ಪರಮಪೂಜ್ಯ ದಲೈ ಲಾಮಾ ಅವರ ಜೀವನಕ್ಕೆ ಸಂಭಾವ್ಯ ಅಪಾಯ
ಸೆರ್ಕಾಂಗ್ ರಿನ್ಪೋಚೆ ಅವರ ಸಾವು ಅವರ ಜೀವನಕ್ಕಿಂತ ಹೆಚ್ಚು ಗಮನಾರ್ಹವಾಗಿತ್ತು. ಜುಲೈ 1983 ರಲ್ಲಿ, ರಿನ್ಪೋಚೆ ಸ್ಪಿತಿಯಲ್ಲಿರುವ ಟಾಬೊ ಮಠದಲ್ಲಿ ದಲೈ ಲಾಮಾ ಅವರಿಗೆ ಕಾಲಚಕ್ರ ಸಬಲೀಕರಣವನ್ನು ನೀಡುವ ಕಾರ್ಯಕ್ರಮವನ್ನು ಆಯೋಜಿಸಿದರು. ನಂತರ, ರಿನ್ಪೋಚೆ ಸ್ಥಳೀಯ ವೃದ್ಧ ಸನ್ಯಾಸಿ ಕಚೆನ್ ಡ್ರುಬ್ಗೆಲ್ಗೆ, ಟಿಬೆಟಿಯನ್ ಜ್ಯೋತಿಷ್ಯದ ಪ್ರಕಾರ ಪರಮಪೂಜ್ಯ ದಲೈ ಲಾಮಾ ಅವರ ಅಡಚಣೆಯಿರುವ ವರ್ಷ ಎಂದು ಹೇಳಿದರು. ಪವಿತ್ರ ದಲೈ ಲಾಮಾ ಅವರ ಜೀವ ಅಪಾಯದಲ್ಲಿದೆ. ಈ ಅಡೆತಡೆಗಳನ್ನು ತಮ್ಮ ಮೇಲೆಯೇ ವರ್ಗಾಯಿಸಿಕೊಳ್ಳುವುದು ಒಳ್ಳೆಯದು. ಇದನ್ನು ಯಾರಿಗೂ ಹೇಳಬೇಡಿ ಎಂದು ಅವರು ವೃದ್ಧ ಸನ್ಯಾಸಿಗೆ ಹೇಳಿದರು.
ನಂತರ ರಿನ್ಪೋಚೆ ಮೂರು ವಾರಗಳ ಕಾಲ ಕಠಿಣ ಧ್ಯಾನದ ಏಕಾಂತವಾಸವನ್ನು ಪ್ರವೇಶಿಸಿದರು. ನಂತರ, ಸೈನಿಕರಿಗೆ ಬೋಧಿಸತ್ವ ನಡವಳಿಕೆಯಲ್ಲಿ ತೊಡಗಿಸಿಕೊಳ್ಳುವುದನ್ನು ಕಲಿಸಲು ಹತ್ತಿರದ ಟಿಬೆಟಿಯನ್ ಸೇನಾ ಶಿಬಿರಕ್ಕೆ ತೆರಳಿದರು. ರಿನ್ಪೋಚೆ ದೀರ್ಘಕಾಲದವರೆಗೆ ನಿಧಾನವಾಗಿ ಸಂಪೂರ್ಣ ಪಠ್ಯವನ್ನು ಕಲಿಸಬೇಕಾಗಿತ್ತು, ಆದರೆ ಅದನ್ನು ತ್ವರಿತವಾಗಿ ಪೂರ್ಣಗೊಳಿಸಿದರು. ಯೋಜಿಸಿದ್ದಕ್ಕಿಂತ ಹಲವು ದಿನ ಮುಂಚಿತವಾಗಿಯೇ ಶಿಬಿರದಿಂದ ಹೊರಟ ಅವರು, ತಾವು ಹೋಗಬೇಕಾದ ವಿಶೇಷವಾದ ಸ್ಥಳವಿದೆ ಎಂದು ವಿವರಿಸಿದರು. ಆಗಸ್ಟ್ 29, 1983 ರಂದು, ಪರಮಪೂಜ್ಯರು ಸ್ವಿಟ್ಜರ್ಲೆಂಡ್ನ ಜಿನೀವಾಕ್ಕಾಗಿ ಹಾರುತ್ತಿದ್ದರು, ಅದೇ ಸಮಯದಲ್ಲಿ ಪ್ಯಾಲೆಸ್ಟೈನ್ ವಿಮೋಚನಾ ಸಂಸ್ಥೆಯ ಅಧ್ಯಕ್ಷ ಯಾಸರ್ ಅರಾಫತ್ ಕೂಡ ಅಲ್ಲಿಗೆ ಆಗಮಿಸುವ ನಿರೀಕ್ಷೆಯಿತ್ತು. ಅರಾಫತ್ ವಿರುದ್ಧ ನಿರ್ದೇಶಿಸಲಾದ ಸಂಭಾವ್ಯ ಭಯೋತ್ಪಾದನಾ ಕೃತ್ಯದ ಬಗ್ಗೆ ಪೊಲೀಸ್ ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದರು. ಪರಮಪೂಜ್ಯರ ಭದ್ರತೆಯನ್ನು ಖಾತರಿಪಡಿಸಲು ಸಾಧ್ಯವಿಲ್ಲ ಎಂದು ಅವರು ಎಚ್ಚರಿಸಿದರು.
ಪರಮಪೂಜ್ಯರ ಜೀವಕ್ಕೆ ಬರುವ ಅಡೆತಡೆಗಳನ್ನು ತಮ್ಮ ಮೇಲೆಯೇ ತೆಗೆದುಕೊಳ್ಳುವುದರ ಸಿದ್ಧತೆ
ರಿನ್ಪೋಚೆ ಮತ್ತು ನ್ಗಾವಾಂಗ್, ಸೇನಾ ಶಿಬಿರದಿಂದ ಜೀಪಿನಲ್ಲಿ ವೇಗವಾಗಿ ಹೊರಟು, ಟಾಬೊ ಮಠದಲ್ಲಿ ಸ್ವಲ್ಪ ಸಮಯ ನಿಂತರು. ರಿನ್ಪೋಚೆ ಕಚೆನ್ ಡ್ರುಬ್ಗಿಯೆಲ್ ಅವರನ್ನು ತಮ್ಮೊಂದಿಗೆ ಸೇರಲು ಕೇಳಿಕೊಂಡರು, ಆದರೆ ವೃದ್ಧ ಸನ್ಯಾಸಿ ತನ್ನ ನಿಲುವಂಗಿಯನ್ನು ಈಗ ತಾನೆ ತೊಳೆದಿದ್ದೇನೆ ಎಂದು ವಿವರಿಸಿದರು. ಪರವಾಗಿಲ್ಲ, ತಮ್ಮ ಒಳವಸ್ತ್ರದಲ್ಲಿಯೇ ಬರಬೇಕೆಂದು ರಿನ್ಪೋಚೆ ಹೇಳಿದರು. ಅವರು ತಮ್ಮ ನಿಲುವಂಗಿಯನ್ನು ಒಣಗಿಸಲು ಜೀಪಿನ ಮೇಲ್ಭಾಗಕ್ಕೆ ಕಟ್ಟಬಹುದು ಎಂದು ಹೇಳಿದರು, ಆ ವೃದ್ಧ ಸನ್ಯಾಸಿ ಹಾಗೆಯೇ ಮಾಡಿದರು.
