ಲ್ಯಾಮ್-ರಿಮ್ ಕ್ರಮವಾದ ಮಾರ್ಗದ ಸಾಂಪ್ರದಾಯಿಕ ಪ್ರಸ್ತುತಿ

ಕ್ರಮವಾದ ಮಾರ್ಗದ ಮೂಲಕ ಜ್ಞಾನೋದಯದ ಪ್ರಗತಿ ಸಾಧಿಸುವುದರ ಮೊದಲು ಹೆಜ್ಜೆಯು, ಈ ಅಮೂಲ್ಯವಾದ ಮಾನವ ಪುನರ್ಜನ್ಮವನ್ನು ಪಡೆದಿರುವುದು ಎಷ್ಟು ಅದ್ಭುತವಾದ, ಅಪರೂಪದ ಅವಕಾಶವೆಂದು ಅರಿತುಕೊಳ್ಳುವುದಾಗಿರುತ್ತದೆ. ನಾವು ಅದನ್ನು ಸಂಪೂರ್ಣವಾಗಿ ಉಪಯೋಗಿಸಿದರೆ, ಭವಿಷ್ಯದಲ್ಲಿ ನಾವು ಅಂತಹ ಪುನರ್ಜನ್ಮಗಳನ್ನು ಮಾತ್ರವಲ್ಲದೆ, ವಿಮೋಚನೆ ಮತ್ತು ಜ್ಞಾನೋದಯವನ್ನು ಸಹ ಸಾಧಿಸಬಹುದು. ಎಲ್ಲವೂ ನಮ್ಮ ಪ್ರೇರಣೆ ಮತ್ತು ಗುರಿಯನ್ನು ಅವಲಂಬಿಸಿರುತ್ತದೆ ಮತ್ತು ಬುದ್ಧ ಕಲಿಸಿದ ಧರ್ಮ ಪದ್ಧತಿಗಳನ್ನು ಕಲಿಯುವುದು ಮತ್ತು ಅಭ್ಯಾಸ ಮಾಡುವುದರ ಮೇಲೆ ಅವಲಂಬಿತವಾಗಿರುತ್ತದೆ.

ಅಮೂಲ್ಯವಾದ ಮಾನವ ಪುನರ್ಜನ್ಮ 

ಏಕೆ ಅಮೂಲ್ಯವಾದ ಮಾನವ ಪುನರ್ಜನ್ಮವು ಆಸೆಗಳನ್ನು ಪೂರೈಸುವ ರತ್ನದಂತಿರುತ್ತದೆ

ನಮ್ಮಲ್ಲಿರುವ ಈ ಅಮೂಲ್ಯವಾದ ಮಾನವ ದೇಹವು ಆಸೆಗಳನ್ನು ಪೂರೈಸುವ ರತ್ನಕ್ಕಿಂತ ಹೆಚ್ಚು ಅಮೂಲ್ಯವಾಗಿರುತ್ತದೆ. ಇದು ವಿರಾಮಕ್ಕೆ ಆಧಾರವಾಗಿರುತ್ತದೆ; ಆದರೆ ನಮ್ಮ ದೇಹವು ನಮಗೆ ನೀಡುವ ವಿರಾಮ ಮತ್ತು ಅವಕಾಶವು ಮಾದಕ ವಸ್ತುಗಳ ಮೇಲೆ ಹೆಚ್ಚು ಆಸಕ್ತಿ ಹೊಂದುವುದಾಗಿರುವುದಿಲ್ಲ, ಬದಲಿಗೆ ಧರ್ಮವನ್ನು ಅಭ್ಯಾಸ ಮಾಡುವುದಾಗಿರುತ್ತದೆ. ಏಕೆ ಈ ಅಮೂಲ್ಯವಾದ ಮಾನವ ದೇಹವು ಆಸೆಗಳನ್ನು ಪೂರೈಸುವ ರತ್ನಕ್ಕಿಂತ ಹೆಚ್ಚು ಅಮೂಲ್ಯವಾಗಿರುತ್ತದೆ? ಏಕೆಂದರೆ ಆಸೆಗಳನ್ನು ಪೂರೈಸುವ ರತ್ನದೊಂದಿಗೆ ನಾವು ಈ ಜೀವಿತಾವಧಿಯಲ್ಲಿ ಆಹಾರ ಮತ್ತು ನೀರನ್ನು ಪಡೆಯಬಹುದು, ಆದರೆ ಆಸೆಗಳನ್ನು ಪೂರೈಸುವ ರತ್ನವು ಭವಿಷ್ಯದ ಜೀವನಕ್ಕೆ ಪ್ರಯೋಜನಕಾರಿಯಾಗಿರುವುದಿಲ್ಲ. ಆದ್ದರಿಂದ ಧರ್ಮವನ್ನು ಆಚರಿಸಲು ನಮಗೆ ಅವಕಾಶ ನೀಡುವ ಈ ದೇಹವು ಅಂತಹ ರತ್ನಕ್ಕಿಂತ ಹೆಚ್ಚು ಅಮೂಲ್ಯವಾಗಿರುತ್ತದೆ. 

ನಾವೆಲ್ಲರೂ ಯಾವಾಗಲೂ ಮತ್ತು ಸಾಧ್ಯವಾದಷ್ಟು ಕಾಲ ಸಂತೋಷವಾಗಿರಲು ಬಯಸುತ್ತೇವೆ. ಆದರೆ ಈ ಜೀವಿತಾವಧಿಯಲ್ಲಿ ನಾವು ಯಾವುದೇ ಸಂತೋಷವನ್ನು ಸಾಧಿಸಿದರೂ, ಅದು ಈ ಅಲ್ಪಾವಧಿಯ ಜೀವಿತಾವಧಿಯಲ್ಲಿ ಮಾತ್ರ ಇರುವುದರಿಂದ ಅದು ಬಹಳ ಅಲ್ಪಕಾಲಿಕವಾಗಿರುತ್ತದೆ. ಆದ್ದರಿಂದ ನಾವು ಸಂತೋಷದ ದೀರ್ಘ ನಿರಂತರತೆಯನ್ನು ಬಯಸಿದರೆ, ನಾವು ನಮ್ಮ ಭವಿಷ್ಯದ ಜೀವನದ ಬಗ್ಗೆ ಯೋಚಿಸಬೇಕು. ಆಸೆಗಳನ್ನು ಪೂರೈಸುವ ರತ್ನಕ್ಕೆ, ಮೂರು ಕೆಟ್ಟ ಲೋಕಗಳಲ್ಲಿ ಪುನರ್ಜನ್ಮ ಪಡೆಯುವುದರಿಂದ ನಮಗೆ ಸ್ವಾತಂತ್ರ್ಯವನ್ನು ನೀಡಲಾಗುವುದಿಲ್ಲ ಮತ್ತು ನಮಗೆ ಅಮರತ್ವವನ್ನು ನೀಡಲಾಗುವುದಿಲ್ಲ. ಆದರೆ ಈ ಅಮೂಲ್ಯವಾದ ಮಾನವ ದೇಹವನ್ನು ಆಧಾರವಾಗಿ ಬಳಸುವ ಮೂಲಕ, ನಾವು ಕೆಳಮಟ್ಟದ ಪುನರ್ಜನ್ಮದಿಂದ ನಮ್ಮನ್ನು ರಕ್ಷಿಸಿಕೊಳ್ಳಬಹುದು; ಮತ್ತು, ಜೆಟ್ಸನ್ ಮಿಲರೆಪಾ ಅವರಂತೆ, ಧರ್ಮವನ್ನು ಅಭ್ಯಾಸ ಮಾಡಲು ಇದನ್ನು ಆಧಾರವಾಗಿ ಬಳಸುವ ಮೂಲಕ, ನಾವು ಈ ಜೀವಿತಾವಧಿಯಲ್ಲಿ ಜ್ಞಾನೋದಯವನ್ನು ಪಡೆಯಬಹುದು. ಆದ್ದರಿಂದ ಆಸೆಗಳನ್ನು ಪೂರೈಸುವ ರತ್ನವು ನಮ್ಮ ಅಮೂಲ್ಯವಾದ ಮಾನವ ದೇಹವು ಮಾಡಬಹುದಾದ ಇವುಗಳನ್ನು ನಮಗೆ ನೀಡಲು ಸಾಧ್ಯವಿಲ್ಲವಾದ್ದರಿಂದ, ನಮ್ಮ ದೇಹವು ಆಸೆಗಳನ್ನು ಪೂರೈಸುವ ರತ್ನಕ್ಕಿಂತ ಹೆಚ್ಚು ಅಮೂಲ್ಯವಾಗಿರುತ್ತದೆ. 

ಆದ್ದರಿಂದ ನಾವು ಈ ಅಮೂಲ್ಯವಾದ ಮಾನವ ದೇಹದೊಂದಿಗೆ ಧರ್ಮವನ್ನು ಅಭ್ಯಾಸ ಮಾಡಬೇಕು. ಆದರೆ ನಾವು ಇದಕ್ಕೆ ವಿರುದ್ಧವಾದ ದೃಷ್ಟಿಕೋನವನ್ನು ಹೊಂದಿರುತ್ತೇವೆ - ಇದು ಆಸೆಗಳನ್ನು ಪೂರೈಸುವ ರತ್ನಕ್ಕಿಂತ ಹೆಚ್ಚು ಅಮೂಲ್ಯವಾಗಿದ್ದರೂ, ನಾವು ನಮ್ಮ ದೇಹವನ್ನು ಹೆಚ್ಚು ಹೆಚ್ಚು ಸಂಪತ್ತನ್ನು ಗಳಿಸಲು ಬಳಸುತ್ತೇವೆ ಮತ್ತು ಈ ಅಲ್ಪಾವಧಿಯ ಗುರಿಗಾಗಿ ನಮ್ಮ ಜೀವನವನ್ನೇ ತ್ಯಜಿಸಲು ಸಿದ್ಧರಾಗಿರುತ್ತೇವೆ. ಜಗತ್ತಿನಲ್ಲಿ ನಮಗಿಂತ ಶ್ರೀಮಂತರು ಮತ್ತು ಬುದ್ಧಿವಂತರು ಅನೇಕರಿರುತ್ತಾರೆ. ಆದರೆ ನಮ್ಮ ಅಮೂಲ್ಯವಾದ ಮಾನವ ದೇಹವನ್ನು, ಧರ್ಮವನ್ನು ಆಚರಿಸಲು ಬಳಸುವ ಮೂಲಕ, ನಾವು ಅವರಿಗಿಂತ ಹೆಚ್ಚು ಸಕಾರಾತ್ಮಕ ಶಕ್ತಿಯನ್ನು (ಅರ್ಹತೆ) ನಿರ್ಮಿಸುತ್ತೇವೆ. ಆದ್ದರಿಂದ ಈ ಅಮೂಲ್ಯವಾದ ಮಾನವ ಪುನರ್ಜನ್ಮವನ್ನು ವ್ಯರ್ಥ ಮಾಡದಿರುವುದು ಮುಖ್ಯ ಬದಲಿಗೆ, ಉಪಯುಕ್ತವಾಗಿರುವ ಮೂರು ಉದ್ದೇಶಗಳನ್ನು ಪೂರೈಸಲು ಅದನ್ನು ಬಳಸಬೇಕು: ಭವಿಷ್ಯದಲ್ಲಿ ಉತ್ತಮ ಪುನರ್ಜನ್ಮಗಳನ್ನು ಪಡೆಯುವುದು, ವಿಮೋಚನೆ ಮತ್ತು ಜ್ಞಾನೋದಯ. 

ನಾವು ಎಷ್ಟೇ ಭೌತಿಕ ವಸ್ತುಗಳನ್ನು ಹೊಂದಿದ್ದರೂ, ಅವು ತೃಪ್ತಿಯನ್ನು ತರುವುದಿಲ್ಲ. ಒಬ್ಬ ವ್ಯಕ್ತಿಯು ಜಗತ್ತಿನಲ್ಲಿರುವ ಎಲ್ಲಾ ಭೌತಿಕ ವಸ್ತುಗಳನ್ನು ಹೊಂದಿದ್ದರೂ ಸಹ, ಅವನು ತೃಪ್ತನಾಗುವುದಿಲ್ಲ. ಆದ್ದರಿಂದ ಎಲ್ಲಾ ಆಸೆಗಳನ್ನು ಪೂರೈಸುವ ಆಭರಣಗಳು ಸಹ ತೃಪ್ತಿಯನ್ನು ನೀಡಲು ಸಾಧ್ಯವಿಲ್ಲ ಎಂಬುದು ಸ್ಪಷ್ಟವಾಗಿದೆ. ಒಬ್ಬರು ಹೆಚ್ಚು ಹೆಚ್ಚು ಸಂಪತ್ತನ್ನು ಗಳಿಸಿದರೆ, ಅದು ಹೆಚ್ಚು ಹೆಚ್ಚು ದುಃಖವನ್ನು ತರುತ್ತದೆ. ಈ ಸತ್ಯವನ್ನು ನಾವೇ ಅನುಭವಿಸಬಹುದು - ನಾವು ರೈಲು ಅಥವಾ ಬಸ್‌ನಲ್ಲಿ ಹೆಚ್ಚಿನ ಸಾಮಾನುಗಳೊಂದಿಗೆ ಪ್ರಯಾಣಿಸುತ್ತಿದ್ದರೆ, ಆ ಪ್ರಯಾಣ ಬಹಳ ಕಷ್ಟವಾಗಿರುತ್ತದೆ; ಆದರೆ ನಮ್ಮಲ್ಲಿ ಈ ಎಲ್ಲಾ ಆಸ್ತಿಗಳು ಇಲ್ಲದಿದ್ದರೆ, ಅದು ಬಹಳ ಸುಲಭವಾಗಿರುತ್ತದೆ. 

ಆದ್ದರಿಂದ ನಾವು ಈ ರೀತಿಯಾಗಿ ಧರ್ಮವನ್ನು ಆಚರಿಸಲು ಪ್ರಯತ್ನಿಸಬೇಕು. ಉದಾಹರಣೆಗೆ, ಜೆಟ್ಸನ್ ಮಿಲರೇಪ, ತಮ್ಮ ಗುಹೆಯಲ್ಲಿ ವಾಸಿಸುತ್ತಿದ್ದಾಗ, ಅವರ ಬಳಿ ಯಾವುದೇ ಭೌತಿಕ ಆಸ್ತಿಗಳು ಇರಲಿಲ್ಲ. ಜೆಟ್ಸನ್ ಮಿಲರೇಪ ಮತ್ತು ಶಾಕ್ಯಮುನಿ ಬುದ್ಧ, ಭೌತಿಕ ವಸ್ತುಗಳು ಕ್ಷುಲ್ಲಕ ಮತ್ತು ಅವು ಅನಿವಾರ್ಯವಲ್ಲ ಎಂಬುದನ್ನು ಅರಿತುಕೊಂಡು ಅವುಗಳನ್ನು ಧರ್ಮವನ್ನು ಆಚರಿಸಲು ತ್ಯಜಿಸಿದರು. ಮತ್ತು ಪ್ರಪಂಚದ ಅನೇಕ ಶ್ರೀಮಂತ ದೇಶಗಳಲ್ಲಿ ವಾಸಿಸುತ್ತಿರುವ ನೀವು ಸಹ, ಭೌತಿಕ ವಸ್ತುಗಳು ಅಷ್ಟು ಮುಖ್ಯವಲ್ಲ ಎಂದು ಅರಿತುಕೊಂಡಿದ್ದೀರಿ ಮತ್ತು ಅವುಗಳನ್ನು ಬಿಟ್ಟು ಇಲ್ಲಿ ಧರ್ಮವನ್ನು ಆಚರಿಸಲು ಬಂದಿದ್ದೀರಿ. 

