ಸಾಂಪ್ರದಾಯಿಕ ಕಾಲಾವಧಿಯ ಪ್ರಕಾರ, ಗೌತಮ ಬುದ್ಧ ಎಂದೂ ಕರೆಯಲ್ಪಡುವ ಶಾಕ್ಯಮುನಿ ಬುದ್ಧನು ಕ್ರಿ.ಪೂ 566 ರಿಂದ 485 ರವರಲ್ಲಿ ಮಧ್ಯ-ಉತ್ತರ ಭಾರತದಲ್ಲಿ ವಾಸಿಸುತ್ತಿದ್ದನು. ವಿಭಿನ್ನ ಬೌದ್ಧ ಮೂಲಗಳು ಅವನ ಜೀವನದ ಹಲವಾರು, ವಿಭಿನ್ನ ವೃತ್ತಾಂತಗಳನ್ನು ಒಳಗೊಂಡಿವೆ, ಹೆಚ್ಚಿನ ವಿವರಗಳು ಕಾಲಾನಂತರದಲ್ಲಿ ಕ್ರಮೇಣವಾಗಿ ಮಾತ್ರ ಕಾಣಿಸಿಕೊಳ್ಳುತ್ತವೆ. ಈ ವಿವರಗಳಲ್ಲಿ ಕೆಲವು ನಿಖರತೆಗಳನ್ನು ಖಚಿತಪಡಿಸಿಕೊಳ್ಳುವುದು ಕಷ್ಟ, ಏಕೆಂದರೆ ಮೊದಲ ಬೌದ್ಧ ಸಾಹಿತ್ಯವನ್ನು ಬುದ್ಧನು ಮರಣ ಹೊಂದಿದ ಕೇವಲ ಮೂರು ಶತಮಾನಗಳ ನಂತರ ಬರೆಯಲಾಗಿದೆ. ಆದರೆ, ಕೆಲವು ವಿವರಗಳು ಇತರವುಗಳಿಗಿಂತ ನಂತರ ಲಿಖಿತ ರೂಪದಲ್ಲಿ ಹೊರಹೊಮ್ಮಿದವು ಎಂಬ ಕಾರಣದಿಂದ ಮಾತ್ರಕ್ಕೆ ಅವುಗಳ ಸಿಂಧುತ್ವವನ್ನು ಕಡಿಮೆ ಮಾಡಬಾರದು, ಏಕೆಂದರೆ ಅನೇಕ ವಿಷಯಗಳು ಮೌಖಿಕ ರೂಪದಲ್ಲಿ ಹರಡುತ್ತಲೇ ಇದ್ದಿರಬಹುದು.
ಸಾಮಾನ್ಯವಾಗಿ, ಬುದ್ಧ ಸೇರಿದಂತೆ ಮಹಾನ್ ಬೌದ್ಧ ಗುರುಗಳ ಸಾಂಪ್ರದಾಯಿಕ ಜೀವನ ಚರಿತ್ರೆಗಳನ್ನು ಕೇವಲ ಐತಿಹಾಸಿಕ ದಾಖಲೆಗಳಿಗಾಗಿ ಅಲ್ಲ, ನೀತಿಬೋಧಕ ಉದ್ದೇಶಗಳಿಗಾಗಿಯೂ ಸಂಕಲಿಸಲಾಗಿದೆ. ಹೆಚ್ಚು ನಿರ್ದಿಷ್ಟವಾಗಿ ಹೇಳುವುದಾದರೆ, ಜೀವನ ಚರಿತ್ರೆಗಳನ್ನು ಬೌದ್ಧ ಅನುಯಾಯಿಗಳು ವಿಮೋಚನೆ ಮತ್ತು ಜ್ಞಾನೋದಯದ ಆಧ್ಯಾತ್ಮಿಕ ಮಾರ್ಗವನ್ನು ಅನುಸರಿಸಲು ಕಲಿಸುವ ಮತ್ತು ಪ್ರೇರೇಪಿಸುವ ರೀತಿಯಲ್ಲಿ ರೂಪಿಸಲಾಗಿದೆ. ಬುದ್ಧನ ಜೀವನ ಕಥೆಯಿಂದ ಪ್ರಯೋಜನ ಪಡೆಯಲು, ನಾವು ಅದನ್ನು ಈ ವಿಷಯವಾಗಿ ಅರ್ಥಮಾಡಿಕೊಳ್ಳಬೇಕು ಮತ್ತು ಅದರಿಂದ ನಾವು ಕಲಿಯಬಹುದಾದ ಪಾಠಗಳನ್ನು ವಿಶ್ಲೇಷಿಸಬೇಕು.
ಬುದ್ಧನ ಜೀವನದ ಮೂಲಗಳು
ಬುದ್ಧನ ಜೀವನದ ಆರಂಭಿಕ ಮೂಲಗಳಲ್ಲಿ, ಥೆರವಾದ ಗ್ರಂಥಗಳಲ್ಲಿನ ಮಧ್ಯ-ಉದ್ದದ ಪ್ರವಚನಗಳ ಸಂಗ್ರಹದಿಂದ (ಪಾಲಿ : ಮಜ್ಜಿಮಾ ನಿಕಾಯಾ) ಹಲವಾರು ಪಾಲಿ ಸೂತ್ರಗಳು ಮತ್ತು ಶಿಸ್ತಿನ ಸನ್ಯಾಸತ್ವದ ನಿಯಮಗಳಿಗೆ ಸಂಬಂಧಿಸಿದ ವಿವಿಧ ಹೀನಯಾನ ಶಾಲೆಗಳಿಂದ, ವಿನಯ ಪಠ್ಯಗಳಂತೆ, ಹಲವಾರು ಸೇರಿವೆ. ಆದರೆ, ಈ ಪ್ರತಿಯೊಂದು ಪಠ್ಯವು ಬುದ್ಧನ ಜೀವನ ಕಥೆಯ ತುಣುಕುಗಳನ್ನು ಮಾತ್ರ ನೀಡುತ್ತವೆ.
ಮೊದಲ ವಿಸ್ತೃತ ವಿವರಣೆಯು ಕ್ರಿ.ಪೂ 2 ನೇ ಶತಮಾನದ ಅಂತ್ಯದ ಬೌದ್ಧ ಕಾವ್ಯ ಕೃತಿಗಳಲ್ಲಿ ಕಾಣಿಸಿಕೊಂಡಿತು, ಉದಾಹರಣೆಗೆ ಹಿನಾಯಾನದ ಮಹಾಸಾಂಘಿಕ ಶಾಲೆಯ ಗ್ರೇಟ್ ಮ್ಯಾಟರ್ಸ್ (ಸಂಸ್ಕೃತ - ಮಹಾವಾಸ್ತು). ದಿ ತ್ರೀ ಬ್ಯಾಸ್ಕೆಟ್ ಲೈಕ್ ಸಂಗ್ರಹಗಳ (ಸಂಸ್ಕೃತ - ತ್ರಿಪಿಟಕ, ತ್ರೀ ಬ್ಯಾಸ್ಕೆಟ್ಸ್) ಹೊರಗಿದ್ದ ಈ ಪಠ್ಯವು, ಉದಾಹರಣೆಗೆ, ಬುದ್ಧನು ರಾಜಮನೆತನದಲ್ಲಿ ರಾಜಕುಮಾರನಾಗಿ ಜನಿಸಿದನೆಂಬ ವಿವರವನ್ನು ಸೇರಿಸಿತು. ಅಂತಹ ಮತ್ತೊಂದು ಕಾವ್ಯಾತ್ಮಕ ಕೃತಿಯು ಹಿನಾಯಾನದ ಸರ್ವಾಸ್ತಿವಾದ ಶಾಲೆಯ ಸಾಹಿತ್ಯವಾದ ದಿ ಎಕ್ಸ್ಟೆನ್ಸಿವ್ ಪ್ಲೇ ಸೂತ್ರ (ಸಂಸ್ಕೃತ - ಲಲಿತವಿಸ್ತಾರ ಸೂತ್ರ) ದಲ್ಲಿ ಕಾಣಿಸಿಕೊಂಡಿತು. ಈ ಪಠ್ಯದ ನಂತರದ ಮಹಾಯಾನ ಆವೃತ್ತಿಗಳು ಈ ಹಿಂದಿನ ಆವೃತ್ತಿಯನ್ನು ಎರವಲು ಪಡೆದು ವಿವರಿಸಿದವು, ಉದಾಹರಣೆಗೆ ಶಾಕ್ಯಮುನಿಯು, ಯುಗಗಳ ಹಿಂದೆ ಜ್ಞಾನೋದಯ ಪಡೆದಿದ್ದು, ರಾಜಕುಮಾರ ಸಿದ್ಧಾರ್ಥನಾಗಿ ಹೊರಹೊಮ್ಮಿದನು ಎಂಬುದನ್ನು, ಇತರರಿಗೆ ಜ್ಞಾನೋದಯವನ್ನು ಪಡೆಯುವ ಮಾರ್ಗವನ್ನು ವಿವರಿಸಲು ಸೂಚನೆ ನೀಡಲು ಬಳಸಲಾಯಿತು.
ಅಂತಿಮವಾಗಿ ಈ ಜೀವನಚರಿತ್ರೆಗಳಲ್ಲಿ ಕೆಲವು ದಿ ತ್ರೀ ಬ್ಯಾಸ್ಕೆಟ್ ಲೈಕ್ ಕಲೆಕ್ಷನ್ ನಲ್ಲಿ ಸೇರಿಸಲ್ಪಟ್ಟವು. ಅತ್ಯಂತ ಪ್ರಸಿದ್ಧವಾದದ್ದು ಕವಿ ಅಶ್ವಘೋಷನ ಡೀಡ್ಸ್ ಆಫ್ ದಿ ಬುದ್ಧ (ಸಂಸ್ಕ್ರತ - ಬುದ್ಧಚರಿತ), ಇದನ್ನು 1 ನೇ ಶತಮಾನ CE ಯಲ್ಲಿ ಬರೆಯಲಾಗಿದೆ. ಚಕ್ರಸಂವರ ಸಾಹಿತ್ಯದಂತೆ, ನಂತರದ ತಂತ್ರಗಳಲ್ಲಿಯೂ ಇತರ ಆವೃತ್ತಿಗಳು ಕಾಣಿಸಿಕೊಂಡವು. ಅಲ್ಲಿ, ಶಾಕ್ಯಮುನಿಯು ದೂರಗಾಮಿ ವಿವೇಚನಾತ್ಮಕ ಅರಿವಿನ ಕುರಿತು ಸೂತ್ರಗಳನ್ನು ಬೋಧಿಸುತ್ತಿರುವಂತೆ (ಸಂಸ್ಕ್ರತ - ಪ್ರಜ್ಞಾಪರಮಿತಸೂತ್ರ, ವಿವೇಕ ಸೂತ್ರಗಳ ಪರಿಪೂರ್ಣತೆ) ಬುದ್ಧನು ಏಕಕಾಲದಲ್ಲಿ ವಜ್ರಧಾರನಾಗಿ ಹೊರಹೊಮ್ಮಿದನು ಮತ್ತು ತಂತ್ರಗಳನ್ನು ಕಲಿಸಿದನು ಎಂಬ ವಿವರಣೆಯನ್ನು ನಾವು ಕಾಣಬಹುದು.
