ನಾಲ್ಕು ನಿಜವಾದ ಸಂಗತಿಗಳು
ಬುದ್ಧ ಶಾಕ್ಯಮುನಿ ತನ್ನ ಜ್ಞಾನೋದಯವನ್ನು ಪ್ರದರ್ಶಿಸಿದ ನಂತರ, ಅಂತಹ ಸ್ಥಿತಿಯನ್ನು ಸಾಧಿಸಲು ಅವರು ನಮಗೆ ವಿವಿಧ ವಿಧಾನಗಳನ್ನು ಕಲಿಸಿದರು. ಮೂಲಭೂತ ವಿಧಾನವೆಂದರೆ ತಡೆಗಟ್ಟುವ ಕ್ರಮಗಳನ್ನು ತೆಗೆದುಕೊಳ್ಳುವುದು, ಬೇರೆ ರೀತಿಯಲ್ಲಿ ಹೇಳುವುದಾದರೆ, ಧರ್ಮವನ್ನು ಅಭ್ಯಾಸ ಮಾಡುವುದು. ಮೊದಲನೆಯದಾಗಿ, (1) ಎಲ್ಲರೂ ಎದುರಿಸುವ ನಿಜವಾದ ಸಮಸ್ಯೆಗಳಿವೆ. ಇವುಗಳಿಗೆ (2) ನಿಜವಾದ ಕಾರಣಗಳಿವೆ. ಆದರೆ ನಾವು (3) ಈ ಸಮಸ್ಯೆಗಳ ನಿಜವಾದ ನಿಲುಗಡೆಯನ್ನು ಅವುಗಳ ಕಾರಣಗಳನ್ನು ನಿಲ್ಲಿಸುವ ಮೂಲಕ ಸಾಧಿಸಬಹುದು ಮತ್ತು ಈ ನಿಜವಾದ ನಿಲುಗಡೆಗಳನ್ನು ತರಲು, ನಾವು (4) ಮನಸ್ಸಿನ ನಿಜವಾದ ಮಾರ್ಗಗಳನ್ನು ಅಭಿವೃದ್ಧಿಪಡಿಸಬೇಕು.
ಆರಂಭಿಕ ಹಂತ
ಈ ನಾಲ್ಕು ನಿಜವಾದ ಸಂಗತಿಗಳನ್ನು (ನಾಲ್ಕು ಆರ್ಯ ಸತ್ಯಗಳು) ಹಲವಾರು ವಿಭಿನ್ನ ಹಂತಗಳಲ್ಲಿ ಅರ್ಥಮಾಡಿಕೊಳ್ಳಬಹುದು. ಆರಂಭದಲ್ಲಿ, ಪುನರ್ಜನ್ಮದ ಕೆಟ್ಟ ಸ್ಥಿತಿಗಳಲ್ಲಿ ಮರುಜನ್ಮ ಪಡೆಯುವ ನಿಜವಾದ ಸಮಸ್ಯೆಗಳಿವೆ. ನಾವು ತೀವ್ರ ದುಃಖದ ಸ್ಥಿತಿಯಲ್ಲಿದ್ದರೆ, ಅಪಾರ ಪ್ರಮಾಣದ ಅನಾರೋಗ್ಯ, ಹಸಿವು, ಬಾಯಾರಿಕೆಯನ್ನು ಅನುಭವಿಸುತ್ತಿದ್ದರೆ ಅಥವಾ ಯಾವಾಗಲೂ ನೋವಿನಿಂದ ಪೀಡಿತರಾಗಿದ್ದರೆ, ನಮಗೆ ಆಧ್ಯಾತ್ಮಿಕ ಬೆಳವಣಿಗೆಗೆ ಸಮಯ ಅಥವಾ ಸಾಧ್ಯತೆ ಇರುವುದಿಲ್ಲ. ಏಕೆಂದರೆ ನಮ್ಮ ಮನಸ್ಸುಗಳು ತೀವ್ರ ಸಮಸ್ಯೆಗಳು ಮತ್ತು ತೊಂದರೆಗಳಿಂದ ತುಂಬಿರುತ್ತವೆ.
ಇದರ ನಿಜವಾದ ಕಾರಣವು ವಿನಾಶಕಾರಿಯಾಗಿ ವರ್ತಿಸುವುದಾಗಿರುತ್ತದೆ. ಬುದ್ಧ ಕಲಿಸಿದಂತೆ, ನಾವು ನೋವು ಅಥವಾ ದುಃಖವನ್ನು ಸೃಷ್ಟಿಸಿದರೆ, ಆ ದುಃಖವನ್ನು ನಾವೇ ಅನುಭವಿಸಬೇಕು. ಮತ್ತೊಂದೆಡೆ, ನಾವು ರಚನಾತ್ಮಕ ರೀತಿಯಲ್ಲಿ ವರ್ತಿಸಿದರೆ, ನಾವು ಸಂತೋಷವನ್ನು ಸೃಷ್ಟಿಸಿದರೆ, ಅಂತಿಮವಾಗಿ ಈ ಸಂತೋಷವನ್ನು ನಾವೇ ಅನುಭವಿಸುತ್ತೇವೆ. ಆದ್ದರಿಂದ, ಆ ತೀವ್ರ ಸಮಸ್ಯೆಗಳ ನಿಜವಾದ ಪರಿಹಾರವನ್ನು ಸಾಧಿಸಲು ನಾವು ಬಯಸಿದರೆ, ನಕಾರಾತ್ಮಕ ಅಥವಾ ವಿನಾಶಕಾರಿ ಕ್ರಿಯೆಗಳಿಂದ ನಮ್ಮನ್ನು ನಾವು ನಿರ್ಬಂಧಿಸಿಕೊಳ್ಳಬಹುದಾದ ನಿಜವಾದ ಮಾರ್ಗವನ್ನು ಅನುಸರಿಸಬೇಕು.
