ಆಶ್ರಯ: ಜೀವನದಲ್ಲಿ ಸುರಕ್ಷಿತ ಮತ್ತು ಅರ್ಥಪೂರ್ಣ ನಿರ್ದೇಶನ

25:38
ಆಶ್ರಯ ಪಡೆಯುವುದು ಎಲ್ಲಾ ಬೌದ್ಧ ಬೋಧನೆಗಳು ಮತ್ತು ಆಚರಣೆಗಳ ಅಡಿಪಾಯವಾಗಿದೆ. ಇದನ್ನು "ಬೌದ್ಧ ಮಾರ್ಗವನ್ನು ಪ್ರವೇಶಿಸುವ ಹೆಬ್ಬಾಗಿಲು" ಎಂದು ಕರೆಯಲಾಗುತ್ತದೆ. ಆಶ್ರಯ ಪಡೆಯುವುದು ಎಂದರೆ ನಮ್ಮ ಮೇಲೆ ನಾವೇ ಕೆಲಸ ಮಾಡುವುದು ಎಂದು ನಾವು ಅರ್ಥಮಾಡಿಕೊಂಡಾಗ, ಅದು ನಮ್ಮ ಜೀವನದಲ್ಲಿ ಸುರಕ್ಷಿತವಾದ ಮತ್ತು ಅರ್ಥಪೂರ್ಣವಾದ ದಿಕ್ಕನ್ನು ಇರಿಸುವ ಸಕ್ರಿಯ ಪ್ರಕ್ರಿಯೆಯಾಗಿದೆ ಎಂದು ನಾವು ನೋಡುತ್ತೇವೆ. ಗೊಂದಲ, ಗೊಂದಲದ ಭಾವನೆಗಳು ಮತ್ತು ಪ್ರಚೋದಿತ ನಡವಳಿಕೆಗಳನ್ನು ತೊಡೆದುಹಾಕಲು ಮತ್ತು ಎಲ್ಲಾ ಉತ್ತಮ ಗುಣಗಳನ್ನು ಅಭಿವೃದ್ಧಿಪಡಿಸಲು ಬುದ್ಧನು ಕಲಿಸಿದ ವಿಧಾನಗಳನ್ನು ಅನುಸರಿಸುವ ಮೂಲಕ ನಾವು ನಮ್ಮ ಮೇಲೆ ಕೆಲಸ ಮಾಡುತ್ತೇವೆ. ಇದನ್ನು ಎಲ್ಲಾ ಬುದ್ಧರು ಮಾಡಿರುವರು ಮತ್ತು ಹೆಚ್ಚಾಗಿ ಅರಿತುಕೊಂಡ ಗುರುಗಳು ಮಾಡುತ್ತಿರುವರು ಮತ್ತು ಅವರ ಹೆಜ್ಜೆಗಳನ್ನು ಅನುಸರಿಸಲು ನಾವು ಪ್ರಯತ್ನಿಸುತ್ತೇವೆ.

ನಮ್ಮ ಜೀವನದಲ್ಲಿ, ಬೌದ್ಧ ಆಚರಣೆಯ ಉದ್ದೇಶದ ಬಗ್ಗೆಗಿರುವ ಗೊಂದಲವನ್ನು ನಿವಾರಿಸುವುದು

ದೈನಂದಿನ ಜೀವನದಲ್ಲಿನ ಆಶ್ರಯದ ಪ್ರಸ್ತುತತೆಯ ಬಗ್ಗೆ ಮಾತನಾಡಲು ನನ್ನನ್ನು ವಿನಂತಿಸಲಾಗಿದೆ. ಇದು ಹತ್ತನೇ ಶತಮಾನದ ಕೊನೆಯಲ್ಲಿ, ಟಿಬೆಟ್‌ಗೆ ಹೋದ ಮಹಾನ್ ಭಾರತೀಯ ಗುರು ಅತಿಶಾ ಅವರ ಉದಾಹರಣೆಯನ್ನು ನೆನಪಿಗೆ ತಂದಿತು. ಅವರು ಮಹಾನ್ ಗುರುಗಳಲ್ಲಿ ಒಬ್ಬರಾಗಿದ್ದು, ಟಿಬೆಟ್ನಲ್ಲಿ ಭಾರತದಿಂದಾದ ಬೌದ್ಧಧರ್ಮದ ಮೊದಲ ಪರಿಚಯದ ಅವನತಿಯ ನಂತರ, ಅದನ್ನು ಪುನರುಜ್ಜೀವನಗೊಳಿಸಲು ಸಹಾಯ ಮಾಡಿದವರಾಗಿದ್ದರು. ಆ ಸಮಯದಲ್ಲಿ ಟಿಬೆಟ್‌ನಲ್ಲಿನ ಪರಿಸ್ಥಿತಿ ಹೇಗಿತ್ತು ಎಂದರೆ, ತಂತ್ರ ಮತ್ತು ಕೆಲವು ಸುಧಾರಿತ ಬೋಧನೆಗಳ ಬಗ್ಗೆ ಬಹಳಾ ತಪ್ಪು ತಿಳುವಳಿಕೆ ಇತ್ತು. ಯಾರೊಬ್ಬರೂ ಅರ್ಹರಾದ ಶಿಕ್ಷಕರಿರಲಿಲ್ಲ. ನಿಜ ಹೇಳಬೇಕೆಂದರೆ, ವಿಷಯಗಳನ್ನು ಹೆಚ್ಚು ಸ್ಪಷ್ಟವಾಗಿ ವಿವರಿಸುವ ಶಿಕ್ಷಕರೇ ಸುತ್ತಮುತ್ತವಿರಲಿಲ್ಲ. ಹಲವಾರು ಪಠ್ಯಗಳನ್ನು ಅನುವಾದಿಸಲಾಗಿದ್ದರೂ, ಹೆಚ್ಚಿನ ಜನರಿಗೆ ಅವುಗಳನ್ನು ಓದಲು ಸಾಧ್ಯವಾಗುತ್ತಿರಲಿಲ್ಲ ಮತ್ತು ಅವುಗಳ ಹೆಚ್ಚಿನ ಪ್ರತಿಗಳು ಇರಲಿಲ್ಲ. ಅವರು ಓದಬಹುದಾಗಿದ್ದರೂ, ಅವರು ಏನು ಓದುತ್ತಿದ್ದಾರೆ ಎಂಬುದರ ಸ್ಪಷ್ಟೀಕರಣ ಸಿಗುವುದು ಬಹಳಾ ಕಷ್ಟವಾಗಿತ್ತು. 

ಈ ಪರಿಸ್ಥಿತಿಯನ್ನು ಸರಿಪಡಿಸಲು, ಪಾಶ್ಚಿಮಾತ್ಯ ಟಿಬೆಟ್‌ನ ರಾಜನೊಬ್ಬನು, ಟಿಬೆಟ್ಗೆ ಒಬ್ಬ ಶ್ರೇಷ್ಠ ಬೌದ್ಧ ಗುರುವನ್ನು ತಮ್ಮೊಂದಿಗೆ ಕರೆತರುವಂತೆ ಕೆಲವು ಧೈರ್ಯಶಾಲಿ ವಿದ್ಯಾರ್ಥಿಗಳನ್ನು ಭಾರತಕ್ಕೆ ಕಳುಹಿಸಿದನು. ಅವರು ಕಾಲ್ನಡಿಗೆಯಲ್ಲಿ ಪ್ರಯಾಣಿಸಬೇಕಾಗಿತ್ತು, ಭಾಷೆಗಳನ್ನು ಕಲಿಯಬೇಕಾಗಿತ್ತು ಮತ್ತು ಹವಾಮಾನವನ್ನು ಎದುರಿಸಬೇಕಾಗಿತ್ತು. ಅವರಲ್ಲಿ ಹಲವರು, ಪ್ರಯಾಣದಲ್ಲಿ ಅಥವಾ ಭಾರತವನ್ನು ಒಮ್ಮೆ ತಲುಪಿದ ನಂತರ ಅಸುನೀಗಿದರು. ಏನೇ ಆಗಲಿ, ಅವರು ಭಾರತದಿಂದ ಈ ಮಹಾನ್ ಗುರುವಾದ ಅತಿಶಾ ಅವರನ್ನು ಪುನಃ ಟಿಬೆಟ್‌ಗೆ ಆಹ್ವಾನಿಸುವಲ್ಲಿ ಯಶಸ್ವಿಯಾದರು. ಅವರು ಅಲ್ಲಿದ್ದ ಹಲವು ವರ್ಷಗಳ ಕಾಲ ಮುಖ್ಯವಾಗಿ ಕಲಿಸಿದ್ದು ಆಶ್ರಯ ಮತ್ತು ಕರ್ಮದ ಬಗ್ಗೆ. ಅವರನ್ನು "ಆಶ್ರಯ ಮತ್ತು ಕರ್ಮ ಲಾಮಾ" ಎಂದೇ ಕರೆಯಲಾಗುತ್ತಿತ್ತು. ಅದು ಟಿಬೆಟಿಯನ್ನರು ಅವರಿಗೆ ಇಟ್ಟ ಹೆಸರಾಗಿತ್ತು. 

ಅತಿಶಾ ಅವರ ಉದಾಹರಣೆ ಇಂದಿನ ದಿನಗಳಲ್ಲಿ ಸಾಕಷ್ಟು ಸಮಾಕಾಲೀನವಾಗಿದೆ. ಇಂದಿನ ದಿನಗಳಲ್ಲೂ ಸಹ ಬೌದ್ಧ ಧರ್ಮದ ಬಗ್ಗೆ ಮತ್ತು ದೈನಂದಿನ ಮಟ್ಟದಲ್ಲಿ ಅದರ ಅಭ್ಯಾಸದ ಅರ್ಥವೇನು ಎಂಬುದರ ಬಗ್ಗೆ ಸಾಕಷ್ಟು ಗೊಂದಲಗಳಿವೆ. ಮತ್ತೊಮ್ಮೆ, ತಂತ್ರ ಮತ್ತು ಇತರ ಸುಧಾರಿತ ಬೋಧನೆಗಳ ಬಗ್ಗೆ ಸಾಕಷ್ಟು ತಪ್ಪು ತಿಳುವಳಿಕೆಯಿದೆ. ಮೂಲಭೂತ ಬೌದ್ಧ ಬೋಧನೆಗಳ ಬಗ್ಗೆ ಯಾವುದೇ ಅಡಿಪಾಯವಿಲ್ಲದೆ, ಜನರು ಈ ಆಚರಣೆಗಳನ್ನು ಅಭ್ಯಸಿಸಲು ಮುನ್ನುಗ್ಗುತ್ತಿದ್ದಾರೆ. ಒಂದು ರೀತಿಯ ಮಾಂತ್ರಿಕ ಆಚರಣೆಯನ್ನು ಮಾಡುವುದೇ ಬೌದ್ಧಧರ್ಮದ ಆಚರಣೆಯೆಂದು ಅವರು ಊಹಿಸುತ್ತಾರೆ. ಆಶ್ರಯದ ಪ್ರಸ್ತುತತೆ ಮತ್ತು ಪ್ರಾಮುಖ್ಯತೆ ಮತ್ತು ನಮ್ಮ ದೈನಂದಿನ ಜೀವನದಲ್ಲಿ ಅದರಿಂದಾಗುವ ವ್ಯತ್ಯಾಸವನ್ನು ಕ್ಷುಲ್ಲಕಗೊಳಿಸುವ ಮೂಲಕ, ಅವರು ಮುಖ್ಯ ಅಂಶವನ್ನು ಕಳೆದುಕೊಳ್ಳುತ್ತಿದ್ದಾರೆ.

ಜೀವನದಲ್ಲಿ ನಮ್ಮ ಪರಿಸ್ಥಿತಿ ಏನೇ ಇರಲಿ, ಬೌದ್ಧ ಆಚರಣೆಯು ನಮ್ಮ ಮೇಲೆ ನಾವೇ ಕೆಲಸ ಮಾಡುವುದನ್ನು ಉದ್ದೇಶಿಸುತ್ತದೆ, ಉತ್ತಮ ವ್ಯಕ್ತಿಯಾಗಲು ನಮ್ಮನ್ನು ಸುಧಾರಿಸಲು ಪ್ರಯತ್ನಿಸುತ್ತದೆ. ಏನೋ ಪ್ರತಿದಿನ ಅರ್ಧ ಘಂಟೆಯವರೆಗೆ ಅಥವಾ ನಾವು ತುಂಬಾ ದಣಿದಿರುವಾಗ, ವಾರಕ್ಕೊಮ್ಮೆ ಕೆಲಸದ ನಂತರ, ಸ್ವಲ್ಪ ಸಮಯದವರೆಗೆ ಮಾಡುವಂತಹ ಹವ್ಯಾಸ ಅಥವಾ ಕ್ರೀಡೆಯಾಗಿರುವುದಿಲ್ಲ. ಬದಲಿಗೆ, ಇದು ನಾವು ಸಾರ್ವಕಾಲಿಕವಾಗಿ ಮಾಡಲು ಪ್ರಯತ್ನಿಸುವ ಪ್ರಾಯೋಗಿಕ ಸಂಗತಿಯಾಗಿದೆ – ಇದು ನಮ್ಮ ಮೇಲೆ ನಾವೇ ಯಾವಾಗಲೂ ಕೆಲಸ ಮಾಡುವುದಾಗಿರುತ್ತದೆ. ಇದರರ್ಥ ನಮ್ಮ ನ್ಯೂನತೆಗಳು ಮತ್ತು ನಮ್ಮ ಉತ್ತಮ ಗುಣಗಳನ್ನು ಗುರುತಿಸುವುದಾಗಿರುತ್ತದೆ, ಮೊದಲಿನವುಗಳ ಬಲವನ್ನು ದುರ್ಬಲಗೊಳಿಸುವ ಮತ್ತು ಎರಡನೆಯವುಗಳನ್ನು ಬಲಪಡಿಸುವ ವಿಧಾನಗಳನ್ನು ಕಲಿಯುವುದಾಗಿರುತ್ತದೆ. ಅಂತಿಮವಾಗಿ ಎಲ್ಲಾ ನ್ಯೂನತೆಗಳನ್ನು ನಿವಾರಿಸಲು ಮತ್ತು ಎಲ್ಲಾ ಉತ್ತಮ ಗುಣಗಳನ್ನು ಪೂರ್ಣವಾಗಿ ಅರಿತುಕೊಳ್ಳುವುದೇ ನಮ್ಮ ಗುರಿಯಾಗಿರುತ್ತದೆ. ಇದು ಕೇವಲ ನಮ್ಮ ಸ್ವಂತ ಲಾಭಕ್ಕಾಗಿರುವುದಿಲ್ಲವಾದರೂ, ನಾವು ಜೀವನದಲ್ಲಿ ಸಂತೋಷವಾಗಿರಲು ಇದು ಖಂಡಿತವಾಗಿಯೂ ಪ್ರಯೋಜನಕಾರಿಯಾಗಿರುತ್ತದೆ. ಇದು ಇತರರಿಗೆ ಸಹಾಯ ಮಾಡುವಲ್ಲಿ ಹೆಚ್ಚು ಪರಿಣಾಮಕಾರಿಯಾಗಿರುವುದಕ್ಕಾಗಿ ಮತ್ತು ಆ ಮೂಲಕ ಇತರರಿಗಾಗಿ ಉಪಯುಕ್ತವಾಗುವುದನ್ನೂ ಒಳಗೊಂಡಿರುತ್ತದೆ. ಬೌದ್ಧರ ಆಚರಣೆ ಎಂದರೆ ಇದೇ. ಇವುಗಳನ್ನು ಬೌದ್ಧ ಧರ್ಮವಾಗಿ ವಿಶಿಷ್ಟವಾಗಿಸುವುದು, ಈ ಗುರಿಗಳನ್ನು ಸಾಧಿಸಲು ಸಾಧ್ಯವಾಗಿಸುವ ವಿಧಾನಗಳಾಗಿರುತ್ತವೆ ಮತ್ತು ಆಶ್ರಯ ಎಂದರೆ ನಾವು ಆ ವಿಧಾನಗಳತ್ತ ತಿರುಗಿ, ಅವುಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದಾಗಿರುತ್ತದೆ. 

ಆಶ್ರಯವು ನಿಷ್ಕ್ರಿಯವಾಗಿರುವುದಿಲ್ಲ 

ತ್ರಿರತ್ನಗಳಲ್ಲಿನ - ಬುದ್ಧರು, ಧರ್ಮ ಮತ್ತು ಸಂಘ - ಆಶ್ರಯವು ಎಲ್ಲಾ ಬೌದ್ಧ ಬೋಧನೆಗಳ ಕೇಂದ್ರಬಿಂದುವಾಗಿರುತ್ತದೆ. ನಿಜ ಹೇಳಬೇಕೆಂದರೆ, ಒಬ್ಬರು ಬೌದ್ದರೇ ಅಲ್ಲವೇ ಎಂದು ಗುರುತಿಸುವುದು, ಅವರು ಆಶ್ರಯವನ್ನು ತೆಗೆದುಕೊಂಡರೇ ಇಲ್ಲವೇ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಧರ್ಮವು ನಮ್ಮ ಮೇಲೆ ನಾವು ಕೆಲಸ ಮಾಡುವ ವಿಧಾನಗಳನ್ನು ಮತ್ತು ನಾವೆಲ್ಲರೂ ಸಾಧಿಸಬಹುದಾದ ಗುರಿಯನ್ನು ಸೂಚಿಸುತ್ತದೆ; ಬುದ್ಧರು ಈ ವಿಧಾನಗಳನ್ನು ಬೋಧಿಸಿದವರಾಗಿರುತ್ತಾರೆ ಮತ್ತು ಆ ಗುರಿಯನ್ನು ಪೂರ್ಣವಾಗಿ ಸಾಧಿಸಿದವರಾಗಿರುತ್ತಾರೆ; ಮತ್ತು ಸಂಘವು ಅದನ್ನು ಭಾಗಶಃ ಸಾಧಿಸಿದವರಾಗಿರುತ್ತಾರೆ. "ಧರ್ಮ" ಎಂಬ ಪದದ ಅರ್ಥ "ತಡೆಗಟ್ಟುವ ಕ್ರಮಗಳು" ಎಂದಾಗಿರುತ್ತದೆ - ನಮಗಾಗಿ ಮತ್ತು ಪ್ರಾಯಶಃ ಇತರರಿಗಾಗಿ ಸಮಸ್ಯೆಗಳನ್ನು ಸೃಷ್ಟಿಸುವುದನ್ನು ತಡೆಯಲು ನಾವು ತೆಗೆದುಕೊಳ್ಳುವ ಕ್ರಮಗಳಿವು. ನಮ್ಮನ್ನು ನಾವು ರಕ್ಷಿಸಿಕೊಳ್ಳಲು ತೆಗೆದುಕೊಳ್ಳುವ ಕ್ರಮಗಳಿವು. 

ಮೂಲ ಸಂಸ್ಕೃತ ಪದವನ್ನು ಸಾಮಾನ್ಯವಾಗಿ "ಆಶ್ರಯ", ಶರಣ ಎಂದು ಅನುವಾದಿಸಲಾಗಿರುತ್ತದೆ, ಇದರ ಅರ್ಥವು "ರಕ್ಷಣೆ" ಎಂದಾಗಿರುತ್ತದೆ ಮತ್ತು "ಆಶ್ರಯ" ಎಂದೂ ಬಳಸಬಹುದು, ಇದನ್ನು ನಾವು ಸರಿಯಾಗಿ ಅರ್ಥಮಾಡಿಕೊಳ್ಳಬೇಕಾಗಿದೆ. ಇದರ ಅರ್ಥವು ಧರ್ಮದ ಅರ್ಥದೊಂದಿಗೆ ಅನುಗುಣವಾಗಿರುತ್ತದೆ. ನಮಗೆ ರಕ್ಷಣೆಯನ್ನು ನೀಡುವ ಒಂದು ಬಾಹ್ಯ ಮೂಲಕ್ಕೆ ನಾವು ನಿಷ್ಕ್ರಿಯವಾಗಿ ಶರಣಾಗಬೇಕೆಂಬುದು ಇದರರ್ಥವಲ್ಲ. ಬೌದ್ಧ ಸನ್ನಿವೇಶದಲ್ಲಿ, "ಆಶ್ರಯ/ಶರಣಾಗತಿಯನ್ನು ಸ್ವೀಕರಿಸುವುದು” ಬಹಳಾ ಸಕ್ರಿಯವಾಗಿರುತ್ತದೆ; ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಏನಾದರೂ ಮಾಡಬೇಕು. 

ನನ್ನ ಶಿಕ್ಷಕರು ಹೆಚ್ಚಾಗಿ ಬಳಸುವ ಈ ಕೆಳಗಿನ ಉದಾಹರಣೆಯನ್ನು ಪರಿಗಣಿಸಿ. ಮಳೆ ಸುರಿಯುತ್ತಿದೆ ಮತ್ತು ಹತ್ತಿರದಲ್ಲಿ ಒಂದು ಗುಹೆ ಇದೆ ಎಂದು ಭಾವಿಸೋಣ. ನಾವು, “ನಾನು ಈ ಗುಹೆಯೊಳಗೆ ಆಶ್ರಯ ಪಡೆಯುತ್ತೇನೆ; ನಾನು ಆಶ್ರಯಕ್ಕಾಗಿ ಗುಹೆಯೊಳಗೆ ಹೋಗುತ್ತೇನೆ,” ಎಂದು ಕೇವಲ ಮಾತನಾಡಿ, ನಂತರ ಮಳೆಯಲ್ಲಿಯೇ ಹೊರಗೆ ನಿಂತು, ಈ ನುಡಿಗಟ್ಟನ್ನು ಪುನರಾವರ್ತಿಸಿದರೆ, ಅದರಿಂದ ಸಹಾಯವಾಗುವುದಿಲ್ಲ. ನಾವು ನಿಜವಾಗಿಯೂ ಗುಹೆಯೊಳಗೆ ಹೋಗಬೇಕು. ಅದೇ ರೀತಿ, “ನಾನು ಬುದ್ಧ, ಧರ್ಮ ಮತ್ತು ಸಂಘದಲ್ಲಿ ಆಶ್ರಯ ಪಡೆಯುತ್ತೇನೆ ಮತ್ತು ಅವರ ಬಳಿ ಆಶ್ರಯಕ್ಕಾಗಿ ಹೋಗುತ್ತೇನೆ” ಎಂದು ನಾವು ಹೇಳಿದರೆ, ಆದರೆ ನಿಜವಾಗಿಯೂ ಅದರ ದಿಕ್ಕಿನಲ್ಲಿ ನಡೆಯದೆ, ಅವುಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳದೆ ಇದ್ದರೆ, ಅದರಿಂದ ಸಹಾಯವಾಗುವುದಿಲ್ಲ. ಸಮಸ್ಯೆಗಳಿಂದ ನಮ್ಮನ್ನು ರಕ್ಷಿಸಿಕೊಳ್ಳಲು, ಅವರು ಪ್ರತಿನಿಧಿಸುವುದನ್ನು ನಾವು ಕಾರ್ಯಗತಗೊಳಿಸಬೇಕಾಗಿದೆ. ಅದಕ್ಕಾಗಿಯೇ ನಾನು "ಸುರಕ್ಷಿತ ನಿರ್ದೇಶನ" ಮತ್ತು "ನಮ್ಮ ಜೀವನದಲ್ಲಿ ಸುರಕ್ಷಿತ ದಿಕ್ಕಿನಲ್ಲಿ ನಡೆಯುವುದು" ಎಂಬ ಪರಿಭಾಷೆಯನ್ನು ಬಳಸುತ್ತೇನೆ. 

