತ್ತದೆ. ನಮ್ಮ ಜೀವನದಲ್ಲಿನ ಎಲ್ಲದರ ಬಗೆಗಿನ ನಮ್ಮ ವರ್ತನೆಗಳ ಮೇಲೆ ಶ್ರಮ ಪಡುವುದೇ ನಮ್ಮ ಕಾಯಕವಾಗಿರುತ್ತದೆ. ಉದಾಹರಣೆಗೆ, ನಾವು ಎಲ್ಲಾ ಜೀವಿಗಳಿಗಾಗಿ ಪ್ರೀತಿಯನ್ನು ಬೆಳೆಸಲು ಕೆಲಸ ಮಾಡುತ್ತಿದ್ದರೆ, ನಾವು ಅದನ್ನು ನಮ್ಮ ಕುಟುಂಬಗಳಿಗಾಗಿ ಅನ್ವಯಿಸಬೇಕಾಗಿದೆ. ಬಹಳಷ್ಟು ಜನರು, ಪ್ರೀತಿಯನ್ನು ಬೆಳೆಸುವ ಧ್ಯಾನಕ್ಕಾಗಿ, ತಮ್ಮ ಕೋಣೆಗಳಲ್ಲಿ ಕುಳಿತುಕೊಳ್ಳುತ್ತಾರೆ, ಆದರೆ ಅವರ ಪೋಷಕರು ಅಥವಾ ಅವರ ಸಂಗಾತಿಗಳೊಂದಿಗೆ ಸರಿಹೊಂದುವುದಿಲ್ಲ. ಇದು ದುಃಖಕರವಾದ ವಿಷಯ. 

ವಿಪರೀತತೆಗಳನ್ನು ತಪ್ಪಿಸುವುದು 

ನಮ್ಮ ನಿಜ ಜೀವನದಲ್ಲಿ, ನಮ್ಮ ಮನೆಯಲ್ಲಿನ ಮತ್ತು ಕೆಲಸದಲ್ಲಿನ ಸನ್ನಿವೇಶಗಳಿಗೆ ಬೌದ್ಧ ಬೋಧನೆಗಳನ್ನು ಅನ್ವಯಿಸಲು ಪ್ರಯತ್ನಿಸುವಾಗ, ನಾವು ವಿಪರೀತತೆಗಳನ್ನು ತಪ್ಪಿಸಬೇಕು. ವಿಪರೀತದ ಒಂದು ಬದಿಯು, ಎಲ್ಲಾ ಆಪಾದನೆಗಳನ್ನು ಇತರರ ಮೇಲೆ ಹೇರಿಸುವುದಾಗಿರುತ್ತದೆ. ಇನ್ನೊಂದು ಬದಿಯು, ಸಂಪೂರ್ಣ ಆಪಾದನೆಯನ್ನು ನಮ್ಮ ಮೇಲೆ ಹೇರುವುದಾಗಿರುತ್ತದೆ. ಜೀವನದಲ್ಲಿನ ಆಗುಹೋಗುಗಳು ಬಹಳಾ ಸಂಕೀರ್ಣವಾಗಿರುತ್ತವೆ. ಎರಡೂ ಬದಿಯವರು ಇದಕ್ಕೆ ಕಾರಣರಾಗಿರುತ್ತಾರೆ: ಇತರರು ಕಾರಣರಾಗಿರುತ್ತಾರೆ; ನಾವೂ ಕಾರಣರಾಗಿರುತ್ತೇವೆ. ಇತರರು, ಅವರ ನಡವಳಿಕೆ ಮತ್ತು ವರ್ತನೆಗಳನ್ನು ಬದಲಾಯಿಸಲು ಪ್ರೇರೇಪಿಸುವಂತೆ ನಾವು ಪ್ರಯತ್ನಿಸಬಹುದು, ಆದರೆ ವೈಯಕ್ತಿಕ ಅನುಭವದಿಂದ ಇದು ಸುಲಭವಲ್ಲ ಎಂದು ನಮಗೆಲ್ಲರಿಗೂ ತಿಳಿದೇ ಇದೆ - ವಿಶೇಷವಾಗಿ ನಾವು ನೀತಿವಂತರಾಗಿ, ಪವಿತ್ರರಾಗಿ ತೋರಿ, ಇನ್ನೊಬ್ಬರನ್ನು ಪಾಪಿ ಎಂದು ದೂಷಿಸಿದರೆ, ಇದು ಸುಲಭವಾಗಿರುವುದಿಲ್ಲ. ಇದಕ್ಕಿಂತ ಹೆಚ್ಚಾಗಿ, ನಮ್ಮನ್ನು ನಾವೇ ಬದಲಾಯಿಸಿಕೊಳ್ಳಲು ಪ್ರಯತ್ನಿಸುವುದು ಸುಲಭವಾಗಿರುತ್ತದೆ. ಇತರರು, ನಮ್ಮ ಸಲಹೆಗಳನ್ನು ಸ್ವೀಕರಿಸಲು ತಯಾರಾಗಿದ್ದಲ್ಲಿ ಮತ್ತು ಅವರು ಹೆಚ್ಚು ಆಕ್ರಮಣಕಾರಿಯಾಗದಿದ್ದಲ್ಲಿ ನಾವು ಹಾಗೆ ಮಾಡಬಹುದು, ಆದರೆ ಹೆಚ್ಚು ಮಹತ್ವದ ಕಾರ್ಯವು, ನಮ್ಮ ಮೇಲೆ ನಾವೇ ಶ್ರಮ ಪಡುವುದಾಗಿರುತ್ತದೆ. 

ನಮ್ಮ ಮೇಲೆ ನಾವೇ ಕೆಲಸ ಮಾಡುವಾಗ, ನಾವು ಇನ್ನೊಂದು ವಿಪರೀತದ ಜೋಡಿಯನ್ನು ಗಮನಿಸಬೇಕು: ನಮ್ಮ ಭಾವನೆಗಳಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿರುವುದು ಅಥವಾ ಅವುಗಳ ಬಗ್ಗೆ ಸ್ವಲ್ಪವೂ ತಿಳಿದಿರದಿರುವುದು. ಮೊದಲನೆಯದು ಆತ್ಮರತಿಯಲ್ಲಿ ತಲ್ಲೀನರಾಗಿರುವುದಾಗಿರುತ್ತದೆ. ನಾವು ಏನನ್ನು ಅನುಭವಿಸುತ್ತೇವೆ ಎಂಬುದರ ಬಗ್ಗೆ ಮಾತ್ರ ನಾವು ಕಾಳಜಿ ವಹಿಸುತ್ತೇವೆ. ಇತರರು ಏನನ್ನು ಅನುಭವಿಸುತ್ತಿದ್ದಾರೆ ಎಂಬುದನ್ನು ನಾವು ನಿರ್ಲಕ್ಷಿಸುತ್ತೇವೆ. ಇತರ ಜನರು ಏನನ್ನು ಅನುಭವಿಸುತ್ತಿದ್ದಾರೆ ಎನ್ನುವುದಕ್ಕಿಂತ, ನಾವು ಏನನ್ನು ಅನುಭವಿಸುತ್ತೇವೆ ಎಂಬುದು ಬಹಳ ಮುಖ್ಯವಾಗಿರುತ್ತದೆ ಎಂದು ನಾವು ಯೋಚಿಸುತ್ತೇವೆ. ಮತ್ತೊಂದೆಡೆ, ನಾವು ನಮ್ಮ ಭಾವನೆಗಳೊಂದಿಗಿನ ಸಂಪರ್ಕವನ್ನು ಸಂಪೂರ್ಣವಾಗಿ ಕಳೆದುಕೊಳ್ಳಬಹುದು, ಅಥವಾ ನಮಗೆ ನೊವೋಕೇನ್ ಚುಚ್ಚುಮದ್ದು ನೀಡಿದಂತೆ, ನಮ್ಮಲ್ಲಿರುವ ಯಾವುದೇ ಭಾವನೆಗಳನ್ನು ಅನುಭವಿಸಲಾಗದೇ ಇರಬಹುದು. ಈ ವಿಪರೀತಗಳನ್ನು ತಪ್ಪಿಸಲು ಸೂಕ್ಷ್ಮ ಸಮತೋಲನದ ಅಗತ್ಯವಿರುತ್ತದೆ. ಇದು ಅಷ್ಟು ಸುಲಭವಾಗಿರುವುದಿಲ್ಲ. 