ಅಮೂಲ್ಯವಾದ ಮಾನವ ಪುನರ್ಜನ್ಮವನ್ನು ಪಡೆಯಲು ಇರುವ ಕಾರಣಗಳು ಮತ್ತು ತೊಂದರೆಗಳು 

ಈ ಅಮೂಲ್ಯವಾದ ಮಾನವ ದೇಹವನ್ನು ಪಡೆಯುವುದು ಏಕೆ ಕಷ್ಟ ಎಂಬುದನ್ನು ನಾವು ಪರಿಗಣಿಸಬೇಕಾಗಿದೆ. ಅದಕ್ಕಾಗಿ ಇರುವ ಕಾರಣಗಳನ್ನು ನಿರ್ಮಿಸುವುದು ಬಹಳಾ ಕಠಿಣವಾದ್ದರಿಂದ ಅದನ್ನು ಪಡೆಯುವುದು ಕಷ್ಟವಾಗಿರುತ್ತದೆ. ಇದಕ್ಕೆ ಮೂರು ಮುಖ್ಯ ಕಾರಣಗಳಿವೆ: 

  • ಕಟ್ಟುನಿಟ್ಟಾದ ನೈತಿಕ ಸ್ವಯಂ-ಶಿಸ್ತನ್ನು ಪಾಲಿಸುವುದು
  • ಆರು ದೂರಗಾಮಿ ವರ್ತನೆಗಳನ್ನು (ಆರು ಪರಿಪೂರ್ಣತೆಗಳು) ಅಭ್ಯಾಸ ಮಾಡುವುದು
  • ಶುದ್ಧ ಆಕಾಂಕ್ಷೆಯುಳ್ಳ ಪ್ರಾರ್ಥನೆಗಳನ್ನು ಸಲ್ಲಿಸುವುದು 

ಕಟ್ಟುನಿಟ್ಟಾದ ನೈತಿಕ ಸ್ವಯಂ-ಶಿಸ್ತನ್ನು ಕಾಪಾಡಿಕೊಳ್ಳುವುದು 

ಕಟ್ಟುನಿಟ್ಟಾದ ನೈತಿಕ ಸ್ವಯಂ-ಶಿಸ್ತನ್ನು ಕಾಪಾಡಿಕೊಳ್ಳುವುದು ಬಹಳಾ ಕಷ್ಟ, ಮತ್ತು ಇತರರಲ್ಲಿ ಅದನ್ನು ಗುರುತಿಸುವುದು ಮತ್ತು ಮೌಲ್ಯಮಾಪನ ಮಾಡುವುದು ಇನ್ನೂ ಕಷ್ಟವಾಗಿರುತ್ತದೆ. ನೈತಿಕ ಸ್ವಯಂ-ಶಿಸ್ತಿನ ವಿಷಯವಾಗಿ ಹತ್ತು ವಿನಾಶಕಾರಿ ಕ್ರಿಯೆಗಳಿವೆ, ಮತ್ತು ಪ್ರಪಂಚದಲ್ಲಿನ ಹೆಚ್ಚಿನವರಿಗೆ ಅವು ಏನೆಂದು ತಿಳಿದಿರುವುದಿಲ್ಲ ಎಂಬುದನ್ನು ನಾವು ಪರಿಗಣಿಸಬೇಕು. ಮತ್ತು ಅವು ಏನೆಂದು ತಿಳಿದಿರುವವರಲ್ಲಿ, ಹೆಚ್ಚಿನವರು ಅವುಗಳನ್ನು ತಪ್ಪಿಸುವುದನ್ನು ಅಭ್ಯಾಸ ಮಾಡುವುದಿಲ್ಲ. 

ದೇಹದ ಮೂರು ವಿನಾಶಕಾರಿ ಕ್ರಿಯೆಗಳಿವೆ: 

  • ಜೀವ ತೆಗೆಯುವುದು - ಉದಾಹರಣೆಗೆ, ನಾವು ಕೊಲ್ಲಬಾರದು ಎಂದು ನಮಗೆ ತಿಳಿದಿರಬಹುದು, ಆದರೆ ಒಂದು ಕೀಟ ನಮ್ಮನ್ನು ಕಚ್ಚಿದಾಗ ನಾವು ಸ್ವಾಭಾವಿಕವಾಗಿ ಅದನ್ನು ಹೊಡೆದು ಕೊಲ್ಲುತ್ತೇವೆ. 
  • ನೀಡದಿದ್ದನ್ನು ತೆಗೆದುಕೊಳ್ಳುವುದು – ನಾವು ನೇರವಾಗಿ ಕಳ್ಳತನ ಮಾಡದಿದ್ದರೂ ಸಹ, ಇತರರಿಂದ ವಸ್ತುಗಳನ್ನು ಪಡೆಯಲು ಚಾಲಾಕು ವಿಧಾನಗಳನ್ನು ಬಳಸಬಹುದು, ಅದು ಕೂಡ ಕಳ್ಳತನವೇ ಆಗಿರುತ್ತದೆ.
  • ಅನುಚಿತವಾದ ಲೈಂಗಿಕ ನಡವಳಿಕೆಯಲ್ಲಿ ತೊಡಗುವುದು – ಇತರರ ಸಂಗಾತಿಗಳೊಂದಿಗೆ ಇರುವ ಅನೇಕ ಆಸೆಗಳು ನಮಗಿವೆ. 

ನಾವು ಮಳೆಯಲ್ಲಿದ್ದಾಗ, ನಮ್ಮ ಮೇಲೆ ಬೀಳುವ ಮಳೆಹನಿಗಳಂತೆ, ದೇಹದ ಈ ವಿನಾಶಕಾರಿ ಕ್ರಿಯೆಗಳನ್ನು ಪ್ರತಿದಿನ ಸಂಗ್ರಹಣವಾಗುತ್ತವೆ. 

ಮಾತಿನ ನಾಲ್ಕು ವಿನಾಶಕಾರಿ ಕ್ರಿಯೆಗಳು:

  • ಸುಳ್ಳು ಹೇಳುವುದು – ಇದನ್ನು ನಾವು ಯಾವಾಗಲೂ ಸಂಗ್ರಹಿಸುತ್ತಿರುತ್ತೇವೆ. ಉದಾಹರಣೆಗೆ, ನಾವು ಬೆಟ್ಟದ ಕೆಳಗೆ ಹೋಗುವಂತೆ ಉದ್ದೇಶಿಸಿದ್ದರೂ, ನಾವು ಎಲ್ಲಿಗೆ ಹೋಗುತ್ತಿದ್ದೇವೆ ಎಂದು ಯಾರಾದರೂ ಕೇಳಿದರೆ, ನಾವು ಬೆಟ್ಟದ ಮೇಲೆ ಹೋಗುತ್ತಿದ್ದೇವೆ ಎಂದು ಹೇಳುತ್ತೇವೆ. 
  • ಒಡಕುಂಟು ಮಾಡುವಂತೆ ಮಾತನಾಡುವುದು – ಸ್ನೇಹಿತರ ನಡುವೆ ಪರಸ್ಪರ ಸ್ನೇಹವಿಲ್ಲದಂತೆ ಮಾಡುವುದು ಮತ್ತು ಈಗಾಗಲೇ ಸ್ನೇಹವಿಲ್ಲದವರಲ್ಲಿ ಇನ್ನಷ್ಟು ದ್ವೇಷವನ್ನು ಹುಟ್ಟಿಸಲು ಕಾರಣವಾಗುವುದು. ಇತರರ ಬಗ್ಗೆ ಕೆಟ್ಟದಾಗಿ ಮಾತನಾಡುವ ಮೂಲಕ ನಾವು ಹೀಗೆ ಯಾವಾಗಲೂ ಮಾಡುತ್ತೇವೆ. 
  • ಕಟುವಾಗಿ ಮಾತನಾಡುವುದು - ಇದು ಕೇವಲ ಮನು‍ಷ್ಯರೆಡೆಗೆ ಆಗಬೇಕಿಲ್ಲ. ಉದಾಹರಣೆಗೆ, ನಾಯಿಯು ನಮ್ಮ ಕೋಣೆಯೊಳಗೆ ಬಂದರೆ, ನಾವು "ಓಡು! ಇಲ್ಲಿಂದ ಹೊರಡು!" ಎಂದು ಹೇಳಬಹುದು ಮತ್ತು ಕಟುವಾದ ಭಾಷೆಯನ್ನು ಬಳಸಬಹುದು. ನಿಂದನೀಯ ಅಥವಾ ಕಟುವಾದ ಭಾಷೆಯನ್ನು ಬಳಸುವುದು ಬಹಳ ದೊಡ್ಡ ತಪ್ಪು, ಏಕೆಂದರೆ ಯಾರಾದರೂ ನಮಗಾಗಿ ಕಟುವಾದ ಭಾಷೆಯನ್ನು ಬಳಸಿದಾಗ ನಮಗೆ ತುಂಬಾ ನೋವಾಗುತ್ತದೆ ಎಂದು ತಿಳಿದಿದೆ, ಆದ್ದರಿಂದ ಪ್ರಾಣಿಗಳು ಸೇರಿದಂತೆ ಇತರರು ಸಹ ಅದೇ ರೀತಿಯಾಗಿ ಭಾವಿಸುತ್ತಾರೆ. 
  • ಅರ್ಥಹೀನವಾಗಿ ಮಾತನಾಡುವುದು - ನಮ್ಮ ಬಾಯಿಂದ ಹೊರಬರುವ ಪ್ರತಿಯೊಂದು ಪದವೂ ನಿಷ್ಪ್ರಯೋಜಕ ಹರಟೆಯಾಗಿರುತ್ತದೆ: "ನಾನು ಆ ದೇಶಕ್ಕೆ ಹೋಗಿದ್ದೇನೆ," "ನಾನು ಇದನ್ನು ಮತ್ತು ಅದನ್ನು ಮಾಡಿದ್ದೇನೆ." ನೀವು ಬಹಳಷ್ಟು ಮಾತನಾಡಿದರೆ, ನೀವು ಮಾತಿನ ಈ ವಿನಾಶಕಾರಿ ಕ್ರಿಯೆಯಲ್ಲಿ ತೊಡಗುವ ಸಾಧ್ಯತೆಗಳನ್ನು ಹೆಚ್ಚಿಸುತ್ತೀರಿ. ನನಗೆ ಇಂಗ್ಲಿಷ್ ಗೊತ್ತಿಲ್ಲದ ಕಾರಣ, ಇಂಗ್ಲಿಷ್‌ನಲ್ಲಿ ಹರಟೆ ಹೊಡೆಯಲು ನನಗೆ ಅವಕಾಶವಿಲ್ಲ, ಆದ್ದರಿಂದ ನಾನು ಟಿಬೆಟಿಯನ್ ಭಾಷೆಯಲ್ಲಿ ಮಾತ್ರ ಹರಟೆ ಹೊಡೆಯಲು ಸಾಧ್ಯ! 

ಮನಸ್ಸಿನ ಮೂರು ವಿನಾಶಕಾರಿ ಕ್ರಿಯೆಗಳು: 

  • ದುರಾಸೆಯಿಂದ ಯೋಚಿಸುವುದು – ಉದಾಹರಣೆಗೆ ಒಬ್ಬರ ಬಳಿ ಬಹಳಾ ಒಳ್ಳೆಯ ಮನೆಯಿರುತ್ತದೆ, ಮತ್ತು ನೀವು ಅದನ್ನು ನಿಮಗಾಗಿ ಬಯಸುತ್ತೀರಿ, ಅದರ ಬಗ್ಗೆ ಯಾವಾಗಲೂ ಯೋಚಿಸಿ, ಅದನ್ನು ಹೇಗೆ ಪಡೆಯಬಹುದು ಎಂದು ಯೋಜಿಸುತ್ತೀರಿ. ಇದು ಒಳ್ಳೆಯದಲ್ಲವಾದರೂ, ನಮ್ಮಲ್ಲಿ ಸಾಕಷ್ಟು ಇದೆ. 
  • ದುರುದ್ದೇಶದಿಂದ ಯೋಚಿಸುವುದು - ಯಾರಾದರೂ ಅತೃಪ್ತರಾಗಬೇಕೆಂದು ಅಥವಾ ಅವರ ಕುತ್ತಿಗೆ ಮುರಿಯಬೇಕೆಂದು ಬಯಸುವುದು. ಇದು ನಾವು ನಮ್ಮ ಶತ್ರುಗಳಿಗೆ ಮಾತ್ರ ಬಯಸುವುದಿಲ್ಲ, ನಮ್ಮ ಸ್ನೇಹಿತರು ನಮಗೆ ಕಿರಿಕಿರಿ ಉಂಟುಮಾಡಿದರೆ ನಾವು ಅವರ ಬಗ್ಗೆಯೂ ದುರುದ್ದೇಶದಿಂದ ಯೋಚಿಸಬಹುದು. 
  • ವಿರೋಧಾಭಾಸದಿಂದ ವಿಕೃತವಾಗಿ ಯೋಚಿಸುವುದು - ಉದಾಹರಣೆಗೆ, ಭವಿಷ್ಯದಲ್ಲಿ ಪುನರ್ಜನ್ಮವಿಲ್ಲ ಎಂದು ಯೋಚಿಸುವುದು ಅಥವಾ ಆಶ್ರಯದ ತ್ರಿರತ್ನಗಳಿಂದ ಯಾರಿಗೂ ಸಹಾಯವಾಗುವುದಿಲ್ಲ ಎಂದು ಯೋಚಿಸುವುದು, ಅಥವಾ ಪೂಜೆಯನ್ನು ಅರ್ಪಿಸುವುದರಿಂದ ಸಮಯ ವ್ಯರ್ಥವಾಗುತ್ತದೆ ಅಥವಾ ಬೆಣ್ಣೆ ದೀಪಗಳನ್ನು ಅರ್ಪಿಸುವುದರಿಂದ ಬೆಣ್ಣೆ ವ್ಯರ್ಥವಾಗುತ್ತದೆ ಅಥವಾ ತೋರ್ಮಾ ಅರ್ಪಣೆಗಳನ್ನು ಮಾಡುವುದು ತ್ಸಂಪಾವನ್ನು (ಸುಟ್ಟ ಬಾರ್ಲಿ ಧಾನ್ಯ) ಎಸೆಯುವಂತಿದೆ ಎಂದು ಯೋಚಿಸುವುದು. 

ಇವುಗಳನ್ನು ಮಾಡದಂತೆ ನಮ್ಮನ್ನು ತಡೆಯುವುದು ಕಷ್ಟ. ಮತ್ತು ನೀವು ಅವುಗಳನ್ನು ಮಾಡದಂತೆ ನಿಮ್ಮನ್ನು ತಡೆಯದಿದ್ದರೆ, ನೀವು ಅಮೂಲ್ಯವಾದ ಮಾನವ ಪುನರ್ಜನ್ಮವನ್ನು ಪಡೆಯಲು ಸಾಧ್ಯವಿಲ್ಲ. ಸಧ್ಯಕ್ಕೆ ವಿವರವಾಗಿ ಮಾತನಾಡಲು ಸಮಯವಿಲ್ಲ, ಆದರೆ ನೀವು ಇನ್ನಷ್ಟು ತಿಳಿದುಕೊಳ್ಳಲು ಬಯಸಿದರೆ, ನೀವು ಲ್ಯಾಮ್-ರಿಮ್ ಬೋಧನೆಗಳನ್ನು ಅಧ್ಯಯನ ಮಾಡಬೇಕಾಗುತ್ತದೆ.

ಆರು ದೂರಗಾಮಿ ಮನೋಭಾವಗಳ (6 ಪರಿಪೂರ್ಣತೆಗಳು) ಅಭ್ಯಾಸ 

ಅಮೂಲ್ಯ ಮಾನವ ಪುನರ್ಜನ್ಮವನ್ನು ಪಡೆಯುವುದರ ಎರಡನೆಯ ಕಾರಣವೆಂದರೆ ಆರು ದೂರಗಾಮಿ ಮನೋಭಾವಗಳು ಅಥವಾ ಪರಮಿತಗಳನ್ನು (ಆರು ಪರಿಪೂರ್ಣತೆಗಳು) ಅಭ್ಯಾಸ ಮಾಡುವುದು: 

  • ಔದಾರ್ಯ 
  • ನೈತಿಕ ಸ್ವಯಂ-ಶಿಸ್ತು 
  • ತಾಳ್ಮೆ 
  • ಪರಿಶ್ರಮ 
  • ಮಾನಸಿಕ ಸ್ಥಿರತೆ (ಏಕಾಗ್ರತೆ) 
  • ವಿವೇಚನಾತ್ಮಕ ಅರಿವು (ಬುದ್ಧಿವಂತಿಕೆ). 