ಅವರು ಸ್ಪಿತಿ ಕಣಿವೆಯೊಳಗೆ ಆಳವಾಗಿ ಕಾರಿನಲ್ಲಿ ಹೋಗುತ್ತಿದ್ದಂತೆ, ರಿನ್ಪೋಚೆ ನ್ಗಾವಾಂಗ್ಗೆ, "ಓಂ ಮಣಿ ಪದ್ಮೇ ಹಮ್" ಎಂಬ ಕರುಣೆಯ ಮಂತ್ರವನ್ನು ನಿರಂತರವಾಗಿ ಪಠಿಸುವಂತೆ ಯಾವಾಗಲೂ ಹೇಳಿದರೂ ಅದನ್ನು ನ್ಗಾವಾಂಗ್ ಎಂದಿಗೂ ಗಂಭೀರವಾಗಿ ಪರಿಗಣಿಸಲಿಲ್ಲ ಎಂದು ಹೇಳಿದರು. ಇದು ಅವರ ವಿದಾಯ ಸಲಹೆಯಾಗಿತ್ತು.
ನಂತರ ಅವರು ಕೈ ಮಠದಲ್ಲಿ ನಿಲ್ಲಿಸಿದರು. ರಿನ್ಪೋಚೆ ಕಾಣಿಕೆಗಳನ್ನು ಅರ್ಪಿಸಲು ಬಯಸಿದ್ದರು. ತಡವಾಗಿದೆ ಮತ್ತು ಅವರು ಬೆಳಿಗ್ಗೆ ಹೋಗಬಹುದು ಎಂದು ನ್ಗಾವಾಂಗ್ ಹೇಳಿದರೂ, ರಿನ್ಪೋಚೆ ಒತ್ತಾಯಿಸಿದರು. ಹೆಚ್ಚಾಗಿ ರಿನ್ಪೋಚೆ ನಿಧಾನವಾಗಿ ಮತ್ತು ಕಷ್ಟದಿಂದ ನಡೆಯುತ್ತಿದ್ದರು. ಆದರೆ ಕೆಲವೊಮ್ಮೆ, ರಿನ್ಪೋಚೆಗೆ ಓಡಲು ಸಾಧ್ಯವಾಗುತ್ತಿತ್ತು. ಉದಾಹರಣೆಗೆ, ಒಮ್ಮೆ ವಿಮಾನ ನಿಲ್ದಾಣದಲ್ಲಿ, ನಾವು ವಿಮಾನಕ್ಕಾಗಿ ತಡವಾಗಿದ್ದಾಗ, ರಿನ್ಪೋಚೆ ಬಹಳಾ ವೇಗವಾಗಿ ಓಡಿದ್ದರು, ನಮ್ಮಲ್ಲಿ ಯಾರಿಗೂ ಅವರನ್ನು ಹಿಂಬಾಲಿಸಲು ಸಾಧ್ಯವಾಗಲಿಲ್ಲ. ಅದೇ ರೀತಿ, ಒಮ್ಮೆ ಬೋಧ್ ಗಯಾದಲ್ಲಿ, ಬುದ್ಧನ ಪದಗಳ ನೂರು ಸಂಪುಟಗಳ ಟಿಬೆಟಿಯನ್ ಅನುವಾದದ (ಕಂಗ್ಯೂರ್) ಸಾಮೂಹಿಕ ಪಠಣದಲ್ಲಿ ಪರಮಪೂಜ್ಯರು ಭಾಗವಹಿಸುತ್ತಿದ್ದಾಗ, ರಿನ್ಪೋಚೆ ಪರಮಪೂಜ್ಯರ ಪಕ್ಕದಲ್ಲಿ, ನನ್ನೊಂದಿಗೆ ಕುಳಿತರು. ಗಾಳಿಯು ಪರಮಪೂಜ್ಯರ ಸಡಿಲ ಎಲೆಯ ಪಠ್ಯದ ಒಂದು ಪುಟವನ್ನು ತನ್ನೊಡನೆ ತೆಗೆದುಕೊಂಡಾಗ, ರಿನ್ಪೋಚೆ ತತಕ್ಷಣವೇ ತಮ್ಮ ಆಸನದಿಂದ ಹಾರಿ ಅದನ್ನು ನೆಲದಿಂದ ಎತ್ತಿಕೊಂಡರು. ಸಾಮಾನ್ಯವಾಗಿ, ಅವರಿಗೆ ಎದ್ದೇಳಲು ಸಹಾಯದ ಅಗತ್ಯವಿತ್ತು. ಈ ಕೈ ಮಠದ ಸಂದರ್ಭದಲ್ಲಿಯೂ ಕೂಡ, ರಿನ್ಪೋಚೆ ಕಿರಿದಾದ ಪರ್ವತದ ಹಾದಿಯಲ್ಲಿ ವೇಗವಾಗಿ, ಸಹಾಯವಿಲ್ಲದೆ ಓಡಿದರು.
ರಿನ್ಪೋಚೆ ತಮ್ಮ ಕಾಣಿಕೆಗಳನ್ನು ಸಲ್ಲಿಸಿದ ನಂತರ, ಕೈ ಸನ್ಯಾಸಿಗಳು ಅವರನ್ನು ಅಲ್ಲಿ ರಾತ್ರಿ ಕಳೆಯಲು ವಿನಂತಿಸಿದರು. ರಿನ್ಪೋಚೆ ನಿರಾಕರಿಸಿದರು, ಆ ರಾತ್ರಿ ಕೈಬರ್ ಗ್ರಾಮವನ್ನು ತಲುಪಬೇಕು ಎಂದು ಹೇಳಿದರು. ಅವರನ್ನು ಮತ್ತೆ ನೋಡಲು ಬಯಸಿದರೆ, ಅವರು ಅಲ್ಲಿಗೆ ಹೋಗಬೇಕಾಗಿತ್ತು. ನಂತರ ಏನಾಗಲಿದೆ ಎಂಬುದರ ಪರೋಕ್ಷ ಸಂದೇಶವನ್ನು ನೀಡಿ ಅವರು ಬೇಗನೆ ಹೊರಟುಹೋದರು.
ರಿನ್ಪೋಚೆ ಮತ್ತು ಅವರ ತಂಡವು ಕೈಬರ್ನ ಎತ್ತರದ ಹಳ್ಳಿಯನ್ನು ತಲುಪಿದಾಗ, ಅವರಿಗೆ ಪರಿಚಿವಾದ ರೈತನ ಮನೆಗೆ ಹೋದರು. ಆ ವ್ಯಕ್ತಿ ಇನ್ನೂ ತನ್ನ ಹೊಲಗಳಲ್ಲಿ ಕೆಲಸ ಮಾಡುತ್ತಿದ್ದನು ಮತ್ತು ಯಾವುದೇ ಅತಿಥಿಗಳನ್ನು ನಿರೀಕ್ಷಿಸಿರಲಿಲ್ಲ. ಮುಂದಿನ ವಾರ ಅಥವಾ ಅದಕ್ಕಿಂತ ಹೆಚ್ಚು ಕಾಲ ಅವರು ಕಾರ್ಯನಿರತರಾಗಿದ್ದಾರೆಯೇ ಎಂದು ರಿನ್ಪೋಚೆ ಕೇಳಿದರು. ರೈತ ಇಲ್ಲ ಎಂದು ಹೇಳಿದನು ಮತ್ತು ರಿನ್ಪೋಚೆಯನ್ನು ತಂಗಲು ಆಹ್ವಾನಿಸಿದನು.
