ಇತರರಿಗೆ ಸಂಪೂರ್ಣವಾಗಿ ಸಮರ್ಪಿತವಾದ ಹೃದಯ ಮತ್ತು ಅವರಿಗೆ ಸಾಧ್ಯವಾದಷ್ಟು ಉಪಕಾರಿಯಾಗಿರುವ ಸಲುವಾಗಿ ಜ್ಞಾನೋದಯವನ್ನು ಪಡೆಯುವುದಾಗಿರುವ ಬೋಧಿಚಿತ್ತವನ್ನು ಹೇಗೆ ಅಭಿವೃದ್ಧಿಪಡಿಸುವುದು ಎಂಬುದರ ಎರಡು ಸಂಪ್ರದಾಯಗಳಿವೆ - ಏಳು ಭಾಗಗಳ ಕಾರಣ ಮತ್ತು ಪರಿಣಾಮ ಸಂಪ್ರದಾಯ ಮತ್ತು ಸ್ವಯಂ ಮತ್ತು ಇತರರ ಕಡೆಗೆ ನಮ್ಮ ವರ್ತನೆಗಳನ್ನು ಸಮಾನಗೊಳಿಸುವ ಮತ್ತು ಅದಲು-ಬದಲು ಮಾಡಿಕೊಳ್ಳುವ ಸಂಪ್ರದಾಯ. ಪ್ರತಿಯೊಂದೂ ಪೂರ್ವಭಾವಿಯಾಗಿ, ಮುಂಚಿತವಾಗಿ ಸಮಚಿತ್ತವನ್ನು ಅಭಿವೃದ್ಧಿಪಡಿಸುವ ಪ್ರತ್ಯೇಕವಾದ ಅಥವಾ ವಿಭಿನ್ನವಾದ ಮಾರ್ಗವನ್ನು ಹೊಂದಿರುತ್ತದೆ. ಪ್ರತಿಯೊಂದಕ್ಕೂ ಸಮಚಿತ್ತತೆ ಎಂಬ ಒಂದೇ ಹೆಸರಿದ್ದರೂ, ಅಭಿವೃದ್ಧಿಪಡಿಸಿದ ಸಮಚಿತ್ತತೆಯ ಪ್ರಕಾರವು ವಿಭಿನ್ನವಾಗಿರುತ್ತದೆ.
- ಏಳು ಭಾಗಗಳ ಕಾರಣ ಮತ್ತು ಪರಿಣಾಮದ ಧ್ಯಾನದಲ್ಲಿ ಎಲ್ಲರೂ ನಮ್ಮ ತಾಯಂದಿರು ಎಂದು ಗುರುತಿಸುವ ಮೊದಲು ಬರುವ ಸಮಚಿತ್ತತೆಯು ಸ್ನೇಹಿತ, ಶತ್ರು ಮತ್ತು ಅಪರಿಚಿತರನ್ನು ದೃಶ್ಯೀಕರಿಸುವುದನ್ನು ಒಳಗೊಂಡಿದ್ದು, ಇದು ನಾವು ಬಾಂಧವ್ಯ ಮತ್ತು ವಿಕರ್ಷಣೆಯ ಭಾವನೆಗಳನ್ನು ಹೊಂದುವುದನ್ನು ನಿಲ್ಲಿಸುವ ಸಮಚಿತ್ತತೆಯಾಗಿರುತ್ತದೆ. ಅದರ ಹೆಸರುಗಳಲ್ಲಿ ಒಂದು "ಕೇವಲ ಸ್ನೇಹಿತರು, ಶತ್ರುಗಳು ಮತ್ತು ಅಪರಿಚಿತರ ಕಡೆಗೆ ನಾವು ಬಾಂಧವ್ಯ ಮತ್ತು ವಿಕರ್ಷಣೆಯನ್ನು ಹೊಂದುವುದನ್ನು ನಿಲ್ಲಿಸುವ ಸಮಚಿತ್ತತೆ" ಎಂಬುದಾಗಿರುತ್ತದೆ. ಇಲ್ಲಿ "ಕೇವಲ" ಎಂಬ ಪದವು ಮತ್ತಷ್ಟನ್ನು ಒಳಗೊಂಡಿರುವ ಎರಡನೇ ವಿಧಾನವು ಅಸ್ತಿತ್ವದಲ್ಲಿದೆ ಎಂಬುದನ್ನು ಸೂಚಿಸುತ್ತದೆ.
ಈ ಮೊದಲ ವಿಧದ ಸಮಚಿತ್ತತೆಯ ಮತ್ತೊಂದು ಹೆಸರು "ಶ್ರಾವಕರು ಮತ್ತು ಪ್ರತ್ಯೇಕಬುದ್ಧರೊಂದಿಗೆ ಕೇವಲ ಸಾಮಾನ್ಯವಾದ ಸಮಾನತೆಯನ್ನು ಬೆಳೆಸುವ ಮಾರ್ಗವಾದ ಸಮಚಿತ್ತತೆ." ಶ್ರಾವಕರು (ಕೇಳುಗರು) ಮತ್ತು ಪ್ರತ್ಯೇಕಬುದ್ಧರು (ಸ್ವಯಂ-ವಿಕಾಸಕರು) ಬುದ್ಧನ ಬೋಧನೆಗಳ ಹೀನಯಾನ (ಸಾಧಾರಣ ವಾಹನ) ದ ಎರಡು ವಿಧದ ಅಭ್ಯಾಸಕಾರರು. ಇಲ್ಲಿ, ‘ಕೇವಲ’ ಎನ್ನುವುದು, ಈ ರೀತಿಯ ಸಮಚಿತ್ತತೆಯೊಂದಿಗೆ, ನಾವು ಬೋಧಿಚಿತ್ತದ ಸಮರ್ಪಿತ ಹೃದಯವನ್ನು ಹೊಂದಿಲ್ಲ ಮತ್ತು ಅದರೊಂದಿಗೆ ತೊಡಗಿಸಿಕೊಂಡಿಲ್ಲ ಎಂಬುದನ್ನು ಸೂಚಿಸುತ್ತದೆ.
- ಸ್ವಯಂ ಮತ್ತು ಇತರರ ಕಡೆಗೆ ನಮ್ಮ ವರ್ತನೆಗಳನ್ನು ಸಮೀಕರಿಸುವ ಮತ್ತು ಅದಲು-ಬದಲು ಮಾಡಿಕೊಳ್ಳುವುದರ ಪೂರ್ವಭಾವಿಯಾಗಿ ನಾವು ಬೆಳೆಸಿಕೊಳ್ಳುವ ಸಮಚಿತ್ತತೆಯು ಕೇವಲ ಮೇಲಿನ ರೀತಿಯ ಸಮಚಿತ್ತತೆಯಾಗಿರುವುದಿಲ್ಲ. ಎಲ್ಲಾ ಸೀಮಿತ ಜೀವಿಗಳಿಗೆ ಪ್ರಯೋಜನಕಾರಿಯಾಗುವ ಮತ್ತು ಸಹಾಯ ಮಾಡುವ ಮತ್ತು ಅವರ ಸಮಸ್ಯೆಗಳನ್ನು ನಿವಾರಿಸುವಲ್ಲಿ ನಾವು ಒಳಗೊಂಡಿರುವ ಆಲೋಚನೆಗಳು ಅಥವಾ ಕ್ರಿಯೆಗಳಲ್ಲಿ ನಮಗೆ ಯಾವುದೇ ನಿಕಟ ಅಥವಾ ದೂರದ ಭಾವನೆಗಳಿಲ್ಲದ ಸಮಚಿತ್ತತೆಯಾಗಿರುತ್ತದೆ. ಇದು ಸಮಚಿತ್ತತೆಯನ್ನು ಅಭಿವೃದ್ಧಿಪಡಿಸುವ ವಿಶೇಷವಾದ ವಿಶಿಷ್ಟವಾದ, ಅಸಾಮಾನ್ಯ ಮಹಾಯಾನ (ವಿಶಾಲ ವಾಹನ) ಮಾರ್ಗವಾಗಿರುತ್ತದೆ.
ಕೇವಲ ಸಮಚಿತ್ತತೆ
ಏಳು ಭಾಗಗಳ ಕಾರಣ ಮತ್ತು ಪರಿಣಾಮ ವಿಧಾನದಲ್ಲಿ, ಪ್ರತಿಯೊಬ್ಬರೂ ನಮ್ಮ ತಾಯಂದಿರು ಎಂದು ಗುರುತಿಸುವ ಮೊದಲು ಬರುವ ಸಮಚಿತ್ತತೆಯನ್ನು ಅಭಿವೃದ್ಧಿಪಡಿಸುವ ಮಾರ್ಗ ಯಾವುದು ಎಂದು ನಾವು ಕೇಳಿದರೆ, ಅದು ಈ ಕೆಳಗಿನ ಹಂತಗಳನ್ನು ಒಳಗೊಂಡಿರುತ್ತದೆ.
ಮೂರು ವ್ಯಕ್ತಿಗಳ ದೃಶ್ಯೀಕರಣ
ಮೊದಲನೆಯದಾಗಿ, ನಾವು ಮೂರು ವ್ಯಕ್ತಿಗಳನ್ನು ದೃಶ್ಯೀಕರಿಸುತ್ತೇವೆ: ನಾವು ಇಷ್ಟಪಡದ ಅಥವಾ ನಮ್ಮ ಶತ್ರು ಎಂದು ಪರಿಗಣಿಸುವ ಅಸಹ್ಯ ಮತ್ತು ಅಹಿತಕರ ವ್ಯಕ್ತಿ, ನಾವು ತುಂಬಾ ಪ್ರೀತಿಸುವ ಪ್ರೀತಿಪಾತ್ರರು ಅಥವಾ ಸ್ನೇಹಿತರು, ಮತ್ತು ಅಪರಿಚಿತರು ಅಥವಾ ಇವೆರಡೆರ ನಡುವೆ ಇರುವ, ಈ ಭಾವನೆಗಳಲ್ಲಿ ಯಾವುದೂ ಅಲ್ಲದ ಒಬ್ಬರು. ನಾವು ಮೂವರನ್ನೂ ಒಟ್ಟಿಗೆ ದೃಶ್ಯೀಕರಿಸುತ್ತೇವೆ.
ತರುವಾಯ, ನಾವು ಪ್ರತಿಯೊಬ್ಬರ ಮೇಲೆಯೂ ಗಮನಹರಿಸಿದಾಗ ಸಾಮಾನ್ಯವಾಗಿ ಯಾವ ರೀತಿಯ ವರ್ತನೆ ಉದ್ಭವವಾಗುತ್ತದೆ? ನಮಗೆ ಇಷ್ಟವಿಲ್ಲದ ವ್ಯಕ್ತಿಯ ಬಗ್ಗೆ ಅಹಿತಕರತೆ, ಆತಂಕ ಮತ್ತು ವಿಕರ್ಷಣೆಯ ಭಾವನೆ ಉಂಟಾಗುತ್ತದೆ. ಪ್ರಿಯ ಸ್ನೇಹಿತನ ಬಗ್ಗೆ ಆಕರ್ಷಣೆ ಮತ್ತು ಬಾಂಧವ್ಯದ ಭಾವನೆ ಉಂಟಾಗುತ್ತದೆ. ಎರಡೂ ಅಲ್ಲದವರಿಗೆ ಸಹಾಯ ಮಾಡಲು ಅಥವಾ ಹಾನಿ ಮಾಡಲು ಬಯಸದ ಉದಾಸೀನತೆಯ ಭಾವನೆ ಉದ್ಭವಿಸುತ್ತದೆ, ಏಕೆಂದರೆ ಅಪರಿಚಿತರು ಆಕರ್ಷಕವಾಗಿರುವುದಿಲ್ಲ ಅಥವಾ ವಿಕರ್ಷಣೀಯವಾಗಿರುವುದಿಲ್ಲ ಎಂದು ನಾವು ಕಂಡುಕೊಳ್ಳುತ್ತೇವೆ.
ನಮಗೆ ಇಷ್ಟವಿಲ್ಲದ ವ್ಯಕ್ತಿಗಾಗಿ ವಿಕರ್ಷಣೆಯನ್ನು ನಿಲ್ಲಿಸುವುದು
ಚರ್ಚೆಯ ಸುಲಭತೆಗಾಗಿ, ನಾವು ದೃಶ್ಯೀಕರಿಸುವ ಮೂವರೂ ಮಹಿಳೆಯರು ಎಂದು ಭಾವಿಸೋಣ. ಮೊದಲನೆಯದಾಗಿ, ನಾವು ಇಷ್ಟಪಡದ ವ್ಯಕ್ತಿಯೊಂದಿಗೆ, ನಾವು ಶತ್ರು ಎಂದು ಪರಿಗಣಿಸಬಹುದಾದ ವ್ಯಕ್ತಿಯೊಂದಿಗೆ ಕೆಲಸ ಮಾಡೋಣ.
- ನಾವು ಅವಳನ್ನು ಅಹಿತಕರ ಮತ್ತು ವಿಕರ್ಷಣೀಯ ಎಂದು ಕಂಡುಕೊಳ್ಳುವ ಭಾವನೆಯನ್ನು ಉದ್ಭವಿಸಲು ಬಿಡುತ್ತೇವೆ. ಅದು ಸ್ಪಷ್ಟವಾಗಿ ಹುಟ್ಟಿಕೊಂಡಾಗ,
- ಅವಳಿಗೆ ಏನಾದರೂ ಕೆಟ್ಟದು ಸಂಭವಿಸಿದರೆ ಅಥವಾ ಅವಳು ಬಯಸದ ಏನಾದರೂ ಅನುಭವಿಸಿದರೆ ಒಳ್ಳೆಯದು ಎಂಬ ಭಾವನೆಯು ಉದ್ಭವಿಸುವುದನ್ನು ನಾವು ಗಮನಿಸುತ್ತೇವೆ.
- ನಂತರ ನಾವು ಈ ಕೆಟ್ಟ ಭಾವನೆಗಳು ಮತ್ತು ಆಸೆಗಳ ಕಾರಣಗಳನ್ನು ಪರಿಶೀಲಿಸುತ್ತೇವೆ. ಸಾಮಾನ್ಯವಾಗಿ ಅವಳು ನಮ್ಮನ್ನು ನೋಯಿಸಿದ್ದರಿಂದ, ನಮಗೆ ಏನಾದರೂ ಹಾನಿ ಮಾಡಿದ್ದರಿಂದ ಅಥವಾ ನಮಗೆ ಅಥವಾ ನಮ್ಮ ಸ್ನೇಹಿತರಿಗೆ ಕೆಟ್ಟದ್ದನ್ನು ಮಾಡಿದ್ದರಿಂದ ಅಥವಾ ಹೇಳಿದ್ದರಿಂದ ಎಂದು ನಾವು ಕಂಡುಕೊಳ್ಳುತ್ತೇವೆ. ಅದಕ್ಕಾಗಿಯೇ ನಾವು ಅವಳಿಗೆ ಏನಾದರೂ ಕೆಟ್ಟದಾಗಲಿ ಅಥವಾ ಅವಳು ಬಯಸುವುದನ್ನು ಪಡೆಯದಿರಲಿ ಎಂದು ಬಯಸುತ್ತೇವೆ.
- ಈಗ, ನಾವು ತುಂಬಾ ಇಷ್ಟಪಡದ ಈ ಮಹಿಳೆಗೆ ಏನಾದರೂ ಕೆಟ್ಟದು ಸಂಭವಿಸಬೇಕೆಂದು ಬಯಸುವುದಕ್ಕೆ ಇರುವ ಕಾರಣದ ಬಗ್ಗೆ ಯೋಚಿಸುತ್ತೇವೆ ಮತ್ತು ಅದು ನಿಜವಾಗಿಯೂ ಒಳ್ಳೆಯ ಕಾರಣವೇ ಎಂದು ಪರಿಶೀಲಿಸುತ್ತೇವೆ. ನಾವು ಈ ಕೆಳಗಿನಂತೆ ಪರಿಗಣಿಸುತ್ತೇವೆ:
- ಹಿಂದಿನ ಜನ್ಮಗಳಲ್ಲಿ, ಶತ್ರು ಎಂದು ಕರೆಯಲ್ಪಡುವವರು ಅನೇಕ ಬಾರಿ ನನ್ನ ತಾಯಿ ಮತ್ತು ತಂದೆ, ಹಾಗೆಯೇ ನನ್ನ ಸಂಬಂಧಿ ಮತ್ತು ಸ್ನೇಹಿತರಾಗಿರುವರು. ಅವಳು ನನಗೆ ಎಣಿಸಲಾರದ ಬಾರಿ ಸಹಾಯ ಮಾಡಿದ್ದಾಳೆ.