ಇತರರೊಂದಿಗೆ ಇರುವಾಗ, ನಾವು ನಮ್ಮನ್ನೇ ಯಾವಾಗಲೂ ಗಮನಿಸುತ್ತಿದ್ದರೆ, ಅದು ಒಂದು ರೀತಿಯ ಕಾಲ್ಪನಿಕ ದ್ವಂದ್ವವನ್ನು ಸೃಷ್ಟಿಸುತ್ತದೆ - ನಾವು ಮತ್ತು ನಾವು ಏನು ಭಾವಿಸುತ್ತೇವೆ ಅಥವಾ ಏನು ಮಾಡುತ್ತಿದ್ದೇವೆ ಎಂಬುದು - ಆದ್ದರಿಂದ ನಾವು ಪ್ರಾಮಾಣಿಕವಾಗಿ, ಯಾರೊಂದಿಗೂ ಸಂಬಂಧಿಸುವುದಿಲ್ಲ ಅಥವಾ ಇರಲಾಗುವುದಿಲ್ಲ. ನಿಜವಾದ ಕಲೆಯು ಸಹಜ ಮತ್ತು ಪ್ರಾಮಾಣಿಕ ರೀತಿಯಲ್ಲಿ ಸಂಬಂಧಿಸುವುದು ಮತ್ತು ವರ್ತಿಸುವುದಾಗಿರುತ್ತದೆ, ಜೊತೆಗೆ ನಮ್ಮ ಗಮನದ ಒಂದು ಭಾಗವು, ನಮ್ಮ ಪ್ರೇರಣೆ ಮತ್ತು ವರ್ತನೆಯ ಮೇಲೆ ಇರುವುದಾಗಿರುತ್ತದೆ. ನಾವು ಹೀಗಿರಲು ಪ್ರಯತ್ನಿಸಬೇಕು, ಆದರೆ ನಾವು ಇತರ ವ್ಯಕ್ತಿಯೊಂದಿಗೆ ಪ್ರಸ್ತುತವಾಗಿರದ, ಬಿರಿತವಿರುವ ರೀತಿಯಲ್ಲಿ ಇರಬಾರದು. ಯಾರೊಂದಿಗಾದರೂ ಸಂಬಂಧ ಹೊಂದುವ ಪ್ರಕ್ರಿಯೆಯಲ್ಲಿ, ನಾವು ನಮ್ಮ ಪ್ರೇರಣೆ ಮತ್ತು ಭಾವನೆಗಳನ್ನು ಪರಿಶೀಲಿಸುತ್ತಿದ್ದರೆ, ಕೆಲವೊಮ್ಮೆ ಆ ವ್ಯಕ್ತಿಗೆ ಅದನ್ನು ತಿಳಿಸುವುದು ಸಹಾಯಕವಾಗಿರುತ್ತದೆ. ಆದರೆ, ಈ ವ್ಯಕ್ತಿಗೆ ನಮ್ಮ ಬಗ್ಗೆ ತಿಳಿಸಬೇಕೆಂಬ ಭಾವನೆಯು ಆತ್ಮರತಿಯಿಂದ ಕೂಡಿರುತ್ತದೆ. ಸಾಮಾನ್ಯವಾಗಿ, ನಾವು ಏನನ್ನು ಅನುಭವಿಸುತ್ತಿದ್ದೇವೆ ಎಂಬುದರ ಬಗ್ಗೆ ಇತರ ಜನರಿಗೆ ಆಸಕ್ತಿಯಿರುವುದಿಲ್ಲ. ಅವರು ತಿಳಿದುಕೊಳ್ಳಲು ಬಯಸುತ್ತಾರೆ ಎಂದು ಭಾವಿಸುವುದು ಅಹಂಕಾರದಿಂದ ಕೂಡಿರುತ್ತದೆ. ನಾವು ಸ್ವಾರ್ಥದಿಂದ ವರ್ತಿಸಲು ಪ್ರಾರಂಭಿಸುತ್ತಿದ್ದೇವೆ ಎಂದು ನಾವು ಗಮನಿಸಿದಾಗ, ನಾವು ಅದನ್ನು ನಿಲ್ಲಿಸಬಹುದು. ನಾವು ಅದನ್ನು ಘೋಷಿಸಬೇಕಾಗಿಲ್ಲ. 

ಇನ್ನೊಂದು ವಿಪರೀತದ ಜೋಡಿ ಎಂದರೆ ನಾವೆಲ್ಲರೂ ಕೆಟ್ಟವರು ಅಥವಾ ನಾವೆಲ್ಲರೂ ಒಳ್ಳೆಯವರು ಎಂದು ಯೋಚಿಸುವುದು. ನಮ್ಮ ಕಷ್ಟಗಳು, ಸಮಸ್ಯೆಗಳು ಮತ್ತು ನಮ್ಮ ಗೊಂದಲದ ಭಾವನೆಗಳಿಗೆ ನಾವು ಹೆಚ್ಚು ಒತ್ತು ನೀಡಿದರೆ, ನಾವು ಕೆಟ್ಟ ವ್ಯಕ್ತಿಗಳು ಎಂದು ಭಾವಿಸಲು ಪ್ರಾರಂಭಿಸಬಹುದು. ಅದು ಬಹಳ ಸುಲಭವಾಗಿ ಅಪರಾಧಿ ಪ್ರಜ್ಞೆಯಾಗಿ ಮಾರ್ಪಾಡಾಗಬಹುದು. “ನಾನು ಅಭ್ಯಾಸ ಮಾಡಬೇಕು. ನಾನು ಹಾಗೆ ಮಾಡದಿದ್ದರೆ, ನಾನು ಕೆಟ್ಟ ವ್ಯಕ್ತಿ." ಇಂತಹ ಯೋಚನೆ ಹುಚ್ಚುತನವನ್ನು ಆಧಾರಿಸಿರುತ್ತದೆ. 