ಆದರೆ ಔದಾರ್ಯವನ್ನು ಅಭ್ಯಾಸ ಮಾಡುವ ಬದಲು, ನಾವು ಜಿಪುಣತನವನ್ನು ಅಭ್ಯಾಸ ಮಾಡುತ್ತೇವೆ ಮತ್ತು ಇತರರಿಗೆ ನಮ್ಮ ಜಿಪುಣತನದ ಮನೋಭಾವವನ್ನು ಹರಡುತ್ತೇವೆ. ತಾಳ್ಮೆಯ ಬದಲು, ನಮ್ಮಲ್ಲಿ ಕೋಪವಿದೆ. ವೀರೋಚಿತ ಧೈರ್ಯವನ್ನು ತೋರಿಸುವ ಮತ್ತು ಧರ್ಮವನ್ನು ಅಭ್ಯಾಸ ಮಾಡುವುದರಲ್ಲಿ ಆನಂದವನ್ನು ಪಡೆಯುವ ಪರಿಶ್ರಮವನ್ನು ಹೊಂದುವ ಬದಲು, ನಮ್ಮಲ್ಲಿ ಸೋಮಾರಿತನವಿದೆ ಮತ್ತು ಯಾವಾಗಲೂ ನಿದ್ರಿಸಲು ಬಯಸುತ್ತೇವೆ. ಮಾನಸಿಕ ಸ್ಥಿರತೆಯ ಬದಲು, ನಾವು ಮಾನಸಿಕ ಅಲೆದಾಡುವಿಕೆಯನ್ನು ಬೆಳೆಸಿಕೊಳ್ಳುತ್ತೇವೆ - ಉದಾಹರಣೆಗೆ, ಮಂತ್ರವನ್ನು ಪಠಿಸುವಾಗ ನಮ್ಮ ಮನಸ್ಸು ಎಲ್ಲೆಡೆ ಅಲೆದಾಡುತ್ತದೆ - ಮತ್ತು ಹೀಗೆ ಸಂಭವಿಸುವ ಹೆಚ್ಚಿನ ಅವಕಾಶಗಳನ್ನು ನಾವು ಬೆಳೆಸಿಕೊಳ್ಳುತ್ತೇವೆ. 

ಒಬ್ಬ ಶಿಕ್ಷಕನಿದ್ದನು, ಒಮ್ಮೆ ಅವನು ಒಂದು ಅಭ್ಯಾಸದ ನಡುವಿನಲ್ಲಿದ್ದಾಗ, ತನ್ನ ಶಿಷ್ಯನು ಮಾಡಬೇಕಾದ ಕೆಲಸವಿದೆ ಎಂದು ನೆನಪಿಸಿಕೊಂಡನು, ಆದರೆ ಅವನಿಗೆ ಹೇಳಲು ಮರೆತನು. ಅವನಿಗೆ ನೆನಪಾದ ತಕ್ಷಣ, ಅವನು ತನ್ನ ಧ್ಯಾನವನ್ನು ನಿಲ್ಲಿಸಿ, ಎದ್ದು ಅದನ್ನು ಮಾಡುವಂತೆ ಹೇಳಿದನು. ಇದು ಅವನ ಮನಸ್ಸಿನ ಅಲೆದಾಟವಾಗಿತ್ತು. ನಾವು ಪಠಣ ಅಭ್ಯಾಸಗಳನ್ನು ಮಾಡಿದಾಗಲೆಲ್ಲಾ, ನಮ್ಮ ಮನಸ್ಸು ಅಲೆದಾಡುತ್ತದೆ. 

ದೂರಗಾಮಿ ವಿವೇಚನಾತ್ಮಕ ಅರಿವಿನ ವಿಷಯದಲ್ಲಿ, ಶೂನ್ಯತೆಯನ್ನು ಅರ್ಥಮಾಡಿಕೊಳ್ಳುವ ವಿವೇಚನಾತ್ಮಕ ಅರಿವನ್ನು ನಾವು ಬೆಳೆಸಿಕೊಳ್ಳಬೇಕು. ಆದರೆ ನಾವು ಚಿತ್ರಕಲೆಯಂತಹ ಲೌಕಿಕ ವಿಷಯಗಳನ್ನು ಅಧ್ಯಯನ ಮಾಡುತ್ತೇವೆ, ಆದ್ದರಿಂದ ನಾವು ಸರಿಯಾದ ರೀತಿಯ ಜ್ಞಾನವನ್ನು ಬೆಳೆಸಿಕೊಳ್ಳುವುದಿಲ್ಲ. 

ಸಂಕ್ಷಿಪ್ತವಾಗಿ ಹೇಳುವುದಾದರೆ, ಅಮೂಲ್ಯವಾದ ಮಾನವ ಪುನರ್ಜನ್ಮಕ್ಕೆ ಕಾರಣಗಳನ್ನು ನಿರ್ಮಿಸುವುದು ಬಹಳಾ ಕಷ್ಟ. ಅಂತಹ ದೇಹವನ್ನು ಹೊಂದಿರುವುದು ಎಷ್ಟು ಅಪರೂಪ ಎಂದು ನೋಡಿದಾಗ, ನಾವು ಅದನ್ನು ಒಮ್ಮೆ ಮಾತ್ರ ಹೊಂದಿದ್ದೇವೆ ಮತ್ತು ಅದನ್ನು ಬಹಳ ಸುಲಭವಾಗಿ ಕಳೆದುಕೊಳ್ಳಬಹುದು ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ನಾವು ಪಡೆದಿರುವ ಈ ಅಮೂಲ್ಯವಾದ ಮಾನವ ದೇಹದ ಲಾಭವನ್ನು ನಾವು ಪಡೆಯದಿದ್ದರೆ, ಭವಿಷ್ಯದಲ್ಲಿ ಇನ್ನೊಂದನ್ನು ಪಡೆಯುವುದು ಬಹಳಾ ಕಷ್ಟಕರವಾಗಿರುತ್ತದೆ. 

ಶುದ್ಧ ಮಹತ್ವಾಕಾಂಕ್ಷೆಯುಳ್ಳ ಪ್ರಾರ್ಥನೆಗಳನ್ನು ಅರ್ಪಿಸುವುದು 

ನಾವು ಶುದ್ಧವಾದ ನೈತಿಕ ಸ್ವಯಂ-ಶಿಸ್ತನ್ನು ಕಾಪಾಡಿಕೊಳ್ಳುವುದನ್ನು ಮತ್ತು ಆರು ದೂರಗಾಮಿ ವರ್ತನೆಗಳನ್ನು ಅಭ್ಯಾಸ ಮಾಡುವುದರ ಜೊತೆಗೆ, ಅಮೂಲ್ಯವಾದ ಮಾನವ ಪುನರ್ಜನ್ಮವನ್ನು ಸಾಧಿಸಲು ಪ್ರಾಮಾಣಿಕ ಪ್ರಾರ್ಥನೆಗಳನ್ನು ಸಲ್ಲಿಸಬೇಕಾಗಿದೆ. "ಓ ಬುದ್ಧನೇ, ನಾನು ಒಳ್ಳೆಯ ಹುಡುಗಿಯಾಗಿದ್ದರೆ ಅಥವಾ ಒಳ್ಳೆಯ ಹುಡುಗನಾಗಿದ್ದರೆ ಅದನ್ನು ನನಗೆ ದಯಪಾಲಿಸಿ ಮತ್ತು ನಾನು ಯಾವಾಗಲೂ ನಿನ್ನನ್ನು ಸ್ತುತಿಸುತ್ತೇನೆ" ಎಂಬಂತಹ ಪ್ರಾರ್ಥನೆಗಳಾಗಿರುವುದಿಲ್ಲ. ಬದಲಾಗಿ, ಇದು ಅಮೂಲ್ಯವಾದ ಮಾನವ ಪುನರ್ಜನ್ಮವನ್ನು ಪಡೆಯುವ ನಿರ್ದಿಷ್ಟ ಸಮರ್ಪಣೆಯೊಂದಿಗೆ ನಮ್ಮ ಉದ್ದೇಶ ಮತ್ತು ನಮ್ಮ ಸಕಾರಾತ್ಮಕ ಶಕ್ತಿಯ ಬಲವಾದ ನಿರ್ದೇಶನವಾಗಿರುತ್ತದೆ. 

ಸಮರ್ಪಣೆಯು ನಿರ್ದಿಷ್ಟವಾಗಿರುವುದು ಮುಖ್ಯ. ಗ್ಯಾಂಡೆನ್ ಮಠದಲ್ಲಿ, ಗೆಲುಗ್ಪಾ ಕ್ರಮದ ಮುಖ್ಯಸ್ಥರ ಅತ್ಯಂತ ಉನ್ನತ ಸ್ಥಾನವಾದ ಗ್ಯಾಂಡೆನ್ ಸಿಂಹಾಸನವೊಂದಿತ್ತು. ಟಿಬೆಟ್‌ನಲ್ಲಿನ ಮಠದಲ್ಲಿ ಯಾವಾಗಲೂ ಪ್ರಾಣಿಗಳಿರುತ್ತಿದ್ದವು ಮತ್ತು ಒಂದು ದಿನ ಒಂದು ಹಸುವು, ದೇವಾಲಯದ ಒಳಹೊಕ್ಕಿ ಸಿಂಹಾಸನದ ಮೇಲೆ ಮಲಗಿತು. ಸನ್ಯಾಸಿಗಳು ಇದನ್ನು ನೋಡಿ ಬಹಳಾ ಆಶ್ಚರ್ಯಚಕಿತರಾದರು ಮತ್ತು ಅಲ್ಲಿದ್ದ ಒಬ್ಬ ಮಹಾನ್ ಗುರುಗಳನ್ನು ಪ್ರಶ್ನಿಸಿದರು, "ಇದಕ್ಕೆ ಕಾರಣವೇನು?". ಗುರುಗಳು ಹೇಳಿದರು, "ಹಿಂದಿನ ಜೀವನದಲ್ಲಿ, ಗ್ಯಾಂಡೆನ್ ಸಿಂಹಾಸನದ ಮೇಲೆ ಕುಳಿತುಕೊಳ್ಳಲು ಸಾಧ್ಯವಾಗುವಂತೆ ಈ ಜೀವಿಯು ಪ್ರಾರ್ಥನೆಯನ್ನು ಸಲ್ಲಿಸಿತ್ತು, ಆದರೆ ಅದು ನಿಖರವಾಗಿರಲಿಲ್ಲ!" 

ವಿರಾಮವಿಲ್ಲದ ಎಂಟು ಸನ್ನಿವೇಶಗಳಿಂದ ವಿಶ್ರಾಂತಿ 

ಅಮೂಲ್ಯವಾದ ಮಾನವ ಪುನರ್ಜನ್ಮದ ಸ್ವರೂಪವೆಂದರೆ ಅದು ಎಂಟು ವಿಶ್ರಾಂತಿಗಳನ್ನು ಆನಂದಿಸುತ್ತದೆ. ಅಂದರೆ, ಆ ಕ್ಷಣದಲ್ಲಿ, ಅದು ಎಂಟು ತಾತ್ಕಾಲಿಕ ವಿರಾಮಗಳಿಂದ ಮುಕ್ತವಾಗಿರುತ್ತದೆ. ಧರ್ಮವನ್ನು ಆಚರಿಸಲು ಅವಕಾಶವಿಲ್ಲದ ಸ್ಥಿತಿಯೇ ವಿಶ್ರಾಂತಿಯಿಲ್ಲದ ಸ್ಥಿತಿ. 

ವಿಶ್ರಾಂತಿಯಿಲ್ಲದ ನಾಲ್ಕು ಅಮಾನವೀಯ ಸ್ಥಿತಿಗಳಿವೆ: 

  • ಆನಂದವಿಲ್ಲದ ಲೋಕದಲ್ಲಿ ಸಿಕ್ಕಿಬಿದ್ದ ಜೀವಿ (ನರಕ ಜೀವಿ) - ನಾವು ಆನಂದವಿಲ್ಲದ ನರಕ ಲೋಕದಲ್ಲಿ ಮರುಜನ್ಮ ಪಡೆದರೆ, ನಮ್ಮ ದೇಹವು ಯಾವಾಗಲೂ ಬೆಂಕಿಯಲ್ಲಿರುವುದರಿಂದ, ಅಭ್ಯಾಸ ಮಾಡಲು ಅವಕಾಶವಿರುವುದಿಲ್ಲ. 
  • ಬಿಟ್ಟುಕೊಡಲಾರದ ದೆವ್ವ (ಹಸಿದ ದೆವ್ವ, ಪ್ರೇತ) - ನಾವು ದೆವ್ವವಾಗಿ ಮರುಜನ್ಮ ಪಡೆದರೆ, ನಾವು ನಿರಂತರವಾಗಿ ಹಸಿವಿಗೆ ಮತ್ತು ಆಹಾರದ ಆಲೋಚನೆಗಳಿಗೆ ಗೀಳಾಗಿರುತ್ತೇವೆ. 

ನಾವು ಬೆಳಿಗ್ಗೆ ಎದ್ದಾಗ ಉಪಾಹಾರ ಸೇವಿಸದಿದ್ದರೆ, ನಾವು ಧರ್ಮವನ್ನು ಅಭ್ಯಾಸ ಮಾಡಲು ಸಿದ್ಧರಾಗಿರುವುದಿಲ್ಲ. ನಾವು ತಲೆನೋವಿನಿಂದ ಎಚ್ಚರಗೊಂಡರೆ, ನಾವು ಧರ್ಮವನ್ನು ಅಭ್ಯಾಸ ಮಾಡಲು ಸಿದ್ಧರಾಗಿರುವುದಿಲ್ಲ. ಆದ್ದರಿಂದ, ನಮ್ಮ ಅನುಭವವನ್ನು ಆಧರಿಸುವುದಾದರೆ, ನಾವು ಹಸಿದ ದೆವ್ವವಾಗಿ ಹುಟ್ಟಿ 60 ವರ್ಷಗಳ ಕಾಲ ಆಹಾರವಿಲ್ಲದೆ ಇದ್ದರೆ, ನಾವು ಧರ್ಮವನ್ನು ಅಭ್ಯಾಸ ಮಾಡಲು ಆಸಕ್ತಿ ಹೊಂದಿರುವುದಿಲ್ಲ. ಆದ್ದರಿಂದ ನಾವು ಸಂತೋಷವಿಲ್ಲದ ನರಕ ಲೋಕದಲ್ಲಿ ಸಿಕ್ಕಿಬಿದ್ದ, ಹಿಂಸೆಗೊಳಗಾದವರಾಗಿ ಅಥವಾ ಯಾವಾಗಲೂ ಆಹಾರದ ಹುಡುಕಾಟದಲ್ಲಿರುವ ಹಸಿದ ದೆವ್ವವಾಗಿ ಮರುಜನ್ಮ ಪಡೆಯದಿರುವುದು ಎಷ್ಟು ಅದೃಷ್ಟದ ವಿಷಯ ಎಂಬುದನ್ನು ನಾವು ಪ್ರಶಂಸಿಸಬೇಕಾಗಿದೆ. 