ಧ್ಯಾನದಲ್ಲಿ ರಿನ್ಪೋಚೆ ನಿಧನರಾದ ಸಂಜೆ
ತಮ್ಮನ್ನು ತಾವು ಶುಚಿಯಾಗಿಸಿ, ಸ್ವಲ್ಪ ಮೊಸರು ತಿಂದ ನಂತರ, ರಿನ್ಪೋಚೆ ತ್ಸೋಂಗ್ಖಾಪಾ ಅವರ ' ಅರ್ಥೈಸಬಹುದಾದ ಮತ್ತು ನಿರ್ಣಾಯಕ ಅರ್ಥಗಳ ಅತ್ಯುತ್ತಮ ವಿವರಣೆಯ ಸಾರ (ದಿ ಎಸೆನ್ಸ್ ಆಫ್ ಎಕ್ಸಲೆಂಟ್ ಎಕ್ಸ್ಪ್ಲನೇಷನ್ ಆಫ್ ಇಂಟರ್ಪ್ರಿಟೇಬಲ್ ಅಂಡ್ ಡೆಫಿನಿಟಿವ್ ಮೀನಿಂಗ್ಸ್)' ಅನ್ನು ನೆನಪಿನಿಂದ ಪಠಿಸಿದರು, ಇದು ಅವರಿಗೆ ಸುಮಾರು ಎರಡು ಗಂಟೆಗಳನ್ನು ತೆಗೆದುಕೊಂಡಿತು. ಅವರು ಮುಗಿಸಿದ ನಂತರ, ನ್ಗಾವಾಂಗ್ಗೆ ಕರೆ ಮಾಡಿ ತಮಗೆ ಹುಷಾರಿಲ್ಲ ಎಂದು ಹೇಳಿದರು. ನಂತರ ಅವರು ನ್ಗಾವಾಂಗ್ನ ಭುಜದ ಮೇಲೆ ತಲೆ ಇಟ್ಟರು – ಇದು ರಿನ್ಪೋಚೆ ಸಾಮಾನ್ಯವಾಗಿ ಎಂದಿಗೂ ಮಾಡದ ವಿಷಯ. ಈಗ ಅದರ ಬಗ್ಗೆ ಯೋಚಿಸಿದರೆ, ಇದು ಅವರ ವಿದಾಯ ಹೇಳುವ ರೀತಿಯಾಗಿತ್ತು. ಇದೆಲ್ಲದಕ್ಕೂ ಮೊದಲು ಅವರು ಚೊಂಡ್ಜೆಲಾ ಅವರನ್ನು ಸಿಮ್ಲಾಗೆ ಕಳುಹಿಸಿದ್ದರು, ಏಕೆಂದರೆ ಇದೆಲ್ಲವನ್ನು ನೋಡಲು ಚೊಂಡ್ಜೆಲಾಗೆ ನಿಸ್ಸಂದೇಹವಾಗಿ ಬಹಳಾ ಕಷ್ಟವಾಗುತ್ತಿತ್ತು. ಅವರು ಆರು ವರ್ಷ ವಯಸ್ಸಿನಿಂದಲೂ ರಿನ್ಪೋಚೆ ಜೊತೆಗಿದ್ದರು ಮತ್ತು ರಿನ್ಪೋಚೆ ಅವರನ್ನು ತಮ್ಮ ಮಗನಂತೆ ಬೆಳೆಸಿದ್ದರು.
ನ್ಗಾವಾಂಗ್ ಅವರಿಗೆ ವೈದ್ಯರು ಅಥವಾ ಔಷಧಿ ಬೇಕೇ ಎಂದು ಕೇಳಿದರು, ಆದರೆ ರಿನ್ಪೋಚೆ ಇಲ್ಲ ಎಂದು ಹೇಳಿದರು. ನ್ಗಾವಾಂಗ್, ಅವರಿಗಾಗಿ ಬೇರೆ ಏನಾದರೂ ಮಾಡಬಹುದೇ ಎಂದು ಕೇಳಿದರು, ಮತ್ತು ರಿನ್ಪೋಚೆ ಅವರನ್ನು ಶೌಚಾಲಯಕ್ಕೆ ನಡೆಯಲು ಸಹಾಯ ಮಾಡುವಂತೆ ಕೇಳಿದರು, ಅವರು ಹಾಗೆ ಮಾಡಿದರು. ನಂತರ ರಿನ್ಪೋಚೆ ನ್ಗಾವಾಂಗ್ಗೆ ತಮ್ಮ ಹಾಸಿಗೆಯನ್ನು ತಯಾರಿಸಲು ಹೇಳಿದರು. ಅವರು ಯಾವಾಗಲೂ ಮಲಗುತ್ತಿದ್ದ ಹಳದಿ ಹಾಳೆಯ ಬದಲಿಗೆ, ರಿನ್ಪೋಚೆ ನ್ಗಾವಾಂಗ್ಗೆ ಬಿಳಿ ಹಾಳೆಯನ್ನು ಹಾಸುವಂತೆ ಹೇಳಿದರು. ತಾಂತ್ರಿಕ ಪದ್ಧತಿಯಲ್ಲಿ, ಹಳದಿ ಬಣ್ಣವನ್ನು ಇತರರಿಗೆ ಸಹಾಯ ಮಾಡುವ ಸಾಮರ್ಥ್ಯವನ್ನು ಹೆಚ್ಚಿಸುವ ಆಚರಣೆಗಳಿಗಾಗಿ ಬಳಸಲಾಗುತ್ತದೆ, ಆದರೆ ಬಿಳಿ ಬಣ್ಣವನ್ನು ಅಡೆತಡೆಗಳನ್ನು ಶಮನಗೊಳಿಸಲು ಬಳಸಲಾಗುತ್ತದೆ.
ನಂತರ ರಿನ್ಪೋಚೆ ನ್ಗಾವಾಂಗ್ ಮತ್ತು ಕಚೆನ್ ಡ್ರುಬ್ಗಿಯೆಲ್ ಅವರನ್ನು ತಮ್ಮ ಮಲಗುವ ಕೋಣೆಗೆ ಬರಲು ಕೇಳಿಕೊಂಡರು, ಮತ್ತು ಅವರು ಹಾಗೆ ಮಾಡಿದರು. ನಂತರ ರಿನ್ಪೋಚೆ ಬುದ್ಧನ ಮಲಗುವ ಭಂಗಿಯಲ್ಲಿ ತನ್ನ ಬಲಭಾಗಕ್ಕೆ ಬಾಗಿ ಮಲಗಿದರು. ಅವರು ಸಾಮಾನ್ಯವಾಗಿ ನಿದ್ದೆ ಮಾಡುವ ಸಮಯದಲ್ಲಿ ತಮ್ಮ ತೋಳುಗಳನ್ನು ತಮ್ಮ ಬದಿಯಲ್ಲಿ, ಎಡಭಾಗದಲ್ಲಿ ಮತ್ತು ಮುಖದ ಕೆಳಗೆ ಬಲಭಾಗದಲ್ಲಿ ಹಿಡಿದಿಟ್ಟುಕೊಳ್ಳುವ ಬದಲು, ಅವರು ತಾಂತ್ರಿಕದ ಅಪ್ಪಿಕೊಳ್ಳುವ ಸನ್ನೆಯಲ್ಲಿ ಹಿಡಿದಿಟ್ಟುಕೊಂಡರು. ನಂತರ ಅವರು ಆಳವಾಗಿ ಉಸಿರಾಡಲು ಪ್ರಾರಂಭಿಸಿದರು ಮತ್ತು ಹಾಗೆಯೇ ನಿಧನರಾದರು, "ಕೊಡುವುದು ಮತ್ತು ತೆಗೆದುಕೊಳ್ಳುವುದು" (ಟಾಂಗ್ಲೆನ್) ಧ್ಯಾನ ಪ್ರಕ್ರಿಯೆಯ ಮೂಲಕ. ಅವರಿಗೆ ಅರವತ್ತೊಂಬತ್ತು ವರ್ಷ ವಯಸ್ಸಾಗಿತ್ತು ಮತ್ತು ಸಂಪೂರ್ಣವಾಗಿ ಆರೋಗ್ಯವಾಗಿದ್ದರು. ಎರಡು ತಿಂಗಳ ಹಿಂದೆ ನಾನು ಅವರನ್ನು ದೆಹಲಿಯಲ್ಲಿ ಸಂಪೂರ್ಣ ವೈದ್ಯಕೀಯ ಪರೀಕ್ಷೆಗಾಗಿ ಕರೆದೊಯ್ದಿದ್ದೆ.