ಮೊದಲನೆಯದಾಗಿ, ನಮಗೆ ಅಮೂಲ್ಯವಾದ ಮಾನವ ಜೀವನವಿದೆ ಎಂದು ನಾವು ಅರಿತುಕೊಳ್ಳಬೇಕು. ಪ್ರಸ್ತುತದಲ್ಲಿ, ನಮಗೆ ಆಧ್ಯಾತ್ಮಿಕವಾಗಿ ಬೆಳೆಯಲು ಮತ್ತು ಅಭಿವೃದ್ಧಿಗೊಳ್ಳುವ ಎಲ್ಲಾ ಅವಕಾಶಗಳಿವೆ. ಉದಾಹರಣೆಗೆ, ನಾವು ಕಾನ್ಸಂಟ್ರೇಶನ್ ಕ್ಯಾಂಪ್ಗಳಲ್ಲಿ ಇಲ್ಲ ಅಥವಾ ತೀವ್ರ ಕ್ಷಾಮದಿಂದ ಬಳಲುತ್ತಿಲ್ಲ. ಆದರೆ ಈ ಅವಕಾಶಗಳು ಶಾಶ್ವತವಾಗಿ ಉಳಿಯುವುದಿಲ್ಲ ಏಕೆಂದರೆ ಖಂಡಿತವಾಗಿಯೂ ನಾವೆಲ್ಲರೂ ಸಾಯುತ್ತೇವೆ ಮತ್ತು ಈ ಅಮೂಲ್ಯವಾದ ಮಾನವ ಜೀವನವು ಕಳೆದುಹೋಗುತ್ತದೆ. ಇದು ಯಾವಾಗ ಸಂಭವಿಸುತ್ತದೆ ಎಂಬುದು ಖಚಿತವಿಲ್ಲ. ಯಾವುದೇ ಕ್ಷಣದಲ್ಲಿ, ನಮಗೆ ಟ್ರಕ್ ಒಂದು ಡಿಕ್ಕಿ ಹೊಡೆಯಬಹುದು. ನಾವು ಈಗಲೇ ಸಾಯುತ್ತಿದ್ದರೆ, ನಾವು ಯಾವಾಗಲೂ ವಿನಾಶಕಾರಿಯಾಗಿ ವರ್ತಿಸುತ್ತಿದ್ದರೆ, ಇದು ಭವಿಷ್ಯದಲ್ಲಿ ಕೆಟ್ಟ ಮರುಜನ್ಮಗಳ ಸ್ಥಿತಿಗಳಿಗೆ ಕಾರಣವಾಗುತ್ತದೆ. ನಾವು ಸೃಷ್ಟಿಸಿಕೊಂಡ ನೋವು ಮತ್ತು ಸಂಕಟಗಳನ್ನು ನಾವೇ ಅನುಭವಿಸಬೇಕಾದ ಸಂದರ್ಭಗಳಲ್ಲಿ ನಾವು ಮರುಜನ್ಮ ಪಡೆಯುತ್ತೇವೆ. ಆದ್ದರಿಂದ, ಈ ಭವಿಷ್ಯದ ಬಗ್ಗೆ ಭಯಪಡುತ್ತಾ, ಇದನ್ನು ತಪ್ಪಿಸುವ ದಿಕ್ಕನ್ನು ನಾವು ಹುಡುಕುತ್ತೇವೆ. ನಾವು ಬುದ್ಧರತ್ತ ನೋಡುತ್ತೇವೆ.
ಬುದ್ಧರು ಎಂದರೆ ಎಲ್ಲಾ ಮಿತಿಗಳಿಂದ ತಮ್ಮನ್ನು ತಾವು ಶುದ್ಧೀಕರಿಸಿಕೊಂಡವರು, ಇದರಿಂದಾಗಿ ಅವರ ಮನಸ್ಸು, ಮಾತು ಮತ್ತು ದೇಹದ ಸಾಮರ್ಥ್ಯಗಳು ಅಪರಿಮಿತ ಮತ್ತು ಸ್ಪಷ್ಟವಾಗಿರುತ್ತವೆ. ಅವರ ಮನಸ್ಸುಗಳು ಕೋಪ, ಬಾಂಧವ್ಯ ಅಥವಾ ಮತಾಂಧತೆಯಂತಹ ಗೊಂದಲದ ಭಾವನೆಗಳು ಅಥವಾ ವರ್ತನೆಗಳಿಂದ ಸೀಮಿತವಾಗಿರುವುದಿಲ್ಲ. ಅವರು ಮಾನಸಿಕ ಮಂದತೆ ಅಥವಾ ಮಾನಸಿಕ ಅಲೆದಾಡುವಿಕೆಯಿಂದ ಸೀಮಿತವಾಗಿರುವುದಿಲ್ಲ. ಮನಸ್ಸಿನ ಒಂದು ಅಂಶವೆಂದು ಪರಿಗಣಿಸಲಾದ ಅವರ ಹೃದಯಗಳು ಸ್ವಾರ್ಥ ಅಥವಾ ಪಕ್ಷಪಾತದಿಂದ ಸೀಮಿತವಾಗಿರುವುದಿಲ್ಲ. ಉದಾಹರಣೆಗೆ ಅವರ ಮಾತು ಸಂವಹನ ಸಾಮರ್ಥ್ಯದಲ್ಲಿ ಸೀಮಿತವಾಗಿರುವುದಿಲ್ಲ ಮತ್ತು ಅವರ ದೇಹವು ಶಕ್ತಿಯಲ್ಲಿ ಸೀಮಿತವಾಗಿರುವುದಿಲ್ಲ. ಈ ರೀತಿಯಾಗಿ, ಅವರ ಮನಸ್ಸುಗಳು, ಅವರ ಹೃದಯಗಳು, ಮಾತು ಮತ್ತು ದೇಹಗಳ ಬಗ್ಗೆ ಎಲ್ಲವೂ ಸ್ಪಷ್ಟವಾಗಿರುತ್ತದೆ. ಇದಲ್ಲದೆ, ಅವರು ತಮ್ಮ ಎಲ್ಲಾ ಸಾಮರ್ಥ್ಯಗಳನ್ನು ಅರಿತುಕೊಂಡಿರುತ್ತಾರೆ, ಆದ್ದರಿಂದ ಅವರು ಸಾಧ್ಯವಾದಷ್ಟು ಅತ್ಯುನ್ನತ ಸ್ಥಿತಿಗೆ ವಿಕಸನಗೊಂಡಿರುತ್ತಾರೆ.