- ಈ ಜನ್ಮದಲ್ಲಿ ಏನಾಗುತ್ತದೆ ಎಂಬುದಕ್ಕೆ ಖಚಿತವಿಲ್ಲ. ಈ ಜನ್ಮದಲ್ಲಿ ಅವಳು ಹೆಚ್ಚಿನ ಸಹಾಯ ಮಾಡುವ ಉತ್ತಮ ಸ್ನೇಹಿತಳಾಗಬಹುದು. ಅಂತಹ ವಿಷಯಗಳು ಸಂಭವಿಸಲು ಬಹಳಾ ಸಾಧ್ಯ.
- ಏನೇ ಇರಲಿ, ಅವಳು ಮತ್ತು ನಾನು ಅನಂತ ಭವಿಷ್ಯದ ಜೀವನವನ್ನು ಹೊಂದಿರುತ್ತೇವೆ ಮತ್ತು ಅವಳು ಒಂದು ಸಮಯದಲ್ಲಿ ನನ್ನ ತಾಯಿ ಅಥವಾ ತಂದೆಯಾಗುವುದು ಖಂಡಿತ. ಹಾಗಾಗಿ, ಅವಳು ನನಗೆ ಬಹಳಷ್ಟು ಸಹಾಯ ಮಾಡುತ್ತಾಳೆ, ಮತ್ತು ನಾನು ಅವಳ ಮೇಲೆ ಎಲ್ಲಾ ಭರವಸೆ ಇಡಬೇಕಾಗುತ್ತದೆ. ಆದ್ದರಿಂದ ಭೂತ, ವರ್ತಮಾನ ಮತ್ತು ಭವಿಷ್ಯದಲ್ಲಿ, ಅವಳು ನನಗೆ ಲೆಕ್ಕವಿಲ್ಲದಷ್ಟು ರೀತಿಯಲ್ಲಿ ಸಹಾಯ ಮಾಡಿದ್ದಾಳೆ, ಮಾಡುತ್ತಾಳೆ ಮತ್ತು ಮಾಡುವಳು, ಆದ್ದರಿಂದ ಅವಳು ಅಂತಿಮವಾಗಿ ಒಳ್ಳೆಯ ಸ್ನೇಹಿತೆ. ಇದು ಖಡಾಖಂಡಿತವಾಗಿದೆ. ಅದಕ್ಕಾಗಿಯೇ, ಈ ಜೀವನದಲ್ಲಿ ಅವಳು ನನ್ನನ್ನು ಸ್ವಲ್ಪ ನೋಯಿಸಿದಂತಹ ಸಣ್ಣ ಕಾರಣಕ್ಕಾಗಿ ನಾನು ಅವಳನ್ನು ಶತ್ರು ಎಂದು ಪರಿಗಣಿಸಿದರೆ ಮತ್ತು ಅವಳಿಗಾಗಿ ಅನಾರೋಗ್ಯವನ್ನು ಬಯಸಿದರೆ, ಅದು ಎಂದಿಗೂ ಸರಿಯಾಗಿರುವುದಿಲ್ಲ.
- ನಾವು ಕೆಲವು ಉದಾಹರಣೆಗಳನ್ನು ಯೋಚಿಸುತ್ತೇವೆ. ಉದಾಹರಣೆಗೆ, ನನಗೆ ಬಹಳಷ್ಟು ಹಣವನ್ನು ನೀಡುವ ಅಧಿಕಾರ ಹೊಂದಿರುವ ಮತ್ತು ಹಾಗೆ ಮಾಡುವ ಬಯಕೆ ಮತ್ತು ಉದ್ದೇಶವನ್ನು ಹೊಂದಿದ್ದ ಮತ್ತು ಹಿಂದೆ ಸ್ವಲ್ಪಮಟ್ಟಿಗೆ ಹಾಗೆ ಮಾಡಿದ ಬ್ಯಾಂಕ್ ಅಧಿಕಾರಿ ಅಥವಾ ಶ್ರೀಮಂತ ವ್ಯಕ್ತಿಯೊಬ್ಬರು, ಒಂದು ದಿನ ಕೋಪಗೊಂಡು ನನ್ನ ಕೆನ್ನೆಗೆ ಬಾರಿಸಿದರು ಎಂದುಕೊಳ್ಳಿ. ನಾನು ಕೋಪಗೊಂಡು, ನನ್ನ ಕೋಪವನ್ನು ಉಳಿಸಿಕೊಂಡರೆ, ಅದು ಅವನಿಗೆ ನನಗೆ ಹೆಚ್ಚಿನ ಹಣವನ್ನು ನೀಡುವ ಉದ್ದೇಶವನ್ನು ಕಳೆದುಕೊಳ್ಳಲು ಕಾರಣವಾಗಬಹುದು. ಅವನು ತನ್ನ ಮನಸ್ಸನ್ನು ಬದಲಾಯಿಸಿ ಬೇರೆಯವರಿಗೆ ಹಣವನ್ನು ನೀಡಲು ನಿರ್ಧರಿಸುವ ಅಪಾಯವೂ ಇರುತ್ತದೆ. ಮತ್ತೊಂದೆಡೆ, ನಾನು ಹೊಡೆತವನ್ನು ಸಹಿಸಿಕೊಂಡರೆ, ನನ್ನ ಕಣ್ಣುಗಳನ್ನು ಕೆಳಗಿರಿಸಿ, ನನ್ನ ಬಾಯಿ ಮುಚ್ಚಿದರೆ, ನಾನು ಅಸಮಾಧಾನಗೊಳ್ಳದ ಕಾರಣ ಅವನು ನನ್ನ ಬಗ್ಗೆ ಇನ್ನಷ್ಟು ಸಂತೋಷಪಡುತ್ತಾನೆ. ಬಹುಶಃ, ಅವನು ಮೂಲತಃ ಉದ್ದೇಶಿಸಿದ್ದಕ್ಕಿಂತ ಹೆಚ್ಚಿನದನ್ನು ನನಗೆ ನೀಡಲು ಬಯಸಬಹುದು. ಆದರೆ ನಾನು ಕೋಪಗೊಂಡು ರಂಪಾಟ ನಡೆಸಿದರೆ, ಅದು ಟಿಬೆಟಿಯನ್ ನುಡಿಯಂತೆ ಇರುತ್ತದೆ, "ನಿನ್ನ ಬಾಯಿಯಲ್ಲಿ ಆಹಾರವಿದೆ ಮತ್ತು ನಿನ್ನ ನಾಲಿಗೆ ಅದನ್ನು ಹೊರಹಾಕುತ್ತದೆ."
- ಆದ್ದರಿಂದ, ನಾನು ಇಷ್ಟಪಡದ ಈ ವ್ಯಕ್ತಿಯೊಂದಿಗಿನ ದೀರ್ಘಾವಧಿಯನ್ನು ಪರಿಗಣಿಸಬೇಕು, ಮತ್ತು ಎಲ್ಲಾ ಸೀಮಿತ ಜೀವಿಗಳಿಗೂ ಇದು ಅನ್ವಯವಾಗುತ್ತದೆ. ದೀರ್ಘಾವಧಿಯಲ್ಲಿ ನನಗೆ ಅವರಿಂದ ಸಹಾಯವಾಗುವುದು 100% ಖಚಿತ. ಆದ್ದರಿಂದ, ಯಾರಾದರೂ ಮಾಡಬಹುದಾದ ಚಿಕ್ಕ, ಕ್ಷುಲ್ಲಕ ಹಾನಿಗಾಗಿ ನನ್ನ ಕೋಪವನ್ನು ಉಳಿಸಿಕೊಳ್ಳುವುದು ಸಂಪೂರ್ಣವಾಗಿ ಸೂಕ್ತವಲ್ಲ.
- ನಂತರ, ಒಂದು ಚೇಳು, ಕಾಡು ಪ್ರಾಣಿ ಅಥವಾ ದೆವ್ವ, ಸಣ್ಣದೊಂದು ಚುಚ್ಚುವಿಕೆ ಅಥವಾ ಪ್ರಚೋದನೆಗೆ ತಕ್ಷಣವೇ ಹೇಗೆ ಪ್ರತಿದಾಳಿ ಮಾಡುತ್ತದೆ ಎಂಬುದನ್ನು ನಾವು ಪರಿಗಣಿಸುತ್ತೇವೆ. ನಂತರ, ನಮ್ಮನ್ನು ನಾವು ಪರಿಗಣಿಸುವಾಗ, ಅಂತಹ ಜೀವಿಗಳಂತೆ ವರ್ತಿಸುವುದು ಎಷ್ಟು ಅನುಚಿತ ಎಂಬುದನ್ನು ಪರಿಗಣಿಸುತ್ತೇವೆ. ಈ ರೀತಿಯಾಗಿ, ನಾವು ನಮ್ಮ ಕೋಪವನ್ನು ತಗ್ಗಿಸುತ್ತೇವೆ. ಈ ವ್ಯಕ್ತಿಯು ನನಗೆ ಏನೇ ಹಾನಿ ಮಾಡಿದರೂ, ನಾನು ನನ್ನ ಕೋಪವನ್ನು ಕಳೆದುಕೊಳ್ಳುವುದಿಲ್ಲ ಮತ್ತು ಕೋಪಗೊಳ್ಳುವುದಿಲ್ಲ, ಇಲ್ಲದಿದ್ದರೆ ನಾನು ಕಾಡು ಪ್ರಾಣಿ ಅಥವಾ ಚೇಳಿಗಿಂತ ಉತ್ತಮನಲ್ಲ ಎಂದು ನಾವು ಯೋಚಿಸಬೇಕು.
- ಅಂತಿಮವಾಗಿ, ನಾವು ಇದನ್ನೆಲ್ಲಾ ತರ್ಕದ ಸಿಲಾಜಿಸಂ (syllogism) ರೂಪವಾಗಿ ಪರಿಗಣಿಸುತ್ತೇವೆ. ಇತರರು ನನಗೆ ಸ್ವಲ್ಪ ಹಾನಿಯುಂಟುಮಾಡಿದ್ದಾರೆ ಎಂಬ ಕಾರಣಕ್ಕಾಗಿ ನಾನು ಅವರ ಮೇಲೆ ಕೋಪಗೊಳ್ಳುವುದನ್ನು ನಿಲ್ಲಿಸುತ್ತೇನೆ, ಏಕೆಂದರೆ:
- ಹಿಂದಿನ ಜನ್ಮಗಳಲ್ಲಿ, ಅವರು ನನ್ನ ಹೆತ್ತವರಾಗಿದ್ದರು.
- ಈ ಜನ್ಮದ ನಂತರ, ಅವರು ನನ್ನ ಆತ್ಮೀಯ ಸ್ನೇಹಿತರಾಗದೇ ಇರುವುದಿಲ್ಲ ಎಂಬುದು ಖಚಿತವಿಲ್ಲ.
- ಭವಿಷ್ಯದಲ್ಲಿ, ಅವರು ಒಂದಲ್ಲ ಒಂದು ಸಮಯದಲ್ಲಿ ನನ್ನ ಹೆತ್ತವರಾಗಿ ಮರುಜನ್ಮ ಪಡೆಯುತ್ತಾರೆ ಮತ್ತು ನನಗೆ ಬಹಳಷ್ಟು ಸಹಾಯ ಮಾಡುತ್ತಾರೆ, ಆದ್ದರಿಂದ ಮೂರು ಬಾರಿ ಅವರು ನನಗೆ ಸಹಾಯಕವಾಗಿರುತ್ತಾರೆ.
- ಪ್ರತಿಯಾಗಿ ನಾನು ಕೋಪಗೊಂಡರೆ, ನಾನು ಕಾಡು ಪ್ರಾಣಿಗಿಂತ ಉತ್ತಮನಲ್ಲ. ಆದ್ದರಿಂದ, ಈ ಜನ್ಮದಲ್ಲಿ ಅವರು ನನಗೆ ಮಾಡಬಹುದಾದ ಚಿಕ್ಕಪುಟ್ಟ ಹಾನಿಯ ಬಗ್ಗೆ ಕೋಪಗೊಳ್ಳುವುದನ್ನು ನಾನು ನಿಲ್ಲಿಸುತ್ತೇನೆ.
ನಾವು ಇಷ್ಟಪಡುವವರ ಜೊತೆಗಿನ ಬಾಂಧವ್ಯವನ್ನು ನಿಲ್ಲಿಸುವುದು
- ಆರಂಭದಲ್ಲಿ ನಾವು ಕಲ್ಪಿಸಿಕೊಂಡ ಶತ್ರು, ಸ್ನೇಹಿತ ಮತ್ತು ಅಪರಿಚಿತರ ಗುಂಪಿನಲ್ಲಿರುವ ನಮ್ಮ ಸ್ನೇಹಿತ ಅಥವಾ ಪ್ರೀತಿಪಾತ್ರರ ಮೇಲೆ ನಾವು ಗಮನ ಹರಿಸುತ್ತೇವೆ.
- ಅವಳ ಕಡೆಗೆ ನಮ್ಮ ಆಕರ್ಷಣೆ ಮತ್ತು ಬಾಂಧವ್ಯದ ಭಾವನೆಯನ್ನು ಹುಟ್ಟುಹಾಕುತ್ತೇವೆ.
- ಈ ವ್ಯಕ್ತಿಯ ಜೊತೆ ಇರಬೇಕೆಂಬ ಬಯಕೆಯನ್ನು ಭಾವಿಸಲು ನಮಗೆ ನಾವು ಅವಕಾಶ ಮಾಡಿಕೊಡುತ್ತೇವೆ, ನಂತರ ನಾವು
- ಅಂತಹ ವ್ಯಾಮೋಹ ಮತ್ತು ಬಾಂಧವ್ಯವನ್ನು ಹೊಂದಲು ನಮ್ಮ ಕಾರಣಗಳನ್ನು ಪರೀಕ್ಷಿಸುತ್ತೇವೆ. ಏಕೆಂದರೆ ಅವಳು ಈ ಜೀವನದಲ್ಲಿ ನನಗೆ ಚಿಕ್ಕಪುಟ್ಟ ಸಹಾಯ ಮಾಡಿರುವುದರಿಂದ, ನನಗೆ ಏನಾದರೂ ಒಳ್ಳೆಯದನ್ನು ಮಾಡಿರುವುದರಿಂದ, ನನಗೆ ಒಳ್ಳೆಯದನ್ನು ಅನುಭವಿಸುವಂತಹದ್ದೇನಾದರೂ ಮಾಡಿರುವುದರಿಂದ ನಾನು ಅವಳತ್ತ ಆಕರ್ಷಿತನಾಗಿದ್ದೇನೆ ಮತ್ತು ಬಾಂಧವ್ಯ ಹೊಂದಿದ್ದೇನೆ.
- ಈಗ, ಅಂತಹ ಭಾವನೆಯನ್ನು ಹೊಂದಲು ಇದು ಸರಿಯಾದ ಕಾರಣವೇ ಎಂದು ನಾವು ಪರಿಶೀಲಿಸುತ್ತೇವೆ. ಇದು ಒಳ್ಳೆಯ ಕಾರಣವೂ ಅಲ್ಲ, ಏಕೆಂದರೆ:
- ನಿಸ್ಸಂದೇಹವಾಗಿ ಹಿಂದಿನ ಜನ್ಮಗಳಲ್ಲಿ, ಅವಳು ನನ್ನ ಶತ್ರುವಾಗಿದ್ದಳು, ನನ್ನನ್ನು ನೋಯಿಸಿದ್ದಳು, ಮತ್ತು ನನ್ನ ಮಾಂಸವನ್ನು ತಿಂದು ನನ್ನ ರಕ್ತವನ್ನು ಸಹ ಕುಡಿದಿರುವಳು.