ಅದೇ ಕ್ಷಣದಲ್ಲಿ, ಪರಮಪೂಜ್ಯರು ಜಿನೀವಾಕ್ಕೆ ಹೋಗುವ ವಿಮಾನದಲ್ಲಿದ್ದಾಗ, ಅಧ್ಯಕ್ಷ ಅರಾಫತ್ ಇದ್ದಕ್ಕಿದ್ದಂತೆ ತಮ್ಮ ಮನಸ್ಸನ್ನು ಬದಲಾಯಿಸಿದರು ಮತ್ತು ಸ್ವಿಟ್ಜರ್ಲೆಂಡ್ಗೆ ತಮ್ಮ ಭೇಟಿಯನ್ನು ಮುಂದೂಡಲು ನಿರ್ಧರಿಸಿದರು. ವಿಮಾನ ನಿಲ್ದಾಣದಲ್ಲಿ ಭಯೋತ್ಪಾದಕ ಘಟನೆಯ ಅಪಾಯವನ್ನು ಹೀಗೆ ತಪ್ಪಿಸಲಾಯಿತು. ಪರಮಪೂಜ್ಯರ ಜೀವಕ್ಕಾಗಿ ಇರುವ ಅಪಾಯ ದೂರವಾಗಿದ್ದರೂ, ಪರಮಪೂಜ್ಯರ ವಾಹನವು ವಿಮಾನ ನಿಲ್ದಾಣದಿಂದ ಹೋಟೆಲ್ಗೆ ಹೋಗುವ ದಾರಿಯಲ್ಲಿ ಕಳೆದುಹೋಯಿತು. ಆದರೆ ಪರಮಪೂಜ್ಯರಿಗೆ ಯಾವುದೇ ಹಾನಿಯುಂಟಾಗಲಿಲ್ಲ. ಸೆರ್ಕಾಂಗ್ ರಿನ್ಪೋಚೆ ಪರಮಪೂಜ್ಯರ ಜೀವಕ್ಕೆ ಅಡ್ಡಿಯಾಗಿದ್ದನ್ನು ಯಶಸ್ವಿಯಾಗಿ ಸ್ವೀಕರಿಸಿದರು ಮತ್ತು ಪ್ರತಿಯಾಗಿ ತಮ್ಮದೇ ಆದ ಜೀವ ಶಕ್ತಿಯನ್ನು ನೀಡಿದರು.
ಅಡೆತಡೆಗಳನ್ನು ಎದುರಿಸಲು ರಿನ್ಪೋಚೆ ಬಳಸಿದ ಕೊಡುವುದು ಮತ್ತು ತೆಗೆದುಕೊಳ್ಳುವುದರ ಧ್ಯಾನ
ಕೊಡುವುದು ಮತ್ತು ತೆಗೆದುಕೊಳ್ಳುವುದು, ಇತರರ ಅಡೆತಡೆಗಳನ್ನು ಎದುರಿಸಲು ಮತ್ತು ಅವರಿಗೆ ಸಂತೋಷವನ್ನು ನೀಡಲು ಇರುವ ಒಂದು ಮುಂದುವರಿದ ಬೋಧಿಸತ್ವ ತಂತ್ರವಾಗಿದೆ. ರಿನ್ಪೋಚೆ ಈ ಅಭ್ಯಾಸವನ್ನು ಕಲಿಸಿದಾಗಲೆಲ್ಲಾ, ನಮ್ಮ ಪ್ರಾಣವನ್ನೇ ತ್ಯಾಗ ಮಾಡುವಷ್ಟು ಕಷ್ಟವಾಗಿದ್ದರೂ ಸಹ, ನಾವು ಇತರರ ನೋವನ್ನು ಸಹಿಸಿಕೊಳ್ಳಲು ಸಿದ್ಧರಾಗಿರಬೇಕು ಎಂದು ಹೇಳುತ್ತಿದ್ದರು. ಕುನು ಲಾಮಾ ರಿನ್ಪೋಚೆ ತಮ್ಮ ತವರು ಜಿಲ್ಲೆಯ ಒಬ್ಬ ವ್ಯಕ್ತಿಯು, ಇನ್ನೊಬ್ಬರ ತಲೆಗೆ ಪೆಟ್ಟು ಬಿದ್ದು ನೋವನ್ನು ಸ್ವೀಕರಿಸಿ ನಿಧನರಾದ ಉದಾಹರಣೆಯನ್ನು ಅವರು ಯಾವಾಗಲೂ ಉಲ್ಲೇಖಿಸುತ್ತಾರೆ. ನಾವು ಹೀಗೆ ಮಾಡಿದರೆ ಅದು ವ್ಯರ್ಥವಾಗುವುದಿಲ್ಲವೇ ಎಂದು ರಿನ್ಪೋಚೆ ಅವರನ್ನು ಕೇಳಿದಾಗ, ರಿನ್ಪೋಚೆ ಇಲ್ಲ ಎಂದು ಉತ್ತರಿಸುತ್ತಿದ್ದರು. ಇದು ಜಗತ್ತಿನ ಪ್ರಗತಿಗಾಗಿ ತನ್ನ ಪ್ರಾಣವನ್ನು ತ್ಯಾಗ ಮಾಡಿದ ಗಗನಯಾತ್ರಿಯಂತೆ ಇರುತ್ತದೆ ಎಂದು ಅವರು ವಿವರಿಸಿದರು. ವೀರ ಗಗನಯಾತ್ರಿಯ ಮಾದರಿ ಮತ್ತು ಖ್ಯಾತಿಯು ಅವರ ಕುಟುಂಬಕ್ಕೆ ಗಣನೀಯ ಸರ್ಕಾರಿ ಪಿಂಚಣಿಯನ್ನು ಖಚಿತಪಡಿಸುವಂತೆಯೇ, ಲಾಮಾ ಅವರ ತ್ಯಾಗದ ವೀರೋಚಿತ ಉದಾಹರಣೆಯು ಅವರ ಶಿಷ್ಯರಿಗೆ ಆಧ್ಯಾತ್ಮಿಕ ಪೋಷಣೆಯನ್ನು ಒದಗಿಸುತ್ತದೆ.
ಮೂರು ದಿನಗಳ ಕಾಲ ಮರಣ-ಸಂಗಮ ಧ್ಯಾನದಲ್ಲಿ ಉಳಿಯುವುದು
ಸೆರ್ಕಾಂಗ್ ರಿನ್ಪೋಚೆ ಮೂರು ದಿನಗಳ ಕಾಲ ಸ್ಪಷ್ಟ ಬೆಳಕಿನಲ್ಲಿ ಮರಣ-ಸಂಗಮ ಧ್ಯಾನದಲ್ಲಿ ಇದ್ದರು. ತಮ್ಮ ಪುನರ್ಜನ್ಮಗಳನ್ನು ನಿರ್ದೇಶಿಸುವ ಸಾಮರ್ಥ್ಯವನ್ನು ಹೊಂದಿರುವವರು ಸಾಮಾನ್ಯವಾಗಿ ಪುನರ್ಜನ್ಮ ಲಾಮಾಗಳ ಸಾಲನ್ನು ಉತ್ಪಾದಿಸುವ ಅಥವಾ ಮುಂದುವರಿಸುವ ಪ್ರಕ್ರಿಯೆಯ ಭಾಗವಾಗಿ ಈ ಧ್ಯಾನವನ್ನು ಪ್ರವೇಶಿಸುತ್ತಾರೆ. ಧ್ಯಾನದ ಸಮಯದಲ್ಲಿ, ಅವರ ಹೃದಯಗಳು ಬೆಚ್ಚಗಿರುತ್ತವೆ ಮತ್ತು ಉಸಿರಾಟವನ್ನು ನಿಲ್ಲಿಸಿದರೂ ಅವರ ದೇಹವು ಕೊಳೆಯಲು ಪ್ರಾರಂಭಿಸುವುದಿಲ್ಲ. ಸಾಮಾನ್ಯವಾಗಿ, ಮಹಾನ್ ಲಾಮಾಗಳು ಹಲವಾರು ದಿನಗಳವರೆಗೆ ಈ ಸ್ಥಿತಿಯಲ್ಲಿರುತ್ತಾರೆ, ನಂತರ ಅವರ ತಲೆಗಳು ಕುಸಿಯುತ್ತವೆ ಮತ್ತು ಮೂಗಿನ ಹೊಳ್ಳೆಗಳಿಂದ ರಕ್ತವು ಹರಿಯುತ್ತದೆ, ಇದು ಅವರ ಪ್ರಜ್ಞೆಯು ಅವರ ದೇಹದಿಂದ ಹೊರಟುಹೋಗಿದೆ ಎಂಬುದನ್ನು ಸೂಚಿಸುತ್ತದೆ.