ಕೇವಲ ಬುದ್ಧರು ಇದನ್ನು ಮಾಡಿದ್ದಾರೆ ಎಂಬುದಲ್ಲದೆ, ಅವರು ಇದನ್ನು ಹೇಗೆ ಮಾಡಿದ್ದಾರೆ ಎಂಬುದನ್ನೂ ಸೂಚಿಸಿದ್ದಾರೆ. ಇದು ತಮಗೂ ಮತ್ತು ಇತರರಿಗೂ ಸಮಸ್ಯೆಗಳನ್ನು ಸೃಷ್ಟಿಸುವ ತಮ್ಮ ಮಿತಿಗಳಲ್ಲಿ ಮುಳುಗಿ ಹೋಗುವುದನ್ನು ತಪ್ಪಿಸಲು ತಡೆಗಟ್ಟುವ ಕ್ರಮಗಳನ್ನು ಅಥವಾ ಧರ್ಮವನ್ನು ತೆಗೆದುಕೊಳ್ಳುವ ಮೂಲಕವಾಗಿತ್ತು. ಅಂತಹ ಗುರಿಗಳತ್ತ ಉದ್ದೇಶಿಸಿ ಅವುಗಳ ಕಡೆಗೆ ಉತ್ತಮವಾಗಿ ಮುಂದುವರೆದವರ ಸಮುದಾಯವೇ, ಸಂಘ. ನಂತರ, ಬುದ್ಧ, ಧರ್ಮ ಮತ್ತು ಸಂಘದ ಉತ್ತಮ ಗುಣಗಳನ್ನು ನೋಡಿ, ಮತ್ತು ನಮಗಾಗಿ ಹೆಚ್ಚಿನ ಸಮಸ್ಯೆಗಳನ್ನು ಸೃಷ್ಟಿಸುವ ದಿಕ್ಕಿನಲ್ಲಿ ಸಾಗುತ್ತಿರುವ ಜೀವನವನ್ನು ಅನುಭವಿಸುವುದನ್ನು ಮುಂದುವರಿಸಲು ಬಯಸುವುದನ್ನು ಬಿಟ್ಟು, ನಾವು ಬುದ್ಧ, ಧರ್ಮ ಮತ್ತು ಸಂಘದ ದಿಕ್ಕಿನಲ್ಲಿ ಹೋದರೆ, ಇದು ನಮಗೆ ಅಂತಹ ಸಮಸ್ಯೆಗಳನ್ನು ತಪ್ಪಿಸಲು ಅನುವು ಮಾಡಿಕೊಡುತ್ತದೆ, ನಾವು ಅವುಗಳಿಂದ ನಮ್ಮ ಜೀವನದಲ್ಲಿ ಸುರಕ್ಷಿತ ದಿಕ್ಕನ್ನು ತೆಗೆದುಕೊಳ್ಳುತ್ತೇವೆ ಎಂಬುದನ್ನು ನಾವು ಅರಿಯುತ್ತೇವೆ. ಆಶ್ರಯ ಪಡೆಯುವುದು ಎಂದರೆ ಇದೇ - ನಮ್ಮ ಜೀವನದಲ್ಲಿ ಸುರಕ್ಷಿತ ದಿಕ್ಕನ್ನು ಇಡುವುದು.
ಕಾರಣ ಮತ್ತು ಪರಿಣಾಮದ ನಿಯಮಗಳನ್ನು ಅನುಸರಿಸುವುದರಿಂದ ನಿಜವಾದ ಸುರಕ್ಷಿತ ದಿಕ್ಕನ್ನು ಸೂಚಿತವಾಗುತ್ತದೆ. ಆದ್ದರಿಂದ, ಭವಿಷ್ಯದಲ್ಲಿ ಸಮಸ್ಯೆಗಳನ್ನು ತಪ್ಪಿಸಲು ನಾವು ಬಯಸಿದರೆ, ಕೊಲ್ಲುವುದು, ಕದಿಯುವುದು, ಸುಳ್ಳು ಹೇಳುವುದು ಇತ್ಯಾದಿಗಳಿಂದ ನಮ್ಮನ್ನು ನಾವು ನಿಗ್ರಹಿಸಿಕೊಳ್ಳುವಂತಹ ನಿಜವಾದ ಮಾರ್ಗವನ್ನು ನಾವು ಅನುಸರಿಸುತ್ತೇವೆ. ಹೀಗಾಗಿ, ನಾವು ಸಕಾರಾತ್ಮಕ ರೀತಿಯಲ್ಲಿ ವರ್ತಿಸುತ್ತೇವೆ. ಇದು ನಾಲ್ಕು ನಿಜವಾದ ಸಂಗತಿಗಳ ತಿಳುವಳಿಕೆಯ ಆರಂಭಿಕ ಹಂತವಾಗಿರುತ್ತದೆ.