ನಾವು ಇನ್ನೊಂದು ಕಡೆಯ ವಿಪರೀತತೆಯನ್ನು ತಪ್ಪಿಸಬೇಕಾಗಿದೆ, ಅದುವೇ ನಮ್ಮ ಸಕಾರಾತ್ಮಕ ಅಂಶಗಳಿಗೆ ಹೆಚ್ಚು ಒತ್ತು ನೀಡುವುದಾಗಿರುತ್ತದೆ. “ನಾವೆಲ್ಲರೂ ಪರಿಪೂರ್ಣರು. ನಾವೆಲ್ಲರೂ ಬುದ್ಧರು. ಎಲ್ಲವೂ ಅದ್ಭುತವಾಗಿದೆ.” ಇದು ತುಂಬಾ ಅಪಾಯಕಾರಿಯಾಗಿರುತ್ತದೆ, ಏಕೆಂದರೆ ನಾವು ಏನನ್ನೂ ಬಿಟ್ಟುಕೊಡುವ ಅಗತ್ಯವಿಲ್ಲ ಎಂದು ಇದು ಸೂಚಿಸುತ್ತದೆ; ನಾವು ಯಾವುದೇ ನಕಾರಾತ್ಮಕತೆಯನ್ನು ನಿಲ್ಲಿಸುವ ಅಗತ್ಯವಿಲ್ಲ ಏಕೆಂದರೆ ನಾವು ನಮ್ಮ ಮೂಲ ಉತ್ತಮ ಗುಣಗಳನ್ನು ನೋಡಿದರೆ ಸಾಕು ಎಂದು ಇದು ಸೂಚಿಸುತ್ತದೆ. “ನಾನು ಅದ್ಭುತವಾಗಿದ್ದೇನೆ. ನಾನು ಪರಿಪೂರ್ಣನಾಗಿದ್ದೇನೆ. ನನ್ನ ನಕಾರಾತ್ಮಕ ನಡವಳಿಕೆಯನ್ನು ನಾನು ನಿಲ್ಲಿಸಬೇಕಾಗಿಲ್ಲ. ನಾನು ಈಗಾಗಲೇ ಬುದ್ಧನಾಗಿರುವೆ!" ನಮಗೆ ಸಮತೋಲನದ ಅಗತ್ಯವಿದೆ. ನಾವು ನಮ್ಮ ಬಗ್ಗೆಯೇ ತೀರಾ ಕೀಳಾಗಿ ಭಾವಿಸುತ್ತಿದ್ದರೆ, ನಮ್ಮ ಎಲ್ಲಾ ನ್ಯೂನತೆಗಳನ್ನು ನಿವಾರಿಸುವ ಮತ್ತು ಬುದ್ಧರಾಗುವ ನಮ್ಮ ಸಾಮರ್ಥ್ಯವನ್ನು ನಾವು ನೆನಪಿಸಿಕೊಳ್ಳಬೇಕು; ನಾವು ನಮ್ಮನ್ನೇ ತೀರಾ ಕನಿಕರದಿಂದ ನೋಡುತ್ತಿದ್ದರೆ, ನಮ್ಮ ನಕಾರಾತ್ಮಕ ಅಂಶಗಳನ್ನು ನಾವು ಒತ್ತಿಹೇಳಬೇಕು. 

ಜವಾಬ್ದಾರಿಯನ್ನು ತೆಗೆದುಕೊಳ್ಳುವುದು 

ಮೂಲಭೂತವಾಗಿ, ನಮ್ಮ ಜವಾಬ್ದಾರಿಯನ್ನು ನಾವೇ ತೆಗೆದುಕೊಳ್ಳಬೇಕು: ನಮ್ಮ ಅಭಿವೃದ್ಧಿಗಾಗಿ ಮತ್ತು ನಮ್ಮ ಸಮಸ್ಯೆಗಳನ್ನು ನಿವಾರಿಸುವುದಕ್ಕಾಗಿ. ಸಹಜವಾಗಿ, ನಮಗೆ ಸಹಾಯ ಬೇಕಾಗಿರುತ್ತದೆ. ಇದನ್ನು ಏಕಾಂತವಾಗಿ ಮಾಡುವುದು ಸುಲಭವಲ್ಲ. ತಮ್ಮ ಮೇಲೆ ತಾವೇ ಮಾಡುತ್ತಿರುವ ಮತ್ತು ತಮ್ಮ ಸಮಸ್ಯೆಗಳಿಗೆ ಇತರರನ್ನು ದೂಷಿಸದಿರುವ ಆಧ್ಯಾತ್ಮಿಕ ಶಿಕ್ಷಕರಿಂದ ಅಥವಾ ನಮ್ಮ ಆಧ್ಯಾತ್ಮಿಕ ಸಮುದಾಯದಿಂದ, ಸಮಾನ ಮನಸ್ಕ ಜನರಿಂದ ಸಹಾಯ ಪಡೆಯಬಹುದು. ಅದಕ್ಕಾಗಿಯೇ ಸಹಭಾಗಿತ್ವದಲ್ಲಿ, ಸಮಾನ ಮನೋಭಾವವನ್ನು ಹಂಚಿಕೊಳ್ಳುವುದು ಮುಖ್ಯವಾಗಿರುತ್ತದೆ, ವಿಶೇಷವಾಗಿ ಯಾವುದೇ ಸಮಸ್ಯೆಗಳು ಉದ್ಭವಿಸಿದಾಗ, ಅದಕ್ಕಾಗಿ ಇನ್ನೊಬ್ಬರನ್ನು ದೂಷಿಸದಿರುವುದು. ಇಬ್ಬರೂ ಸಹಭಾಗಿಗಳು ಒಬ್ಬರನ್ನೊಬ್ಬರು ದೂಷಿಸುತ್ತಿದ್ದರೆ, ಅದರಿಂದ ಕೆಲಸವಾಗುವುದಿಲ್ಲ. ಒಬ್ಬ ಸಹಭಾಗಿ ಮಾತ್ರ ತನ್ನ ಮೇಲೆ ಕೆಲಸ ಮಾಡುತ್ತಿದ್ದರೆ ಮತ್ತು ಇನ್ನೊಬ್ಬರು ಕೇವಲ ದೂಷಿಸುತ್ತಿದ್ದರೆ, ಅದು ಕೆಲಸ ಮಾಡುವುದಿಲ್ಲ. ಈಗಾಗಲೇ ನಾವಿರುವ ಸಂಬಂಧದಲ್ಲಿ, ಇತರ ವ್ಯಕ್ತಿಯು ನಮ್ಮ ಮೇಲೆ ಆರೋಪ ಹೇರುತ್ತಿದ್ದರೆ, ಮತ್ತು ನಾವು ಹೇಗೆ ಕಾರಣರಾಗಿರಬಹುದು ಎಂದು ನಾವು ಯೋಚಿಸುತ್ತಿದ್ದರೆ, ನಾವು ಆ ಸಂಬಂಧವನ್ನು ಮುರಿಯಬೇಕಾಗಿಲ್ಲ, ಆದರೆ ಅದು ಹೆಚ್ಚು ಕಷ್ಟಕರವಾಗಿರುತ್ತದೆ. “ನಾನು ಇದನ್ನೆಲ್ಲ ಸಹಿಸಿಕೊಳ್ಳುತ್ತಿದ್ದೇನೆ! ಇದು ತುಂಬಾ ಕಷ್ಟ!" – ಈ ರೀತಿಯಾಗಿ, ಸಂಬಂಧದಲ್ಲಿ ಹುತಾತ್ಮರಾಗುವುದನ್ನು ತಪ್ಪಿಸಲು ನಾವು ಪ್ರಯತ್ನಿಸಬೇಕು. ಇದು ಹುಚ್ಚುತನದ ವಿಷಯವಾಗಿರುತ್ತದೆ.