ಗುಹೆಯ ಚಿತ್ರಣವನ್ನು ಮುಂದುವರಿಸಿದರೆ, ಕೇವಲ ಗುಹೆಯೊಳಗೆ ಹೋಗುವುದು ಸಾಕಾಗುವುದಿಲ್ಲ ಮತ್ತು ಒಳಗಿರುವುದರಿಂದ ನಮ್ಮ ಜೀವನದ ಸಮಸ್ಯಗಳೆಲ್ಲವೂ ದೂರವಾಗುತ್ತವೆ, ಒದ್ದೆಯಾಗದಂತೆ ನಮ್ಮನ್ನು ಕಾಪಾಡುತ್ತದೆ ಎಂದು ಆಶಿಸುವುದರಿಂದ ಏನೂ ಆಗುವುದಿಲ್ಲ. ಬುದ್ಧ, ಧರ್ಮ ಮತ್ತು ಸಂಘಗಳು ಸೂಚಿಸುವ ಆದರ್ಶವನ್ನು ಸಮೀಪಿಸುವಂತೆ ಪ್ರಯತ್ನಿಸಲು ನಾವು ನಿರಂತರವಾಗಿ ನಮ್ಮ ಮೇಲೆ ಕೆಲಸ ಮಾಡಬೇಕಾಗಿದೆ. ಬುದ್ಧ, ಧರ್ಮ ಮತ್ತು ಸಂಘದಲ್ಲಿ ಆಶ್ರಯ ಸಿಕ್ಕರೆ ಸಾಕು ಎಂದು ನಾವು ಭಾವಿಸಿದಾಗ, ಇದನ್ನು ಕ್ರಿಶ್ಚಿಯನ್ ಕಲ್ಪನೆಯಾದ ವೈಯಕ್ತಿಕ ರಕ್ಷಕನೆಂದು ಭಾವಿಸಿ, ಬುದ್ಧನು ಹೇಗಾದರೂ ನಮ್ಮನ್ನು ರಕ್ಷಿಸುತ್ತಾರೆ ಎಂದು ಯೋಚಿಸುವುದು ಸುಲಭವಾಗಿರುತ್ತದೆ. ಈ ಸನ್ನಿವೇಶದಲ್ಲಿ, ಬುದ್ಧನು ದೇವರಂತೆ ಮತ್ತು ಸಂಘ ಸಂತರಂತೆ ಕಾಣುತ್ತಾರೆ. ಏನೇ ಇರಲಿ, ಹೆಚ್ಚಿನ ಪಾಶ್ಚಿಮಾತ್ಯ ಸಮಾಜಗಳು ಕ್ರಿಶ್ಚಿಯನ್ ಪ್ರಭಾವಗಳ ಅಲೆಗಳನ್ನು ಆಧಾರವಾಗಿರಿಸಿವೆ. ಅಂತಹ ಆಲೋಚನೆಯೊಂದಿಗೆ, ಹೇಗಾದರೂ, ಯಾವುದಾದರೂ ಅತೀಂದ್ರಿಯ ಶಕ್ತಿಯು ಅದ್ಭುತವಾಗಿ ನಮ್ಮನ್ನು ರಕ್ಷಿಸಲಿ ಎಂದು ನಾವು ಪ್ರಾರ್ಥಿಸುತ್ತೇವೆ. ಬೌದ್ಧ ಪರಿಭಾಷೆಯನ್ನು ಬಳಸುವುದಾದರೆ, ಅದು ನಮ್ಮ ಎಲ್ಲಾ ಸಮಸ್ಯೆಗಳು ಮತ್ತು ದುಃಖಗಳಿಂದ ನಮ್ಮನ್ನು ಅದ್ಭುತವಾಗಿ ವಿಮೋಚನೆಗೊಳಿಸುತ್ತದೆ. 

ಹೀಗಾಗಿದ್ದರೆ, ನಾವು ಮಾಡಬೇಕಾಗಿರುವುದು ಇಷ್ಟೆ - ಟಿಬೆಟಿಯನ್‌ನಲ್ಲಿ ಬೌದ್ಧ ಹೆಸರೊಂದನ್ನು ಪಡೆಯುವುದು, ಕೆಂಪು ದಾರವನ್ನು ಧರಿಸುವುದು, ಕೆಲವು ಮಾಂತ್ರಿಕ ಪದಗಳನ್ನು ಪಠಿಸುವುದು, ಕಷ್ಟಪಟ್ಟು ಪ್ರಾರ್ಥಿಸುವುದು ಮತ್ತು ನಾವೆಲ್ಲರೂ ಹೇಗೋ ಸುರಕ್ಷಿತರಾಗಿರುತ್ತೇವೆ. ವಿಶೇಷವಾಗಿ ನಾವು ಟಿಬೆಟಿನ ಭಾಷೆಯಲ್ಲಿ ಪ್ರಾರ್ಥನೆಗಳು ಮತ್ತು ಅಭ್ಯಾಸಗಳನ್ನು ಪಠಿಸುತ್ತಿದ್ದರೆ, ಅದರ ಒಂದು ಪದವೂ ನಮಗೆ ಅರ್ಥವಾಗದಿದ್ದರಿಂದ, ಅದು ಇನ್ನೂ ಹೆಚ್ಚಿನ ಅತೀಂದ್ರಿಯ ಶಕ್ತಿಯನ್ನು ಹೊಂದಿರುವಂತೆ ನಮಗೆ ಭಾಸವಾಗುತ್ತದೆ. ಇತ್ತೀಚಿಗೆ, ಶ್ರೇಷ್ಠ ಲಾಮಾರಾದ ಝೋಂಗ್ಸರ್ ಖೆಂಟ್ಸೆ ರಿಂಪೋಚೆ ಅವರು ನಾನು ವಾಸಿಸುವ ಬರ್ಲಿನ್‌ಗೆ ಭೇಟಿ ನೀಡಿದ್ದರು. ಅವರು ಬಹಳಾ ಗಹನವಾದ ವಿಷಯವೊಂದನ್ನು ಹೇಳಿದರು. ಟಿಬೆಟಿಯನ್ನರು ತಮ್ಮ ಎಲ್ಲಾ ಉಚ್ಚರಣೆಗಳನ್ನು ಜರ್ಮನ್ ಭಾಷೆಯಲ್ಲಿ ಹೇಳಬೇಕಿದ್ದರೆ, ಟಿಬೆಟಿಯನ್ ಅಕ್ಷರಗಳಿಗೆ ಲಿಪ್ಯಂತರ ಮಾಡಬೇಕಿದ್ದರೆ, ಅವರು ಉಚ್ಚರಿಸುವುದರ ಯಾವುದರ ಬಗ್ಗೆಯೂ ಅವರಿಗೆ ಸಂಪೂರ್ಣವಾಗಿ ತಿಳಿದಿಲ್ಲದಿದ್ದರೆ, ಟಿಬೆಟಿಯನ್ನರಲ್ಲಿ ಎಷ್ಟು ಜನ ನಿಜವಾಗಿಯೂ ಬೌದ್ಧಧರ್ಮವನ್ನು ಅಭ್ಯಾಸ ಮಾಡುತ್ತಿದ್ದರೋ ಎಂಬುದರ ಬಗ್ಗೆ ಅವರು ಮಾತನಾಡಿದರು. ಸಹಜವಾಗಿ, ಎಲ್ಲರೂ ನಕ್ಕರು. ಆದರೆ ನಾವು ಅದರ ಬಗ್ಗೆ ಯೋಚಿಸಿದರೆ, ಅದು ನಿಜವಾಗಿಯೂ ಆಳವಾದ ವಿಷಯವಲ್ಲವೇ? ಆಶ್ರಯವು, ನಮ್ಮ ಎಲ್ಲಾ ಸಮಸ್ಯೆಗಳಿಗೆ ಒಂದು ರೀತಿಯ ಮಾಂತ್ರಿಕ, ಅತೀಂದ್ರಿಯ ಪರಿಹಾರವನ್ನು ನೀಡುವಂತಹ ವಿಷಯವಾಗಿರುವುದೆಂಬ ಪ್ರವೃತ್ತಿ ಮತ್ತು ಒಂದು ಅರ್ಥದಲ್ಲಿ, ನಾವು ಒಂದು ಅತ್ಯುನ್ನತ ಶಕ್ತಿಗೆ ಶರಣಾಗಬೇಕಷ್ಟೆ ಎಂಬ ಪ್ರವೃತ್ತಿಯಿಂದ ಹೊರಬರುವುದು ಬಹಳ ಮುಖ್ಯ.

ಇಲ್ಲಿ ಒಳಗೊಂಡಿರುವ ನಿಜವಾದ ಸಮಸ್ಯೆಯೆಂದರೆ: "ನನ್ನ ಜೀವನದಲ್ಲಿ ನಾನು ಏನು ಮಾಡುತ್ತಿದ್ದೇನೆ?" "ನನ್ನ ಜೀವನ ಎಲ್ಲಿಗೆ ಸಾಗುತ್ತಿದೆ?" ನಮ್ಮಲ್ಲಿ ಅನೇಕರಿಗೆ, ನಮ್ಮ ಜೀವನವು ಎಲ್ಲಿಯೂ ಸಾಗುತ್ತಿಲ್ಲ, ಬದಲಿಗೆ ಒಂದು ವೃತ್ತಾಕಾರದಲ್ಲಿ ಸುತ್ತುತಿದೆ ಎಂದು ಅರಿವಾಗಿರಬಹುದು. ಪುನರ್ಜನ್ಮದ ವಿಷಯದಂತಹ ಆಳವಾದ ವೃತ್ತದ ಬಗ್ಗೆ ನಾವು ಮಾತನಾಡಬೇಕಾಗಿಲ್ಲ, ಬದಲಿಗೆ ನಮ್ಮ ದೈನಂದಿನ ಜೀವನವೇ ಎಲ್ಲಿಯೂ ಸಾಗುತ್ತಿಲ್ಲ ಎಂದು, ಇದು ಅರ್ಥಹೀನವೆಂದು ತೋರುತ್ತದೆ. ನಿಜವಾಗಿಯೂ, ನಾವು ಏಕೆ ಜೀವಂತವಾಗಿದ್ದೇವೆ? ಅಂತಹ ಭಾವನೆಯು ಏಳುವುದು ಬಹಳಾ ದುಃಖಕರ ಸಂಗತಿ, ಅಲ್ಲವೇ? ಇದು ಸಂತೋಷದ ಸಂಗತಿಯಾಗಿರುವುದಿಲ್ಲ. ಆದ್ದರಿಂದ, ನಮ್ಮ ಜೀವನದಲ್ಲಿ ಒಂದು ರೀತಿಯ ಅರ್ಥಪೂರ್ಣ ನಿರ್ದೇಶನವನ್ನು ಹೊಂದಿರಬೇಕು, ಒಂದು ರೀತಿಯ ಉದ್ದೇಶ ಅಥವಾ ಗುರಿ. ಮತ್ತು ಇದನ್ನು ನಮ್ಮ ಜೀವನದಲ್ಲಿ ನಾವೇ ಹಾಕಿಕೊಳ್ಳಬೇಕಾದ ವಿಷಯವಾಗಿರುತ್ತದೆ. ಇದು ಸಕ್ರಿಯವಾದ ಪ್ರಕ್ರಿಯೆಯಾಗಿರುತ್ತದೆ. ನಮ್ಮ ಜೀವನದಲ್ಲಿ ಒಂದು ಅರ್ಥಪೂರ್ಣ ಉದ್ದೇಶ ಅಥವಾ ಗುರಿಯಿದ್ದರೆ, ನಾವು ಏನು ಮಾಡುತ್ತಿದ್ದೇವೆಂದು ನಮಗೆ ತಿಳಿಯುತ್ತದೆ. ಇದು ನಮ್ಮನ್ನು ಸ್ವಲ್ಪ ಸುರಕ್ಷಿತವಾಗಿಸುತ್ತದೆ, ಸ್ವಲ್ಪ ಭದ್ರತೆಯನ್ನು ನೀಡುತ್ತದೆ, ಅಲ್ಲವೇ?

ಜೀವನದಲ್ಲಿ ಅರ್ಥಪೂರ್ಣ ಗುರಿಯನ್ನು ಹೊಂದಿರುವುದು 

ನಮ್ಮ ಜೀವನದಲ್ಲಿ ನಾವು ಯಾವ ರೀತಿಯ ಗುರಿಯನ್ನು ಇಡಬಹುದು? ಸಾಮಾನ್ಯವಾಗಿ ಈ ಗುರಿಯನ್ನು ನಮ್ಮ ಪ್ರಸ್ತುತದಲ್ಲಿನ ಅತೃಪ್ತಿಕರ ಪರಿಸ್ಥಿತಿಯ ಸನ್ನಿವೇಶದಲ್ಲಿ ವ್ಯಾಖ್ಯಾನಿಸುತ್ತೇವೆ ಮತ್ತು ನಮ್ಮ ಜೀವನದಲ್ಲಿ ಈ ಗುರಿಯನ್ನು ಇರಿಸುವ ಮೂಲಕ, ಅದರಿಂದ ಹೇಗಾದರೂ ಹೊರಬರಲು ಬಯಸುತ್ತೇವೆ. ಅತ್ಯಂತ ಮೂಲಭೂತ ಮಟ್ಟದಲ್ಲಿ, ಪ್ರತಿಯೊಬ್ಬರೂ ಸಂತೋಷವಾಗಿರಲು ಬಯಸುತ್ತಾರೆ ಮತ್ತು ಯಾರೂ ಅಸಂತೋಷವಾಗಿರಲು ಬಯಸುವುದಿಲ್ಲ ಎಂದು ನಾವು ಹೇಳಬಹುದು. ಇದು ಬೌದ್ಧಧರ್ಮದಲ್ಲಿನ ಒಂದು ಮೂಲತತ್ವವಾಗಿದೆ ಮತ್ತು ಅದರಲ್ಲಿ ಒಂದು ರೀತಿಯ ಜೈವಿಕ ಸತ್ಯವಿದೆ. ನಾವು ನೋವನ್ನು ತಪ್ಪಿಸಲು ಬಯಸುತ್ತೇವೆ. ನಾವು ದುಃಖವನ್ನು ತಪ್ಪಿಸಲು ಬಯಸುತ್ತೇವೆ. ನಾವು ಕಷ್ಟಗಳನ್ನು ತಪ್ಪಿಸಲು ಬಯಸುತ್ತೇವೆ. ಕ್ರಿಮಿಕೀಟಗಳು ಕೂಡ ಹಾಗೆ ಬಯಸುತ್ತವೆ, ಅಲ್ಲವೇ? ಅದೇ ನಮ್ಮ ಗುರಿ. 

ಇಲ್ಲಿ ಎದ್ದೇಳುವ ಪ್ರಶ್ನೆಯೆಂದರೆ ನಾವು ಎಷ್ಟು ಪ್ರಮಾಣದ ದುಃಖ ಅಥವಾ ಅತೃಪ್ತಿಯನ್ನು ಪರಿಗಣಿಸುತ್ತಿದ್ದೇವೆ? ನಮ್ಮ ಲಕ್ಷ್ಯದಲ್ಲಿರುವ ಗುರಿಯು ಆ ಸಮಸ್ಯೆಯನ್ನು ಮಾತ್ರವಲ್ಲದೆ, ನಮ್ಮಲ್ಲಿರುವ ಇತರ ಎಲ್ಲಾ ಸಮಸ್ಯೆಗಳನ್ನು ನಿವಾರಿಸುತ್ತದೆಯೇ? ಉದಾಹರಣೆಗೆ, ನಮ್ಮ ಸಮಸ್ಯೆಯು ನಾವು ಬಡವರಾಗಿರುವುದಾಗಿರುತ್ತದೆ, ಆರ್ಥಿಕ ತೊಂದರೆಯಲ್ಲಿದ್ದೇವೆ ಮತ್ತು ಉತ್ತಮ ಉದ್ಯೋಗವನ್ನು ಹುಡುಕುವುದು ಮತ್ತು ಬಹಳಷ್ಟು ಹಣವನ್ನು ಸಂಪಾದಿಸುವುದು ನಮ್ಮ ಗುರಿಯಾಗಿರಬಹುದು. ಒಳ್ಳೆಯ ಕೆಲಸವಲ್ಲದಿದ್ದರೆ, ಬಹುಶಃ ಒಳ್ಳೆಯ ಅಪರಾಧಿಯಾಗಬಹುದು ಮತ್ತು ತ್ವರಿತವಾಗಿ ಶ್ರೀಮಂತರಾಗಬಹುದು. ಏನೇ ಆಗಲಿ, ಹೇಗಾದರು ಸರಿ, ಸಾಕಷ್ಟು ಹಣವನ್ನು ಸಂಪಾದಿಸಬೇಕು. ಆದರೆ ನಾವು ಬಹಳಷ್ಟು ಹಣವಿರುವ ಜನರ ಬಗ್ಗೆ ತನಿಖೆ ನಡೆಸಿದರೆ ಮತ್ತು ಅವರೊಂದಿಗೆ ಪ್ರಾಮಾಣಿಕವಾಗಿ ಮಾತನಾಡಿದರೆ ಮತ್ತು ಅವರು ತಮ್ಮ ಜೀವನದ ಬಗ್ಗೆ ಪ್ರಾಮಾಣಿಕವಾಗಿ ಮಾತನಾಡಿದರೆ, ಈ ಜನರು ನಿಜವಾಗಿಯೂ ಅಷ್ಟಾಗಿ ಸಂತೋಷವಾಗಿಲ್ಲ ಎಂದು ನಾವು ಕಂಡುಕೊಳ್ಳುತ್ತೇವೆ. ಅವರು ಬಳಿ ಎಷ್ಟು ಹಣವಿದ್ದರೂ ಸಾಲದು. ಅವರು ಬಳಿ ಎಷ್ಟೇ ಮಿಲಿಯನ್‌ಗಳಿದ್ದರೂ ಅವರಿಗೆ ಇನ್ನೂ ಹೆಚ್ಚು ಹೆಚ್ಚು ಹಣ ಬೇಕು. ಅವರು ಎಂದಿಗೂ ತೃಪ್ತರಾಗುವುದಿಲ್ಲ. 

ಇದು ನನಗೆ ಬಹಳಾ ಆಸಕ್ತಿದಾಯಕವಾಗಿದೆ. ಕೆಲವೊಬ್ಬರ ಬಳಿ ಒಂದು ಬಿಲಿಯನ್ ಡಾಲರ್‌ಗಳಿವೆ ಎಂದು ಹೇಳೋಣ, ಆದರೆ ವಿಶ್ವದ ಪ್ರಸ್ತುತ ಆರ್ಥಿಕ ತೊಂದರೆಗಳಿಂದಾಗಿ ಇಂದು ಅವರ ಬಳಿ ಕೇವಲ ಅರ್ಧ ಬಿಲಿಯನ್ ಡಾಲರ್‌ಗಳಿವೆ. ಇನ್ನು ಮುಂದೆ ಅವರು ಯಾವುದೇ ರೀತಿಯ ದೇಣಿಗೆಗಳನ್ನು ನೀಡುವುದಿಲ್ಲ ಅಥವಾ ಯಾವುದೇ ರೀತಿಯ ಪರೋಪಕಾರಿ ಕೆಲಸದಲ್ಲಿ ಭಾಗವಹಿಸುವುದಿಲ್ಲ, ಏಕೆಂದರೆ ಈಗ ಅವರ ಬಳಿ ಕೇವಲ ಅರ್ಧ ಬಿಲಿಯನ್ ಇದೆ ಮತ್ತು ಅವರಿಗೆ ಅಸುರಕ್ಷಿತವೆನಿಸುತ್ತದೆ. ತಮ್ಮ ಸಂಪತ್ತನ್ನು ಯಾರೊಂದಿಗಾದರೂ ಹಂಚಿಕೊಳ್ಳುವ ಮೊದಲು ಅದನ್ನು ಉಳಿಸಬೇಕು ಮತ್ತು ಹೇಗಾದರೂ ಒಂದು ಬಿಲಿಯನ್‌ಗೆ ಹಿಂತಿರುಗಬೇಕು ಎಂದು ಅವರು ಭಾವಿಸುತ್ತಾರೆ. ಅವರು ಯಾವಾಗಲೂ ಸ್ಟಾಕ್ ಮಾರುಕಟ್ಟೆಯ ವರದಿಗಳನ್ನು ನೋಡುತ್ತಿರುತ್ತಾರೆ ಮತ್ತು ಅವರು ತಮ್ಮಲ್ಲಿರುವ ಹಣದ ಒಂದು ಭಾಗವನ್ನು ಕಳೆದುಕೊಳ್ಳುವ ಸಾಧ್ಯತೆಯ ಬಗ್ಗೆ ಯಾವಾಗಲೂ ಚಿಂತಿಸುತ್ತಿರುತ್ತಾರೆ. ಅವರು ಖಾಸಗಿ ಕಾವಲುಗಾರರನ್ನು ಮತ್ತು ಇತರ ಭದ್ರತಾ ಪಡೆಗಳನ್ನು ನೇಮಿಸಿಕೊಳ್ಳಬೇಕಾಗಬಹುದು, ಏಕೆಂದರೆ ಜನರು ತಮ್ಮ ಮನೆಯಿಂದ ವಸ್ತುಗಳನ್ನು ಕದಿಯುತ್ತಾರೆ ಅಥವಾ ಅವರ ಮಕ್ಕಳನ್ನು ಅಪಹರಿಸುತ್ತಾರೆ ಎಂದು ಅವರು ಹೆದರುತ್ತಾರೆ. ಇದು ಲ್ಯಾಟಿನ್ ಅಮೆರಿಕದ ಶ್ರೀಮಂತರಲ್ಲಿ ಸಾಮಾನ್ಯವಾಗಿದೆ. ಜೊತೆಗೆ, ಜನರು ತಮ್ಮ ಹಣವನ್ನು ಲಪಟಾಯಿಸಲು ಬಿಟ್ಟು ಬೇರೆ ಯಾವುದೇ ಕಾರಣಕ್ಕಾಗಿ ಅವರೊಡನೆ ಸ್ನೇಹ ಬೆಳೆಸುವುದಿಲ್ಲ ಎಂದು ಅವರು ಖಡಾಖಂಡಿತವಾಗಿ ನಂಬುತ್ತಾರೆ. ಅವರೊಂದಿಗೆ ಚೆನ್ನಾಗಿ ನಡೆದುಕೊಳ್ಳುವವರು, ಕೇವಲ ತಮ್ಮ ಹಣದ ಹಿಂದೆ ಬಿದ್ದಿದ್ದಾರೆ ಎಂದು ಅವರು ಯಾವಾಗಲೂ ಅನುಮಾನಿಸುತ್ತಾರೆ. ನಿಸ್ಸಂಶಯವಾಗಿ, ಅವರಿಗೆ ಬಡತನದ ಸಮಸ್ಯೆಗಳಿಲ್ಲದಿದ್ದರೂ, ಬಹಳಷ್ಟು ಹಣವಿರುವುದರಿಂದ ಇತರ ಸಮಸ್ಯೆಗಳನ್ನು ಎದುರಿಸುತ್ತಾರೆ. 

