ಪುನರ್ಜನ್ಮ ಎಂದರೇನು?

ಇತರ ಭಾರತೀಯ ಧರ್ಮಗಳಂತೆ, ಬೌದ್ಧಧರ್ಮವು ಪುನರ್ಜನ್ಮ ಅಥವಾ ಮರುಜನ್ಮವನ್ನು ಪ್ರತಿಪಾದಿಸುತ್ತದೆ. ವ್ಯಕ್ತಿಯ ಮಾನಸಿಕ ನಿರಂತರತೆಯು, ಅದರ ಪ್ರವೃತ್ತಿಗಳು, ಪ್ರತಿಭೆಗಳು ಮತ್ತು ಮುಂತಾದವುಗಳೊಂದಿಗೆ, ಹಿಂದಿನ ಜೀವನಗಳಿಂದ ಬರುತ್ತದೆ ಮತ್ತು ಭವಿಷ್ಯದ ಜೀವನಗಳಿಗೆ ಹೋಗುತ್ತದೆ. ಒಬ್ಬ ವ್ಯಕ್ತಿಯ ಕ್ರಿಯೆಗಳು ಮತ್ತು ಅವುಗಳಿಂದ ನಿರ್ಮಿಸಲಾದ ಪ್ರವೃತ್ತಿಗಳನ್ನು ಅವಲಂಬಿಸಿ, ಒಬ್ಬ ವ್ಯಕ್ತಿಯು ಎಲ್ಲಾ ರೀತಿಯ ಜೀವ ರೂಪಗಳಲ್ಲಿ, ಉತ್ತಮವಾದ ಅಥವಾ ಕೆಟ್ಟದಾದ ಮರುಜನ್ಮ ಪಡೆಯಬಹುದು: ಮಾನವ, ಪ್ರಾಣಿ, ಕೀಟ, ಪ್ರೇತ ಮತ್ತು ಇತರ ಅದೃಶ್ಯ ಸ್ಥಿತಿಗಳಾಗಿರಬಹುದು. ಎಲ್ಲಾ ಜೀವಿಗಳು ತಮ್ಮ ಗೊಂದಲಮಯ ವರ್ತನೆಗಳಾದ ಬಾಂಧವ್ಯ, ಕೋಪ ಮತ್ತು ಮುಗ್ಧತೆಯಂತಹ ಪ್ರಚೋದಿತ ವರ್ತನೆಗಳು ಮತ್ತು ಅವುಗಳಿಂದ ಪ್ರಚೋದಿಸಲ್ಪಟ್ಟ ಅವರ ಬಲವಂತದ ನಡವಳಿಕೆಯಿಂದಾಗಿ ಅನಿಯಂತ್ರಿತ ಪುನರ್ಜನ್ಮವನ್ನು ಅನುಭವಿಸುತ್ತವೆ. ಹಿಂದಿನ ನಡವಳಿಕೆಯ ಮಾದರಿಗಳಿಂದಾಗಿ ಒಬ್ಬರ ಮನಸ್ಸಿನಲ್ಲಿ ಉದ್ಭವಿಸುವ ನಕಾರಾತ್ಮಕ ಪ್ರಚೋದನೆಗಳನ್ನು ಅನುಸರಿಸಿದರೆ ಮತ್ತು ವಿನಾಶಕಾರಿಯಾಗಿ ವರ್ತಿಸಿದರೆ, ಅದರ ಪರಿಣಾಮವಾಗಿ ಅವರು ದುಃಖ ಮತ್ತು ಅಸಂತೋಷವನ್ನು ಅನುಭವಿಸುತ್ತಾರೆ. ಮತ್ತೊಂದೆಡೆ, ಒಬ್ಬರು ರಚನಾತ್ಮಕ ಕಾರ್ಯಗಳಲ್ಲಿ ತೊಡಗಿಸಿಕೊಂಡರೆ, ಅವರು ಸಂತೋಷವನ್ನು ಅನುಭವಿಸುತ್ತಾರೆ. ಪ್ರತಿಯೊಬ್ಬ ವ್ಯಕ್ತಿಯ ಸತತ ಪುನರ್ಜನ್ಮಗಳಲ್ಲಿ ಸಂತೋಷ ಅಥವಾ ಅತೃಪ್ತಿಯು ಪ್ರತಿಫಲ ಅಥವಾ ಶಿಕ್ಷೆಯಲ್ಲ, ಬದಲಿಗೆ ವರ್ತನೆಯ ಕಾರಣ ಮತ್ತು ಪರಿಣಾಮದ ನಿಯಮಗಳ ಪ್ರಕಾರ ಆ ವ್ಯಕ್ತಿಯ ಮೊದಲಿನ ಕ್ರಿಯೆಗಳಿಂದ ರಚಿಸಲ್ಪಟ್ಟಿರುತ್ತದೆ.

ಪುನರ್ಜನ್ಮವನ್ನು ನಾವು ಹೇಗೆ ಅರ್ಥಮಾಡಿಕೊಳ್ಳಬಹುದು

ಯಾವುದೇ ವಿಷಯವು ನಿಜವೆಂದು ನಮಗೆ ಹೇಗೆ ಮಾನ್ಯವಾಗಿ ತಿಳಿಯಬಹುದು? ಬೌದ್ಧ ಬೋಧನೆಗಳ ಪ್ರಕಾರ, ವಿಷಯಗಳನ್ನು ಎರಡು ರೀತಿಯಲ್ಲಿ ಮಾನ್ಯವಾಗಿ ತಿಳಿದುಕೊಳ್ಳಬಹುದು: ನೇರ ಗ್ರಹಿಕೆ ಮತ್ತು ಅನುಮಾನದ ಮೂಲಕ. ಪ್ರಯೋಗಾಲಯದಲ್ಲಿ ಪ್ರಯೋಗ ಮಾಡುವ ಮೂಲಕ, ನಾವು ನೇರ ಗ್ರಹಿಕೆಯ ಮೂಲಕ ಯಾವುದೇ ವಿಷಯದ ಅಸ್ತಿತ್ವವನ್ನು ಮೌಲ್ಯೀಕರಿಸಬಹುದು. ಉದಾಹರಣೆಗೆ, ಸೂಕ್ಷ್ಮದರ್ಶಕದ ಮೂಲಕ ನೋಡುವ ಮೂಲಕ, ಸರೋವರದ ನೀರಿನ ಹನಿಯಲ್ಲಿ ಅನೇಕ ಸಣ್ಣ ಸೂಕ್ಷ್ಮಜೀವಿಗಳಿವೆ ಎಂದು ಕೇವಲ ನಮ್ಮ ಇಂದ್ರಿಯಗಳ ಮೂಲಕ ಅದು ನಿಜವೆಂದು ಗ್ರಹಿಸಬಹುದು. 