ಸ್ಫೂರ್ತಿ ಪಡೆಯುವುದು  

ಬೌದ್ಧ ಮಾರ್ಗವು ಸುಲಭವಾಗಿರುವುದಿಲ್ಲ. ಇದು ಜೀವನದಲ್ಲಿನ ವಿಕಾರವಾದ ವಿಷಯಗಳೊಂದಿಗೆ ವ್ಯವಹರಿಸುತ್ತದೆ. ಮುಂದೆ ಸಾಗಲು ನಮಗೆ ಒಂದು ರೀತಿಯ ಶಕ್ತಿ ಬೇಕು; ನಮಗೆ ಸ್ಫೂರ್ತಿಯ ದೃಢ ಮೂಲಗಳು ಬೇಕು. ನಮ್ಮ ಸ್ಫೂರ್ತಿಯ ಮೂಲವು, ತಮ್ಮ ಬಗ್ಗೆ ಅಥವಾ ಇತರರ ಬಗ್ಗೆ ಅಥವಾ ಬೌದ್ಧ ಇತಿಹಾಸದಲ್ಲಿನ ಪವಾಡಗಳ ಅದ್ಭುತ ಕಥೆಗಳನ್ನು ಹೇಳುವ ಶಿಕ್ಷಕರಾಗಿದ್ದರೆ, ಇದು ಸ್ಫೂರ್ತಿಯ ಅತ್ಯಂತ ದೃಢವಾದ ಮೂಲವಾಗಿರುವುದಿಲ್ಲ. ಖಂಡಿತವಾಗಿಯೂ ಇದು ಬಹಳ ರೋಮಾಂಚನಕಾರಿಯಾಗಿರಬಹುದು, ಆದರೆ ಇದು ನಮ್ಮ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ನಾವು ಪರಿಶೀಲಿಸಬೇಕು. ಅನೇಕರಿಗೆ, ಇದು ಪವಾಡಗಳ ಮೂಲಕ ಮೋಕ್ಷವನ್ನು ಬಯಸುವ ಕಾಲ್ಪನಿಕ ಜಗತ್ತಿನ ಚಿಂತನೆಯನ್ನು ಬಲಪಡಿಸುತ್ತದೆ. ಒಬ್ಬ ಮಹಾನ್ ಜಾದೂಗಾರನು, ತಮ್ಮ ಅದ್ಭುತ ಶಕ್ತಿಗಳಿಂದ ನಮ್ಮನ್ನು ಉಳಿಸುತ್ತಾರೆ ಅಥವಾ ನಾವು ಇದ್ದಕ್ಕಿದ್ದಂತೆ ಈ ಅದ್ಭುತವಾದ ವಿಷಯಗಳನ್ನು ಅಭಿವೃದ್ಧಿಪಡಿಸಲು ಸಾಧ್ಯವಾಗುತ್ತದೆ ಎಂದು ನಾವು ಊಹಿಸುತ್ತೇವೆ. ಈ ಕಟ್ಟು ಕಥೆಗಳ ಬಗ್ಗೆ ನಾವು ಬಹಳ ಜಾಗರೂಕರಾಗಿರಬೇಕು. ಅವು ನಮ್ಮ ನಂಬಿಕೆಯನ್ನು ಪ್ರೇರೇಪಿಸಬಹುದು, ಮತ್ತು ಅದು ಸಹಾಯಕವಾಗಿರಬಹುದು, ಆದರೆ ಇದು ಸ್ಫೂರ್ತಿಯ ದೃಢವಾದ ಆಧಾರವಾಗಿರುವುದಿಲ್ಲ. ನಮಗೆ ದೃಢವಾದ ಆಧಾರ ಬೇಕು. 

ಒಂದು ಅತ್ಯುತ್ತಮ ಉದಾಹರಣೆಯು ಬುದ್ಧನೇ ಆಗಿರುವರು. ಬುದ್ಧನು ಜನರನ್ನು "ಸ್ಫೂರ್ತಿ"ಗೊಳಿಸಲು ಅಥವಾ ಅವರ ಮೆಚ್ಚುಗೆ ಪಡೆಯಲು ಅದ್ಭುತವಾದ ಕಥೆಗಳನ್ನು ಹೇಳಲು ಪ್ರಯತ್ನಿಸಲಿಲ್ಲ. ತಮ್ಮ ಸುತ್ತ-ಮುತ್ತಲು ಇರುವ ಜನರನ್ನು ಆಶೀರ್ವದಿಸುವ ಮೂಲಕ ಅಂತಹ ವಿಷಯಗಳನ್ನು ಪ್ರಸಾರ ಮಾಡಲಿಲ್ಲ. ಬುದ್ಧನು ಬಳಸಿದ ಸಾದೃಶ್ಯವು, ಬುದ್ದನು ಸೂರ್ಯನಂತೆ ಇರುವನು ಎಂದು, ಇದನ್ನು ಬೌದ್ಧ ಬೋಧನೆಗಳ ಉದ್ದಕ್ಕೂ ಪುನರಾವರ್ತಿಸಲಾಗಿದೆ. ಸೂರ್ಯನು, ಜನರನ್ನು ಬೆಚ್ಚಗಾಗಿಸಲು ಪ್ರಯತ್ನಿಸುವುದಿಲ್ಲ. ಸೂರ್ಯನ ನೈಸರ್ಗಿಕ ರೀತಿಯೇ, ಸ್ವಯಂಪ್ರೇರಿತವಾಗಿ ಎಲ್ಲರನ್ನು ಬೆಚ್ಚಗಾಗಿಸುತ್ತದೆ. ಅದ್ಭುತವಾದ ಕಥೆಯನ್ನು ಕೇಳುವುದರಿಂದ ಅಥವಾ ಪ್ರತಿಮೆಯು ತಲೆಯನ್ನು ಸ್ಪರ್ಶಿಸುವುದರಿಂದ ಅಥವಾ ನಮ್ಮ ಕುತ್ತಿಗೆಗೆ ಕೆಂಪು ದಾರವನ್ನು ಕಟ್ಟಿಕೊಳ್ಳುವುದರಿಂದ ನಾವು ಉತ್ತುಂಗಕ್ಕೆ ಏರಬಹುದು, ಆದರೆ ಅದು ದೃಢವಾಗಿರುವುದಿಲ್ಲ. ಸ್ಪೂರ್ತಿಯ ದೃಢವಾದ ಮೂಲವೆಂದರೆ ಸ್ವಯಂಪ್ರೇರಿತರಾದ ಮತ್ತು ಸ್ವಾಭಾವಿಕರಾದ ಒಬ್ಬ ಶಿಕ್ಷಕರಾಗಿರುತ್ತಾರೆ - ಬೌದ್ಧ ಬೋಧನೆಗಳನ್ನು ಅಭ್ಯಾಸ ಮಾಡುವ ಪರಿಣಾಮದಿಂದಾಗಿ ಇದು ಅವರ ಸ್ವಭಾವವಾಗಿರುತ್ತದೆ. ಇದು ನಿಜವಾಗಿಯೂ ಸ್ಪೂರ್ತಿದಾಯಕವಾಗಿರುತ್ತದೆ, ನಮ್ಮನ್ನು ರಂಜಿಸಲು ಮಾಡುವ ನಟನೆಯಾಗಿರುವುದಿಲ್ಲ. ಇದು ಅದ್ಭುತ ಕಥೆಯಂತೆ ರೋಮಾಂಚನಕಾರಿಯಾಗಿಲ್ಲದಿದ್ದರೂ, ಇದು ನಮಗೆ ದೃಢವಾದ ಸ್ಫೂರ್ತಿಯ ಅರ್ಥವನ್ನು ನೀಡುತ್ತದೆ. 