- ಈ ಜನ್ಮದ ನಂತರ, ಅವಳು ನನ್ನ ಕೆಟ್ಟ ಶತ್ರುವಾಗುವುದಿಲ್ಲ ಎಂಬುದರ ಖಚಿತತೆಯಿಲ್ಲ.
- ಭವಿಷ್ಯದ ಜನ್ಮಗಳಲ್ಲಿ, ಅವಳು ನನ್ನನ್ನು ನೋಯಿಸುತ್ತಾಳೆ ಅಥವಾ ಕೆಲವು ಸಮಯದಲ್ಲಿ ನನಗೆ ನಿಜವಾಗಿಯೂ ಅಸಹ್ಯಕರವಾದದ್ದನ್ನು ಮಾಡುತ್ತಾಳೆ ಎಂಬುದು ಖಚಿತವಾಗಿದೆ.
- ಈ ಜೀವನದಲ್ಲಿ ಅವಳು ನನಗೆ ಒಳ್ಳೆಯದನ್ನು ಆದರೆ ಕ್ಷುಲ್ಲಕವಾದದ್ದನ್ನು ಮಾಡಿದಳು ಎಂಬ ಸಣ್ಣ ಕಾರಣಕ್ಕಾಗಿ, ನಾನು ಅವಳ ಮೇಲೆ ಮೋಹಗೊಂಡು ಅವಳೊಂದಿಗೆ ಬಾಂಧವ್ಯ ಬೆಳೆಸಿದರೆ, ನರಭಕ್ಷಕ ಮಹಿಳೆಯರ ಹಾಡುಗಳಿಂದ ಆಕರ್ಷಿತರಾಗುವ ಪುರುಷರಿಗಿಂತ ನಾನು ಉತ್ತಮನಲ್ಲ. ಈ ಸೈರನ್ಗಳು ಸುಂದರವಾಗಿ ಕಾಣಿಸಿಕೊಳ್ಳುತ್ತವೆ, ಪುರುಷರನ್ನು ತಮ್ಮ ವೈಯಾರದಿಂದ ಆಕರ್ಷಿಸುತ್ತವೆ ಮತ್ತು ನಂತರ ಅವರನ್ನು ನುಂಗುತ್ತವೆ.
- ಈ ರೀತಿಯಾಗಿ, ಈ ಜೀವನದಲ್ಲಿ ಅವನು ಅಥವಾ ಅವಳು ನಮಗಾಗಿ ಮಾಡುವ ಕೆಲವು ಚಿಕ್ಕಪುಟ್ಟ ಒಳ್ಳೆಯ ಕೆಲಸದಿಂದ ಯಾರೊಂದಿಗೂ ಎಂದಿಗೂ ಬಾಂಧವ್ಯ ಬೆಳೆಸಬಾರದು ಎಂದು ನಿರ್ಧರಿಸುತ್ತೇವೆ.
ತಟಸ್ಥ ವ್ಯಕ್ತಿಯ ಬಗೆಗಿರುವ ಅಸಡ್ಡೆಯ ಭಾವನೆಯನ್ನು ನಿಲ್ಲಿಸುವುದು
ಮೂರನೆಯದಾಗಿ, ಇವರೆಡರ ನಡುವೆ ಇರುವ ವ್ಯಕ್ತಿಯೊಂದಿಗೆ - ಸ್ನೇಹಿತ ಅಥವಾ ಶತ್ರುವಲ್ಲದ ಅಪರಿಚಿತರೊಂದಿಗೆ ನಾವು ಇದೇ ವಿಧಾನವನ್ನು ಅನುಸರಿಸುತ್ತೇವೆ.
- ನಮ್ಮ ದೃಶ್ಯೀಕರಣದಿಂದ ನಾವು ಅಂತಹ ವ್ಯಕ್ತಿಯ ಮೇಲೆ ಕೇಂದ್ರೀಕರಿಸುತ್ತೇವೆ,
- ನಾವು ಏನನ್ನೂ ಅನುಭವಿಸಬಾರದು, ಹಾನಿಯುಂಟುಮಾಡುವ ಅಥವಾ ಸಹಾಯ ಮಾಡುವ ಬಯಕೆಯನ್ನು ಹೊಂದಿರಬಾರದು, ಈ ವ್ಯಕ್ತಿಯನ್ನು ಹೊಡೆದುಹಾಕಲು ಅಥವಾ ಅವರೊಂದಿಗೆ ಇರಲು ಬಯಸಬಾರದು,
- ಮತ್ತು ಅವಳನ್ನು ನಿರ್ಲಕ್ಷಿಸುವ ಉದ್ದೇಶವನ್ನು ಮತ್ತಷ್ಟು ಅನುಭವಿಸಬಾರದು.
- ಈ ರೀತಿ ಭಾವಿಸಲು ನಮ್ಮ ಕಾರಣವನ್ನು ನಾವು ಪರಿಶೀಲಿಸುತ್ತೇವೆ. ಅವಳು ನನಗೆ ಸಹಾಯ ಮಾಡುವ ಅಥವಾ ನೋವುಂಟು ಮಾಡುವಂತಹ ಕೆಲಸವನ್ನು ಮಾಡಿಲ್ಲ, ಆದ್ದರಿಂದ ನನಗೆ ಅವಳೊಂದಿಗೆ ಯಾವುದೇ ಸಂಬಂಧವಿಲ್ಲ.
- ಈ ರೀತಿ ಭಾವಿಸಲು ಇದು ಸರಿಯಾದ ಕಾರಣವೇ ಎಂದು ನಾವು ಮತ್ತಷ್ಟು ಪರಿಶೀಲಿಸಿದಾಗ, ಅವಳು ಅಂತಿಮವಾಗಿ ಅಪರಿಚಿತಳಲ್ಲ ಎಂದು ನಾವು ನೋಡುತ್ತೇವೆ, ಏಕೆಂದರೆ ಲೆಕ್ಕವಿಲ್ಲದಷ್ಟು ಹಿಂದಿನ ಜನ್ಮಗಳಲ್ಲಿ, ಈ ಜನ್ಮದ ನಂತರದ ಜನ್ಮದಲ್ಲಿ ಮತ್ತು ಭವಿಷ್ಯದ ಜನ್ಮಗಳಲ್ಲಿ ಅವಳು ಹತ್ತಿರವಾಗಿರುತ್ತಾಳೆ, ಅವಳು ಸ್ನೇಹಿತಳಾಗಿರುತ್ತಾಳೆ, ಇತ್ಯಾದಿ.
ಈ ರೀತಿಯಾಗಿ, ಶತ್ರುಗಳು, ಸ್ನೇಹಿತರು ಮತ್ತು ಅಪರಿಚಿತರ ಬಗ್ಗೆ ಕೋಪ, ಬಾಂಧವ್ಯ ಅಥವಾ ಉದಾಸೀನತೆಯ ಎಲ್ಲಾ ಭಾವನೆಗಳನ್ನು ನಾವು ನಿಲ್ಲಿಸಲು ಸಾಧ್ಯವಾಗುತ್ತದೆ. ಶ್ರಾವಕರು ಮತ್ತು ಪ್ರತ್ಯೇಕಬುದ್ಧರಂತೆಯೇ ನಾವು ಕೂಡ ‘ಕೇವಲ’ ಸಮಚಿತ್ತತೆಯನ್ನು ಬೆಳೆಸಿಕೊಳ್ಳುವ ಮಾರ್ಗ ಇದು ಮತ್ತು ಬೋಧಿಚಿತ್ತದ ಸಮರ್ಪಿತ ಹೃದಯವನ್ನು ಅಭಿವೃದ್ಧಿಪಡಿಸಲು ಏಳು ಭಾಗಗಳ ಕಾರಣ ಮತ್ತು ಪರಿಣಾಮ ವಿಧಾನದಲ್ಲಿ ಎಲ್ಲರೂ ನಮ್ಮ ತಾಯಂದಿರು ಎಂದು ಗುರುತಿಸುವುದರ ಪೂರ್ವಭಾವಿಯಾಗಿ ಇದನ್ನು ಅಭಿವೃದ್ಧಿಪಡಿಸಲಾಗಿರುತ್ತದೆ.
ನಮ್ಮ ವರ್ತನೆಗಳನ್ನು ಸಮೀಕರಿಸಲು ಮತ್ತು ಅದಲು-ಬದಲು ಮಾಡಿಕೊಳ್ಳುವುದರ ಪೂರ್ವಭಾವಿಯಾಗಿ ಅಸಾಮಾನ್ಯ ಮಹಾಯಾನ ಸಮತೆ
ಸ್ವಯಂ ಮತ್ತು ಇತರರ ಬಗೆಗಿರುವ ನಮ್ಮ ವರ್ತನೆಗಳನ್ನು ಸಮೀಕರಿಸಲು ಮತ್ತು ಅದಲು-ಬದಲು ಮಾಡಿಕೊಳ್ಳುವುದರ ಪೂರ್ವಭಾವಿಯಾಗಿರುವ ಅಸಾಮಾನ್ಯ ಮಹಾಯಾನ ಸಮತೆಯನ್ನು ಬೆಳೆಸುವ ಮಾರ್ಗವನ್ನು ಹೀಗೆ ವಿಂಗಡಿಸಲಾಗಿದೆ:
- ಸಾಪೇಕ್ಷ ದೃಷ್ಟಿಕೋನವನ್ನು ಅವಲಂಬಿಸಿರುವ ಸಮತೆಯನ್ನು ವಾಸ್ತವಿಕಗೊಳಿಸುವ ಮಾರ್ಗ
- ಆಳವಾದ ದೃಷ್ಟಿಕೋನವನ್ನು ಅವಲಂಬಿಸಿರುವ ಸಮತೆಯನ್ನು ವಾಸ್ತವಿಕಗೊಳಿಸುವ ಮಾರ್ಗ.
ಸಾಪೇಕ್ಷ ದೃಷ್ಟಿಕೋನವನ್ನು ಅವಲಂಬಿಸಿರುವ ಮಾರ್ಗವನ್ನು ಹೀಗೆ ವಿಂಗಡಿಸಲಾಗಿದೆ:
- ನಮ್ಮ ಸ್ವಂತ ದೃಷ್ಟಿಕೋನಗಳನ್ನು ಅವಲಂಬಿಸಿರುವ ಸಮತೆಯನ್ನು ವಾಸ್ತವಿಕಗೊಳಿಸುವ ಮಾರ್ಗ
- ಇತರರ ದೃಷ್ಟಿಕೋನಗಳನ್ನು ಅವಲಂಬಿಸಿರುವ ಸಮತೆಯನ್ನು ವಾಸ್ತವಿಕಗೊಳಿಸುವ ಮಾರ್ಗ.
ನಮ್ಮ ಸ್ವಂತ ದೃಷ್ಟಿಕೋನಗಳನ್ನು ಅವಲಂಬಿಸಿರುವ ಸಮತೆಯನ್ನು ವಾಸ್ತವಿಕಗೊಳಿಸುವ ಮಾರ್ಗ
ಇದರಲ್ಲಿ ಮೂರು ಅಂಶಗಳಿವೆ:
- ಎಲ್ಲಾ ಸೀಮಿತ ಜೀವಿಗಳು ಅಸಂಖ್ಯಾತ ಜೀವನಗಳಲ್ಲಿ ನಮ್ಮ ಪೋಷಕರು, ಸಂಬಂಧಿಕರು ಮತ್ತು ಸ್ನೇಹಿತರಾಗಿರುವುದರಿಂದ, ಕೆಲವರು ಹತ್ತಿರದವರು ಮತ್ತು ಇತರರು ದೂರದವರು, ಅವರು ಸ್ನೇಹಿತ ಮತ್ತು ಇವರು ಶತ್ರು ಎಂದು ಭಾವಿಸುವುದು, ಕೆಲವರನ್ನು ಸ್ವಾಗತಿಸುವುದು ಮತ್ತು ಇತರರನ್ನು ತಿರಸ್ಕರಿಸುವುದು ಅನುಚಿತವಾಗಿರುತ್ತದೆ. ಅದೇನೇ ಆಗಿರಲಿ, ನಾನು ಹತ್ತು ನಿಮಿಷಗಳು, ಹತ್ತು ವರ್ಷಗಳು ಅಥವಾ ಹತ್ತು ಜನ್ಮಗಳಲ್ಲಿ ನನ್ನ ತಾಯಿಯನ್ನು ನೋಡಿಲ್ಲದಿದ್ದರೂ, ಅವರು ಇನ್ನೂ ನನ್ನ ತಾಯಿಯಾಗಿರುತ್ತಾರೆ ಎಂದು ನಾವು ಯೋಚಿಸಬೇಕು.
- ಆದರೆ, ಈ ಜೀವಿಗಳು ನನಗೆ ಸಹಾಯ ಮಾಡಿದಂತೆಯೇ, ಕೆಲವೊಮ್ಮೆ ಅವರು ನನಗೆ ಹಾನಿಯುಂಟುಮಾಡಿರುವ ಸಾಧ್ಯತೆಯಿರುತ್ತದೆ. ಅವರು ನನಗೆ ಎಷ್ಟು ಬಾರಿ ಸಹಾಯ ಮಾಡಿದ್ದಾರೆ ಮತ್ತು ಅವರು ನನಗೆ ಸಹಾಯ ಮಾಡಿದ ಮೊತ್ತಕ್ಕೆ ಹೋಲಿಸಿದರೆ, ಅವರು ಮಾಡಿದ ಹಾನಿಯ ಪ್ರಮಾಣವು ಕ್ಷುಲ್ಲಕವಾಗಿರುತ್ತದೆ. ಆದ್ದರಿಂದ, ಒಬ್ಬರನ್ನು ಹತ್ತಿರದಿಂದ ಸ್ವಾಗತಿಸುವುದು ಮತ್ತು ಇನ್ನೊಬ್ಬರನ್ನು ದೂರದಿಂದ ತಿರಸ್ಕರಿಸುವುದು ಅನುಚಿತವಾಗಿರುತ್ತದೆ.
- ನಾವು ಖಂಡಿತವಾಗಿಯೂ ಸಾಯುತ್ತೇವೆ, ಆದರೆ ನಮ್ಮ ಸಾವಿನ ಸಮಯವು ಸಂಪೂರ್ಣವಾಗಿ ಅನಿಶ್ಚಿತವಾಗಿದೆ. ಉದಾಹರಣೆಗೆ, ನಮಗೆ ನಾಳೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ ಎಂದು ಭಾವಿಸೋಣ. ಕೋಪಗೊಳ್ಳಲು ಮತ್ತು ಯಾರನ್ನಾದರೂ ನೋಯಿಸಲು ನಮ್ಮ ಕೊನೆಯ ದಿನವನ್ನು ಬಳಸುವುದು ಅಸಂಬದ್ಧವಾಗಿರುತ್ತದೆ. ಕ್ಷುಲ್ಲಕವಾದದ್ದನ್ನು ಆರಿಸುವ ಮೂಲಕ, ನಮ್ಮ ಕೊನೆಯ ದಿನದೊಂದಿಗೆ ಸಕಾರಾತ್ಮಕ ಮತ್ತು ಅರ್ಥಪೂರ್ಣವಾದ ಏನನ್ನಾದರೂ ಮಾಡುವ ಅವಕಾಶವನ್ನು ನಾವು ಕಳೆದುಕೊಳ್ಳುತ್ತೇವೆ. ಉದಾಹರಣೆಗೆ, ಒಮ್ಮೆ ಒಬ್ಬ ಉನ್ನತ ಅಧಿಕಾರಿ ಒಬ್ಬರ ಮೇಲೆ ಕೋಪಗೊಂಡು ಮರುದಿನ ಅವನನ್ನು ಕಠಿಣವಾಗಿ ಶಿಕ್ಷಿಸಬೇಕೆಂದು ಯೋಚಿಸಿದನು. ಅವನು ಆ ದಿನವಿಡೀ ಅದನ್ನು ಯೋಜಿಸುವುದರಲ್ಲಿ ಕಳೆದನು ಆದರೆ ಮರುದಿನ ಬೆಳಿಗ್ಗೆ, ಅವನು ಏನೇ ಮಾಡುವುದರ ಮೊದಲು, ಇದ್ದಕ್ಕಿದ್ದಂತೆ ಸತ್ತುಹೋದನು. ಅವನ ಕೋಪವು ಸಂಪೂರ್ಣವಾಗಿ ಅಸಂಬದ್ಧವಾಗಿತ್ತು. ಇನ್ನೊಬ್ಬ ವ್ಯಕ್ತಿಯು ಮರುದಿನ ಸಾಯುವಂತೆ ಶಿಕ್ಷೆ ವಿಧಿಸಿದರೂ ಇದೇ ಅನ್ವಯವಾಗುತ್ತದೆ. ಇಂದು ಅವನನ್ನು ನೋಯಿಸುವುದರಲ್ಲಿ ಅರ್ಥವಿರುವುದಿಲ್ಲ.