ಮಧ್ಯಂತರ ಹಂತ
ಮಧ್ಯಂತರ ಮಟ್ಟದಲ್ಲಿ, ನಾವು ಯಾವುದೇ ರೀತಿಯ ಪರಿಸ್ಥಿತಿಯಲ್ಲಿ ಮರುಜನ್ಮ ಪಡೆದರೂ, ನಾವು ಹುಟ್ಟುವುದು, ಅನಾರೋಗ್ಯಕ್ಕೆ ಒಳಗಾಗುವುದು, ವಯಸ್ಸಾಗುವುದು ಮತ್ತು ಸಾಯುವುದು ಎಂಬ ನಿಜವಾದ ಸಮಸ್ಯೆಗಳನ್ನು ಅನುಭವಿಸುತ್ತೇವೆ. ನಾವು ಬಯಸಿದ್ದನ್ನು ಪಡೆಯಲು ಪ್ರಯತ್ನಿಸಿದಾಗಲೂ ಅದನ್ನು ಪಡೆಯದಿರುವುದು ಮತ್ತು ನಾವು ಬಯಸದ ವಿಷಯಗಳು ನಮಗೆ ಸಂಭವಿಸುವುದರಿಂದ ಉಂಟಾಗುವ ಸಮಸ್ಯೆಗಳು ನಿಜವಾದ ಸಮಸ್ಯೆಗಳಾಗಿವೆ. ಇತರರೊಂದಿಗೆ ಯಾವಾಗಲೂ ಕಷ್ಟಕರವಾದ ಸಂಬಂಧಗಳನ್ನು ಹೊಂದುವ ಹತಾಶೆಗಳಂತಹ ಮುಂತಾದ ಅನಿಯಂತ್ರಿತವಾಗಿ ಮರುಕಳಿಸುವ ಸಮಸ್ಯೆಗಳನ್ನು ನಾವು ಹೊಂದಿರುತ್ತೇವೆ. ಇವುಗಳಿಗೆ ನಿಜವಾದ ಕಾರಣವೆಂದರೆ ಮೊದಲನೆಯದಾಗಿ ನಾವು ಯಾರು ಮತ್ತು ನಾವು ಹೇಗೆ ಅಸ್ತಿತ್ವದಲ್ಲಿದ್ದೇವೆ ಎಂಬುದರ ಬಗೆಗಿನ ವಾಸ್ತವದ ಅರಿವಿನ ಕೊರತೆ. ಆ ಕಾರಣದಿಂದಾಗಿ, ನಾವು ಧೃಡವಾದ ಅಹಂ-ಗುರುತುಗಳನ್ನು ಗ್ರಹಿಸುತ್ತೇವೆ, ಆದರೆ ಅದರ ಬಗ್ಗೆ ನಮಗೆ ಅಸುರಕ್ಷಿತ ಭಾವನೆ ಉಂಟಾಗುತ್ತದೆ. ಪರಿಣಾಮವಾಗಿ, ಅಂತಹ ಗುರುತುಗಳನ್ನು ರಕ್ಷಿಸಿಕೊಳ್ಳಲು ಅಥವಾ ಪ್ರತಿಪಾದಿಸಲು, ನಮ್ಮ ಮನಸ್ಸುಗಳು ಬಾಂಧವ್ಯ, ಕೋಪ, ಮುಗ್ಧತೆ, ಹೆಮ್ಮೆ, ಅಸೂಯೆ, ನಿರ್ಣಯವಿಲ್ಲದ ಹಿಂಜರಿಕೆ ಮುಂತಾದ ಗೊಂದಲಮಯ ಭಾವನೆಗಳು ಮತ್ತು ವರ್ತನೆಗಳಿಂದ ತುಂಬಿರುತ್ತವೆ. ಇವುಗಳ ಆಧಾರದ ಮೇಲೆ, ವಿವಿಧ ಪ್ರಚೋದನೆಗಳು ಅಥವಾ ಕರ್ಮಗಳು ನಮ್ಮ ಮನಸ್ಸಿಗೆ ತೋಚುತ್ತವೆ, ಅದನ್ನು ನಾವು ಹಠಾತ್ ವರ್ತನೆಯ ರೂಪದಲ್ಲಿ ವರ್ತಿಸುತ್ತೇವೆ. ನಮ್ಮ ಗುರುತುಗಳನ್ನು ಹೆಚ್ಚು ಸುರಕ್ಷಿತಗೊಳಿಸುವ ಪ್ರಯತ್ನದಲ್ಲಿ ನಾವು ಹೀಗೆ ವರ್ತಿಸುತ್ತೇವೆ, ಉದಾಹರಣೆಗೆ, ಸಾಧ್ಯವಾದಷ್ಟು ಸಂಪತ್ತು, ಭೌತಿಕ ವಸ್ತುಗಳು ಅಥವಾ ಸ್ನೇಹಿತರನ್ನು ಸಂಗ್ರಹಿಸಲು ಪ್ರಯತ್ನಿಸುವ ಮೂಲಕ ಅಥವಾ ನಮಗೆ ಇಷ್ಟವಿಲ್ಲದ ಎಲ್ಲವನ್ನೂ ದೂರ ಮಾಡುವ ಅಥವಾ ನಾಶಮಾಡಲು ಪ್ರಯತ್ನಿಸುವ ಮೂಲಕ. ನಾವು ಈ ರೀತಿಗಳಲ್ಲಿ ಹಠಾತ್ತನೆ ವರ್ತಿಸಿದಾಗ, ಉದಾಹರಣೆಗೆ ಪರಸ್ಪರ ಕೂಗಾಡುವ ಅಥವಾ ಕ್ರೂರವಾಗಿ ವರ್ತಿಸುವ ಮೂಲಕ, ಇವು ನಮಗೆ ನಿಜವಾದ ಸಮಸ್ಯೆಗಳನ್ನು ಉಂಟುಮಾಡುತ್ತವೆ.