ಪ್ರತಿಯೊಂದು ವಿವರಣೆಯಿಂದ, ನಾವು ಏನನ್ನಾದರೂ ಕಲಿಯಬಹುದು ಮತ್ತು ಸ್ಫೂರ್ತಿ ಪಡೆಯಬಹುದು. ಆದರೆ ಮೊದಲಾಗಿ, ಐತಿಹಾಸಿಕ ಬುದ್ಧನನ್ನು ಚಿತ್ರಿಸುವ ಆವೃತ್ತಿಗಳನ್ನು ನೋಡೋಣ.
ಬುದ್ಧನ ಜನನ, ಆರಂಭಿಕ ಜೀವನ ಮತ್ತು ತ್ಯಾಗ
ಆರಂಭಿಕ ವಿವರಣೆಗಳ ಪ್ರಕಾರ, ಶಾಕ್ಯಮುನಿ ಇಂದಿನ ಭಾರತ ಮತ್ತು ನೇಪಾಳದ ನಡುವಿನ ಗಡಿಯಲ್ಲಿರುವ ಕಪಿಲವಸ್ತುವನ್ನು ರಾಜಧಾನಿಯಾಗಿ ಹೊಂದಿದ್ದ ಶಾಕ್ಯ ರಾಜ್ಯದಲ್ಲಿ ಶ್ರೀಮಂತವರ್ಗದ, ಯೋಧ ಕುಟುಂಬದಲ್ಲಿ ಜನಿಸಿದನು. ಶಾಕ್ಯಮುನಿ ರಾಜಮನೆತನದಲ್ಲಿ ರಾಜಕುಮಾರನಾಗಿ ಜನಿಸಿದನೆಂದು ಯಾವುದೇ ಉಲ್ಲೇಖವಿಲ್ಲ, ಅವನ ರಾಜಮನೆತನದ ಜನನ ಮತ್ತು ಸಿದ್ಧಾರ್ಥ ಎಂಬ ಹೆಸರಿನ ವಿವರಣೆಗಳು ನಂತ ಮಾತ್ರವೇ ಕಾಣಿಸಿಕೊಳ್ಳುತ್ತವೆ. ಅವನ ತಂದೆ ಶುದ್ಧೋದನ, ಆದರೆ ಅವನ ತಾಯಿ ಮಾಯಾದೇವಿಯ ಹೆಸರು ನಂತರದ ಆವೃತ್ತಿಗಳಲ್ಲಿ ಮಾತ್ರ ಕಂಡುಬರುತ್ತದೆ, ಹಾಗೆಯೇ ಬುದ್ಧನ ಕನಸಿನಲ್ಲಿ ಬಿಳಿಯಾದ ಆರು ದಂತಗಳ ಆನೆ ತನ್ನ ಪಕ್ಕಕ್ಕೆ ಪ್ರವೇಶಿಸುವ ಅದ್ಭುತ ಗರ್ಭಧಾರಣೆಯ ವಿವರಣೆ ಮತ್ತು ಅವನು ಒಬ್ಬ ಮಹಾನ್ ರಾಜ ಅಥವಾ ಮಹಾನ್ ಋಷಿಯಾಗುವನೆಂದು ಅಸಿತಾ ಮುನಿ ಭವಿಷ್ಯ ನುಡಿದ ವಿವರಣೆಯೂ ಇದೆ. ಇದರ ನಂತರ, ಬುದ್ಧನು ತನ್ನ ತಾಯಿಯಿಂದ, ಕಪಿಲವಸ್ತುವಿನಿಂದ ಸ್ವಲ್ಪ ದೂರದಲ್ಲಿನ ಲುಂಬಿನಿ ತೋಪಿನಲ್ಲಿ ಶುದ್ಧ ಜನನಗೊಂಡಿದ್ದರ ವಿವರಣೆಯೂ ಕಾಣಿಸಿಕೊಂಡಿತು, ಅಲ್ಲಿ ಅವನು ಏಳು ಹೆಜ್ಜೆಗಳನ್ನು ಇಟ್ಟು "ನಾನು ಬಂದಿದ್ದೇನೆ" ಎಂದು ಹೇಳಿದನು, ಜೊತೆಗೆ ಹೆರಿಗೆಯ ಸಮಯದಲ್ಲಿ ಅವನ ತಾಯಿಯ ಮರಣವೂ ಕಂಡುಬಂದಿತು.
ಯುವಕನಾಗಿದ್ದಾಗ, ಬುದ್ಧನು ಆನಂದದಾಯಕ ಜೀವನವನ್ನು ನಡೆಸಿದನು. ಅವನು ಯಶೋಧರ ಎಂಬ ಮಹಿಳೆಯನ್ನು ಮದುವೆಯಾದನು ಮತ್ತು ಅವರಿಬ್ಬರಿಗೂ ರಾಹುಲ ಎಂಬ ಮಗನಿದ್ದನು. 29 ನೇ ವಯಸ್ಸಿನಲ್ಲಿ, ಬುದ್ಧನು ತನ್ನ ಕುಟುಂಬ ಜೀವನ ಮತ್ತು ರಾಜ ಪರಂಪರೆಯನ್ನು ತ್ಯಜಿಸಿದನು ಮತ್ತು ಅಲೆದಾಡುವ ಭಿಕ್ಷುಕ, ಆಧ್ಯಾತ್ಮಿಕ ಅನ್ವೇಷಕನಾದನು.
ಬುದ್ಧನ ತ್ಯಾಗವನ್ನು ಅವನ ಸಮಾಜ ಮತ್ತು ಕಾಲದ ಸಂದರ್ಭದಲ್ಲಿ ನೋಡುವುದು ಮುಖ್ಯ. ಬುದ್ಧನು ಆಧ್ಯಾತ್ಮಿಕ ಅನ್ವೇಷಕನಾಗಲು ಹೊರಟುಹೋದಾಗ, ಅವನು ತನ್ನ ಹೆಂಡತಿ ಮತ್ತು ಮಗುವನ್ನು ಕಷ್ಟ ಮತ್ತು ಬಡತನದ ಜೀವನಕ್ಕೆ ಬಿಟ್ಟುಕೊಡಲಿಲ್ಲ. ಅವರ ಶ್ರೀಮಂತ, ವಿಸ್ತೃತ ಕುಟುಂಬವು ಖಂಡಿತವಾಗಿಯೂ ಅವರನ್ನು ನೋಡಿಕೊಳ್ಳುತ್ತಿತ್ತು. ಬುದ್ಧ ಯೋಧ ಜಾತಿಗೆ ಸೇರಿದವನಾಗಿದ್ದನು, ಅಂದರೆ ಅವನು ಒಂದು ದಿನ ತನ್ನ ಕುಟುಂಬವನ್ನು ಬಿಟ್ಟು ಯುದ್ಧಕ್ಕೆ ಹೋಗಬೇಕಾಗಿತ್ತು, ಇದನ್ನು ಮನುಷ್ಯನ ಕರ್ತವ್ಯವೆಂದು ಒಪ್ಪಿಕೊಳ್ಳಲಾಗಿತ್ತು.
ಬಾಹ್ಯ ಶತ್ರುಗಳ ವಿರುದ್ಧ ಅನಂತವಾಗಿ ಯುದ್ಧಗಳನ್ನು ಮಾಡಬಹುದು, ಆದರೆ ನಿಜವಾದ ಯುದ್ಧವು ನಮ್ಮ ಆಂತರಿಕ ಶತ್ರುಗಳ ವಿರುದ್ಧವಾಗಿರುತ್ತದೆ, ಇದು ಬುದ್ಧ ಹೋರಾಡಲು ಹೋದ ಯುದ್ಧ. ಈ ಉದ್ದೇಶಕ್ಕಾಗಿ, ಬುದ್ಧನು ತನ್ನ ಕುಟುಂಬವನ್ನು ಬಿಟ್ಟು ಹೋಗುವುದು ಆಧ್ಯಾತ್ಮಿಕ ಅನ್ವೇಷಕನ ಕರ್ತವ್ಯ ಎಂದು ಸೂಚಿಸುತ್ತದೆ. ನಮ್ಮ ಆಧುನಿಕ ಜಗತ್ತಿನಲ್ಲಿ, ನಾವು ನಮ್ಮ ಕುಟುಂಬಗಳನ್ನು ಬಿಟ್ಟು ಸನ್ಯಾಸಿಗಳಾಗಬೇಕಾದರೆ, ಅವರನ್ನು ಚೆನ್ನಾಗಿ ನೋಡಿಕೊಳ್ಳಲಾಗುತ್ತದೆ ಎಂಬುದನ್ನು ನಾವು ಖಚಿತಪಡಿಸಿಕೊಳ್ಳಬೇಕು. ಇದರರ್ಥ ನಮ್ಮ ಪಾಲುದಾರರು ಮತ್ತು ಮಕ್ಕಳು ಮಾತ್ರವಲ್ಲ, ನಮ್ಮ ವೃದ್ಧ ಪೋಷಕರೂ ಸಹ. ಬೌದ್ಧರಾಗಿ ನಾವು ನಮ್ಮ ಕುಟುಂಬಗಳನ್ನು ತೊರೆಯಲಿ, ಇಲ್ಲದಿರಲಿ, ಬುದ್ಧನಂತೆ ಭೋಗದ ವ್ಯಸನವನ್ನು ನಿವಾರಿಸುವ ಮೂಲಕ ದುಃಖವನ್ನು ಕಡಿಮೆ ಮಾಡುವುದು ನಮ್ಮ ಕರ್ತವ್ಯ.
ಜನನ, ವೃದ್ಧಾಪ್ಯ, ಅನಾರೋಗ್ಯ, ಸಾವು, ಪುನರ್ಜನ್ಮ, ದುಃಖ ಮತ್ತು ಗೊಂದಲಗಳ ಸ್ವರೂಪವನ್ನು ಅರ್ಥಮಾಡಿಕೊಳ್ಳುವ ಮೂಲಕ ಬುದ್ಧನು ದುಃಖವನ್ನು ಜಯಿಸಲು ಬಯಸುತ್ತಾನೆ. ನಂತರದ ಕಥೆಗಳಲ್ಲಿ, ಬುದ್ಧನನ್ನು ತನ್ನ ರಥ ಚಾಲಕನಾದ ಚನ್ನನು ಅರಮನೆಯಿಂದ ಹೊರಗೆ ಪ್ರಯಾಣಕ್ಕೆ ಕರೆದೊಯ್ಯುತ್ತಾನೆ. ನಗರದಲ್ಲಿ, ಬುದ್ಧನು ಅನಾರೋಗ್ಯ ಪೀಡಿತರು, ವೃದ್ಧರು ಮತ್ತು ಸತ್ತವರು ಮತ್ತು ಒಬ್ಬ ತಪಸ್ವಿಯನ್ನೂ ನೋಡಿದನು, ಮತ್ತು ಚನ್ನನು ಪ್ರತಿಯೊಬ್ಬರ ಬಗ್ಗೆಯೂ ವಿವರಣೆಯನ್ನು ನೀಡುತ್ತಿದ್ದನು. ಈ ರೀತಿಯಾಗಿ, ಬುದ್ಧನು ಪ್ರತಿಯೊಬ್ಬರೂ ಅನುಭವಿಸಬೇಕಾದ ದುಃಖವನ್ನು ಗುರುತಿಸಿದನು ಮತ್ತು ಅದರಿಂದ ಹೊರಬರುವ ಮಾರ್ಗವನ್ನು ಯೋಚಿಸಲು ಪ್ರಯತ್ನಿಸಿದನು.