  • ತೆವಳುವ ಜೀವಿ (ಪ್ರಾಣಿ) - ನಾವು ಪರಮಪೂಜ್ಯ ದಲೈ ಲಾಮಾ ಅವರ ನಾಯಿಯಾಗಿ ಜನಿಸಿದರೂ ಸಹ, ನಾವು ಆಶ್ರಯದ ಪ್ರಾರ್ಥನೆಯನ್ನು ಪಠಿಸಲು ಸಾಧ್ಯವಿಲ್ಲ. ನಾವು ಹಾಗಲ್ಲದಿರುವುದು ಬಹಳಾ ಅದೃಷ್ಟಕಾರಿ ವಿಷಯ. 
  • ದೈವಿಕ ಜೀವಿ (ದೀರ್ಘಾವಧಿಯ ದೇವರು) - ದೇವಲೋಕಗಳಲ್ಲಿನ ದೀರ್ಘಾವಧಿಯ ದೇವತೆಗಳು ಎಷ್ಟೊಂದು ಲೌಕಿಕ ಆನಂದವನ್ನು ಹೊಂದಿರುತ್ತಾರೆ ಎಂದರೆ, ಅವರಿಗೆ ಧರ್ಮವನ್ನು ಆಚರಿಸುವಲ್ಲಿ ಆಸಕ್ತಿ ಇರುವುದಿಲ್ಲ. 

ಶಾರಿಪುತ್ರನಿಗೆ ಒಬ್ಬ ಶಿಷ್ಯನಿದ್ದನು, ಅವನು ತನ್ನನ್ನು "ಗುರು-ಭಕ್ತಿ"ಗೆ ಸಂಪೂರ್ಣವಾಗಿ ಒಪ್ಪಿಸಿಕೊಂಡಿದ್ದನು. ಶಿಷ್ಯನು ಮರಣಿಸಿದ ನಂತರ, ದೇವಲೋಕದಲ್ಲಿ ಮರುಜನ್ಮ ಪಡೆದನು. ಶಾರಿಪುತ್ರನು ತನ್ನ ಬಾಹ್ಯ ಇಂದ್ರಿಯ ಶಕ್ತಿಗಳನ್ನು ಬಳಸುವ ಮೂಲಕ, ತನ್ನ ನಿಷ್ಠಾವಂತ ಶಿಷ್ಯನು ಆ ಲೋಕದಲ್ಲಿ ಜನಿಸಿದನೆಂದು ನೋಡಿದನು. ಆದ್ದರಿಂದ ಅಲ್ಲಿಗೆ ಹೋಗಿ ಅವನನ್ನು ಭೇಟಿ ಮಾಡಬೇಕೆಂದು ಭಾವಿಸಿದನು. ಶಾರಿಪುತ್ರನು ದೇವಲೋಕಕ್ಕೆ ಹೋದಾಗ, ಅವನ ಶಿಷ್ಯನು ಅವನಿಗೆ "ಹಾಯ್!" ಎಂದು ಕೈಬೀಸಿದನಷ್ಟೆ. ಅವನಿಗೆ ತನ್ನ ಗುರುವಿನಲ್ಲಿ ಅಥವಾ ಧರ್ಮಾಚರಣೆಯಲ್ಲಿ ಆಸಕ್ತಿಯಿರಲಿಲ್ಲ, ಏಕೆಂದರೆ ಅವನು ಆನಂದಮಯ ಸಮಯದಲ್ಲಿ ಮುಳುಗಿದ್ದನು. 

ಇದನ್ನು ನಾವು ನಮ್ಮ ಅನುಭವದಿಂದ ನೋಡಬಹುದು. ಯಾರಾದರೂ ತುಂಬಾ ಬಡವನಾಗಿದ್ದರೆ, ಅವನು ಧರ್ಮವನ್ನು ಆಚರಿಸಲು ಸಿದ್ಧನಾಗಿರುತ್ತಾನೆ. ಆದರೆ ಅವನು ಶ್ರೀಮಂತನಾಗಿದ್ದರೆ ಮತ್ತು ಆರಾಮದಿಂದಿದ್ದರೆ, ಅವನಿಗೆ ಆಸಕ್ತಿ ಇರುವುದಿಲ್ಲ. ಆದ್ದರಿಂದ ನಾವು ದೀರ್ಘಾಯುಷ್ಯದ ದೇವರಾಗಿ ಹುಟ್ಟದಿರುವುದು ಬಹಳಾ ಅದೃಷ್ಟದ ವಿಷಯ. 

ಮನುಷ್ಯನಿಗೆ ವಿಶ್ರಾಂತಿ ಇಲ್ಲದ ನಾಲ್ಕು ಸ್ಥಿತಿಗಳಿವೆ: 

  • ಬುದ್ಧನ ಪದಗಳು ಇಲ್ಲದಿರುವ ಸ್ಥಳ - ಉದಾಹರಣೆಗೆ, ಧರ್ಮದ ಒಂದು ಪದವನ್ನು ಸಹ ಕೇಳಲು ಸಾಧ್ಯವಾಗದ ದೇಶಗಳಲ್ಲಿ ಅಥವಾ ಸಮಯದಲ್ಲಿ ಜನಿಸಿದ ಜನರಿದ್ದಾರೆ. ನಾವು ಆ ಪರಿಸ್ಥಿತಿಯಲ್ಲಿಲ್ಲ. 
  • ಅನಾಗರಿಕ ಸಮಾಜಗಳಲ್ಲಿ - ಇಲ್ಲಿ ಜನರು ಆಹಾರ ಮತ್ತು ಬಟ್ಟೆಗಳನ್ನು ಪಡೆಯುವುದರಲ್ಲಿ ಮಾತ್ರ ಆಸಕ್ತರಾಗಿರುತ್ತಾರೆ. 

ಟಿಬೆಟ್‌ನಲ್ಲಿ ತ್ಸಾರಿ ಎಂಬ ಪರ್ವತವಿದೆ. ಟಿಬೆಟಿಯನ್ನರು ಪ್ರತಿ 12 ವರ್ಷಗಳಿಗೊಮ್ಮೆ ಅಲ್ಲಿಗೆ ಹೋಗುತ್ತಾರೆ. ಅಲ್ಲಿ ವಾಸಿಸುವ ಲೋಬಾ ಬುಡಕಟ್ಟು ಜನಾಂಗದವರು ಬಹಳಾ ಅನಾಗರಿಕರು, ಅವರ ದೇಶದ ಮೂಲಕ ಹೋಗಲು ತೆರಿಗೆಯನ್ನು ಪಾವತಿಸಬೇಕು. ಈ ತೆರಿಗೆಯು ಯಾಕ್ ಆಗಿತ್ತು, ಲೋಬಾಗಳು ಯಾಕ್ ಅನ್ನು ಪಡೆದಾಗ, ತಕ್ಷಣವೇ ಅದನ್ನು ಕೊಂದು ತಿನ್ನುತ್ತಿದ್ದರು ಮತ್ತು ರಕ್ತವನ್ನು ಕುಡಿಯುತ್ತಿದ್ದರು. ಆದ್ದರಿಂದ ನಾವು ಮನುಷ್ಯರಾಗಿದ್ದರೂ ಸಹ ಅಂತಹ ಸ್ಥಳದಲ್ಲಿ ಜನಿಸದಿರುವುದು ಅದೃಷ್ಟ. 

  • ದೊಡ್ಡ ಪ್ರಮಾಣದ ಅಂಗವೈಕಲ್ಯಗಳೊಂದಿಗೆ - ನಾವು ಕುರುಡರು, ಕಿವುಡರು ಮತ್ತು ಮೂಕರಾಗಿ ಜನಿಸಿದ್ದರೆ ಅಥವಾ ದೈಹಿಕವಾಗಿ, ಮಾನಸಿಕವಾಗಿ ಅಥವಾ ಸಾಮಾಜಿಕವಾಗಿ ದುರ್ಬಲರಾಗಿದ್ದರೆ, ಕಲಿಯಲು ಮತ್ತು ಅಭ್ಯಾಸ ಮಾಡಲು ನಮಗೆ ಗಂಭೀರ ಅಡೆತಡೆಗಳು ಎದುರಾಗುತ್ತಿದ್ದವು. 
  • ಆಧ್ಯಾತ್ಮಿಕ ವಿರೋಧಿ ಮನೋಭಾವವಿರುವ ಪ್ರದೇಶಗಳು – ಉದಾಹರಣೆಗೆ, ಯಾವುದೇ ಆಧ್ಯಾತ್ಮಿಕ ಅಭ್ಯಾಸ, ವಿಶೇಷವಾಗಿ ಬೌದ್ಧ ಧರ್ಮವು ಸಮಯ ವ್ಯರ್ಥ ಎಂದು ಭಾವಿಸುವ ಮತ್ತು ಹಣ ಸಂಪಾದಿಸುವುದಷ್ಟೇ ಯೋಗ್ಯವೆಂದು ಯೋಚಿಸುವ ಜನರಿರುವ ಸ್ಥಳ. 

ಈ ಎಲ್ಲಾ ವಿಶ್ರಾಂತಿಯಿಲ್ಲದ ಸ್ಥಿತಿಗಳಿಂದ ಮುಕ್ತವಾದ ಮಾನವ ಪುನರ್ಜನ್ಮವನ್ನು ನಾವು ಹೊಂದಿದ್ದರೆ ಮತ್ತು ಅವುಗಳಿಗಾಗಿ ಇರುವ ಕಾರಣಗಳನ್ನು ನಾವು ಅರ್ಥಮಾಡಿಕೊಂಡರೆ, ನಾವು ದುಪ್ಪಟ್ಟು ಅದೃಷ್ಟವಂತರು. ಇಂತಹ ಅಮೂಲ್ಯವಾದ ಮಾನವ ಜೀವನವನ್ನು ಹೊಂದಿರುವ ಅನೇಕರಿಗೆ ಇಂತಹ ಪುನರ್ಜನ್ಮವನ್ನು ಮುಂದುವರಿಸಲು ಇರುವ ಕಾರಣಗಳು ಏನೆಂದು ತಿಳಿದಿರುವುದಿಲ್ಲ. 

ಸಾದೃಶ್ಯಗಳು 

ಅಮೂಲ್ಯವಾದ ಮಾನವ ದೇಹವನ್ನು ಪಡೆಯುವ ಕಷ್ಟವನ್ನು ಗ್ರಹಿಸಲು ನಾವು ಸಾದೃಶ್ಯಗಳನ್ನು ಬಳಸಬಹುದು. ಉದಾಹರಣೆಗೆ, ಕನ್ನಡಿಯ ಮೇಲೆ ಮರಳನ್ನು ಎಸೆದಾಗ, ಅದರ ಮೇಲೆ ಅಂಟಿಕೊಳ್ಳುವ ಮರಳಿನ ಕಣಗಳಷ್ಟು ಇದು ಅಪರೂಪ. 

ನಾವು ಈ ವಿಷಯಗಳ ಬಗ್ಗೆ ಯೋಚಿಸಿದರೆ, ನಮ್ಮ ಪ್ರಸ್ತುತ ಮಾನವ ಪುನರ್ಜನ್ಮವು ಎಷ್ಟು ಅಮೂಲ್ಯವಾದ ಸಾಧನೆ ಎಂದು ನಾವು ಅರಿತುಕೊಳ್ಳುತ್ತೇವೆ ಮತ್ತು ನಾವು ಅದನ್ನು ಈ ಬಾರಿ ಮಾತ್ರ ಪಡೆಯಲು ಸಾಧ್ಯ ಎಂಬಂತೆ ಭಾವಿಸಬೇಕು. ಭಾರತದಲ್ಲಿ ಲಕ್ಷಾಂತರ ಜನರಿದ್ದರೂ, ಧರ್ಮವನ್ನು ಆಚರಿಸುವ ಎಷ್ಟು ಕಡಿಮೆ ಜನರಿದ್ದಾರೆ ಎಂಬುದರ ಬಗ್ಗೆ ಯೋಚಿಸಿ. ಆದ್ದರಿಂದ ಅದು ಎಷ್ಟು ಅಪರೂಪ ಎಂದು ನಾವು ನೋಡಬಹುದು. 

ಒಮ್ಮೆ ಒಬ್ಬ ಲಾಮಾ ಅಮೂಲ್ಯವಾದ ಮಾನವ ಪುನರ್ಜನ್ಮವನ್ನು ಪಡೆಯುವ ಕಷ್ಟದ ಕುರಿತು ಪ್ರವಚನ ನೀಡುತ್ತಿದ್ದರು. ಪ್ರೇಕ್ಷಕರಲ್ಲಿದ್ದ ಒಬ್ಬ ಮಂಗೋಲಿಯನ್, "ಮಾನವ ಪುನರ್ಜನ್ಮ ಪಡೆಯುವುದು ತುಂಬಾ ಕಷ್ಟ ಎಂದು ನೀವು ಭಾವಿಸಿದರೆ, ನೀವು ಚೀನಾಕ್ಕೆ ಹೋಗಿ ಅಲ್ಲಿ ಎಷ್ಟು ಜನರಿದ್ದಾರೆ ಎಂದು ನೋಡಬೇಕು!" ಎಂದು ಹೇಳಿದರು. ಅದು ನಾನು ಸೋವಿಯತ್ ಒಕ್ಕೂಟಕ್ಕೆ ಹೋಗಬೇಕು ಎಂದು ಹೇಳುವಂತಾಗುತ್ತದೆ.

ಧ್ಯಾನದ ಸಮಯದಲ್ಲಿ ಚಿಂತಿಸಲು ಇವು ಬಹಳಾ ಒಳ್ಳೆಯ ವಿಷಯಗಳಾಗಿವೆ.

ನಮ್ಮ ಅಮೂಲ್ಯವಾದ ಮಾನವ ದೇಹದ ಲಾಭವನ್ನು ಪಡೆದುಕೊಳ್ಳುವುದು ಮತ್ತು ಅರ್ಥಪೂರ್ಣ ಜೀವನವನ್ನು ನಡೆಸುವುದು 

ಈ ಅಮೂಲ್ಯವಾದ ಮಾನವ ದೇಹವನ್ನು ಸಾಧಿಸಲು ನಾವು ಹಿಂದಿನ ಜನ್ಮಗಳಲ್ಲಿ ಎಷ್ಟು ಶ್ರಮಿಸಿದ್ದೇವೆ ಎಂದು ಯೋಚಿಸಿದರೆ, ಈ ಜೀವನವನ್ನು ಅರ್ಥಪೂರ್ಣವಾಗಿಸುವ ಬಯಕೆಯ ಬಗ್ಗೆ ನಾವು ಬಹಳಾ ಉತ್ಸುಕರಾಗುತ್ತೇವೆ. ಉದಾಹರಣೆಗೆ, ನೀವು ಪರ್ವತದ ಅರ್ಧದಷ್ಟು ದಾರಿ, ಭಾರವನ್ನು ಹೊತ್ತು, ನಂತರ ಅದನ್ನು ಅಲ್ಲಿಯೇ ಬಿಟ್ಟರೆ, ಅದು ಸಂಪೂರ್ಣವಾಗಿ ಕೆಳಗೆ ಬೀಳುತ್ತದೆ. ಈ ಜೀವಿತಾವಧಿಯಲ್ಲಿ ಅಮೂಲ್ಯವಾದ ಮಾನವ ಪುನರ್ಜನ್ಮವನ್ನು ಪಡೆಯಲು ನಾವು ಮಾಡಿದ ಕೆಲಸವು ಪರ್ವತದ ಅರ್ಧದಷ್ಟು ದಾರಿ ಭಾರವನ್ನು ಹೊತ್ತುಕೊಂಡು ಹೋಗುವ ಕೆಲಸದಂತಿರುತ್ತದೆ; ನಾವು ಅದನ್ನು ಬಿಟ್ಟರೆ, ಆ ಎಲ್ಲಾ ಶ್ರಮವು ವ್ಯರ್ಥವಾಗುತ್ತದೆ. 