ಈ ಸಮಸ್ಯೆಗಳ ನಿಜವಾದ ನಿಲುಗಡೆಗಳನ್ನು ಹೊಂದಲು ನಾವು ಬಯಸಿದರೆ, ನಾವು ನಿಜವಾದ ಮಾರ್ಗವನ್ನು ಅನುಸರಿಸಬೇಕು. ಮೊದಲನೆಯದಾಗಿ, ನಾವು ಸರಿಯಾದ ಪ್ರೇರಣೆಯನ್ನು ಬೆಳೆಸಿಕೊಳ್ಳಬೇಕು, ಇದು ನಮ್ಮ ಸಮಸ್ಯೆಗಳಿಂದ ಮುಕ್ತರಾಗುವ ಬಲವಾದ ದೃಢಸಂಕಲ್ಪವಾಗಿದೆ, ಇದನ್ನು ಕೆಲವೊಮ್ಮೆ ತ್ಯಜಿಸುವಿಕೆ ಎಂದು ಕರೆಯಲಾಗುತ್ತದೆ. ಇದನ್ನು ನಮ್ಮ ಪ್ರೇರಣೆಯಾಗಿಟ್ಟುಕೊಂಡು, ನಾವು ವಾಸ್ತವ ಅಥವಾ ಶೂನ್ಯತೆಯನ್ನು ನೋಡಬಹುದಾದ ವಿವೇಚನಾತ್ಮಕ ಅರಿವನ್ನು ಬೆಳೆಸಿಕೊಳ್ಳಬೇಕು. ಅಂತಹ ಬುದ್ಧಿವಂತಿಕೆಯನ್ನು ಪಡೆಯಲು ನಮಗೆ ಏಕಾಗ್ರತೆ ಬೇಕು, ಮತ್ತು ನಮ್ಮ ಮನಸ್ಸಿನ ಮೇಲೆ ಅಂತಹ ನಿಯಂತ್ರಣವನ್ನು ಹೊಂದಲು, ನಮ್ಮ ದೇಹ ಮತ್ತು ಮಾತಿನ ಒಟ್ಟಾರೆ ಕ್ರಿಯೆಗಳನ್ನು ನಿಯಂತ್ರಿಸಲು ನಮಗೆ ಸಾಧ್ಯವಾಗುತ್ತದೆ. ಆದ್ದರಿಂದ, ನಮಗೆ ನೈತಿಕ ಸ್ವಯಂ-ಶಿಸ್ತು ಬೇಕು. ಉನ್ನತ ನೈತಿಕ ಸ್ವಯಂ-ಶಿಸ್ತು, ಏಕಾಗ್ರತೆ ಮತ್ತು ಬುದ್ಧಿವಂತಿಕೆ - ಈ ಮೂರು ಉನ್ನತ ತರಬೇತಿಗಳ ಮಾರ್ಗವನ್ನು ಅನುಸರಿಸುವ ಮೂಲಕ ನಾವು ಶೂನ್ಯತೆಯನ್ನು ನೋಡುವ ವಿವೇಚನಾ ಅರಿವನ್ನು ಪಡೆಯಬಹುದು: ಅಸ್ತಿತ್ವದ ಎಲ್ಲಾ ಅಸಾಧ್ಯ ಮಾರ್ಗಗಳ ಸಂಪೂರ್ಣ ಅನುಪಸ್ಥಿತಿ.
ನಾವು ವಾಸ್ತವದ ಬಗ್ಗೆ ತಿಳಿದಿಲ್ಲದ ಕಾರಣ ಮತ್ತು ನಾವು ಯಾರು ಮತ್ತು ನಾವು ಮತ್ತು ಪ್ರಪಂಚವು ಹೇಗೆ ಅಸ್ತಿತ್ವದಲ್ಲಿದೆ ಎಂಬುದರ ಬಗ್ಗೆ ಗೊಂದಲಕ್ಕೊಳಗಾಗಿರುವುದರಿಂದ, ಎಲ್ಲವೂ ಸ್ಥಿರವಾದ ಮತ್ತು ಸ್ವತಂತ್ರವಾಗಿರುವಂತಹ ಅಸಾಧ್ಯ ರೀತಿಯಲ್ಲಿ ಅಸ್ತಿತ್ವದಲ್ಲಿದೆ ಎಂದು ನಾವು ಗ್ರಹಿಸುತ್ತೇವೆ. ಆದರೆ ಯಾವುದೂ ಅಂತಹ ಕಲ್ಪನೆಯ ಅಸಾಧ್ಯ ರೀತಿಯಲ್ಲಿ ಅಸ್ತಿತ್ವದಲ್ಲಿಲ್ಲ. ಆದರೆ ಇದರ ಅರ್ಥ ಯಾವುದೂ ಅಸ್ತಿತ್ವದಲ್ಲಿಲ್ಲ ಎಂದಲ್ಲ. ಬದಲಿಗೆ, ಅಸ್ತಿತ್ವದಲ್ಲಿರುವ ವಿಷಯಗಳು ಅವಲಂಬಿತವಾಗಿ ಉದ್ಭವಿಸುವ ರೀತಿಗಳಲ್ಲಿ ಅಸ್ತಿತ್ವದಲ್ಲಿರುತ್ತವೆ, ಎಲ್ಲವೂ ಕಾರಣಗಳು ಮತ್ತು ಸಂದರ್ಭಗಳ ಮೇಲೆ, ಭಾಗಗಳ ಮೇಲೆ ಅಥವಾ ಮನಸ್ಸಿನೊಂದಿಗೆ ಮತ್ತು ಮಾನಸಿಕ ಲೇಬಲ್ ಮಾಡುವ ಪ್ರಕ್ರಿಯೆಯ ಸಂಬಂಧದಲ್ಲಿ ಉದ್ಭವಿಸುತ್ತದೆ. ತಿಳುವಳಿಕೆ ಮತ್ತು ಸಾಕ್ಷಾತ್ಕಾರದ ಅಂತಹ ನಿಜವಾದ ಮಾರ್ಗದ ಮೂಲಕ, ಭಾವನೆಗಳನ್ನು ಗೊಂದಲಗೊಳಿಸುವ ಮಾನಸಿಕ ಅಸ್ಪಷ್ಟತೆಗಳು ಅಥವಾ ಮಾನಸಿಕ ನಿರ್ಬಂಧಗಳನ್ನು ನಾವು ನಿವಾರಿಸಬಹುದು ಮತ್ತು ವಿಮೋಚನೆ ಪಡೆಯಬಹುದು. ಇದು ನಾಲ್ಕು ನಿಜವಾದ ಸಂಗತಿಗಳ ತಿಳುವಳಿಕೆಯ ಮಧ್ಯಂತರ ಹಂತವಾಗಿದೆ.