ಆದರೆ, ಕೆಲವು ವಿಷಯಗಳನ್ನು ನೇರ ಗ್ರಹಿಕೆಯ ಮೂಲಕ ತಿಳಿದುಕೊಳ್ಳಲು ಸಾಧ್ಯವಿಲ್ಲ. ನಾವು ತರ್ಕ, ಕಾರಣ ಮತ್ತು ಅನುಮಾನವನ್ನು ಅವಲಂಬಿಸಬೇಕು, ಉದಾಹರಣೆಗೆ ಆಯಸ್ಕಾಂತ ಮತ್ತು ಕಬ್ಬಿಣದ ಸೂಜಿಯ ನಡವಳಿಕೆಯನ್ನು ಊಹಿಸುವ ಮೂಲಕ ಕಾಂತೀಯತೆಯ ಅಸ್ತಿತ್ವವನ್ನು ಅರಿಯುತ್ತೇವೆ. ನೇರ ಇಂದ್ರಿಯ ಗ್ರಹಿಕೆಯ ಮೂಲಕ ಪುನರ್ಜನ್ಮವನ್ನು ಸಾಬೀತುಪಡಿಸುವುದು ಬಹಳಾ ಕಷ್ಟ. ಆದರೆ ತಮ್ಮ ಹಿಂದಿನ ಜೀವನವನ್ನು ನೆನಪಿಸಿಕೊಳ್ಳುವ ಮತ್ತು ತಮ್ಮ ವೈಯಕ್ತಿಕ ವಸ್ತುಗಳನ್ನು ಅಥವಾ ಅವರು ಮೊದಲು ತಿಳಿದಿದ್ದ ಜನರನ್ನು ಗುರುತಿಸಬಲ್ಲ ಜನರ ಅನೇಕ ಉದಾಹರಣೆಗಳಿವೆ. ನಾವು ಅದರ ಮೂಲಕ ಪುನರ್ಜನ್ಮದ ಅಸ್ತಿತ್ವವನ್ನು ಗ್ರಹಿಸಬಹುದು, ಆದರೆ ಕೆಲವರು ಈ ತೀರ್ಮಾನವನ್ನು ಅನುಮಾನಿಸಬಹುದು ಮತ್ತು ಇದು ಒಂದು ತಂತ್ರವಾಗಿರಬಹುದು ಎಂದು ಅನುಮಾನಿಸಬಹುದು. 

ಹಿಂದಿನ ಜೀವನದ ನೆನಪುಗಳ ಈ ಖಾತೆಗಳನ್ನು ಬದಿಗಿಟ್ಟು, ಪುನರ್ಜನ್ಮವನ್ನು ಅರ್ಥಮಾಡಿಕೊಳ್ಳಲು ನಾವು ತರ್ಕಕ್ಕೆ ತಿರುಗಬಹುದು. ಕೆಲವು ಅಂಶಗಳು ವಾಸ್ತವಕ್ಕೆ ಹೊಂದಿಕೆಯಾಗದಿದ್ದರೆ, ಬೌದ್ಧಧರ್ಮದಿಂದ ಅವುಗಳನ್ನು ತೆಗೆದುಹಾಕಲು ನಾನು ಸಿದ್ಧನಿದ್ದೇನೆ ಎಂದು ಪರಮಪೂಜ್ಯ ದಲೈ ಲಾಮಾ ಅವರು ಹೇಳಿದ್ದಾರೆ. ಇದು ಪುನರ್ಜನ್ಮಕ್ಕೂ ಅನ್ವಯಿಸುತ್ತದೆ. ವಾಸ್ತವದಲ್ಲಿ, ಅವರು ಈ ಹೇಳಿಕೆಯನ್ನು ಇದರ ವಿಷಯವಾಗಿಯೇ ನೀಡಿದ್ದರು. ಪುನರ್ಜನ್ಮ ಅಸ್ತಿತ್ವದಲ್ಲಿಲ್ಲ ಎಂದು ವಿಜ್ಞಾನಿಗಳು ಸಾಬೀತುಪಡಿಸಲು ಸಾಧ್ಯವಾದರೆ, ನಾವು ಅದನ್ನು ನಿಜವೆಂದು ನಂಬುವುದನ್ನು ಬಿಟ್ಟುಬಿಡಬೇಕು. ಆದರೆ, ವಿಜ್ಞಾನಿಗಳು ಅದನ್ನು ಸುಳ್ಳು ಎಂದು ಸಾಬೀತುಪಡಿಸಲು ಸಾಧ್ಯವಾಗದಿದ್ದರೆ, ಅವರು ತರ್ಕ ಮತ್ತು ಹೊಸ ವಿಷಯಗಳನ್ನು ಅರ್ಥಮಾಡಿಕೊಳ್ಳಲು ಮುಕ್ತವಾಗಿರುವ ವೈಜ್ಞಾನಿಕ ವಿಧಾನವನ್ನು ಅನುಸರಿಸುವುದರಿಂದ, ಅದು ಅಸ್ತಿತ್ವದಲ್ಲಿದೆಯೇ ಎಂದು ಅವರು ತನಿಖೆ ಮಾಡಬೇಕು. ಪುನರ್ಜನ್ಮ ಅಸ್ತಿತ್ವದಲ್ಲಿಲ್ಲ ಎಂದು ಸಾಬೀತುಪಡಿಸಲು, ಅವರು ಅದರ ಅಸ್ತಿತ್ವವನ್ನು ಕಂಡುಹಿಡಿಯಬೇಕಾಗುತ್ತದೆ. "ನಾನು ಅದನ್ನು ನನ್ನ ಕಣ್ಣುಗಳಿಂದ ನೋಡದ ಕಾರಣ ಪುನರ್ಜನ್ಮ ಅಸ್ತಿತ್ವದಲ್ಲಿಲ್ಲ" ಎಂದು ಹೇಳುವುದು ಪುನರ್ಜನ್ಮದ ಅಸ್ತಿತ್ವವನ್ನು ಕಂಡುಹಿಡಿಯುವುದಾಗಿರುವುದಿಲ್ಲ. ನಮ್ಮ ಕಣ್ಣುಗಳಿಂದ ನೋಡಲಾಗದ ಅನೇಕ ವಿಷಯಗಳಿವೆ, ಉದಾಹರಣೆಗೆ ಕಾಂತೀಯತೆ ಮತ್ತು ಗುರುತ್ವಾಕರ್ಷಣೆ. 

ಪುನರ್ಜನ್ಮವಿದೆಯೇ ಅಥವಾ ಇಲ್ಲವೇ ಎಂಬುದನ್ನು ತನಿಖೆ ಮಾಡಲು ಇರುವ ತಾರ್ಕಿಕ ಮಾರ್ಗಗಳು 

ವಿಜ್ಞಾನಿಗಳು ಪುನರ್ಜನ್ಮದ ಅಸ್ತಿತ್ವವನ್ನು ಸಾಬೀತುಪಡಿಸಲು ಸಾಧ್ಯವಾಗದಿದ್ದರೆ, ಪುನರ್ಜನ್ಮವು ನಿಜವಾಗಿಯೂ ಅಸ್ತಿತ್ವದಲ್ಲಿದೆಯೇ ಎಂದು ಅವರು ತನಿಖೆ ಮಾಡಬೇಕು. ವೈಜ್ಞಾನಿಕ ವಿಧಾನವು ಕೆಲವು ದತ್ತಾಂಶಗಳ ಆಧಾರದ ಮೇಲೆ ಒಂದು ಸಿದ್ಧಾಂತವನ್ನು ಪ್ರತಿಪಾದಿಸುವುದು ಮತ್ತು ನಂತರ ಅದನ್ನು ಮೌಲ್ಯೀಕರಿಸಬಹುದೇ ಎಂದು ಪರಿಶೀಲಿಸುವುದಾಗಿರುತ್ತದೆ. ಆದ್ದರಿಂದ, ನಾವು ಡೇಟಾವನ್ನು ನೋಡುತ್ತೇವೆ. ಉದಾಹರಣೆಗೆ, ಶಿಶುಗಳು ಖಾಲಿ ಕ್ಯಾಸೆಟ್‌ಗಳಂತೆ ಜನಿಸುವುದಿಲ್ಲ ಎಂದು ನಾವು ಗಮನಿಸುತ್ತೇವೆ. ಅವರು ತುಂಬಾ ಚಿಕ್ಕವರಾಗಿದ್ದಾಗಲೂ, ನಾವು ಗಮನಿಸಬಹುದಾದ ಕೆಲವು ಅಭ್ಯಾಸಗಳು ಮತ್ತು ವ್ಯಕ್ತಿತ್ವ ಗುಣಲಕ್ಷಣಗಳನ್ನು ಹೊಂದಿರುತ್ತಾರೆ. ಇವು ಎಲ್ಲಿಂದ ಬರುತ್ತವೆ? 