ಸೆರ್ಕಾಂಗ್ ರಿನ್ಪೋಚೆಯಲ್ಲಿ ಈ ಚಿಹ್ನೆಗಳು ಸಂಭವಿಸಿದಾಗ, ಆಕಾಶದಲ್ಲಿ ಮಳೆಬಿಲ್ಲುಗಳು ಮಿನುಗಿದವು ಮತ್ತು ಅವರ ದಹನಕ್ಕಾಗಿ ಆಯ್ಕೆ ಮಾಡಲಾದ ಬಂಜರು ಬೆಟ್ಟದ ಮೇಲೆ ಅದ್ಭುತ ಬೆಳಕುಗಳು ಕಾಣಿಸಿಕೊಂಡವು. ಧರ್ಮಶಾಲಾದಲ್ಲಿರುವ ಪವಿತ್ರ ನಮಗ್ಯಾಲ್ ಮಠಕ್ಕೆ ಸನ್ಯಾಸಿಗಳು ದಹನ ಸಮಾರಂಭಕ್ಕಾಗಿ ಬರಬೇಕೆಂದು ಸಂದೇಶ ಕಳುಹಿಸಿದರೂ, ಆ ಪಕ್ಷವು ಸಮಯಕ್ಕೆ ಸರಿಯಾಗಿ ಬರಲು ಸಾಧ್ಯವಾಗಲಿಲ್ಲ. ರಿನ್ಪೋಚೆ ಬಯಸಿದಂತೆ, ಸ್ಪಿತಿ ಸನ್ಯಾಸಿಗಳು ವಿಧಿವಿಧಾನಗಳನ್ನು ಸಾಧಾರಣವಾಗಿ ನಿರ್ವಹಿಸಿದರು. ಸ್ವಲ್ಪ ಸಮಯದ ನಂತರ, ಶವಸಂಸ್ಕಾರದ ಸ್ಥಳದಿಂದ ಗುಣಪಡಿಸುವ ಶಕ್ತಿಗಳನ್ನು ಹೊಂದಿರುವ ಸಿಹಿ ನೀರಿನ ಬುಗ್ಗೆಯೊಂದು ಹೊರಹೊಮ್ಮಿತು. ಇಂದಿಗೂ ಹರಿಯುತ್ತಿರುವ ಇದು ತೀರ್ಥಯಾತ್ರೆಯ ಸ್ಥಳವಾಗಿದೆ. ನಿಖರವಾಗಿ ಒಂಬತ್ತು ತಿಂಗಳ ನಂತರ, ಮೇ 29, 1984 ರಂದು, ರಿನ್ಪೋಚೆ ಮತ್ತೊಮ್ಮೆ ಸ್ಪಿತಿಯಲ್ಲಿ, ಸಾಧಾರಣ ಕುಟುಂಬವೊಂದರಲ್ಲಿ ಜನಿಸಿದರು.
ಅವರ ಪುನರ್ಜನ್ಮವನ್ನು ನಿರ್ದೇಶಿಸುವುದು
ಹಲವು ವರ್ಷಗಳ ಹಿಂದೆ, ರಿನ್ಪೋಚೆ ತ್ಸೆರಿಂಗ್ ಚೋಡ್ರಾಗ್ ಮತ್ತು ಕುಂಜಾಂಗ್ ಚೋಡ್ರಾನ್ ಎಂಬ ಪತಿ ಮತ್ತು ಪತ್ನಿಯನ್ನು ಭೇಟಿಯಾಗಿದ್ದರು, ಅವರಿಬ್ಬರನ್ನೂ ಬಹಳವಾಗಿ ಪ್ರಭಾವಿತಗೊಳಿಸಿದ್ದರು. ಬಹಳ ಬಲಿಷ್ಠವಾಗಿ ಧರ್ಮಾಚರಣೆ ಮಾಡುತ್ತಿದ್ದ ಅವರು, ಸನ್ಯಾಸಿ ಮತ್ತು ಸನ್ಯಾಸಿನಿಯಾಗುವುದು ತಮ್ಮ ಆಳವಾದ ಆಸೆ ಎಂದು ರಿನ್ಪೋಚೆಗೆ ಹೇಳಿದ್ದರು. ಸ್ಥಳೀಯ ಹಳ್ಳಿಗಳ ಮುಖ್ಯಸ್ಥರು ಇದನ್ನು ವಿರೋಧಿಸಿದ್ದರು, ಏಕೆಂದರೆ ಯುವ ಕುಟುಂಬವಿದ್ದರೂ, ವಯಸ್ಕರು ಸನ್ಯಾಸಿ ಜೀವನಕ್ಕೆ ಸೇರುವುದು ಅನೇಕ ಸಮಸ್ಯೆಗಳನ್ನು ತರುತ್ತಿತ್ತು. ಅವರು ಮೊದಲು ತಮ್ಮ ಮಕ್ಕಳನ್ನು ನೋಡಿಕೊಳ್ಳಬೇಕು. ರಿನ್ಪೋಚೆ ಮುಖ್ಯಸ್ಥರ ಸಲಹೆಯನ್ನು ಅನುಮೋದಿಸಿದರು. ಈ ಪೋಷಕರ ನಾಲ್ಕನೇ ಮಗುವಾಗಿಯೇ ಜನಿಸಿದರು.
ಮರಣ-ಸಂಗಮ ಧ್ಯಾನದಲ್ಲಿ ಪರಿಣಿತರಾಗಿರುವ ಮಹಾನ್ ಲಾಮಾ ಅವರ ಪುನರ್ಜನ್ಮವನ್ನು ಪತ್ತೆಹಚ್ಚಲು ಶಿಷ್ಯರು ವಿವಿಧ ವಿಧಾನಗಳನ್ನು ಬಳಸುತ್ತಾರೆ. ಈ ವಿಧಾನಗಳಲ್ಲಿ ದೇವದೂತರನ್ನು ಸಂಪರ್ಕಿಸುವುದು ಮತ್ತು ಹೆಚ್ಚು ಅರಿತುಕೊಂಡ ಗುರುಗಳ ಕನಸುಗಳು ಸೇರಿವೆ. ನಂತರ, ಅಂತಿಮ ಅಭ್ಯರ್ಥಿಯು ಅನೇಕ ರೀತಿಯ ವಸ್ತುಗಳ ನಡುವೆ ಮೃತ ಲಾಮಾ ಅವರ ಹಲವಾರು ಆಸ್ತಿಗಳನ್ನು ಸರಿಯಾಗಿ ಗುರುತಿಸಬೇಕಾಗುತ್ತದೆ. ಆದರೆ ಕೇವಕ ಅಂತಹ ವಿಧಾನಗಳನ್ನು ಅವಲಂಬಿಸಬೇಡಿ ಎಂದು ಪರಮಪೂಜ್ಯ ದಲೈ ಲಾಮಾ ಅವರು ಎಚ್ಚರಿಸುತ್ತಾರೆ. ಗಂಭೀರ ಅಭ್ಯರ್ಥಿ ಎಂದು ಪರಿಗಣಿಸುವ ಮೊದಲು ಮಗು ತನ್ನ ಗುರುತಿನ ಸ್ಪಷ್ಟ ಚಿಹ್ನೆಗಳನ್ನು ನೀಡಬೇಕಾಗುತ್ತದೆ.