ನಾವು ಪ್ರಗತಿಪಟ್ಟಂತೆ, ನಮ್ಮದೇ ಆದ ಪ್ರಗತಿಯಿಂದ ನಾವು ಸ್ಫೂರ್ತಿ ಪಡೆಯಬಹುದು - ಅದ್ಭುತ ಶಕ್ತಿಗಳನ್ನು ಪಡೆಯುವುದರಿಂದ ಅಲ್ಲ, ಬದಲಿಗೆ ನಮ್ಮ ಸ್ವಭಾವದಲ್ಲಿನ ನಿಧಾನವಾದ ಬದಲಾವಣೆಗಳಿಂದ. ನಮ್ಮದೇ ಆದ ಸಕಾರಾತ್ಮಕ ಕ್ರಿಯೆಗಳಲ್ಲಿ ಸಂತೋಷಪಡುವಂತೆ ಬೋಧನೆಗಳು ಯಾವಾಗಲೂ ಒತ್ತಿಹೇಳುತ್ತವೆ. ಪ್ರಗತಿಯು ಎಂದಿಗೂ ರೇಖಾತ್ಮಕವಾಗಿರುವುದಿಲ್ಲ ಎಂಬುದನ್ನು ನೆನಪಿಟ್ಟುಕೊಳ್ಳುವುದು ಬಹಳ ಮುಖ್ಯ. ಪ್ರತಿದಿನವೂ ಉತ್ತಮವಾಗಿರುವುದಿಲ್ಲ. ಜೀವನದ ಒಂದು ಗುಣಲಕ್ಷಣವೆಂದರೆ, ಅನಿಯಂತ್ರಿತವಾಗಿ ಮರುಕಳಿಸುವ ಎಲ್ಲಾ ಸಮಸ್ಯೆಗಳಿಂದ ಸಂಪೂರ್ಣವಾಗಿ ಮುಕ್ತರಾಗುವವರೆಗೆ, ನಮ್ಮ ಮನಸ್ಥಿತಿಗಳಲ್ಲಿ ಏರಿಳಿತವಾಗುತ್ತಲೇ ಇರುತ್ತದೆ, ಆದರೆ ಇದನ್ನು ಸಾಧಿಸುವುದು ಬಹಳಾ ಅತ್ಯುನ್ನತವಾದ ಸ್ಥಿತಿಯಾಗಿರುತ್ತದೆ. ನಾವು ಕೆಲವೊಮ್ಮೆ ಸಂತೋಷ ಪಡುತ್ತೇವೆ ಮತ್ತು ಕೆಲವೊಮ್ಮೆ ಅಸಂತೋಷವನ್ನು ಅನುಭವಿಸುತ್ತೇವೆ ಎಂಬುದನ್ನು ನಾವು ನಿರೀಕ್ಷಿಸಬೇಕು. ಕೆಲವೊಮ್ಮೆ ಸಕಾರಾತ್ಮಕ ರೀತಿಯಲ್ಲಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ ಮತ್ತು ಇನ್ನಿತರ ಸಮಯಗಳಲ್ಲಿ ನಮ್ಮಲ್ಲಿರುವ ಹುಚ್ಚುತನದ ಅಭ್ಯಾಸಗಳು ಹೆಚ್ಚು ಶಕ್ತಿಯುತವಾಗಿರುತ್ತವೆ. ಇದರಲ್ಲಿ ಏರಿಳಿತ ಇದ್ದೇ ಇರುತ್ತದೆ. ಸಾಮಾನ್ಯವಾಗಿ, ಪವಾಡಗಳು ಸಂಭವಿಸುವುದಿಲ್ಲ. 

ಜೀವನದಲ್ಲಿನ ಎಂಟು ಅಶಾಶ್ವತ ವಿಷಯಗಳಲ್ಲಿ, ಅಸ್ವಸ್ಥತೆಯನ್ನು ತಪ್ಪಿಸುವ ಬೋಧನೆಗಳಲ್ಲಿ, ವಿಷಯಗಳು ಸರಿಯಾಗಿ ನಡೆದರೆ ನಮ್ಮ ಹಮ್ಮೆಯು ತಲೆಗೇರಬಾರದೆಂದು ಮತ್ತು ಅವು ಸರಿಯಾಗಿ ನಡೆಯದಿದ್ದರೆ ಖಿನ್ನತೆಗೆ ಒಳಗಾಗಬಾರದೆಂದು ಒತ್ತಿಹೇಳುತ್ತವೆ. ಅದೇ ಜೀವನ. ನಾವು ದೀರ್ಘಕಾಲೀನ ಪರಿಣಾಮಗಳನ್ನು ನೋಡಬೇಕು, ಅಲ್ಪಾವಧಿಯ ಪರಿಣಾಮಗಳನ್ನಲ್ಲ. ಉದಾಹರಣೆಗೆ, ನಾವು ಐದು ವರ್ಷಗಳಿಂದ ಅಭ್ಯಾಸ ಮಾಡುತ್ತಿದ್ದರೆ, ಐದು ವರ್ಷಗಳ ಹಿಂದಕ್ಕೆ ಹೋಲಿಸಿದರೆ, ನಾವು ಸಾಕಷ್ಟು ಪ್ರಗತಿ ಪಟ್ಟಿರುತ್ತೇವೆ. ಕೆಲವೊಮ್ಮೆ ನಾವು ಅಸಮಾಧಾನಗೊಂಡರೂ ಸಹ, ನಾವು ಶಾಂತವಾದ, ಸ್ಪಷ್ಟವಾದ ಮನಸ್ಸು ಮತ್ತು ಹೃದಯದಿಂದ ಸಂದರ್ಭಗಳನ್ನು ನಿಭಾಯಿಸಲು ಸಮರ್ಥರಾಗಿದ್ದೇವೆ ಎಂದು ಕಂಡುಕೊಂಡರೆ, ಇದು ನಾವು ಸ್ವಲ್ಪವಾದರೂ ಪ್ರಗತಿಯನ್ನು ಸಾಧಿಸಿದ್ದೇವೆ ಎಂದು ಸೂಚಿಸುತ್ತದೆ. ಇದು ಸ್ಫೂರ್ತಿದಾಯಕವಾಗಿರುತ್ತದೆ. ಇದು ನಾಟಕೀಯವಾಗಿರುವುದಿಲ್ಲ, ಆದರೂ ನಾವು ಇದು ನಾಟಕೀಯವಾಗಿರಬೇಕೆಂದು ಬಯಸುತ್ತೇವೆ, ಏಕೆಂದರೆ ನಾವು ನಾಟಕೀಯ ಪ್ರದರ್ಶನಗಳ ಬಗ್ಗೆ ಉತ್ಸುಕರಾಗುತ್ತೇವೆ. ಇದು ದೃಢವಾದ ಸ್ಫೂರ್ತಿಯಾಗಿರುತ್ತದೆ. 

ಪ್ರಾಯೋಗಿಕವಾಗಿರುವುದು 

ನಾವು ಬಹಳಾ ಪ್ರಾಯೋಗಿಕವಾಗಿರಬೇಕು ಮತ್ತು ವಾಸ್ತವಿಕವಾಗಿರಬೇಕು. ಉದಾಹರಣೆಗೆ, ನಾವು ಶುದ್ಧೀಕರಣವನ್ನು ನಡೆಸುವಾಗ, ನಮ್ಮ ಪಾಪಗಳನ್ನು ಕ್ಷಮಿಸುವ ಒಬ್ಬ ಹೊರವಲಯದ ವ್ಯಕ್ತಿ, ಒಬ್ಬ ಮಹಾನ್ ಸಂತನಿರುವನು ಎಂದು ಯೋಚಿಸದಿರುವುದು ಮುಖ್ಯ. ಬೌದ್ಧ ಧರ್ಮದಲ್ಲಿ, ನಮ್ಮನ್ನು ರಕ್ಷಿಸುವ ಮತ್ತು ಶುದ್ಧೀಕರಣವನ್ನು ಅನುಗ್ರಹಿಸುವ ಯಾವುದೇ ಸಂತರು ಇಲ್ಲ. ಅಂತಹ ಪ್ರಕ್ರಿಯೆಯೇ ಅಲ್ಲ. ನಮ್ಮ ಮನಸ್ಸು ಸ್ವಾಭಾವಿಕವಾಗಿ ಶುದ್ಧವಾಗಿರುವ ವಿಷಯವೇ ನಮ್ಮನ್ನು ಶುದ್ಧೀಕರಿಸುತ್ತದೆ. ಅವುಗಳು ಅಂತರ್ಗತವಾಗಿ ಗೊಂದಲದಿಂದ ಕೊಳಕಾಗಿರುವುದಿಲ್ಲ; ಗೊಂದಲವನ್ನು ಹೋಗಲಾಡಿಸಬಹುದು. ನಮ್ಮ ಸ್ವಂತ ಪ್ರಯತ್ನಗಳ ಮೂಲಕ, ಮನಸ್ಸಿನ ನೈಸರ್ಗಿಕ ಶುದ್ಧತೆಯನ್ನು ಗುರುತಿಸುವ ಮೂಲಕ ನಾವು ಅಪರಾಧ, ನಕಾರಾತ್ಮಕ ಸಾಮರ್ಥ್ಯಗಳು ಇತ್ಯಾದಿಗಳನ್ನು ಬಿಡಬಹುದು. ಶುದ್ಧೀಕರಣದ ಪ್ರಕ್ರಿಯೆಯು ಕಾರ್ಯನಿರ್ವಹಿಸುವಂತೆ ಇದು ಅನುವು ಮಾಡಿಕೊಡುತ್ತದೆ. 