ಅವು ಪೋಷಕರ ಭೌತಿಕ ವಸ್ತುಗಳ ಹಿಂದಿನ ನಿರಂತರತೆಗಳಿಂದ, ವೀರ್ಯ ಮತ್ತು ಮೊಟ್ಟೆಯಿಂದ ಬರುತ್ತವೆ ಎಂದು ಹೇಳುವುದರಲ್ಲಿ ಅರ್ಥವಿಲ್ಲ. ಒಟ್ಟಿಗೆ ಬರುವ ಪ್ರತಿಯೊಂದು ವೀರ್ಯ ಮತ್ತು ಮೊಟ್ಟೆಯು ಗರ್ಭಾಶಯದಲ್ಲಿ ಭ್ರೂಣವಾಗಿ ಬೆಳೆಯಲಾಗುವುದಿಲ್ಲ. ಅವು ಮಗುವಾದಾಗ ಮತ್ತು ಅವು ಇಲ್ಲದಿದ್ದಾಗ ವ್ಯತ್ಯಾಸವೇನು? ಮಗುವಿನಲ್ಲಿರುವ ವಿವಿಧ ಅಭ್ಯಾಸಗಳು ಮತ್ತು ಪ್ರವೃತ್ತಿಗಳ ವಾಸ್ತವವಾದ ಕಾರಣವೇನು? ನಾವು ಅದು ಡಿಎನ್‌ಎ ಮತ್ತು ಜೀನ್‌ಗಳು ಎಂದು ಹೇಳಬಹುದು. ಇದು ಭೌತಿಕ ಭಾಗ. ಮಗು ಹೇಗೆ ಹುಟ್ಟುತ್ತದೆ ಎಂಬುದರ ಭೌತಿಕ ಅಂಶ ಇದು ಎಂಬುದನ್ನು ಯಾರೂ ನಿರಾಕರಿಸುತ್ತಿಲ್ಲ. ಆದರೆ, ಅನುಭವದ ವಿಷಯವಾಗಿ ಏನು ಹೇಳಬಹುದು? ಮನಸ್ಸನ್ನು ಹೇಗೆ ಪರಿಗಣಿಸಬಹುದು? 

"ಮನಸ್ಸು" ಎಂಬ ಇಂಗ್ಲಿಷ್ ಪದವು ಸಂಸ್ಕೃತ ಮತ್ತು ಟಿಬೆಟಿಯನ್ ಪದಗಳ ಅರ್ಥವನ್ನು ಹೊಂದಿಲ್ಲ, ಅದು ಅನುವಾದಿಸಬೇಕಾದ ಅರ್ಥವನ್ನು ಹೊಂದಿರುತ್ತದೆ. ಮೂಲ ಭಾಷೆಗಳಲ್ಲಿ, "ಮನಸ್ಸು" ಎಂಬುದು ಆ ಚಟುವಟಿಕೆಯನ್ನು ಮಾಡುತ್ತಿರುವ ಯಾವುದನ್ನಾದರೂ ಸೂಚಿಸುವ ಬದಲು ಮಾನಸಿಕ ಚಟುವಟಿಕೆ ಅಥವಾ ಮಾನಸಿಕ ಘಟನೆಗಳನ್ನು ಸೂಚಿಸುತ್ತದೆ. ಚಟುವಟಿಕೆ ಅಥವಾ ಘಟನೆಯು ಕೆಲವು ವಸ್ತುಗಳ - ಆಲೋಚನೆಗಳು, ದೃಶ್ಯಗಳು, ಶಬ್ದಗಳು, ಭಾವನೆಗಳು ಮತ್ತು ಮುಂತಾದವುಗಳ - ಅರಿವಿನ ಹೊರಹೊಮ್ಮುವಿಕೆ ಮತ್ತು ಅವುಗಳೊಂದಿಗಿನ ಅರಿವಿನ ಒಳಗೊಳ್ಳುವಿಕೆ - ಅವುಗಳನ್ನು ನೋಡುವುದು, ಕೇಳುವುದು, ಅರ್ಥಮಾಡಿಕೊಳ್ಳುವುದು ಮತ್ತು ಅರ್ಥಮಾಡಿಕೊಳ್ಳದಿರುವುದಾಗಿರುತ್ತದೆ. 

ಉದ್ಭವಿಸುವ ಮತ್ತು ಒಳಗೊಂಡಿರುವ ಈ ಮಾನಸಿಕ ಚಟುವಟಿಕೆಯ ಅರ್ಥವೇನು? ಒಬ್ಬ ವ್ಯಕ್ತಿಯಲ್ಲಿ ಅರಿವಿನ ವಿಷಯಗಳೊಂದಿಗೆ ಭಾವನೆಗಳು ಬರುತ್ತವೆಯೇ? ಇಲ್ಲಿ, ನಾವು ದೇಹವು ಎಲ್ಲಿಂದ ಬರುತ್ತದೆ ಎಂಬುದರ ಬಗ್ಗೆ ಮಾತನಾಡುತ್ತಿಲ್ಲ, ಏಕೆಂದರೆ ಅದು ಖಂಡಿತವಾಗಿಯೂ ಪೋಷಕರಿಂದ ಬಂದಿದೆ. ನಾವು ಬುದ್ಧಿವಂತಿಕೆ ಇತ್ಯಾದಿಗಳ ಬಗ್ಗೆ ಮಾತನಾಡುತ್ತಿಲ್ಲ, ಏಕೆಂದರೆ ಅದಕ್ಕೆ ಆನುವಂಶಿಕ ಆಧಾರವಿದೆ ಎಂಬ ವಾದವನ್ನು ಸಹ ನಾವು ನೀಡಬಹುದು. ಆದರೆ, ಚಾಕೊಲೇಟ್ ಐಸ್ ಕ್ರೀಂಗೆ ಯಾರಾದರೂ ಆದ್ಯತೆ ನೀಡುವುದು, ವ್ಯಕ್ತಿಯ ಜೀನ್‌ಗಳಿಂದ ಬಂದಿದೆ ಎಂಬುದನ್ನು ನಂಬುವುದು ಸ್ವಲ್ಪ ಕಷ್ಟಕರವಾಗಿರುತ್ತದೆ.