ಬುದ್ಧನು ತನ್ನ ರಥ ಚಾಲಕನಿಂದ ಆಧ್ಯಾತ್ಮಿಕ ಹಾದಿಯಲ್ಲಿ ಸಹಾಯವನ್ನು ಪಡೆಯುವ ಈ ಪ್ರಸಂಗವು ಭಗವದ್ಗೀತೆಯಲ್ಲಿ ಅರ್ಜುನನಿಗೆ ತನ್ನ ರಥ ಚಾಲಕನಾದ ಕೃಷ್ಣನು ತನ್ನ ಸಂಬಂಧಿಕರ ವಿರುದ್ಧ ಯುದ್ಧ ಮಾಡುವ ಯೋಧನಾಗಿ ತನ್ನ ಕರ್ತವ್ಯದ ಬಗ್ಗೆ ಹೇಳಿದ ಕಥೆಗೆ ಸಮಾನಾಂತರವಾಗಿದೆ. ಬೌದ್ಧ ಮತ್ತು ಹಿಂದೂ ಎರಡೂ ಸಂದರ್ಭಗಳಲ್ಲಿ, ಸತ್ಯವನ್ನು ಕಂಡುಹಿಡಿಯಲು ಪ್ರಯತ್ನಿಸಲು ನಮ್ಮ ಆರಾಮದಾಯಕ ಜೀವನದ ಗೋಡೆಗಳನ್ನು ಮೀರಿ ಹೋಗುವ ಆಳವಾದ ಮಹತ್ವವನ್ನು ನಾವು ನೋಡಬಹುದು. ರಥವು ವಿಮೋಚನೆಗೆ ಕಾರಣವಾಗುವ ಮನಸ್ಸಿನ ವಾಹನವನ್ನು ಪ್ರತಿನಿಧಿಸುತ್ತದೆ ಎಂಬುದನ್ನು ಕಾಣಬಹುದು, ರಥ ಚಾಲಕನ ಮಾತುಗಳು ಪ್ರೇರಕ ಶಕ್ತಿ - ಅದು ವಾಸ್ತವವನ್ನು ಹುಡುಕುವುದಾಗಿರುತ್ತದೆ.
ಬುದ್ಧನ ಅಧ್ಯಯನಗಳು ಮತ್ತು ಜ್ಞಾನೋದಯ
ಬ್ರಹ್ಮಚಾರಿ, ಅಲೆದಾಡುವ ಆಧ್ಯಾತ್ಮಿಕ ಅನ್ವೇಷಕನಾಗಿ, ಬುದ್ಧನು ಇಬ್ಬರು ಶಿಕ್ಷಕರೊಂದಿಗೆ ಮಾನಸಿಕ ಸ್ಥಿರತೆ ಮತ್ತು ನಿರಾಕಾರ ಲೀನತೆಯನ್ನು ಪಡೆಯುವ ವಿಧಾನಗಳನ್ನು ಅಧ್ಯಯನ ಮಾಡಿದನು. ಪರಿಪೂರ್ಣ ಏಕಾಗ್ರತೆಯ ಈ ಆಳವಾದ ಸ್ಥಿತಿಗಳ ಅತ್ಯುನ್ನತ ಮಟ್ಟವನ್ನು ಅವನು ಸಾಧಿಸಲು ಸಾಧ್ಯವಾಯಿತು, ಅದರಲ್ಲಿ ಅವನು ಇನ್ನು ಮುಂದೆ ಘೋರ ದುಃಖ ಅಥವಾ ಸಾಮಾನ್ಯ ಲೌಕಿಕ ಸಂತೋಷವನ್ನು ಅನುಭವಿಸಲಿಲ್ಲ, ಆದರೆ ಅವನು ತೃಪ್ತನಾಗಿರಲಿಲ್ಲ. ಈ ಸ್ಥಿತಿಗಳು, ಈ ಕಳಂಕಿತ ಭಾವನೆಗಳಿಂದ ತಾತ್ಕಾಲಿಕ ಪರಿಹಾರವನ್ನು ಮಾತ್ರ ಒದಗಿಸುತ್ತವೆ, ಶಾಶ್ವತ ಪರಿಹಾರವಲ್ಲ ಎಂಬುದನ್ನು ಅವನು ನೋಡಿದನು; ಅವು ಖಂಡಿತವಾಗಿಯೂ ಅವನು ಜಯಿಸಲು ಪ್ರಯತ್ನಿಸಿದ ಆಳವಾದ, ಸಾರ್ವತ್ರಿಕ ದುಃಖಗಳನ್ನು ತೆಗೆದುಹಾಕಲಿಲ್ಲ. ನಂತರ ಐದು ಸಹಚರರೊಂದಿಗೆ, ಅವನು ತೀವ್ರ ತಪಸ್ಸನ್ನು ಅಭ್ಯಾಸ ಮಾಡಿದನು, ಆದರೆ ಇದು ಸಹ ಅನಿಯಂತ್ರಿತವಾಗಿ ಮರುಕಳಿಸುವ ಪುನರ್ಜನ್ಮ (ಸಂಸಾರ) ಕ್ಕೆ ಸಂಬಂಧಿಸಿದ ಆಳವಾದ ಸಮಸ್ಯೆಗಳನ್ನು ತೆಗೆದುಹಾಕಲಿಲ್ಲ. ನಂತರದ ವೃತ್ತಾಂತಗಳಲ್ಲಿ ಮಾತ್ರ ಬುದ್ಧನು ನೈರಾಂಜನಾ ನದಿಯ ದಡದಲ್ಲಿ ತನ್ನ ಆರು ವರ್ಷಗಳ ಉಪವಾಸವನ್ನು ಮುರಿದ ಘಟನೆ ಕಂಡುಬರುತ್ತದೆ, ಕನ್ಯೆ ಸುಜಾತಾ ಅವನಿಗೆ ಹಾಲಿನ ಅನ್ನದ ಬಟ್ಟಲನ್ನು ಅರ್ಪಿಸಿದಳು.
ನಮಗೆ, ಬುದ್ಧನ ಉದಾಹರಣೆಯು, ಡ್ರಗ್ಸ್ಗಳಂತಹ ಕೃತಕ ವಿಧಾನಗಳನ್ನು ಬಿಡಿ, ನಾವು ಸಂಪೂರ್ಣವಾಗಿ ಶಾಂತವಾಗುವುದು ಅಥವಾ ಧ್ಯಾನದಲ್ಲಿ "ಉಲ್ಲಾಸ" ಪಡುವುದರಿಂದಲೂ ತೃಪ್ತರಾಗಬಾರದು ಎಂಬುದನ್ನು ಸೂಚಿಸುತ್ತದೆ. ಆಳವಾದ ಟ್ರಾನ್ಸ್ನಲ್ಲಿ ಮಗ್ನನಾಗುವುದು, ಅಥವಾ ತೀವ್ರವಾದ ಅಭ್ಯಾಸಗಳಿಂದ ನಮ್ಮನ್ನು ಹಿಂಸಿಸುವುದು ಅಥವಾ ಶಿಕ್ಷಿಸಿಕೊಳ್ಳುವುದು ಸಹ ಪರಿಹಾರವಲ್ಲ. ನಾವು ವಿಮೋಚನೆ ಮತ್ತು ಜ್ಞಾನೋದಯದವರೆಗೆ ಹೋಗಬೇಕು ಮತ್ತು ಈ ಗುರಿಗಳನ್ನು ತಲುಪಲು ಸಾಧ್ಯವಾಗದ ಆಧ್ಯಾತ್ಮಿಕ ವಿಧಾನಗಳಿಂದ ನಾವು ಎಂದಿಗೂ ತೃಪ್ತರಾಗಬಾರದು.
ಬುದ್ಧನು ತಪಸ್ಸನ್ನು ತಿರಸ್ಕರಿಸಿದ ನಂತರ, ಭಯವನ್ನು ಹೋಗಲಾಡಿಸಲು ಕಾಡಿನಲ್ಲಿ ಏಕಾಂಗಿಯಾಗಿ ಧ್ಯಾನಿಸಲು ಹೋದನು. ಎಲ್ಲಾ ಭಯದ ಆಧಾರವೆಂದರೆ ಅಸಾಧ್ಯವಾಗಿ ಅಸ್ತಿತ್ವದಲ್ಲಿರುವ "ನಾನು" ಅನ್ನು ಗ್ರಹಿಸುವುದು ಮತ್ತು ಆನಂದ ಮತ್ತು ಮನರಂಜನೆಗಾಗಿ ನಮ್ಮ ಪ್ರಚೋದಿತ ಹುಡುಕಾಟಕ್ಕೆ ಆಧಾರವಾಗಿರುವ ಸ್ವಾರ್ಥ ಮನೋಭಾವ. ಹೀಗಾಗಿ, ದಿ ವೀಲ್ ಆಫ್ ಶಾರ್ಪ್ ವೆಪನ್ಸ್ನಲ್ಲಿ, 10 ನೇ ಶತಮಾನದ CE ಭಾರತೀಯ ಗುರು ಧರ್ಮರಕ್ಷಿತನು ವಿಷಕಾರಿ ಸಸ್ಯಗಳ ಕಾಡುಗಳಲ್ಲಿ ಅಲೆದಾಡುವ ನವಿಲುಗಳ ಚಿತ್ರವನ್ನು ಬಳಸಿ, ಬೋಧಿಸತ್ವಗಳು ಬಯಕೆ, ಕೋಪ ಮತ್ತು ಮುಗ್ಧತೆಯ ವಿಷಕಾರಿ ಭಾವನೆಗಳನ್ನು ಬಳಸಿಕೊಳ್ಳುವ ಮತ್ತು ಪರಿವರ್ತಿಸುವ ಮೂಲಕ ತಮ್ಮ ಸ್ವಾರ್ಥ ಮನೋಭಾವವನ್ನು ಜಯಿಸಲು ಮತ್ತು ಅಸಾಧ್ಯವಾದ "ನಾನು" ಅನ್ನು ಗ್ರಹಿಸಲು ಸಹಾಯ ಮಾಡುತ್ತಾನೆ ಎಂಬುದನ್ನು ಪ್ರದರ್ಶಿಸಿದನು.
ಹೆಚ್ಚಿನ ಧ್ಯಾನದ ನಂತರ, ಬುದ್ಧನು 35 ನೇ ವಯಸ್ಸಿನಲ್ಲಿ ಸಂಪೂರ್ಣ ಜ್ಞಾನೋದಯವನ್ನು ಪಡೆದನು. ನಂತರದ ವೃತ್ತಾಂತಗಳು, ಇಂದಿನ ಬೋಧಗಯಾದಲ್ಲಿ, ಬುದ್ಧನ ಧ್ಯಾನವನ್ನು ಗೊಂದಲಗೊಳಿಸಲು ಬಹಳಷ್ಟು ಭಯಂಕರ ಮತ್ತು ಪ್ರಲೋಭಕ ನೋಟವನ್ನು ಹೊರಹೊಮ್ಮಿಸುವ ಮೂಲಕ ಬುದ್ಧನ ಜ್ಞಾನೋದಯವನ್ನು ತಡೆಯಲು ಪ್ರಯತ್ನಿಸಿದ, ಅಸೂಯೆಗೊಂಡ ಮಾರ ದೇವತೆಯ ದಾಳಿಗಳನ್ನು ಯಶಸ್ವಿಯಾಗಿ ಹೋರಾಡಿದ ನಂತರ, ಒಂದು ಬೋಧಿ ವೃಕ್ಷದ ಕೆಳಗೆ ಬುದ್ಧ ಜ್ಞಾನೋದಯ ಪಡೆದ ವಿವರಗಳನ್ನು ಒದಗಿಸುತ್ತವೆ.