ರಿನ್ಪೋಚೆಯ ಪುನರ್ಜನ್ಮವನ್ನು ಗುರುತಿಸುವುದು
ಸ್ಪಿಟಿಯ ಜನರು ಸೆರ್ಕಾಂಗ್ ರಿನ್ಪೋಚೆಯನ್ನು ಸಂತನಂತೆ ಪರಿಗಣಿಸುತ್ತಾರೆ: ಬಹುತೇಕ ಎಲ್ಲಾ ಮನೆಗಳಲ್ಲಿ ಅವರ ಛಾಯಾಚಿತ್ರ ಇರುತ್ತದೆ. ಪುಟ್ಟ ಸೆರ್ಕಾಂಗ್ ರಿನ್ಪೋಚೆ ಮಾತನಾಡಲು ಸಾಧ್ಯವಾದ ತಕ್ಷಣ, ಅವನು ತನ್ನ ಹೆತ್ತವರ ಮನೆಯ ಗೋಡೆಯ ಮೇಲಿನ ರಿನ್ಪೋಚೆಯ ಚಿತ್ರವನ್ನು ತೋರಿಸಿ, "ಅದು ನಾನೇ!" ಎಂದು ಹೇಳಿದನು. ನಂತರ ಮಗುವನ್ನು ನೋಡಲು ನ್ಗಾವಾಂಗ್ ಮನೆಗೆ ಭೇಟಿ ನೀಡಿದಾಗ, ಆ ಹುಡುಗ ತಕ್ಷಣವೇ ಅವನ ತೋಳುಗಳಲ್ಲಿ ಸಿಲುಕಿಕೊಂಡನು. ಅವನೊಂದಿಗೆ ಮಠಕ್ಕೆ ಹಿಂತಿರುಗಲು ಬಯಸಿದನು.
ಅವನು ಯಾರೆಂಬುದರ ಬಗ್ಗೆ ಯಾರಿಗೂ ಯಾವುದೇ ಸಂದೇಹವಿರಲಿಲ್ಲ. ಏಕೆಂದರೆ, ಕೆಲವು ವರ್ಷಗಳ ಹಿಂದೆ ಸ್ಪಿತಿಯ ಪ್ರಮುಖ ಮಹಿಳೆಯರ ಗುಂಪೊಂದು ರಿನ್ಪೋಚೆ ಅವರನ್ನು ಮುಂದಿನ ಬಾರಿ ತಮ್ಮ ಕಣಿವೆಯಲ್ಲಿ ಪುನರ್ಜನ್ಮ ಪಡೆಯುವಂತೆ ವಿನಂತಿಸಿತ್ತು. ಅವರ ದೂರದ ಗಡಿ ಜಿಲ್ಲೆಗೆ ಭೇಟಿ ನೀಡಲು ಭಾರತ ಸರ್ಕಾರದಿಂದ ಅನುಮತಿ ಪಡೆಯುವುದು ಯಾವಾಗಲೂ ಸಮಸ್ಯೆಯಾಗಿತ್ತು. ಅಂತಹ ಪುನರ್ಜನ್ಮವು ಎಲ್ಲವನ್ನೂ ಸುಲಭಗೊಳಿಸುತ್ತಿತ್ತು. ಅವರ ಪೋಷಕರು, ಬಹಳಾ ಗೌರವವನ್ನು ಸ್ವೀಕರಿಸಿ ಅನುಮತಿ ನೀಡಿದರು ಮತ್ತು, ನಾಲ್ಕು ವರ್ಷ ವಯಸ್ಸಿನಲ್ಲಿ, ಪುಟ್ಟ ರಿನ್ಪೋಚೆ ಧರ್ಮಶಾಲಾಗೆ ಹೊರಟುಹೋದರು. ಅವನ ಹೆತ್ತವರು ಕಾಲಕಾಲಕ್ಕೆ ಅವನನ್ನು ಭೇಟಿ ಮಾಡುತ್ತಿದ್ದರೂ, ಆ ಹುಡುಗ ಅವರಿಗಾಗಿ ಎಂದೂ ಕೇಳಲಿಲ್ಲ, ಅಥವಾ ಅವರಿಗಾಗಿ ಹಂಬಲಿಸುವಂತೆ ಕಾಣಲಿಲ್ಲ. ಆರಂಭದಿಂದಲೂ, ಅವನು ತನ್ನ ಹಳೆಯ ಮನೆಯ ಸದಸ್ಯರೊಂದಿಗೆ ಸಂಪೂರ್ಣವಾಗಿ ಮನೆಯಲ್ಲಿ ನೆಲೆಸಿರುವಂತೆ ಭಾವಿಸಿದನು. ಅವರು ಅವನ ಹೃದಯಪೂರ್ವಕ ಕುಟುಂಬದವರಾಗಿದ್ದರು.
ಯುವ ಪುನರ್ಜನ್ಮವು ನಮ್ಮ ಮೊದಲ ಭೇಟಿಯಲ್ಲಿ ನನ್ನನ್ನು ಗುರುತಿಸಿದರು
ರಿನ್ಪೋಚೆ ಮೊದಲು ಧರ್ಮಶಾಲಾಗೆ ಬಂದಾಗ ನಾನು ಉಪನ್ಯಾಸ ಪ್ರವಾಸಕ್ಕಾಗಿ ಭಾರತದಿಂದ ಹೊರಗಿದ್ದೆ. ಕೆಲವು ತಿಂಗಳುಗಳ ನಂತರ, ನಾನು ಹಿಂದಿರುಗಿದ ನಂತರ, ನಾನು ಅವರನ್ನು ನೋಡಲು ಹೋದಾಗ, ಅತಿಯಾದ ನಿರೀಕ್ಷೆ ಅಥವಾ ಅತಿಯಾದ ಸಂಶಯದಿಂದ ಇರಲು ಪ್ರಯತ್ನಿಸಲಿಲ್ಲ. ನಾನು ರಿನ್ಪೋಚೆಯ ಕೋಣೆಗೆ ಪ್ರವೇಶಿಸಿದಾಗ, ನ್ಗಾವಾಂಗ್ ಆ ಹುಡುಗನಿಗೆ ನಾನು ಯಾರೆಂದು ತಿಳಿದಿದೆಯೇ ಎಂದು ಕೇಳಿದರು. ಆ ಹುಡುಗ, "ಮೂರ್ಖನಂತೆ ಮಾತನಾಡಬೇಡ. ಖಂಡಿತವಾಗಿಯೂ, ಇದು ಯಾರೆಂದು ನನಗೆ ತಿಳಿದಿದೆ!" ಹಳೆಯ ಸೆರ್ಕಾಂಗ್ ರಿನ್ಪೋಚೆ ಮತ್ತು ಪರಮಪೂಜ್ಯ ಪೋಪ್ ನಡುವೆ ವ್ಯಾಟಿಕನ್ನಲ್ಲಿ ನಡೆದ ಸಭೆಗಾಗಿ ನಾನು ಅನುವಾದಿಸುತ್ತಿರುವ ಛಾಯಾಚಿತ್ರವು ಅವನು ಕುಳಿತುಕೊಳ್ಳುವ ಕೋಣೆಯ ಗೋಡೆಯ ಮೇಲೆ ಪ್ರಮುಖವಾಗಿ ನೇತಾಡಿದ್ದರಿಂದ, ಬಹುಶಃ ಅವನು ಅದರಿಂದ ನನ್ನನ್ನು ಗುರುತಿಸಿರಬಹುದು ಎಂದು ನಾನು ಭಾವಿಸಿದೆ. ಆದರೂ, ನಾವು ಭೇಟಿಯಾದ ಕ್ಷಣದಿಂದ, ಪುಟ್ಟ ರಿನ್ಪೋಚೆ ನನ್ನನ್ನು ಕುಟುಂಬದ ಸದಸ್ಯನಂತೆ ಸಂಪೂರ್ಣ ಪರಿಚಿತತೆ ಮತ್ತು ಸರಾಗತೆಯಿಂದ ನಡೆಸಿಕೊಂಡರು. ನಾಲ್ಕು ವರ್ಷದ ಮಗು ಅಂತಹ ಭಾವನೆಗಳನ್ನು ನಕಲಿ ಮಾಡಲು ಸಾಧ್ಯವಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ, ಇದು, ಅವನು ಯಾರೆಂದು ನನಗೆ ಮನವರಿಕೆ ಮಾಡಿಕೊಟ್ಟಿದೆ.