ಉನ್ನತ ಹಂತ
ಉನ್ನತ ಮಟ್ಟದಲ್ಲಿ, ನಾವು ಸಮಸ್ಯೆಗಳನ್ನು ಅನುಭವಿಸುತ್ತೇವೆ ಎಂಬುದಲ್ಲದೆ ಪ್ರತಿಯೊಬ್ಬರೂ ಒಂದೇ ರೀತಿಯ ಸಮಸ್ಯೆಗಳನ್ನು ಅನುಭವಿಸುತ್ತೇವೆ ಎಂಬುದನ್ನು ನಾವು ನೋಡುತ್ತೇವೆ. ಆದ್ದರಿಂದ, ಈ ಮಟ್ಟದಲ್ಲಿ, ನಿಜವಾದ ಸಮಸ್ಯೆಗಳು ಎಲ್ಲರೂ ಎದುರಿಸುವ ಸಮಸ್ಯೆಗಳಾಗಿರುತ್ತವೆ. ಇದಲ್ಲದೆ, ಮತ್ತೊಂದು ನಿಜವಾದ ಸಮಸ್ಯೆಯು, ಪ್ರತಿಯೊಬ್ಬರೂ ತಮ್ಮ ಸಮಸ್ಯೆಗಳನ್ನು ನಿವಾರಿಸುವಂತೆ ಸಹಾಯ ಮಾಡಲಾಗದ ನಮ್ಮ ಅಸಮರ್ಥತೆಯಾಗಿರುತ್ತದೆ. ಈ ಸಮಸ್ಯೆಗಳ ನಿಜವಾದ ಕಾರಣಗಳು, ಮೊದಲನೆಯದಾಗಿ, ನಾವು ನಮ್ಮ ಬಗ್ಗೆ ಮಾತ್ರ ಕಾಳಜಿ ವಹಿಸುವ ಮತ್ತು ಇತರರನ್ನು ನಿರ್ಲಕ್ಷಿಸುವ ಸ್ವಾರ್ಥ. ನಂತರ, ಇತರರಿಗೆ ಪ್ರಯೋಜನವನ್ನು ನೀಡುವ ಎಲ್ಲಾ ಕೌಶಲ್ಯಪೂರ್ಣ ವಿಧಾನಗಳನ್ನು ತಿಳಿದುಕೊಳ್ಳುವುದನ್ನು ತಡೆಯುವ ಮಾನಸಿಕ ಅಸ್ಪಷ್ಟತೆಗಳು ಅಥವಾ ಮಾನಸಿಕ ನಿರ್ಬಂಧಗಳು, ಬೇರೆ ರೀತಿಯಲ್ಲಿ ಹೇಳುವುದಾದರೆ, ನಮ್ಮ ಸರ್ವಜ್ಞತೆಯನ್ನು ತಡೆಯುವ ಅಸ್ಪಷ್ಟತೆಗಳು. ಇದರ ನಿಜವಾದ ನಿಲುಗಡೆಯು ನಮ್ಮ ಸ್ವಂತ ಸಮಸ್ಯೆಗಳಿಂದ ಮುಕ್ತರಾಗುವುದಲ್ಲದೆ, ಬುದ್ಧಸ್ಥಿತಿಯನ್ನು ಸಾಧಿಸಲು ಮೀರಿ ಹೋಗುವುದಾಗಿರುತ್ತದೆ, ಇದರಲ್ಲಿ ನಾವು ನಮ್ಮ ಎಲ್ಲಾ ಮಿತಿಗಳನ್ನು ನಿವಾರಿಸುತ್ತೇವೆ ಮತ್ತು ನಮ್ಮ ಎಲ್ಲಾ ಸಾಮರ್ಥ್ಯಗಳನ್ನು ಅರಿತುಕೊಳ್ಳುತ್ತೇವೆ. ಇದರಿಂದ ನಾವು ಎಲ್ಲರಿಗೂ ಸಾಧ್ಯವಾದಷ್ಟು ಪ್ರಯೋಜನಕಾರಿಯಾಗಬಹುದು.
ಇದಕ್ಕೆ ಕಾರಣವಾಗುವ ನಿಜವಾದ ಮಾರ್ಗವೆಂದರೆ, ಮೊದಲನೆಯದಾಗಿ, ಬೋಧಿಚಿತ್ತದ ಪ್ರೇರಣೆಯನ್ನು ಅಭಿವೃದ್ಧಿಪಡಿಸುವುದು, ಇದು ನಮ್ಮ ಹೃದಯಗಳನ್ನು ಇತರರಿಗೆ ಮತ್ತು ಜ್ಞಾನೋದಯಕ್ಕಾಗಿ ವಿಸ್ತರಿಸುವುದು ಅಥವಾ ತೆರೆಯುವುದಾಗಿರುತ್ತದೆ, ಅವರೆಲ್ಲರಿಗೂ ಪ್ರಯೋಜನಕಾರಿಯಾಗುವ ಬುದ್ಧಸ್ಥಿತಿ. ಇದನ್ನು ನಮ್ಮ ಪ್ರೇರಣೆಯಾಗಿಟ್ಟುಕೊಂಡು, ನಾವು ದೂರಗಾಮಿ ವರ್ತನೆಗಳು ಅಥವಾ ಪರಿಪೂರ್ಣತೆಗಳನ್ನು ಅಭಿವೃದ್ಧಿಪಡಿಸುತ್ತೇವೆ ಮತ್ತು ಅಭ್ಯಾಸ ಮಾಡುತ್ತೇವೆ, ಇವೆಲ್ಲವೂ ಕಾಳಜಿಯುಳ್ಳ ಪ್ರೀತಿ ಮತ್ತು ಸಹಾನುಭೂತಿಯಿಂದ ಕೂಡಿದ ಕರುಣೆಯನ್ನು ಆಧರಿಸಿರುತ್ತವೆ. ಇವು ಉದಾರತೆ, ಸ್ವಯಂ-ಶಿಸ್ತು, ತಾಳ್ಮೆಯ ಸಹಿಷ್ಣುತೆ, ಸಂತೋಷದಾಯಕ ಪರಿಶ್ರಮ, ಮನಸ್ಸಿನ ಸ್ಥಿರತೆ (ಏಕಾಗ್ರತೆ) ಮತ್ತು ವಿವೇಚನಾತ್ಮಕ ಅರಿವಿನ (ಬುದ್ಧಿವಂತಿಕೆ) ವರ್ತನೆಗಳಾಗಿರುತ್ತವೆ. ದೂರಗಾಮಿ ವಿವೇಚನೆಯೊಂದಿಗೆ, ನಮ್ಮ ಗೊಂದಲಮಯ ಭಾವನೆಗಳನ್ನು ಜಯಿಸಲು ಮತ್ತು ವಿಮೋಚನೆಯನ್ನು ಪಡೆಯಲು ನಾವು ನೋಡಬೇಕಾದ ವಾಸ್ತವ ಅಥವಾ ಶೂನ್ಯತೆಯನ್ನು ನಾವು ನೋಡುತ್ತೇವೆ. ಆದರೆ ನಮ್ಮ ಪ್ರೇರಣೆಯಾಗಿ ಬೋಧಿಚಿತ್ತದ ಬಲವು ಮುಕ್ತರಾಗುವ ದೃಢಸಂಕಲ್ಪಕ್ಕಿಂತ ಹೆಚ್ಚು ಬಲವಾಗಿರುವುದರಿಂದ, ಆ ತಿಳುವಳಿಕೆಗೆ ಹೆಚ್ಚಿನ ಶಕ್ತಿಯಿರುತ್ತದೆ.