ಇದಲ್ಲದೆ, ಈ ಎಲ್ಲಾ ಅಭ್ಯಾಸಗಳನ್ನು ಮಾಡುವಾಗ ಮತ್ತು ಬೌದ್ಧ ಬೋಧನೆಗಳನ್ನು ನಮ್ಮ ದೈನಂದಿನ ಜೀವನದಲ್ಲಿ ಅಳವಡಿಸಲು ಪ್ರಯತ್ನಿಸುವಾಗ, ನಾವು ಇರುವ ಮಟ್ಟವನ್ನು ಗುರುತಿಸಬೇಕು ಮತ್ತು ಒಪ್ಪಿಕೊಳ್ಳಬೇಕು. ಆಡಂಬರವಿಲ್ಲದೆ ಅಥವಾ ನಮ್ಮ ಪ್ರಸ್ತುತಕ್ಕಿಂತ ಉನ್ನತ ಮಟ್ಟದಲ್ಲಿರಬೇಕು ಎಂದು ಯೋಚಿಸದೆ ಇರುವುದು ಬಹಳಾ ಮುಖ್ಯ. 

ಕ್ಯಾಥೋಲಿಕ್ ಹಿನ್ನೆಲೆಯಿಂದ ಬಂದವರು ಬೌದ್ಧಧರ್ಮವನ್ನು ಸಮೀಪಿಸುವುದು 

ಉದಾಹರಣೆಗೆ, ಬೌದ್ಧಧರ್ಮದಲ್ಲಿ ಆಸಕ್ತಿ ಹೊಂದಿರುವ ಕೆಲವರು, ಕ್ಯಾಥೋಲಿಕ್ ಹಿನ್ನೆಲೆಯಿಂದ ಬರಬಹುದು. ಅದು ನೀವಾಗಿದ್ದರೆ, ನೀವು ಬೌದ್ಧಧರ್ಮವನ್ನು ಸಮೀಪಿಸಿದಾಗ ಮತ್ತು ಅಧ್ಯಯನ ಮಾಡಲು ಪ್ರಾರಂಭಿಸಿದಾಗ, ನೀವು ಕ್ಯಾಥೊಲಿಕ್ ಧರ್ಮವನ್ನು ತ್ಯಜಿಸಿ ಬೌದ್ಧಧರ್ಮಕ್ಕೆ ಮತಾಂತರಗೊಳ್ಳಬೇಕು ಎಂದು ಭಾವಿಸಬೇಕಾಗಿಲ್ಲ. ಆದರೆ, ಇವೆರಡು ಅಭ್ಯಾಸಗಳ ಮಿಶ್ರಣ ಮಾಡದಿರುವುದು ಮುಖ್ಯ. ಚರ್ಚ್‌ನಲ್ಲಿ ಕುಳಿತುಕೊಳ್ಳುವ ಮೊದಲು ನಾವು ಬಲಿಪೀಠಕ್ಕೆ ಮೂರು ಸಾಷ್ಟಾಂಗ ನಮನಗಳನ್ನು ಮಾಡುವುದಿಲ್ಲ. ಅಂತೆಯೇ, ನಾವು ಬೌದ್ಧ ಆಚರಣೆಯನ್ನು ಅಭ್ಯಾಸಮಾಡುವಾಗ, ನಾವು ವರ್ಜಿನ್ ಮೇರಿಯನ್ನು ದೃಶ್ಯೀಕರಿಸುವುದಿಲ್ಲ, ಬದಲಿಗೆ ಬುದ್ಧನನ್ನು ದೃಶ್ಯೀಕರಿಸುತ್ತೇವೆ. ನಾವು ಇವನ್ನು ಪ್ರತ್ಯೇಕವಾಗಿ ಅಭ್ಯಾಸ ಮಾಡುತ್ತೇವೆ. ನಾವು ಚರ್ಚ್ಗೆ ಹೋದಾಗ, ನಾವು ಕೇವಲ ಚರ್ಚ್ಗೆ ಹೋಗುತ್ತೇವೆ; ನಾವು ಬೌದ್ಧ ಧ್ಯಾನ ಮಾಡುವಾಗ, ನಾವು ಬೌದ್ಧ ಧ್ಯಾನವನ್ನು ಮಾಡುತ್ತೇವೆ. 

ಪ್ರೀತಿಗೆ ಒತ್ತು ನೀಡುವುದು, ಇತರರಿಗೆ ಸಹಾಯ ಮಾಡುವುದು ಇತ್ಯಾದಿಯಂತಹ ಹಲವು ಸಾಮಾನ್ಯ ಲಕ್ಷಣಗಳಿವೆ. ಮೂಲಭೂತ ಮಟ್ಟದಲ್ಲಿ ಯಾವುದೇ ಸಂಘರ್ಷವಿಲ್ಲ. ನಾವು ಪ್ರೀತಿ, ದಾನ ಮತ್ತು ಇತರರಿಗೆ ಸಹಾಯ ಮಾಡುವುದನ್ನು ಅಭ್ಯಾಸ ಮಾಡಿದರೆ, ನಾವು ಉತ್ತಮ ಕ್ಯಾಥೊಲಿಕ್ ಮತ್ತು ಉತ್ತಮ ಬೌದ್ಧರಾಗಿರುತ್ತೇವೆ. ಆದರೆ ಅಂತಿಮವಾಗಿ, ನಾವು ಒಂದನ್ನು ಆಯ್ಕೆ ಮಾಡಬೇಕಾಗುತ್ತದೆ, ಆದರೆ ಅದು ಉನ್ನತ ಆಧ್ಯಾತ್ಮಿಕ ಪ್ರಗತಿಯನ್ನು ಪಡೆಯಲು, ಸಂಪೂರ್ಣವಾಗಿ ಪ್ರಯತ್ನಿಸಲು ನಾವು ಸಿದ್ಧರಾಗಿರುವಾಗ ಮಾತ್ರ. ನಾವು ಕಟ್ಟಡದ ಮೇಲಿನ ಹಂತಕ್ಕೆ ಹೋಗುತ್ತಿದ್ದರೆ, ನಾವು ಒಂದೇ ಸಮಯದಲ್ಲಿ ಎರಡು ಮೆಟ್ಟಿಲುಗಳನ್ನು ಏರಲು ಸಾಧ್ಯವಿಲ್ಲ - ಇದು ಬಹಳಾ ಸಹಾಯಕವಾದ ಚಿತ್ರಣವಾಗಿದೆ. ನಾವು ಕೇವಲ ಕೆಳನೆಲದ ಮಟ್ಟದಲ್ಲಿನ ಲಾಬಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರೆ ಸರಿ, ನಾವು ಅದರ ಬಗ್ಗೆ ಚಿಂತಿಸಬೇಕಾಗಿಲ್ಲ. ನಾವು ಎರಡರಿಂದಲೂ ಪ್ರಯೋಜನ ಪಡೆಯಬಹುದು. 