1998 ರಲ್ಲಿ ಹದಿನಾಲ್ಕು ವರ್ಷದ ರಿನ್ಪೋಚೆ
ಈಗ, 1998 ರಲ್ಲಿ, ಹೊಸ ಸೆರ್ಕಾಂಗ್ ರಿನ್ಪೋಚೆಗೆ ಹದಿನಾಲ್ಕು ವರ್ಷ. ಅವನು ಹೆಚ್ಚಾಗಿ ಮುಂಡ್ಗೋಡ್ನಲ್ಲಿರುವ ತನ್ನ ಮಠದಲ್ಲಿ ವಾಸಿಸುತ್ತಾನೆ ಮತ್ತು ಅಧ್ಯಯನ ಮಾಡುತ್ತಾನೆ ಮತ್ತು ವರ್ಷಕ್ಕೊಮ್ಮೆ ಅಥವಾ ಎರಡು ಬಾರಿ ಧರ್ಮಶಾಲಾಕ್ಕೆ ಬರುತ್ತಾನೆ, ಆಗ ಪರಮಪೂಜ್ಯರು ಪ್ರಮುಖ ಬೋಧನೆಗಳನ್ನು ನೀಡುತ್ತಿರುತ್ತಾರೆ. ಚೊಂಡ್ಜೆಲಾ ಮತ್ತು ರಿನ್ಪೋಚೆ ಅವರ ಹಳೆಯ ಅಡುಗೆಯವರು ನಿಧನಗೊಂಡರು ಮತ್ತು ನ್ಗಾವಾಂಗ್ ವಸ್ತ್ರಗಳನ್ನು ಕಳಚಿ, ಮದುವೆಯಾಗಿ ಈಗ ನೇಪಾಳದಲ್ಲಿ ವಾಸಿಸುತ್ತಿದ್ದಾರೆ. ರಿನ್ಪೋಚೆ ಅವರನ್ನು ನೋಡಿಕೊಳ್ಳಲು ಸನ್ಯಾಸಿಗಳ ಹೊಸ ಸಂಸಾರವನ್ನು ಹೊಂದಿದ್ದಾರೆ, ಅವರೆಲ್ಲರನ್ನೂ ಅವರು ತಮ್ಮ ಹಿಂದಿನ ಜೀವನದಲ್ಲಿ ಆಯ್ಕೆ ಮಾಡಿದ್ದರು. ಉದಾಹರಣೆಗೆ, ಅವರ ಜೀವನದ ಕೊನೆಯ ಕೆಲವು ತಿಂಗಳುಗಳಲ್ಲಿ ಅವರನ್ನು ನೋಡಿಕೊಳ್ಳಲು, ಅವರೇ ವೈಯಕ್ತಿಕವಾಗಿ ಸ್ಪಿತಿ ಮತ್ತು ಕಿನ್ನೌರ್ನಿಂದ ಇಬ್ಬರು ಹತ್ತು ವರ್ಷದ ಹುಡುಗರನ್ನು ತಮ್ಮ ಮನೆಗೆ ಸೇರಲು ಆಯ್ಕೆ ಮಾಡಿಕೊಂಡರು.
ತಮ್ಮ ಪೂರ್ವವರ್ತಿಗೆ ಹೋಲುವ ಹಾಸ್ಯಪ್ರಜ್ಞೆಯನ್ನು ಹೊಂದಿದ್ದರೂ ಮತ್ತು ಅದೇ ಪ್ರಾಯೋಗಿಕ ವಾಸ್ತವಿಕ ವಿಧಾನವನ್ನು ಹಂಚಿಕೊಂಡಿದ್ದರೂ, ಯುವ ಸೆರ್ಕಾಂಗ್ ರಿನ್ಪೋಚೆ ತಮ್ಮದೇ ಆದ ವ್ಯಕ್ತಿತ್ವವನ್ನು ಹೊಂದಿದ್ದಾರೆ. ಒಂದು ಜೀವಿತಾವಧಿಯಿಂದ ಮುಂದಿನ ಜೀವಿತಾವಧಿಗೆ ಮುಂದುವರಿಯುವುದು ಪ್ರತಿಭೆಗಳು, ಪ್ರವೃತ್ತಿಗಳು ಮತ್ತು ಕರ್ಮ ಸಂಪರ್ಕಗಳು. ಅವರೊಂದಿಗಿನ ನನ್ನ ಸಂಬಂಧದಲ್ಲಿ, ಕ್ಯಾಪ್ಟನ್ ಕರ್ಕ್ ಅವರ ಮೂಲ ಸ್ಟಾರ್ ಟ್ರೆಕ್ ತಂಡದ ಸದಸ್ಯನಾಗಿದ್ದ ನಾನು, ಅವರು ಈಗಿನ ಸ್ಟಾರ್ ಟ್ರೆಕ್: ದಿ ನೆಕ್ಸ್ಟ್ ಜನರೇಷನ್ನ ಕ್ಯಾಪ್ಟನ್ ಪಿಕಾರ್ಡ್ನ ಗುಂಪನ್ನು ಸೇರಿದ್ದೇನೆ ಎಂದು ನಾನು ಭಾವಿಸುತ್ತೇನೆ. ಎಲ್ಲವೂ ಬದಲಾಗಿದೆ ಆದರೆ ನಿರ್ದಿಷ್ಟವಾದ ನಿರಂತರತೆ ಇನ್ನೂ ಇದೆ.