ಇತರರ ದೃಷ್ಟಿಕೋನಗಳನ್ನು ಅವಲಂಬಿಸಿರುವ ಸಮಾನತೆಯನ್ನು ವಾಸ್ತವಿಕಗೊಳಿಸುವ ಮಾರ್ಗ
ಇದನ್ನು ಮೂರು ಅಂಶಗಳಾಗಿ ವಿಂಗಡಿಸಲಾಗಿದೆ.
- ನಾವು ಇದನ್ನು ಪರಿಗಣಿಸಬೇಕಾಗಿದೆ: ನನ್ನ ವಿಷಯವಾಗಿ ನೋಡಿದರೆ, ನಾನು ಕನಸಿನಲ್ಲಿಯೂ ಸಹ ಬಳಲಲು ಬಯಸುವುದಿಲ್ಲ. ನನಗೆ ಎಷ್ಟೇ ಸಂತೋಷವಿದ್ದರೂ ಅದು ಸಾಕಾಗುವುದಿಲ್ಲ ಎಂದು ನನಗೆ ಅನಿಸುತ್ತದೆ. ಎಲ್ಲರ ವಿಷಯದಲ್ಲೂ ಇದು ನಿಜವಾಗಿರುತ್ತದೆ. ಒಂದು ಸಣ್ಣ ಕೀಟದಿಂದ ಹಿಡಿದು ಎಲ್ಲಾ ಸೀಮಿತ ಜೀವಿಗಳು ಸಂತೋಷವಾಗಿರಲು ಮತ್ತು ಎಂದಿಗೂ ಬಳಲಬಾರದು ಅಥವಾ ಯಾವುದೇ ಸಮಸ್ಯೆಗಳನ್ನು ಹೊಂದಿರಬಾರದು ಎಂದು ಬಯಸುತ್ತವೆ. ಆದ್ದರಿಂದ, ಕೆಲವರನ್ನು ತಿರಸ್ಕರಿಸುವುದು ಮತ್ತು ಇತರರನ್ನು ಸ್ವಾಗತಿಸುವುದು ಅನುಚಿತವಾಗಿರುತ್ತದೆ.
- ಹತ್ತು ಭಿಕ್ಷುಕರು ನನ್ನ ಮನೆ ಬಾಗಿಲಿಗೆ ಬಂದರು ಎಂದು ಭಾವಿಸೋಣ. ಕೆಲವರಿಗೆ ಮಾತ್ರ ಆಹಾರವನ್ನು ನೀಡುವುದು ಮತ್ತು ಉಳಿದವರಿಗೆ ನೀಡದಿರುವುದು ಸಂಪೂರ್ಣವಾಗಿ ಅನುಚಿತವಾಗಿರುತ್ತದೆ ಮತ್ತು ಅನ್ಯಾಯವಾಗಿರುತ್ತದೆ. ಅವರೆಲ್ಲರೂ ತಮ್ಮ ಹಸಿವು ಮತ್ತು ಆಹಾರದ ಅಗತ್ಯದಲ್ಲಿ ಸಮಾನರು. ಅದೇ ರೀತಿಯಾಗಿ ಗೊಂದಲವಿಲ್ಲದ ಸಂತೋಷದ ಬಗ್ಗೆ ಯೋಚಿಸಿದರೆ - ಅದು ಯಾರ ಬಳಿಯಿದೆ? ಆದರೆ ಗೊಂದಲದಿಂದ ಕಳಂಕಿತವಾದ ಸಂತೋಷಕ್ಕೂ ಸಹ - ಎಲ್ಲಾ ಸೀಮಿತ ಜೀವಿಗಳಲ್ಲಿ ಅದರ ಸಾಕಷ್ಟು ಕೊರತೆಯಿದೆ.ಈ ವಿಷಯವನ್ನು ಹುಡುಕುವಲ್ಲಿ ಪ್ರತಿಯೊಬ್ಬರು ತೀವ್ರ ಆಸಕ್ತಿ ಹೊಂದಿರುವರು. ಆದ್ದರಿಂದ, ಕೆಲವರನ್ನು ದೂರದಿಂದಲೇ ತಿರಸ್ಕರಿಸುವುದು ಮತ್ತು ಇತರರನ್ನು ಹತ್ತಿರವಾಗಿ ಆಲಂಗಿಸಿಕೊಳ್ಳುವುದು ಅನುಚಿತವಾಗಿರುತ್ತದೆ.
- ಇನ್ನೊಂದು ಉದಾಹರಣೆಯಾಗಿ, ಹತ್ತು ಹುಷಾರು ತಪ್ಪಿದ ಜನರು ಇದ್ದರು ಎಂದು ಭಾವಿಸೋಣ. ಅವರೆಲ್ಲರೂ ದುಃಖಿತರು ಮತ್ತು ಕರುಣಾಜನಕರಾಗಿರುವುದರಲ್ಲಿ ಸಮಾನರು. ಆದ್ದರಿಂದ, ಕೆಲವರಿಗೆ ಮಾತ್ರ ಒಲವು ತೋರುವುದು, ಅವರಿಗೆ ಮಾತ್ರ ಚಿಕಿತ್ಸೆ ನೀಡುವುದು ಮತ್ತು ಇತರರನ್ನು ಮರೆತುಬಿಡುವುದು ಅನ್ಯಾಯವಾಗಿರುತ್ತದೆ. ಅದೇ ರೀತಿ, ಎಲ್ಲಾ ಸೀಮಿತ ಜೀವಿಗಳು ತಮ್ಮ ನಿರ್ದಿಷ್ಟ ವೈಯಕ್ತಿಕ ತೊಂದರೆಗಳಿಂದ ಮತ್ತು ಅನಿಯಂತ್ರಿತವಾಗಿ ಮರುಕಳಿಸುವ ಅಸ್ತಿತ್ವ ಅಥವಾ ಸಂಸಾರದ ಸಾಮಾನ್ಯ ಸಮಸ್ಯೆಗಳಿಂದ ಸಮಾನವಾಗಿ ದುಃಖಿತರಾಗಿರುತ್ತಾರೆ. ಆ ಕಾರಣದಿಂದಾಗಿ, ಕೆಲವನ್ನು ದೂರವಾಗಿರಿಸಿ ತಿರಸ್ಕರಿಸುವುದು ಮತ್ತು ಇತರರನ್ನು ಹತ್ತಿರದಿಂದ ಸ್ವಾಗತಿಸುವುದು ಅನ್ಯಾಯ ಮತ್ತು ಅನುಚಿತವಾಗಿರುತ್ತದೆ.
ಆಳವಾದ ದೃಷ್ಟಿಕೋನವನ್ನು ಅವಲಂಬಿಸಿರುವ ಸಮಾನತೆಯನ್ನು ವಾಸ್ತವಿಕಗೊಳಿಸುವ ಮಾರ್ಗ
ಇದು ಸಹ ಮೂರು ಚಿಂತನೆಗಳನ್ನು ಒಳಗೊಂಡಿದೆ.
- ನಮ್ಮ ಗೊಂದಲದಿಂದಾಗಿ, ನಮಗೆ ಸಹಾಯ ಮಾಡುವ ಅಥವಾ ನಮಗೆ ದಯೆ ತೋರುವ ವ್ಯಕ್ತಿಯನ್ನು ನಾವು ನಿಜವಾದ ಸ್ನೇಹಿತ ಮತ್ತು ನಮಗೆ ನೋವುಂಟು ಮಾಡುವ ವ್ಯಕ್ತಿಯನ್ನು ನಿಜವಾದ ಶತ್ರು ಎಂದು ಹೇಗೆ ನೇಮಿಸುತ್ತೇವೆ ಎಂಬುದರ ಕುರಿತು ನಾವು ಯೋಚಿಸುತ್ತೇವೆ. ಆದರೆ ನಾವು ಅವರನ್ನು ನೇಮಿಸಿದ ರೀತಿಯಲ್ಲಿಯೇ ಅವರು ನಿಜವಾಗಿಯೂ ಅಸ್ತಿತ್ವದಲ್ಲಿದ್ದಾರೆ ಎಂದು ಸ್ಥಾಪಿತವಾಗಿದ್ದರೆ, ಬುದ್ಧನು ಸಹ ಅವರನ್ನು ಹಾಗೆಯೇ ನೋಡಬೇಕಾಗಿತ್ತು. ಆದರೆ, ಅವರು ಎಂದಿಗೂ ಹಾಗೆ ಮಾಡಲಿಲ್ಲ. ಧರ್ಮಕೀರ್ತಿಯವರು, “(ದಿಗ್ನಾಗ ಅವರ) ಮಾನ್ಯವಾಗಿ ಅರಿತುಕೊಳ್ಳುವ ಮನಸ್ಸುಗಳ ಸಂಗ್ರಹದ ವ್ಯಾಖ್ಯಾನ [A Commentary on (Dignaga’s “Compendium of) Validly Cognizing Minds]” (ಸಂಸ್ಕೃತ. ಪ್ರಮಾಣವರ್ತಿಕ) ದಲ್ಲಿ ಹೇಳಿರುವಂತೆ, “ಬುದ್ಧನು, ತನ್ನ ದೇಹದ ಒಂದು ಬದಿಗೆ ಪರಿಮಳಯುಕ್ತ ನೀರನ್ನು ಹಚ್ಚುವ ಮತ್ತು ಇನ್ನೊಂದು ಬದಿಯಲ್ಲಿ ಕತ್ತಿಯಿಂದ ಅವನನ್ನು ಕತ್ತರಿಸುವ ಇಬ್ಬರ ಬಳಿಯೂ ಒಂದೇ ರೀತಿಯಾಗಿ ನಡೆದುಕೊಳ್ಳುತ್ತಾನೆ.”
ಬುದ್ಧನು ತಮ್ಮ ಸೋದರಸಂಬಂಧಿ ದೇವದತ್ತನೊಂದಿಗೆ ಹೇಗೆ ನಡೆದುಕೊಂಡರು ಎಂಬುದರ ಉದಾಹರಣೆಯಲ್ಲಿಯೂ ನಾವು ಈ ನಿಷ್ಪಕ್ಷಪಾತತೆಯನ್ನು ನೋಡಬಹುದು, ಅವನು ಯಾವಾಗಲೂ ಅಸೂಯೆಯಿಂದ ಅವರಿಗೆ ಹಾನಿಯುಂಟುಮಾಡಲು ಪ್ರಯತ್ನಿಸುತ್ತಿದ್ದನು. ಆದ್ದರಿಂದ, ನಾವು ಕೂಡ ಪಕ್ಷಪಾತಿಗಳಾಗಿರುವುದನ್ನು ಮತ್ತು ಜನರು ನಾವು ಅವರನ್ನು ಯಾವ ವರ್ಗಗಳಲ್ಲಿ ನೇಮಿಸುತ್ತೇವೆಯೋ ಆ ವರ್ಗಗಳಲ್ಲಿ ಅವರು ನಿಜವಾಗಿಯೂ ಅಸ್ತಿತ್ವದಲ್ಲಿದ್ದಾರೆ ಎಂದು ಗೊಂದಲದಿಂದ ಯೋಚಿಸುವುದನ್ನು ತಪ್ಪಿಸಬೇಕು. ಯಾರೂ ಆ ರೀತಿಯಾಗಿ ಅಸ್ತಿತ್ವದಲ್ಲಿರುವುದಿಲ್ಲ. ನಿಜವಾಗಿಯೂ, ಸ್ಥಾಪಿತವಾದ ಅಸ್ತಿತ್ವವನ್ನು ಹಿಡಿದಿಟ್ಟುಕೊಳ್ಳಲು ಪ್ರಯತ್ನಿಸುವುದನ್ನು ನಿಲ್ಲಿಸಲು ನಾವು ಕೆಲಸ ಮಾಡಬೇಕಾಗಿದೆ. ಈ ಗ್ರಹಿಕೆಯು ನಮ್ಮ ಗೊಂದಲಮಯ ಮನಸ್ಸಿನಿಂದ ಬರುತ್ತದೆ, ಅದು ನಮಗೆ ಸತ್ಯವಲ್ಲದ ರೀತಿಯಲ್ಲಿ ವಿಷಯಗಳನ್ನು ಗೋಚರಿಸುತ್ತದೆ. - ಇದಲ್ಲದೆ, ಸೀಮಿತ ಜೀವಿಗಳು ಸ್ನೇಹಿತ ಮತ್ತು ಶತ್ರುಗಳ ವರ್ಗಗಳಲ್ಲಿ ನಿಜವಾಗಿಯೂ ಅಸ್ತಿತ್ವದಲ್ಲಿವೆ ಎಂದು ಸ್ಥಾಪಿಸಲ್ಪಟ್ಟಿದ್ದರೆ, ನಾವು ಅವುಗಳನ್ನು ಹೇಗೆ ಗ್ರಹಿಸುತ್ತೇವೆಯೋ, ಅವು ಯಾವಾಗಲೂ ಹಾಗೆಯೇ ಇರಬೇಕಾಗುತ್ತದೆ. ಉದಾಹರಣೆಗೆ, ನಾವು ಭಾವಿಸುವ ಗಡಿಯಾರವು ಯಾವಾಗಲೂ ಸರಿಯಾದ ಸಮಯವನ್ನು ತೋರಿಸುತ್ತದೆ ಎಂದು ಪರಿಗಣಿಸಿ. ಕೆಲವೊಮ್ಮೆ ಅದು ಸ್ವಲ್ಪ ಬದಲಾಗಿ, ನಿಧಾನವಾಗಿ ಚಲಿಸಲು ಸಾಧ್ಯವಿರುವಂತೆಯೇ, ಇತರರ ಸ್ಥಿತಿಯು ಸ್ಥಿರವಾಗಿರುವುದಿಲ್ಲ, ಬದಲಿಗೆ ಬದಲಾಗುತ್ತಿರಬಹುದು.