ಆರಂಭಿಕ ವೃತ್ತಾಂತಗಳಲ್ಲಿ, ಬುದ್ಧನು ಮೂರು ವಿಧದ ಜ್ಞಾನವನ್ನು ಪಡೆಯುವ ಮೂಲಕ ಪೂರ್ಣ ಜ್ಞಾನೋದಯವನ್ನು ಪಡೆದನು: ತನ್ನ ಎಲ್ಲಾ ಹಿಂದಿನ ಜನ್ಮಗಳ ಸಂಪೂರ್ಣ ಜ್ಞಾನ, ಇತರರ ಕರ್ಮ ಮತ್ತು ಪುನರ್ಜನ್ಮಗಳ ಸಂಪೂರ್ಣ ಜ್ಞಾನ ಮತ್ತು ನಾಲ್ಕು ಆರ್ಯ ಸತ್ಯಗಳು. ನಂತರದ ವೃತ್ತಾಂತಗಳು ಜ್ಞಾನೋದಯದೊಂದಿಗೆ, ಅವನು ಸರ್ವಜ್ಞತೆಯನ್ನು ಸಾಧಿಸಿದನು ಎಂದು ವಿವರಿಸುತ್ತವೆ.

ಬೋಧಿಸುವುದು ಮತ್ತು ಬೌದ್ಧ ಸನ್ಯಾಸಿ ಸಮುದಾಯವನ್ನು ಸ್ಥಾಪಿಸುವುದು
ಜ್ಞಾನೋದಯವನ್ನು ಪಡೆದ ನಂತರ, ಬುದ್ಧನು ಅದನ್ನು ಸಾಧಿಸುವ ಮಾರ್ಗವನ್ನು ಇತರರಿಗೆ ಕಲಿಸಲು ಹಿಂಜರಿಯುತ್ತಿದ್ದನು, ಏಕೆಂದರೆ ಯಾರೂ ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಅವನು ಭಾವಿಸಿದನು. ಆದರೆ, ಬ್ರಹ್ಮಾಂಡದ ಸೃಷ್ಟಿಕರ್ತನಾದ ಭಾರತೀಯ ದೇವರು ಬ್ರಹ್ಮ ಮತ್ತು ದೇವತೆಗಳ ರಾಜ ಇಂದ್ರ, ಅವನನ್ನು ಕಲಿಸುವಂತೆ ಬೇಡಿಕೊಂಡರು. ತನ್ನ ವಿನಂತಿಯನ್ನು ಮಾಡುವಾಗ, ಬ್ರಹ್ಮನು ಬುದ್ಧನಿಗೆ ತಾನು ಕಲಿಸಲು ವಿಫಲವಾದರೆ ಜಗತ್ತು ಅಂತ್ಯವಿಲ್ಲದೆ ಬಳಲುತ್ತದೆ ಮತ್ತು ಕನಿಷ್ಠ ಪಕ್ಷ ಕೆಲವರು ಅವನ ಮಾತುಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವೆಂದು ಹೇಳಿದರು.
ಈ ವಿವರವು ಬುದ್ಧನ ಬೋಧನೆಗಳ ಶ್ರೇಷ್ಠತೆಯನ್ನು ಸೂಚಿಸುವ ಒಂದು ವಿಡಂಬನಾತ್ಮಕ ಅಂಶವಾಗಿರಬಹುದು, ಇದು ಅವನ ಕಾಲದ ಸಾಂಪ್ರದಾಯಿಕ ಭಾರತೀಯ ಆಧ್ಯಾತ್ಮಿಕ ಸಂಪ್ರದಾಯಗಳು ನೀಡುವ ವಿಧಾನಗಳನ್ನು ಮೀರಿಸಿದೆ. ಎಲ್ಲರ ದುಃಖವನ್ನು ಶಾಶ್ವತವಾಗಿ ಕೊನೆಗೊಳಿಸುವ ವಿಧಾನಗಳ ಕೊರತೆಯಿಂದಾಗಿ, ಜಗತ್ತಿಗೆ ಬುದ್ಧನ ಬೋಧನೆಗಳು ಬೇಕಾಗುತ್ತವೆ ಎಂಬುದನ್ನು ಅತ್ಯುನ್ನತ ದೇವರುಗಳೇ ಒಪ್ಪಿಕೊಂಡರೆ, ಸಾಮಾನ್ಯ ಜನರಿಗೆ ಬೋಧನೆಗಳು ಎಷ್ಟು ಬೇಕು ಎಂಬುದರ ಬಗ್ಗೆ ಇನ್ನೇನು ಹೇಳಬೇಕು. ಇದಲ್ಲದೆ, ಬೌದ್ಧ ಚಿತ್ರಣದಲ್ಲಿ, ಬ್ರಹ್ಮನು ದುರಹಂಕಾರಿ ಹೆಮ್ಮೆಯನ್ನು ಪ್ರತಿನಿಧಿಸುತ್ತಾನೆ; ಅವನು ಸರ್ವಶಕ್ತ ಸೃಷ್ಟಿಕರ್ತ ಎಂಬ ಅವನ ಸುಳ್ಳು ನಂಬಿಕೆಯು ಈ ಅಸಾಧ್ಯವಾಗಿ ಅಸ್ತಿತ್ವದಲ್ಲಿರುವ "ನಾನು" ಅಸ್ತಿತ್ವದಲ್ಲಿದೆ ಮತ್ತು ಜೀವನದಲ್ಲಿ ಎಲ್ಲವನ್ನೂ ನಿಯಂತ್ರಿಸಬಹುದು ಎಂದು ಯೋಚಿಸುವಲ್ಲಿ ಇರುವ ಗೊಂದಲದ ಸಾರಾಂಶವನ್ನು ಪ್ರತಿನಿಧಿಸುತ್ತದೆ. ಅಂತಹ ನಂಬಿಕೆಯು ಅನಿವಾರ್ಯವಾಗಿ ಹತಾಶೆ ಮತ್ತು ದುಃಖವನ್ನು ತರುತ್ತದೆ. ನಾವು ನಿಜವಾಗಿಯೂ ಹೇಗೆ ಅಸ್ತಿತ್ವದಲ್ಲಿದ್ದೇವೆ ಎಂಬುದರ ಕುರಿತು ಬುದ್ಧನ ಬೋಧನೆಗಳು ಮಾತ್ರ ಈ ನಿಜವಾದ ದುಃಖ ಮತ್ತು ಅದರ ನಿಜವಾದ ಕಾರಣವನ್ನು ನಿಜವಾದ ನಿಲುಗಡೆಗೆ ತರುವ ಮಾರ್ಗವನ್ನು ನೀಡುತ್ತವೆ.
ಬ್ರಹ್ಮ ಮತ್ತು ಇಂದ್ರನ ಕೋರಿಕೆಯನ್ನು ಸ್ವೀಕರಿಸಿ, ಬುದ್ಧ ಸಾರನಾಥಕ್ಕೆ ಹೋದನು ಮತ್ತು ಜಿಂಕೆ ಉದ್ಯಾನವನದಲ್ಲಿ ತನ್ನ ಐದು ಹಿಂದಿನ ಸಹಚರರಿಗೆ ನಾಲ್ಕು ಆರ್ಯ ಸತ್ಯಗಳನ್ನು ಕಲಿಸಿದನು. ಬೌದ್ಧ ಚಿತ್ರಣಗಳಲ್ಲಿ, ಜಿಂಕೆಗಳು ಸೌಮ್ಯತೆಯನ್ನು ಪ್ರತಿನಿಧಿಸುತ್ತವೆ, ಹೀಗಾಗಿ ಬುದ್ಧನು ಸುಖಭೋಗ ಮತ್ತು ಸನ್ಯಾಸತ್ವದ ವಿಪರೀತಗಳನ್ನು ತಪ್ಪಿಸುವ ಸೌಮ್ಯ ವಿಧಾನವನ್ನು ಕಲಿಸುತ್ತಾನೆ.
ಶೀಘ್ರದಲ್ಲೇ, ಹತ್ತಿರದ ವಾರಣಾಸಿಯಿಂದ ಹಲವಾರು ಯುವಕರು ಕಟ್ಟುನಿಟ್ಟಾದ ಬ್ರಹ್ಮಚರ್ಯವನ್ನು ಅನುಸರಿಸಿ ಬುದ್ಧನನ್ನು ಸೇರಿದರು. ಅವರ ಪೋಷಕರು ಸಾಮಾನ್ಯ ಶಿಷ್ಯರಾದರು ಮತ್ತು ಭಿಕ್ಷೆಯೊಂದಿಗೆ ಗುಂಪನ್ನು ಬೆಂಬಲಿಸಲು ಪ್ರಾರಂಭಿಸಿದರು. ಯಾವುದೇ ಸದಸ್ಯರು ಸಾಕಷ್ಟು ತರಬೇತಿ ಪಡೆದ ಮತ್ತು ಅರ್ಹತೆ ಪಡೆದ ತಕ್ಷಣ, ಅವರನ್ನು ಇತರರಿಗೆ ಕಲಿಸಲು ಕಳುಹಿಸಲಾಯಿತು. ಈ ರೀತಿಯಾಗಿ, ಬುದ್ಧನ ಭಿಕ್ಷುಕ ಅನುಯಾಯಿಗಳ ಗುಂಪು ತ್ವರಿತವಾಗಿ ಬೆಳೆಯಿತು ಮತ್ತು ಶೀಘ್ರದಲ್ಲೇ ಅವರು ವಿವಿಧ ಸ್ಥಳಗಳಲ್ಲಿ ನೆಲೆಸಿದರು ಮತ್ತು ವೈಯಕ್ತಿಕ "ಸನ್ಯಾಸಿ" ಸಮುದಾಯಗಳನ್ನು ರಚಿಸಿದರು.
ಬುದ್ಧನು ಈ ಸನ್ಯಾಸಿ ಸಮುದಾಯಗಳನ್ನು ಪ್ರಾಯೋಗಿಕ ಮಾರ್ಗಸೂಚಿಗಳ ಪ್ರಕಾರ ಸಂಘಟಿಸಿದನು. ಸನ್ಯಾಸಿಗಳು, ಎಂಬ ಪದವನ್ನು ಈ ಆರಂಭಿಕ ಹಂತದಲ್ಲಿ ಬಳಸಬಹುದಾದರೆ, ಅಭ್ಯರ್ಥಿಗಳನ್ನು ಸಮುದಾಯಗಳಿಗೆ ಸೇರಲು ಅನುಮತಿಸಬಹುದು, ಆದರೆ ಜಾತ್ಯತೀತ ಅಧಿಕಾರಿಗಳೊಂದಿಗೆ ಘರ್ಷಣೆಯನ್ನು ತಪ್ಪಿಸಲು ಅವರು ಕೆಲವು ನಿರ್ಬಂಧಗಳನ್ನು ಅನುಸರಿಸಬೇಕಾಗಿತ್ತು. ಹೀಗಾಗಿ, ಈ ಸಮಯದಲ್ಲಿ, ಬುದ್ಧನು ಅಪರಾಧಿಗಳು, ಸೈನ್ಯದಂತಹ ರಾಜ ಸೇವೆಯಲ್ಲಿರುವವರು, ಗುಲಾಮಗಿರಿಯಿಂದ ಬಿಡುಗಡೆಯಾಗದ ಗುಲಾಮರು ಮತ್ತು ಕುಷ್ಠರೋಗದಂತಹ ಸಾಂಕ್ರಾಮಿಕ ರೋಗಗಳಿಂದ ಬಳಲುತ್ತಿರುವವರನ್ನು ಸನ್ಯಾಸಿ ಸಮುದಾಯಗಳಿಗೆ ಸೇರಲು ಅನುಮತಿಸಲಿಲ್ಲ. ಇದಲ್ಲದೆ, 20 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯಾರನ್ನೂ ಒಪ್ಪಿಕೊಳ್ಳಲಿಲ್ಲ. ಬುದ್ಧನು ತೊಂದರೆಗಳನ್ನು ತಪ್ಪಿಸಲು ಮತ್ತು ಸಮುದಾಯಗಳು ಮತ್ತು ಧರ್ಮ ಬೋಧನೆಗಳ ಬಗ್ಗೆ ಸಾರ್ವಜನಿಕರ ಗೌರವವನ್ನು ಖಚಿತಪಡಿಸಿಕೊಳ್ಳಲು ಬಯಸಿದನು. ಬುದ್ಧನ ಅನುಯಾಯಿಗಳಾಗಿ, ನಾವು ಸ್ಥಳೀಯ ಪದ್ಧತಿಗಳನ್ನು ಗೌರವಿಸಬೇಕು ಮತ್ತು ಗೌರವಯುತವಾಗಿ ವರ್ತಿಸಬೇಕು ಎಂಬುದನ್ನು ಇದು ತೋರಿಸುತ್ತದೆ, ಇದರಿಂದ ಜನರು ಬೌದ್ಧಧರ್ಮದ ಬಗ್ಗೆ ಉತ್ತಮ ಅಭಿಪ್ರಾಯವನ್ನು ಹೊಂದಿರುತ್ತಾರೆ ಮತ್ತು ಪ್ರತಿಯಾಗಿ ಅದನ್ನು ಗೌರವಿಸುತ್ತಾರೆ.