ನಮ್ಮ ಸಮಸ್ಯೆಗಳಿಂದ ಮುಕ್ತರಾಗುವ ದೃಢಸಂಕಲ್ಪ ಮಾತ್ರ ನಮಗಿದ್ದರೆ, ಇದು ವಾಸ್ತವದ ನಮ್ಮ ತಿಳುವಳಿಕೆಯ ಹಿಂದಿರುವ ಸೀಮಿತ ಪ್ರಮಾಣದ ಶಕ್ತಿಯನ್ನು ಒದಗಿಸುತ್ತದೆ. ಆದರೆ, ವಾಸ್ತವವನ್ನು ನೋಡುವ ನಮ್ಮ ಪ್ರೇರಣೆಯು, ಎಲ್ಲರಿಗೂ ಪ್ರಯೋಜನಕಾರಿಯಾಗಲ ಸಾಧ್ಯವಾಗುವುದಾದರೆ, ಇದು ಹೆಚ್ಚಿನ ಶಕ್ತಿಯನ್ನು ಸೇರಿಸುತ್ತದೆ. ಹೀಗಾಗಿ, ನಮ್ಮ ತಿಳುವಳಿಕೆಯು ಭಾವನೆಗಳನ್ನು ತೊಂದರೆಗೊಳಿಸುವ ಅಸ್ಪಷ್ಟತೆಗಳನ್ನು ಮಾತ್ರವಲ್ಲದೆ, ಸರ್ವಜ್ಞತೆಯನ್ನು ತಡೆಯುವ ಅಸ್ಪಷ್ಟತೆಗಳನ್ನು ಸಹ ಕತ್ತರಿಸಲು ಸಾಧ್ಯವಾಗುತ್ತದೆ.
ಉದಾಹರಣೆಗೆ, ವಿಷಕಾರಿ ಹಾವುಗಳ ಕಡಿತವನ್ನು ಹೇಗೆ ಗುಣಪಡಿಸುವುದು ಎಂಬುದರ ಕುರಿತು ವೈದ್ಯಕೀಯ ಉಪನ್ಯಾಸವಿದೆ ಎಂದು ಭಾವಿಸೋಣ. ವೈದ್ಯನಾಗಲು ಮತ್ತು ತನ್ನ ಆರ್ಥಿಕ ಸಮಸ್ಯೆಗಳನ್ನು ನಿವಾರಿಸಲು ಮಾತ್ರ ಇದನ್ನು ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಯೊಬ್ಬರು ಹಾಜರಾದರೆ, ಅವರು ಈ ಉಪನ್ಯಾಸವನ್ನು ಒಂದು ನಿರ್ದಿಷ್ಟ ಪ್ರಮಾಣದ ಶಕ್ತಿಯಿಂದ ಕೇಳುತ್ತಾರೆ. ಆದರೆ ಹಾವು ಕಚ್ಚಿದ ಮಗುವನ್ನು ಹೊಂದಿರುವ ತಾಯಿ ತರಗತಿಯೊಳಗೆ ಓಡಿದರೆ, ಆಗ ತನ್ನ ಮಗುವನ್ನು ಗುಣಪಡಿಸುವ ಬಗ್ಗೆ ಅವಳಿಗೆ ತೀವ್ರವಾದ ಕಾಳಜಿ ಇದ್ದಾಗ, ಹಾವು ಕಡಿತವನ್ನು ಹೇಗೆ ಹೆಚ್ಚು ತೀವ್ರತೆಯಿಂದ ಗುಣಪಡಿಸುವುದು ಎಂದು ಅವಳು ಕಲಿಯಲು ಬಯಸುತ್ತಾಳೆ. ಅದೇ ರೀತಿ, ನಮ್ಮ ವಾಸ್ತವದ ತಿಳುವಳಿಕೆಯ ಹಿಂದೆ ಬೋಧಿಚಿತ್ತ ಪ್ರೇರಣೆ ಇದ್ದಾಗ, ಇದು ಅದಕ್ಕೆ ಹೆಚ್ಚಿನ ಬಲವಾದ ಶಕ್ತಿಯನ್ನು ಸೇರಿಸುತ್ತದೆ, ಇದರಿಂದಾಗಿ ನಮ್ಮ ತಿಳುವಳಿಕೆಯು, ನಮ್ಮಲ್ಲಿರುವ ಎಲ್ಲಾ ಮಾನಸಿಕ ಅಸ್ಪಷ್ಟತೆಗಳನ್ನು ಕತ್ತರಿಸಲು ಸಾಧ್ಯವಾಗುತ್ತದೆ.