ಆದ್ದರಿಂದ ಈಗ ನಾವು ಅಮೂಲ್ಯವಾದ ಮಾನವ ದೇಹವನ್ನು ಹೊಂದಿರುವುದರಿಂದ, ಭವಿಷ್ಯದಲ್ಲಿ ನಾವು ಇನ್ನೊಂದನ್ನು ಬಯಸಬಾರದು. ನಾವು ಈಗ ಅದನ್ನು ಹೊಂದಿರುವುದರಿಂದ, ಬುದ್ಧನ ಸಂಪೂರ್ಣ ಜ್ಞಾನೋದಯದ ಸ್ಥಿತಿಯನ್ನು ಪಡೆಯಲು ಅದನ್ನು ಬಳಸಬೇಕಾಗಿದೆ. ನಾವು ಹಾಗೆ ಮಾಡದಿದ್ದರೆ, ಅಕ್ಕಿ ಚೀಲವಿದ್ದರೂ, ಅದನ್ನು ಬಳಸದೆ ಸುಮ್ಮನೆ ಕುಳಿತು, ನಮ್ಮ ಮುಂದಿನ ಜನ್ಮದಲ್ಲಿ ಇನ್ನೊಂದು ಚೀಲವನ್ನು ಪಡೆಯಲು ಪ್ರಾರ್ಥಿಸುವಂತಿರುತ್ತದೆ. ನಮ್ಮ ಮಾನವ ಪುನರ್ಜನ್ಮದ ಸಂಪೂರ್ಣ ಪ್ರಯೋಜನವನ್ನು ಈಗಲೇ ಪಡೆಯಬೇಕು. 

ಸಾವಿನ ಬಗ್ಗೆ ಎಚ್ಚರದಿಂದಿರುವುದು 

ಸಾವು ಖಚಿತ 

ನಮ್ಮಲ್ಲಿ ಎಂತಹ ಅಮೂಲ್ಯವಾದ ಮಾನವ ದೇಹವಿದೆ ಎಂಬುದನ್ನು ಕುರಿತು ಯೋಚಿಸಿದರೆ, ಅದು ಕಲ್ಲು ಅಥವಾ ಲೋಹದಿಂದ ಮಾಡಲ್ಪಟ್ಟಿಲ್ಲ. ಹಾಗಿದ್ದಲ್ಲಿ, ಅದು ದೀರ್ಘಕಾಲ ಉಳಿಯಬಹುದಾಗಿತ್ತು. ವಾಸ್ತವದಲ್ಲಿ, ನಮ್ಮೊಳಗೆ ಏನಿದೆ ಎಂದು ನೋಡಲು ನಾವು ನಮ್ಮ ದೇಹವನ್ನು ಕತ್ತರಿಸಿ ತೆರೆದರೆ, ಅಲ್ಲಿ ಬಹಳಷ್ಟು ರಕ್ತ ಮತ್ತು ಕರುಳಿರುತ್ತದೆ, ಮಾರುಕಟ್ಟೆಯಲ್ಲಿ ಮಾಂಸವನ್ನು ಖರೀದಿಸಿದ ನಂತರ ಜನರು ತಮ್ಮ ಮನೆಗಳಲ್ಲಿ ನೇತಾಡುವ ಪ್ರಾಣಿಗಳ ಕರುಳುಗಳಂತೆ. ನಮ್ಮ ಒಳಭಾಗವು ಗಡಿಯಾರದ ಒಳಭಾಗದಷ್ಟು ಸೂಕ್ಷ್ಮವಾಗಿರುತ್ತದೆ. 

ನಾವು ಸಾವಿನ ಬಗ್ಗೆ ಮತ್ತು ಎಷ್ಟು ಜನರು ಸತ್ತಿದ್ದಾರೆ ಎಂಬುದರ ಬಗ್ಗೆ ಯೋಚಿಸಿದರೆ, ಪ್ರತಿ ಮಣಿಯೊಂದಿಗೆ ಅವುಗಳನ್ನು ಎಣಿಸುವ ಮೂಲಕ ಬಹಳಷ್ಟು ಜಪಮಾಲೆಗಳನ್ನು ಎಣಿಸಬಹುದು. ಧರ್ಮಶಾಲಾಗೆ ಬಂದ ನಂತರ ಎಷ್ಟು ಟಿಬೆಟಿಯನ್ನರು ಸತ್ತಿದ್ದಾರೆ ಎಂದು ನಾನು ಯೋಚಿಸಿದರೆ, ನಾನು ನನ್ನ ಸಂಪೂರ್ಣ ಜಪಮಾಲೆಯಲ್ಲಿನ ಮಣಿಗಳನ್ನು ಬೇಗನೆ ಎಣಿಸಬಹುದು. 

ಮನುಷ್ಯ ದೇಹದೊಂದಿಗೆ ಸಾಯದೆ ಇರುವವರು ಯಾರೂ ಇಲ್ಲ. ಮತ್ತು ಸಸ್ಯಗಳು ಮತ್ತು ಮರಗಳು ಹೇಗೆ ಸಾಯುತ್ತವೆ ಎಂದು ನೀವು ಯೋಚಿಸಿದರೆ, ನೀವು ಸಾಯಲು ಕೆಲವೇ ಕ್ಷಣಗಳಿವೆ ಎಂದು ನೀವು ನೋಡಬಹುದು. ಹುಟ್ಟುವುದರ ನೈಸರ್ಗಿಕ ತೀರ್ಮಾನವು ಸಾವಾಗಿರುತ್ತದೆ. ಇದರ ಬಗ್ಗೆ ಏನೂ ಮಾಡಲಾಗುವುದಿಲ್ಲ. ಇಲ್ಲಿ ನಾವು ಒಟ್ಟಿಗೆ ಸೇರುವುದರ ಅಂತ್ಯವು ಚದುರಿಹೋಗುವುದಾಗಿರುತ್ತದೆ, ಮತ್ತು ಮೇಲಕ್ಕೆ ಹೋಗುವುದರ ಅಂತ್ಯವು ಕೆಳಗೆ ಬರುವುದಾಗಿರುತ್ತದೆ. ನಮಗೆ ಸಾಯುವುದನ್ನು ಬಿಟ್ಟು ಬೇರೆ ಏನೂ ಇಲ್ಲ ಎಂದು ಅರಿತುಕೊಂಡು, ಸಾವು ಬರುವ ಮೊದಲು ಸಾಧ್ಯವಾದಷ್ಟು ಧರ್ಮವನ್ನು ಆಚರಿಸಲು ಪ್ರಯತ್ನಿಸಬೇಕು. 

ಆದ್ದರಿಂದ ನಾವು ಹೇಗೆ ಸಾಯುತ್ತೇವೆ ಎಂಬುದರ ಬಗ್ಗೆ ಯೋಚಿಸಬೇಕು. ನೀವು ತೀವ್ರ ಅನಾರೋಗ್ಯಕ್ಕೆ ಒಳಗಾಗುತ್ತೀರಿ ಎಂದು ಕಲ್ಪಿಸಿಕೊಳ್ಳಿ, ಮತ್ತು ನಿಮ್ಮ ತ್ವಚೆಯು ಭಯಾನಕ ಬಣ್ಣಕ್ಕೆ ತಿರುಗುತ್ತದೆ ಮತ್ತು ನೀವು ತುಂಬಾ ದುರ್ಬಲರಾಗುತ್ತೀರಿ. ನಿಮ್ಮ ಎಲ್ಲಾ ಸಂಬಂಧಿಕರು ಕಣ್ಣೀರಿಡುತ್ತಿದ್ದಾರೆ ಮತ್ತು ಎಷ್ಟು ದುಖಃಕರ ವಿಷಯ ಎಂದು ಹೇಳುತ್ತಿದ್ದಾರೆ, ಮತ್ತು ವೈದ್ಯರು ನಿಮಗೆ ಔಷಧಿಯನ್ನು ನೀಡುತ್ತಾರೆ, ಆದರೆ ನಂತರ ತಲೆಯಲ್ಲಾಡಿಸಿ, ಇದು ಬಹಳಾ ಬೇಸರದ ವಿಷಯ ಎಂದು ಹೇಳುತ್ತಾರೆ. 

ನಾವು ಯಾವುದೇ ಸಮಯದಲ್ಲಾದರೂ ಸಾಯಬಹುದು 

ಅಲ್ಲದೆ, ನೀವು ಯಾವಾಗ ಸಾಯುತ್ತೀರಿ ಎಂಬುದರ ಕುರಿತು ಯಾವುದೇ ಖಚಿತತೆ ಇಲ್ಲ. ಬಿಳಿ ಕೂದಲಿರುವ ವಯಸ್ಸಾದ ಪೋಷಕರು ತಮ್ಮ ಮಕ್ಕಳ ಶವಗಳನ್ನು ಹೂಳುವುದನ್ನು ಕಾಣಬಹುದು. ಮತ್ತು ಅನೇಕರು ಸಾಮಾನ್ಯ ಆಹಾರವನ್ನು ಸೇವಿಸುವುದರಿಂದ ಉಸಿರುಗಟ್ಟಿ ಸಾಯುತ್ತಾರೆ. 

ಉದಾಹರಣೆಗೆ, ಟಿಬೆಟ್‌ನಿಂದ ಬಂದ ಈ ಉದಾಹರಣೆಯನ್ನು, ಆಧಾರವಾಗಿರಿಸಿ ನೀವು ಯೋಚಿಸಬಹುದು. ಒಬ್ಬ ವ್ಯಕ್ತಿಯು ಕೆಲವು ದೊಡ್ಡ ಮಾಂಸದ ತುಂಡುಗಳನ್ನು ಪಕ್ಕಕ್ಕೆ ಇರಿಸಿ ಅವುಗಳನ್ನು ಬೆಳಿಗ್ಗೆ ತಿನ್ನುತ್ತೇನೆ ಎಂದು ಹೇಳಿದನು, ಆದರೆ ಆ ಮಾಂಸದ ತುಂಡುಗಳು ಅವನಿಗಿಂತ ಹೆಚ್ಚು ಕಾಲ ಉಳಿದವು. ಇನ್ನೊಂದು ಉದಾಹರಣೆ: ಶಿಮ್ಲಾದಲ್ಲಿನ ಆಲೂಗಡ್ಡೆ ರೈತನೊಬ್ಬ ನನಗೆ ಪರಿಚಯವಿದ್ದ, ಅವನು ಊಟಕ್ಕಾಗಿ ಹುರಿದ ಬ್ರೆಡ್ ಮಾಡಲು ಹೊರಟಿದ್ದನು, ಆದರೆ ಬ್ರೆಡ್ ಬೇಯುವಾಗಲೇ ಸತ್ತನು. 

ಅಶಾಶ್ವತತೆ ಮತ್ತು ಸಾವಿನ ಬಗ್ಗೆ ಮೆಚ್ಚುಗೆಯನ್ನು ಪಡೆಯುವ ಉತ್ತಮ ಮಾರ್ಗವು ಪುಸ್ತಕಗಳಿಂದ ಅವುಗಳ ಬಗ್ಗೆ ಓದುವುದು ಅಲ್ಲ, ಬದಲಿಗೆ ನಮಗೆ ತಿಳಿದಿರುವ ಸಾವನಪ್ಪಿದ ಇತರರ ಬಗ್ಗೆ ಯೋಚಿಸುವುದಾಗಿರುತ್ತದೆ. 

ಸಾವಿನ ಸಮಯದಲ್ಲಿ ಕೇವಲ ಧರ್ಮ ನಮಗೆ ಸಹಾಯ ಮಾಡುತ್ತದೆ 

ಸಾವಿನ ಬಗ್ಗೆ ಧ್ಯಾನಿಸುವುದರ ಪ್ರಾಮುಖ್ಯತೆ ಏನು? ಅದು ನಾವು ಮಾಡಬೇಕಾದ ಏಕೈಕ ಯೋಗ್ಯವಾದ ಕೆಲಸವು ಧರ್ಮವನ್ನು ಅಭ್ಯಾಸ ಮಾಡುವುದು ಎಂಬುದನ್ನು ತೋರಿಸುತ್ತದೆ. 

ನಾವು ಭೌತಿಕ ವಸ್ತುಗಳ ವಿಷಯವಾಗಿ ಯೋಚಿಸಿದರೆ, ನಾವು ನಮ್ಮೊಂದಿಗೆ ಯಾವುದನ್ನೂ ಕೊಂಡೊಯ್ಯಲು ಸಾಧ್ಯವಿಲ್ಲ ಎಂಬುದನ್ನು ನೀವು ಗಮನಿಸುತ್ತೀರಿ. ಉದಾಹರಣೆಗೆ, ನೀವು ಬಹಳಷ್ಟು ಹಣವನ್ನು ಗಳಿಸಿದ ಶ್ರೀಮಂತ ವ್ಯಾಪಾರಿಯಾಗಿದ್ದರೆ, ನಿಮ್ಮ ದೇಹವನ್ನು ದಹನ ಮಾಡಲು, ಅದನ್ನು ಸುತ್ತಲು ಹೆಚ್ಚು ದುಬಾರಿಯಾದ ಬಟ್ಟೆಯ ತುಂಡನ್ನು ನೀವು ಹೊಂದಿರಬಹುದು ಅಷ್ಟೆ. ಈ ಸಂಪತ್ತನ್ನು ಸಂಗ್ರಹಿಸಲು ಈ ವ್ಯಾಪಾರಿ ದೇಶದಿಂದ ದೇಶಕ್ಕೆ ಪ್ರಯಾಣಿಸುವಾಗ ಮಾಡಿದ ವಿನಾಶಕಾರಿ ಕ್ರಿಯೆಗಳ ಪ್ರಮಾಣವು ಅಗಾಧವಾಗಿರಬಹುದು. 

ನಿಮ್ಮ ಬಳಿ ಬಹಳಾ ಸೇವಕರು ಅಥವಾ ಕೆಲಸಗಾರರಿದ್ದರೆ ಅಥವಾ 100,000 ಸೈನಿಕರನ್ನು ನಿಯಂತ್ರಿಸುವ ಜನರಲ್ ಆಗಿದ್ದರೆ, ನೀವು ಸಾಯುವಾಗ ಯಾರೂ ನಿಮ್ಮೊಂದಿಗೆ ಬರಲು ಸಾಧ್ಯವಿಲ್ಲ. ಸಂಬಂಧಿಕರಿಂದ ತುಂಬಿರುವ ದೇಶವೂ ಸಹಾಯ ಮಾಡಲು ಸಾಧ್ಯವಿಲ್ಲ: ನೀವು ಸಾಯುವಾಗ ಅವರು ಮಾಡಬಹುದಾದದ್ದು, ಕೇವಲ ನಿಂತು ನಿಮ್ಮನ್ನು ತೊಂದರೆಗೊಳಿಸುವುದಷ್ಟೆ ಮತ್ತು ನಿಮ್ಮ ಶಾಂತಿಯುತ ಸಾವು ಮತ್ತು ಪುನರ್ಜನ್ಮಕ್ಕೆ ಅಡ್ಡಿಯಾಗುತ್ತಾರೆ. 

ಸಾವಿನ ಸಮಯದಲ್ಲಿ ಸಹಾಯವಾಗುವ ಏಕೈಕ ವಿಷಯವೆಂದರೆ ಧರ್ಮಾಚರಣೆ, ಏಕೆಂದರೆ, ನೀವು ರಚನಾತ್ಮಕ ಕ್ರಿಯೆಗಳಿಂದ ಸಾಕಷ್ಟು ಸಕಾರಾತ್ಮಕ ಕರ್ಮ ಶಕ್ತಿಯನ್ನು ನಿರ್ಮಿಸಿದ್ದರೆ, ಅದು ನಿಮ್ಮ ಭವಿಷ್ಯದ ಪುನರ್ಜನ್ಮಗಳಿಗೆ ಹೆಚ್ಚು ಉಪಕಾರಿಯಾಗಿರುತ್ತದೆ; ಆದರೆ ನಕಾರಾತ್ಮಕ ಕರ್ಮದ ಬಲವು ಅವುಗಳನ್ನು ಇನ್ನಷ್ಟು ಹದಗೆಡಿಸುತ್ತದೆ. ಸಾವಿನ ಬಗ್ಗೆ ಯೋಚಿಸದೆಯೇ ನೀವು ಅರ್ಥಮಾಡಿಕೊಳ್ಳಬಹುದಾದ ವಿಷಯ ಇದು. ಟಿಬೆಟ್ನಲ್ಲಿನ ಅನೇಕ ಟಿಬೆಟಿಯನ್ನರು ಬಹಳ ಶ್ರೀಮಂತರಾಗಿದ್ದರು, ಆದರೆ ಅವರು ಆ ಸಮಯದಲ್ಲಿ ತಮ್ಮ ಜ್ಞಾನ ಮತ್ತು ಆಂತರಿಕ ಗುಣಗಳನ್ನು ಮಾತ್ರ ಹೊತ್ತುಕೊಂಡು ಹೋಗಬೇಕಾಯಿತು. ಆದ್ದರಿಂದ ನಾವು ನಮ್ಮ ಜೀವಿತಾವಧಿಯಲ್ಲಿ ಧರ್ಮವನ್ನು ಸಂಪೂರ್ಣವಾಗಿ ಅಭ್ಯಾಸ ಮಾಡಬೇಕು ಮತ್ತು ಲೌಕಿಕ ಚಟುವಟಿಕೆಗಳಲ್ಲಿ ನಮ್ಮ ಸಮಯವನ್ನು ವ್ಯರ್ಥ ಮಾಡಬಾರದು. 