ಸಂಸಾರದಲ್ಲಿ ಅನಿಯಂತ್ರಿತವಾಗಿ ಪುನರಾವರ್ತಿತವಾಗುವ ಸನ್ನಿವೇಶಗಳಲ್ಲಿ ಯಾವುದೇ ಖಚಿತತೆಯಿಲ್ಲ ಎಂಬ ಅಂಶದ ಬಗ್ಗೆ ನಾವು ಯೋಚಿಸಿದರೆ, ಮಗನು ತನ್ನ ತಂದೆಯನ್ನೇ ತಿನ್ನುವುದು, ತನ್ನ ತಾಯಿಗೆ ಹೊಡೆಯುವುದು ಮತ್ತು ತನ್ನ ಶತ್ರುವನ್ನು ಆಲಂಗಿಸಿಕೊಳ್ಳುವಂತಹ ಮುಂತಾದ ಉದಾಹರಣೆಗಳು ಸಹಾಯ ಮಾಡುತ್ತವೆ. ಈ ಉದಾಹರಣೆಯು ಜ್ಞಾನೋದಯದ ಮಾರ್ಗವಾದ ಕ್ರಮವಾದ ಹಂತಗಳಲ್ಲಿ (ಲ್ಯಾಮ್-ರಿಮ್) ಮಧ್ಯಂತರ ಮಟ್ಟದ ಪ್ರೇರಣೆಯನ್ನು ಅಭಿವೃದ್ಧಿಪಡಿಸುವ ಸೂಚನೆಗಳಲ್ಲಿ ಬರುತ್ತದೆ. ಒಮ್ಮೆ, ಹೆಚ್ಚು ಸಾಕ್ಷಾತ್ಕಾರಗೊಂಡ ಆರ್ಯ ಕಾತ್ಯಾಯನನು ಒಂದು ಮನೆಗೆ ಬಂದನು, ಅಲ್ಲಿ ಒಬ್ಬ ತಂದೆ, ಕೊಳದಲ್ಲಿರುವ ಮೀನಾಗಿ ಮರುಜನ್ಮ ಪಡೆದಿದ್ದನು ಮತ್ತು ಅವನ ಮಗ ಅವನನ್ನು ತಿನ್ನುತ್ತಿದ್ದನು. ನಂತರ ಮಗನು ತನ್ನ ತಾಯಿಯಾಗಿದ್ದ ನಾಯಿಯನ್ನು ತನ್ನ ತಂದೆಯ ಮೀನಿನ ಮೂಳೆಗಳಿಂದ ಹೊಡೆದನು ಮತ್ತು ತನ್ನ ಶತ್ರುವಾಗಿದ್ದ ಮಗುವನ್ನು ತನ್ನ ತೋಳುಗಳಲ್ಲಿ ಎತ್ತಿಕೊಂಡು ತೊಟ್ಟಿಲಿನಲ್ಲಿ ಮಲಗಿಸಿದನು. ಸಂಸಾರದಲ್ಲಿ ಅಲೆದಾಡುವ ಜೀವಿಗಳ ಸ್ಥಿತಿಯಲ್ಲಿನ ಅಂತಹ ಬದಲಾವಣೆಗಳ ಅಸಂಬದ್ಧತೆಯನ್ನು ನೋಡಿ ಕಾತ್ಯಾಯನ ನಕ್ಕನು. ಹೀಗಾಗಿ, ಸ್ನೇಹಿತ ಅಥವಾ ಶತ್ರು ಎಂಬ ಸ್ಥಿರವಾದ ಮತ್ತು ಶಾಶ್ವತ ವರ್ಗಗಳಲ್ಲಿ ಜನರಿರಬೇಕು ಎಂದು ಧೃಡವಾಗಿ ಗ್ರಹಿಸುವುದನ್ನು ನಾವು ನಿಲ್ಲಿಸಬೇಕು ಮತ್ತು ಆ ಆಧಾರದ ಮೇಲೆ, ಒಬ್ಬರನ್ನು ಸ್ವಾಗತಿಸಿ ಇನ್ನೊಬ್ಬರನ್ನು ತಿರಸ್ಕರಿಸುವುದನ್ನು ನಾವು ನಿಲ್ಲಿಸಬೇಕು. - ತರಬೇತಿಗಳ ಸಂಕಲನ (A Compendium of Trainings) ದಲ್ಲಿ (ಸಂಸ್ಕೃತ: ಶಿಕ್ಷಾಸಮುಚ್ಚಾಯ) ಶಾಂತಿದೇವನು ಸ್ವಯಂ ಮತ್ತು ಇತರರು ಹೇಗೆ ಪರಸ್ಪರ ಅವಲಂಬಿತರಾಗಿದ್ದಾರೆ ಎಂಬುದನ್ನು ವಿವರಿಸಿದ್ದಾನೆ. ದೂರದ ಮತ್ತು ಹತ್ತಿರದ ಪರ್ವತಗಳ ಉದಾಹರಣೆಯಂತೆ, ಅವು ಪರಸ್ಪರ ಅವಲಂಬಿತವಾಗಿವೆ ಅಥವಾ ಸಂಬಂಧಿತ ಪದನಾಮಗಳಾಗಿವೆ. ನಾವು ಹತ್ತಿರದ ಪರ್ವತದಲ್ಲಿದ್ದಾಗ, ಆ ಇನ್ನೊಂದು ಪರ್ವತವು ದೂರದಲ್ಲಿರುವಂತೆ ಮತ್ತು ಇದು ಹತ್ತಿರದಲ್ಲಿರುವಂತೆ ತೋರುತ್ತದೆ. ನಾವು ಇನ್ನೊಂದು ಪರ್ವತದ ಬಳಿ ಹೋದಾಗ, ಇದು ದೂರದ ಪರ್ವತದಂತಾಗುತ್ತದೆ ಮತ್ತು ಅದು ಹತ್ತಿರದ ಪರ್ವತವಾಗುತ್ತದೆ. ಅದೇ ರೀತಿ, ನಾವು ನಮ್ಮ ಸ್ವಂತ ಬದಿಗಳಿಂದ "ಸ್ವಯಂ" ಎಂದು ಅಸ್ತಿತ್ವದಲ್ಲಿದ್ದೇವೆ ಎಂದು ಸ್ಥಾಪಿಸಲ್ಪಟ್ಟಿಲ್ಲ, ಏಕೆಂದರೆ ನಾವು ಬೇರೊಬ್ಬರ ದೃಷ್ಟಿಕೋನದಿಂದ ನಮ್ಮನ್ನು ನೋಡಿದಾಗ, ನಾವು "ಇತರರು" ಆಗಿರುತ್ತೇವೆ. ಅದೇ ರೀತಿಯಾಗಿ, ಸ್ನೇಹಿತ ಮತ್ತು ಶತ್ರು - ಒಬ್ಬ ವ್ಯಕ್ತಿಯನ್ನು ನೋಡುವ ಅಥವಾ ಪರಿಗಣಿಸುವ ವಿಭಿನ್ನ ಮಾರ್ಗಗಳಾಗಿವೆ. ಒಬ್ಬ ವ್ಯಕ್ತಿಯ ಸ್ನೇಹಿತ, ಇನ್ನೊಬ್ಬರ ಶತ್ರು ಎರಡೂ ಆಗಿರಬಹುದು. ಹತ್ತಿರದ ಮತ್ತು ದೂರದ ಪರ್ವತಗಳಂತೆ, ಇದೆಲ್ಲವೂ ನಮ್ಮ ದೃಷ್ಟಿಕೋನಗಳ ಮೇಲೆ ಆಧಾರಿತವಾಗಿರುತ್ತದೆ.
ಐದು ನಿರ್ಧಾರಗಳು
ಮೇಲಿನ ಅಂಶಗಳ ಬಗ್ಗೆ ಈ ರೀತಿ ಯೋಚಿಸುವುದರಿಂದ, ನಾವು ಐದು ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಿದೆ.
ನಾನು ಪಕ್ಷಪಾತಿಯಾಗುವುದನ್ನು ನಿಲ್ಲಿಸುತ್ತೇನೆ
ನಾವು ಸಾಪೇಕ್ಷವಾದ ಅಥವಾ ಆಳವಾದ ದೃಷ್ಟಿಕೋನದಿಂದ ನೋಡಿದರೂ, ಕೆಲವು ಜನರು ಅಥವಾ ಜೀವಿಗಳನ್ನು ಹತ್ತಿರದವರಾಗಿ ಮತ್ತು ಇತರರನ್ನು ದೂರವಿರಿಸಲು ಯಾವುದೇ ಕಾರಣವಿಲ್ಲ. ಆದ್ದರಿಂದ, ನಾವು ದೃಢವಾದ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗಿದೆ: ನಾನು ಪಕ್ಷಪಾತಿಯಾಗುವುದನ್ನು ನಿಲ್ಲಿಸುತ್ತೇನೆ. ನಾನು ಕೆಲವರನ್ನು ತಿರಸ್ಕರಿಸುವ ಮತ್ತು ಇತರರನ್ನು ಸ್ವಾಗತಿಸುವ ಪಕ್ಷಪಾತದ ಭಾವನೆಗಳನ್ನು ನಿವಾರಿಸುತ್ತೇನೆ. ಹಗೆತನ ಮತ್ತು ಬಾಂಧವ್ಯವು ಇಂದಿನ ಮತ್ತು ಭವಿಷ್ಯದ ಜೀವನದಲ್ಲಿ, ತಾತ್ಕಾಲಿಕವಾಗಿ ಮತ್ತು ಅಂತಿಮವಾಗಿ, ಅಲ್ಪಾವಧಿ ಮತ್ತು ದೀರ್ಘಾವಧಿಯಲ್ಲಿ ನನಗೆ ಹಾನಿಯುಂಟುಮಾಡುತ್ತದೆ, ಅವುಗಳಿಂದ ಯಾವುದೇ ಪ್ರಯೋಜನವಿಲ್ಲ. ಅವರು ನೂರಾರು ರೀತಿಯ ದುಃಖಗಳಿಗೆ ಬೇರುಗಳಾಗಿರುತ್ತವೆ. ಅವರು ನನ್ನ ಅನಿಯಂತ್ರಿತವಾಗಿ ಪುನರಾವರ್ತಿತ ಸಂಸಾರದ ಸಮಸ್ಯೆಗಳ ಸೆರೆಮನೆಯಲ್ಲಿ ನನ್ನನ್ನು ಸುತ್ತುವರೆದಿರುವ ಕಾವಲುಗಾರರಂತೆ ಇರುತ್ತಾರೆ.
1959 ರಲ್ಲಿ ನಡೆದ ದಂಗೆಯ ನಂತರ ಟಿಬೆಟ್ನಲ್ಲಿ ಉಳಿದುಕೊಂಡವರ ಉದಾಹರಣೆಯನ್ನು ಯೋಚಿಸಿ. ತಮ್ಮ ಮಠಗಳು, ಸಂಪತ್ತು, ಆಸ್ತಿಗಳು, ಮನೆಗಳು, ಸಂಬಂಧಿಕರು, ಸ್ನೇಹಿತರು ಮತ್ತು ಇತರವುಗಳಿಗೆ ಅಂಟಿಕೊಂಡಿದ್ದವರು ಅವುಗಳನ್ನು ಬಿಟ್ಟು ಹೋಗಲು ಸಹಿಸಲಾರರು. ಪರಿಣಾಮವಾಗಿ, ಅವರ ಬಾಂಧವ್ಯದಿಂದಾಗಿ ಅವರನ್ನು 20 ಅಥವಾ ಅದಕ್ಕಿಂತ ಹೆಚ್ಚು ವರ್ಷಗಳ ಕಾಲ ಜೈಲುಗಳಲ್ಲಿ ಅಥವಾ ಕಾನ್ಸಂಟ್ರೇಶನ್ ಕ್ಯಾಂಪ್ಗಳಲ್ಲಿ ಬಂಧಿಸಲಾಯಿತು. ಅಂತಹ ಪಕ್ಷಪಾತದ ಭಾವನೆಗಳು ನಮ್ಮನ್ನು ಸಂತೋಷವಿಲ್ಲದ ನರಕದ ಬೆಂಕಿಗೆ ಕರೆದೊಯ್ಯುವ ವಧೆಗಾರರು. ಅವು ರಾತ್ರಿಯಲ್ಲಿ ನಿದ್ರಿಸುವುದನ್ನು ತಡೆಯುವ, ನಮ್ಮೊಳಗೆ ಹುದುಗಿರುವ ರಾಕ್ಷಸರು. ನಾವು ಹೇಗಾದರೂ ಮಾಡಿ ಅವುಗಳನ್ನು ಬೇರುಸಹಿತ ಕಿತ್ತುಹಾಕಬೇಕು.
ಮತ್ತೊಂದೆಡೆ, ಎಲ್ಲರ ಬಗ್ಗೆ ಸಮಾನ ಮನೋಭಾವ, ಅದರೊಂದಿಗೆ ನಾವು ಎಲ್ಲಾ ಸೀಮಿತ ಜೀವಿಗಳು ಸಂತೋಷವಾಗಿರಲು ಮತ್ತು ಅವುಗಳ ಸಮಸ್ಯೆಗಳು ಮತ್ತು ದುಃಖಗಳಿಂದ ಬೇರ್ಪಡಬೇಕೆಂದು ಬಯಸುತ್ತೇವೆ, ದೃಷ್ಟಿಕೋನವು ತಾತ್ಕಾಲಿಕವಾಗಿರಲಿ ಅಥವಾ ಅಂತಿಮವಾಗಿರಲಿ, ಎರಡೂ ಮುಖ್ಯ. ಎಲ್ಲಾ ಬುದ್ಧರು ಮತ್ತು ಬೋಧಿಸತ್ವರು ತಮ್ಮ ಸಾಧನೆಗಳನ್ನು ತಲುಪಲು ಪ್ರಯಾಣಿಸುವ ಮುಖ್ಯ ರಸ್ತೆ ಇದಾಗಿರುತ್ತದೆ. ಇದು ತ್ರಿಕಾಲದ ಎಲ್ಲಾ ಬುದ್ಧರ ಉದ್ದೇಶ ಮತ್ತು ಅಂತರಂಗದ ಆಶಯವಾಗಿದೆ. ಆದ್ದರಿಂದ, ಯಾವುದೇ ಸೀಮಿತ ಜೀವಿಗಳಿಂದ ನನಗೆ ಏನೇ ಹಾನಿ ಅಥವಾ ಸಹಾಯವಾದರೂ, ನನ್ನ ಕಡೆಯಿಂದ ನನಗೆ ಬೇರೆ ಯಾವುದೇ ದಾರಿಯಿಲ್ಲ ಎಂದು ನಾವು ಯೋಚಿಸಬೇಕು. ನಾನು ಕೋಪಗೊಳ್ಳುವುದಿಲ್ಲ ಅಥವಾ ಅಂಟಿಕೊಳ್ಳುವುದಿಲ್ಲ. ನಾನು ಕೆಲವರನ್ನು ದೂರ ಮತ್ತು ಇತರರನ್ನು ಹತ್ತಿರ ಎಂದು ಪರಿಗಣಿಸುವುದಿಲ್ಲ. ಅದನ್ನು ಹೊರತುಪಡಿಸಿ ಬೇರೆ ಯಾವುದೇ ಸಂದರ್ಭಗಳನ್ನು ನಿಭಾಯಿಸಲು ಸಾಧ್ಯವಿಲ್ಲ. ನಾನು ಖಂಡಿತವಾಗಿಯೂ ನಿರ್ಧರಿತನಾಗಿದ್ದೇನೆ. ನಾನು ಎಲ್ಲರ ಬಗ್ಗೆ ಹೇಗೆ ಯೋಚಿಸುತ್ತೇನೆ ಮತ್ತು ವರ್ತಿಸುತ್ತೇನೆ ಎಂಬುದರ ವಿಷಯದಲ್ಲಿ ನನಗೆ ಸಮಾನ ಮನೋಭಾವವಿರುತ್ತದೆ, ಏಕೆಂದರೆ ಎಲ್ಲರೂ ಸಂತೋಷವಾಗಿರಲು ಮತ್ತು ಎಂದಿಗೂ ಬಳಲಬಾರದು ಎಂದು ಬಯಸುತ್ತಾರೆ. ಇದನ್ನೇ ನಾನು ಸಾಧ್ಯವಾದಷ್ಟು ಪ್ರಯತ್ನಿಸುತ್ತೇನೆ. ಓ ಆಧ್ಯಾತ್ಮಿಕ ಮಾರ್ಗದರ್ಶಕನೇ, ದಯವಿಟ್ಟು ಹೀಗೆ ಸಾಧ್ಯವಾದಷ್ಟು ಚೆನ್ನಾಗಿ ಮಾಡಲು ನನಗೆ ಸ್ಫೂರ್ತಿ ನೀಡಿ. ಈ ಅಭ್ಯಾಸಕ್ಕೆ ಸಂಬಂಧಿಸಿದಂತೆ ಗುರು ಪೂಜೆ – ಲಾಮಾ ಚೋಪಾದಲ್ಲಿನ ಐದು ಚರಣಗಳಲ್ಲಿ ಮೊದಲನೆಯದನ್ನು ಪಠಿಸುವಾಗ ನಮಗೆ ಇರಬೇಕಾದ ಆಲೋಚನೆಗಳು ಇವಾಗಿರುತ್ತವೆ:
ಇತರರು ಮತ್ತು ನಾವು ಭಿನ್ನವಾಗಿಲ್ಲ ಎಂದು ಭಾವಿಸುವ ಮೂಲಕ ಇತರರ ಸೌಕರ್ಯ ಮತ್ತು ಸಂತೋಷವನ್ನು ಹೆಚ್ಚಿಸಲು ನಮ್ಮನ್ನು ಪ್ರೇರೇಪಿಸಿ: ಯಾರೂ ಸಣ್ಣದೊಂದು ದುಃಖವನ್ನು ಸಹ ಬಯಸುವುದಿಲ್ಲ, ಜೊತೆಗೆ ಅವನು ಅಥವಾ ಅವಳು ಹೊಂದಿರುವ ಸಂತೋಷದಿಂದ ಎಂದಿಗೂ ತೃಪ್ತರಾಗಿರುವುದಿಲ್ಲ.