ಲೌಕಿಕ ಗುರಿಗಳು ಅಸ್ಥಿರವಾದ ಆಧಾರವನ್ನು ಹೊಂದಿವೆ 

ಹಣವನ್ನು ಹೊರತುಪಡಿಸಿ, "ಲೌಕಿಕ ಗುರಿಗಳು" ಎಂದು ಬೌದ್ಧಧರ್ಮದಲ್ಲಿ ಉಲ್ಲೇಖಿಸಲಾದವುಗಳು ಇನ್ನೂ ಬಹಳಷ್ಟಿವೆ. ಆದರೆ ಆಂಗ್ಲ ಭಾಷೆಯಲ್ಲಿನ "ವರ್ಡ್ಲಿ (ಲೌಕಿಕ)" ಎಂಬ ಪದವು ನಕಾರಾತ್ಮಕ ಅರ್ಥವನ್ನು ಹೊಂದಿದೆ ಮತ್ತು ಪೂರ್ವಭಾವಿಯಾಗಿ ತೋರುತ್ತದೆ. ಅದು ಇಲ್ಲಿನ ಮುಖ್ಯ ವಿಷಯವಲ್ಲ. ನನ್ನ ಗುರುಗಳಾದ, ಸೆರ್ಕಾಂಗ್ ರಿಂಪೋಚೆ, "ಲೌಕಿಕ" ಪದಕ್ಕೆ ಇರುವ ಟಿಬೆಟಿನ ಭಾಷೆಯ ಎರಡು ಉಚ್ಚಾರಾಂಶಗಳು - ಜಿಗ್-ತೆನ್ - ನಿಜವಾದ ಅರ್ಥವನ್ನು ಬಹಿರಂಗಪಡಿಸುತ್ತವೆ ಎಂದು ವಿವರಿಸಿದರು. ಅವು, ಬೇರ್ಪಡುವ (ಜಿಗ್) ಆಧಾರದೊಂದಿಗೆ (ತೆನ್) ಇರುವ ಏನನ್ನಾದರೂ ಸೂಚಿಸುತ್ತವೆ. ನಾವು ಕುಸಿಯುವ ಗುರಿಯನ್ನು ಇಟ್ಟುಕೊಂಡರೆ, ಅದು ಖಂಡಿತವಾಗಿಯೂ ನಮಗೆ ಶಾಶ್ವತವಾದ ಸಂತೋಷವನ್ನು ತರಲು ಸಾಧ್ಯವಿಲ್ಲ. ಇದು ಕೇವಲ ಹೆಚ್ಚಿನ ಸಮಸ್ಯೆಗಳನ್ನು ತರುತ್ತದೆ, ಏಕೆಂದರೆ ಇದು ಯಾವುದೇ ದೃಢವಾದ ಆಧಾರವನ್ನು ಹೊಂದಿರುವುದಿಲ್ಲ. 

ಉದಾಹರಣೆಗೆ, ನಮ್ಮ ಜೀವನದ ಗುರಿಯು ಅದ್ಭುತವಾದ ಕುಟುಂಬವನ್ನು ಕಟ್ಟುವುದಾಗಿರುತ್ತದೆ, ಬಹಳಷ್ಟು ಮಕ್ಕಳನ್ನು ಬೆಳೆಸುವುದಾಗಿರುತ್ತದೆ, ವೃದ್ಧಾಪ್ಯದಲ್ಲಿ ಅವರು ನಮ್ಮನ್ನು ನೋಡಿಕೊಳ್ಳುತ್ತಾರೆ ಮತ್ತು ನಾವು ತುಂಬಾ ಸಂತೋಷದಿಂದ ಮತ್ತು ಸುರಕ್ಷಿತವಾಗಿರುತ್ತೇವೆ ಎಂಬ ಭಾವನೆಯಿರುತ್ತದೆ. ಅದು ನಮ್ಮ ಬಯಕೆಯಂತೆ ಆದರ್ಶಪ್ರಾಯವಾಗಿ ನಡೆಯುವುದಿಲ್ಲ, ಅಲ್ಲವೇ? ಮತ್ತೊಂದು ಉದಾಹರಣೆಯೆಂದರೆ ಪ್ರಸಿದ್ಧರಾಗಲು ಶ್ರಮಿಸುವುದು. ನಾವು ಹೆಚ್ಚು ಪ್ರಸಿದ್ಧರಾದಷ್ಟು, ಹೆಚ್ಚು ಜನರು ನಮಗೆ ತೊಂದರೆ ನೀಡುತ್ತಾರೆ ಮತ್ತು ನಮ್ಮ ಸಮಯವನ್ನು ವ್ಯರ್ಥಮಾಡಲು ಪ್ರಯತ್ನಿಸುತ್ತಾರೆ. ನಾವು ಚಲನಚಿತ್ರ ತಾರೆಯರನ್ನು ನೋಡಬಹುದು, ಅವರು ಒಂದು ರೀತಿಯ ಛದ್ಮವೇಷವನ್ನು ಧರಿಸದೆ ಹೊರಗೆ ಹೋಗಲು ಸಾಧ್ಯವೇ ಇಲ್ಲ, ಏಕೆಂದರೆ ಜನರು ಅವರನ್ನು ಸುತ್ತುವರಿಯುತ್ತಾರೆ ಮತ್ತು ಅವರ ವಸ್ತ್ರದ ತುಂಡುಗಳನ್ನು ಕಳಚಲು ಬಯಸುತ್ತಾರೆ. ಸೂಪರ್‌ಸ್ಟಾರ್ ಆಗಿರುವುದು ನಿಜಕ್ಕೂ ನರಕಯಾತನೆಯಾಗಿರುತ್ತದೆ. 

ನಾವು ನಮ್ಮ ಜೀವನವನ್ನು ಗಂಭೀರವಾಗಿ ಪರಿಗಣಿಸಿದರೆ, ಕೇವಲ ಒಂದು ರೀತಿಯ ಆರಾಮದಾಯಕವಾದ ಭೌತಿಕ ಪರಿಸ್ಥಿತಿ ಅಥವಾ ನಮ್ಮ ಸುತ್ತಮುತ್ತಲಿನವರೊಂದಿಗೆ ಭಾವನಾತ್ಮಕವಾಗಿ, ಆರಾಮದಾಯಕವಾಗಿ ಇರುವ ವ್ಯವಸ್ಥೆಯು, ನಮ್ಮ ಜೀವನದಲ್ಲಿನ ಎಲ್ಲಾ ಸಮಸ್ಯೆಗಳನ್ನು ಜಯಿಸಲು ಸಹಾಯ ಮಾಡುವಷ್ಟು ಆಳವಾಗಿ ಹೋಗುವುದಿಲ್ಲ. ಏಕೆಂದರೆ ನಮ್ಮಲ್ಲಿ ಕ್ರೋಧ, ಮೋಹ, ದುರಾಸೆ, ಅಸೂಯೆ, ದುರಹಂಕಾರ, ನಿಷ್ಕಪಟತೆ ಮುಂತಾದ ವಿಷಯಗಳು ಇನ್ನೂ ಇರುವಾಗ, ನಾವು "ಲೌಕಿಕ" ಎಂದು ಕರೆಯಲ್ಪಡುವ ಮಟ್ಟದಲ್ಲಿ ಎಷ್ಟೇ ಯಶಸ್ವಿಯಾಗಿದ್ದರೂ ಸಹ, ನಾವು ಸಮಸ್ಯೆಗಳನ್ನು ಇನ್ನೂ ಎದುರಿಸುತ್ತಿರುತ್ತೇವೆ. 

ಗೊಂದಲಮಯ ಭಾವನೆಗಳು 

ಬೌದ್ಧಧರ್ಮವು ಭವಿಷ್ಯದ ಜೀವನದ ಚೌಕಟ್ಟಿನಲ್ಲಿ ಮಾತನಾಡುತ್ತದೆ ಮತ್ತು "ಗೊಂದಲಮಯ ಭಾವನೆಗಳು" ಎಂದು ಕರೆಯಲ್ಪಡುವವು ನಮ್ಮಲ್ಲಿದ್ದರೆ, ನಮ್ಮ ಭವಿಷ್ಯದ ಜೀವನದಲ್ಲಿ ಸಂಭವಿಸಬಹುದಾದ ಎಲ್ಲಾ ರೀತಿಯ ದುಃಖ ಮತ್ತು ಭಯಾನಕ ವಿಷಯಗಳನ್ನು ಚರ್ಚಿಸುತ್ತದೆ ಮತ್ತು ನಾವು ಅವುಗಳ ಆಧಾರದ ಮೇಲೆ ಹೇಗೆ ಪ್ರಚೋದಿತವಾಗಿ ವರ್ತಿಸುತ್ತೇವೆ ಮತ್ತು ನಕಾರಾತ್ಮಕ ಸಾಮರ್ಥ್ಯವನ್ನು ನಿರ್ಮಿಸುತ್ತೇವೆ ಎಂಬುದನ್ನು ಚರ್ಚಿಸುತ್ತದೆ. ಇದು ಭೀಕರವಾಗಿದೆ ಮತ್ತು ನಮಗೆ ಯಾವುದು ಒಳ್ಳೆಯದು ಎಂದು ತಿಳಿದಿದ್ದಲ್ಲಿ, ಅದನ್ನು ತಪ್ಪಿಸಬೇಕು ಎಂದು ಬೌದ್ಧ ಪ್ರಸ್ತುತಿಯು ಸ್ಪಷ್ಟಪಡಿಸುತ್ತದೆ, ಏಕೆಂದರೆ ನಕಾರಾತ್ಮಕ ಸಾಮರ್ಥ್ಯವು ಸಮಸ್ಯೆಗಳನ್ನು ಮತ್ತು ಅಸಂತೋಷಗಳನ್ನು ಕರೆತರುತ್ತದೆ. 

ಆದರೆ, ಹೆಚ್ಚಿನ ಪಾಶ್ಚಿಮಾತ್ಯರು ಭವಿಷ್ಯದ ಜೀವನಗಳ ನಂಬುವುದಿಲ್ಲ ಅಥವಾ ಅದು ಅವರಿಗೆ ಮನವರಿಕೆಯಾಗುವುದಿಲ್ಲವಾದ್ದರಿಂದ, ನಾವು ಈ ಜೀವಿತಾವಧಿಯಲ್ಲಿಯಲ್ಲೇ ಇವುಗಳ ಬಗ್ಗೆ ಚರ್ಚಿಸೋಣ. ಈಗ ನಮ್ಮ ಸ್ವಂತ ಜೀವನವನ್ನು ವಿಶ್ಲೇಷಿಸಿದಾಗ, ನಾವು ಆಳವಾಗಿ ತನಿಖೆ ನಡೆಸಿದರೆ, ನಮ್ಮ ಭಾವನಾತ್ಮಕ ಸಮಸ್ಯೆಗಳ ನಿಜವಾದ ಮೂಲಗಳು ಆಂತರಿಕವಾಗಿವೆ ಎಂದು ನಾವು ಕಂಡುಕೊಳ್ಳುತ್ತೇವೆ. ಬಾಹ್ಯ ಅಂಶಗಳು ಕೇವಲ ಅವುಗಳನ್ನು ಪ್ರಚೋದಿಸುವ ಸಂದರ್ಭಗಳಾಗಿರುತ್ತವೆ. ವಾಸ್ತವದಲ್ಲಿ, ನಮ್ಮ ಗೊಂದಲಮಯ ಭಾವನೆಗಳು - ನಮ್ಮ ಕೋಪ, ಬಾಂಧವ್ಯ, ದುರಾಸೆ ಇತ್ಯಾದಿ - ನಮ್ಮ ಮನಸ್ಸಿನ ಶಾಂತಿ ಮತ್ತು ಸಂತೋಷವನ್ನು ಕಸಿದುಕೊಳ್ಳುತ್ತವೆ. ನಮ್ಮಲ್ಲಿರುವ ಒಳ್ಳೆಯ ಗುಣಗಳನ್ನು ಬಳಸದಂತೆ ಅವು ನಮ್ಮನ್ನು ತಡೆಯುತ್ತವೆ. ನಾವು ಯಾರಿಗಾದರೂ ಸಹಾಯ ಮಾಡಲು ಪ್ರಯತ್ನಿಸಬಹುದು, ಅದು ಉತ್ತಮ ಗುಣವಾಗಿರುತ್ತದೆ, ಆದರೆ ನಂತರ ನಾವು ಅವರೊಂದಿಗೆ ಕೋಪಗೊಳ್ಳುತ್ತೇವೆ. ನಾವು ಅವರಿಗೆ ಉತ್ತಮ ಸಲಹೆ ನೀಡಲು ಪ್ರಯತ್ನಿಸುತ್ತೇವೆ, ಆದರೆ ಅವರು ಅದನ್ನು ತೆಗೆದುಕೊಳ್ಳುವುದಿಲ್ಲವಾದರೆ ಅಥವಾ ಅವರು ನಮ್ಮೊಂದಿಗೆ ವಾದಿಸಿದರೆ, ನಾವು ನಮ್ಮ ತಾಳ್ಮೆಯನ್ನು ಕಳೆದುಕೊಳ್ಳುತ್ತೇವೆ. ಈ ಗೊಂದಲಮಯ ಭಾವನೆಗಳು, ಯಾರಿಗಾದರೂ ನಿಜವಾಗಿ ಸಹಾಯಕವಾಗುವುದರಿಂದ ನಮ್ಮನ್ನು ತಡೆಯುತ್ತವೆ. 

ನಮ್ಮ ಮಕ್ಕಳೊಂದಿಗೆ ವ್ಯವಹರಿಸುವಾಗ, ಅವರಿಗೆ ಯಾವುದು ಉತ್ತಮ ಎಂದು ನಮಗೆ ತಿಳಿದಿದೆ ಎಂದು ನಾವು ಭಾವಿಸಿದಾಗ ಮತ್ತು ನಾವು ಹೇಳಿದಂತೆ ಅವರು ಮಾಡದೇ ಇದ್ದಾಗ ನಾವು ನಮ್ಮ ತಾಳ್ಮೆಯನ್ನು ಕಳೆದುಕೊಂಡು, ಕೋಪಗೊಂಡಾಗ ಇದು ವಿಶೇಷವಾಗಿ ಕಷ್ಟಕರವಾಗಿರುತ್ತದೆ. ಇದು ನಮ್ಮ ಮಕ್ಕಳೊಂದಿಗೆ ಒಂದು ಜಟಿಲವಾದ ಸಂಬಂಧವನ್ನು ಸೃಷ್ಟಿಸುತ್ತದೆ, ಅಲ್ಲವೇ? ನಾವು ಅದರ ಬಗ್ಗೆ ಏನಾದರೂ ಮಾಡದಿದ್ದರೆ, ಅದು ಹದಗೆಡುತ್ತಲೇ ಇರುತ್ತದೆ ಎಂದು ಅರಿತುಕೊಳ್ಳುವುದು ಮುಖ್ಯ ವಿಷಯವಾಗಿದೆ. ಬಹುಶಃ ನಮಗೆ ವಯಸ್ಸಾದಂತೆ, ನಮ್ಮ ಬಲವು ಕಡಿಮೆಯಾದಂತೆ, ನಾವು ಸ್ವಲ್ಪ ಮೃದುವಾಗಬಹುದು, ಆದರೆ ನಮ್ಮ ಕೋಪ ಮತ್ತು ಈ ರೀತಿಯ ವಿಷಯಗಳು ತಾವಾಗಿಯೇ ಹೋಗುತ್ತವೆ ಎಂದರ್ಥವಲ್ಲ. ಅವು ಹಾಗೆ ಸವೆದು ಹೋಗುವುದಿಲ್ಲ. 

ಈ ನಿರೀಕ್ಷೆಗಳಿಗೆ ಸಂಬಂಧಿಸಿದಂತೆ, ನಾವು ಅಭಿವೃದ್ಧಿಪಡಿಸಬೇಕಾದ ವಿಷಯಕ್ಕೆ ಬೌದ್ಧಧರ್ಮದಲ್ಲಿ ಬಳಸಲಾಗುವ ಪದವು "ಭಯ"ವಾಗಿದೆ. ಆದರೆ "ಭಯ" ಎಂಬುದು ನಮ್ಮ ಬಹುತೇಕ ಭಾಷೆಗಳಲ್ಲಿ ಕಷ್ಟಕರವಾದ ಪದವಾಗಿದೆ. ಇದಕ್ಕೆ ಒಳ್ಳೆಯ ಹೆಸರಿಲ್ಲ. ಕೆಲವೊಮ್ಮೆ ನಾನು "ಅಂಜಿಕೆ" ಎಂಬ ಪದವನ್ನು ಬಳಸಲು ಇಚ್ಛಿಸುತ್ತೇನೆ, ಆದರೆ ಇದನ್ನು ಇತರ ಭಾಷೆಗಳಿಗೆ ಭಾಷಾಂತರಿಸುವುದು ಸುಲಭವಾಗಿರುವುದಿಲ್ಲ. "ಅಂಜಿಕೆ”ಯು "ಹೀಗಾಗಲಿ ಎಂದು ನಾನು ನಿಜವಾಗಿಯೂ ಬಯಸುವುದಿಲ್ಲ" ಎಂಬ ಅರ್ಥವನ್ನು ಹೊಂದಿರುತ್ತದೆ. ಉದಾಹರಣೆಗೆ, ನಾವು ಕೆಲಸದಲ್ಲಿನ ಒಂದು ಬಹಳಾ ನೀರಸವಾದ ಸಭೆಗೆ ಹೋಗಬೇಕು. ನಾವು ಸಭೆಗೆ ಹೆದರುತ್ತೇವೆ ಎಂದಲ್ಲ, ಆದರೆ ಅದಕ್ಕೆ ಹೋಗಲು ನಮ್ಮಲ್ಲಿ ಅಂಜಿಕೆಯಿರುತ್ತದೆ. ನಮಗೆ ನಿಜವಾಗಲು ಹಾಗೆ ಮಾಡಲು ಇಷ್ಟವಿರುವುದಿಲ್ಲ.  

ಆದರೆ, ಹೆಚ್ಚು ನಿಖರವಾಗಿ ಹೇಳಬೇಕೆಂದರೆ, ನಾವು ಎರಡು ರೀತಿಯ ಭಯವನ್ನು ಪ್ರತ್ಯೇಕಿಸಬೇಕಾಗಿದೆ, ನಾವು ಭವಿಷ್ಯದಲ್ಲಿನ ಭಯಾನಕವಾದ ಪುನರ್ಜನ್ಮದ ಭಯದ ಮಾತನಾಡುತ್ತಿರಬಹುದು, ಅಥವಾ ಶೋಚನೀಯ ವೃದ್ಧಾಪ್ಯದ ಭಯವಾಗಿರಬಹುದು ಅಥವಾ ಎಲ್ಲಾ ರೀತಿಯ ಭಯದ ಬಗ್ಗೆ ಮಾತನಾಡುತ್ತಿರಬಹುದು. ನಮಗೆ ದಾರಿಗಾಣದ ಹಾಗೆ ಮಾಡುವ ಭಯವಿದೆ ಮತ್ತು ನಾವು ಅದರಿಂದ ಅಸಹಾಯಕ ಮತ್ತು ಹತಾಶರಾಗುತ್ತೇವೆ. ಅದು ನಮ್ಮನ್ನು ಬಹುಮಟ್ಟಿಗೆ ನಿಷ್ಕ್ರಿಯಗೊಳಿಸುತ್ತದೆ, ಅಲ್ಲವೇ? ಇದನ್ನು ನಾವು ಬಹಳಷ್ಟು ಅನುಭವಿಸಿದರೂ, ಇದೊಂದು ಅನಾರೋಗ್ಯಕರವಾದ ಭಯ ಎಂದು ನಾನು ಭಾವಿಸುತ್ತೇನೆ. ಆದರೆ ಆಶ್ರಯದ ಸನ್ನಿವೇಶದಲ್ಲಿ ಚರ್ಚಿಸಲಾದ ಭಯದ ಪ್ರಕಾರವು ಭಯದ ವಿಭಿನ್ನ ಪರಿಮಳವಾಗಿರುತ್ತದೆ, ಏಕೆಂದರೆ ಸಮಸ್ಯೆಗಳನ್ನು ತಪ್ಪಿಸಲು ಒಂದು ಮಾರ್ಗವಿದೆ ಎಂದು ನಾವು ನೋಡುತ್ತೇವೆ. ಆದ್ದರಿಂದ, ಇದು ಹತಾಶಸ್ಥಿತಿಯಾಗಿರುವುದಿಲ್ಲ, ಮತ್ತು ಖಂಡಿತವಾಗಿಯೂ ನಾವು ಅಸಹಾಯಕರಾಗಿರುವುದಿಲ್ಲ. ಆದರೆ, ನಾನು ಮೊದಲೇ ಹೇಳಿದಂತೆ, ನಮ್ಮ ಭಯದ ಪರಿಸ್ಥಿತಿಯಿಂದ ನಮ್ಮನ್ನು ರಕ್ಷಿಸಲು ಯಾವುದೋ ಅತೀಂದ್ರಿಯ ಶಕ್ತಿ ಅಥವಾ ಅಸ್ತಿತ್ವವಿದೆ ಎಂದರ್ಥವಲ್ಲ, ಮತ್ತು ಕೇವಲ ಕಷ್ಟಪಟ್ಟು ಪ್ರಾರ್ಥಿಸುವುದರಿಂದ, ನಮ್ಮ ಭಯದಿಂದ ನಾವು ಮುಕ್ತಗೊಂಡು ಸುರಕ್ಷಿತವಾಗಿರುತ್ತೇವೆ ಎಂದಲ್ಲ. 