ಶೀಘ್ರದಲ್ಲೇ, ಬುದ್ಧನು ಬೋಧಗಯಾ ಇದ್ದ ರಾಜ್ಯವಾದ ಮಗಧಕ್ಕೆ ಮರಳಿದನು. ರಾಜ ಬಿಂಬಿಸಾರನು ಅವನನ್ನು ರಾಜಧಾನಿ ನಗರವಾದ ರಾಜಗೃಹಕ್ಕೆ – ಆಧುನಿಕ ದಿನದ ರಾಜಗೀರ್ - ಆಹ್ವಾನಿಸಿದನು, ಅವನು ಅವನ ಪೋಷಕ ಮತ್ತು ಶಿಷ್ಯನಾದನು. ಅಲ್ಲಿ, ಶಾರಿಪುತ್ರ ಮತ್ತು ಮೌದ್ಗಲ್ಯಾಯನ ಕೂಡ ಬುದ್ಧನ ಬೆಳೆಯುತ್ತಿರುವ ಕ್ರಮವನ್ನು ಸೇರಿದರು ಮತ್ತು ಅವನಿಗೆ ಹತ್ತಿರವಾದ ಕೆಲವು ಶಿಷ್ಯಗಳಲ್ಲಿ ಒಬ್ಬರಾದರು.
ಜ್ಞಾನೋದಯವಾದ ಒಂದು ವರ್ಷದೊಳಗೆ, ಬುದ್ಧನು ತನ್ನ ಮನೆಯಾದ ಕಪಿಲವಸ್ತುವಿಗೆ ಮರಳಿದನು, ಅಲ್ಲಿ ಅವನ ಮಗ ರಾಹುಲ ಕ್ರಮವನ್ನು ಸೇರಿದನು. ಬುದ್ಧನ ಮಲಸಹೋದರ, ಸುಂದರವಾದ ನಂದ, ಈಗಾಗಲೇ ಮನೆಯನ್ನು ತೊರೆದು ಸೇರಿಕೊಂಡಿದ್ದನು. ಬುದ್ಧನ ತಂದೆ ರಾಜ ಶುದ್ಧೋದನನು, ಕುಟುಂಬ ವಂಶವು ಕಡಿತಗೊಂಡಿದ್ದಕ್ಕಾಗಿ ತುಂಬಾ ದುಃಖಿತನಾಗಿದ್ದನು ಮತ್ತು ಭವಿಷ್ಯದಲ್ಲಿ, ಒಬ್ಬ ಮಗನು ಸನ್ಯಾಸಿ ಕ್ರಮವನ್ನು ಸೇರಲು ತನ್ನ ಹೆತ್ತವರ ಒಪ್ಪಿಗೆಯನ್ನು ಹೊಂದಿರಬೇಕು ಎಂದು ವಿನಂತಿಸಿದನು. ಬುದ್ಧನು ಸಂಪೂರ್ಣವಾಗಿ ಒಪ್ಪಿದನು. ಈ ವಿವರಣೆಯ ಉದ್ದೇಶವೆಂದರೆ ಬುದ್ಧನು ತನ್ನ ತಂದೆಯ ಮೇಲೆ ಕ್ರೌರ್ಯ ತೋರಿದನೆಂದು ಭಾವಿಸಬಾರದು, ಬದಲಿಗೆ ಬೌದ್ಧಧರ್ಮದ ಬಗ್ಗೆ, ವಿಶೇಷವಾಗಿ ನಮ್ಮ ಸ್ವಂತ ಕುಟುಂಬಗಳಲ್ಲಿ, ದ್ವೇಷವನ್ನು ಸೃಷ್ಟಿಸದಿರುವ ಪ್ರಾಮುಖ್ಯತೆಯನ್ನು ನಾವು ಗಮನಿಸಬೇಕಾಗಿದೆ.
ಬುದ್ಧನು ತನ್ನ ಕುಟುಂಬದೊಂದಿಗೆ ಭೇಟಿಯಾಗುವುದರ ಬಗ್ಗೆ ಸಿಕ್ಕಿದ ನಂತರದ ವಿವರವೆಂದರೆ, ಮೂವತ್ತಮೂರು ದೇವತೆಗಳಿರುವ ಸ್ವರ್ಗಕ್ಕೆ ಅಥವಾ ಕೆಲವು ಮೂಲಗಳ ಪ್ರಕಾರ, ತುಷಿತಾ ಸ್ವರ್ಗಕ್ಕೆ ಪ್ರಯಾಣಿಸಲು ಅವನು ಬಾಹ್ಯ ಶಕ್ತಿಗಳನ್ನು ಬಳಸಿ, ಅಲ್ಲಿ ಮರುಜನ್ಮ ಪಡೆದ ತನ್ನ ತಾಯಿಗೆ ಕಲಿಸಿದನು. ಇದು ತಾಯಿಯ ದಯೆಯನ್ನು ಮೆಚ್ಚುವ ಮತ್ತು ಮರುಪಾವತಿ ಮಾಡುವ ಮಹತ್ವವನ್ನು ಸೂಚಿಸುತ್ತದೆ.
ಬೌದ್ಧ ಸನ್ಯಾಸಿಗಳ ಕ್ರಮದ ಬೆಳವಣಿಗೆ
ಬುದ್ಧನ ಸನ್ಯಾಸಿಗಳ ಆರಂಭಿಕ ಸಮುದಾಯಗಳು ಚಿಕ್ಕದಾಗಿದ್ದವು ಮತ್ತು 20 ಕ್ಕಿಂತ ಹೆಚ್ಚು ಪುರುಷರನ್ನು ಹೊಂದಿರಲಿಲ್ಲ. ಪ್ರತಿಯೊಂದೂ ಸ್ವಾಯತ್ತವಾಗಿತ್ತು, ಸನ್ಯಾಸಿಗಳು ಭಿಕ್ಷೆ ಬೇಡುವ ಸುತ್ತುಗಳಿಗೆ ನಿಗದಿಪಡಿಸಿದ ಗಡಿಗಳನ್ನು ಅನುಸರಿಸಿತು. ಯಾವುದೇ ಭಿನ್ನಾಭಿಪ್ರಾಯವನ್ನು ತಪ್ಪಿಸಲು, ಪ್ರತಿಯೊಂದು ಸಮುದಾಯದ ಕ್ರಮಗಳು ಮತ್ತು ನಿರ್ಧಾರಗಳನ್ನು ಅದರ ಸದಸ್ಯರಲ್ಲಿ ಒಮ್ಮತದ ಮತದಿಂದ ನಿರ್ಧರಿಸಲಾಗುತ್ತಿತ್ತು ಮತ್ತು ಯಾವುದೇ ವ್ಯಕ್ತಿಯನ್ನು ಏಕೈಕ ಅಧಿಕಾರವಾಗಿ ಹೊಂದಿರಲಿಲ್ಲ. ಬುದ್ಧನು ಅವರಿಗೆ ಧರ್ಮ ಬೋಧನೆಗಳನ್ನೇ ಅಧಿಕಾರವಾಗಿ ತೆಗೆದುಕೊಳ್ಳುವಂತೆ ಸೂಚಿಸಿದನು. ಅಗತ್ಯವಿದ್ದರೆ ಸನ್ಯಾಸಿಗಳ ಶಿಸ್ತನ್ನು ಸಹ ಬದಲಾಯಿಸಬಹುದಾಗಿತ್ತು, ಆದರೆ ಯಾವುದೇ ಬದಲಾವಣೆಗಳು, ಒಟ್ಟಾರೆ ಸಮುದಾಯದ ಒಮ್ಮತವನ್ನು ಆಧರಿಸಿರಬೇಕಾಗಿತ್ತು.
ಬುದ್ಧನು, ತ್ರೈಮಾಸಿಕ ಸಭೆಗಳನ್ನು ನಡೆಸುತ್ತಿದ್ದ ಜೈನರಂತಹ ಇತರ ಭಿಕ್ಷುಕ ಆಧ್ಯಾತ್ಮಿಕ ಗುಂಪುಗಳಿಂದ ಕೆಲವು ಪದ್ಧತಿಗಳನ್ನು ಅಳವಡಿಸಿಕೊಳ್ಳಬಹುದು ಎಂದು ರಾಜ ಬಿಂಬಿಸಾರ ಸೂಚಿಸಿದನು. ಈ ಪದ್ಧತಿಯ ಪ್ರಕಾರ, ಆಧ್ಯಾತ್ಮಿಕ ಸಮುದಾಯದ ಸದಸ್ಯರು ಚಂದ್ರನ ಪ್ರತಿ ತ್ರೈಮಾಸಿಕದ ಆರಂಭದಲ್ಲಿ ಬೋಧನೆಗಳನ್ನು ಚರ್ಚಿಸಲು ಒಟ್ಟುಗೂಡುತ್ತಿದ್ದರು. ಬುದ್ಧನು ಒಪ್ಪಿಕೊಂಡನು, ಆ ಕಾಲದ ಪದ್ಧತಿಗಳನ್ನು ಅನುಸರಿಸಲು ಸಲಹೆಗಳಿಗೆ ತಾನು ಮುಕ್ತನೆಂದು ತೋರಿಸಿದನು ಮತ್ತು ಜೈನರ ಪ್ರಕಾರದಂತೆ ಆಧ್ಯಾತ್ಮಿಕ ಸಮುದಾಯಗಳ ಅನೇಕ ಅಂಶಗಳನ್ನು ಮತ್ತು ಅವನ ಬೋಧನೆಗಳ ರಚನೆಯನ್ನು ರೂಪಿಸಿದನು. ಜೈನ ಧರ್ಮದ ಸ್ಥಾಪಕ ಮಹಾವೀರನು ಬುದ್ಧನಿಗಿಂತ ಸುಮಾರು ಅರ್ಧ ಶತಮಾನ ಮೊದಲು ಜೀವಿಸುತ್ತಿದ್ದನು.