ಹೀಗೆ, ಈ ಮೊದಲ ಶ್ಲೋಕದೊಂದಿಗೆ ನಾವು ನಮ್ಮ ಆಲೋಚನೆಗಳು ಅಥವಾ ಕಾರ್ಯಗಳಲ್ಲಿ ಯಾವುದೇ ನಿಕಟ ಅಥವಾ ದೂರದ ಭಾವನೆಗಳನ್ನು ಹೊಂದಿರದ ಸಮಾನ ಮನೋಭಾವವನ್ನು ಬೆಳೆಸಿಕೊಳ್ಳಲು ಪ್ರಾರ್ಥಿಸುತ್ತೇವೆ, ಅದು ಎಲ್ಲರಿಗೂ ಸಂತೋಷವನ್ನು ತರುತ್ತದೆ ಮತ್ತು ದುಃಖವನ್ನು ಸಮಾನವಾಗಿ ತೆಗೆದುಹಾಕುತ್ತದೆ. ಅಂತಹ ಸಮಾನತೆಯ ಮನೋಭಾವವು ನಮಗೆ ಬೇಕಾಗಿರುವ ಸಮಚಿತ್ತತೆ ಅಥವಾ ಸಮಾನ ಮನೋಭಾವದ ಪ್ರಕಾರವನ್ನು ಪೂರೈಸುತ್ತದೆ. ಅಂಗಡಿಯಲ್ಲಿರುವ ಒಂದು ಅದ್ಭುತವಾದ ಲೇಖನವನ್ನು ನೋಡಿದಾಗ ಅದನ್ನು ಖರೀದಿಸಲು ನಿರ್ಧರಿಸಿದಂತೆಯೇ, ಆ ಮನೋಭಾವವನ್ನು ಅಭಿವೃದ್ಧಿಪಡಿಸಲು ಮತ್ತು ಸಾಧಿಸಲು ನಾವು ದೃಢ ನಿರ್ಧಾರವನ್ನು ತೆಗೆದುಕೊಳ್ಳುತ್ತೇವೆ.
ನಾನು ಸ್ವಯಂ-ಪ್ರೀತಿಯನ್ನು ನನ್ನಿಂದ ನಿವಾರಿಸುತ್ತೇನೆ
ಮುಂದೆ, ನಾವು ಸ್ವಯಂ-ಪ್ರೀತಿ ಮನೋಭಾವವನ್ನು ಹೊಂದುವುದರ ದೋಷಗಳ ಬಗ್ಗೆ ಯೋಚಿಸುತ್ತೇವೆ. ಸ್ವಾರ್ಥ ಮನೋಭಾವದ ಸ್ವಾರ್ಥಪರ ಕಾಳಜಿಯಿಂದಾಗಿ, ನಾವು ವಿನಾಶಕಾರಿಯಾಗಿ ವರ್ತಿಸುತ್ತೇವೆ, ಹತ್ತು ವಿನಾಶಕಾರಿ ಕ್ರಿಯೆಗಳನ್ನು ಮಾಡುತ್ತೇವೆ ಮತ್ತು ಪರಿಣಾಮವಾಗಿ ನಮ್ಮನ್ನು ನರಕಯಾತನೆಯ ಪುನರ್ಜನ್ಮಗಳಿಗೆ ಕರೆದೊಯ್ಯುತ್ತೇವೆ. ಅಲ್ಲಿಂದ ಹಿಡಿದು ಅರ್ಹತ್ (ಮುಕ್ತ ಜೀವಿಗಳು) ಜ್ಞಾನೋದಯವನ್ನು ಪಡೆಯದಿರುವವರೆಗೆ - ಅಂತಹ ಸ್ವಾರ್ಥಪರ ಕಾಳಜಿಯು ಎಲ್ಲಾ ಸಂತೋಷ ಮತ್ತು ಶಾಂತಿಯನ್ನು ಕಳೆದುಕೊಳ್ಳುತ್ತದೆ. ಬೋಧಿಸತ್ವರು ಜ್ಞಾನೋದಯಕ್ಕೆ ಹತ್ತಿರವಾಗಿದ್ದರೂ, ಕೆಲವರು ಇತರರಿಗಿಂತ ಹೆಚ್ಚು ಹತ್ತಿರವಾಗಿರುತ್ತಾರೆ. ಅವರ ನಡುವಿನ ವ್ಯತ್ಯಾಸಗಳು, ಅವರು ಇನ್ನೂ ಹೊಂದಿರುವ ಸ್ವಾರ್ಥಪರತೆಯ ಪ್ರಮಾಣದಿಂದ ಬರುತ್ತವೆ. ದೇಶಗಳಲ್ಲಿನ ವಿವಾದಗಳಿಂದ ಹಿಡಿದು ಆಧ್ಯಾತ್ಮಿಕ ಗುರುಗಳು ಮತ್ತು ಶಿಷ್ಯರ ನಡುವೆ, ಕುಟುಂಬಗಳ ಒಳಗೆ ಅಥವಾ ಸ್ನೇಹಿತರ ನಡುವಿನ ಭಿನ್ನಾಭಿಪ್ರಾಯದವರೆಗೆ - ಎಲ್ಲವೂ ಸ್ವಾರ್ಥಪರತೆಯಿಂದ ಬರುತ್ತವೆ. ಆದ್ದರಿಂದ, ನನ್ನೊಳಗಿನ ಸ್ವಾರ್ಥ ಮತ್ತು ಸ್ವಾರ್ಥಪರತೆಯ ಈ ಕೊಳೆಯುತ್ತಿರುವ ಅವ್ಯವಸ್ಥೆಯನ್ನು ನಾನು ನಿವಾರಿಸದಿದ್ದರೆ, ನಾನು ಎಂದಿಗೂ ಯಾವುದೇ ಸಂತೋಷವನ್ನು ಅನುಭವಿಸುವುದಿಲ್ಲ ಎಂದು ನಾವು ಯೋಚಿಸಬೇಕು. ಹೀಗಾಗಿ, ನಾನು ಎಂದಿಗೂ ಸ್ವಾರ್ಥಪರತೆಯ ಹಿಡಿತಕ್ಕೆ ಒಳಗಾಗಲು ಬಿಡುವುದಿಲ್ಲ. ಓ ಆಧ್ಯಾತ್ಮಿಕ ಮಾರ್ಗದರ್ಶಕರೇ, ದಯವಿಟ್ಟು ಎಲ್ಲಾ ಸ್ವಾರ್ಥಪರ ಕಾಳಜಿಯಿಂದ ನನ್ನನ್ನು ಮುಕ್ತಗೊಳಿಸಲು ನನಗೆ ಸ್ಫೂರ್ತಿ ನೀಡಿ. ಎರಡನೆಯ ಪದ್ಯದಲ್ಲಿನ ಆಲೋಚನೆಗಳು ಇಂತಿವೆ:
ಸ್ವಾರ್ಥದ ಈ ದೀರ್ಘಕಾಲದ ಕಾಯಿಲೆಯು ನಮ್ಮ ಅನಿರೀಕ್ಷಿತ ದುಃಖಕ್ಕೆ ಕಾರಣ ಎಂದು ನೋಡಲು ಮತ್ತು ಹೀಗಾಗಿ, ಅದನ್ನು ದೂಷಿಸುವಂತೆ ಮಾಡಿ, ಸ್ವಾರ್ಥದ ದೈತ್ಯಾಕಾರದ ರಾಕ್ಷಸನನ್ನು ನಾಶಮಾಡಲು ನಮ್ಮನ್ನು ಪ್ರೇರೇಪಿಸಿ.
ಹೀಗೆ, ಎರಡನೇ ಪದ್ಯದೊಂದಿಗೆ, ಸ್ವಾರ್ಥ ಕಾಳಜಿಯ ನಮ್ಮ ಸ್ವಾರ್ಥ ಮನೋಭಾವಗಳನ್ನು ನಿವಾರಿಸಲು ನಾವು ದೃಢ ನಿರ್ಧಾರ ತೆಗೆದುಕೊಳ್ಳುತ್ತೇವೆ.
ನಾನು ಇತರರನ್ನು ಪ್ರೀತಿಸುವುದನ್ನು ನನ್ನ ಮುಖ್ಯ ಅಭ್ಯಾಸವನ್ನಾಗಿ ಮಾಡಿಕೊಳ್ಳುತ್ತೇನೆ
ನಂತರ, ಇತರರನ್ನು ಪ್ರೀತಿಸುವುದರಿಂದ ಬರುವ ಪ್ರಯೋಜನಗಳು ಮತ್ತು ಉತ್ತಮ ಗುಣಗಳ ಬಗ್ಗೆ ನಾವು ಯೋಚಿಸುತ್ತೇವೆ. ಈ ಜೀವನದಲ್ಲಿ, ಎಲ್ಲವೂ ಸಂತೋಷವಾಗಿ ಮತ್ತು ಚೆನ್ನಾಗಿ ನಡೆಯುತ್ತದೆ; ಭವಿಷ್ಯದ ಜೀವನದಲ್ಲಿ, ಮಾನವರು ಅಥವಾ ದೇವರುಗಳಾಗಿ ಜನನವಾಗುತ್ತದೆ; ಮತ್ತು ಸಾಮಾನ್ಯವಾಗಿ, ಜ್ಞಾನೋದಯವನ್ನು ಸಾಧಿಸುವವರೆಗಿನ ಎಲ್ಲಾ ಸಂತೋಷವು ಇತರರನ್ನು ಪ್ರೀತಿಸುವುದರಿಂದ ಬರುತ್ತದೆ. ನಾವು ಅನೇಕ ಉದಾಹರಣೆಗಳಲ್ಲಿ ಇದರ ಬಗ್ಗೆ ಸಾಕಷ್ಟು ಯೋಚಿಸಬೇಕಾಗಿದೆ. ಉದಾಹರಣೆಗೆ, ಒಬ್ಬ ಜನಪ್ರಿಯ ಅಧಿಕಾರಿಯ ಜನಪ್ರಿಯತೆಯು, ಅವನ ಇತರರ ಬಗ್ಗೆ ಹೊಂದಿರುವ ಪ್ರೀತಿ ಮತ್ತು ಕಾಳಜಿಯಿಂದ ಉಂಟಾಗುತ್ತದೆ. ಇನ್ನೊಬ್ಬರ ಜೀವವನ್ನು ತೆಗೆದುಕೊಳ್ಳುವುದನ್ನು ಅಥವಾ ಕದಿಯುವುದನ್ನು ತಡೆಯುವ ನಮ್ಮ ನೈತಿಕ ಸ್ವಯಂ-ಶಿಸ್ತು ನಾವು ಇತರರನ್ನು ಪ್ರೀತಿಸುವುದರಿಂದ ಉಂಟಾಗುತ್ತದೆ ಮತ್ತು ಇದು ನಮಗೆ ಮನುಷ್ಯರಾಗಿರುವ ಪುನರ್ಜನ್ಮವನ್ನು ತರುತ್ತದೆ.
ಉದಾಹರಣೆಗೆ, ಪರಮಪೂಜ್ಯ ದಲೈ ಲಾಮಾ, ಯಾವಾಗಲೂ ಎಲ್ಲೆಡೆ ಎಲ್ಲರ ಕಲ್ಯಾಣದ ಬಗ್ಗೆ ಯೋಚಿಸುತ್ತಾರೆ ಮತ್ತು ಅವರ ಎಲ್ಲಾ ಒಳ್ಳೆಯ ಗುಣಗಳು ಇತರರನ್ನು ಈ ರೀತಿಯಾಗಿ ಪ್ರೀತಿಸುವುದರಿಂದ ಬರುತ್ತವೆ. ಬೋಧಿಸತ್ವ ಟೋಗ್ಮಿ-ಜಾಂಗ್ಪೋಗೆ ಹಸ್ತಕ್ಷೇಪ ಮಾಡಲು ಹೊರಟ ಮೋಹದ ದೇವರಾದ ಕಾಮದಿಂದ ಹಾನಿಯಾಗಲು ಸಾಧ್ಯವಾಗಲಿಲ್ಲ. ಈ ಮಹಾನ್ ಟಿಬೆಟಿಯನ್ ಸಾಧಕನು, ಒಂದು ಕೀಟ ಬೆಂಕಿಯತ್ತ ಹಾರಿಹೋದರೆ ಕಣ್ಣೀರು ಸುರಿಸುತ್ತಿದ್ದ ವ್ಯಕ್ತಿ. ಅವನು ಇತರರ ಬಗ್ಗೆ ಪ್ರಾಮಾಣಿಕವಾಗಿ ಕಾಳಜಿ ವಹಿಸುತ್ತಿದ್ದನು, ಆದ್ದರಿಂದ ದೆವ್ವಗಳು ಮತ್ತು ಅಂತಹ ಹಸ್ತಕ್ಷೇಪಕಾರರಿಗೆ ಸಹ ಅವನಿಗೆ ಹಾನಿಯುಂಟುಮಾಡಲು ಮನಸ್ಸಾಗುತ್ತಿರಲಿಲ್ಲ. ಏಕೆಂದರೆ, ಆತ್ಮಗಳೇ ಹೇಳಿದಂತೆ, ಅವನಿಗೆ ನಮ್ಮ ಹಿತ ಮತ್ತು ಪ್ರೀತಿಯ ಬಗ್ಗೆ ಮಾತ್ರ ಆಲೋಚನೆಗಳಿವೆ.
ಬುದ್ಧನ ಹಿಂದಿನ ಜನ್ಮಗಳಲ್ಲಿ ಒಂದರಲ್ಲಿ ದೇವತೆಗಳ ರಾಜನಾದ ಇಂದ್ರನಾಗಿ ಜನಿಸಿದಾಗ, ದೇವತೆಗಳ ಮತ್ತು ಅರ್ಧ ದೇವತೆಗಳ ನಡುವೆ ಯುದ್ಧವಿತ್ತು. ಅರ್ಧ ದೇವತೆಗಳು ಗೆಲ್ಲುತ್ತಿದ್ದವು ಮತ್ತು ಇಂದ್ರನು ತನ್ನ ರಥದಲ್ಲಿ ಓಡಿಹೋದನು. ಅವನು ಅನೇಕ ಪಾರಿವಾಳಗಳು ಒಟ್ಟುಗೂಡಿದ ರಸ್ತೆಯತ್ತ ಬಂದನು ಮತ್ತು ಅವುಗಳನ್ನು ಹೊಡೆದುರುಳಿಸುತ್ತೇನೆ ಎಂದು ಹೆದರಿ, ತನ್ನ ರಥವನ್ನು ನಿಲ್ಲಿಸಿದನು. ಇದನ್ನು ನೋಡಿದ ಅರ್ಧ ದೇವತೆಗಳು, ಅವನು ತನ್ನ ರಥವನ್ನು ನಿಲ್ಲಿಸಿ ತಮ್ಮ ಮೇಲೆ ದಾಳಿ ಮಾಡಲು ಹಿಂದಕ್ಕೆ ತಿರುಗಿದ್ದಾನೆಂದು ಭಾವಿಸಿ ಓಡಿಹೋದರು. ಇದನ್ನು ನಾವು ವಿಶ್ಲೇಷಿಸಿದರೆ, ಇಂದ್ರನು ಇತರರನ್ನು ಪ್ರೀತಿಸುವ ಮನೋಭಾವದಿಂದಾಗಿ ಅವರ ಪಲಾಯನ ಸಂಭವಿಸಿತು ಎಂದು ನೋಡಬಹುದು. ಈ ರೀತಿಯಾಗಿ, ನಾವು ಅನೇಕ ದೃಷ್ಟಿಕೋನಗಳಿಂದ ಇತರರನ್ನು ಪ್ರೀತಿಸುವುದರ ಅನುಕೂಲಗಳ ಬಗ್ಗೆ ಯೋಚಿಸಬೇಕು.