ಒಂದು ಅರ್ಥದಲ್ಲಿ ನಮ್ಮನ್ನು ನಾವೇ ರಕ್ಷಿಸಿಕೊಳ್ಳಬಹುದು ಎಂಬುದು ಮುಖ್ಯವಾದ ವಿಷಯ. ಜೀವನದಲ್ಲಿ ನಾವು ಎದುರಿಸುವ ಎಲ್ಲಾ ಸಮಸ್ಯೆಗಳನ್ನು ತಪ್ಪಿಸಲು ನಮಗೆ ಯಾವುದು ಸಹಾಯ ಮಾಡುತ್ತದೆ? ಹಾಗೆ ಮಾಡಲು ಯಾವುದಕ್ಕೆ ಸಾಧ್ಯವಾಗುತ್ತದೆ? ವಿಶಾಲವಾದ ಸನ್ನಿವೇಶದಲ್ಲಿ ನೋಡುವುದಾದರೆ, ಸಮಸ್ಯೆಗಳನ್ನು ಉಂಟುಮಾಡುವ ಈ ಎಲ್ಲಾ ಗೊಂದಲಮಯ ಭಾವನೆಗಳು - ನಮ್ಮ ಕೋಪ, ದುರಾಶೆ, ಬಾಂಧವ್ಯ ಇತ್ಯಾದಿ - ಎಲ್ಲವೂ ವಾಸ್ತವದ ಬಗ್ಗೆಗಿರುವ ಗೊಂದಲದಿಂದ ಉದ್ಭವಿಸುತ್ತವೆ. ಈ ಎಲ್ಲಾ ಗೊಂದಲದ ಭಾವನೆಗಳು ಮನಸ್ಸಿನ ಸಹಜ ಲಕ್ಷಣಗಳಲ್ಲ. ಅವುಗಳು ಎಂದೂ ಮರುಕಳಿಸದಂತೆ ಅವುಗಳನ್ನು ಶಾಶ್ವತವಾಗಿ ತೆಗೆದುಹಾಕಬಹುದು. ಧರ್ಮದ ರತ್ನವು ಅವುಗಳನ್ನು "ನಿಜವಾಗಿ ನಿಲ್ಲಿಸಬಹುದು" ಎಂದು ಸೂಚಿಸುತ್ತದೆ. 

ಮನಸ್ಸು ಅಥವಾ ಮಾನಸಿಕ ಚಟುವಟಿಕೆ 

ನಾವು ಬೌದ್ಧಧರ್ಮದಲ್ಲಿ ಮನಸ್ಸಿನ ಬಗ್ಗೆ ಮಾತನಾಡುವಾಗ, ಅದರ ಬಗ್ಗೆ ಹೆಚ್ಚು ವಿವರಣೆಯನ್ನು ನೀಡದಿದ್ದರೆ, ನಾವು ಮಾನಸಿಕ ಚಟುವಟಿಕೆಗಳ ಬಗ್ಗೆ ಮಾತನಾಡುತ್ತಿದ್ದೇವೆ. ಇದು ನಾವು ನಿದ್ರಿಸುತ್ತಿರುವಾಗಲೂ ನಡೆಯುವ ವೈಯಕ್ತಿಕವಾದ, ಕ್ಷಣ ಕ್ಷಣದ ಮಾನಸಿಕ ಚಟುವಟಿಕೆಯಾಗಿರುತ್ತದೆ. ಮನಸ್ಸು ಆ ಮಾನಸಿಕ ಚಟುವಟಿಕೆಯ ವ್ಯಕ್ತಿನಿಷ್ಠ ಅನುಭವದ ಅಂಶವಾಗಿರುತ್ತದೆ, ಮತ್ತು ಮೆದುಳಿನ ವಿಜ್ಞಾನವು ಅದರ ಶಾರೀರಿಕ ಆಧಾರವನ್ನು ವಿವರಿಸುತ್ತದೆ. ಎರಡೂ ಸಂದರ್ಭಗಳಲ್ಲಿ, ಆ ಮಾನಸಿಕ ಚಟುವಟಿಕೆಯ ಮೂಲಭೂತ ಸ್ವಭಾವವು, ಕೋಪ ಅಥವಾ ಯಾವುದೇ ಗೊಂದಲವನ್ನು ಹೊಂದಿರಬೇಕಾದ ವಿಷಯವಾಗಿರುವುದಿಲ್ಲ. ಮೂಲಭೂತವಾಗಿ ಇಲ್ಲಿ ಪ್ರತಿಕ್ಷಣದಲ್ಲಿ ಏನಾಗುತ್ತಿದೆಯೆಂದರೆ, ನಾವು ಮಾನಸಿಕ ಹೊಲೊಗ್ರಾಮ್ ಎಂದು ಕರೆಯಬಹುದಾದದ್ದು ಉದ್ಭವಿಸುತ್ತದೆ. ಉದಾಹರಣೆಗೆ, ಭೌತಿಕ ದೃಷ್ಟಿಕೋನದಿಂದ, ಫೋಟಾನ್ಗಳು ಕಣ್ಣೊಳಗೆ ಹೋಗುತ್ತವೆ ಮತ್ತು ನರಪ್ರೇಕ್ಷಕಗಳ ಮೂಲಕ ಮೆದುಳಿಗೆ ತಲುಪುವ ಒಂದು ರೀತಿಯ ವಿದ್ಯುತ್ ಪ್ರಚೋದನೆಯಾಗಿ ಅನುವಾದಗೊಳ್ಳುತ್ತವೆ ಮತ್ತು ಅದರಿಂದ ಮೆದುಳು ಹೇಗೋ ಒಂದು ಆಂತರಿಕ ಹೊಲೊಗ್ರಾಮ್ ಅನ್ನು ಸೃಷ್ಟಿಸುತ್ತದೆ. ಅದನ್ನು "ನೋಡುವುದು" ಎಂದು ಕರೆಯಲಾಗುತ್ತದೆ, ಅಲ್ಲವೇ? ಸಹಜವಾಗಿ, ಇದನ್ನು ಜೇಡದ ಕಣ್ಣು ಅಥವಾ ನೊಣದ ಕಣ್ಣಿನ ಜೀವಕೋಶಗಳಲ್ಲಿನ ಪ್ರಕ್ರಿಯೆಗೆ ಹೋಲಿಸಿದರೆ, ಅದು ಮಾನವನ ಕಣ್ಣಿಗಿಂತ ಬಹಳಾ ವಿಭಿನ್ನವಾಗಿರುತ್ತದೆ. ಅಂತೆಯೇ, "ಧ್ವನಿ ತರಂಗಗಳು" ಎಂದು ಕರೆಯುವ ಕಂಪನಗಳನ್ನು ಒಳಗೊಂಡ ಇದೇ ರೀತಿಯ ಪ್ರಕ್ರಿಯೆಯ ಮೂಲಕ, ನಾವು ಕೇಳುವಿಕೆಯನ್ನು ಅನುಭವಿಸುತ್ತೇವೆ. ಮಾನಸಿಕ ಹೊಲೊಗ್ರಾಮ್‌ಗಳು ಯಾವುದೇ ರೀತಿಯದ್ದಾಗಿರಬಹುದು, ಕೇವಲ ಚಿಂತನೆಗಳ ಹೊಲೊಗ್ರಾಮ್ಗಳೂ ಆಗಿರಬಹುದು. 

ನೋಟದ ವಿಷಯದಲ್ಲಿ, ಫೋಟಾನ್‌ಗಳು ಕ್ಯಾಮೆರಾದೊಳಗೆ ಬಂದು, ಒಂದು ರೀತಿಯ ವಿದ್ಯುತ್ ಪ್ರಚೋದನೆಗಳಾಗಿ ಅನುವಾದಗೊಳ್ಳುವುದು ಮತ್ತು ನಂತರ ಒಂದು ಚಿತ್ರವನ್ನು ಸೃಷ್ಟಿಸುವಂತಹ ಪ್ರಕ್ರಿಯೆಯಿರುವುದಿಲ್ಲ. ಇದು ಅದೇ ತರಹ ಆಗಿರುವುದಿಲ್ಲ ಏಕೆಂದರೆ, ಯಾವುದೇ ಒಂದು ಮಾನಸಿಕ ಹೊಲೊಗ್ರಾಮ್ನ ಸೃಷ್ಟಿಯು, ಒಂದು ರೀತಿಯ "ಅರಿವಿನ ಒಳಗೊಳ್ಳುವಿಕೆ" ಆಗಿರುತ್ತದೆ. ನೀವು ಪ್ರಜ್ಞಾಪೂರ್ವಕವಾಗಿರಬಹುದು ಅಥವಾ ಪ್ರಜ್ಞಾಹೀನರಾಗಿರಬಹುದು, ಅರಿವಿರಬಹುದು ಅಥವಾ ಇಲ್ಲದೇ ಇರಬಹುದು, ಏನೇ ಆದರೂ ಇದೊಂದು ರೀತಿಯ ಅರಿವಿನ ವೈಶಿಷ್ಟ್ಯವಾಗಿರುತ್ತದೆ. 

ಮಾನಸಿಕ ಚಟುವಟಿಕೆಯು ಸಹ ಕಂಪ್ಯೂಟರ್ನಂತೆ ಇರುವುದಿಲ್ಲ. ನಾವು ಚಿಕ್ಕ ಕೀಗಳನ್ನು ಒತ್ತಿದ ನಂತರ, ಅದೊಂದು ರೀತಿಯ ವಿದ್ಯುತ್ ಪ್ರಚೋದನೆಯಾಗಿ ಯಂತ್ರದೊಳಗೆ ಹೋಗುತ್ತದೆ, ಮತ್ತು ನಂತರ ಯಂತ್ರವು, ಈ ಇನ್ಪುಟ್ ಅನ್ನು ಹೇಗಾದರೂ ಪರದೆಯ ಮೇಲೆ ಉದ್ಭವಿಸುವ ಚಿತ್ರವಾಗಿ ಅಥವಾ ಸ್ಪೀಕರ್ನಲ್ಲಿ ಕೇಳುವ ಧ್ವನಿಯಾಗಿ ಅನುವಾದಿಸುತ್ತದೆ. ಒಂದು ಅರ್ಥದಲ್ಲಿ, ಕಂಪ್ಯೂಟರ್ನ ಬಳಿ ಅರಿವಿದೆ ಎಂದು ನಾವು ಹೇಳಬಹುದು, ಏಕೆಂದರೆ ಕೃತಕ ಬುದ್ಧಿಮತ್ತೆಯೊಂದಿಗೆ ಅದು ಮಾಹಿತಿಯನ್ನು ಪ್ರಕ್ರಿಯೆಗೊಳಿಸುತ್ತದೆ. ಆದರೆ ಕಂಪ್ಯೂಟರ್ ಜೀವಿಗಳಂತೆ ಇರುವುದಿಲ್ಲ. ಇದರ ಜೊತೆಗೆ, ನಮ್ಮನ್ನು ಕಂಪ್ಯೂಟರ್‌ನಿಂದ ಪ್ರತ್ಯೇಕಿಸುವುದು ಏನೆಂದರೆ, ನಮ್ಮ ಮಾನಸಿಕ ಚಟುವಟಿಕೆಗೆ ಸಂಬಂಧಿಸಿದಂತೆ, ನಾವು ಒಂದು ಮಟ್ಟದ ಸಂತೋಷ ಅಥವಾ ಅಸಂತೋಷವನ್ನು ಅನುಭವಿಸುತ್ತೇವೆ. ಇದು ಕಂಪ್ಯೂಟರ್ಗೆ ಸಾಧ್ಯವಾಗುವುದಿಲ್ಲ. ಕಂಪ್ಯೂಟರ್ಗೆ ಯಾವುದರ ಬಗ್ಗೆಯೂ ಸಂತೋಷ ಅಥವಾ ಅಸಂತೋಷವನ್ನು ಅನುಭವಿಸಲಾಗುವುದಿಲ್ಲ. "ಅಯ್ಯೋ ದೇವರೇ, ನಾನು ಆಂತರಿಕ ದೋಷವನ್ನು ಹೊಂದಿದ್ದೇನೆ ಮತ್ತು ನಾನು ರೀಬೂಟ್ ಆದಾಗ, ನಾನು ಕೆಲಸ ಮಾಡುತ್ತಿದ್ದ ಫೈಲ್ ಅನ್ನು ಅಳಿಸಿಬಿಟ್ಟೆ" ಎಂದು ಅದು ಯೋಚಿಸುವುದಿಲ್ಲ ಮತ್ತು ಅಸಂತೋಷಗೊಳ್ಳುವುದಿಲ್ಲ. ಅದು ಹಾಗಿರುವುದಿಲ್ಲ, ಅಲ್ಲವೇ? ಆದರೆ ಇನ್ನೊಂದೆಡೆ, ಹಾಗೇನಾದರೂ ಸಂಭವಿಸಿದರೆ ನಾವು ಬಹಳ ಅಸಂತೋಷಗೊಳ್ಳಬಹುದು. 

ಈ ಕ್ಷಣ ಕ್ಷಣದ ಮಾನಸಿಕ ಚಟುವಟಿಕೆಯೇ ನಮ್ಮ ಜೀವನದ ಪ್ರತಿಯೊಂದು ಕ್ಷಣದಲ್ಲಿ ನಡೆಯುತ್ತದೆ. ಒಂದು ರೀತಿಯ ಮಾನಸಿಕ ಹೊಲೊಗ್ರಾಮ್ ಏಳುತ್ತದೆ, ಅದರೊಂದಿಗೆ ಒಂದು ರೀತಿಯ ಮಾನಸಿಕ ಒಳಗೊಳ್ಳುವಿಕೆಯಿರುತ್ತದೆ ಮತ್ತು ಒಂದು ಮಟ್ಟದ ಸಂತೋಷ ಅಥವಾ ಅಸಂತೋಷದ ಭಾವನೆ ಇರುತ್ತದೆ. ನಾವು ನಿದ್ರಿಸುವಾಗಲೂ, ಹೊಲೊಗ್ರಾಮ್ ಕತ್ತಲೆಯಾಗಿರಬಹುದು ಮತ್ತು ನಮ್ಮ ಒಳಗೊಳ್ಳುವಿಕೆ ಪ್ರಜ್ಞಾಹೀನತೆಯಾಗಿರಬಹುದು. ಆದರೆ ಇಲ್ಲಿಯೂ ಸ್ವಲ್ಪ ಅರಿವಿರುತ್ತದೆ, ಇಲ್ಲದಿದ್ದರೆ ನಮಗೆ ಅಲಾರಾಂ ಗಡಿಯಾರವು ಎಂದಿಗೂ ಕೇಳಿಸುವುದಿಲ್ಲ. ನಾವು ಸಂಪೂರ್ಣವಾಗಿ ಸ್ಥಗಿತಗೊಂಡಿರುವುದಿಲ್ಲ. ನಾವು ಕನಸು ಕಾಣದಿದ್ದಾಗಲೂ, ಒಂದು ರೀತಿಯ ಭಾವನೆಯಿರುತ್ತದೆ, ಸಂತೋಷ ಅಥವಾ ಅಸಂತೋಷವಾಗಿಲ್ಲದ ತಟಸ್ಥ ಭಾವನೆಯಾದರೂ ಇರುತ್ತದೆ. ನಾವು ಕನಸು ಕಾಣುತ್ತಿದ್ದರೆ, ಕೋಪ, ದುರಾಸೆ ಮುಂತಾದವುಗಳ ಜೊತೆಗೆ, ಸಂತೋಷ ಅಥವಾ ಅಸಂತೋಷದ ಭಾವನೆ ಖಂಡಿತವಾಗಿಯೂ ಇರುತ್ತದೆ. ಆದರೆ ಈ ಗೊಂದಲದ ಭಾವನೆಗಳು ಕ್ಷಣದಿಂದ ಕ್ಷಣಕ್ಕೆ ನಡೆಯುವ ಈ ಸಂಪೂರ್ಣ ಪ್ರಕ್ರಿಯೆಯ ಅಗತ್ಯ ಭಾಗವೇನು ಆಗಿರುವುದಿಲ್ಲ.   

ನಿಸ್ಸಂಶಯವಾಗಿ, ನಮ್ಮ ಮಾನಸಿಕ ಚಟುವಟಿಕೆಯ ಮೂಲಭೂತ ಶುದ್ಧತೆಯ ಬಗ್ಗೆ ಹೆಚ್ಚು ಮನವರಿಕೆಯಾಗಲು, ನಾವು ನಡೆಯಬಹುದಾದ ಸಾಕಷ್ಟು ಸಂಕೀರ್ಣವಾದ ಚಿಂತನೆಯ ಮಾರ್ಗಗಳಿವೆ. ಆದರೆ ಇದು ಅದಕ್ಕಾಗಿರುವ ಸಂದರ್ಭವಲ್ಲ. ಆದರೆ ನಾವು ಅದರ ಬಗ್ಗೆ ಹೆಚ್ಚು ಯೋಚಿಸಿದಷ್ಟು, ನಮ್ಮ ಮಾನಸಿಕ ಚಟುವಟಿಕೆಯಲ್ಲಿನ ಎಲ್ಲಾ ಗೊಂದಲಮಯ ವಿಷಯಗಳನ್ನು ತೊಡೆದುಹಾಕುವುದು ಸಾಧ್ಯ ಎಂದು ನಮಗೆ ಮನವರಿಕೆಯಾಗುತ್ತದೆ. 

ಗೊಂದಲಮಯ ಭಾವನೆಯ ವ್ಯಾಖ್ಯಾನವು, ಅದು ಉದ್ಭವಿಸಿದಾಗ, ನಮ್ಮ ಮನಸ್ಸಿನ ಶಾಂತಿಯನ್ನು ಕಳೆದುಕೊಳ್ಳಲು ಮತ್ತು ಸ್ವಯಂ ನಿಯಂತ್ರಣವನ್ನು ಕಳೆದುಕೊಳ್ಳುವಂತೆ ಮಾಡುತ್ತದೆ ಎಂಬುದಾಗಿರುತ್ತದೆ. ಪರಿಣಾಮವಾಗಿ, ನಾವು ಕೋಪ, ದುರಾಸೆ ಮತ್ತು ಮುಂತಾದವುಗಳ ಆಧಾರದ ಮೇಲೆ, ಗೊಂದಲಮಯ ರೀತಿಗಳಲ್ಲಿ, ಪ್ರಚೋದಿತವಾಗಿ ವರ್ತಿಸುತ್ತೇವೆ ಮತ್ತು ಅದು ಸಾಕಷ್ಟು ಸಮಸ್ಯೆಗಳನ್ನು ಸೃಷ್ಟಿಸುತ್ತದೆ. ಉದಾಹರಣೆಗೆ, ನಾವು ಸ್ವಯಂ ನಿಯಂತ್ರಣವನ್ನು ಕಳೆದುಕೊಂಡು, ಸರಿಯಾಗಿ ಯೋಚಿಸದೆ ಒಬ್ಬರ ಮೇಲೆ ಕೂಗಾಡುತ್ತೇವೆ ಮತ್ತು ನಂತರ ನಾವು ಹೇಳಿದ ಮಾತುಗಳ ಬಗ್ಗೆ ನಿಜವಾಗಿಯೂ ವಿಷಾದಿಸುತ್ತೇವೆ. ಅದೇನೇ ಇದ್ದರೂ, ಅದು "ನಕಾರಾತ್ಮಕ ಸಾಮರ್ಥ್ಯ" ಎಂದು ಕರೆಯಲ್ಪಡುವುದನ್ನು ಉಲ್ಬಣಗೊಳಿಸುತ್ತದೆ ಮತ್ತು ನಂತರ ಅಸಂತೋಷವನ್ನು ಸೃಷ್ಟಿಸುತ್ತದೆ. 

ಗಂಭೀರವಾದ ಮಟ್ಟದಲ್ಲಿ, ಭವಿಷ್ಯದ ಸಮಸ್ಯೆಗಳನ್ನು ತಪ್ಪಿಸಲು ನಾವು ನಿಜವಾಗಿಯೂ ಬಯಸಿದರೆ, ಈ ಎಲ್ಲಾ ಗೊಂದಲಮಯ ಭಾವನೆಗಳು ಮತ್ತು ಗೊಂದಲಗಳನ್ನು ನಾವು ತೊಡೆದುಹಾಕಬೇಕು. ವಾಸ್ತವದಲ್ಲಿ, ಅವುಗಳನ್ನು ತೊಡೆದುಹಾಕಲು ಸಾಧ್ಯವಿದೆ, ಏಕೆಂದರೆ ಅವು ಮನಸ್ಸಿನ ಸಹಜ ಸ್ವಭಾವದ, ಮಾನಸಿಕ ಚಟುವಟಿಕೆಯ ಭಾಗವಾಗಿರುವುದಿಲ್ಲ. ಜೊತೆಗೆ, ನಮ್ಮ ಪ್ರತಿ ಕ್ಷಣದಲ್ಲಿರುವ ಈ ರೀತಿಯ ಮಾನಸಿಕ ಚಟುವಟಿಕೆಗಳ ಒಂದು ಅದ್ಭುತ ವೈಶಿಷ್ಟ್ಯವೆಂದರೆ, ಆ ಮಾನಸಿಕ ಚಟುವಟಿಕೆಗಳಿಗೆ, ವಿಷಯಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿದೆ. ನಾವು ಏನನ್ನಾದರೂ ಅರ್ಥಮಾಡಿಕೊಳ್ಳಬಹುದು. ಪ್ರೀತಿ ಮತ್ತು ಸಹಾನುಭೂತಿಯಂತಹ ಇತರ ಸಕಾರಾತ್ಮಕ ಗುಣಗಳನ್ನು ಸಹ ನಾವು ಹೊಂದಬಹುದು. ಈ ಸಕಾರಾತ್ಮಕ ಗುಣಗಳು, ಹೆಚ್ಚು ಹೆಚ್ಚು ಅಭಿವೃದ್ಧಿಪಡಿಸಬಹುದಾದ ಗುಣಗಳಾಗಿವೆ. 

ಇಲ್ಲಿನ ವ್ಯತ್ಯಾಸವೇನು? ಗೊಂದಲಮಯ ಅಂಶಗಳು ಗೊಂದಲವನ್ನು ಆಧರಿಸಿರುತ್ತವೆ. ತಿಳುವಳಿಕೆಯಂತಹ ಸಕಾರಾತ್ಮಕ ಅಂಶಗಳು ವಾಸ್ತವತೆಯನ್ನು ಆಧರಿಸಿರುತ್ತವೆ. ಒಂದ ಸರಳವಾದ ಉದಾಹರಣೆಯನ್ನು ನೀಡುವುದೆಂದರೆ: ಗೊಂದಲವು ಹೀಗೆ ಯೋಚಿಸುವುದಾಗಿರುತ್ತದೆ, “ನಾನೇ ಬ್ರಹ್ಮಾಂಡದ ಕೇಂದ್ರಬಿಂದು. ನಾನೇ ಅತ್ಯಂತ ಮುಖ್ಯವಾದವನು. ನಾನು ಹೇಳಿದಂತೆಯೇ ಯಾವಾಗಲೂ ನಡೆಯಬೇಕು. ನಾನೇ ಎಲ್ಲರ ಗಮನದಲ್ಲಿರುವ ಕೇಂದ್ರಬಿಂದುವಾಗಿರಬೇಕು,” ಇತ್ಯಾದಿ. ಆದ್ದರಿಂದ, ನಾವು ಕೇಂದ್ರಬಿಂದುವಾಗಿರದಿದ್ದಾಗ ಮತ್ತು ನಾವು ಹೇಳಿದಂತೆ ನಡೆಯದಿದ್ದಾಗ, ನಾವು ಕೋಪಗೊಳ್ಳುತ್ತೇವೆ. ನಾಯಿಯಂತೆ, ನಾವು ಯಾರ ಮೇಲಾದರೂ ರೇಗಾಡುತ್ತೇವೆ ಅಥವಾ ಎಗರಾಡುತ್ತೇವೆ. "ನಾನು ಬಯಸಿದಂತೆ ನೀನು ನಡೆಯಲಿಲ್ಲ." ಇದೆಲ್ಲವೂ ಗೊಂದಲವನ್ನು ಆಧರಿಸಿರುತ್ತದೆ. ವಾಸ್ತವವೆಂದರೆ ನಾವೆಲ್ಲರೂ ಇಲ್ಲಿದ್ದೇವೆ ಮತ್ತು ನಾವೆಲ್ಲರೂ ಸಮಾನರಾಗಿದ್ದೇವೆ. ಪ್ರತಿಯೊಬ್ಬರೂ ತಾವು ಹೇಳಿದಂತೆಯೇ ನಡೆಯಬೇಕು ಎಂದು ಬಯಸುತ್ತಾರೆ, ಆದರೆ ಅದು ಸಾಧ್ಯವಿರುವುದಿಲ್ಲ. ವಾಸ್ತವದಲ್ಲಿ, ಹೇಗಾದರೂ ನಾವು ಎಲ್ಲರೊಂದಿಗೆ ಬದುಕಲು ಕಲಿಯಬೇಕು. 