ಈ ರೀತಿಯ ವಿಧಾನವು, ವಿಧಾನ ಮತ್ತು ಬುದ್ಧಿವಂತಿಕೆಯನ್ನು ಸಂಯೋಜಿಸುವ ಮನಸ್ಸಿನ ಮಾರ್ಗ ಅಥವಾ ಪಥವನ್ನು ಒಳಗೊಂಡಿರುತ್ತದೆ. ಆದರೆ ಸೂತ್ರ ಮಟ್ಟದಲ್ಲಿ ಸಂಯೋಜನೆಯಾಗುವ ವಿಧಾನವು, ಎರಡೂ ಏಕಕಾಲದಲ್ಲಿ ಸಂಭವಿಸುವ ವಿಧಾನವಾಗಿರುವುದಿಲ್ಲ. ಬದಲಾಗಿ, ಇದು ಪ್ರತಿಯೊಂದೂ ಇನ್ನೊಂದರ ಸಂದರ್ಭದಲ್ಲಿ ಸಂಭವಿಸುವ ವಿಧಾನವಾಗಿರುತ್ತದೆ. ಹೀಗಾಗಿ, ನಮ್ಮ ಹೃದಯಗಳನ್ನು ಇತರರಿಗೆ ವಿಸ್ತರಿಸುವ ಮತ್ತು ಅವರಿಗೆ ಪ್ರಯೋಜನಕಾರಿಯಾಗುವಂತೆ ಜ್ಞಾನೋದಯವನ್ನು ಸಾಧಿಸುವ ವಿಧಾನವು ನಾವು ಬುದ್ಧಿವಂತಿಕೆಯನ್ನು ಹೊಂದುವ ಅಥವಾ ವಾಸ್ತವದ ತಿಳುವಳಿಕೆಯನ್ನು ಹೊಂದಿರುವ ಮತ್ತು ಪ್ರತಿಯಾದ ಸಂದರ್ಭದಲ್ಲಿರುತ್ತದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ನಮ್ಮ ಹೃದಯಗಳು ಇತರರಿಗಾಗಿ ವಿಸ್ತರಿಸುತ್ತಿರುವಾಗ, ಇದು ಸಂದರ್ಭದೊಳಗೆ ಅಥವಾ ನಮ್ಮ ಮನಸ್ಸುಗಳು ವಾಸ್ತವಕ್ಕೆ ವಿಸ್ತರಿಸುತ್ತಿರುವ ಸಂದರ್ಭದಲ್ಲಿರುತ್ತದೆ. ನಮ್ಮ ಮನಸ್ಸುಗಳು ವಾಸ್ತವಕ್ಕೆ ವಿಸ್ತರಿಸುತ್ತಿರುವಾಗ, ಅದು ನಮ್ಮ ಹೃದಯಗಳು ಇತರರಿಗೆ ವಿಸ್ತರಿಸುವ ಸಂದರ್ಭದಲ್ಲಿರುತ್ತದೆ. ಈ ರೀತಿಯಾಗಿ, ಒಂದು ಇನ್ನೊಂದರ ಸನ್ನಿವೇಶದಲ್ಲಿರುತ್ತದೆ, ಮತ್ತು ನಾವು ಬುದ್ಧರಾಗುವವರೆಗೆ, ಇವೆರಡೂ ಒಂದೇ ಮನಸ್ಸಿನಲ್ಲಿ ಏಕಕಾಲದಲ್ಲಿ ಸಂಭವಿಸಲು ಸಾಧ್ಯವಿಲ್ಲ.
ಈ ರೀತಿಯಾಗಿ, ವಿಧಾನ ಮತ್ತು ಬುದ್ಧಿವಂತಿಕೆಯನ್ನು ಸಂಯೋಜಿಸುವ ಮೂಲಕ, ನಮ್ಮ ಎಲ್ಲಾ ಮಾನಸಿಕ ಅಸ್ಪಷ್ಟತೆಗಳನ್ನು ಕತ್ತರಿಸಲು ಬಹಳ ಸಮಯ ತೆಗೆದುಕೊಳ್ಳುತ್ತದೆ. ವಾಸ್ತವದಲ್ಲಿ, ಮೂರು ಲೆಕ್ಕವಿಲ್ಲದಷ್ಟು ಯುಗಗಳು ಎಂದು ಕರೆಯಲ್ಪಡುವಷ್ಟು ಸಮಯ ತೆಗೆದುಕೊಳ್ಳುತ್ತದೆ, ಲೆಕ್ಕವಿಲ್ಲದಷ್ಟು ಅತಿದೊಡ್ಡ ಸೀಮಿತ ಸಂಖ್ಯೆಯಾಗಿದೆ, ಇದು 10ರ ಮುಂದೆ 60 ಸೊನ್ನೆಗಳಾಗಿರುತ್ತದೆ. ಇದನ್ನು ನಾವು ಒಂದು ಜಿಲಿಯನ್ ಎಂದು ಕರೆಯೋಣ. ಇದು ಅಗಾಧವಾದ ಸಮಯವಾಗಿರುತ್ತದೆ ಮತ್ತು ಇತರರು ನಮ್ಮ ಮಿತಿಗಳನ್ನು ನಿವಾರಿಸಲು ಮತ್ತು ನಮ್ಮ ಎಲ್ಲಾ ಸಾಮರ್ಥ್ಯಗಳನ್ನು ಅರಿತುಕೊಂಡು, ಅವರಿಗೆ ಪ್ರಯೋಜನಕಾರಿಯಾಗಲು ನಾವು ಇಷ್ಟು ಸಮಯ ತೆಗೆದುಕೊಳ್ಳುವವರೆಗೆ, ಕಾಯಲು ಸಾಧ್ಯವಿಲ್ಲ. ಇಲ್ಲಿ ತಂತ್ರವು ಸಹಾಯಕವಾಗಿರುತ್ತದೆ. ತಂತ್ರವು ಬುದ್ಧಸ್ಥಿತಿಯನ್ನು ತಲುಪಲು ಸಾಧ್ಯವಾಗುವಂತೆ - ಅತ್ಯಂತ ವೇಗವಾಗಿ ಮತ್ತು ಪರಿಣಾಮಕಾರಿಯಾಗಿ - ಸಾಧ್ಯವಾದಷ್ಟು ವೇಗವಾಗಿ ಇತರರಿಗೆ ಪ್ರಯೋಜನವಾಗುವಂತೆ - ಮಹಾಯಾನ ಅಥವಾ ವಿಶಾಲ ಮನಸ್ಸಿನ ಅಭ್ಯಾಸವನ್ನು ಅಳವಡಿಸಿಕೊಳ್ಳುವುದಾಗಿರುತ್ತದೆ. ಇದು ನಾಲ್ಕು ನಿಜವಾದ ಸಂಗತಿಗಳ ವಿಷಯದಲ್ಲಿ ನಾವು ಚರ್ಚಿಸಿದ ಎಲ್ಲಾ ವಿಧಾನಗಳನ್ನು ಆಧರಿಸಿರುತ್ತದೆ.