ರಿನ್ಪೋಚೆ ಅವರ ಪಾಲನೆಯ ವಿಷಯದಲ್ಲಿ ಒಂದು ಹೆಜ್ಜೆ ಹಿಂದಿಡುವುದು
ಇಲ್ಲಿಯವರೆಗೆ, ನಾನು ಸೆರ್ಕಾಂಗ್ ರಿನ್ಪೋಚೆ ಅವರ ಪಾಲನೆಯ ವಿಷಯದಲ್ಲಿ ಹಿಂಬದಿ ಸ್ಥಾನವನ್ನು ವಹಿಸಿಕೊಂಡಿದ್ದೇನೆ. ಹಳೆಯ ರಿನ್ಪೋಚೆ ಮುಖ್ಯವಾಗಿ ತಮ್ಮ ಸ್ವಂತ ಜನರಿಗೆ ಸೇವೆ ಸಲ್ಲಿಸಲು ಬಯಸುತ್ತಿದ್ದರು ಎಂದು ನಾನು ಭಾವಿಸುತ್ತೇನೆ. ಹಲವಾರು ಮಹಾನ್ ಲಾಮಾಗಳು, ಟಿಬೆಟಿಯನ್ನರಿಗೆ ಹಾನಿಯಾಗುತ್ತಿದ್ದರೂ, ಪಶ್ಚಿಮದಲ್ಲಿ ಅಥವಾ ತಮ್ಮ ಸಾಂಪ್ರದಾಯಿಕ ಸಾಂಸ್ಕೃತಿಕ ಕ್ಷೇತ್ರದ ಹೊರಗಿನ ಏಷ್ಯಾದ ಪ್ರದೇಶಗಳಲ್ಲಿ, ಬೋಧನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಟಿಬೆಟಿಯನ್ ರೂಪದ ಬೌದ್ಧಧರ್ಮವು ಅದರ ಪೂರ್ಣ ರೂಪದಲ್ಲಿ ಉಳಿಯಬೇಕಾದರೆ, ಟಿಬೆಟಿಯನ್ನರ ಭವಿಷ್ಯದ ಪೀಳಿಗೆಗೆ ತರಬೇತಿ ನೀಡುವುದು ಅತ್ಯಗತ್ಯ. ಏಕೆಂದರೆ, ಪ್ರಸ್ತುತವಾಗಿ, ಸಂಪೂರ್ಣ ಬೌದ್ಧ ಬೋಧನೆಗಳು ಟಿಬೆಟಿಯನ್ ಭಾಷೆಯಲ್ಲಿ ಮಾತ್ರ ಲಭ್ಯವಿದೆ. ರಿನ್ಪೋಚೆ ನನ್ನ ತರಬೇತಿ ಮತ್ತು ಸ್ವ-ಅಭಿವೃದ್ಧಿಗೆ ಊಹಿಸಬಹುದಾದ ಅತ್ಯುತ್ತಮ ಸಂದರ್ಭಗಳನ್ನು ನನಗೆ ಒದಗಿಸಿದ್ದಾರೆ. ಅವರ ದಯೆಯ ಪ್ರತಿಫಲವಾಗಿ, ನಾನು ಅವರಿಗೂ ಅದೇ ರೀತಿಯಾಗಿ ಮಾಡಲು ಪ್ರಯತ್ನಿಸಿದ್ದೇನೆ.
ಸಾಂಸ್ಕೃತಿಕ ಸಂಘರ್ಷವನ್ನು ತಡೆಯಲು, ನಾನು ರಿನ್ಪೋಚೆ ಅವರ ಆಧುನಿಕ ಶಿಕ್ಷಣದಲ್ಲಿ ಭಾಗವಹಿಸಿಲ್ಲ. ವಾಸ್ತವದಲ್ಲಿ, ನಾನು ಅವರೊಂದಿಗೆ ಹೆಚ್ಚು ಸಂಪರ್ಕ ಹೊಂದುವುದನ್ನು ಉದ್ದೇಶಪೂರ್ವಕವಾಗಿ ತಪ್ಪಿಸಿದ್ದೇನೆ, ಆದರೂ ನಾವು ಭೇಟಿಯಾದಾಗಲೆಲ್ಲಾ ನಮ್ಮ ನಡುವಿನ ನಿಕಟ ಬಾಂಧವ್ಯವು ಗಮನಾರ್ಹವಾಗಿ ಸ್ಪಷ್ಟವಾಗುತ್ತದೆ. ಬದಲಾಗಿ, ಭಾರತದಲ್ಲಿನ ಟಿಬೆಟಿಯನ್ ಶಾಲೆಗಳು ಬಳಸುವ ಅದೇ ಪಠ್ಯಕ್ರಮವನ್ನು ಅನುಸರಿಸಿ, ಅವರಿಗೆ ಇಂಗ್ಲಿಷ್, ವಿಜ್ಞಾನ ಮತ್ತು ಸಾಮಾಜಿಕ ಅಧ್ಯಯನಗಳನ್ನು ಕಲಿಸಲು ಸ್ಥಳೀಯ ಟಿಬೆಟಿಯನ್ ಬೋಧಕರ ವ್ಯವಸ್ಥೆ ಮಾಡಲು ನಾನು ಸಹಾಯ ಮಾಡಿದ್ದೇನೆ. ಪರಿಣಾಮವಾಗಿ, ರಿನ್ಪೋಚೆ ತನ್ನ ಸ್ವಂತ ಜನರೊಂದಿಗೆ ಸಂಪೂರ್ಣವಾಗಿ ಸಂಬಂಧ ಹೊಂದಬಹುದಾಗಿದೆ. ನಾನು ಅವರನ್ನು ಪಶ್ಚಿಮಕ್ಕೆ ಕರೆದೊಯ್ಯಲಿಲ್ಲ ಅಥವಾ ಅವರಿಗೆ ಕಂಪ್ಯೂಟರ್ ಅಥವಾ ವೀಡಿಯೊ ಪ್ಲೇಯರ್ ಖರೀದಿಸಲಿಲ್ಲ, ಮತ್ತು ಇತರರು ಅವರಿಗೆ ಇವುಗಳನ್ನು ನೀಡದಂತೆ ನಾನು ನೋಡಿಕೊಂಡಿದ್ದೇನೆ. ಹಲವಾರು ಯುವ ಪುನರ್ಜನ್ಮ ಲಾಮಾಗಳು ಕಂಪ್ಯೂಟರ್ ಆಟಗಳು ಮತ್ತು ಆಕ್ಷನ್ ವೀಡಿಯೊಗಳಿಗೆ ತಮ್ಮ ಸಾಂಪ್ರದಾಯಿಕ ಸನ್ಯಾಸಿಗಳ ಅಧ್ಯಯನಗಳಿಗಿಂತ ಹೆಚ್ಚು ಆಕರ್ಷಕರಾಗಿರುತ್ತಾರೆ.
ಮತ್ತೊಮ್ಮೆ ಅವರ ಶಿಷ್ಯನಾಗಲು ಪ್ರಾರ್ಥನೆ
ನನ್ನ ನಿರ್ದೇಶನವು ಎಷ್ಟು ಕೊಡುಗೆ ನೀಡಿದೆ ಎಂದು ನನಗೆ ತಿಳಿದಿಲ್ಲ, ಆದರೆ ರಿನ್ಪೋಚೆ ಆಳವಾದ ಭದ್ರತಾ ಪ್ರಜ್ಞೆಯನ್ನು ಪ್ರದರ್ಶಿಸುತ್ತಾನೆ ಮತ್ತು ತನ್ನದೇ ಆದ ಸಂಸ್ಕೃತಿಯಲ್ಲಿ ಸಂಪೂರ್ಣವಾಗಿ ಆರಾಮದಾಯಕನಾಗಿದ್ದಾನೆ. ಇದು ಅವನಿಗೆ ಮತ್ತು ಭವಿಷ್ಯದಲ್ಲಿ ಅವನು ಭೇಟಿಯಾಗುವ ಎಲ್ಲರಿಗೂ ಪ್ರಯೋಜನಕಾರಿಯಾಗಿರುತ್ತದೆ. ಅವನು ಪ್ರಬುದ್ಧತೆಯನ್ನು ತಲುಪಿದಾಗ ಪಶ್ಚಿಮದ ಬಗ್ಗೆ ನೇರವಾಗಿ ಕಲಿಯಬಹುದು. ನನ್ನ ಮುಂದಿನ ಜನ್ಮದಲ್ಲಿ ನಾನು ಮತ್ತೊಮ್ಮೆ ಅವರ ಶಿಷ್ಯನಾಗಬೇಕೆಂದು ನಾನು ಪ್ರಾರ್ಥಿಸುತ್ತೇನೆ.