ನಿಜವಾದ ನಿಲುಗಡೆಗಳು 

ನಾವು ಹೆಚ್ಚು ತನಿಖೆ ನಡೆಸಿದಷ್ಟು, ನಮ್ಮ ಗೊಂದಲಗಳು ನಿಜವಲ್ಲ ಎಂದು ನಾವು ತಿಳಿಯುತ್ತೇವೆ. ಇದು ಸುಳ್ಳಾಗಿರುತ್ತದೆ. ಮತ್ತೊಂದೆಡೆ, ಸರಿಯಾದ ತಿಳುವಳಿಕೆಯು ಪರಿಶೀಲಿಸಬಹುದಾದ ಸಂಗತಿಯಾಗಿರುತ್ತದೆ. ಇದು ನಿಜವಾಗಿರುತ್ತದೆ. ಆ ಕಾರಣದಿಂದಾಗಿ, ತಿಳುವಳಿಕೆಯು ಬಲವಾಗಿರುತ್ತದೆ ಮತ್ತು ಗೊಂದಲವನ್ನು ಮೀರಿಸುತ್ತದೆ. ಏಕಾಗ್ರತೆ ಮತ್ತು ಶಿಸ್ತಿನೊಂದಿಗೆ ನಾವು ಸಾರ್ವಕಾಲಿಕವಾಗಿ ವಾಸ್ತವದ ಸರಿಯಾದ ತಿಳುವಳಿಕೆಯನ್ನು ಪಡೆಯಲು ಸಾಧ್ಯವಾಗಿದ್ದರೆ, ಗೊಂದಲಕ್ಕೆ ಮತ್ತೆಂದೂ ಉದ್ಭವಿಸುವ ಅವಕಾಶವಿರುತ್ತಿರಲಿಲ್ಲ. ಅದು ಅಲ್ಲಿಯೇ ನಾಶವಾಗುತ್ತಿತ್ತು. 

ಇದೇ ಆಶ್ರಯದ ಮುಖ್ಯ ಅಂಶವಾಗಿರುತ್ತದೆ. ನಾವು ನಮ್ಮ ಜೀವನದಲ್ಲಿ ಯಾವ ರೀತಿಯ ದಿಕ್ಕನ್ನು ಪಾಲಿಸುತ್ತಿದ್ದೇವೆ? ಯಾವ ರೀತಿಯ ಅರ್ಥವನ್ನು ಪಾಲಿಸುತ್ತಿದ್ದೇವೆ? ನಾವು ಯಾವ ರೀತಿಯ ಗುರಿಯನ್ನು ಇಟ್ಟುಕೊಂಡಿದ್ದೇವೆ? ಈ ಎಲ್ಲಾ ಗೊಂದಲಗಳ "ನಿಜವಾದ ನಿಲುಗಡೆ"ಯನ್ನು ಸಾಧಿಸುವುದು ಮತ್ತು ಅದನ್ನು ಸಂಪೂರ್ಣವಾಗಿ ತೊಡೆದುಹಾಕಲು, ಅದು ಮತ್ತೆಂದೂ ಉದ್ಭವಿಸದಂತೆ ನೋಡಿಕೊಳ್ಳುವುದು ಆ ಗುರಿಯಾಗಿರುತ್ತದೆ. ಈ ಗೊಂದಲವೇ ನಮ್ಮ ಸಮಸ್ಯೆಗಳಿಗೆ ನಿಜವಾದ ಕಾರಣವಾಗಿರುತ್ತದೆ, ನಾವು ಅದರ ಬಗ್ಗೆ ಈ ಜನ್ಮದಲ್ಲಿ ಅಥವಾ ಮುಂದಿನ ಜೀವನದಲ್ಲಿ ಮಾತನಾಡುತ್ತಿರಲಿ. ಇದನ್ನು ಸಂಪೂರ್ಣವಾಗಿ, ಶಾಶ್ವತವಾಗಿ ತೊಡೆದುಹಾಕಲು ಸಾಧ್ಯವಿದೆ, ಏಕೆಂದರೆ ಇದು ನಮ್ಮ ಮಾನಸಿಕ ಚಟುವಟಿಕೆಯ ಸಹಜ ಲಕ್ಷಣವಾಗಿರುವುದಿಲ್ಲ. ಸರಿಯಾದ ತಿಳುವಳಿಕೆಯೊಂದಿಗೆ ಅದನ್ನು ಬದಲಿಸುವ ಮೂಲಕ ನಾವು ಅದನ್ನು ತೊಡೆದುಹಾಕಬಹುದು. ಗೊಂದಲವಿಲ್ಲದೆ, ನಮ್ಮಲ್ಲಿ ಇನ್ನು ಮುಂದೆ ಗೊಂದಲದ ಭಾವನೆಗಳಿರುವುದಿಲ್ಲ ಮತ್ತು ಇನ್ನು ಮುಂದೆ ನಮಗಾಗಿ ಸಮಸ್ಯೆಗಳನ್ನು ಮತ್ತು ಸಂಕಟಗಳನ್ನು ಸೃಷ್ಟಿಸಿಕೊಳ್ಳುವುದಿಲ್ಲ. 

ಇದರಲ್ಲಿ ಎರಡು ಅಂಶಗಳಿವೆ. ಒಂದು, ನಾವು ಈ ಎಲ್ಲಾ ಗೊಂದಲದ ಭಾಗವನ್ನು ಶಾಶ್ವತವಾಗಿ ತೊಡೆದುಹಾಕಬಹುದು, ಮತ್ತು ಇನ್ನೊಂದು ಅಂಶವೆಂದರೆ ನಾವು ಸಕಾರಾತ್ಮಕ ಭಾಗವನ್ನು ಹೆಚ್ಚಿಸಬಹುದು ಮತ್ತು ಅಭಿವೃದ್ಧಿಪಡಿಸಬಹುದು. ಸಕಾರಾತ್ಮಕ ಭಾಗವು ಸರಿಯಾದ ತಿಳುವಳಿಕೆಯಾಗಿರುತ್ತದೆ. ಸಾಮಾನ್ಯವಾಗಿ ನಾವು ಇವುಗಳ ಬಗ್ಗೆ, ಬುದ್ಧನು ಕಲಿಸಿದ ಮುಖ್ಯ ವಿಷಯಗಳಾದ ಅಥವಾ ಚೌಕಟ್ಟಾದ "ಚತುರಾರ್ಯ ಸತ್ಯಗಳು" ಎಂಬುವುದರ ಸಹಾಯದೊಂದಿಗೆ ಮಾತನಾಡಬಹುದು. ಮೊದಲ ಸತ್ಯವೆಂದರೆ ನಮ್ಮಲ್ಲಿ ನಿಜವಾದ ದುಃಖವಿರುತ್ತದೆ, ಇದು ನಮ್ಮಲ್ಲಿರುವ ವಿವಿಧ ಸಮಸ್ಯೆಗಳನ್ನು ಉಲ್ಲೇಖಿಸುತ್ತದೆ. ನಂತರ, ನಿಜವಾದ ಕಾರಣಗಳಿವೆ, ಮತ್ತು ಇವು ನಮ್ಮ ಗೊಂದಲವನ್ನು ಉಲ್ಲೇಖಿಸುತ್ತವೆ. ಮೂರನೆಯದೆಂದರೆ, ಈ ಎಲ್ಲವೂ ಮತ್ತೊಮ್ಮೆ ಮೇಲೇರದಂತೆ ಅವುಗಳ ನಿಜವಾದ ನಿಲುಗಡೆಯನ್ನು ಸಾಧಿಸಲು ಸಾಧ್ಯವಿದೆ. ಕೊನೆಯದಾಗಿ, "ನಿಜವಾದ ಮಾರ್ಗ" ಎಂಬುದರ ಮೂಲಕ ನಾವು ನಿಜವಾದ ನಿಲುಗಡೆಯನ್ನು ಸಾಧಿಸುತ್ತೇವೆ. ಆದರೆ, ಇಲ್ಲಿ "ಮಾರ್ಗ" ಎಂಬ ಪದದ ಬಳಕೆಯೊಂದಿಗೆ ನಾವು "ಮಾರ್ಗವಾಗಿ ಕಾರ್ಯನಿರ್ವಹಿಸುವ ತಿಳುವಳಿಕೆಯ ಮಾರ್ಗ"ವನ್ನು ಸೂಚಿಸುತ್ತಿದ್ದೇವೆ ಎಂದು ಅರ್ಥಮಾಡಿಕೊಳ್ಳಬೇಕು. ಈ ನಿಜವಾದ ನಿಲುಗಡೆಗೆ ಕಾರಣವಾಗುವುದೇ ಈ ನಿಜವಾದ ತಿಳುವಳಿಕೆ ಮತ್ತು ಈ ನಿಜವಾದ ತಿಳುವಳಿಕೆಯು ಎಲ್ಲಾ ಗೊಂದಲಮಯ ಘಟಕಗಳನ್ನು ತೊಡೆದುಹಾಕುವುದರಿಂದ ಉಂಟಾಗುವ ತಿಳುವಳಿಕೆಯಾಗಿರುತ್ತದೆ. 

ನಿಸ್ಸಂದೇಹವಾಗಿ, ಇದೇ ನಮ್ಮ ಜೀವನದಲ್ಲಿ ಅನುಸರಿಸಲು ಬಯಸುವ ದಿಕ್ಕಾಗಿರುತ್ತದೆ - ನಿಜವಾದ ನಿಲುಗಡೆಗಳು ಮತ್ತು ನಿಜವಾದ ಮನಸ್ಸಿನ ಮಾರ್ಗಗಳನ್ನು ಸಾಧಿಸುವ ದಿಕ್ಕು. ಇದೇ ಧರ್ಮಾಶ್ರಯ. ನಾವು ನಮ್ಮ ಮೇಲೆ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದಾಗ, ಆ ಪರಿಭಾಷೆಯು ಈ ಮೇಲಿನದ್ದನ್ನು ಉಲ್ಲೇಖಿಸುತ್ತದೆ. 

ಈ ಗೊಂದಲದ ಭಾಗಗಳನ್ನು ತೊಡೆದುಹಾಕಲು ನಾವು ಹೆಚ್ಚು ಹೆಚ್ಚು ಪ್ರಯತ್ನಿಸುತ್ತೇವೆ ಮತ್ತು ಈ ಸಕಾರಾತ್ಮಕ ಭಾಗಗಳಿಗಾಗಿ ಬೇಕಾಗುವ ನಮ್ಮ ಸಾಮರ್ಥ್ಯವನ್ನು ಅರಿತುಕೊಳ್ಳಲು ಹೆಚ್ಚು ಹೆಚ್ಚು ಪ್ರಯತ್ನಿಸುತ್ತೇವೆ. ಈಗ ಇರುವ ರೀತಿಯಲ್ಲಿಯೇ ಮುಂದುವರಿದರೆ, ನಾವು ದೊಡ್ಡ ಮೊತ್ತದ ಹಣವನ್ನು ಗಳಿಸಿದರೂ, ಅನೇಕ ಸ್ನೇಹಿತರನ್ನು ಹೊಂದಿದ್ದರೂ ಮತ್ತು ತುಂಬಾ ಪ್ರಸಿದ್ಧರಾಗಿದ್ದರೂ ಕೂಡ, ನಾವು ತೊಂದರೆಗಳಿಂದ ಬಳಲುತ್ತೇವೆ ಎಂಬ ಆರೋಗ್ಯಕರ ಭಯದಿಂದ ನಾವು ಹೀಗೆ ಮಾಡುತ್ತೇವೆ. ಏಕೆಂದರೆ ನಾವು ಮುಂದೆಯೂ ದುರಾಸೆಯಿಂದಿರುತ್ತೇವೆ ಮತ್ತು ಅಸುರಕ್ಷಿತವಾಗಿರುತ್ತೇವೆ, ನಾವು ಮುಂದೆಯೂ ಕೋಪಗೊಳ್ಳುತ್ತೇವೆ, ಇತ್ಯಾದಿ. ನಮಗೆ ಅದರ ಭಯವಿದೆ ಆದರೆ ಅದನ್ನು ತಪ್ಪಿಸಲು ಒಂದು ಮಾರ್ಗವಿದೆ ಎಂದು ನಾವು ನೋಡುತ್ತೇವೆ. ಬೆಂಕಿಯಿಂದ ಘಾಸಿಗೊಳ್ಳುವ ಭಯ ನಮಗಿರಬಹುದು, ಆದರೆ ನಾವು ಎಚ್ಚರಿಕೆಯಿಂದ ಇದ್ದರೆ, ನಾವು ಗಾಯಗೊಳ್ಳುವುದನ್ನು ತಪ್ಪಿಸಬಹುದು. ಒಂದು ಭಯವಿದೆ, ಆದರೆ ಇದು ಆರೋಗ್ಯಕರ ಭಯವಾಗಿದೆ. ಇಲ್ಲಿ ನಾವು ವ್ಯಾಮೋಹದ ಬಗ್ಗೆ ಮಾತನಾಡುತ್ತಿಲ್ಲ. 

ನಾವು ಕೋಪಗೊಂಡು ಕಿರುಚಾಡುವುದನ್ನು ಮುಂದುವರೆಸಿದರೆ, ವಿಶೇಷವಾಗಿ ನಮ್ಮ ಸಂಬಂಧಿಕರು ಮತ್ತು ಸ್ನೇಹಿತರ ಮೇಲೆ, ನಮಗೆ ವಯಸ್ಸಾದ ಮೇಲೆ ಏನಾಗಬಹುದು? ನಾವು ಒಬ್ಬಂಟಿಯಾಗಿರುವ ಮುದುಕ ಅಥವಾ ಮುದುಕಿಯಾಗಿರುತ್ತೇವೆ, ನಮ್ಮನ್ನು ಯಾರೂ ಭೇಟಿಮಾಡಲು ಬಯಸುವುದಿಲ್ಲ, ನಮ್ಮ ಬಗ್ಗೆ ಯಾರೂ ಕಾಳಜಿ ವಹಿಸಲು ಬಯಸುವುದಿಲ್ಲ, ಏಕೆಂದರೆ ನಮ್ಮೊಂದಿಗೆ ಇರುವುದೇ ಒಂದು ದೊಡ್ಡ ತಲೆನೋವಿನಂತೆ ತೋರುತ್ತದೆ. ನಾವು ಬರೇ ದೂರು ನೀಡಿ, ಜನರ ಮೇಲೆ ಕೂಗಾಡಿದರೆ, ನಮ್ಮೊಂದಿಗೆ ಯಾರು ತಾನೆ ಇರಲು ಇಷ್ಟಪಡುತ್ತಾರೆ? ಯಾರೂ ಇಲ್ಲ. ಇದರ ಪರಿಹಾರ ನಮ್ಮನ್ನು ನೋಡಿಕೊಳ್ಳಲು ಬಾಧ್ಯತೆ ಹೊಂದಿರುವ ಸಾಕಷ್ಟು ಮಕ್ಕಳನ್ನು ಹೆಡೆಯುವುದಲ್ಲ ಅಥವಾ ಆರಾಮದಾಯಕವಾದ ನರ್ಸಿಂಗ್ ಹೋಂನಲ್ಲಿರುವಂತೆ ಬ್ಯಾಂಕಿನಲ್ಲಿ ಸಾಕಷ್ಟು ಹಣವನ್ನು ಇಟ್ಟಿರುವುದಲ್ಲ, ಏಕೆಂದರೆ ಹಾಗಾದ ನಂತರವೂ ನಾವು ದುಃಖಕರ ಸ್ಥಿತಿಯಲ್ಲಿರುತ್ತೇವೆ. ಸರಳವಾಗಿ ಹೇಳುವುದಾದರೆ, ನಾವು ನಮ್ಮ ವ್ಯಕ್ತಿತ್ವದ ಮೇಲೆ ಕೆಲಸ ಮಾಡಬೇಕು. 

ಪ್ರತಿಯೊಬ್ಬರೂ ಬದಲಾಗಲು ಸಮರ್ಥರಾಗಿರುವರು  

ನಮ್ಮ ವ್ಯಕ್ತಿತ್ವಗಳು ಸ್ಥಿರವಾಗಿವೆ ಮತ್ತು ನಾವು ಇರುವುದೇ ಹೀಗೆ ಎಂದು ನಾವು ಎಷ್ಟೊಂದು ಬಾರಿ ಯೋಚಿಸಿಲ್ಲ! "ನನಗೆ ಕೆಟ್ಟ ಕೋಪವಿದೆ, ನೀವು ಅದರೊಂದಿಗೆ ಬದುಕಲು ಕಲಿತರೆ ಒಳ್ಳೆಯದು." ಅದು ಕೆಲಸ ಮಾಡುವುದಿಲ್ಲ, ಅಲ್ಲವೇ? ಈ ಎಲ್ಲಾ ಗೊಂದಲಮಯ ಅಂಶಗಳನ್ನು ತೊಡೆದುಹಾಕಲು ಮತ್ತು ನಮ್ಮ ಎಲ್ಲಾ ಒಳ್ಳೆಯ ಗುಣಗಳನ್ನು ಅರಿತುಕೊಳ್ಳಲು ಸಾಧ್ಯವಿದೆ. ನಾವು ನಮ್ಮ ಮೇಲೆ ಕೆಲಸ ಮಾಡದಿದ್ದರೆ ಏನಾಗುತ್ತದೆ ಎಂಬ ಭಯದ ಆರೋಗ್ಯಕರ ಪ್ರಜ್ಞೆಯಿಂದ, ಈ ಗೊಂದಲದ ಅಂಶಗಳನ್ನು ತೊಡೆದುಹಾಕಲು ಸಾಧ್ಯವಿದೆ ಮತ್ತು ಸಕಾರಾತ್ಮಕತೆಯನ್ನು ಹೆಚ್ಚಿಸಲು ಮತ್ತು ಬಲಪಡಿಸಲು ಸಾಧ್ಯವಿದೆ ಎಂಬ ವಿಶ್ವಾಸದಿಂದ, ನಾವು ಈ ಸುರಕ್ಷಿತ ನಿರ್ದೇಶನವನ್ನು ನಮ್ಮ ಜೀವನದಲ್ಲಿ ಇರಿಸುತ್ತೇವೆ.  

ಇದನ್ನು ನಾವು "ಮಹಾಯಾನ"ದಂತಹ ದೊಡ್ಡದಾದ ರೀತಿಯಲ್ಲಿ ಮಾಡಲು ಬಯಸಿದರೆ, ನಾವು ಇದಕ್ಕೆ ಸಹಾನುಭೂತಿಯನ್ನು ಸೇರಿಸುವೆವು. ಮೂಲಭೂತವಾಗಿ, ಮಹಾಯಾನದ ದೃಷ್ಟಿಕೋನವೆಂದರೆ, ನಾವು ಒಬ್ಬರ ಮೇಲೆ ಕೋಪಗೊಂಡರೆ ಅವರಿಗೆ ಹೇಗೆ ತಾನೇ ನಾವು ಸಹಾಯ ಮಾಡಲು ಸಾಧ್ಯ? ನಾವು ನಿಜವಾಗಿಯೂ ಇತರರಿಗೆ ಸಹಾಯ ಮಾಡಲು ಬಯಸಿದರೆ, ನಾವು ಅವರ ಮೇಲೆ ಕೋಪಗೊಳ್ಳುವ ಮೂಲಕ ಅಥವಾ ಅವರಿಗೆ ಅಂಟಿಕೊಳ್ಳುವ ಅಥವಾ ಅಸೂಯೆಗೊಳ್ಳುವ ಮೂಲಕ ನಾವು ಎಲ್ಲವನ್ನು ಹಾಳುಮಾಡುತ್ತೇವೆ ಎಂಬ ನಿಜವಾದ ಭಯವಿರುತ್ತದೆ. ಇತರಿಗಾಗಿ ಒಳ್ಳೆಯ ರೀತಿಯಲ್ಲಿ ಸಹಾಯಮಾಡಲು, ನಾವು ಈ ಎಲ್ಲಾ ಗೊಂದಲದ ಭಾವನೆಗಳು ಮತ್ತು ಗೊಂದಲಗಳನ್ನು ನಿವಾರಿಸಬೇಕಾಗಿದೆ. ನಾವು ಇತರರಿಗೆ ಸಹಾಯ ಮಾಡಲು ಪ್ರಾಮಾಣಿಕವಾಗಿ ಬಯಸಿದರೂ ನಮ್ಮಿಂದ ಹೆಚ್ಚು ಸಹಾಯವಾಗುವುದಿಲ್ಲ ಎಂಬ ಭಾವನೆಯು ಇದಾಗಿರುತ್ತದೆ. ನಮ್ಮಲ್ಲಿ ಹೆಚ್ಚು ತಾಳ್ಮೆಯಿರುವುದಿಲ್ಲ, ನಮ್ಮಲ್ಲಿ ಸಾಕಷ್ಟು ತಿಳುವಳಿಕೆಯಿರುವುದಿಲ್ಲ. ನಾವು ಒಳ್ಳೆಯದಕ್ಕಿಂತ ಹೆಚ್ಚು ಹಾನಿಯನ್ನುಂಟುಮಾಡುತ್ತೇವೆ ಎಂದು ನಾವು ಹೆದರುತ್ತೇವೆ. ಬಹುಶಃ ನಮ್ಮ ಸ್ವಂತ ಮಕ್ಕಳನ್ನು ಬೆಳೆಸುವಲ್ಲಿ ನಾವು ವಿಫಲರಾಗುತ್ತೇವೆ ಎಂದು ನಾವು ಹೆದರುತ್ತೇವೆ. ಅದು ಬಹಳ ಬೇಸರದ ವಿಷಯ ಅಲ್ಲವೇ? ಆ ಭಯವೇ ನಮ್ಮ ಮೇಲೆ ನಾವು ಕೆಲಸ ಮಾಡುವಂತಹ ಸುರಕ್ಷಿತ ಮತ್ತು ಉತ್ತಮ ದಿಕ್ಕನ್ನು ನಮ್ಮ ಜೀವನದಲ್ಲಿ ಇರಿಸಲು ನಮ್ಮನ್ನು ಪ್ರೇರೇಪಿಸುತ್ತದೆ. 