ಅನುಚಿತ ನಿಷ್ಠೆಯನ್ನು ತಪ್ಪಿಸುವುದು 

ಬೌದ್ಧಧರ್ಮವನ್ನು ನಮ್ಮ ಜೀವನಕ್ಕೆ ಅನ್ವಯಿಸುವಾಗ, ನಮ್ಮ ಮೂಲ ಧರ್ಮವು ಕೆಟ್ಟದಾಗಿದೆ ಅಥವಾ ಕೀಳಾಗಿದೆ ಎಂದು ತಿರಸ್ಕರಿಸದಿರುವಂತೆ ನಾವು ಜಾಗರೂಕರಾಗಿರಬೇಕು. ಅದು ದೊಡ್ಡ ತಪ್ಪು. ಆಗ, ಉದಾಹರಣೆಗೆ, ನಾವು ಮತಾಂಧ ಬೌದ್ಧ ಮತ್ತು ಮತಾಂಧ ಕ್ಯಾಥೋಲಿಕ್ ವಿರೋಧಿ ಆಗಬಹುದು. ಕಮ್ಯುನಿಸಂ ಮತ್ತು ಪ್ರಜಾಪ್ರಭುತ್ವದೊಂದಿಗೂ ಜನರು ಹೀಗೆ ನಡೆದುಕೊಳ್ಳುವರು. ಅನುಚಿತವಾದ ನಿಷ್ಠೆ ಎಂಬ ಮಾನಸಿಕ ಕಾರ್ಯವಿಧಾನವು ನಮ್ಮನ್ನು ಆವರಿಸುತ್ತದೆ. ನಮ್ಮ ಕುಟುಂಬಗಳು, ನಮ್ಮ ಹಿನ್ನೆಲೆಗಳು ಮತ್ತು ಮುಂತಾದವುಗಳಿಗೆ ನಿಷ್ಠರಾಗಿರಲು ಬಯಸುವ ಪ್ರವೃತ್ತಿಯಿರುತ್ತದೆ, ಆದ್ದರಿಂದ ನಾವು ಕ್ಯಾಥೊಲಿಕ್ ಧರ್ಮವನ್ನು ತಿರಸ್ಕರಿಸಿದ್ದರೂ, ಅದಕ್ಕೆ ನಿಷ್ಠರಾಗಿರಲು ಬಯಸುತ್ತೇವೆ. ನಾವು ನಮ್ಮ ಹಿನ್ನೆಲೆಗಳಿಗೆ ನಿಷ್ಠರಾಗಿಲ್ಲದಿದ್ದರೆ ಮತ್ತು ಅವು ಕೆಟ್ಟದೆಂದು ಸಂಪೂರ್ಣವಾಗಿ ತಿರಸ್ಕರಿಸಿದರೆ, ನಾವು ಬಹಳಾ ಕೆಟ್ಟಜೀವಿ ಎಂದು ನಾವು ಭಾವಿಸುತ್ತೇವೆ. ಇದು ಬಹಳಾ ಅಹಿತಕರವಾಗಿರುತ್ತದೆ, ಆದ್ದರಿಂದ ನಮ್ಮ ಹಿನ್ನೆಲೆಯಲ್ಲಿ ನಾವು ನಿಷ್ಠರಾಗಿರಬಹುದಾದ ಯಾವುದನ್ನಾದರೂ ಕಂಡುಹಿಡಿಯಬೇಕೆಂದು ನಾವು ಅರಿವಿಲ್ಲದೆ ಭಾವಿಸುತ್ತೇವೆ. 

ನಮ್ಮ ಹಿನ್ನೆಲೆಯಲ್ಲಿನ ಕೆಲವು ಕಡಿಮೆ-ಪ್ರಯೋಜನಕಾರಿ ಅಂಶಗಳಿಗೆ ನಿಷ್ಠರಾಗಿರುವುದು ನಮ್ಮಲ್ಲಿರುವ ಅರಿವಿಲ್ಲದ ಪ್ರವೃತ್ತಿಯಾಗಿರುತ್ತದೆ. ಉದಾಹರಣೆಗೆ, ನಾವು ಕ್ಯಾಥೊಲಿಕ್ ಧರ್ಮವನ್ನು ತಿರಸ್ಕರಿಸಬಹುದು, ಆದರೆ ನಾವು ನರಕದ ಭಯವನ್ನು ಬೌದ್ಧಧರ್ಮಕ್ಕೆ ಕರೆತರಬಹುದು. ನನ್ನ ಸ್ನೇಹಿತರೊಬ್ಬರು ಬಹಳ ನಿಷ್ಠಾವಂತ ಕ್ಯಾಥೋಲಿಕ್ ಆಗಿದ್ದರು, ನಂತರ ಬಹಳಾ ನಿಷ್ಠಾವಂತರಾಗಿ ಬೌದ್ಧಧರ್ಮಕ್ಕೆ ತಿರುಗಿದರು ಮತ್ತು ಅದರಿಂದ ಅಸ್ತಿತ್ವವಾದದ ಬಿಕ್ಕಟ್ಟಲ್ಲಿ ಸಿಕ್ಕಿಬಿದ್ದರು, “ನಾನು ಕ್ಯಾಥೊಲಿಕ್ ಧರ್ಮವನ್ನು ತ್ಯಜಿಸಿದೆ, ಆದ್ದರಿಂದ ಈಗ ನಾನು ಕ್ಯಾಥೋಲಿಕ್ ನರಕಕ್ಕೆ ಹೋಗುತ್ತೇನೆ; ಆದರೆ ನಾನು ಬೌದ್ಧ ಧರ್ಮವನ್ನು ತ್ಯಜಿಸಿ ಕ್ಯಾಥೊಲಿಕ್ ಧರ್ಮಕ್ಕೆ ಹಿಂತಿರುಗಿದರೆ, ನಾನು ಬೌದ್ಧ ನರಕಕ್ಕೆ ಹೋಗುತ್ತೇನೆ!” ಇದು ತಮಾಷೆಯಾಗಿ ತೋರುತ್ತದೆಯಾದರೂ, ಇದು ಆಕೆಗೆ ಗಂಭೀರವಾದ ಸಮಸ್ಯೆಯಾಗಿತ್ತು. 

ಸಾಮಾನ್ಯವಾಗಿ, ಅರಿವಿಲ್ಲದೆ ನಾವು ಕ್ಯಾಥೊಲಿಕ್ ಧರ್ಮಗಳಲ್ಲಿರುವ ಕೆಲವು ಮನೋಭಾವಗಳನ್ನು ನಮ್ಮ ಬೌದ್ಧ ಆಚರಣೆಗೆ ಕರೆತರುತ್ತೇವೆ. ಅತ್ಯಂತ ಸಾಮಾನ್ಯವಾದವುಗಳು ಅಪರಾಧ ಮತ್ತು ಪವಾಡಗಳನ್ನು ಹುಡುಕುವುದು ಮತ್ತು ನಮ್ಮನ್ನು ಉಳಿಸಲು ಒಬ್ಬರನ್ನು ಹುಡುಕುವ ಮನೋಭಾವಗಳಾಗಿರುತ್ತವೆ. ನಾವು ಅಭ್ಯಾಸ ಮಾಡದಿದ್ದರೆ, ನಾವು ಅಭ್ಯಾಸ ಮಾಡಬೇಕು ಎಂದು ನಾವು ಭಾವಿಸುತ್ತೇವೆ ಮತ್ತು ನಾವು ಮಾಡದಿದ್ದರೆ, ನಾವು ತಪ್ಪಿತಸ್ಥರು ಎಂದು ಭಾವಿಸುತ್ತೇವೆ. ಈ ಆಲೋಚನೆಗಳಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಹೀಗೆ ಯೋಚಿಸುವಾಗ, ಅದನ್ನು ನಾವು ಗುರುತಿಸಬೇಕು. ನಾವು ನಮ್ಮ ಹಿನ್ನೆಲೆಗಳನ್ನು ನೋಡಬೇಕು ಮತ್ತು ಸಕಾರಾತ್ಮಕ ಅಂಶಗಳನ್ನು ಅಂಗೀಕರಿಸಬೇಕು, ಇದರಿಂದ ನಾವು ನಕಾರಾತ್ಮಕ ಲಕ್ಷಣಗಳಿಗಿಂತ ಸಕಾರಾತ್ಮಕವಾಗಿರುವ ಅಂಶಗಳಿಗೆ ನಿಷ್ಠರಾಗಿರಬಹುದು. "ನಾನು ಅಪರಾಧ ಮತ್ತು ಪವಾಡ-ಅನ್ವೇಷಣೆಯನ್ನು ಆನುವಂಶಿಕವಾಗಿ ಪಡೆದಿದ್ದೇನೆ" ಎಂದು ಯೋಚಿಸುವುದಕ್ಕಿಂತ ಹೆಚ್ಚಾಗಿ, "ನಾನು ಪ್ರೀತಿ, ದಾನ ಮತ್ತು ದೌರ್ಭಾಗ್ಯದಲ್ಲಿರುವ ಜನರಿಗೆ ಸಹಾಯ ಮಾಡುವ ಕ್ಯಾಥೋಲಿಕ್ ಸಂಪ್ರದಾಯವನ್ನು ಆನುವಂಶಿಕವಾಗಿ ಪಡೆದಿದ್ದೇನೆ" ಎಂದು ನಾವು ಯೋಚಿಸಬಹುದು. 