ನಮ್ಮ ಕೆಲವು ಆಸಕ್ತಿಗಳು ನಮ್ಮ ಕುಟುಂಬ ಅಥವಾ ನಾವು ಇರುವ ಆರ್ಥಿಕ ಅಥವಾ ಸಾಮಾಜಿಕ ಪರಿಸ್ಥಿತಿಗಳಿಂದ ಪ್ರಭಾವಿತವಾಗಿರಬಹುದು ಎಂದು ನಾವು ಹೇಳಬಹುದು. ಈ ಅಂಶಗಳು ಖಂಡಿತವಾಗಿಯೂ ಪ್ರಭಾವ ಬೀರುತ್ತವೆ, ಆದರೆ ನಾವು ಮಾಡುವುದೆಲ್ಲವನ್ನೂ ಆ ರೀತಿಯಾಗಿ ಸಂಪೂರ್ಣವಾಗಿ ವಿವರಿಸುವುದು ಕಷ್ಟ. ಉದಾಹರಣೆಗೆ, ನಾನು ಬಾಲ್ಯದಲ್ಲಿ ಯೋಗದಲ್ಲಿ ಏಕೆ ಆಸಕ್ತಿ ಹೊಂದಿದ್ದೆ? ನನ್ನ ಕುಟುಂಬದಲ್ಲಿ ಅಥವಾ ನನ್ನ ಸುತ್ತಲಿನ ಸಮಾಜದಲ್ಲಿ ಯಾರೂ ಇರಲಿಲ್ಲ. ನಾನು ವಾಸಿಸುತ್ತಿದ್ದ ಪ್ರದೇಶದಲ್ಲಿ ಕೆಲವು ಪುಸ್ತಕಗಳು ಲಭ್ಯವಿದ್ದವು, ಆದ್ದರಿಂದ ಸಮಾಜದಿಂದ ಸ್ವಲ್ಪ ಪ್ರಭಾವವಿದೆ ಎಂದು ನೀವು ಹೇಳಬಹುದು, ಆದರೆ ಹಠ ಯೋಗದ ಬಗೆಗಿನ ಆ ನಿರ್ದಿಷ್ಟ ಪುಸ್ತಕದಲ್ಲಿ ನನಗೆ ಏಕೆ ಆಸಕ್ತಿ ಇತ್ತು? ನಾನು ಅದನ್ನು ಏಕೆ ತೆಗೆದುಕೊಂಡೆ? ಅದು ಇನ್ನೊಂದು ಪ್ರಶ್ನೆ. ವಿಷಯಗಳು ಕೇವಲ ಆಕಸ್ಮಿಕವಾಗಿ ಸಂಭವಿಸುತ್ತವೆಯೇ ಮತ್ತು ಅದೃಷ್ಟವು ಅದನ್ನು ಪ್ರಭಾವಿಸುತ್ತದೆಯೇ ಅಥವಾ ಎಲ್ಲವನ್ನೂ ವಿವರಿಸಬಹುದೇ? 

ವೈಯಕ್ತಿಕ ಮಾನಸಿಕ ಚಟುವಟಿಕೆ ಎಲ್ಲಿಂದ ಬರುತ್ತದೆ

ಇದನ್ನೆಲ್ಲಾ ಬದಿಗಿಟ್ಟು, ಪ್ರಮುಖ ಪ್ರಶ್ನೆಗೆ ಹಿಂತಿರುಗಿ ನೋಡೋಣ: ಅರಿವಿನ ವಿಷಯಗಳ ಹೊರಹೊಮ್ಮುವಿಕೆ ಮತ್ತು ಅವುಗಳಲ್ಲಿ ಅರಿವಿನ ಒಳಗೊಳ್ಳುವಿಕೆಯ ಚಟುವಟಿಕೆ ಎಲ್ಲಿಂದ ಬರುತ್ತದೆ? ಈ ಗ್ರಹಿಸುವ ಸಾಮರ್ಥ್ಯ ಎಲ್ಲಿಂದ ಬರುತ್ತದೆ? ಜೀವನದ ಕಿಡಿ ಎಲ್ಲಿಂದ ಬರುತ್ತದೆ? ವೀರ್ಯ ಮತ್ತು ಮೊಟ್ಟೆಯ ಈ ಸಂಯೋಜನೆಯು ನಿಜವಾಗಿಯೂ ಜೀವವನ್ನು ಹೊಂದಿರುತ್ತದೆಯೇ? ಅದು ಮನುಷ್ಯನಾಗಲು ಕಾರಣವೇನು? ಆಲೋಚನೆಗಳು ಮತ್ತು ದೃಶ್ಯಗಳು ಉದ್ಭವಿಸಲು ಅವಕಾಶ ನೀಡುವ ಅಂಶ ಯಾವುದು ಮತ್ತು ಅವುಗಳೊಂದಿಗೆ ಅರಿವಿನ ಒಳಗೊಳ್ಳುವಿಕೆಗೆ ಕಾರಣವೇನು, ಇದು ಮೆದುಳಿನ ರಾಸಾಯನಿಕ ಮತ್ತು ವಿದ್ಯುತ್ ಚಟುವಟಿಕೆಯ ಅನುಭವದ ಭಾಗವಾಗಿದೆಯೇ? 

ಶಿಶುವಿನ ಮಾನಸಿಕ ಚಟುವಟಿಕೆಯು ಪೋಷಕರಿಂದ ಬರುತ್ತದೆ ಎಂದು ಹೇಳುವುದು ಕಷ್ಟ, ಏಕೆಂದರೆ ಹಾಗಾಗಿದ್ದಲ್ಲಿ, ಅದು ಪೋಷಕರಿಂದ ಹೇಗೆ ಬರುತ್ತದೆ? ಅದು ಒಂದು ರೀತಿಯ ಕಾರ್ಯವಿಧಾನವನ್ನು ಒಳಗೊಂಡಿರಬೇಕು. ವಿಷಯಗಳ ಅರಿವಿನಿಂದ ನಿರೂಪಿಸಲ್ಪಟ್ಟ ಆ ಜೀವನದ ಕಿಡಿ - ವೀರ್ಯ ಮತ್ತು ಮೊಟ್ಟೆಯಂತೆಯೇ ಪೋಷಕರಿಂದ ಬರುತ್ತದೆಯೇ? ಅದು ಪರಾಕಾಷ್ಠೆಯೊಂದಿಗೆ ಬರುತ್ತದೆಯೇ? ಅಂಡೋತ್ಪತ್ತಿಯೊಂದಿಗೆ? ಅದು ವೀರ್ಯದಲ್ಲಿದೆಯೇ? ಮೊಟ್ಟೆಯಲ್ಲಿದೆಯೇ? ಅದು ಪೋಷಕರಿಂದ ಯಾವಾಗ ಬರುತ್ತದೆ ಎಂಬುದರ ತಾರ್ಕಿಕ, ವೈಜ್ಞಾನಿಕ ಸೂಚನೆಯನ್ನು ನಾವು ಕಂಡುಹಿಡಿಯಲು ಸಾಧ್ಯವಾಗದಿದ್ದರೆ, ನಾವು ಇನ್ನೊಂದು ಪರಿಹಾರವನ್ನು ಹುಡುಕಬೇಕಾಗುತ್ತದೆ. 

ಸಂಪೂರ್ಣ ತರ್ಕದಿಂದ ನೋಡಿದಾಗ, ಕ್ರಿಯಾತ್ಮಕ ವಿದ್ಯಮಾನಗಳೆಲ್ಲವೂ ತಮ್ಮದೇ ಆದ ನಿರಂತರತೆಗಳಿಂದ, ಒಂದೇ ವರ್ಗದ ವಿದ್ಯಮಾನದ ಹಿಂದಿನ ಕ್ಷಣಗಳಿಂದ ಬರುತ್ತವೆ ಎಂದು ನಾವು ನೋಡುತ್ತೇವೆ. ಉದಾಹರಣೆಗೆ, ಒಂದು ಭೌತಿಕ ವಿದ್ಯಮಾನ, ಅದು ವಸ್ತು ಅಥವಾ ಶಕ್ತಿಯಾಗಿರಲಿ, ಆ ವಸ್ತು ಅಥವಾ ಶಕ್ತಿಯ ಹಿಂದಿನ ಕ್ಷಣದಿಂದ ಬರುತ್ತದೆ. ಅದು ಒಂದು ರೀತಿಯ ನಿರಂತರತೆ. 