ಶಾರಿಪುತ್ರನು ಬುದ್ಧನನ್ನು ಸನ್ಯಾಸಿ ಶಿಸ್ತಿನ ಸಂಹಿತೆಗಾಗಿ ನಿಯಮಗಳನ್ನು ರೂಪಿಸುವಂತೆ ವಿನಂತಿಸಿದನು. ಬುದ್ಧನು ನಿರ್ದಿಷ್ಟ ಸಮಸ್ಯೆಗಳು ಉದ್ಭವಿಸುವವರೆಗೆ ಕಾಯುವುದು ಉತ್ತಮ ಎಂದು ನಿರ್ಧರಿಸಿದನು, ಆಗ ಇದೇ ರೀತಿಯ ಘಟನೆಯ ಪುನರಾವರ್ತನೆಯನ್ನು ತಪ್ಪಿಸಲು ಅವರು ಪ್ರತಿಜ್ಞೆ ಮಾಡಬಹುದು. ಈ ನೀತಿಯನ್ನು ಯಾರಿಗಾದರೂ ಹಾನಿಕಾರಕವಾದ ನೈಸರ್ಗಿಕವಾಗಿವಾದ ವಿನಾಶಕಾರಿ ಕ್ರಿಯೆಗಳು ಮತ್ತು ಕೆಲವು ಸಂದರ್ಭಗಳಲ್ಲಿ ಮತ್ತು ಕೆಲವು ಕಾರಣಗಳಿಂದಾಗಿ ಕೆಲವು ಜನರಿಗೆ ನಿಷೇಧಿಸಲಾದ ನೈತಿಕವಾಗಿ ತಟಸ್ಥವಾದ ಕ್ರಿಯೆಗಳೆರಡಕ್ಕೂ ಸಂಬಂಧಿಸಿದಂತೆ ಅನುಸರಿಸಲಾಯಿತು. ಹೀಗಾಗಿ, ಶಿಸ್ತಿನ ನಿಯಮಗಳು (ವಿನಯ) ಪ್ರಾಯೋಗಿಕವಾಗಿದ್ದವು ಮತ್ತು ಬುದ್ಧನ ಮುಖ್ಯ ಪರಿಗಣನೆಗಳು ಸಮಸ್ಯೆಗಳನ್ನು ತಪ್ಪಿಸುವುದು ಮತ್ತು ಅಪರಾಧವನ್ನು ಉಂಟುಮಾಡದಿರುವುದಾಗಿತ್ತು.
ಶಿಸ್ತಿನ ನಿಯಮಗಳ ಆಧಾರದ ಮೇಲೆ, ಬುದ್ಧನು ನಂತರ ತ್ರೈಮಾಸಿಕ ಸನ್ಯಾಸಿ ಸಭೆಯಲ್ಲಿ ಪ್ರತಿಜ್ಞೆಗಳ ಪಠಣವನ್ನು ಸ್ಥಾಪಿಸಿದನು, ಇಲ್ಲಿ ಸನ್ಯಾಸಿಗಳು ಯಾವುದೇ ಉಲ್ಲಂಘನೆಗಳನ್ನು ಬಹಿರಂಗವಾಗಿ ಒಪ್ಪಿಕೊಳ್ಳುತ್ತಿದ್ದರು. ಅತ್ಯಂತ ಗಂಭೀರ ಉಲ್ಲಂಘನೆಗಳಾಗಿದ್ದಲ್ಲಿ ಸಮುದಾಯದಿಂದ ಹೊರಹಾಕಲಾಗುತ್ತಿತ್ತು, ಇಲ್ಲದಿದ್ದರೆ ಕೇವಲ ನಿರ್ಬಂಧದ ಅವಮಾನವಿತ್ತು. ನಂತರ, ಈ ಸಭೆಗಳು ಎರಡು ತಿಂಗಳಿಗೊಮ್ಮೆ ಮಾತ್ರ ನಡೆಯಲು ಪ್ರಾರಂಭಿಸಿದವು.
ನಂತರ ಬುದ್ಧನು ಮೂರು ತಿಂಗಳ ಮಳೆಗಾಲದ ಏಕಾಂತವಾಸವನ್ನು ಸ್ಥಾಪಿಸಿದನು, ಈ ಸಮಯದಲ್ಲಿ ಸನ್ಯಾಸಿಗಳು ಒಂದೇ ಸ್ಥಳದಲ್ಲಿ ಉಳಿಯುತ್ತಿದ್ದರು ಮತ್ತು ಯಾವುದೇ ರೀತಿಯ ಪ್ರಯಾಣವನ್ನು ತಪ್ಪಿಸುತ್ತಿದ್ದರು. ರಸ್ತೆಗಳು ಪ್ರವಾಹಕ್ಕೆ ಒಳಗಾದಾಗ ಹೊಲಗಳ ಮೂಲಕ ನಡೆಯಬೇಕಾದಾಗ, ಸನ್ಯಾಸಿಗಳು ಬೆಳೆಗಳಿಗೆ ಹಾನಿ ಮಾಡುವುದನ್ನು ತಡೆಯುವುದು ಇದರ ಉದ್ದೇಶವಾಗಿತ್ತು. ಇದು ನೆಲೆಗೊಂಡ ಮಠಗಳ ಸ್ಥಾಪನೆಗೆ ಕಾರಣವಾಯಿತು, ಇದು ಪ್ರಾಯೋಗಿಕವಾಗಿತ್ತು. ಮತ್ತೊಮ್ಮೆ, ಇದು ಸಾಮಾನ್ಯ ಸಮುದಾಯಕ್ಕೆ ಹಾನಿಯಾಗುವುದನ್ನು ತಪ್ಪಿಸಲು ಮತ್ತು ಅವರ ಗೌರವವನ್ನು ಗಳಿಸಲು ಈ ಬೆಳವಣಿಗೆಯು ಉಂಟಾಯಿತು.
ಎರಡನೇ ಮಳೆಗಾಲದ ಏಕಾಂತವಾಸದಿಂದ ಪ್ರಾರಂಭಿಸಿ, ಬುದ್ಧನು ಕೋಶಲ ರಾಜ್ಯದ ರಾಜಧಾನಿಯಾದ ಶ್ರಾವಸ್ತಿಯ ಹೊರಗಿನ ಜೇತವನ ತೋಪಿನಲ್ಲಿ 25 ಬೇಸಿಗೆಗಳನ್ನು ಕಳೆದನು. ಇಲ್ಲಿ, ವ್ಯಾಪಾರಿ ಅನಾಥಪಿಂಡದನು ಬುದ್ಧ ಮತ್ತು ಅವನ ಸನ್ಯಾಸಿಗಳಿಗಾಗಿ ಒಂದು ಮಠವನ್ನು ನಿರ್ಮಿಸಿದನು ಮತ್ತು ರಾಜ ಪ್ರಸೇನಜಿತ್ ಸಮುದಾಯವನ್ನು ಮತ್ತಷ್ಟು ಪ್ರಾಯೋಜಿಸಿದನು. ಜೇತವನದಲ್ಲಿರುವ ಈ ಮಠವು ಬುದ್ಧನ ಜೀವನದಲ್ಲಿನ ಅನೇಕ ಮಹಾನ್ ಘಟನೆಗಳು ನಡೆದ ಜಾಗವಾಗಿತ್ತು, ಅದರಲ್ಲಿ ಅತ್ಯಂತ ಪ್ರಸಿದ್ಧವಾದದ್ದು ಬಹುಶಃ ಆ ಕಾಲದ ಆರು ಪ್ರಮುಖ ಬೌದ್ಧೇತರ ಶಾಲೆಗಳ ನಾಯಕರನ್ನು ಪವಾಡ ಶಕ್ತಿಗಳ ಸ್ಪರ್ಧೆಯಲ್ಲಿ ಸೋಲಿಸುವುದಾಗಿತ್ತು.
ಇತ್ತೀಚಿನ ದಿನಗಳಲ್ಲಿ ನಮ್ಮಲ್ಲಿ ಯಾರಿಗೂ ಪವಾಡದ ಸಾಹಸಗಳನ್ನು ಮಾಡಲು ಸಾಧ್ಯವಾಗದಿದ್ದರೂ, ಬುದ್ಧನು ತನ್ನ ವಿರೋಧಿಗಳನ್ನು ಸೋಲಿಸಲು, ಇತರರ ಮನಸ್ಸುಗಳು ತಾರ್ಕಿಕತೆಗೆ ಮುಚ್ಚಲ್ಪಟ್ಟಾಗ, ನಮ್ಮ ತಿಳುವಳಿಕೆಯ ಸಿಂಧುತ್ವವನ್ನು ಅವರಿಗೆ ಮನವರಿಕೆ ಮಾಡಲು ಉತ್ತಮ ಮಾರ್ಗವೆಂದರೆ ಕ್ರಿಯೆಗಳು ಮತ್ತು ನಡವಳಿಕೆಯ ಮೂಲಕ ನಮ್ಮ ಸಾಕ್ಷಾತ್ಕಾರದ ಮಟ್ಟವನ್ನು ಪ್ರದರ್ಶಿಸುವುದು ಎಂಬುದನ್ನು ಸೂಚಿಸುತ್ತದೆ. ಇಂಗ್ಲಿಷ್ನಲ್ಲಿ "Actions speak louder than words (ಕ್ರಿಯೆಗಳು, ಪದಗಳಿಗಿಂತ ಹೆಚ್ಚು ಪರಿಣಾಮಕಾರಿಯಾಗಿರುತ್ತವೆ)” ಎಂಬ ಹೇಳಿಕೆಯೂ ಇದೆ.
ಸನ್ಯಾಸಿನಿಯರ ಬೌದ್ಧ ಸನ್ಯಾಸತ್ವದ ಸಿದ್ಧಾಂತದ ಸ್ಥಾಪನೆ
ತನ್ನ ಬೋಧನಾ ವೃತ್ತಿಜೀವನದ ನಂತರ, ಬುದ್ಧನು ತನ್ನ ಚಿಕ್ಕಮ್ಮ ಮಹಾಪ್ರಜಾಪತಿಯ ಕೋರಿಕೆಯ ಮೇರೆಗೆ ವೈಶಾಲಿಯಲ್ಲಿ ಸನ್ಯಾಸಿನಿಯರ ಸಮುದಾಯವನ್ನು ಸ್ಥಾಪಿಸಿದನು. ಆರಂಭದಲ್ಲಿ ಅಂತಹ ಸಮುದಾಯವನ್ನು ಪ್ರಾರಂಭಿಸಲು ಅವನಿಗೆ ಇಷ್ಟವಿರಲಿಲ್ಲ, ಆದರೆ ನಂತರ ಸನ್ಯಾಸಿನಿಗಳಿಗೆ ಸನ್ಯಾಸಿಗಳಿಗಿಂತ ಹೆಚ್ಚಿನ ವ್ರತಗಳನ್ನು ಸೂಚಿಸಿದರೆ ಅದು ಸಾಧ್ಯ ಎಂದು ನಿರ್ಧರಿಸಿದನು. ಹಾಗೆ ಮಾಡುವಾಗ, ಬುದ್ಧನು ಮಹಿಳೆಯರು ಪುರುಷರಿಗಿಂತ ಹೆಚ್ಚು ಅಶಿಸ್ತಿನಿಂದ ನಡೆದುಕೊಳ್ಳುತ್ತಾರೆ, ಆದ್ದರಿಂದ ಹೆಚ್ಚಿನ ವ್ರತಗಳನ್ನು ಎತ್ತಿಹಿಡಿಯುವ ಮೂಲಕ ಹೆಚ್ಚಿನ ಪಳಗಿಸುವಿಕೆಯ ಅಗತ್ಯವಿದೆ ಎಂದಲ್ಲ. ಬದಲಾಗಿ, ಮಹಿಳಾ ಗಣವನ್ನು ಸ್ಥಾಪಿಸುವುದರಿಂದ ಕೆಟ್ಟ ಖ್ಯಾತಿ ಮತ್ತು ಅವನ ಬೋಧನೆಗಳಿಗೆ ಅಕಾಲಿಕ ಅಂತ್ಯ ಬರುತ್ತದೆ ಎಂದು ಅವನು ಭಯಪಟ್ಟನು. ಎಲ್ಲಕ್ಕಿಂತ ಹೆಚ್ಚಾಗಿ, ಬುದ್ಧನು ಒಟ್ಟಾರೆ ಸಮುದಾಯದ ಅಗೌರವವನ್ನು ತಪ್ಪಿಸಲು ಬಯಸಿದನು, ಆದ್ದರಿಂದ ಸನ್ಯಾಸಿನಿ ಸಮುದಾಯವು ಯಾವುದೇ ಅನೈತಿಕ ನಡವಳಿಕೆಯ ಬಗೆಗಿರುವ ಅನುಮಾನದಿಂದ ಮುಕ್ತವಾಗಿರಬೇಕಿತ್ತು.