ನಮ್ಮ ಕುಟುಂಬಗಳ ಸಂಬಂಧದಲ್ಲೂ ಇದನ್ನೇ ಅನುಸರಿಸಬಹುದು. ನಾವು ಅವರನ್ನು ತಿರಸ್ಕರಿಸಬಹುದು ಮತ್ತು ಅವರ ಸಕಾರಾತ್ಮಕ ಸಂಪ್ರದಾಯಗಳಿಗೆ ಪ್ರಜ್ಞಾಪೂರ್ವಕವಾಗಿ ನಿಷ್ಠರಾಗುವುದಕ್ಕಿಂತ ಹೆಚ್ಚಾಗಿ ಅವರ ನಕಾರಾತ್ಮಕ ಸಂಪ್ರದಾಯಗಳಿಗೆ ಅರಿವಿಲ್ಲದೆ ನಿಷ್ಠರಾಗಿರಬಹುದು. ಉದಾಹರಣೆಗೆ, ಅವರು ನಮಗೆ ನೀಡಿದ ಕ್ಯಾಥೊಲಿಕ್ ಹಿನ್ನೆಲೆಗಳಿಗಾಗಿ ನಾವು ಬಹಳಾ ಕೃತಜ್ಞರಾಗಿದ್ದೇವೆ ಎಂದು ನಾವು ಒಪ್ಪಿಕೊಂಡರೆ, ನಮ್ಮ ಹಿಂದಿನ ಜೀವನದ ಬಗ್ಗೆ ಸಂಘರ್ಷವಿಲ್ಲದೆ ಮತ್ತು ನಕಾರಾತ್ಮಕ ಭಾವನೆಗಳು ನಿರಂತರವಾಗಿ ನಮ್ಮ ಪ್ರಗತಿಗೆ ಧಕ್ಕೆಯಾಗದಂತೆ, ನಾವು ನಮ್ಮದೇ ಆದ ಹಾದಿಯಲ್ಲಿ ಮುಂದೆ ಸಾಗಬಹುದು. 

ಇದರ ಮಾನಸಿಕ ಸಿಂಧುತ್ವವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವುದು ಮುಖ್ಯವಾಗಿರುತ್ತದೆ. ನಾವು ನಮ್ಮ ಭೂತಕಾಲದ ಬಗ್ಗೆ - ನಮ್ಮ ಕುಟುಂಬಗಳು, ನಮ್ಮ ಮೂಲ ಧರ್ಮಗಳು ಅಥವಾ ಏನೇ ಆಗಿರಬಹುದು - ನಕಾರಾತ್ಮಕವಾಗಿ ಯೋಚಿಸಿದರೆ, ನಾವು ನಮ್ಮ ಬಗ್ಗೆ ನಕಾರಾತ್ಮಕ ಮನೋಭಾವವನ್ನು ಹೊಂದಿರುತ್ತೇವೆ. ಮತ್ತೊಂದೆಡೆ, ನಮ್ಮ ಹಿನ್ನೆಲೆಯ ಮತ್ತು ನಮ್ಮ ಭೂತಕಾಲದಲ್ಲಿನ ಸಕಾರಾತ್ಮಕ ವಿಷಯಗಳನ್ನು ನಾವು ಅಂಗೀಕರಿಸಬಹುದಾದರೆ, ನಾವು ನಮ್ಮ ಬಗ್ಗೆ ಸಕಾರಾತ್ಮಕ ಮನೋಭಾವವನ್ನು ಹೊಂದಲು ಹೆಚ್ಚು ಒಲವು ತೋರುತ್ತೇವೆ. ಇದು, ನಮ್ಮ ಆಧ್ಯಾತ್ಮಿಕ ಮಾರ್ಗಗಳಲ್ಲಿ ಹೆಚ್ಚು ದೃಢವಾಗಿರಲು ನಮಗೆ ಸಹಾಯ ಮಾಡುತ್ತದೆ. 

ಸಾರಾಂಶ 

ನಾವು ನಿಧಾನವಾಗಿ, ಹಂತ ಹಂತವಾಗಿ ಮುಂದುವರಿಯಬೇಕು. ನಾವು ಬಹಳ ಸುಧಾರಿತ ಬೋಧನೆಗಳನ್ನು ಕೇಳಿದಾಗ ಅಥವಾ ಓದಿದಾಗ, ಹಿಂದಿನ ಶ್ರೇಷ್ಠ ಗುರುಗಳು "ನೀವು ಬೋಧನೆಯನ್ನು ಕೇಳಿದ ತಕ್ಷಣ ಅದನ್ನು ಅಭ್ಯಾಸ ಮಾಡಬೇಕು" ಎಂದು ಹೇಳಿದ್ದರೂ, ಅದು ನಮಗಾಗಿ ಬಹಳಾ ಸುಧಾರಿತ ವಿಷಯವೇ ಅಥವಾ ಅದನ್ನು ಪ್ರಸ್ತುತವಾಗಿ ಅಭ್ಯಾಸ ಮಾಡಬಹುದೇ ಎಂದು ನಾವು ನಿರ್ಧರಿಸಬೇಕು. ಅದು ತುಂಬಾ ಮುಂದುವರಿದಿದ್ದರೆ, ಅದನ್ನು ಆಚರಣೆಗೆ ತರಲು, ನಮ್ಮನ್ನು ಸಿದ್ಧಪಡಿಸಿಕೊಳ್ಳಲು, ನಾವು ತೆಗೆದುಕೊಳ್ಳಬೇಕಾದ ಹಂತಗಳನ್ನು ನಾವು ವಿವೇಚಿಸಬೇಕು ಮತ್ತು ನಂತರ ಆ ಹಂತಗಳನ್ನು ಅನುಸರಿಸಬೇಕು. ಸಂಕ್ಷಿಪ್ತವಾಗಿ ಹೇಳುವುದಾದರೆ, ನನ್ನ ಶಿಕ್ಷಕರಲ್ಲಿ ಒಬ್ಬರಾದ ಗೆಶೆ ನ್ಗಾವಾಂಗ್ ದರ್ಗ್ಯೆ ಅವರು ಹೇಳಿದಂತೆ, “ನಾವು ಕಾಲ್ಪನಿಕ ವಿಧಾನಗಳನ್ನು ಅಭ್ಯಾಸ ಮಾಡಿದರೆ, ನಾವು ಕಾಲ್ಪನಿಕ ಫಲಿತಾಂಶಗಳನ್ನು ಪಡೆಯುತ್ತೇವೆ; ನಾವು ಪ್ರಾಯೋಗಿಕ ವಿಧಾನಗಳನ್ನು ಅಭ್ಯಾಸ ಮಾಡಿದರೆ, ನಾವು ಪ್ರಾಯೋಗಿಕ ಫಲಿತಾಂಶಗಳನ್ನು ಪಡೆಯುತ್ತೇವೆ.” 

Top