ಉದಾಹರಣೆಯಾಗಿ ಕೋಪವನ್ನು ತೆಗೆದುಕೊಳ್ಳಿ. ನಾವು ಕೋಪಗೊಂಡಾಗ ನಾವು ಅನುಭವಿಸುವ ಭೌತಿಕ ಶಕ್ತಿಯ ಬಗ್ಗೆ ಮಾತನಾಡಬಹುದು, ಹೌದು. ಆದರೆ, ಕೋಪವನ್ನು ಅನುಭವಿಸುವ ಮಾನಸಿಕ ಚಟುವಟಿಕೆಯನ್ನು ಪರಿಗಣಿಸಿ - ಭಾವನೆಯ ಹೊರಹೊಮ್ಮುವಿಕೆ ಮತ್ತು ಅದರ ಪ್ರಜ್ಞಾಪೂರ್ವಕ ಅಥವಾ ಸುಪ್ತಾವಸ್ಥೆಯ ಅರಿವನ್ನು ಅನುಭವಿಸುವುದು. ಒಬ್ಬ ವ್ಯಕ್ತಿಯು ಈ ಜೀವಿತಾವಧಿಯಲ್ಲಿ ತನ್ನದೇ ಆದ ಹಿಂದಿನ ನಿರಂತರತೆಯ ಕ್ಷಣಗಳನ್ನು ಹೊಂದಿರುತ್ತಾನೆ, ಆದರೆ ಅದಕ್ಕೂ ಮೊದಲು ಅವು ಎಲ್ಲಿಂದ ಬಂದವು? ಅವು ಪೋಷಕರಿಂದ ಬರಬೇಕು, ಅವು ಹೇಗೆ ಸಂಭವಿಸುತ್ತದೆ ಎಂಬುದನ್ನು ವಿವರಿಸಲು ಯಾವುದೇ ಕಾರ್ಯವಿಧಾನವಿಲ್ಲ ಎಂದು ತೋರುತ್ತದೆ, ಅಥವಾ ಅವು ಸೃಷ್ಟಿಕರ್ತ ದೇವರಿಂದ ಬರಬೇಕು. ಆದರೆ ಕೆಲವರಿಗೆ, ಸರ್ವಶಕ್ತ ಜೀವಿ ಹೇಗೆ ಸೃಷ್ಟಿಸುತ್ತದೆ ಎಂಬುದರ ವಿವರಣೆಯಲ್ಲಿನ ತಾರ್ಕಿಕ ಅಸಂಗತತೆಗಳು ಸಮಸ್ಯೆಯನ್ನು ಪ್ರಸ್ತುತಪಡಿಸುತ್ತವೆ. ಈ ಸಮಸ್ಯೆಗಳನ್ನು ತಪ್ಪಿಸುವ ಪರ್ಯಾಯವೆಂದರೆ ಯಾವುದೇ ವ್ಯಕ್ತಿಯ ಜೀವನದಲ್ಲಿ ಕೋಪದ ಮೊದಲ ಕ್ಷಣವು ತನ್ನದೇ ಆದ ಹಿಂದಿನ ನಿರಂತರತೆಯ ಕ್ಷಣದಿಂದ ಬರುತ್ತದೆ. ಪುನರ್ಜನ್ಮದ ಸಿದ್ಧಾಂತವು ಇದನ್ನು ವಿವರಿಸುತ್ತದೆ. 

ಚಲನಚಿತ್ರದ ಸಾದೃಶ್ಯ 

ನಾವು ಪುನರ್ಜನ್ಮವನ್ನು ಚಲನಚಿತ್ರದ ಸಾದೃಶ್ಯದೊಂದಿಗೆ ಅರ್ಥಮಾಡಿಕೊಳ್ಳಲು ಪ್ರಯತ್ನಿಸಬಹುದು. ಒಂದು ಚಲನಚಿತ್ರವು, ಚಿತ್ರಗಳ ಫ್ರೇಮ್ಗಳ ನಿರಂತರತೆಯಂತೆಯೇ, ನಮ್ಮ ಮಾನಸಿಕ ನಿರಂತರತೆಗಳು ಅಥವಾ ಮನಸ್ಸಿನ ಹರಿವುಗಳು, ಒಂದು ಜೀವಿತಾವಧಿಯಲ್ಲಿ ಮತ್ತು ಒಂದು ಜೀವನದಿಂದ ಮುಂದಿನ ಜೀವನಕ್ಕೆ, ವಿದ್ಯಮಾನಗಳ ಅರಿವಿನ ನಿರಂತರವಾಗಿ ಬದಲಾಗುತ್ತಿರುವ ಕ್ಷಣಗಳ ನಿರಂತರತೆಗಳಾಗಿರುತ್ತವೆ. "ನಾನು" ಅಥವಾ "ನನ್ನ ಮನಸ್ಸು" ನಂತಹ ಯಾವುದೇ ಘನ, ಕಂಡುಹಿಡಿಯಬಹುದಾದ ಅಸ್ತಿತ್ವವು ಮರುಜನ್ಮ ಪಡೆಯುವುದಿಲ್ಲ. ಪುನರ್ಜನ್ಮವು ಕನ್ವೇಯರ್ ಬೆಲ್ಟ್ ಮೇಲೆ ಕುಳಿತಿರುವ, ಒಂದು ಜೀವನದಿಂದ ಮತ್ತೊಂದು ಜೀವನಕ್ಕೆ ಹೋಗುವ ಸಣ್ಣ ಪ್ರತಿಮೆಯ ಸಾದೃಶ್ಯದಂತಲ್ಲ. ಬದಲಾಗಿ, ಇದು ಒಂದು ಚಲನಚಿತ್ರದಂತೆ, ನಿರಂತರವಾಗಿ ಬದಲಾಗುತ್ತಿರುವ ವಿಷಯವಾಗಿರುತ್ತದೆ. ಪ್ರತಿಯೊಂದು ಫ್ರೇಮ್ ವಿಭಿನ್ನವಾಗಿರುತ್ತದೆ, ಆದರೆ ಅದರಲ್ಲಿ ನಿರಂತರತೆಯಿರುತ್ತದೆ. ಒಂದು ಫ್ರೇಮ್ ಮುಂದಿನದಕ್ಕೆ ಸಂಬಂಧಿಸಿರುತ್ತದೆ. ಅದೇ ರೀತಿಯಾಗಿ, ವಿದ್ಯಮಾನಗಳ ಅರಿವಿನ ಕ್ಷಣಗಳ ನಿರಂತರವಾಗಿ ಬದಲಾಗುತ್ತಿರುವ ನಿರಂತರತೆಯಿರುತ್ತದೆ, ಆ ಕ್ಷಣಗಳಲ್ಲಿ ಕೆಲವು ಪ್ರಜ್ಞಾಹೀನವಾಗಿರಲೂಬಹುದು. ಇದಲ್ಲದೆ, ಎಲ್ಲಾ ಚಲನಚಿತ್ರಗಳು ಒಂದೇ ಚಲನಚಿತ್ರವಲ್ಲದಂತೆಯೇ, ಅವೆಲ್ಲವೂ ಚಲನಚಿತ್ರಗಳಾಗಿದ್ದರೂ, ಎಲ್ಲಾ ಮಾನಸಿಕ ನಿರಂತರತೆಗಳು ಅಥವಾ "ಮನಸ್ಸುಗಳು" ಒಂದು ಮನಸ್ಸಾಗಿರುವುದಿಲ್ಲ. ವಿದ್ಯಮಾನಗಳ ಅರಿವಿನ ನಿರಂತರತೆಯ ಲೆಕ್ಕವಿಲ್ಲದಷ್ಟು ವೈಯಕ್ತಿಕ ಸ್ಟ್ರೀಮ್‌ಗಳಿವೆ ಮತ್ತು ಪ್ರತಿಯೊಂದನ್ನು ತನ್ನದೇ ಆದ ದೃಷ್ಟಿಕೋನದಿಂದ "ನಾನು" ಎಂದು ಕರೆಯಬಹುದು. 