ಆದರೆ, ಒಟ್ಟಾರೆಯಾಗಿ, ಬುದ್ಧನಿಗೆ ನಿಯಮಗಳನ್ನು ರೂಪಿಸಲು ಇಷ್ಟವಿರಲಿಲ್ಲ ಮತ್ತು ಚಿಕ್ಕ ನಿಯಮಗಳು ಅನಗತ್ಯವೆಂದು ಕಂಡುಬಂದಲ್ಲಿ ಅವನ್ನು ರದ್ದುಗೊಳಿಸಲು ಸಿದ್ಧನಿದ್ದನು, ಇದು ಎರಡು ಸತ್ಯಗಳ ಕ್ರಿಯಾತ್ಮಕತೆಯನ್ನು ತೋರಿಸುವ ನೀತಿಯಾಗಿದೆ - ಆಳವಾದ ಸತ್ಯ ಮತ್ತು ಸ್ಥಳೀಯ ಪದ್ಧತಿಗಳಿಗೆ ಅನುಗುಣವಾಗಿ ಸಾಂಪ್ರದಾಯಿಕ ಸತ್ಯಕ್ಕಾಗಿ ಗೌರವ. ಆಳವಾದ ಸತ್ಯದಲ್ಲಿ, ಸನ್ಯಾಸಿನಿಯರ ವ್ಯವಸ್ಥೆಯನ್ನು ಹೊಂದಿರುವುದರಲ್ಲಿ ಯಾವುದೇ ಸಮಸ್ಯೆ ಇಲ್ಲ, ಆ ಕಾಲದ ಸಾಮಾನ್ಯ ಜನರು ಬೌದ್ಧ ಬೋಧನೆಗಳನ್ನು ಕೀಳಾಗಿ ಕಾಣುವುದನ್ನು ತಡೆಯಲು, ಸನ್ಯಾಸಿನಿಯರಿಗೆ ಹೆಚ್ಚಿನ ಶಿಸ್ತಿನ ನಿಯಮಗಳು ಇರಬೇಕಾಗಿತ್ತು. ಆಳವಾದ ಸತ್ಯದಲ್ಲಿ, ಸಮಾಜವು ಏನು ಹೇಳುತ್ತದೆ ಅಥವಾ ಯೋಚಿಸುತ್ತದೆ ಎಂಬುದು ಮುಖ್ಯವಲ್ಲ, ಬದಲಿಗೆ ಸಾಂಪ್ರದಾಯಿಕ ಸತ್ಯದಲ್ಲಿ ಬೌದ್ಧ ಸಮುದಾಯವು ಸಾರ್ವಜನಿಕರ ಗೌರವ ಮತ್ತು ವಿಶ್ವಾಸವನ್ನು ಪಡೆಯುವುದು ಮುಖ್ಯವಾಗಿತ್ತು. ಹೀಗಾಗಿ, ಆಧುನಿಕ ಕಾಲದಲ್ಲಿ ಮತ್ತು ಸಮಾಜಗಳಲ್ಲಿ ಸನ್ಯಾಸಿನಿಯರಿಗೆ ಅಥವಾ ಮಹಿಳೆಯರಿಗೆ ಸಾಮಾನ್ಯವಾಗಿ ಅಥವಾ ಬೌದ್ಧ ಪದ್ಧತಿಗಳ ಪ್ರಕಾರ ಯಾವುದೇ ಅಲ್ಪಸಂಖ್ಯಾತ ಗುಂಪಿಗಳು ಯಾವುದೇ ಪೂರ್ವಾಗ್ರಹಗಳಿಂದ ಪೀಡಿತರಾಗಿರುವುದು ಕಂಡುಬಂದರೆ ಅದು ಬೌದ್ಧಧರ್ಮಕ್ಕೆ ಅಗೌರವವನ್ನು ತರುತ್ತದೆ, ಬುದ್ಧನ ಆತ್ಮವು ಕಾಲದ ರೂಢಿಗಳಿಗೆ ಅನುಗುಣವಾಗಿ ಅವುಗಳನ್ನು ತಿದ್ದುಪಡಿ ಮಾಡುತ್ತಾನೆ.
ಏನೇ ಆಗಲಿ, ಸಹಿಷ್ಣುತೆ ಮತ್ತು ಸಹಾನುಭೂತಿ ಬುದ್ಧನ ಬೋಧನೆಗಳ ಪ್ರಮುಖ ಅಂಶಗಳಾಗಿವೆ. ಉದಾಹರಣೆಗೆ, ಬುದ್ಧನು ಮತ್ತೊಂದು ಧಾರ್ಮಿಕ ಸಮುದಾಯವನ್ನು ಬೆಂಬಲಿಸಿದ ಹೊಸ ಶಿಷ್ಯರನ್ನು ಆ ಸಮುದಾಯವನ್ನು ಬೆಂಬಲಿಸುವುದನ್ನು ಮುಂದುವರಿಸವಂತೆ ಪ್ರೋತ್ಸಾಹಿಸಿದನು. ಬೌದ್ಧ ಕ್ರಮದೊಳಗೆ, ಸದಸ್ಯರು ಪರಸ್ಪರ ಕಾಳಜಿ ವಹಿಸುವಂತೆ ಸೂಚಿಸಿದರು, ಉದಾಹರಣೆಗೆ ಅವರು ಅನಾರೋಗ್ಯದಿಂದ ಬಳಲುತ್ತಿದ್ದರೆ, ಏಕೆಂದರೆ ಅವರೆಲ್ಲರೂ ಬೌದ್ಧ ಕುಟುಂಬದ ಸದಸ್ಯರಾಗಿರುವರು. ಇದು ಎಲ್ಲಾ ಸಾಮಾನ್ಯ ಬೌದ್ಧರಿಗೂ ಇರುವ ಒಂದು ಪ್ರಮುಖ ಆಜ್ಞೆಯಾಗಿದೆ.
ಬುದ್ಧನ ನೀತಿಬೋಧಕ ವಿಧಾನ
ಬುದ್ಧನು ಮೌಖಿಕ ಸೂಚನೆಗಳ ಮೂಲಕ ಮತ್ತು ತನ್ನ ಜೀವಂತ ಉದಾಹರಣೆಯ ಮೂಲಕ ಇತರರಿಗೆ ಕಲಿಸಿದನು. ಮೌಖಿಕ ಸೂಚನೆಗಳ ವಿಷಯದಲ್ಲಿ, ಅವನು ಒಂದು ಗುಂಪಿಗೆ ಅಥವಾ ಒಬ್ಬ ವ್ಯಕ್ತಿಗೆ ಕಲಿಸುತ್ತಿದ್ದಾನೆಯೇ ಎಂಬುದರ ಮೇಲೆ ಎರಡು ವಿಧಾನಗಳನ್ನು ಅನುಸರಿಸಿದನು. ಗುಂಪುಗಳ ಮೊದಲು, ಬುದ್ಧನು ತನ್ನ ಬೋಧನೆಗಳನ್ನು ಪ್ರವಚನದ ರೂಪದಲ್ಲಿ ವಿವರಿಸುತ್ತಿದ್ದನು, ಆಗಾಗ್ಗೆ ಪ್ರತಿಯೊಂದು ಅಂಶವನ್ನು ವಿಭಿನ್ನ ಪದಗಳೊಂದಿಗೆ ಪುನರಾವರ್ತಿಸುತ್ತಿದ್ದನು, ಇದರಿಂದಾಗಿ ಪ್ರೇಕ್ಷಕರು ಅದನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬಹುದಾಗಿತ್ತು ಮತ್ತು ನೆನಪಿಟ್ಟುಕೊಳ್ಳಬಹುದಾಗಿತ್ತು. ಸಾಮಾನ್ಯವಾಗಿ ತನ್ನನ್ನು ಮತ್ತು ತನ್ನ ಸನ್ಯಾಸಿಗಳನ್ನು ಊಟಕ್ಕೆ ಆಹ್ವಾನಿಸಿದ ಮನೆಯಲ್ಲಿ ಊಟದ ನಂತರ ವೈಯಕ್ತಿಕ ಸೂಚನೆಗಳನ್ನು ನೀಡುವಾಗ, ಬುದ್ಧನು ವಿಭಿನ್ನ ವಿಧಾನವನ್ನು ಬಳಸುತ್ತಿದ್ದನು. ಕೇಳುಗರ ದೃಷ್ಟಿಕೋನವನ್ನು ಅವನು ಎಂದಿಗೂ ವಿರೋಧಿಸುತ್ತಿರಲಿಲ್ಲ ಅಥವಾ ಸವಾಲು ಮಾಡುತ್ತಿರಲಿಲ್ಲ, ಬದಲಿಗೆ ಅವರ ಸ್ಥಾನದಲ್ಲಿ ನಿಂತು, ಕೇಳುಗನು ತನ್ನ ಸ್ವಂತ ಆಲೋಚನೆಗಳನ್ನು ಸ್ಪಷ್ಟಪಡಿಸಲು ಸಹಾಯ ಮಾಡುವ ಪ್ರಶ್ನೆಗಳನ್ನು ಕೇಳುತ್ತಿದ್ದನು. ಈ ರೀತಿಯಾಗಿ, ಬುದ್ಧನು ಆ ವ್ಯಕ್ತಿಯನ್ನು, ತನ್ನ ಸ್ಥಾನವನ್ನು ಸುಧಾರಿಸುವಂತೆ ಮತ್ತು ಕ್ರಮೇಣವಾಗಿ ವಾಸ್ತವದ ಆಳವಾದ ತಿಳುವಳಿಕೆಯನ್ನು ಪಡೆಯಲು ಕಾರಣನಾದನು. ಒಂದು ಉದಾಹರಣೆಯೆಂದರೆ, ಶ್ರೇಷ್ಠತೆಯು ಒಬ್ಬ ವ್ಯಕ್ತಿಯು ಜನಿಸಿದ ಜಾತಿಯಿಂದಲ್ಲ, ಬದಲಿಗೆ ವ್ಯಕ್ತಿಯ ಉತ್ತಮ ಗುಣಗಳ ಬೆಳವಣಿಗೆಯಿಂದ ಉಂಟಾಗುತ್ತದೆ ಎಂಬುದನ್ನು ಬುದ್ಧನು ಬ್ರಾಹ್ಮಣ ಜಾತಿಯ ಹೆಮ್ಮೆಯ ಸದಸ್ಯನಿಗೆ ಅರ್ಥಮಾಡಿಕೊಳ್ಳಲು ಕಾರಣವಾದನು.