ನಿಜವಾಗಿಯೂ, ಈ ಧರ್ಮದ ಕಾರ್ಯವು ನಮ್ಮ ದೈನಂದಿನ ಜೀವನಕ್ಕೆ ಬಹಳ ಸುಸಂಬದ್ಧವಾಗಿರುತ್ತದೆ. ಆಶ್ರಯದ ವಿಷಯದಲ್ಲಿ, ಇದು ನಮ್ಮ ಪರಿಸ್ಥಿತಿ ಮತ್ತು ಸಮಸ್ಯೆಗಳ ಬಗ್ಗೆ ತುಂಬಾ ಪ್ರಾಮಾಣಿಕವಾಗಿರುವುದಾಗಿರುತ್ತದೆ. ನಮ್ಮೆಲ್ಲರಲ್ಲೂ ಇದು ಇರುತ್ತದೆ. ನಾವೆಲ್ಲರೂ ಈ ಗೊಂದಲದ ಭಾವನೆಗಳನ್ನು ಹೊಂದಿದ್ದೇವೆ. ಅದು ವಿಶೇಷವೇನೂ ಅಲ್ಲ. ಬಹುಶಃ ಕೆಲವರು ಎಲ್ಲಾ ರೀತಿಯ ವ್ಯತ್ಯಾಸಗಳೊಂದಿಗೆ ಇತರರಿಗಿಂತ ಬಲಶಾಲಿಗಳಾಗಿರಬಹುದು, ಆದರೆ ನಾವೆಲ್ಲರೂ ಈ ಭಾವನಾತ್ಮಕ ತೊಂದರೆಗಳನ್ನು ಹೊಂದಿದ್ದೇವೆ. ಇಲ್ಲಿ ನಾವು ಮಾನಸಿಕ ತೊಂದರೆಗಳಿಂದ ಗಂಭೀರವಾಗಿ ಬಳಲುತ್ತಿರುವವರ ಬಗ್ಗೆ ಮಾತನಾಡುತ್ತಿಲ್ಲ. ಇಲ್ಲಿ, ಹೆಚ್ಚಿನ ಜನರು ಸಾಮಾನ್ಯವೆಂದು ಯಾವುದನ್ನು ಪರಿಗಣಿಸುವವರೋ ಅದರ ಬಗ್ಗೆ ನಾವು ಮಾತನಾಡುತ್ತಿದ್ದೇವೆ. ಇಲ್ಲಿರುವ ಅಪಾಯವೆಂದರೆ ನಾವು ಕೆಲವೊಮ್ಮೆ ಕೋಪಗೊಳ್ಳುವುದನ್ನು, ದುರಾಸೆ ಪಡುವುದನ್ನು, ಸ್ವಾರ್ಥಿಯಾಗಿರುವುದನ್ನು ಮತ್ತು ಅಸೂಯೆ ಪಡುವುದನ್ನು ಸಾಮಾನ್ಯವೆಂದು ಪರಿಗಣಿಸುತ್ತೇವೆ. ಇದು ಸಾಮಾನ್ಯ ಮತ್ತು ಇದು ಸರಿಯೇ ಎಂದು ನಾವು ಭಾವಿಸುತ್ತೇವೆ. ಆದರೆ ಇದು ಸರಿಯಾಗಿರುವುದಿಲ್ಲ, ಏಕೆಂದರೆ ಇದು ನಮಗೆ ಮತ್ತು ನಾವು ಸಹಾಯಮಾಡಲು ಪ್ರಯತ್ನಿಸುತ್ತಿರುವ ಇತರರಿಗೆ ಸಮಸ್ಯೆಗಳನ್ನು ಉಂಟುಮಾಡುತ್ತದೆ. 

ನಮ್ಮ ಗುರಿಯು, ಕೇವಲ ನಮ್ಮ ಕೋಪದೊಂದಿಗೆ ಹೇಗೆ ಬದುಕಬೇಕು ಎಂಬುದನ್ನು ಕಲಿಯುವುದು ಅಥವಾ ಅದು ಕುದಿಯುವಾಗ ಅದನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಆಗಿರುವುದಿಲ್ಲ. ನಮ್ಮ ಗುರಿಯು ಅದನ್ನು ಕೇವಲ ದುರ್ಬಲಗೊಳಿಸುವುದಲ್ಲ, ಬದಲಿಗೆ ಈ ಎಲ್ಲಾ ಗೊಂದಲದ ವಿಷಯಗಳನ್ನು ಸಂಪೂರ್ಣವಾಗಿ ತೊಡೆದುಹಾಕುವುದಾಗಿರುತ್ತದೆ. ವಾಸ್ತವದ ಸಂಪೂರ್ಣ ತಿಳುವಳಿಕೆಯನ್ನು ಬೆಳೆಸಿಕೊಳ್ಳಲು, ನಾವು ಹೇಗೆ ಅಸ್ತಿತ್ವದಲ್ಲಿದ್ದೇವೆ, ಎಲ್ಲರೂ ಹೇಗೆ ಅಸ್ತಿತ್ವದಲ್ಲಿದ್ದಾರೆ, ಜಗತ್ತು ಹೇಗೆ ಅಸ್ತಿತ್ವದಲ್ಲಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಬಯಸುತ್ತೇವೆ ಮತ್ತು ಇದರ ಬಗ್ಗೆ ಅಲ್ಪ ಸಮಯದಲ್ಲಿ ಅಲ್ಲ, ಬದಲಿಗೆ ಶಾಶ್ವತವಾಗಿ ಅರ್ಥಮಾಡಿಕೊಳ್ಳಲು ಬಯಸುತ್ತೇವೆ. ಇದು ಖಂಡಿತವಾಗಿಯೂ ಸಾಧ್ಯವಿದೆ, ಏಕೆಂದರೆ ಮಾನಸಿಕ ಚಟುವಟಿಕೆಗಳ ಸ್ವಭಾವವು ಮೂಲತಃ ಶುದ್ಧವಾಗಿದ್ದು, ಉತ್ತಮ ಗುಣಗಳ ಎಲ್ಲಾ ಸಾಮರ್ಥ್ಯಗಳನ್ನು ಹೊಂದಿರುತ್ತದೆ. 

ಮೇಲ್ನೋಟದ ಮಟ್ಟದಲ್ಲಿರುವ ಬುದ್ಧರ ಸದ್ಗುಣಗಳು  

ನಾವು ಸುರಕ್ಷಿತ ದಿಕ್ಕು ಅಥವಾ ಆಶ್ರಯವನ್ನು ಸೂಚಿಸುವ ವಸ್ತುಗಳ ಬಗ್ಗೆ ಮಾತನಾಡುವಾಗ, ನಾವು ಬುದ್ಧ, ಧರ್ಮ ಮತ್ತು ಸಂಘದ ಬಗ್ಗೆ ಮಾತನಾಡುತ್ತೇವೆ. ಈ ಮೂರರ ತಿಳುವಳಿಕೆಯ ಹಲವಾರು ಹಂತಗಳಿವೆ: ಪ್ರತಿಯೊಂದೂ ಮೇಲ್ನೋಟದ ಮಟ್ಟ, ಆಳವಾದ ಮಟ್ಟ ಮತ್ತು ಅವುಗಳನ್ನು ಪ್ರತಿನಿಧಿಸುವ ಒಂದನ್ನು ಹೊಂದಿರುತ್ತವೆ. ಮೊದಲು, ಪ್ರತಿಯೊಂದರ ಮೇಲ್ನೋಟದ ಮಟ್ಟದ ಉತ್ತಮ ಗುಣಗಳನ್ನು ನೋಡೋಣ. 

ಒಬ್ಬ ಬುದ್ಧನ ದೇಹವು ಅಸಾಧಾರಣ ದೈಹಿಕ ಗುಣಗಳನ್ನು ಮತ್ತು ವಿಶೇಷ ಲಕ್ಷಣಗಳನ್ನು ಹೊಂದಿರುತ್ತದೆ. ಉದಾಹರಣೆಗೆ, ಬುದ್ಧರು ತಕ್ಷಣವೇ ಎಲ್ಲಿಗೆ ಬೇಕಾದರೂ ಅಲ್ಲಿಗೆ ಹೋಗಬಹುದು, ತಮ್ಮ ದೇಹಗಳನ್ನು ಅನಂತ ರೂಪಗಳಿಗೆ ಗುಣಿಸಬಹುದು, ಒಂದೇ ಸಮಯದಲ್ಲಿ ಎಲ್ಲೆಡೆ ಇರಬಹುದು, ಇತ್ಯಾದಿ. ಇವೆಲ್ಲವೂ ನಂಬಲಾಗದಷ್ಟು ಅದ್ಭುತವಾಗಿರುತ್ತವೆ. ಇದಲ್ಲದೆ, ಒಬ್ಬ ಬುದ್ಧನು ಮಾತನಾಡಿದಾಗ, ಪ್ರತಿಯೊಬ್ಬ ಬುದ್ಧರೂ ಅದನ್ನು ಅವರ ಸ್ವಂತ ಭಾಷೆಯಲ್ಲಿ ಅರ್ಥಮಾಡಿಕೊಳ್ಳುತ್ತಾರೆ ಮತ್ತು ಅವರು ಎಷ್ಟೇ ದೂರದಲ್ಲಿದ್ದರೂ ಅವರಿಗೆ ಬುದ್ಧನು ಸ್ಪಷ್ಟವಾಗಿ ಕೇಳಿಸುತ್ತಾರೆ. ಅದಕ್ಕಿಂತ ಹೆಚ್ಚಾಗಿ, ಬುದ್ಧನು ಎಲ್ಲರನ್ನೂ ಸಮಾನವಾಗಿ ಪ್ರೀತಿಸುವ ಮತ್ತು ಎಲ್ಲವನ್ನೂ ಏಕಕಾಲದಲ್ಲಿ ಅರ್ಥಮಾಡಿಕೊಳ್ಳುವ ಮತ್ತು ತಿಳಿದಿರುವ ಸರ್ವ-ಪ್ರೀತಿಯ, ಸರ್ವಜ್ಞನಾಗಿರುತ್ತಾನೆ. 

ಇದೆಲ್ಲವೂ ಅದ್ಭುತವಾಗಿದ್ದು, ನಂಬಲು ಕಷ್ವವಾಗಿರುತ್ತದೆ. ಆದ್ದರಿಂದ ನಾವು ಬುದ್ಧರ ಬಗ್ಗೆ ಕೇವಲ ಈ ರೀತಿಯಾದ ಯೋಚನೆಗಳನ್ನು ಹೊಂದಿದ್ದರೆ, ಅದರಿಂದ ತಪ್ಪು ಕಲ್ಪನೆಯನ್ನು ಪಡೆಯುವ ದೊಡ್ಡ ಅಪಾಯವಿರುತ್ತದೆ. ಇಲ್ಲಿ ನಾವು ಒಂದು ಅದ್ಭುತವಾದ ಅತೀಂದ್ರಿಯ ಜೀವಿಯ ಬಗ್ಗೆ, ದೇವರಂತಹವರ ಬಗ್ಗೆ ಯೋಚಿಸುವಂತೆ ಭಾಸವಾಗುತ್ತದೆ ಅಲ್ಲವೇ? ಸರ್ವಜ್ಞನನೆಂದರೆ, ಬುದ್ಧನಿಗೆ ಗ್ರಹದ ಮೇಲಿರುವ ಪ್ರತಿಯೊಬ್ಬರ ದೂರವಾಣಿ ಸಂಖ್ಯೆ ತಿಳಿದಿರುತ್ತದೆ ಎಂದಲ್ಲ, ಬದಲಿಗೆ ಪ್ರತಿಯೊಬ್ಬರ ಪರಿಸ್ಥಿತಿಯ ಹಿಂದಿರುವ ಸರಿಯಾದ ಕಾರಣಗಳು ಮತ್ತು ಅವರ ಮೇಲೆ ಪ್ರಭಾವ ಬೀರುವ ಎಲ್ಲಾ ಅಂಶಗಳ ಬಗ್ಗೆ ಬುದ್ಧನಿಗೆ ತಿಳಿದಿದೆ ಎಂದರ್ಥ. ಬುದ್ದನು, ಒಬ್ಬ ವ್ಯಕ್ತಿಗೆ ಏನನ್ನಾದರೂ ಕಲಿಸಿದಾಗ, ಅದರಿಂದ ಕೇವಲ ಅವರ ಮೇಲೆ ಮಾತ್ರವಲ್ಲ, ಜೊತೆಗೆ ಅವರು ಸಂವಹಿಸುವ ಪ್ರತಿಯೊಬ್ಬರ ಮೇಲೂ ಅದರಿಂದಾಗುವ ಎಲ್ಲಾ ಪರಿಣಾಮಗಳ ಅರಿವಿನೊಂದಿಗೆ ಅವರು ಹಾಗೆ ಮಾಡುತ್ತಾರೆ. ಇದರ ಪರಿಣಾಮವಾಗಿ, ಬುದ್ಧನು, ಎಲ್ಲರಿಗೂ ಕಲಿಸುವ ಅತ್ಯುತ್ತಮ ವಿಧಾನಗಳನ್ನು ನಿಖರವಾಗಿ ತಿಳಿದಿರುತ್ತಾರೆ. ಅದು ಬಹಳಾ ಒಳ್ಳೆಯ ವಿಷಯ, ಅಲ್ಲವೇ? ಹಾಗೆ ಮಾಡಲು ಸಾಧ್ಯವಾದರೆ, ಬಹಳಾ ಚೆನ್ನಾಗಿರುತ್ತದೆ. 

ನಮಗೆ ಸಹಾಯ ಮಾಡುವ ಅತ್ಯುತ್ತಮವಾದ ದಾರಿಯನ್ನು ಬುದ್ಧನು ಅರ್ಥಮಾಡಿಕೊಂಡಿರಬಹುದು ಮತ್ತು ತಿಳಿದಿರಬಹುದು ಎಂದು, ಒಂದು ರೀತಿಯ ವಿಶ್ವಾಸ ನಮಗಿದೆ. ಬುದ್ಧನು ನನ್ನ ಭಾಷೆಯನ್ನು ಮಾತನಾಡುತ್ತಾನೆ ಮತ್ತು ನನಗೆ ಅಗತ್ಯವಿದ್ದಾಗ, ತಕ್ಷಣವೇ ನನ್ನ ಬಳಿ ಪ್ರತ್ಯಕ್ಷರಾಗಬಹುದು. ನಾವು ಬುದ್ಧನನ್ನು ದೇವರೆಂದು ಭಾವಿಸುವ ದಿಕ್ಕಿನಲ್ಲಿ ಸಾಗುತ್ತಿದ್ದರೆ, ಅದು ಸ್ವಲ್ಪ ವೈಯಕ್ತಿಕವೆನಿಸಬಹುದು. "ಅವರು ನನಗೆ ವೈಯಕ್ತಿಕವಾಗಿ ಸಹಾಯ ಮಾಡಬಹುದು. ಅವರು ನನ್ನನ್ನು ಅರ್ಥಮಾಡಿಕೊಳ್ಳುವರು. ಯಾರೂ ನನ್ನನ್ನು ಅರ್ಥಮಾಡಿಕೊಳ್ಳುವುದಿಲ್ಲ, ಆದರೆ ಬುದ್ಧನು ಅರ್ಥಮಾಡಿಕೊಳ್ಳುತ್ತಾನೆ.” ಆದರೆ ಬುದ್ಧನಿಗೆ ಎಲ್ಲರ ಬಗ್ಗೆಯೂ ಸಮಾನವಾದ ಪ್ರೀತಿ ಇದೆ ಎಂದು ನಮಗೆ ತಿಳಿದಿದೆ. “ಅದು ಒಳ್ಳೆಯದೆ ಆದರೂ, ನನ್ನನ್ನು ಎಲ್ಲರಿಗಿಂತ ತುಸು ಹೆಚ್ಚು ಪ್ರೀತಿಸಿದರೆ ಚೆನ್ನಾಗಿರುತ್ತಿತ್ತು, ಆದರೂ ಪರವಾಗಿಲ್ಲ ಬಿಡಿ.” ಒಬ್ಬ ಬುದ್ಧನಿಗೆ ಎಲ್ಲರ ಬಗ್ಗೆಯೂ ಸಮಾನವಾದ ಪ್ರೀತಿಯಿದೆ ಮತ್ತು ಬೋನಸ್ ಎಂದರೆ ನಾವು ಏನು ಮಾಡಿದರೂ ಪರವಾಗಿಲ್ಲ ಎಂದು ತೋರುತ್ತದೆ. ನಾವು ಬುದ್ಧನಿಗೆ ಪ್ರಾರ್ಥನೆ ಅಥವಾ ಅರ್ಪಣೆಗಳನ್ನು ಸಲ್ಲಿಸಬೇಕಾಗಿಲ್ಲ. ಏನೇ ಆದರೂ, ಬುದ್ಧನು ನಿಮಗೆ ಸಹಾಯ ಮಾಡಲಿದ್ದಾನೆ. ಆದ್ದರಿಂದ ಇದು ಅಗ್ಗವಾಗಿದೆ. ನಾವು ಏನನ್ನೂ ಪಾವತಿಸಬೇಕಾಗಿಲ್ಲ. ಎಂತಹ ಒಳ್ಳೆಯ ಅವಕಾಶ! ಇದರ ಜೊತೆಗೆ, ಬುದ್ಧನಿಗೆ ತುಂಬಾ ತಾಳ್ಮೆ ಇರುವುದರಿಂದ, ನಾವು ಬೇರೆ ಯಾವುದಾದರೂ ಸಂಪ್ರದಾಯದ ಗುರುಗಳ ಬಳಿಗೆ ಹೋದರೆ, ಅವರು ಎಂದಿಗೂ ಅಸೂಯೆಪಡುವುದಿಲ್ಲ ಮತ್ತು ಎಂದಿಗೂ ಕೋಪಗೊಳ್ಳುವುದಿಲ್ಲ ಮತ್ತು ಸಿಡಿಲಿನಿಂದ ಹೊಡೆಯುವುದಿಲ್ಲ. ಇದು ಬಹಳಾ ಸುರಕ್ಷಿತವಾಗಿರುತ್ತದೆ. 

ಇದು ಸಾಮಾನ್ಯವಾದ ತಪ್ಪು ಕಲ್ಪನೆಯಾಗಿರುತ್ತದೆ, ಅದು ಪ್ರಜ್ಞಾಪೂರ್ವಕವಾಗಿರಲಿ, ಇಲ್ಲದಿರಲಿ. ನಾವು ಬುದ್ಧನನ್ನು ಚೌಕಾಸಿ ಮಾಡಬಹುದಾದ ಮತ್ತು ಸುರಕ್ಷಿತವಾದ ಪರ್ಯಾಯ ದೇವರಂತೆ ನೋಡುತ್ತೇವೆ. ಬೋಧನೆಗಳಲ್ಲಿ, ಬುದ್ಧನು ನಿಮ್ಮನ್ನು ನಿರಾಸೆಗೊಳಿಸುವುದಿಲ್ಲ ಎಂದು ಸೂಚಿಸುವಂತಹ ಬಹಳಾ ವಿಷಯಗಳಿರುತ್ತವೆ. ಇದು ಕೇಳಲು ಚೆನ್ನಾಗಿರುತ್ತದೆ. ಆದರೆ ನಮ್ಮ ಪಾದದಿಂದ ಮುಳ್ಳನ್ನು ಹೊರತೆಗೆಯುವಂತೆ ಬುದ್ಧನಿಗೆ ನಮ್ಮ ದುಃಖಗಳನ್ನು ಹೊರತೆಗೆಯಲಾಗುವುದಿಲ್ಲ ಎಂದು ನಾವು ಅಧ್ಯಯನ ಮಾಡಬಹುದು. ಬುದ್ಧರು ಸರ್ವಶಕ್ತರಾಗಿರುವುದಿಲ್ಲ. ಆದರೆ ನಾವು ಅದನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಇದು ಸಾಮಾನ್ಯ ಚಿಂತನೆಯಲ್ಲಿರುವ, ಬುದ್ಧನಿರಬೇಕಾದ ಮಟ್ಟವಾಗಿರುತ್ತದೆ. ಆದರೆ ಆಳವಾದ ತಿಳುವಳಿಕೆಯಿಲ್ಲದೆ ಅದೇ ಮಟ್ಟದಲ್ಲಿ ಉಳಿದರೆ, ಬುದ್ಧನನ್ನು ನಮ್ಮನ್ನು ಕಾಪಾಡುವ ಬದಲಿಗೆ, ವೈಯಕ್ತಿಕ ದೇವರೆಂದು ಪರಿಗಣಿಸುವ ಅಪಾಯವಿದೆ.  

ಬುದ್ಧರನ್ನು ಪ್ರತಿಮೆಗಳು ಮತ್ತು ವರ್ಣಚಿತ್ರಗಳಿಂದ ಪ್ರತಿನಿಧಿಸಲಾಗುತ್ತದೆ. ಅವು ಕಣ್ಣುಗಳಿಗೆ ಸುಂದರವಾಗಿ ಕಂಡರೂ, ನಾವು ಅವನ್ನು ಸಾಂಪ್ರದಾಯಿಕ ಕ್ರಿಶ್ಚಿಯನ್ ಚಿಹ್ನೆಗಳಂತೆ ಕಾಣುತ್ತೇವೆಯೇ? ಏನು ಇದೆಲ್ಲಾ? ಮುಸ್ಲಿಮರು ಆರೋಪಿಸುವಂತೆ ನಾವು ವಿಗ್ರಹಗಳ ಪೂಜೆಯಲ್ಲಿ ತೊಡಗಿದ್ದೇವೆಯೇ? ಇಲ್ಲಿ ನಿಜವಾಗಿಯೂ ಏನು ನಡೆಯುತ್ತಿದೆ? ನಾವು ನಿಜವಾಗಿಯೂ ಪ್ರತಿಮೆಯ ಮುಂದೆ ನಮಸ್ಕರಿಸಬೇಕೇ? ಬುದ್ಧನ ಬಗೆಗಿನ ನಮ್ಮ ತಿಳುವಳಿಕೆಯನ್ನು ಇದೇ ಮಟ್ಟದಲ್ಲಿ ಬಿಟ್ಟರೆ, ಸಮಸ್ಯೆಗಳೆದ್ದು ಬರುತ್ತವೆ ಎಂದು ನಾನು ಭಾವಿಸುತ್ತೇನೆ. ಇಲ್ಲಿ ತಪ್ಪು ತಿಳುವಳಿಕೆಗೆ ಅವಕಾಶವಿದೆ. ಆದರೆ ನಿಸ್ಸಂಶಯವಾಗಿ, ಕೆಲವು ಜನರಿಗೆ, ಬುದ್ಧನ ಬಗ್ಗೆ ಈ ರೀತಿಯಾಗಿ ಯೋಚಿಸದರೇನೇ ಉಪಯೋಗವಾಗಬಹುದು, ಆದರೆ ಇದು ಆಳವಾದ ತಿಳುವಳಿಕೆಯಾಗಿರುವುದಿಲ್ಲ. ಈ ಮಟ್ಟದಲ್ಲಿ, ನಾವು ಆರಾಧಿಸುವ, ಪ್ರತಿಮೆಗಳು ಮತ್ತು ವರ್ಣಚಿತ್ರಗಳಿಂದ ಪ್ರತಿನಿಧಿಯಾಗುವ ದೇವರಂತಹ ಆಕೃತಿಯಿರಬಹುದೇನೋ ಎಂಬಂತೆ ಭಾಸವಾಗುತ್ತದೆ.  