ಪುನರ್ಜನ್ಮದ ಪ್ರಶ್ನೆಗೆ ಸಂಬಂಧಿಸಿದಂತೆ ನಾವು ತನಿಖೆ ಮಾಡಲು ಪ್ರಾರಂಭಿಸುವ ತಾರ್ಕಿಕ ಮಾರ್ಗಗಳು ಇವಾಗಿವೆ. ಒಂದು ಸಿದ್ಧಾಂತವು ತಾರ್ಕಿಕವಾಗಿ ಅರ್ಥಪೂರ್ಣವಾಗಿದ್ದರೆ, ತಮ್ಮ ಹಿಂದಿನ ಜೀವನವನ್ನು ನೆನಪಿಸಿಕೊಳ್ಳುವ ಜನರಿದ್ದಾರೆ ಎಂಬ ಅಂಶವನ್ನು ನಾವು ಹೆಚ್ಚು ಗಂಭೀರವಾಗಿ ಪರಿಗಣಿಸಬಹುದು. ಈ ರೀತಿಯಾಗಿ, ನಾವು ಪುನರ್ಜನ್ಮದ ಅಸ್ತಿತ್ವವನ್ನು ತಾರ್ಕಿಕ ವಿಧಾನಗಳಿಂದ ಪರಿಶೀಲಿಸುತ್ತೇವೆ.

ಯಾವುದು ಪುನರ್ಜನ್ಮವಾಗುತ್ತದೆ

ಬೌದ್ಧಧರ್ಮದ ಪ್ರಕಾರ, ಅತ್ಮವು, ಧೃಡವಾದ ಸಣ್ಣ ಪ್ರತಿಮೆ ಅಥವಾ ವ್ಯಕ್ತಿಯು ಒಂದು ಜೀವಿತಾವಧಿಯಿಂದ ಇನ್ನೊಂದಕ್ಕೆ ಕನ್ವೇಯರ್ ಬೆಲ್ಟ್‌ನಲ್ಲಿ ಪ್ರಯಾಣಿಸುವಂತಹ ಸಾದೃಶ್ಯಕ್ಕೆ ಹೋಲುವುದಿಲ್ಲ. ಕನ್ವೇಯರ್ ಬೆಲ್ಟ್ ಸಮಯವನ್ನು ಪ್ರತಿನಿಧಿಸುತ್ತದೆ ಮತ್ತು ಅದು ಸೂಚಿಸುವ ಚಿತ್ರವು ಒಂದು ರೀತಿಯ ಘನ ವಸ್ತು, "ನಾನು" ಎಂಬ ಸ್ಥಿರ ವ್ಯಕ್ತಿತ್ವ ಅಥವಾ ಆತ್ಮವು ಸಮಯದ ಮೂಲಕ ಹಾದುಹೋಗುತ್ತದೆ: "ಈಗ ನಾನು ಚಿಕ್ಕವನಾಗಿದ್ದೇನೆ, ಈಗ ನನಗೆ ವಯಸ್ಸಾಗಿದೆ; ಈಗ ನಾನು ಈ ಜೀವನದಲ್ಲಿ ಇದ್ದೇನೆ, ಈಗ ನಾನು ಆ ಜೀವನದಲ್ಲಿ ಇದ್ದೇನೆ." ಇದು ಬೌದ್ಧ ಪುನರ್ಜನ್ಮದ ಪರಿಕಲ್ಪನೆಯಲ್ಲ. ಬದಲಾಗಿ, ಸಾದೃಶ್ಯವು ಚಲನಚಿತ್ರದಂತಿರುತ್ತದೆ. ಚಲನಚಿತ್ರದೊಂದಿಗೆ ನಿರಂತರತೆಯಿರುತ್ತದೆ; ಫ್ರೇಮ್ಗಳು ನಿರಂತರತೆಯನ್ನು ರೂಪಿಸುತ್ತವೆ. 

ನಾನು ನೀನಾಗುತ್ತೇನೆ ಅಥವಾ ನಾವೆಲ್ಲರೂ ಒಂದೇ ಎಂದು ಬೌದ್ಧಧರ್ಮ ಹೇಳುವುದಿಲ್ಲ. ನಾವೆಲ್ಲರೂ ಒಂದಾಗಿದ್ದರೆ ಮತ್ತು ನಾನು ನೀನಾಗಿದ್ದರೆ, ನಾವಿಬ್ಬರೂ ಹಸಿದಿದ್ದರೆ, ನಾನು ತಿನ್ನಲು ಹೋಗುವವರೆಗೆ ನೀವು ಕಾರಿನಲ್ಲಿ ಕಾಯಬಹುದು. ಅದು ಹಾಗಿರುವುದಿಲ್ಲ. ನಮ್ಮಲ್ಲಿ ಪ್ರತಿಯೊಬ್ಬರಿಗೂ ನಮ್ಮದೇ ಆದ ಪ್ರತ್ಯೇಕ ನಿರಂತರತೆಯ ಹೊಳೆಗಳಿವೆ. ನನ್ನ ಚಲನಚಿತ್ರದಲ್ಲಿನ ಅನುಕ್ರಮವು ನಿಮ್ಮ ಚಲನಚಿತ್ರವಾಗಿ ಬದಲಾಗುವುದಿಲ್ಲ, ಆದರೆ ನಮ್ಮ ಜೀವನವು ಚಲನಚಿತ್ರಗಳಂತೆ ಮುಂದುವರಿಯುತ್ತದೆ ಎಂದರೆ ಅವು ದೃಢವಾಗಿಲ್ಲ ಮತ್ತು ಸ್ಥಿರವಾಗಿಲ್ಲ. ಜೀವನವು ಒಂದು ಫ್ರೇಮಿನಿಂದ ಇನ್ನೊಂದು ಫ್ರೇಮಿಗೆ ಹೋಗುತ್ತದೆ. ಕರ್ಮದ ಪ್ರಕಾರ ಅದು ಒಂದು ಅನುಕ್ರಮವನ್ನು ಅನುಸರಿಸುತ್ತದೆ ಮತ್ತು ಹೀಗೆ ನಿರಂತರತೆಯನ್ನು ರೂಪಿಸುತ್ತದೆ. 