ಗೋಧಿಯ ಹೊಟ್ಟಿನಂತೆ, ಈ ಜೀವನದ ಎಲ್ಲಾ ಲೌಕಿಕ ಚಟುವಟಿಕೆಗಳು ನಿಷ್ಪ್ರಯೋಜಕವೆಂದು ನಾವು ಪರಿಗಣಿಸಬೇಕು. ಲೌಕಿಕ ಚಟುವಟಿಕೆಗಳಿಗೆ ಯಾವುದೇ ಸಾರವಿಲ್ಲ. ನಾವು ಲೌಕಿಕ ಚಟುವಟಿಕೆಗಳನ್ನು, ಮಕ್ಕಳು ನಿರ್ಮಿಸುವ ಮರಳು ಕೋಟೆಯಂತೆ ಪರಿಗಣಿಸಬೇಕು. ಅವುಗಳೊಂದಿಗೆ ಆಟವಾಡುವುದನ್ನು ಮುಗಿಸಿದ ನಂತರ, ಅವರು ಅವುಗಳನ್ನು ಹಿಂದೆ ಬಿಟ್ಟು ಹೋಗುತ್ತಾರೆ. ನಾವು ಲೌಕಿಕ ಚಟುವಟಿಕೆಗಳನ್ನು ಹೀಗೆಯೇ ಪರಿಗಣಿಸಬೇಕು. 

ನೀವು ಇದನ್ನೆಲ್ಲಾ ಯೋಚಿಸಿದರೆ, ಅದು ನಿಮ್ಮ ಧರ್ಮಾಚರಣೆಗೆ ಬಹಳ ಸಹಾಯಕವಾಗಿರುತ್ತವೆ. 

ಪ್ರೇರಣೆಯ ಎರಡು ಕಡಿಮೆ ವ್ಯಾಪ್ತಿಗಳು 

ಆರಂಭಿಕ ವ್ಯಾಪ್ತಿ 

ನಾವು ಎಲ್ಲಾ ಲೌಕಿಕ ಚಟುವಟಿಕೆಗಳನ್ನು ಅನಗತ್ಯ ಮತ್ತು ಹೆಚ್ಚಿನ ಪ್ರಾಮುಖ್ಯತೆಯಿಲ್ಲ ಎಂದು ಪರಿಗಣಿಸಿದರೆ, ನಮ್ಮ ಧರ್ಮಾಚರಣೆ ಮಾತ್ರ ಮುಖ್ಯ ಎಂದು ನಾವು ಅರಿತುಕೊಳ್ಳುತ್ತೇವೆ. ಧರ್ಮಾಚರಣೆ ಎಂದರೆ ನಿಮ್ಮ ಭವಿಷ್ಯದ ಪುನರ್ಜನ್ಮಗಳಿಗೆ ಪ್ರಯೋಜನಕಾರಿಯಾದದ್ದನ್ನು ಮಾಡುವುದಾಗಿರುತ್ತದೆ. ಉದಾಹರಣೆಗೆ, "ಈಗ ನಾನು ಅಮೂಲ್ಯವಾದ ಮಾನವ ಪುನರ್ಜನ್ಮವನ್ನು ಪಡೆದಿದ್ದೇನೆ; ಭವಿಷ್ಯದ ಜೀವನದಲ್ಲಿ ಕೆಟ್ಟ ಲೋಕಗಳಿಗೆ ಬೀಳುವುದನ್ನು ತಡೆಯಲು ನಾನು ಅದನ್ನು ಬಳಸಲಿದ್ದೇನೆ" ಎಂಬ ಮನೋಭಾವವನ್ನು ಹೊಂದಿರುವುದು, ನಮ್ಮ ಅಮೂಲ್ಯವಾದ ಜೀವನದ ಲಾಭವನ್ನು ಪಡೆಯುವುದರ ಕನಿಷ್ಠ ಮಟ್ಟವಾಗಿರುತ್ತದೆ. 

ಮೂರು ಕೆಟ್ಟ ಲೋಕಗಳಿಗೆ ಬೀಳದಂತೆ ನಮ್ಮನ್ನು ತಡೆಯುವುದು, ಕಟ್ಟುನಿಟ್ಟಾದ ನೈತಿಕ ಸ್ವಯಂ-ಶಿಸ್ತನ್ನು ಪಾಲಿಸುವುದಾಗಿರುತ್ತದೆ. ಆದರೆ ನಾವು ನೈತಿಕ ಸ್ವಯಂ-ಶಿಸ್ತನ್ನು ಪಾಲಿಸುವ ದೃಢವಾದ ಬಯಕೆಯನ್ನು ಹೊಂದಿದ್ದರೂ ಸಹ, ಅದು ಕ್ರಮೇಣವಾಗಿ ಕ್ಷೀಣಿಸುತ್ತದೆ. ಆದ್ದರಿಂದ ಕೆಟ್ಟ ಪುನರ್ಜನ್ಮಕ್ಕೆ ಬೀಳದಂತೆ ತಡೆಯಲು, ನಾವು ನಮ್ಮ ಗೊಂದಲಮಯ ಭಾವನೆಗಳನ್ನು ನಮ್ಮಿಂದ ನಿವಾರಿಸಬೇಕು. ಇದು ಅತ್ಯಂತ ಕೊಳಕಾದ ಬಟ್ಟೆಯನ್ನು ತೊಳೆಯುವಂತಿರುತ್ತದೆ - ಮೊದಲು ನೀವು ಸ್ವಲ್ಪ ಶಕ್ತಿಯನ್ನು ಬಳಸುತ್ತೀರಿ ಮತ್ತು ನಂತರ ನಿಧಾನವಾಗಿ ನಿಮ್ಮ ಶಕ್ತಿಯನ್ನು ಹೆಚ್ಚಿಸುತ್ತೀರಿ. ಗೊಂದಲಮಯ ಭಾವನೆಗಳಿಂದ ನಿಮ್ಮನ್ನು ಮುಕ್ತಗೊಳಿಸಲು, ನೀವು ಸಾವಾಕಾಶವಾಗಿ ಮತ್ತು ನಿಧಾನವಾಗಿ ಪ್ರಾರಂಭಿಸಿ, ಕಾಲಕ್ರಮೇಣ ಪೂರ್ಣ ಶಕ್ತಿಯನ್ನು ಬಳಸುವುದರಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳುತ್ತೀರಿ. ಆದ್ದರಿಂದ ನೈತಿಕ ಸ್ವಯಂ-ಶಿಸ್ತನ್ನು ಕಾಪಾಡಿಕೊಳ್ಳಲು, ನೀವು ಅದನ್ನು ನಿಧಾನವಾಗಿ ಅನ್ವಯಿಸಬೇಕು ಮತ್ತು ಕಾಲಕ್ರಮೇಣವಾಗಿ ಅನ್ವಯಿಸುವ ಮೂಲಕ ನೀವು ನಿಮ್ಮನ್ನು ಗೊಂದಲಮಯ ಭಾವನೆಗಳಿಂದ ಮುಕ್ತಗೊಳಿಸಬಹುದು; ಇಲ್ಲದಿದ್ದರೆ ನಿಮ್ಮ ಪ್ರಯತ್ನವು ಸುಲಭವಾಗಿ ಕ್ಷೀಣಿಸಬಹುದು. 

ಮೂರು ಕೆಟ್ಟ ಲೋಕಗಳಲ್ಲಿ ಪುನರ್ಜನ್ಮವನ್ನು ತಪ್ಪಿಸಲು ನೀವು ನೈತಿಕ ಸ್ವಯಂ-ಶಿಸ್ತನ್ನು ಅನುಸರಿಸಿದರೆ, ಇದು ಧರ್ಮವನ್ನು ಅಭ್ಯಾಸ ಮಾಡುವ ಕನಿಷ್ಠ ಮಟ್ಟವಾಗಿರುತ್ತದೆ. 

ಮಧ್ಯಂತರ ವ್ಯಾಪ್ತಿ 

ನಾವು ಮೂರು ಕೆಟ್ಟ ಲೋಕಗಳಲ್ಲಿ ಜನಿಸುವುದನ್ನು ತಪ್ಪಿಸಿದರೂ ಮತ್ತು ನಮ್ಮ ಮುಂದಿನ ಜನ್ಮದಲ್ಲಿ ದೇವಲೋಕದಲ್ಲಿ ಆನಂದ ಮತ್ತು ಸಂತೋಷಗಳ ನಡುವೆ ಅಥವಾ ಮಾನವನಾಗಿ ಜನಿಸಿದರೂ ಸಹ, ಎಲ್ಲಾ ಸಂಸಾರದ ಪುನರ್ಜನ್ಮಗಳು ಬಳಲಿಕೆಯಾಗಿರುತ್ತವೆ ಎಂಬುದನ್ನು ನಾವು ಅರಿತುಕೊಳ್ಳಲು ಪ್ರಯತ್ನಿಸಬೇಕು. ಇದನ್ನು ಲ್ಯಾಮ್-ರಿಮ್ ಬೋಧನೆಗಳಲ್ಲಿ ವ್ಯಾಪಕವಾಗಿ ಚರ್ಚಿಸಲಾಗಿದೆ, ಆದರೆ ಈ ಉದಾಹರಣೆಯಿಂದ ಅದನ್ನು ವಿವರಿಸಬಹುದು: ನೀವು ಸೂರ್ಯನ ಕೆಳಗೆ ನಿಂತಿದ್ದೀರಿ ಮತ್ತು ಬಿಸಿಲಿನ ಬೇಗೆಯಿಂದ ಬಳಲುತ್ತಿದ್ದೀರಿ, ಆದ್ದರಿಂದ ನೀವು ಒಳಗೆ ಹೋಗುತ್ತೀರಿ. ಆಗ ನೀವು ಬಿಸಿಲಿನ ದುಃಖದಿಂದ ತಪ್ಪಿಸಿಕೊಂಡಿದ್ದೀರಿ, ಆದರೆ ಶೀತದ ದುಃಖದೊಂದಿಗೆ ಇದ್ದೀರಿ. ನಾವು ದುಃಖದಿಂದ ಮುಕ್ತರಾಗಿರುವ ಯಾವುದೇ ಸಂಸಾರದ ಪರಿಸ್ಥಿತಿ ಇಲ್ಲ. 

ಗೊಂದಲಮಯ ಭಾವನೆಗಳು ನಮ್ಮನ್ನು ಸಂಸಾರದಲ್ಲಿ ಸುತ್ತುವಂತೆ ಮಾಡುತ್ತವೆ, ಇದೇ ಅನಿಯಂತ್ರಿತವಾಗಿರುವ ಪುನರಾವರ್ತಿತ ಪುನರ್ಜನ್ಮ. ಬೇರು - ಮರದ ಬೇರಿನಂತೆ – ನಿಜವಾಗಿಯೂ ಇರುವ ಸ್ವತಂತ್ರ ಗುರುತುಗಳಿಗಾಗಿ ಗ್ರಹಿಸುತ್ತದೆ. ಸಂಸಾರದಲ್ಲಿ ನಾವು ಸುತ್ತುವುದು, ಮೆರಿ-ಗೋ-ರೌಂಡ್ನಲ್ಲಿ ಸುತ್ತಾಡುತ್ತಾ ಎಲ್ಲಿಯೂ ತಲುಪದಂತೆ ಇರುತ್ತದೆ. ಅದರಿಂದ ಹೊರಬರಲು ಇರುವ ಏಕೈಕ ಮಾರ್ಗವೆಂದರೆ ನಮ್ಮನ್ನು ನಾವು ಉನ್ನತೀಕರಿಸಿಕೊಳ್ಳುವುದು, ಅದರ ಮೇಲೇರುವುದು, ಅದರಿಂದ ಮೇಲೇರುವುದು. ಹೀಗೆ ಮಾಡಲು, ನಾವು ಹೆಚ್ಚು ಅರಿತುಕೊಂಡ ಜೀವಿಯಾದ ಆರ್ಯರಾಗಬೇಕು, ಅಸ್ಪಷ್ಟತೆ, ಅಸಾಧ್ಯವಾದ "ಆತ್ಮದ" ಕೊರತೆಯನ್ನು ಅರಿತುಕೊಳ್ಳುವ ಪರಿಕಲ್ಪನಾ-ಅಲ್ಲದ ವಿವೇಚನಾತ್ಮಕ ಅರಿವನ್ನು ಹೊಂದಿರುವ ವ್ಯಕ್ತಿಯಾಗಬೇಕು. ಇದು ಶೂನ್ಯತೆಯ ವಿವೇಚನಾತ್ಮಕ ಅರಿವಾಗಿರುತ್ತದೆ. 

ನಮ್ಮ ಮಾನಸಿಕ ನಿರಂತರತೆಗಳಲ್ಲಿ ಶೂನ್ಯತೆಯ ಈ ಸಾಕ್ಷಾತ್ಕಾರವನ್ನು ಬೆಳೆಸಲು, ಕ್ಷಮತವನ್ನು ಪಡೆಯುವುದು ಅವಶ್ಯಕ, ಇದು ನಿಶ್ಚಲವಾದ, ಸ್ಥಿರವಾದ ಮನಸ್ಥಿತಿಯಾಗಿರುತ್ತದೆ; ಮತ್ತು ಇದನ್ನು ಪಡೆಯಲು, ನಮಗೆ ನೈತಿಕ ಸ್ವಯಂ-ಶಿಸ್ತು ಬೇಕು. ಆದ್ದರಿಂದ ಮೂರು ಉನ್ನತ ತರಬೇತಿಗಳು - ನೈತಿಕ ಸ್ವಯಂ-ಶಿಸ್ತು, ಮಗ್ನನಾಗುವ ಏಕಾಗ್ರತೆ ಮತ್ತು ವಿವೇಚನಾತ್ಮಕ ಅರಿವಿನ ಉನ್ನತ ತರಬೇತಿಗಳು - ಅನಿಯಂತ್ರಿತವಾಗಿರುವ ಪುನರಾವರ್ತಿತ ಸಂಸಾರ ಪುನರ್ಜನ್ಮವನ್ನು ಮೀರಲು ನಮಗೆ ಅವಕಾಶ ಮಾಡಿಕೊಡುತ್ತವೆ. ನಾವು ಇವುಗಳನ್ನು ಅಭ್ಯಾಸ ಮಾಡಿದರೆ, ನಾವು ಸಂಸಾರದಲ್ಲಿನ ನಮ್ಮ ಸುತ್ತುವಿಕೆಯನ್ನು ಕೊನೆಗೊಳಿಸಬಹುದು. 

ಆರ್ಯ ಸ್ಥಿತಿಗೆ ತಮ್ಮನ್ನು ತಾವು ಏರಿಸಿಕೊಂಡ ಜೀವಿಗಳ ಮೂರು ವರ್ಗೀಕರಣಗಳಿವೆ: 

  • ನೋಡುವ ಮಾರ್ಗ ಮನಸ್ಸನ್ನು (ನೋಡುವ ಮಾರ್ಗ) ಸಾಧಿಸಿದವರು 
  • ಒಗ್ಗಿಕೊಳ್ಳುವ ಮಾರ್ಗ ಮನಸ್ಸನ್ನು (ಧ್ಯಾನದ ಮಾರ್ಗ) ಸಾಧಿಸಿದವರು 
  • ಹೆಚ್ಚಿನ ತರಬೇತಿಯ ಅಗತ್ಯವಿಲ್ಲದ ಹಾದಿಯ ಮನಸ್ಸನ್ನು ಸಾಧಿಸಿದವರು.