ಮೇಲ್ನೋಟದ ಮಟ್ಟದಲ್ಲಿರುವ ಧರ್ಮದ ಸದ್ಗುಣಗಳು  

ಧರ್ಮದ ಒಂದು ಮೇಲ್ನೋಟದ ಮಟ್ಟವು ಎಲ್ಲಾ ರೀತಿಯ ಬೋಧನೆಗಳಾಗಿರುತ್ತವೆ. ಇದನ್ನೇ ಬುದ್ಧನು ತಮ್ಮಲ್ಲಿ ಮತ್ತು ತಾವು ಬೋಧಿಸುವುದರಲ್ಲಿ ಅರಿತುಕೊಂಡರು. ಇದನ್ನು ಅರ್ಥಮಾಡಿಕೊಳ್ಳುವ ಸಾಮಾನ್ಯ ವಿಧಾನವೆಂದರೆ ನಮ್ಮ ವೈಯಕ್ತಿಕ ದೇವರಿರುವನು, ಬುದ್ಧನಿರುವನು ಮತ್ತು ನಮ್ಮ ಧರ್ಮಗ್ರಂಥಗಳಿರುವವು. ಬೈಬಲ್ ಅಥವಾ ಕುರಾನ್ ಬದಲಿಗೆ, ಈಗ ನನ್ನ ಬಳಿ ಬುದ್ಧನ ಪಠ್ಯಗಳಿವೆ. ಇದು ನನ್ನ ಬೌದ್ಧ ಬೈಬಲ್‌ನಂತಿದೆ ಮತ್ತು ಅದರಲ್ಲಿರುವ ಪ್ರತಿಯೊಂದು ಪದವನ್ನು ನಾನು ಪವಿತ್ರವೆಂದು ಪರಿಗಣಿಸುತ್ತೇನೆ. ನಾವು ಅದನ್ನು ಗೌರವಿಸಬೇಕು ಹೌದು, ಆದರೆ ಬುದ್ಧ ಸ್ವತಃ ಹೀಗೆ ಹೇಳಿದರು: "ಕೇವಲ ನಾನು ಹೇಳಿದೆ ಎಂಬ ಕಾರಣದಿಂದ ಯಾವುದನ್ನೂ ನಂಬಬೇಡಿ, ಬದಲಿಗೆ ನೀವು ಚಿನ್ನವನ್ನು ಖರೀದಿಸುವಂತೆ ಅದನ್ನು ಪರೀಕ್ಷಿಸಿ." ಬುದ್ಧ, ತಮ್ಮ ಅನುಯಾಯಿಗಳಿಗೆ ತಾವು ಕಲಿಸಿದ ವಿಷಯಗಳ ಬಗ್ಗೆ ಯಾವಾಗಲೂ ವಿಮರ್ಶಾತ್ಮಕವಾಗಿರಲು ಪ್ರೋತ್ಸಾಹಿಸುತ್ತಿದ್ದರು. ಆದರೆ ನಾವು ಸೋಮಾರಿಗಳಾಗುತ್ತೇವೆ, ಮತ್ತು ನಾವು ಎಲ್ಲವನ್ನೂ ವಿಶ್ಲೇಷಿಸಲು ಮತ್ತು ಪರಿಶೀಲಿಸಲು ಬಯಸುವುದಿಲ್ಲ. ದೈನಂದಿನ ಜೀವನದ ಪ್ರಸ್ತುತತೆಯಲ್ಲಿನ ಈ ಮಟ್ಟದ ಅರ್ಥವು ಹೇಗಿರುತ್ತದೆಯೆಂದರೆ, ಬುದ್ಧನು ನಮ್ಮನ್ನು ಪ್ರೀತಿಸುತ್ತಾನೆ, ಬುದ್ಧನು ನಮ್ಮನ್ನು ಅರ್ಥಮಾಡಿಕೊಳ್ಳುತ್ತಾನೆ ಮತ್ತು ಪವಿತ್ರಗ್ರಂಥದಲ್ಲಿ ಎಲ್ಲಾ ನಿಯಮಗಳಿದ್ದು, ಇವನ್ನು ನಾವು ಅನುಸರಿಸಿದರೆ ಸಾಕು ಎಂದಾಗಿರುತ್ತದೆ. ನಿಸ್ಸಂಶಯವಾಗಿ, ಇದು ದೈನಂದಿನ ಜೀವನದಲ್ಲಿ ಒಂದು ಜಾಗವನ್ನು ಮಾಡಿಕೊಳ್ಳಬಹುದು, ಆದರೆ ಇದು ನಿಜವಾಗಿಯೂ ಬೌದ್ಧಧರ್ಮವಾಗಿರುವುದಿಲ್ಲ. ಸಹಜವಾಗಿ, ಇದು ಕೆಲವರಿಗೆ ಕೆಲಸ ಮಾಡುತ್ತದೆ, ಆದರೆ ಬೌದ್ಧಧರ್ಮವನ್ನು, ಕ್ರಿಶ್ಚಿಯನ್ ಧರ್ಮದ ಮತ್ತೊಂದು ರೂಪಾಂತರವಾಗಿಸುವ ಉದ್ದೇಶ ನಮಗಿಲ್ಲ. 

ಮೇಲ್ನೋಟದ ಮಟ್ಟದಲ್ಲಿರುವ ಸಂಘದ ಸದ್ಗುಣಗಳು

ಹಾಗಾದರೆ, ಸಂಘದ ಸ್ಥಿತಿಯೇನು? ದುರದೃಷ್ಟವಶಾತ್, ಪಶ್ಚಿಮದಲ್ಲಿ, ನಾವು ಭೇಟಿ ನೀಡುವ ಧರ್ಮ ಕೇಂದ್ರದ ಎಲ್ಲ ಸದಸ್ಯರನ್ನೂ ನಮ್ಮ "ಸಂಘ" ಎಂದು ಪರಿಗಣಿಸುವ ಪ್ರವೃತ್ತಿಯಿದೆ. ಇದು ಖಂಡಿತವಾಗಿಯೂ ಸಂಸ್ಕೃತ ಅಥವಾ ಟಿಬೆಟಿನಲ್ಲಿನ ಈ ಪದದ ಉದ್ದೇಶವಾಗಿರಲಿಲ್ಲ. ಆದರೆ, ಅನೇಕರಿಗೆ, "ಸಂಘ" ಎಂದರೆ ಅವರ ಸಭೆಯ, ಅವರ ‘ಬೌದ್ಧ ಚರ್ಚ್’ ಸದಸ್ಯರೆಂದಾಗಿರುತ್ತದೆ. ಈ ಸದಸ್ಯರಲ್ಲಿ ಕೆಲವರು ತುಂಬಾ ತೊಂದರೆಗೊಳಗಾದ ಜನರಾಗಿದ್ದರೆ, ನಾವು ನಿಜವಾಗಿಯೂ ಅವರಲ್ಲಿ ಆಶ್ರಯ ಪಡೆಯಲಾಗುತ್ತದೆಯೇ? ಒಂದು ರೀತಿಯ ಬೆಂಬಲ, ಪ್ರತಿಕ್ರಿಯೆ ಇತ್ಯಾದಿಗಳನ್ನು ನೀಡಬಹುದಾದ, ಒಂದೇ ರೀತಿಯ ಗುರಿಯಿರುವ ಸಮಾನ ಮನಸ್ಕ ಜನರ ಆಧ್ಯಾತ್ಮಿಕ ಸಮುದಾಯವಿರುವುದರ ಪ್ರಾಮುಖ್ಯತೆಯನ್ನು ನಾನು ಅಲ್ಲಗೆಳೆಯುತ್ತಿಲ್ಲ. ಇದು ಬಹಳಾ ಮುಖ್ಯವಾಗಿರುತ್ತದೆ, ಆದರೆ ಅದು ಆಶ್ರಯದ ಉದ್ದೇಶವಾಗಿರುವುದಿಲ್ಲ. 

ಸಂಘದ ಮತ್ತೊಂದು ಮಟ್ಟದಲ್ಲಿ, ನಾವು ಅದನ್ನು ಸನ್ಯಾಸಿಗಳ ಸಮುದಾಯವೆಂದು ಅರ್ಥಮಾಡಿಕೊಳ್ಳಬಹುದು, ಆದ್ದರಿಂದ ಬೌದ್ಧ ಸನ್ಯಾಸಿಗಳು ಮತ್ತು ಸನ್ಯಾಸಿನಿಯರಿರುವರು. ಆದರೆ, ನಾವು ಸನ್ಯಾಸಿಗಳು ಮತ್ತು ಸನ್ಯಾಸಿನಿಯರ ಪರಿಪೂರ್ಣ ಉದಾಹರಣೆಗಳನ್ನು ಯಾವಾಗಲೂ ಕಾಣುವುದಿಲ್ಲ, ಅಲ್ಲವೇ? ನಿಲುವಂಗಿಯನ್ನು ಧರಿಸುವ ಕೆಲವು ಗೊಂದಲದಿಂದ ಕೂಡಿದ ಜನರಿರುತ್ತಾರೆ. ಸನ್ಯಾಸಿಗಳಾಗುವ ಮೂಲಕ ಅವರು ಪ್ರಾಮಾಣಿಕವಾಗಿ ಕೆಲಸ ಮಾಡಲು ಪ್ರಯತ್ನಿಸುತ್ತಿದ್ದರೆ ಅವರಿಗೆ ಗೌರವ ಮತ್ತು ಬೆಂಬಲ ನೀಡುವುದು ಬಹಳ ಮುಖ್ಯವಾಗಿರುತ್ತದೆ. ಆದರೆ ಕೆಲವು ಸನ್ಯಾಸಿಗಳು ಮತ್ತು ಸನ್ಯಾಸಿನಿಯರು ಜೀವನದಲ್ಲಿನ ತೊಂದರೆಗಳಿಂದ ಪಾರಾಗಲು ಮತ್ತು ನನ್ನ ಸ್ನೇಹಿತರೊಬ್ಬರು ಹೇಳಿದಂತೆ, ಉಚಿತ ಊಟಕ್ಕಾಗಿ ನಿಲುವಂಗಿಯನ್ನು ಧರಿಸಿರುತ್ತಾರೆ!  

ಸಂಘದ ಇನ್ನೊಂದು ಮಟ್ಟವಿದೆ. ಈ ತಾಂತ್ರಿಕ ಗುರುಗಳಿಂದ ನಾವು ಇದನ್ನು ಕೇಳಬಹುದು, ಅವರ ಪ್ರಕಾರ ಸಂಘವು, ನಮ್ಮ ಬಳಿಯಿರುವ, ಚೆನ್ರೆಜಿಗ್, ತಾರಾ, ಮಂಜುಶ್ರೀ ಅಂತಹ "ತಾಂತ್ರಿಕ ದೇವತೆ"ಗಳಾಗಿರುತ್ತಾರೆ. ಈಗ ನಾವು ಪವಿತ್ರ ಮಾತೆ ಅಥವಾ ಸಂತ ತಾರಾಗೆ ಪ್ರಾರ್ಥಿಸಲು ಪ್ರಾರಂಭಿಸಬಹುದು, ಮತ್ತು ಅವಳು ನಮ್ಮನ್ನು ರಕ್ಷಿಸಲಿದ್ದಾಳೆ. ನಿಸ್ಸಂಶಯವಾಗಿ, ಈ ಬುದ್ಧ-ಆಕೃತಿಗಳು, ಈ ತಾಂತ್ರಿಕ ದೇವತೆಗಳೆಂದು ಕರೆಯಲ್ಪಡುವವು, ಯಾವುದೇ ರೀತಿಯಲ್ಲಿ ಬುದ್ಧ ದೇವರಿಗೆ ಹತ್ತಿರವಾಗಲು ನಮಗೆ ಸಹಾಯ ಮಾಡಲು ಇರುವ ಮಧ್ಯವರ್ತಿಗಳಾಗಿರುವ ಸಂತರಾಗಿರುವುದಿಲ್ಲ. 

ಬುದ್ಧ, ಧರ್ಮ ಮತ್ತು ಸಂಘಗಳ ಆಳವಾದ ಅರ್ಥ 

ನಾವು ಬುದ್ಧ, ಧರ್ಮ ಮತ್ತು ಸಂಘಗಳ ಆಳವಾದ ಅರ್ಥದತ್ತ ನೋಡಿದರೆ, ಧರ್ಮದ ಆಳವಾದ ಅರ್ಥವು, ಈ ಎಲ್ಲಾ ಗೊಂದಲಗಳ ನಿಜವಾದ ನಿಲುಗಡೆಯಾಗಿರುತ್ತದೆ ಮತ್ತು ನಿಜವಾದ ಮನವರಿಕೆಗಳು ಅಥವಾ ನಿಜವಾದ ಮಾನಸಿಕ ಮಾರ್ಗಗಳು ಅಥವಾ ಮಾನಸಿಕ ನಿರಂತರತೆಯಲ್ಲಿನ ಮನಸ್ಸಿನ ಮಾರ್ಗಗಳು ಎಂದು ನಾವು ಕರೆಯುವಂತದ್ದಾಗಿರುತ್ತವೆ. ಇದೇ ನಿಜವಾದ ಧರ್ಮ. ನಮ್ಮದೇ ಆದ ಮಾನಸಿಕ ನಿರಂತರತೆಯಲ್ಲಿ ನಾವು ಅದನ್ನು ಸಾಧಿಸಿದ್ದಲ್ಲಿ, ಇದೇ ನಮ್ಮನ್ನು ದುಃಖದಿಂದ ರಕ್ಷಿಸುತ್ತದೆ. ಎಲ್ಲಾ ಗೊಂದಲಗಳು, ಗೊಂದಲದ ಭಾವನೆಗಳು, ವರ್ತನೆಗಳು ಮತ್ತು ಸಮಸ್ಯೆಗಳನ್ನು ನಿವಾರಿಸಿದ ನಂತರ, ಎಲ್ಲಾ ರೀತಿಯ ಸಾಕ್ಷಾತ್ಕಾರಗಳೊಂದಿಗೆ ನಾವು ಈ ಸ್ಥಿತಿಯನ್ನು ಸಾಧಿಸಬಹುದು. ಬುದ್ಧರು ಇದನ್ನು ಪೂರ್ಣವಾಗಿ ಸಾಧಿಸಿದವರಾಗಿರುವರು ಮತ್ತು ಅದನ್ನು ಹೇಗೆ ಸಾಧಿಸಬೇಕೆಂದು ನಮಗೆ ಕಲಿಸಿದವರಾಗಿರುವರು. ವಾಸ್ತವದಲ್ಲಿ ಸಂಘವು, "ಆರ್ಯ ಸಂಘ" ಎಂದು ಕರೆಯಲ್ಪಟ್ಟಿದ್ದು, ಅಲ್ಲಿ ಕೆಲವು ನಿಜವಾದ ನಿಲುಗಡೆಗಳು ಮತ್ತು ನಿಜವಾದ ಸಾಕ್ಷಾತ್ಕಾರಗಳನ್ನು ಸಾಧಿಸಿದ, ಹೆಚ್ಚಾಗಿ ಅರಿತುಕೊಂಡ, ಮುಂದುವರಿದ ಅಭ್ಯಾಸಕಾರರಾಗಿರುವರು. ವಾಸ್ತವದಲ್ಲಿ, ನಾವು ನಿವಾರಿಸಬೇಕಾದ ಗೊಂದಲದ ಹಲವು ಹಂತಗಳು ಮತ್ತು ಮಟ್ಟಗಳು ಇರುತ್ತವೆ ಮತ್ತು ಅವುಗಳನ್ನು ಎದುರಿಸುವ, ಹಂತಹಂತವಾಗಿ ಬಲಗೊಳ್ಳುವ, ಸಾಕ್ಷಾತ್ಕಾರದ ಹಂತಗಳಿರುತ್ತವೆ. ಅವುಗಳನ್ನು ನಿವಾರಿಸುವ ಪ್ರಕ್ರಿಯೆಯು ಹಂತ ಹಂತವಾಗಿ ಸಂಭವಿಸುತ್ತವೆ. ಆರ್ಯ ಸಂಘದಲ್ಲಿರುವವರು, ಇನ್ನೂ ಎಲ್ಲವನ್ನೂ ನಿವಾರಿಸಿದ ಸಂಪೂರ್ಣ ಪ್ಯಾಕೇಜ್ ಅನ್ನು ಸಾಧಿಸಿಲ್ಲ, ಆದರೆ ಕೆಲವರು, ಹೆಚ್ಚಿನದನ್ನು ಸಾಧಿಸುವ ಹಾದಿಯಲ್ಲಿರುತ್ತಾರೆ. 

ನಮ್ಮ ದೈನಂದಿನ ಜೀವನದಲ್ಲಿ, ಬುದ್ಧರು ಮತ್ತು ಆರ್ಯ ಸಂಘ, ಮೊದಲ ಮಹಾನ್ ಭಾರತೀಯ ಮತ್ತು ಟಿಬೆಟಿಯನ್ ಗುರುಗಳು ಮತ್ತು ವರ್ತಮಾನದಲ್ಲಿನ ಹಲವು ಗುರುಗಳು ಬಹಳ ಸ್ಪೂರ್ತಿದಾಯಕರಾಗಿರುತ್ತಾರೆ. ಇದು ನಮಗೆ ಬಹಳಷ್ಟು ಭರವಸೆಯನ್ನು ನೀಡುತ್ತದೆ. ನಾವು ಪರಮಪೂಜ್ಯ ದಲೈ ಲಾಮಾರಂತಹ ಸ್ಪೂರ್ತಿದಾಯಕ ವ್ಯಕ್ತಿಯೊಬ್ಬರನ್ನು ನೋಡುತ್ತೇವೆ. ಅವರು ಹಾಗೆ ಹೇಗಾದರು? ಅದು ಧರ್ಮದ ಮೂಲಕ. ಅವರು ಪ್ರಸ್ತುತವಾಗಿ ಬುದ್ಧರಾಗಿರುವರೇ, ಇಲ್ಲವೇ ಎಂಬುದು ಮುಖ್ಯವಲ್ಲ. ನಾವು ಅವರಂತೆ ಆಗಲು ಸಾಧ್ಯವಾದರೆ, ಅದು ಒಳ್ಳೆಯ ವಿಷಯ. ನಾನು, ಕೇವಲ ಧರ್ಮ ಕ್ಷೇತ್ರದಲ್ಲಿ ಅವರು ಏನನ್ನೂ ಬೇಕಾದರೂ ಕಲಿಸುವ ಸಾಮರ್ಥ್ಯದ ಬಗ್ಗೆ ಮಾತನಾಡುತ್ತಿಲ್ಲ, ಅಥವಾ ಅವರು ಎಲ್ಲಾ ಶಿಕ್ಷಕರಿಗಿಂತ ಪರಿಣಿತರು, ಹೆಚ್ಚು ಕಲಿತವರು ಮತ್ತು ಹೆಚ್ಚು ಆಳವಾಗಿ ತಿಳಿದವರು ಎಂದು ಹೇಳುತ್ತಿಲ್ಲ. ಪ್ರಪಂಚದಾದ್ಯಂತ, ಇತರರಿಗಾಗಿ ಕಲಿಸಲು ಮತ್ತು ಸಹಾಯ ಮಾಡಲು ಅವರು ಮಾಡುವ ನಿರಂತರ ಪ್ರಯಾಣದ ವೇಳಾಪಟ್ಟಿಯ ಪ್ರಕಾರದ ಬಗ್ಗೆ ಇಲ್ಲಿ ನಾನು ಮಾತನಾಡುತ್ತಿಲ್ಲ. ಆದರೆ ಅದರ ಮೇಲೆ, ಅವರು ಚೀನಾದ ಪ್ರಥಮ ಸ್ಥಾನದಲ್ಲಿರುವ ಸಾರ್ವಜನಿಕ ಶತ್ರು ಎಂಬುದನ್ನು ಪರಿಗಣಿಸಿ. ಒಂದು ಶತಕೋಟಿಗಿಂತಲೂ ಹೆಚ್ಚು ಜನರು ನಿಮ್ಮನ್ನು ರಾಕ್ಷಸನೆಂದು ಪರಿಗಣಿಸಿ, ನಿಮ್ಮ ಜನರ ಮೇಲೆ ಎಲ್ಲಾ ರೀತಿಯ ಹೀನಾಯ ಕೃತ್ಯಗಳನ್ನು ಎಸಗಿದ ನಂತರವೂ, ಅವರಿಗಾಗಿ ಪ್ರೀತಿ ಮತ್ತು ಸಹಾನುಭೂತಿಯನ್ನು ಇರಿಸಿಕೊಳ್ಳುವುದರ ಬಗ್ಗೆ ನೀವು ಯೋಚಿಸಬಲ್ಲಿರಾ? ಅವರು ಅಸಮಾಧಾನಗೊಂಡಿಲ್ಲ, ಮತ್ತು ಅವರು ಮಾಡುವ ಎಲ್ಲವನ್ನೂ ಸಂತೋಷದಿಂದ, ಶಾಂತಿಯುತ ಮನಸ್ಸಿನಿಂದ ಮಾಡಲು ಸಾಧ್ಯವಾಗುತ್ತದೆ. ಇದು ನಂಬಲಾಗದಷ್ಟು ಅದ್ಭುತವಾದ ಸಂಗತಿ, ಅಲ್ಲವೇ? ನಾವು ಗೊಂದಲದ ಭಾವನೆಗಳನ್ನು ನಿವಾರಿಸಿ, ಸಾಕ್ಷಾತ್ಕಾರವನ್ನು ಪಡೆಯದಿದ್ದರೆ, ನಾವು ಇದನ್ನು ಹೇಗೆ ತಾನೆ ಸಾಧಿಸಬಹುದು? ಅದು ಸಾಧ್ಯವಾಗುವುದಿಲ್ಲ. ಅವರು ಬುದ್ಧನಾಗುವ ಮಾರ್ಗದ ಮುಂಚೂಣಿಯಲ್ಲಿರಲಿ, ಬಿಡಲಿ, ಅದು ಇಲ್ಲಿ ಮುಖ್ಯವಾಗಿರುವುದಿಲ್ಲ.  