ಪ್ರತಿಯೊಂದು ನಿರಂತರತೆಯು ಯಾರೋ ಒಬ್ಬರಾಗಿರುತ್ತಾರೆ ಮತ್ತು ಅದನ್ನು "ನಾನು" ಎಂದು ಕರೆಯಬಹುದು; ಪ್ರತಿಯೊಂದು ನಿರಂತರತೆಯು ಯಾರೂ ಅಲ್ಲ ಎಂದಲ್ಲ. ಆದರೆ ಚಲನಚಿತ್ರದ ಶೀರ್ಷಿಕೆಯು ಇಡೀ ಚಲನಚಿತ್ರ ಮತ್ತು ಅದರಲ್ಲಿರುವ ಪ್ರತಿಯೊಂದು ಫ್ರೇಮ ಅನ್ನು ಉಲ್ಲೇಖಿಸುವಂತೆಯೇ, ಮತ್ತು ಪ್ರತಿ ಫ್ರೇಮಿನಲ್ಲಿ ಧೃಡವಾಗಿ ಕಂಡುಬರದಂತೆಯೇ, "ನಾನು" ಎಂಬುದು ವೈಯಕ್ತಿಕ ಮಾನಸಿಕ ನಿರಂತರತೆಯಾಗಿರುತ್ತದೆ ಮತ್ತು ಅದರ ಪ್ರತಿಯೊಂದು ಕ್ಷಣವನ್ನು ಸೂಚಿಸುತ್ತದೆ, ಆದರೆ ಯಾವುದೇ ಕ್ಷಣದಲ್ಲಿ ಧೃಡವಾಗಿ ಕಂಡುಬರುವುದಿಲ್ಲ. ಆದರೆ, ಸಾಂಪ್ರದಾಯಿಕವಾಗಿ "ನಾನು", "ಸ್ವಯಂ" ಎನ್ನುವುದು ಇದೆ. ಬೌದ್ಧಧರ್ಮವು ನಿರಾಕರಣವಾದಿ ವ್ಯವಸ್ಥೆಯಲ್ಲ. 

ಮಾನವರು ಯಾವಾಗಲೂ ಮಾನವರಾಗಿಯೆ ಮರುಜನ್ಮ ಪಡೆಯುತ್ತಾರೆಯೇ

ನಾವು ಇಲ್ಲಿ ಮಾನಸಿಕ ಚಟುವಟಿಕೆ ಮತ್ತು ನಮ್ಮ ಮಾನಸಿಕ ಚಟುವಟಿಕೆಯನ್ನು ನಿರೂಪಿಸುವ ಸಾಮಾನ್ಯ ಅಂಶಗಳು ಯಾವುವು ಎಂಬುದರ ಬಗ್ಗೆ ಮಾತನಾಡುತ್ತಿದ್ದೇವೆ. ಮಾನವ ಮಾನಸಿಕ ಚಟುವಟಿಕೆಯನ್ನು ನಿರೂಪಿಸುವುದೇ ಬುದ್ಧಿವಂತಿಕೆ, ಮತ್ತು ನಮಗೆ ತಿಳಿದಿರುವಂತೆ ಆ ಬುದ್ಧಿವಂತಿಕೆಯು "ಅತ್ಯಂತ ಬುದ್ಧಿವಂತರಲ್ಲ" ದಿಂದ "ಅತ್ಯಂತ ಬುದ್ಧಿವಂತ" ದವರೆಗಿನ ಯಾವುದೇ ಪ್ರಮಾಣದಲ್ಲಿರಬಹುದು. ಆದರೆ ಮಾನಸಿಕ ಚಟುವಟಿಕೆಯ ಭಾಗವಾಗಿರುವ ಇತರ ಅಂಶಗಳಿವೆ, ಉದಾಹರಣೆಗೆ ಕೋಪ, ದುರಾಸೆ, ಬಾಂಧವ್ಯ, ವ್ಯಾಕುಲತೆ ಮತ್ತು ಈ ಮಾನಸಿಕ ಅಂಶಗಳಿಂದ ಉಂಟಾಗುವ ಪ್ರಚೋದಿತ ನಡವಳಿಕೆಗಳು. ಕೆಲವರಲ್ಲಿ, ಈ ಅಂಶಗಳು ಮಾನಸಿಕ ಚಟುವಟಿಕೆಯ ಮೇಲೆ ಪ್ರಾಬಲ್ಯ ಸಾಧಿಸುತ್ತವೆ, ಅದರಿಂದ ಅವರು ತಮ್ಮ ಮಾನವ ಬುದ್ಧಿಮತ್ತೆಯನ್ನು ಬಳಸುವುದಿಲ್ಲ, ಬದಲಿಗೆ ಹೆಚ್ಚಾಗಿ ದುರಾಸೆ ಅಥವಾ ಕೋಪದ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಾರೆ. 

ಉದಾಹರಣೆಗೆ, ಅಪಾರ ಲೈಂಗಿಕ ಬಯಕೆಯನ್ನು ಹೊಂದಿರುವ ಜನರಿರುತ್ತಾರೆ ಮತ್ತು ಬಾರ್‌ಗಳಲ್ಲಿ ಸುತ್ತಾಡುತ್ತಾರೆ, ಇತರರನ್ನು ಭೇಟಿಯಾಗುತ್ತಾರೆ ಮತ್ತು ಅವರು ಭೇಟಿಯಾಗುವ ಬಹುತೇಕ ಯಾರೊಂದಿಗಾದರೂ ಲೈಂಗಿಕ ಸಂಬಂಧವನ್ನು ಹೊಂದುತ್ತಾರೆ - ಆ ವ್ಯಕ್ತಿಯು ನಾಯಿಯಂತೆ ವರ್ತಿಸುತ್ತಿದ್ದಾನೆ ಎಂದು ನೀವು ಭಾವಿಸುವುದಿಲ್ಲವೇ? ನಾಯಿಯು ಯಾವುದೇ ಸಮಯದಲ್ಲಿ ಅದು ಭೇಟಿಯಾಗುವ ಯಾವುದೇ ನಾಯಿಯನ್ನು ಹತ್ತುತ್ತದೆ; ಅದು ಯಾವುದೇ ಸ್ವಯಂ ನಿಯಂತ್ರಣವನ್ನು ಚಲಾಯಿಸುವುದಿಲ್ಲ. ಒಬ್ಬ ಮನುಷ್ಯ ಹಾಗೆ ವರ್ತಿಸಿದರೆ, ಅವರು ಪ್ರಾಣಿಗಳ ಮನಸ್ಥಿತಿಯ ಅಭ್ಯಾಸವನ್ನು ಬೆಳೆಸಿಕೊಳ್ಳುತ್ತಾರೆ. ಆದ್ದರಿಂದ, ಪುನರ್ಜನ್ಮದ ವಿಷಯದಲ್ಲಿ ನಾವು ಯೋಚಿಸಿದರೆ, ಆ ವ್ಯಕ್ತಿಯ ಬಯಕೆಯ ಮನಸ್ಥಿತಿಯು ಭವಿಷ್ಯದ ಜೀವನದಲ್ಲಿ ಅವರು ಹೊಂದಿರುವ ಮಾನಸಿಕ ಚಟುವಟಿಕೆಯ ಪ್ರಬಲ ವಿಧಾನವಾಗಿದ್ದು, ಅವರು ಆ ಮಾನಸಿಕ ಚಟುವಟಿಕೆಗೆ ಸೂಕ್ತವಾದ ಆಧಾರವಾಗಿರುವ ದೇಹಕ್ಕೆ ಪುನರ್ಜನ್ಮ ಪಡೆಯುತ್ತಾರೆ, ಅಂದರೆ, ಪ್ರಾಣಿಗಳ ಪುನರ್ಜನ್ಮ. 