ಒಬ್ಬ ಮ್ಯಾಜಿಸ್ಟ್ರೇಟ್ ಅಥವಾ ಯಾವುದೇ ಅಧಿಕಾರಿಯು ಕಚೇರಿಯಲ್ಲಿ ಬಹಳ ಸೊಗಸಾಗಿ ಕುಳಿತಾಗ, ಅವರ ಸ್ಥಾನ ಮತ್ತು ಅದರ ಬಗೆಗಿರುವ ಎಲ್ಲವೂ ಇತರರ ಅಸ್ತಿತ್ವದಿಂದಾಗಿರುತ್ತದೆ. ಈ ಉದಾಹರಣೆಯಲ್ಲಿ, ಇತರರ ದಯೆಯು ಅವರು ಕೇವಲ ಅಸ್ತಿತ್ವದಲ್ಲಿದ್ದಾರೆ ಎಂಬ ಅಂಶದಲ್ಲಿರುತ್ತದೆ. ತನ್ನನ್ನು ಹೊರತುಪಡಿಸಿ ಬೇರೆ ಯಾರೂ ಇಲ್ಲದಿದ್ದರೆ, ಅವನು ಮ್ಯಾಜಿಸ್ಟ್ರೇಟ್ ಆಗಲು ಸಾಧ್ಯವಿಲ್ಲ. ಅವನಿಗೆ ಏನೂ ಮಾಡಲು ಇರುವುದಿಲ್ಲ. ಇದಲ್ಲದೆ, ಜನರು ಅಸ್ತಿತ್ವದಲ್ಲಿದ್ದರೂ, ಯಾರೂ ಅವನ ಬಳಿಗೆ ಬರದಿದ್ದರೆ, ಈ ಮ್ಯಾಜಿಸ್ಟ್ರೇಟ್ ಸುಮ್ಮನೆ ಕುಳಿತುಕೊಳ್ಳುತ್ತಾನೆ ಮತ್ತು ಏನನ್ನೂ ಮಾಡದೆ ಇರುತ್ತಾನೆ. ಮತ್ತೊಂದೆಡೆ, ಅನೇಕರು ತಮ್ಮ ವ್ಯವಹಾರಗಳನ್ನು ಪರಿಹರಿಸಲು ಅವನ ಮುಂದೆ ಬಂದರೆ, ಅವರ ಮೇಲೆ ಅವಲಂಬಿತವಾದರೆ, ಅವನು ಚೆನ್ನಾಗಿ ಕುಳಿತು ಅವರಿಗೆ ಸೇವೆ ಸಲ್ಲಿಸಬಹುದು. ಇದು ಲಾಮಾರ ವಿಷಯದಲ್ಲೂ ನಿಜವಾಗಿರುತ್ತದೆ. ಇತರರ ಮೇಲೆ ಅವಲಂಬಿತವಾಗಿ, ಅವನು ಚೆನ್ನಾಗಿ ಕಲಿಸುತ್ತಾನೆ. ಅವನ ಸ್ಥಾನವು ಸಂಪೂರ್ಣವಾಗಿ, ಅವನು ಸಹಾಯ ಮಾಡಬಲ್ಲ ಇತರರು ಇದ್ದಾರೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಅವನು ಅವರಿಗೆ ಪ್ರಯೋಜನವಾಗಲು ಧರ್ಮವನ್ನು ಕಲಿಸುತ್ತಾನೆ, ಆದ್ದರಿಂದ ಅವನ ಸಹಾಯವು ಇತರರನ್ನು ಅವಲಂಬಿಸುವುದರಿಂದ ಬರುತ್ತದೆ, ಉದಾಹರಣೆಗೆ ಅವರ ದಯೆಯನ್ನು ನೆನಪಿಸಿಕೊಳ್ಳುವ ಮೂಲಕ.
ಅಂತೆಯೇ, ಪ್ರೀತಿ ಮತ್ತು ಸಹಾನುಭೂತಿಯ ಮೂಲಕ, ಇತರರನ್ನು ಪ್ರೀತಿಸುವುದರಿಂದ, ನಾವು ಬೇಗನೆ ಜ್ಞಾನೋದಯವನ್ನು ಪಡೆಯಬಹುದು. ಉದಾಹರಣೆಗೆ, ಒಬ್ಬ ಶತ್ರು ನಮಗೆ ನೋವುಂಟುಮಾಡಿದರೆ ಮತ್ತು ನಾವು ತಾಳ್ಮೆಯನ್ನು ಬೆಳೆಸಿಕೊಂಡರೆ, ಆ ಮೂಲಕ ನಾವು ಜ್ಞಾನೋದಯಕ್ಕೆ ಹತ್ತಿರವಾದರೆ, ಅದು ನಾವು ಇನ್ನೊಬ್ಬರನ್ನು ಪ್ರೀತಿಸುವುದರಿಂದಲೇ ಸಂಭವಿಸಿರುತ್ತದೆ. ಹೀಗಾಗಿ, ಎಲ್ಲಾ ಸೀಮಿತ ಜೀವಿಗಳು ಸೇರಿದಂತೆ, ಎಲ್ಲವೂ ಸಂತೋಷ ಮತ್ತು ಕಲ್ಯಾಣದ ಆಧಾರ ಮತ್ತು ಮೂಲವಾಗಿರುವುದರಿಂದ, ಅವು ಏನು ಮಾಡಿದರೂ ಅಥವಾ ಅವು ನನಗೆ ಹೇಗೆ ಹಾನಿಯುಂಟುಮಾಡಿದರೂ, ನಾನು ಯಾವಾಗಲೂ ಇತರರನ್ನು ಪ್ರೀತಿಸುತ್ತೇನೆ ಎಂದು ನಾವು ನಿರ್ಧರಿಸಬೇಕು. ಇತರ ಜೀವಿಗಳು ನನ್ನ ಆಧ್ಯಾತ್ಮಿಕ ಮಾರ್ಗದರ್ಶಕರು, ಬುದ್ಧರು ಅಥವಾ ಅಮೂಲ್ಯ ರತ್ನಗಳಂತೆ, ನಾನು ಅವರನ್ನು ಪ್ರೀತಿಸುತ್ತೇನೆ, ಅವರೊಂದಿಗೆ ಏನಾದರೂ ತಪ್ಪಾದರೆ ನಷ್ಟವನ್ನು ಅನುಭವಿಸುತ್ತೇನೆ ಮತ್ತು ಏನೇ ಇರಲಿ ಅವರನ್ನು ಎಂದಿಗೂ ತಿರಸ್ಕರಿಸುವುದಿಲ್ಲ. ನಾನು ಯಾವಾಗಲೂ ಅವರ ಬಗ್ಗೆ ದಯೆ ಮತ್ತು ಸಹೃದಯದ ಭಾವನೆಗಳನ್ನು ಹೊಂದಿರುತ್ತೇನೆ. ಓ ನನ್ನ ಆಧ್ಯಾತ್ಮಿಕ ಮಾರ್ಗದರ್ಶಕನೇ, ದಯವಿಟ್ಟು ಅಂತಹ ಹೃದಯದಿಂದ ಮತ್ತು ಇತರರಿಗಾಗಿ ಇರುವ ಭಾವನೆಯಿಂದ ಒಂದು ಕ್ಷಣವೂ ಬೇರ್ಪಡದಂತೆ ನನಗೆ ಸ್ಫೂರ್ತಿ ನೀಡಿ. ಇದು ಮೂರನೇ ಪಂಕ್ತಿಯ ಅರ್ಥವಾಗಿರುತ್ತದೆ:
ನಮ್ಮ ತಾಯಂದಿರನ್ನು ಪ್ರೀತಿಸುವ ಮತ್ತು ಅವರನ್ನು ಆನಂದದಲ್ಲಿ ಭದ್ರಪಡಿಸುವ ಮನಸ್ಸು ಅನಂತ ಸದ್ಗುಣಗಳಿಗೆ ಕಾರಣವಾಗುವ ದ್ವಾರವಾಗಿದೆ ಎಂದು ನೋಡಲು ಮತ್ತು ನಮ್ಮ ಶತ್ರುಗಳಾದರೂ ಸಹ ಈ ಅಲೆದಾಡುವ ಜೀವಿಗಳನ್ನು ನಮ್ಮ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸಲು ನಮಗೆ ಸ್ಫೂರ್ತಿ ನೀಡಿ.
ಈ ರೀತಿಯಾಗಿ, ನಾವು ಇತರರನ್ನು ಪ್ರೀತಿಸುವ ಅಭ್ಯಾಸವನ್ನು ನಮ್ಮ ಕೇಂದ್ರಬಿಂದುವಾಗಿಸಲು ನಿರ್ಧರಿಸುತ್ತೇವೆ.
ಖಂಡಿತವಾಗಿಯೂ ನನ್ನ ಮತ್ತು ಇತರರ ಬಗೆಗಿರುವ ನನ್ನ ಮನೋಭಾವಗಳನ್ನು ಬದಲಾಯಿಸಿಕೊಳ್ಳಲು ಸಮರ್ಥನಾಗಿದ್ದೇನೆ
ನಮ್ಮನ್ನು ಪ್ರೀತಿಸುವುದರ ಅನೇಕ ದೋಷಗಳ ಬಗ್ಗೆ ಮತ್ತು ಇತರರನ್ನು ಪ್ರೀತಿಸುವುದರ ಅನೇಕ ಸದ್ಗುಣಗಳ ಬಗ್ಗೆ ಯೋಚಿಸುವ ದ್ವಾರವನ್ನು ಅವಲಂಬಿಸಿ, ನಾವು ಪ್ರೀತಿಸುವವರ ಮೌಲ್ಯಗಳನ್ನು ಬದಲಾಯಿಸಬೇಕು ಎಂದು ನಾವು ಭಾವಿಸಿದಾಗ, ಮತ್ತು ನಂತರ ನಾವು ಅವುಗಳನ್ನು ನಿಜವಾಗಿಯೂ ಬದಲಾಯಿಸಬಹುದೇ ಎಂದು ಚಿಂತಿಸಿದಾಗ ನಾವು ಖಂಡಿತವಾಗಿಯೂ ಹಾಗೆ ಮಾಡಬಹುದು. ನಾವು ನಮ್ಮ ವರ್ತನೆಗಳನ್ನು ಬದಲಾಯಿಸಬಹುದು ಏಕೆಂದರೆ ಜ್ಞಾನೋದಯವಾಗುವ ಮೊದಲು, ಬುದ್ಧನು ನಮ್ಮಂತೆಯೇ ಇದ್ದನು. ಸಂಸಾರದ ಅನಿಯಂತ್ರಿತವಾಗಿ ಮರುಕಳಿಸುವ ಸಂದರ್ಭಗಳು ಮತ್ತು ಸಮಸ್ಯೆಗಳಲ್ಲಿ ಅವರು ಸಹ ಪುನರ್ಜನ್ಮದಿಂದ ಪುನರ್ಜನ್ಮಕ್ಕೆ ಅಲೆದಾಡುತ್ತಿದ್ದರು. ಆದರೆ ಸಮರ್ಥ ಬುದ್ಧನು, ತಾನು ಪ್ರೀತಿಸುವವರ ಬಗೆಗಿರುವ ತನ್ನ ಮನೋಭಾವಗಳನ್ನು ಅದಲು-ಬದಲಾಗಿಸಿಕೊಂಡರು. ಇತರರನ್ನು ಪ್ರೀತಿಸುವುದನ್ನು ಹಿಡಿದಿಟ್ಟುಕೊಳ್ಳುವ ಮೂಲಕ, ಅವರು ತಮ್ಮ ಸ್ವಂತ ಮತ್ತು ಇತರರ ಗುರಿಗಳನ್ನು ಪೂರೈಸಲು ಸಾಧ್ಯವಾಗುವ ಶಿಖರವನ್ನು ತಲುಪಿದನು.
ಇದಕ್ಕೆ ವ್ಯತಿರಿಕ್ತವಾಗಿ, ನಾವು ನಮ್ಮನ್ನು ಮಾತ್ರ ಪ್ರೀತಿಸುತ್ತೇವೆ ಮತ್ತು ಇತರರೆಲ್ಲರನ್ನೂ ನಿರ್ಲಕ್ಷಿಸಿರುತ್ತೇವೆ. ಇತರರಿಗೆ ಪ್ರಯೋಜನಕಾರಿಯಾಗುವುದನ್ನು ಸಾಧಿಸುವುದನ್ನು ಬದಿಗಿಟ್ಟು, ನಾವು ನಮಗಾಗಿ ಸಣ್ಣದೊಂದು ಪ್ರಯೋಜನವನ್ನು ಸಹ ಸಾಧಿಸಿಲ್ಲ. ನಮ್ಮನ್ನು ಪ್ರೀತಿಸುವುದು ಮತ್ತು ಇತರರನ್ನು ನಿರ್ಲಕ್ಷಿಸುವುದು ನಮ್ಮನ್ನು ಸಂಪೂರ್ಣವಾಗಿ ಅಸಹಾಯಕರನ್ನಾಗಿ ಮಾಡುತ್ತದೆ, ನಿಜವಾದ ಮಹತ್ವದ ಯಾವುದನ್ನೂ ಸಾಧಿಸಲು ಸಾಧ್ಯವಾಗುವುದಿಲ್ಲ. ನಮ್ಮ ಸಮಸ್ಯೆಗಳಿಂದ ಮುಕ್ತರಾಗಲು ನಾವು ನಿಜವಾದ ತ್ಯಾಗ ಅಥವಾ ದೃಢಸಂಕಲ್ಪವನ್ನು ಬೆಳೆಸಿಕೊಳ್ಳಲು ಸಾಧ್ಯವಿಲ್ಲ. ಪುನರ್ಜನ್ಮದ ಅತ್ಯಂತ ಕೆಟ್ಟ ಸ್ಥಿತಿಗಳಲ್ಲಿ ಒಂದಕ್ಕೆ ಬೀಳುವುದನ್ನು ನಾವು ತಡೆಯಲು ಸಾಧ್ಯವಿಲ್ಲ. ಈ ರೀತಿಯಲ್ಲಿ, ನಾವು ನಮ್ಮನ್ನು ಪ್ರೀತಿಸಿಕೊಳ್ಳುವುದರ ದೋಷಗಳ ಬಗ್ಗೆ ಮತ್ತು ಇತರರನ್ನು ಪ್ರೀತಿಸುವುದರಿಂದಾಗುವ ಪ್ರಯೋಜನಗಳ ಬಗ್ಗೆ ಯೋಚಿಸುತ್ತೇವೆ. ಬುದ್ಧನು ತನ್ನ ಮನೋಭಾವವನ್ನು ಬದಲಾಯಿಸಲು ಸಾಧ್ಯವಾದರೆ ಮತ್ತು ಅವರು ನಮ್ಮಂತೆಯೇ ಪ್ರಾರಂಭಿಸಿದರೆ, ನಾವು ಸಹ ನಮ್ಮ ಮನೋಭಾವವನ್ನು ಬದಲಾಯಿಸಬಹುದು.