ಮನಸ್ಸಿನ ನೋಡುವ ಮಾರ್ಗವನ್ನು ಹೊಂದಿರುವ ಜೀವಿಗಳು, ಹೊಸದಾಗಿ ಶೂನ್ಯತೆಯ ಪರಿಕಲ್ಪನಾತ್ಮಕವಲ್ಲದ ನೇರ ಅರಿವನ್ನು ಹೊಂದಿರುತ್ತಾರೆ. ಮನಸ್ಸಿನ ಒಗ್ಗಿಕೊಳ್ಳುವ ಮಾರ್ಗವನ್ನು ಹೊಂದಿರುವವರು ಮತ್ತಷ್ಟು ಧ್ಯಾನಿಸುತ್ತಾರೆ ಮತ್ತು ಶೂನ್ಯತೆಯ ಈ ಪರಿಕಲ್ಪನಾತ್ಮಕವಲ್ಲದ ಅರಿವಿನ ಅಭ್ಯಾಸಕ್ಕೆ ತಮ್ಮನ್ನು ಒಗ್ಗಿಸಿಕೊಳ್ಳುತ್ತಾರೆ ಅಥವಾ ಬೆಳೆಸಿಕೊಳ್ಳುತ್ತಾರೆ. ನೀವು ಧ್ಯಾನಿಸಿ-ಧ್ಯಾನಿಸಿ, ನಿಮ್ಮ ಮನಸ್ಸನ್ನು ಈ ಶೂನ್ಯತೆಯ ಅರಿವಿಗೆ ಸಂಪೂರ್ಣವಾಗಿ ಒಗ್ಗಿಸಿಕೊಂಡಿದ್ದರೆ ಮತ್ತು ವಿಮೋಚನೆಗೆ ಅಡ್ಡಿಯಾಗುವ ಭಾವನಾತ್ಮಕ ಅಸ್ಪಷ್ಟತೆಗಳನ್ನು ನಿಮ್ಮ ಮನಸ್ಸಿನಿಂದ ಶಾಶ್ವತವಾಗಿ ತೆಗೆದುಹಾಕಿದ್ದರೆ, ನೀವು ಅರ್ಹತ್, ವಿಮೋಚಿತ ಜೀವಿಯಾಗಿರುತ್ತೀರಿ.

ಪ್ರೇರಣೆಯ ಸುಧಾರಿತ ವ್ಯಾಪ್ತಿ 

ಪ್ರೀತಿ ಮತ್ತು ಸಹಾನುಭೂತಿ 

ಆದರೆ ಎಲ್ಲಾ ಸೀಮಿತ ಜೀವಿಗಳು (ಅರಿವಿರುವ ಜೀವಿಗಳು) ಇದೇ ಸಂಕಷ್ಟದಲ್ಲಿ ಸಿಲುಕಿರುವುದರಿಂದ ನಿಮ್ಮನ್ನು ಮಾತ್ರ ಮುಕ್ತಗೊಳಿಸುವುದು ಸಾಕಾಗುವುದಿಲ್ಲ. ಎಲ್ಲಾ ಸೀಮಿತ ಜೀವಿಗಳು ಒಂದೇ ಆಗಿರುತ್ತವೆ, ಏಕೆಂದರೆ ಅವರೆಲ್ಲರೂ ಬಳಲುತ್ತಿದ್ದಾರೆ ಮತ್ತು ಎಲ್ಲರೂ ಅದರಿಂದ ಹೊರಬರಲು ಬಯಸುತ್ತಾರೆ. ಎಲ್ಲಾ ಸೀಮಿತ ಜೀವಿಗಳು ದುಃಖದಿಂದ ಮುಕ್ತರಾಗಬೇಕೆಂದು ಬಯಸುವ ಮನಸ್ಸನ್ನು ನಾವು ಬೆಳೆಸಿಕೊಂಡರೆ, ಇದನ್ನು "ಸಹಾನುಭೂತಿ" ಎಂದು ಕರೆಯಲಾಗುತ್ತದೆ. ಆದರೆ ಎಲ್ಲಾ ಸೀಮಿತ ಜೀವಿಗಳು ದುಃಖದಿಂದ ಬೇರ್ಪಡಬೇಕೆಂಬ ಈ ಆಶಯವನ್ನು ಬೆಳೆಸಿಕೊಳ್ಳಲು, ನೀವು ದೀರ್ಘಕಾಲದವರೆಗೆ ನಿಮ್ಮ ಸ್ವಂತ ದುಃಖದ ಬಗ್ಗೆ ಧ್ಯಾನಿಸಿರಬೇಕು ಮತ್ತು ಅದು ಎಷ್ಟು ಭಯಾನಕವಾಗಿದೆ ಎಂಬುದನ್ನು ಅರಿತುಕೊಂಡ ನಂತರ, ನೀವು ತ್ಯಾಗವನ್ನು - ಮುಕ್ತರಾಗುವ ದೃಢಸಂಕಲ್ಪವನ್ನು - ಬೆಳೆಸಿಕೊಳ್ಳಬಹುದು. ದುಃಖ ಎಷ್ಟು ಭಯಾನಕವಾಗಿದೆ ಎಂಬ ಕಲ್ಪನೆಯನ್ನು ನೀವು ಪಡೆದ ನಂತರ, ಅದರಿಂದ ನೀವೇ ಹೊರಬರಲು ಬಯಸಿದರೆ, ನೀವು ಆ ಆಲೋಚನೆಯನ್ನು ಎಲ್ಲಾ ಜೀವಿಗಳಿಗೂ ಅನ್ವಯಿಸಬಹುದು. ಇದೇ ಸಹಾನುಭೂತಿ. 

ಆದ್ದರಿಂದ, ತ್ಯಾಗವೆಂದರೆ ‘ನಾನು ದುಃಖದಿಂದ ಹೊರಬರಬೇಕೆಂಬ’ ಬಯಕೆ, ಆದರೆ ಸಹಾನುಭೂತಿ ಎಂದರೆ ಎಲ್ಲಾ ಜೀವಿಗಳು ದುಃಖದಿಂದ ಹೊರಬರಬೇಕೆಂಬ ಬಯಕೆ. ಸಹಾನುಭೂತಿ ಮತ್ತು ಪ್ರೀತಿಯ ನಡುವಿನ ವ್ಯತ್ಯಾಸವೆಂದರೆ, ಸಹಾನುಭೂತಿಯಿಂದ ನಾವು "ಎಲ್ಲಾ ಸೀಮಿತ ಜೀವಿಗಳು ದುಃಖ ಮತ್ತು ದುಃಖದ ಕಾರಣಗಳಿಂದ ಬೇರ್ಪಟ್ಟರೆ ಎಷ್ಟು ಅದ್ಭುತವಾಗಿರುತ್ತದೆ" ಎಂದು ಭಾವಿಸುತ್ತೇವೆ; ಆದರೆ ಪ್ರೀತಿ ಎಂದರೆ ಎಲ್ಲಾ ಜೀವಿಗಳು ಸಂತೋಷದಿಂದ ಮತ್ತು ಸಂತೋಷದ ಕಾರಣಗಳಿಂದ ತುಂಬಿರಬೇಕೆಂಬ ಬಯಕೆಯಾಗಿರುತ್ತದೆ. 

ಸಮಚಿತ್ತತೆ ಮತ್ತು ಬೋಧಿಚಿತ್ತವನ್ನು ಹೇಗೆ ಬೆಳೆಸಿಕೊಳ್ಳುವುದು 

ನಮಗೆ ಪ್ರೀತಿ ಮತ್ತು ಕರುಣೆ ಇಲ್ಲದಿರುವುದಕ್ಕೆ ಕಾರಣವೇನು? ನಾವೆಲ್ಲರೂ ದುಃಖದಿಂದ ಮುಕ್ತರಾಗಿ ಸಂತೋಷವನ್ನು ಹೊಂದಬೇಕೆಂದು ಏಕೆ ಬಯಸುವುದಿಲ್ಲ? ಏಕೆಂದರೆ ನಮ್ಮ ಮನಸ್ಸುಗಳು ಸುಗಮವಾಗಿಲ್ಲ - ಅವು ಒರಟಾಗಿರುತ್ತವೆ; ಅವು ಉನ್ನತಮಟ್ಟ ಮತ್ತು ಕೆಳಮಟ್ಟದ ಬಿಂದುಗಳನ್ನು ಹೊಂದಿರುತ್ತವೆ. ನಮ್ಮ ಮನಸ್ಸಿನ ಈ ಅಸಮಾನತೆ ಏನು? ನಮ್ಮ ಸಂಬಂಧಿಕರು ಮತ್ತು ನಮ್ಮ ಸ್ನೇಹಿತರ ಬಗ್ಗೆ ನಮಗೆ ಹೆಚ್ಚಿನ ಬಾಂಧವ್ಯವಿರುತ್ತದೆ, ಮತ್ತು ನಾವು ನಮ್ಮ ಶತ್ರುಗಳನ್ನು ಅಥವಾ ನಮಗೆ ಇಷ್ಟವಿಲ್ಲದ ಜನರನ್ನು ನೋಡಿದಾಗ, ನಮ್ಮಲ್ಲಿ ಹೆಚ್ಚಿನ ದ್ವೇಷವಿರುತ್ತದೆ. 

ಹಾಗಾದರೆ ನಾವು ಹಳಿತಪ್ಪಿದ ರಸ್ತೆಯನ್ನು ಹೇಗೆ ಸಮಗೊಳಿಸುತ್ತೇವೆ? ಈ ಉದಾಹರಣೆಯ ಬಗ್ಗೆ ಯೋಚಿಸುವ ಮೂಲಕ ನಾವು ಅರ್ಥಮಾಡಿಕೊಳ್ಳಬಹುದು: ಒಬ್ಬ ವ್ಯಕ್ತಿ ನಿನ್ನೆ ನಿಮಗೆ 100 ರೂಪಾಯಿಗಳನ್ನು ನೀಡಿದರು, ಮತ್ತು ಇನ್ನೊಬ್ಬ ವ್ಯಕ್ತಿ ಇಂದು ನಿಮಗೆ 100 ರೂಪಾಯಿಗಳನ್ನು ನೀಡಿದರು. ನಿಮಗೆ ನಿನ್ನೆ 100 ರೂಪಾಯಿ ಕೊಟ್ಟವನು, ಇಂದು ಬೆಳಿಗ್ಗೆ ನಿಮ್ಮ ಮುಖದ ಮೇಲೆ ಹೊಡೆದನು, ಮತ್ತು ಇಂದು ನಿಮಗೆ 100 ರೂಪಾಯಿ ಕೊಟ್ಟವನು ನಿನ್ನೆ ನಿಮ್ಮ ಮುಖದ ಮೇಲೆ ಹೊಡೆದಿದ್ದನು. ನೀವು ಯಾರನ್ನು ಇಷ್ಟಪಡಬೇಕು ಮತ್ತು ಯಾರನ್ನು ಇಷ್ಟಪಡಬಾರದು? 

ಈ ರೀತಿಯಾಗಿ, ನಮ್ಮ ಶತ್ರುಗಳು ಹೇಗೆ ನಮಗೆ ಮೊದಲು ಬಹಳಾ ಉಪಕಾರಿಯಾಗಿದ್ದರು ಮತ್ತು ಭವಿಷ್ಯದಲ್ಲಿ ಅವರು ನಮಗೆ ಹೆಚ್ಚಿನ ಸಹಾಯವನ್ನು ನೀಡಬಹುದು ಎಂದು ನಾವು ಯೋಚಿಸಬೇಕು. ಅದೇ ರೀತಿ, ನಮ್ಮ ಸ್ನೇಹಿತರು ಮೊದಲು ನಮಗೆ ಬಹಳಷ್ಟು ಹಾನಿಯುಂಟುಮಾಡಿದ್ದಾರೆ ಮತ್ತು ಭವಿಷ್ಯದಲ್ಲಿ ಮತ್ತೆ ಹಾಗೆ ಮಾಡಬಲ್ಲರು. ಇದಕ್ಕೆ ಕಾಲ ಕೂಡಬೇಕಷ್ಟೆ. 

ಇನ್ನೊಂದು ಉದಾಹರಣೆ: ನರಭಕ್ಷಕರು, ಅಥವಾ ತೋಳಗಳು ಅಥವಾ ರಕ್ತಪಿಶಾಚಿಗಳು ಸಹ ಆಗಿರುವ ಬಹಳಾ ಜನರಿದ್ದಾರೆ. ಅವರು ನಮಗೆ ಆಕರ್ಷಕವಾಗಿ ಕಂಡು, ನಾವು ಅವರಲ್ಲಿ ಒಬ್ಬರನ್ನು ಮದುವೆಯಾಗಬಹುದು, ಆದರೆ ಒಂದು ರಾತ್ರಿ ಅವರ ಕೋರೆಹಲ್ಲುಗಳು ಹೊರಬಂದು ನಮ್ಮನ್ನು ತಿನ್ನಬಹುದು. 

ನೀವು ಒಂದು ನಾಯಿಯನ್ನು ಹೊಡೆದಾಗ, ಅದು ಬೊಗಳುತ್ತದೆ ಮತ್ತು ನಿಮ್ಮನ್ನು ಕಚ್ಚುತ್ತದೆ. ಆದ್ದರಿಂದ ನಾವು ಶತ್ರುವಿನ ಮೇಲೆ ಕೋಪಗೊಂಡರೆ, ನಾವು ನಾಯಿಯಂತೆಯೇ ಪ್ರತಿಕ್ರಿಯಿಸುತ್ತೇವೆ. ನಾವು ಮನಸ್ಸಿನ ಈ ಅಸಮಾನತೆ, ನಮ್ಮಲ್ಲಿರುವ ಈ ಬಾಂಧವ್ಯ ಮತ್ತು ವಿಕರ್ಷಣೆಯನ್ನು ನಿವಾರಿಸಬೇಕು ಮತ್ತು ಮನಸ್ಸಿನ ಸಮಚಿತ್ತತೆಯನ್ನು ಸಾಧಿಸಬೇಕು. ಆ ಸಮಚಿತ್ತತೆಯ ಸ್ಥಿತಿಯ ಆಧಾರದ ಮೇಲೆ ನಾವು ಪ್ರೀತಿ ಮತ್ತು ಸಹಾನುಭೂತಿಯನ್ನು ಬೆಳೆಸಿಕೊಳ್ಳಬಹುದು - ಒಂದು ಕಾರು ಮುಂದೆ ಸಾಗಲು ಹಳ್ಳವಿರುವ ರಸ್ತೆಯನ್ನು ಸುಸಜ್ಜಿತಗೊಳಿಸಿದಂತೆ. 