ಆದ್ದರಿಂದ ನಮ್ಮ ನಡವಳಿಕೆಯನ್ನು ಪರೀಕ್ಷಿಸುವುದು ಬಹಳಾ ಸಹಾಯಕವಾಗಿರುತ್ತದೆ: "ನಾನು ಈ ರೀತಿಯ ಅಥವಾ ಆ ರೀತಿಯ ಪ್ರಾಣಿಯಂತೆ ವರ್ತಿಸುತ್ತಿದ್ದೇನೆಯೇ?" ನೊಣದ ವಿಷಯದಲ್ಲಿ ಯೋಚಿಸಿ. ನೊಣದ ಮನಸ್ಥಿತಿಯು ಸಂಪೂರ್ಣವಾದ ಮಾನಸಿಕ ಅಲೆದಾಟವಾಗಿರುತ್ತದೆ. ಒಂದು ನೊಣ ಒಂದು ಸ್ಥಳದಲ್ಲಿ ಕೆಲವು ಕ್ಷಣಗಳಿಗಿಂತ ಹೆಚ್ಚು ಕಾಲ ಇರಲು ಸಾಧ್ಯವಿಲ್ಲ; ಅದು ನಿರಂತರವಾಗಿ ಚಲಿಸುತ್ತಿರುತ್ತದೆ ಮತ್ತು ನಿರಂತರವಾಗಿ ವಿಚಲಿತಗೊಳ್ಳುತ್ತದೆ. ನಮ್ಮ ಮನಸ್ಸು ನೊಣದ ಮನಸ್ಸಿನಂತೆಯೇ ಇದೆಯೇ? ಹಾಗಿದ್ದಲ್ಲಿ, ಮುಂದಿನ ಜೀವನದಲ್ಲಿ ನಾವು ಏನನ್ನು ನಿರೀಕ್ಷಿಸುತ್ತೇವೆ? ನಾವು ಬುದ್ಧಿವಂತರಾಗುತ್ತೇವೆ ಮತ್ತು ಉತ್ತಮ ಏಕಾಗ್ರತೆಯನ್ನು ಹೊಂದಿರುತ್ತೇವೆ ಎಂದು ನಾವು ನಿರೀಕ್ಷಿಸುತ್ತೇವೆಯೇ? 

ಮಾನವರು ಮಾನವರಾಗಿಯೇ ಮರುಜನ್ಮ ಪಡೆಯುವುದಿಲ್ಲ ಎಂದು ಅರ್ಥಮಾಡಿಕೊಳ್ಳಲು ನಮಗೆ ಸಹಾಯ ಮಾಡುವ ಕೆಲವು ಆಲೋಚನೆಗಳು ಇವು. ನಾವು ಅನೇಕ ರೀತಿಯ ಜೀವ ರೂಪಗಳಾಗಿ ಮರುಜನ್ಮ ಪಡೆಯಬಹುದು, ಮತ್ತು ಅದರಲ್ಲಿ ಏರಿಳಿತವಾಗುತ್ತಲೇ ಇರುತ್ತದೆ. ನಾವು ಮನುಷ್ಯರಾಗಿ ಅನೇಕ ಸಕಾರಾತ್ಮಕ ಅಭ್ಯಾಸಗಳನ್ನು ಬೆಳೆಸಿಕೊಂಡಿದ್ದರೆ, ನಾವು ಪ್ರಾಣಿಯಾಗಿ ಮರುಜನ್ಮ ಪಡೆದರೂ ಸಹ, ನಮ್ಮ ಹಿಂದಿನ ಪ್ರಾಣಿ ವರ್ತನೆಯ ಕರ್ಮ ಶಕ್ತಿ ಕ್ಷೀಣಿಸಿದಾಗ, ನಮ್ಮ ಹಿಂದಿನ ಸಕಾರಾತ್ಮಕ ಶಕ್ತಿ ಪ್ರಬಲವಾಗಬಹುದು ಮತ್ತು ನಾವು ಮತ್ತೆ ಮನುಷ್ಯರಾಗಿ ಮರುಜನ್ಮ ಪಡೆಯಬಹುದು. ನಾವು ಶಾಶ್ವತವಾಗಿ ಕೆಳಮಟ್ಟದ ಪುನರ್ಜನ್ಮಗಳನ್ನು ಹೊಂದಲು ಖಂಡಿಸಲ್ಪಟ್ಟಿಲ್ಲ. 

ಮಾನಸಿಕ ಚಟುವಟಿಕೆಗಳನ್ನು ಮಾನವ ಮಾನಸಿಕ ಚಟುವಟಿಕೆಯನ್ನಾಗಿ ಮಾಡುವ ಅಥವಾ ಅದನ್ನು ಪುರುಷ ಅಥವಾ ಮಹಿಳೆ ಅಥವಾ ಅಂತಹ ಯಾವುದನ್ನಾದರೂ ಮಾಡುವ ಯಾವುದೇ ಅಂತರ್ಗತ ಅಂಶವಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳುವುದು ಮುಖ್ಯವಾದ ವಿಷಯ. ಇದು ಕೇವಲ ಮಾನಸಿಕ ಚಟುವಟಿಕೆಯಾಗಿರುತ್ತದೆ. ನಾವು ಹೊಂದಿರುವ ಪುನರ್ಜನ್ಮದ ಪ್ರಕಾರವು ಕರ್ಮದ ಮೇಲೆ, ನಮ್ಮ ಪ್ರಚೋದಿತ ನಡವಳಿಕೆಯಿಂದ ನಾವು ನಿರ್ಮಿಸುವ ವಿವಿಧ ಅಭ್ಯಾಸಗಳ ಮೇಲೆ ಅವಲಂಬಿತವಾಗಿರುತ್ತದೆ. ಭವಿಷ್ಯದ ಜೀವಿತಾವಧಿಯಲ್ಲಿ, ಆ ಅಭ್ಯಾಸಗಳನ್ನು ಕಾರ್ಯಗತಗೊಳಿಸಲು ಸೂಕ್ತವಾದ ಆಧಾರವಾಗಿ ಕಾರ್ಯನಿರ್ವಹಿಸುವ ದೇಹವನ್ನು ನಾವು ಹೊಂದಿರುತ್ತೇವೆ. 

ಸಾರಾಂಶ 

ಪುನರ್ಜನ್ಮದ ಬೌದ್ಧ ಪ್ರಸ್ತುತಿಯನ್ನು ನಾವು ತಾರ್ಕಿಕವಾಗಿ ಪರಿಶೀಲಿಸಿದಾಗ, ವೈಯಕ್ತಿಕ ಮಾನಸಿಕ ನಿರಂತರತೆಗಳನ್ನು ಶಾಶ್ವತಗೊಳಿಸುವ ಕಾರಣಾತ್ಮಕ ಪ್ರಕ್ರಿಯೆಯನ್ನು ನಾವು ಪರಿಶೀಲಿಸಬೇಕಾಗಿದೆ: ಎಂದಿಗೂ ಕ್ಷೀಣಿಸದ ಮಾನಸಿಕ ಚಟುವಟಿಕೆಯ ವೈಯಕ್ತಿಕ ನಿರಂತರತೆಗಳು. ಪ್ರಾರಂಭವಿಲ್ಲದ ಪುನರ್ಜನ್ಮವು ನಾವು ತಲುಪುವ ತೀರ್ಮಾನವಾಗಿರುತ್ತದೆ, ತನ್ನದೇ ಆದ ಮೊದಲು ನಿರ್ಮಿಸಲಾದ ನಡವಳಿಕೆಯ ಅಭ್ಯಾಸಗಳು ಪ್ರತಿ ಜೀವಿತಾವಧಿಯನ್ನು ರೂಪಿಸುತ್ತವೆ. 

Top