ಅಷ್ಟೇ ಅಲ್ಲ, ಸಾಕಷ್ಟು ಪರಿಚಿತತೆಯೊಂದಿಗೆ, ನಾವು ನಮ್ಮ ಸ್ವಂತ ದೇಹಗಳನ್ನು ನೋಡಿಕೊಳ್ಳುವಂತೆಯೇ ಇತರರ ದೇಹಗಳನ್ನು ಪ್ರೀತಿಸಲು ಸಹ ಸಾಧ್ಯವಿದೆ. ಏನೇ ಇರಲಿ, ನಾವು ಇತರರ ದೇಹಗಳಿಂದ, ಅಂದರೆ ನಮ್ಮ ಪೋಷಕರಿಂದ ವೀರ್ಯ ಮತ್ತು ಮೊಟ್ಟೆಯ ಹನಿಗಳಿಂದ ಕೂಡಿರುತ್ತೇವೆ, ಈಗ ನಾವು ಅವುಗಳನ್ನು ನಮ್ಮ ಸ್ವಂತ ದೇಹಗಳಾಗಿ ಪ್ರೀತಿಸುತ್ತೇವೆ. ಮೂಲತಃ, ಅವರು ನಮ್ಮವರಾಗಿರಲಿಲ್ಲ. ಆದ್ದರಿಂದ, ನನ್ನ ಮನೋಭಾವವನ್ನು ಬದಲಾಯಿಸುವುದು ಅಸಾಧ್ಯವಲ್ಲ ಎಂದು ನಾವು ಭಾವಿಸಬೇಕು. ನಾನು ನನ್ನ ಬಗ್ಗೆ ಮತ್ತು ಇತರರ ಬಗ್ಗೆ ಹೊಂದಿರುವ ವರ್ತನೆಗಳನ್ನು ಅದಲು-ಬದಲಾಗಿಸಿಕೊಳ್ಳಬಹುದು. ಆದ್ದರಿಂದ, ನಾನು ಅದರ ಬಗ್ಗೆ ಹೇಗೆ ಯೋಚಿಸಿದರೂ, ನಾನು ನನ್ನ ಬಗ್ಗೆ ಮತ್ತು ಇತರರ ಬಗ್ಗೆ ಹೊಂದಿರುವ ವರ್ತನೆಗಳನ್ನು ಬದಲಾಗಿಸದೇ ಇರಲಾಗುವುದಿಲ್ಲ. ಇದು ನಾನು ಮಾಡಬಹುದಾದ ವಿಷಯ, ನಾನು ಮಾಡಲು ಸಾಧ್ಯವಾಗದ ವಿಷಯವಲ್ಲ. ಆದ್ದರಿಂದ, ಓ ನನ್ನ ಆಧ್ಯಾತ್ಮಿಕ ಮಾರ್ಗದರ್ಶಕನೇ, ಹೀಗೆ ಮಾಡಲು ನನಗೆ ಸ್ಫೂರ್ತಿ ನೀಡಿ. ಇದು ನಾಲ್ಕನೇ ಚರಣದ ಒತ್ತು.
ಸಂಕ್ಷಿಪ್ತವಾಗಿ ಹೇಳುವುದಾದರೆ, ತಮ್ಮ ಸ್ವಾರ್ಥಕ್ಕಾಗಿ ಮಾತ್ರ ಗುಲಾಮಗಿರಿಯ, ಚಿಕ್ಕಮಕ್ಕಳಂತೆ ಇರುವ ಜೀವಿಗಳ ದೋಷಗಳು ಮತ್ತು ಇತರರಿಗಾಗಿ ಮತ್ತು ನಮ್ಮ ಹಿತದೃಷ್ಟಿಯಿಂದ ಮಾತ್ರ ಕೆಲಸ ಮಾಡುವ ರಾಜಋಷಿಗಳ ಸದ್ಗುಣಗಳ ನಡುವಿನ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳುವ ಮನಸ್ಸುಗಳನ್ನು ಅಭಿವೃದ್ಧಿಪಡಿಸಲು, ಮತ್ತು ಹೀಗೆ, ಇತರರ ಬಗ್ಗೆ ಮತ್ತು ನಮ್ಮ ಬಗೆಗಿರುವ ವರ್ತನೆಗಳನ್ನು ಸಮಾನಗೊಳಿಸಲು ಮತ್ತು ಅದಲು-ಬದಲಾಗಿಸಲು ಸಾಧ್ಯವಾಗುವಂತೆ ನಮಗೆ ಸ್ಫೂರ್ತಿ ನೀಡಿ.
ಹೀಗೆ, ನಾವು ಇಲ್ಲಿ ತೆಗೆದುಕೊಳ್ಳುವ ನಿರ್ಧಾರವೆಂದರೆ, ನಾವು ಖಂಡಿತವಾಗಿಯೂ ಸ್ವಯಂ ಮತ್ತು ಇತರರ ಬಗ್ಗೆ ನಮ್ಮ ವರ್ತನೆಗಳನ್ನು ಅದಲು-ಬದಲಾಗಿಸಿಕೊಳ್ಳಬಹುದು ಎಂದಾಗಿರುತ್ತದೆ.
ಖಂಡಿತವಾಗಿಯೂ ನಾನು ಸ್ವಯಂ ಮತ್ತು ಇತರರ ಬಗೆಗಿರುವ ನನ್ನ ವರ್ತನೆಗಳನ್ನು ಅದಲು-ಬದಲಾಗಿಸಿಕೊಳ್ಳುತ್ತೇನೆ
ಮತ್ತೊಮ್ಮೆ, ನಾವು ಸ್ವಯಂ-ಪ್ರೀತಿಯ ದೋಷಗಳು ಮತ್ತು ಇತರರನ್ನು ಪ್ರೀತಿಸುವುದರ ಪ್ರಯೋಜನಗಳ ಬಗ್ಗೆ ಯೋಚಿಸುತ್ತೇವೆ, ಆದರೆ ಈ ಬಾರಿ ನಾವು ಅದನ್ನು ಪರ್ಯಾಯ ರೀತಿಯಲ್ಲಿ ಯೋಚಿಸುತ್ತೇವೆ, ಎರಡನ್ನೂ ಒಟ್ಟಿಗೆ ಬೆರೆಸುತ್ತೇವೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ನಾವು ಹತ್ತು ವಿನಾಶಕಾರಿ ಮತ್ತು ಹತ್ತು ರಚನಾತ್ಮಕ ಕ್ರಿಯೆಗಳ ಮೂಲಕ ಹೋಗುತ್ತೇವೆ, ಪ್ರತಿ ಪಟ್ಟಿಯಿಂದ ಪರ್ಯಾಯವಾಗಿ, ಮತ್ತು ಅವುಗಳ ಫಲಿತಾಂಶಗಳನ್ನು ಸ್ವಯಂ-ಪ್ರೀತಿಯ ಮತ್ತು ಇತರರನ್ನು ಪ್ರೀತಿಸುವ ವಿಷಯವಾಗಿ ನೋಡುತ್ತೇವೆ. ಉದಾಹರಣೆಗೆ, ನಾನು ನನ್ನನ್ನು ಪ್ರೀತಿಸಿದರೆ, ನಾನು ಇತರರ ಜೀವಗಳನ್ನು ತೆಗೆದುಕೊಳ್ಳಲು ಹಿಂಜರಿಯುವುದಿಲ್ಲ. ಪರಿಣಾಮವಾಗಿ, ನಾನು ಸಂತೋಷವಿಲ್ಲದ ನರಕದಲ್ಲಿ ಮರುಜನ್ಮ ಪಡೆಯುತ್ತೇನೆ ಮತ್ತು ಮನುಷ್ಯನಾಗಿ ಜನಿಸಿದಾಗಲೂ, ನಾನು ಅನಾರೋಗ್ಯದಿಂದ ತುಂಬಿದ ಅಲ್ಪಾವಧಿಯ ಜೀವನವನ್ನು ಹೊಂದಿರುತ್ತೇನೆ. ಮತ್ತೊಂದೆಡೆ, ನಾನು ಇತರರನ್ನು ಪ್ರೀತಿಸಿದರೆ, ನಾನು ಇತರರ ಜೀವಗಳನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸುತ್ತೇನೆ ಮತ್ತು ಪರಿಣಾಮವಾಗಿ, ನಾನು ಉತ್ತಮ ಸ್ಥಿತಿಯಲ್ಲಿ ಮರುಜನ್ಮ ಪಡೆಯುತ್ತೇನೆ, ದೀರ್ಘಾಯುಷ್ಯವನ್ನು ಹೊಂದುತ್ತೇನೆ, ಇತ್ಯಾದಿ. ನಂತರ, ನಾವು ಕಳ್ಳತನ ಮತ್ತು ಕದಿಯುವುದನ್ನು ತಡೆಯುವುದು, ಅನುಚಿತ ಲೈಂಗಿಕ ನಡವಳಿಕೆಯಲ್ಲಿ ತೊಡಗುವುದು ಮತ್ತು ಅಂತಹ ಕ್ರಿಯೆಯಿಂದ ದೂರವಿರುವುದು ಇತ್ಯಾದಿಗಳೊಂದಿಗೆ ಅದೇ ವಿಧಾನವನ್ನು ಪುನರಾವರ್ತಿಸುತ್ತೇವೆ. ಸಂಕ್ಷಿಪ್ತವಾಗಿ, ಐದನೇ ಚರಣ ಹೇಳುವಂತೆ:
ನಮ್ಮನ್ನು ಪ್ರೀತಿಸುವುದು ಎಲ್ಲಾ ಹಿಂಸೆಗೆ ದ್ವಾರವಾಗಿರುವುದರಿಂದ, ನಮ್ಮ ತಾಯಂದಿರನ್ನು ಪ್ರೀತಿಸುವುದು ಎಲ್ಲದಕ್ಕೂ ಅಡಿಪಾಯವಾಗಿರುತ್ತದೆ, ನಮ್ಮ ಮೂಲ ಅಭ್ಯಾಸವನ್ನು ನಮ್ಮ ಜಾಗದಲ್ಲಿ ಇತರರನ್ನು ಅದಲು-ಬದಲು ಮಾಡಿಕೊಳ್ಳುವ ಯೋಗವನ್ನಾಗಿ ಮಾಡಲು ನಮಗೆ ಸ್ಫೂರ್ತಿ ನೀಡುತ್ತದೆ.
ಹೀಗಿದ್ದಲ್ಲಿ, ಐದನೇ ನಿರ್ಧಾರವು, ನಾನು ಖಂಡಿತವಾಗಿಯೂ ನನ್ನ ಮತ್ತು ಇತರರ ಕಡೆಗಿರುವ ನನ್ನ ವರ್ತನೆಗಳನ್ನು ಅದಲು-ಬದಲಾಗಿಸಿಕೊಳ್ಳುತ್ತೇನೆ ಎನ್ನುವುದಾಗಿರುತ್ತದೆ. ಇದರ ಅರ್ಥ, ಈಗ ನಾನು ನೀನಾಗಿರುವೆ ಮತ್ತು ನೀನು ನಾನಾಗಿರುವೆ ಎಂದು ನಿರ್ಧರಿಸುವುದು ಎಂದಲ್ಲ. ಬದಲಿಗೆ, ನಾವು ಪ್ರೀತಿಸುವವರಿಗೆ ಸಂಬಂಧಿಸಿದಂತೆ ದೃಷ್ಟಿಕೋನಗಳನ್ನು ಬದಲಾಯಿಸುವುದು ಎಂದರ್ಥ. ನಮ್ಮನ್ನು ಪ್ರೀತಿಸುವ ಮತ್ತು ಇತರರನ್ನು ನಿರ್ಲಕ್ಷಿಸುವ ಬದಲು, ಈಗ ನಾವು ನಮ್ಮ ಸ್ವಾರ್ಥಿ ಕಾಳಜಿಗಳನ್ನು ನಿರ್ಲಕ್ಷಿಸುತ್ತೇವೆ ಮತ್ತು ಎಲ್ಲರನ್ನೂ ಪ್ರೀತಿಸುತ್ತೇವೆ. ನಾವು ಹೀಗೆ ಮಾಡುವಲ್ಲಿ ವಿಫಲರಾದರೆ, ನಾವು ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಆದರೆ ನಾವು ನಮ್ಮ ವರ್ತನೆಗಳಲ್ಲಿ ಈ ಬದಲಾವಣೆಯನ್ನು ಮಾಡಿಕೊಂಡರೆ, ಆ ಆಧಾರದ ಮೇಲೆ ನಾವು ನಮ್ಮ ಸಂತೋಷವನ್ನು ಇತರರಿಗೆ ನೀಡುವ ಮತ್ತು ಅವರ ನೋವುಗಳನ್ನು ಸ್ವೀಕರಿಸುವ ದೃಶ್ಯೀಕರಣಗಳೊಂದಿಗೆ ತರಬೇತಿ ಪಡೆಯಬಹುದು, ಇದು ಪ್ರಾಮಾಣಿಕವಾಗಿ ಕಾಳಜಿಯುಳ್ಳ ಪ್ರೀತಿ ಮತ್ತು ಕರುಣಾಭರಿತ ಸಹಾನುಭೂತಿಯನ್ನು ಬೆಳೆಸುವ ಒಂದು ಮಾರ್ಗವಾಗಿರುತ್ತದೆ. ಆ ಆಧಾರದ ಮೇಲೆ, ಪ್ರತಿಯೊಬ್ಬರ ಸಮಸ್ಯೆಗಳು ಮತ್ತು ನೋವುಗಳನ್ನು ನಿವಾರಿಸಲು ಮತ್ತು ಅವರಿಗೆ ಸಂತೋಷವನ್ನು ತರುವ ಅಸಾಧಾರಣ ಸಂಕಲ್ಪವನ್ನು ಮತ್ತು ಹಾಗೆ ಹೆಚ್ಚಾಗಿ ಮಾಡಲು ಸಾಧ್ಯವಾಗುವಂತೆ ಜ್ಞಾನೋದಯಕ್ಕಾಗಿ ಶ್ರಮಿಸುವ ಬೋಧಿಚಿತ್ತದ ಸಮರ್ಪಿತ ಹೃದಯವನ್ನು ನಾವು ಅಭಿವೃದ್ಧಿಪಡಿಸಲು ಸಾಧ್ಯವಾಗುತ್ತದೆ.
ಸಾರಾಂಶ
ಈ ಬೋಧನೆಗಳ ಮೂಲವೆಂದರೆ ಶಾಂತಿದೇವರ ಬೋಧಿಸತ್ವ ನಡವಳಿಕೆಯಲ್ಲಿ ತೊಡಗಿಸಿಕೊಳ್ಳುವುದು (ಸಂಸ್ಕೃತ. ಬೋಧಿಚರ್ಯಾವತಾರ), ಕದಂಪ ಗುರುಗಳ ಬೋಧನೆಗಳು ಮತ್ತು ನಾಲ್ಕನೇ ಪಂಚೆನ್ ಲಾಮಾ ಅವರ ಗುರು ಪೂಜೆ – ಲಾಮಾ ಛೋಪ. ಇವು, ಪರಮಪೂಜ್ಯ ದಲೈ ಲಾಮಾ ಅವರ ದಿವಂಗತ ಜೂನಿಯರ್ ಬೋಧಕ ಕ್ಯಾಬ್ಜೆ ಟ್ರಿಜಾಂಗ್ ಡೋರ್ಜೆಚಾಂಗ್ ಅವರ ಸಂಗ್ರಹಿತ ಕೃತಿಗಳಲ್ಲಿ ಈ ರೂಪದಲ್ಲಿ ಸಂಖ್ಯೆಗಳೊಂದಿಗೆ ಕಾಣಿಸಿಕೊಳ್ಳುತ್ತವೆ. ಆದರೆ, ರೂಪರೇಷೆ ಮತ್ತು ಅದರಲ್ಲಿರುವ ಸಂಖ್ಯೆಗಳಲ್ಲಿ ಹೆಚ್ಚು ಆಸಕ್ತಿ ವಹಿಸುವುದು ನಮ್ಮ ಮುಂದೆ ಏಳು ಮೊಮೊಗಳು ಇರುವಾಗ, ಅವುಗಳನ್ನು ತಿನ್ನುವ ಬದಲು, ಯಾರಾದರೂ ಬಂದು ಎಷ್ಟು ಇವೆ, ಅವುಗಳ ಆಕಾರಕ್ಕೆ ಮೂಲ ಯಾವುದು ಮತ್ತು ಇತ್ಯಾದಿಗಳನ್ನು ದೃಢೀಕರಿಸಬೇಕೆಂದು ನಾವು ಬಯಸುವಂತೆ ಆಗರುತ್ತದೆ. ಸುಮ್ಮನೆ ಕುಳಿತು ತಿನ್ನಿರಿ!