ರಸ್ತೆಯನ್ನು ಸ್ಫೋಟಿಸಿ ಸಮತಟ್ಟಾಗಿಸುವ ಡೈನಮೈಟ್‌ನಂತಹ ಶಕ್ತಿಶಾಲಿ ಆಲೋಚನೆಗಳು ನಮ್ಮಲ್ಲಿರಬೇಕು. ಯಾವ ರೀತಿಯ ಆಲೋಚನೆಗಳು? ಇತರ ಸೀಮಿತ ಜೀವಿಗಳಿಗಾಗಿ ದಯೆತೋರುವುದರ ಬಗ್ಗೆ ಯೋಚಿಸುವುದು. ಉದಾಹರಣೆಗೆ, ನಾವು ಹಾಲು ಕುಡಿಯುತ್ತೇವೆ. ಇದು ಹಸುಗಳು ಮತ್ತು ಎಮ್ಮೆಗಳಿಂದ ಬರುತ್ತದೆ. ಅವು ಹೊರಗೆ ಹೋಗಿ ಹುಲ್ಲು ತಿನ್ನುತ್ತವೆ ಮತ್ತು ನೀರು ಕುಡಿಯುತ್ತವೆ, ಮತ್ತು ನಾವು ಕೇವಲ ಅವುಗಳಿಂದ ಹಾಲು ತೆಗೆದುಕೊಳ್ಳುತ್ತೇವೆಯಷ್ಟೇ. ಮೊಲಗಳು ಮತ್ತು ಇಲಿಗಳನ್ನು ವೈದ್ಯಕೀಯ ಪ್ರಯೋಗಗಳಲ್ಲಿ ಬಳಸಲಾಗುತ್ತದೆ, ಆದ್ದರಿಂದ ನಮಗಾಗಿರುವ ಔಷಧಿಗಳು, ತಮ್ಮ ಪ್ರಾಣವನ್ನು ನೀಡಿದ ಇಲಿಗಳು ಮತ್ತು ಮೊಲಗಳಿಂದ ಬರುತ್ತವೆ. 

ನಮ್ಮ ಶತ್ರುಗಳೆಂದು ಮತ್ತು ನಮಗೆ ಹಾನಿಯುಂಟುಮಾಡುತ್ತವೆ ಎಂದು ಪರಿಗಣಿಸುವ ಕೆಲವು ಸೀಮಿತ ಜೀವಿಗಳಿವೆ. ಆದರೆ ಅವುಗಳು ನಮಗುಂಟುಮಾಡಿದ ಹಾನಿಯನ್ನು ಅವುಗಳ ದಯೆಯೊಂದಿಗೆ ಹೋಲಿಸಿದರೆ, ಎರಡನೆಯದು ಮೊದಲನೆಯದನ್ನು ಮೀರಿಸುತ್ತದೆ. ಮತ್ತು ಅವುಗಳ ಹಾನಿಯು, ವಾಸ್ತವದಲ್ಲಿ ಬಹಳಾ ಸಹಾಯಕವಾಗಿರಬಹುದು. ಬುದ್ಧನಾಗಲು, ನಾವು ತಾಳ್ಮೆಯನ್ನು ಬೆಳೆಸಿಕೊಳ್ಳಬೇಕು ಮತ್ತು ಇದಕ್ಕಾಗಿ ನಮಗೆ ಅಸಹ್ಯಕರ ಜನರು ಬೇಕು. ಎಲ್ಲರೂ ತುಂಬಾ ಒಳ್ಳೆಯವರಾಗಿದ್ದರೆ, ನಾವು ತಾಳ್ಮೆಯನ್ನು ಬೆಳೆಸಿಕೊಳ್ಳಲು ಸಾಧ್ಯವಿಲ್ಲ. ನಮ್ಮ ಮೇಲೆ ಕೋಪಗೊಳ್ಳುವವರು ಸೀಮಿತ ಜೀವಿಗಳು, ಬುದ್ಧರಲ್ಲ; ಆದ್ದರಿಂದ ಅವರೇ ನಮಗೆ ತಾಳ್ಮೆಯನ್ನು ಕಲಿಸುತ್ತಾರೆ. ಉದಾಹರಣೆಗೆ, ಅತಿಶಾ ಟಿಬೆಟ್‌ಗೆ ಬಂದಾಗ, ತಮ್ಮೊಂದಿಗೆ ಅತ್ಯಂತ ಹಿಂಸಾತ್ಮಕ ಭಾರತೀಯನೊಬ್ಬನನ್ನು ಕರೆತಂದರು, ಅವನು ಯಾವಾಗಲೂ ಅವರ ತಾಳ್ಮೆಯನ್ನು ಪರೀಕ್ಷಿಸುತ್ತಿದ್ದನು. ಅವನನ್ನು ಏಕೆ ಕರೆತಂದರು ಎಂದು ಕೇಳಿದಾಗ, ಅವರು ತಾಳ್ಮೆಯನ್ನು ಅಭ್ಯಾಸ ಮಾಡುವುದಕ್ಕಾಗಿ ಎಂದು ಉತ್ತರಿಸಿದರು. ಆದ್ದರಿಂದ ಸೀಮಿತ ಜೀವಿಗಳು ಮತ್ತು ಬುದ್ಧರು, ನಮಗಾಗಿ ಇರುವ ದಯೆಯಲ್ಲಿ ಸಮಾನರು. ಇದಕ್ಕೆ ಶಾಂತಿದೇವನ "ಎಂಗೇಜಿಂಗ್ ಇನ್ ಬೋಧಿಸತ್ವ ಬಿಹೇವಿಯರ್ (ಬೋಧಿಸತ್ವ ವರ್ತನೆಯಲ್ಲಿ ತೊಡಗುವುದು)" ಸಾಕ್ಷಿಯಾಗಿದೆ. 

ಬುದ್ಧನು ಕೋಪಗೊಳ್ಳದಿರಲು ಒಂದು ಕಾರಣವಿದೆ. ಏಕೆಂದರೆ ಅವನು ಎಲ್ಲಾ ತೊಂದರೆಗೊಳಿಸುವ ಭಾವನೆಗಳಿಂದ ಮುಕ್ತವಾದ ಏಕಾಗ್ರತೆಯನ್ನು ಹೊಂದಿರುತ್ತಾನೆ. ಬುದ್ಧನ ಬಳಿ ಈ ಕೇಂದ್ರೀಕೃತ ಏಕಾಗ್ರತೆ ಇರುವುದರಿಂದ, ಅವನು ಕೋಪಗೊಳ್ಳುವುದಿಲ್ಲ. ಆದ್ದರಿಂದ ನಾವು ಇದನ್ನು ಅಭಿವೃದ್ಧಿಪಡಿಸಬೇಕು. ನಾವು ಬೆಳಿಗ್ಗೆ ಎರಡು ಆಲೋಚನೆಗಳೊಂದಿಗೆ ಎಚ್ಚರಗೊಳ್ಳಬೇಕು: 

  • ಇಂದು ನಾನು ಇತರರು ಕೋಪಗೊಳ್ಳಲು ಕಾರಣವಾಗುವುದಿಲ್ಲ. 
  • ಇತರರು ನನ್ನನ್ನು ಕೋಪಗೊಳಿಸಲು ಬಿಡುವುದಿಲ್ಲ. 

ನಾವು ಇದಕ್ಕೆ ಒಗ್ಗಿಕೊಂಡರೆ, ನಾವು ನಮ್ಮ ಗೊಂದಲಮಯ ಭಾವನೆಗಳನ್ನು ಕಡಿಮೆ ಮಾಡಲು ಮತ್ತು ಅಂತಿಮವಾಗಿ ಗೊಂದಲಮಯ ಭಾವನೆಗಳಿಂದ ಶಾಶ್ವತವಾಗಿ ಮುಕ್ತ ಸ್ಥಿತಿಯನ್ನು ಅಭಿವೃದ್ಧಿಪಡಿಸಲು ಸಾಧ್ಯವಾಗುತ್ತದೆ ಮತ್ತು ಹೀಗೆ ಬುದ್ಧರಾಗಲು ಸಾಧ್ಯವಾಗುತ್ತದೆ. 

ಬುದ್ಧರನ್ನು ಮೆಚ್ಚಿಸಲು ನಾವು ಏನು ಮಾಡಬಹುದು ಎಂದು ಕೇಳಿದರೆ, ಅದು ಸೀಮಿತ ಜೀವಿಗಳಿಗೆ ಸಹಾಯ ಮಾಡುವುದು ಮತ್ತು ದಯೆ ತೋರಿಸುವುದಾಗಿರುತ್ತದೆ. ಇದು ನಿಜವಾಗಿಯೂ ಬುದ್ಧರಿಗೆ ಮೆಚ್ಚುಗೆಯಾಗುತ್ತದೆ. ಉದಾಹರಣೆಗೆ, ಪೋಷಕರ ಬಳಿ ಅವರ ಮಕ್ಕಳಿದ್ದರೆ, ನಾವು ಕೇವಲ ಪೋಷಕರಿಗೆ ದಯೆ ತೋರುವ ಬದಲು ಅವರ ಮಕ್ಕಳೊಂದಿಗೂ ದಯೆ ತೋರಿದರೆ ಅವರು ಸಂತೋಷಪಡುತ್ತಾರೆ. ಅದೇ ರೀತಿ, ನಾವು ಬುದ್ಧರು ಸೇರಿದಂತೆ ಸೀಮಿತ ಜೀವಿಗಳಿಗೆ ದಯೆ ತೋರಿದರೆ, ಆಗ ಬುದ್ಧ ಹೆಚ್ಚು ಸಂತೋಷವಾಗಿರುತ್ತಾರೆ. ಆದ್ದರಿಂದ ಇವೆಲ್ಲದರ ಆಧಾರದ ಮೇಲೆ, ನಾವು ಬೋಧಿಚಿತ್ತದ ಗುರಿಯನ್ನು ಬೆಳೆಸಿಕೊಳ್ಳಲು ಪ್ರಯತ್ನಿಸಬೇಕು: "ಎಲ್ಲಾ ಸೀಮಿತ ಜೀವಿಗಳಿಗೆ ಪ್ರಯೋಜನವಾಗುವಂತೆ ನಾನು ಬುದ್ಧನ ಸ್ಥಿತಿಯನ್ನು ಪಡೆಯಲಿದ್ದೇನೆ." 

ಜನ್ಮದಲ್ಲಿ ಜ್ಞಾನೋದಯವನ್ನು ಸಾಧಿಸುವುದು 

ಇನ್ನೂ ಹೆಚ್ಚಾಗಿ, ಎಲ್ಲಾ ಸೀಮಿತ ಜೀವಿಗಳ ಸಲುವಾಗಿ ಬುದ್ಧನ ಈ ಸ್ಥಿತಿಯನ್ನು ಇದೇ ಜನ್ಮದಲ್ಲಿ, ಈಗಲೇ ಪಡೆಯುವ ಬಲವಾದ ಉದ್ದೇಶವನ್ನು ಹೊಂದಿರಬೇಕು. ಈ ಜನ್ಮದಲ್ಲಿಯೇ ಜ್ಞಾನೋದಯವನ್ನು ಪಡೆಯಲು ಒಂದು ಮಾರ್ಗವಿದೆ ಎಂದು ಬುದ್ಧ ಹೇಳಿದರು. ಹಾಗಾದರೆ ಆ ಮಾರ್ಗವೇನು? ಅದು ತಾಂತ್ರಿಕ ಮಾರ್ಗವಾಗಿದೆ. ನೀವು ಇದನ್ನು ಅನುಸರಿಸಿದರೆ, ಈ ಜನ್ಮದಲ್ಲಿಯೇ ಜ್ಞಾನೋದಯವನ್ನು ಪಡೆಯಲು ಸಾಧ್ಯವಿದೆ. 

ಈ ಜನ್ಮದಲ್ಲಿ ಜ್ಞಾನೋದಯವನ್ನು ಪಡೆಯಲು ನಮಗೆ ಬಲವಾದ ಉದ್ದೇಶವಿದ್ದರೂ, ಅದು ಸುಲಭ ಎಂದು ನಾವು ಭಾವಿಸಬಾರದು, ಏಕೆಂದರೆ ನಾವು ಆರಂಭವಿಲ್ಲದ ಸಮಯದಿಂದ ಬಹಳಷ್ಟು ವಿನಾಶಕಾರಿ ಕ್ರಿಯೆಗಳನ್ನು ಸಂಗ್ರಹಿಸಿರುತ್ತೇವೆ. ತಂತ್ರವು ವೇಗವಾಗಿರಬಹುದು, ಆದರೆ ಇದು ಬಹಳಾ ಕಷ್ಟಕರವಾದ ಮಾರ್ಗವಾಗಿದೆ. ತಾಂತ್ರಿಕ ಮಾರ್ಗವನ್ನು ಅಭ್ಯಾಸ ಮಾಡುವುದು ವಿಮಾನದಂತೆ ವೇಗವಾಗಿದೆ ಎಂದು ನಾವು ಭಾವಿಸಬಾರದು - ಅದು ಅಷ್ಟು ಸುಲಭವಲ್ಲ. ಉದಾಹರಣೆಗೆ, ಜೆಟ್ಸನ್ ಮಿಲರೆಪ ತನ್ನ ಗುರು ಮಾರ್ಪನೊಂದಿಗೆ ಅನೇಕ ಕಷ್ಟಗಳನ್ನು ಅನುಭವಿಸಿದರು - ಗೋಪುರಗಳನ್ನು ನಿರ್ಮಿಸುವುದು, ಹೊಡೆತಗಳನ್ನು ಸಹಿಸುವುದು ಮತ್ತು ಇಂತಹ ಬಹಳಷ್ಟು ದುಃಖಗಳನ್ನು ಅನುಭವಿಸಿದನು. ಈ ಕಾರಣಗಳಿಂದಾಗಿ, ಅವನು ಆ ಜೀವಿತಾವಧಿಯಲ್ಲಿಯೇ ಜ್ಞಾನೋದಯವನ್ನು ಸಾಧಿಸಲಾಯಿತು. ಆದರೆ ಮಿಲರೆಪ ಅನುಭವಿಸಿದ ಕಷ್ಟಗಳ ಒಂದು ಭಾಗವನ್ನೂ ಅನುಭವಿಸಲು ನಾವು ಸಿದ್ಧರಿಲ್ಲ. 

ಈ ಜೀವಿತಾವಧಿಯಲ್ಲಿಯೇ ಜ್ಞಾನೋದಯವನ್ನು ಪಡೆಯುವ ಬಲವಾದ ಉದ್ದೇಶ ನಮಗಿದ್ದರೆ ಮತ್ತು ದೊಡ್ಡ ಕಷ್ಟಗಳನ್ನು ಅನುಭವಿಸಲು ಸಿದ್ಧರಾಗಿದ್ದರೆ, ಸ್ಥಿರವಾಗಿ ಅಭ್ಯಾಸ ಮಾಡಿದರೆ, ನಾವು ವಾಸ್ತವದಲ್ಲಿ ಬುದ್ಧತ್ವವನ್ನು ಪಡೆಯುವ ಅವಕಾಶವಿದೆ. 

ಸಾರಾಂಶ 

ಅಮೂಲ್ಯವಾದ ಮಾನವ ದೇಹದೊಂದಿಗೆ ಜನಿಸಿದ ನಂತರ, ನಾವು ಅದನ್ನು ಧರ್ಮವನ್ನು ಅಭ್ಯಾಸ ಮಾಡಲು ಮತ್ತು ಉತ್ತಮ ಪುನರ್ಜನ್ಮಗಳು, ವಿಮೋಚನೆ ಮತ್ತು ಜ್ಞಾನೋದಯವನ್ನು ಪಡೆಯಲು ಬಳಸಬಹುದು. ಇದಕ್ಕಾಗಿ, ನಾವು ಕ್ರಮವಾದ ಮಾರ್ಗವನ್ನು ಅನುಸರಿಸಬೇಕು. ಇದು ಹತ್ತು ವಿನಾಶಕಾರಿ ಕ್ರಿಯೆಗಳನ್ನು ತಪ್ಪಿಸುವುದು, ಗೊಂದಲಮಯ ಭಾವನೆಗಳಿಂದ ನಮ್ಮನ್ನು ಮುಕ್ತಗೊಳಿಸುವುದು ಮತ್ತು ಸಂಸಾರ ಮತ್ತು ಬೋಧಿಚಿತ್ತ ಗುರಿಯಿಂದ ಮುಕ್ತರಾಗುವ ದೃಢಸಂಕಲ್ಪದೊಂದಿಗೆ, ಕೇಂದ್ರಿಕೃತ ಏಕಾಗ್ರತೆ ಮತ್ತು ಶೂನ್ಯತೆಯ ಪರಿಕಲ್ಪನಾರಹಿತ ಸಾಕ್ಷಾತ್ಕಾರವನ್ನು ಪಡೆಯುವುದನ್ನು ಒಳಗೊಂಡಿರುತ್ತದೆ. 

Top