ನಾವು ಬುದ್ಧನ ಎಲ್ಲಾ ಗುಣಗಳೊಂದಿಗೆ ಸಂಬಂಧ ಹೊಂದಲು ಸಾಧ್ಯವಾಗದಿರಬಹುದು, ಆದರೆ ಕನಿಷ್ಠಪಕ್ಷ ಅಂತಹ ಗುಣಗಳನ್ನು ಪರಮಪೂಜ್ಯರಾದ ದಲೈ ಲಾಮಾ ಅವರಂತಹವರಲ್ಲಿ ನಾವು ಕಾಣಬಹುದು. ಇದು ತುಂಬಾ ಸ್ಪೂರ್ತಿದಾಯಕವಾಗಿದೆ. ಅವರಂತಹವರಿಗೆ ಈ ಸಾಧನೆಯ ಮಟ್ಟವನ್ನು ತಲುಪಲು ಸಾಧ್ಯವಾದರೆ, ಮನಸ್ಸಿನ ಶುದ್ಧ ಸ್ವಭಾವವನ್ನು ಮತ್ತು ಅದರ ಬಳಿಯುರುವ ಈ ಎಲ್ಲಾ ಸಾಮರ್ಥ್ಯಗಳನ್ನು ಪರಿಗಣಿಸಿ, ನಾವು ಕೂಡ ಅದನ್ನೇ ಸಾಧಿಸಬಹುದು ಎಂಬುದರಲ್ಲಿ ಎರಡು ಮಾತಿಲ್ಲ. ಪ್ರತಿಯೊಬ್ಬರೂ ಹೀಗೆ ಮಾಡಬಹುದು ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಹೌದು, ಇದಕ್ಕಾಗಿ ಬಹಳಾ ಶ್ರಮ ಪಟ್ಟು ಕೆಲಸ ಮಾಡಬೇಕಾಗುತ್ತದೆ, ಆದರೆ ಹೀಗೆ ಮಾಡಲು ಸಾಧ್ಯವಾಗಿರುತ್ತದೆ ಮತ್ತು ಆ ದಿಕ್ಕಿನಲ್ಲಿ ನಡೆಯುವುದರಿಂದ ಬಹಳಾ ಒಳಿತಾಗುತ್ತದೆ. ದಲೈ ಲಾಮಾ ಬುದ್ಧನಿಗೆ ಸಾದೃಶ್ಯವಾಗಿದ್ದರೆ, ಬೋಧಿಸುತ್ತಿರುವ ಕೆಲವು ಮಹಾನ್ ಲಾಮಾಗಳು ದಲೈ ಲಾಮಾ ಅವರ ಎಲ್ಲಾ ಗುಣಗಳನ್ನು ಹೊಂದಿಲ್ಲವಾದರೂ, ಸಂಘಕ್ಕೆ ಹೋಲುವಂತೆ, ಇದರಲ್ಲಿ ಕೆಲವು ಗುಣಗಳನ್ನು ಹೊಂದಿರುತ್ತಾರೆ. ಇದು ಕೂಡ ಬಹಳ ಸ್ಪೂರ್ತಿದಾಯಕವಾಗಿರುತ್ತದೆ.

ದಲೈ ಲಾಮಾ ಮತ್ತು ಈ ಇತರ ಮಹಾನ್ ಗುರುಗಳ ಮಧ್ಯದಲ್ಲಿ ಸಾಮಾನ್ಯವಾದದ್ದು ಏನಿದೆ? ಅವರು ಕೋಪ, ದುರಾಸೆ, ದ್ವೇಷ, ಅಸೂಯೆ ಮತ್ತು ಈ ಎಲ್ಲಾ ರೀತಿಯ ವಿಷಯಗಳನ್ನು ವಿವಿಧ ಹಂತಗಳಲ್ಲಿ ನಿವಾರಿಸಿದ್ದಾರೆ. ಅವರು ತಿಳುವಳಿಕೆ, ಸಹಾನುಭೂತಿ, ತಾಳ್ಮೆ ಇತ್ಯಾದಿಗಳಂತಹ ಅತ್ಯುತ್ತಮ ಗುಣಗಳನ್ನು ಗಳಿಸಿದ್ದಾರೆ. ನಾವು ಸಾಧಿಸಬಹುದಾದ ವಿವಿಧ ಹಂತಗಳನ್ನು ನಾವು ಈ ವಿವಿಧ ಲಾಮಾಗಳಲ್ಲಿ ಕಾಣುತ್ತೇವೆ. ನಾನು ಹೇಳಿದಂತೆ, ಬುದ್ಧ ಅಥವಾ ಮಿಲರೇಪಾ ಮತ್ತು ಇತರ ಐತಿಹಾಸಿಕ ಉದಾಹರಣೆಗಳೊಂದಿಗೆ ಸಂಬಂಧಿಸಲು ಕಷ್ಟವಾಗಬಹುದು, ಇವರು ನಮಗೆ (ನಮಗೆ ಅವರ ಬಗ್ಗೆ ಗೊತ್ತಿದ್ದಲ್ಲಿ) ಜೀವಂತವಾದ ಉದಾಹರಣೆಯಾಗಿರುವುದರಿಂದ, ಇವರ ಬಗ್ಗೆ ಯೋಚಿಸುವುದು ಉತ್ತಮವಾಗಿರುತ್ತದೆ. ನಾವು ಹೀಗೆ ಯೋಚಿಸಬಹುದು, ಅವರ ಕಥೆಗಳು ಚೆನ್ನಾಗಿದೆ, ಆದರೆ ಹಾಗೆ ಯಾರಾದರೂ ಇರಬಲ್ಲರು ಎಂದು ನಾವು ನಂಬುತ್ತೇವೆಯೇ? ಗುರು ರಿಂಪೋಚೆ ಅವರು ಕಮಲದಿಂದ ಜನಿಸಿದರು ಎಂದು ನಾವು ಓದುತ್ತೇವೆ, ಆದರೆ ಹಾಗೆ ನಿಜವಾಗಿಯೂ ಒಬ್ಬರು ಜನಸಿದರು ಎಂದು ನಾವು ನಂಬುತ್ತೇವೆಯೇ? ಅದಕ್ಕೆ ಸಂಬಂಧಿಸುವುದು ಕಷ್ಟವಾಗಬಹುದು. ಆದರೆ, ಬದಲಾಗಿ, ಬುದ್ಧ ಮತ್ತು ಸಂಘದಂತೆಯೇ ಇರುವ ದಲೈ ಲಾಮಾ ಮತ್ತು ಈ ಮಹಾನ್ ಗುರುಗಳ ಅನುಕರಣೆಯಿಂದ, ನಾವು ಈ ನಕಾರಾತ್ಮಕ ಗುಣಗಳ ಅನುಪಸ್ಥಿತಿ ಮತ್ತು ಈ ಸಕಾರಾತ್ಮಕ ಗುಣಗಳ ಉಪಸ್ಥಿತಿಯ ಮೇಲೆ ಗಮನಹರಿಸಬಹುದು. ನಾವು ಕೂಡ ಇದನ್ನು ಮಾಡಲು ಸಮರ್ಥರಾಗಿದ್ದೇವೆ, ಇದು ಧರ್ಮವಾಗಿದೆ, ಮತ್ತು ಈ ನಿಜವಾದ ನಿಲುಗಡೆಗಳು ಮತ್ತು ನಿಜವಾದ ಮನಸ್ಸುಗಳ ಮಾರ್ಗಗಳು ಸಾಧಿಸಬಹುದಾದ ಗುರಿಗಳಾಗಿವೆ ಎಂದು ನಾವು ಅರಿತುಕೊಳ್ಳುತ್ತೇವೆ. ನಾವು ಇದನ್ನು ಮಾಡಬಲ್ಲೆವು ಮತ್ತು ನಮ್ಮ ಜೀವನದಲ್ಲಿ ನಾವು ಇರಿಸಬಹುದಾದ ಸುರಕ್ಷಿತ, ಸ್ಥಿರ ಮತ್ತು ಅರ್ಥಪೂರ್ಣ ನಿರ್ದೇಶನವನ್ನು ಇದು ನೀಡುತ್ತದೆ. 

ನಮ್ಮ ದೈನಂದಿನ ಜೀವನದಲ್ಲಿ ಆಶ್ರಯ ಅಥವಾ ಸುರಕ್ಷಿತ ನಿರ್ದೇಶನ 

ನಮ್ಮ ಜೀವನದಲ್ಲಿ ಬುದ್ಧ, ಧರ್ಮ ಮತ್ತು ಸಂಘದ ಈ ನಿರ್ದೇಶನವನ್ನು ಪ್ರಾಯೋಗಿಕ ಮಟ್ಟದಲ್ಲಿ ಇಡುವುದರ ಅರ್ಥವೇನು? ನಾವು ಯಾವಾಗಲೂ ನಮ್ಮ ಮೇಲೆ ಕೆಲಸ ಮಾಡುತ್ತಿದ್ದೇವೆ ಎಂದರ್ಥ. ಹಾಗೆ ಮಾಡುವುದರಿಂದ, ನಾವು ಅಸಮಾಧಾನಗೊಂಡಾಗ, ಕೋಪಗೊಂಡಾಗ ಅಥವಾ ನಾವು ಸ್ವಾರ್ಥದಿಂದ ವರ್ತಿಸಿದಾಗ, ನಾವು ಅದರ ಬಗ್ಗೆ ಹೆಚ್ಚು ಹೆಚ್ಚು ಜಾಗೃತರಾಗುತ್ತೇವೆ. ನಾವು ಅದನ್ನು ಗಮನಿಸುತ್ತೇವೆ. ಆಗ ನಾವು ನಮ್ಮೊಂದಿಗೆ ಬಹಳಾ ಕಠಿಣ ರೀತಿಯಲ್ಲಿ ವರ್ತಿಸುತ್ತೇವೆ ಎಂದಲ್ಲ," ನಾನು ತುಂಬಾ ಕೆಟ್ಟವನು ಅಥವಾ ನಾನು ತುಂಬಾ ಭಯಾನಕ ವ್ಯಕ್ತಿ, ಏಕೆಂದರೆ ನಾನು ಇನ್ನೂ ಕೋಪಗೊಳ್ಳುತ್ತೇನೆ" ಎಂದು ಯೋಚಿಸುತ್ತಾ ನಮ್ಮನ್ನು ಶಿಕ್ಷಿಸಿಕೊಳ್ಳುವುದೆಂದಲ್ಲ. ನಿಸ್ಸಂದೇಹವಾಗಿ ಇದು ಸರಿಯಾಗಿರುವುದಿಲ್ಲ, ಮತ್ತು ಇನ್ನೊಂದು ಮಿತಿಯಲ್ಲೂ ಯೋಚಿಸುವುದು, ಅಂದರೆ ಇವೆಲ್ಲ ಸಾಮಾನ್ಯವೇ ಎಂದು ಯೋಚಿಸುವುದು ಕೂಡ ಸರಿಯಾಗಿರುವುದಿಲ್ಲ. ಆ ರೀತಿಯಾಗಿ ಯೋಚಿಸಿದರೆ, ನಾವು ಅದನ್ನು ಕೇವಲ ಗಮನಿಸಿ, ಹೀಗೆ ಹೇಳುತ್ತೇವೆ, "ಹಾಗಾದರೆ ಏನು? ನಾನು ಹೇಗಿದ್ದೆನೋ ಹಾಗೆಯೇ ಇರುತ್ತೇನೆ.” ಇದು ಕೂಡ ಸರಿಯಾಗಿರುವುದಿಲ್ಲ. ಆದರೆ ನಮ್ಮ ಗೊಂದಲದ ಭಾವನೆಗಳ ಬಗ್ಗೆ ತಿಳಿಯುವುದು ಮತ್ತು ನಾವು ಅವುಗಳನ್ನು ನಿವಾರಿಸಲು ಬಯಸುವ ವಿಷಯಗಳೆಂದು ಪರಿಗಣಿಸುವುದೂ ಸಹ, ಅವುಗಳ ಶಕ್ತಿಯನ್ನು ದುರ್ಬಲಗೊಳಿಸುತ್ತದೆ. 

ಇಲ್ಲಿನ ಮುಖ್ಯ ಅಂಶವೆಂದರೆ, ನಮ್ಮ ದೈನಂದಿನ ಜೀವನದಲ್ಲಿ ಈ ಗೊಂದಲದ ನಕಾರಾತ್ಮಕ ವಿಷಯಗಳು ಎದ್ದು ಬಂದಾಗ ಮತ್ತು ನಾವು ಅವುಗಳನ್ನು ಗಮನಿಸಿದಾಗ, ಅವುಗಳನ್ನು ಜಯಿಸಲು, ಕೆಲವು ವಿಧಾನಗಳನ್ನು ಕಲಿಯುವುದು, ಅತ್ಯಂತ ಸೂಕ್ತವಾದ ಹೆಜ್ಜೆಯಾಗಿರುತ್ತದೆ. ನಮಗೆ ಕೋಪ ಬಂದರೆ, ತಾಳ್ಮೆಯನ್ನು ಬೆಳೆಸಿಕೊಳ್ಳಬೇಕು ಎಂಬುದನ್ನು ನಾವು ಅರಿತುಕೊಳ್ಳಬೇಕು. ಯಾರಾದರೂ ನನ್ನೊಂದಿಗೆ ಕೆಟ್ಟದಾಗಿ ನಡೆದುಕೊಳ್ಳುತ್ತಿದ್ದರೆ, ಅದು ಅವರು ಬಹಳಾ ಅತೃಪ್ತರಾಗಿರುವರೆಂದು ಸೂಚಿಸುತ್ತದೆ. ಅವರಿಗೆ ಯಾವುದರಿಂದಲೋ ತೊಂದರೆಯಾಗುತ್ತಿದೆ. ಕೋಪಗೊಳ್ಳುವ ಬದಲು ಅವರಿಗಾಗಿ ಸ್ವಲ್ಪ ಸಹಾನುಭೂತಿಯನ್ನು ತೋರಿಸಿ. 

ಸ್ಪಷ್ಟವಾಗಿ ಹೇಳಲು, ಒಂದು ಕಡೆ, ಕೋಪಗೊಂಡಿದ್ದಕ್ಕಾಗಿಯೇ ನಮ್ಮ ಮೇಲೆ ಕೋಪಗೊಳ್ಳಬಾರದು. ಮತ್ತೊಂದೆಡೆ, ನಾವು ನಮ್ಮನ್ನು ಮಗುವಿನಂತೆ ಪರಿಗಣಿಸಿ, ಎಲ್ಲವೂ ಸರಿಯಾಗಿದೆ, ಇಲ್ಲಿ ಯಾವುದೇ ತಪ್ಪಿಲ್ಲ ಎಂದು ಕಣ್ಣು ಮುಚ್ಚುತ್ತಿಲ್ಲ. ಬದಲಿಗೆ ನಾವು ನಮ್ಮ ಕೋಪವನ್ನು ನಿವಾರಿಸಲು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತೇವೆ, ಏಕೆಂದರೆ ಹಾಗೆ ಮಾಡಲು ಸಾಧ್ಯವಿದೆ ಎಂದು ನಾವು ಅರಿತುಕೊಳ್ಳುತ್ತೇವೆ. ಬಹುಶಃ ನಾವು ಅದನ್ನು ಅಷ್ಟು ಬೇಗ ನಿವಾರಿಸಲು ಸಾಧ್ಯವಾಗುವುದಿಲ್ಲ, ಖಂಡಿತವಾಗಿಯೂ, ನಾವು ಅದನ್ನು ಬೇಗನೆ ನಿವಾರಿಸಲು ಸಾಧ್ಯವಾಗುವುದಿಲ್ಲ, ಆದರೆ ಈ ದಿಕ್ಕಿನಲ್ಲಿ, ನಮ್ಮ ಜೀವನದುದ್ದಕ್ಕೂ ಕೆಲಸ ಮಾಡಬೇಕೆಂದು ನಾವು ಬಯಸಬೇಕಾಗಿದೆ. ನಾವು ಇದನ್ನು ಏಕೆ ಮಾಡಲಿದ್ದೇವೆ ಎಂದರೆ ನಮಗೆ ಇವನ್ನು ನಿವಾರಿಸಲು ನಿಜವಾಗಿಯೂ ಸಾಧ್ಯ ಎಂದು ತಿಳಿದಿದೆ. ಈ ದಿಕ್ಕಿನಲ್ಲಿ ಸಾಗುವುದು ಆದರ್ಶವಾದಿ ಚಿಂತನೆಯ ವ್ಯರ್ಥ ಪ್ರಯತ್ನವಾಗಿರುವುದಿಲ್ಲ. 

ನಾವು ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿರುವಾಗ ಮತ್ತು ನಮಗೆ ಸ್ವಲ್ಪ ತಾಳ್ಮೆ, ಅಥವಾ ಸ್ವಲ್ಪ ತಿಳುವಳಿಕೆ, ಅಥವಾ ಸ್ವಲ್ಪ ಕರುಣೆಯ ಭಾವನೆ ಇದ್ದರೆ, ಇದನ್ನು ಹೆಚ್ಚಿಸಬಹುದು ಎಂದು ನಾವು ಅರಿತುಕೊಳ್ಳಬೇಕು. ನಾವು ಇದನ್ನು ಮತ್ತಷ್ಟು ಪ್ರಬಲಗೊಳಿಸಬಹುದು. ಇದು ಸಾದ್ಯವಾಗಿರುತ್ತದೆ. ಇತರರು ಹೀಗೆ ಮಾಡಿದ್ದಾರೆ, ಹಾಗಾಗಿ ನಾವು ಕೂಡ ಹೀಗೆ ಮಾಡಬಹುದು. ಇತರರಲ್ಲಿ ವಿಶೇಷವಾದದ್ದೇನೂ ಇಲ್ಲ ಮತ್ತು ನಮ್ಮಲ್ಲಿಯೂ ವಿಶೇಷವಾದದ್ದು ಯಾವುದೂ ಇಲ್ಲ. ಇದು ನಮ್ಮ ಆಶ್ರಯವಾಗಿದೆ, ಇದು ಜೀವನದಲ್ಲಿನ ನಮ್ಮ ಸುರಕ್ಷಿತ ದಿಕ್ಕಾಗಿದೆ, ಏಕೆಂದರೆ ನಾವು ಈ ದಿಕ್ಕಿನಲ್ಲಿ ಮುಂದೆ ಸಾಗಿದಂತೆ, ನಾವು ನಮ್ಮನ್ನು ಹೆಚ್ಚಿನ ಸಮಸ್ಯೆಗಳಿಂದ ಮತ್ತು ತೊಂದರೆಗಳಿಂದ ರಕ್ಷಿಸಿಕೊಳ್ಳುತ್ತೇವೆ. 

ಸಾರಾಂಶ 

ಆಶ್ರಯ ಎಂದರೆ ಏನು, ಈ ಸುರಕ್ಷಿತ ನಿರ್ದೇಶನ ಎಂದರೇನು ಮತ್ತು ಅದನ್ನು ನಮ್ಮ ಜೀವನದಲ್ಲಿ ಇರಿಸುವ ಕಾರಣಗಳು ಯಾವುವು ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಇದು ಬೌದ್ಧ ಆಚರಣೆಯಲ್ಲಿನ ಅತ್ಯಂತ ಮುಖ್ಯವಾದ, ಮೂಲಭೂತ ವಿಷಯವಾಗಿರುತ್ತದೆ. ಅನೇಕರು ಇದನ್ನು ಕ್ಷುಲ್ಲಕಗೊಳಿಸಲು ಪ್ರಯತ್ನಿಸುತ್ತಾರೆ, ಅದು ಬಹಳಾ ಅವಮಾನಕರವಾದ ವಿಷಯವಾಗಿದೆ. ನಮ್ಮ ಜೀವನದಲ್ಲಿ ನಾವು ಈ ದಿಕ್ಕನ್ನು ಇರಿಸುತ್ತೇವೆಯೇ ಇಲ್ಲವೇ ಎಂಬುದು ನಮ್ಮ ಜೀವನದಲ್ಲಿನ ಅತ್ಯಂತ ಮಹತ್ವದ ಬದಲಾವಣೆ ಮತ್ತು ವ್ಯತ್ಯಾಸವನ್ನು ಉಂಟುಮಾಡುತ್ತದೆ. ಆಶ್ರಯ ಎಂದರೆ ನಾವು ಸಮಾರಂಭಕ್ಕೆ ಹೋಗಿ, ನಮ್ಮ ಕೂದಲಿನ ಚಿಕ್ಕ ತುಂಡನ್ನು ಕತ್ತರಿಸಿ, ಟಿಬೆಟಿಯನ್ ಹೆಸರನ್ನು ಪಡೆದುಕೊಂಡು, ನಮ್ಮ ಕುತ್ತಿಗೆಗೆ ಕೆಂಪು ದಾರವನ್ನು ಧರಿಸಿ, ಕೂಟವನ್ನು ಸೇರಿಕೊಂಡೆವು ಎಂಬುದಾಗಿರುವುದಿಲ್ಲ. ಇದು ಇಡೀ ಸಮಸ್ಯೆಯನ್ನು ಕ್ಷುಲ್ಲಕಗೊಳಿಸುತ್ತಿದೆ ಮತ್ತು ಅದನ್ನು ಸಂಪೂರ್ಣವಾಗಿ ಅರ್ಥಹೀನವಾಗಿಸುತ್ತದೆ. 

ನಾವೆಲ್ಲರೂ ನಮ್ಮನ್ನು ಕೇಳಿಕೊಳ್ಳಬೇಕಾದ ಪ್ರಶ್ನೆಯೆಂದರೆ: “ಆಶ್ರಯ ಪಡೆದಿರುವ ಮತ್ತು ಬೌದ್ಧನಾದ ನಾನು, ನನ್ನ ಜೀವನದಲ್ಲಿ ಈ ದಿಕ್ಕನ್ನು ಪ್ರಮಾಣಿಕವಾಗಿ ಅನುಸರಿಸುತ್ತಿದ್ದೇನೆಯೇ? ನನ್ನ ಜೀವನದಲ್ಲಿ, ಕೂಟವನ್ನು ಸೇರುವುದನ್ನು ಹೊರತುಪಡಿಸಿ, ಇದರ ಬೇರೆ ಮಹತ್ವವಿದೆಯೇ?" ಆಶ್ರಯ ಪಡೆಯುವುದರಿಂದ ನಮ್ಮ ಜೀವನದಲ್ಲಿ ಗಮನಾರ್ಹ ಬದಲಾವಣೆಗಳು ಆಗಿದಿದ್ದರೆ, ಇದರ ಮೇಲೆ ನಾವು ಪ್ರಮಾಣಿಕವಾಗಿ ಕೆಲಸಮಾಡಬೇಕಾಗಿದೆ. ಈ ಅಡಿಪಾಯವಿಲ್ಲದೆ ಯಾವುದೇ ಸುಧಾರಿತ ಅಭ್ಯಾಸಗಳನ್ನು ಅನುಸರಿಸಲು ಪ್ರಯತ್ನಿಸುವುದರಲ್ಲಿ ಯಶಸ್ವಿಯಾಗುವುದು ದೂರದ ಮಾತಾಗಿರುತ್ತದೆ.

Top