ಮತ್ತೊಂದು ಉದಾಹರಣೆಯೆಂದರೆ, ತನ್ನ ಸತ್ತ ಮಗುವನ್ನು ಅವನ ಬಳಿಗೆ ತಂದು, ಜೀವಂತಗೊಳಿಸುವಂತೆ ಬೇಡಿಕೊಂಡ ಆಘಾತಗೊಳಗಾದ ತಾಯಿಗಾಗಿ ಇರುವ ಬುದ್ಧನ ಸೂಚನೆಯಾಗಿದೆ. ಬುದ್ಧನು ಅವಳಿಗೆ ಸಾವು ಎಂದಿಗೂ ಭೇಟಿ ನೀಡದ ಮನೆಯಿಂದ ಸಾಸಿವೆ ಕಾಳನ್ನು ತರಲು ಹೇಳಿದನು, ಆಗ ಅವನು ಏನಾದರು ಮಾಡಬಹುದೆಂದು ಹೇಳುತ್ತಾನೆ. ಆ ಮಹಿಳೆ ಮನೆಯಿಂದ ಮನೆಗೆ ಹೋದಳು, ಆದರೆ ಪ್ರತಿ ಮನೆಯಲ್ಲೂ ಯಾರಾದರೂ ಸತ್ತಿದ್ದಾರೆಂದು ತಿಳಿದಳು. ಒಂದು ದಿನ, ಎಲ್ಲರೂ ಸಾಯಲೇಬೇಕು ಎಂದು ಅವಳು ನಿಧಾನವಾಗಿ ಅರಿತುಕೊಂಡಳು ಮತ್ತು ಈ ರೀತಿಯಾಗಿ ಅವಳು ತನ್ನ ಮಗುವನ್ನು ಹೆಚ್ಚು ಶಾಂತಿಯುತ ಮನಸ್ಸಿನಿಂದ ದಹನಗೊಳಿಸಲು ಸಾಧ್ಯವಾಯಿತು.
ವೈಯಕ್ತಿಕ ಮುಖಾಮುಖಿಗಳಲ್ಲಿ ಜನರಿಗೆ ಸಹಾಯ ಮಾಡಲು, ಮುಖಾಮುಖಿಯಾಗದಿರುವುದು ಉತ್ತಮ ಎಂಬುದನ್ನು ಬುದ್ಧನ ಬೋಧನಾ ವಿಧಾನವು ನಮಗೆ ತೋರಿಸುತ್ತದೆ. ಅತ್ಯಂತ ಪರಿಣಾಮಕಾರಿ ಮಾರ್ಗವೆಂದರೆ ಅವರಿಗೆ ಸ್ವತಃ ಯೋಚಿಸಲು ಸಹಾಯ ಮಾಡುವುದು. ಆದರೆ, ಜನರ ಗುಂಪುಗಳಿಗೆ ಕಲಿಸುವಾಗ, ವಿಷಯಗಳನ್ನು ನೇರವಾಗಿ ಮತ್ತು ಸ್ಪಷ್ಟವಾಗಿ ವಿವರಿಸುವುದು ಉತ್ತಮ.
ಬುದ್ಧನ ವಿರುದ್ಧದ ಪಿತೂರಿಗಳು ಮತ್ತು ಭಿನ್ನಾಭಿಪ್ರಾಯಗಳು
ಬುದ್ಧನು ಮರಣ ಹೊಂದುವ ಏಳು ವರ್ಷಗಳ ಮೊದಲು, ಅವನ ಅಸೂಯೆ ಪಟ್ಟ ಸೋದರಸಂಬಂಧಿ ದೇವದತ್ತನು ಬುದ್ಧನ ಸ್ಥಾನವಾದ ಆಸ್ಥಾನದ ಮುಖ್ಯಸ್ಥವನ್ನು ದೋಚಲು ಸಂಚು ರೂಪಿಸಿದನು. ಅದೇ ರೀತಿಯಾಗಿ, ರಾಜಕುಮಾರ ಅಜಾತಶತ್ರುವು ತನ್ನ ತಂದೆ ರಾಜ ಬಿಂಬಿಸಾರನ ಬದಲು, ಮಗಧದ ಆಡಳಿತಗಾರನನ್ನಾಗಲು ಸಂಚು ಹೂಡಿದನು, ಆದ್ದರಿಂದ ಇಬ್ಬರೂ ಒಟ್ಟಾಗಿ ಪಿತೂರಿ ನಡೆಸಿದರು. ಅಜಾತಶತ್ರುವು, ಬಿಂಬಿಸಾರನ ಮೇಲೆ ಕೊಲೆಯತ್ನ ಮಾಡಿದನು, ಪರಿಣಾಮವಾಗಿ, ರಾಜನು ತನ್ನ ಮಗನ ಪರವಾಗಿ ಸಿಂಹಾಸನವನ್ನು ತ್ಯಜಿಸಿದನು. ಅಜಾತಶತ್ರುವಿನ ಯಶಸ್ಸನ್ನು ನೋಡಿ, ದೇವದತ್ತನು ಬುದ್ಧನನ್ನು ಹತ್ಯೆ ಮಾಡಲು ಕೇಳಿಕೊಂಡನು, ಆದರೆ ಅವನನ್ನು ಕೊಲ್ಲುವ ಎಲ್ಲಾ ಪ್ರಯತ್ನಗಳು ವಿಫಲವಾದವು.
ನಂತರ ಹತಾಶೆಗೊಂಡ ದೇವದತ್ತನು ಸನ್ಯಾಸಿಗಳನ್ನು ಬುದ್ಧನಿಂದ ದೂರ ಸೆಳೆಯಲು ಪ್ರಯತ್ನಿಸಿದನು, ಅವನಿಗಿಂತ "ಪವಿತ್ರ" ಎಂದು ಹೇಳಿಕೊಂಡು, ಶಿಸ್ತಿನ ಕಠಿಣ ನಿಯಮಗಳನ್ನು ಪ್ರಸ್ತಾಪಿಸಿದನು. 4 ನೇ ಶತಮಾನದ CE ಥೆರವಾದದ ಗುರು ಬುದ್ಧಘೋಷನ ಶುದ್ಧೀಕರಣ ಮಾರ್ಗ (ಪಾಲಿ: ವಿಶುದ್ಧಿಮಗ್ಗ)ದ ಪ್ರಕಾರ, ದೇವದತ್ತನ ಹೊಸ ಪ್ರಸ್ತಾಪಗಳು ಹೀಗಿದ್ದವು:
- ಚಿಂದಿ ಬಟ್ಟೆಗಳನ್ನು ಒಟ್ಟಿಗೆ ತೇಪೆ ಹಾಕಿದ ನಿಲುವಂಗಿಗಳನ್ನು ಧರಿಸುವುದು
- ಕೇವಲ ಮೂರು ನಿಲುವಂಗಿಗಳನ್ನು ಧರಿಸುವುದು
- ಭಿಕ್ಷೆಗೆ ಮಾತ್ರ ಹೋಗುವುದು ಮತ್ತು ಊಟದ ಆಹ್ವಾನಗಳನ್ನು ಎಂದಿಗೂ ಸ್ವೀಕರಿಸದೆ ಇರುವುದು
- ಯಾವುದೇ ಮನೆಯನ್ನು ತಪ್ಪಿಸದೆ ಭಿಕ್ಷೆಬೇಡುವುದು
- ಅವನು ಸಂಗ್ರಹಿಸಿದ ಭಿಕ್ಷೆಯನ್ನು ಒಂದೇ ಸ್ಥಳದಲ್ಲಿ ಕುಳಿತು ತಿನ್ನುವುದು
- ಅವನ ಭಿಕ್ಷೆಯ ಬಟ್ಟಲಿನಿಂದ ಮಾತ್ರ ತಿನ್ನುವುದು
- ಇತರ ಎಲ್ಲಾ ಆಹಾರವನ್ನು ನಿರಾಕರಿಸುವುದು
- ಕಾಡಿನಲ್ಲಿ ಮಾತ್ರ ವಾಸಿಸುವುದು
- ಮರಗಳ ಕೆಳಗೆ ವಾಸಿಸುವುದು
- ಮನೆಗಳಲ್ಲಿ ಅಲ್ಲ, ತೆರೆದ ಗಾಳಿಯಲ್ಲಿ ವಾಸಿಸುವುದು
- ಹೆಚ್ಚಾಗಿ ಸುಡುಗಾಡು ಮೈದಾನಗಳಲ್ಲಿ ಇರುವುದು
- ಸ್ಥಳದಿಂದ ಸ್ಥಳಕ್ಕೆ ನಿರಂತರವಾಗಿ ಅಲೆದಾಡುವಾಗ, ಸಿಗುವ ಯಾವುದೇ ಸ್ಥಳದಲ್ಲಿ ತೃಪ್ತರಾಗುವುದು
- ಕುಳಿತುಕೊಳ್ಳುವ ಸ್ಥಾನದಲ್ಲಿ ಮಲಗುವುದು, ಎಂದಿಗೂ ನಿದ್ರಿಸದೆ ಮಲಗುವುದು.
ಸನ್ಯಾಸಿಗಳು ಈ ಹೆಚ್ಚುವರಿ ಶಿಸ್ತಿನ ನಿಯಮಗಳನ್ನು ಅನುಸರಿಸಲು ಬಯಸಿದರೆ, ಅದು ಅಕ್ಷರಶಃ ಒಳ್ಳೆಯದು, ಆದರೆ ಎಲ್ಲರೂ ಹಾಗೆ ಮಾಡಲು ಕಡ್ಡಾಯಗೊಳಿಸುವುದು ಅಸಾಧ್ಯ ಎಂದು ಬುದ್ಧ ಹೇಳಿದನು. ಹಲವಾರು ಸನ್ಯಾಸಿಗಳು ದೇವದತ್ತನನ್ನು ಅನುಸರಿಸಲು ಆಯ್ಕೆ ಮಾಡಿಕೊಂಡರು, ಆದ್ದರಿಂದ ತಮ್ಮದೇ ಆದ ಕ್ರಮವನ್ನು ರೂಪಿಸಿಕೊಳ್ಳಲು ಬುದ್ಧನ ಸಮುದಾಯವನ್ನು ಬಿಟ್ಟರು.
ಥೆರವಾದ ಶಾಲೆಯಲ್ಲಿ, ದೇವದತ್ತನು ಸ್ಥಾಪಿಸಿದ ಹೆಚ್ಚುವರಿ ಶಿಸ್ತಿನ ನಿಯಮಗಳನ್ನು "ಆಚರಿಸಿದ ಅಭ್ಯಾಸದ 13 ಶಾಖೆಗಳು" ಎಂದು ಕರೆಯಲಾಗುತ್ತದೆ. ಆಧುನಿಕ ಥೈಲ್ಯಾಂಡ್ನಲ್ಲಿ ಇನ್ನೂ ಕಂಡುಬರುವಂತೆ ಅರಣ್ಯ ಸನ್ಯಾಸಿ ಸಂಪ್ರದಾಯವು ಈ ಅಭ್ಯಾಸದಿಂದ ಹುಟ್ಟಿಕೊಂಡಿದೆ ಎಂದು ತೋರುತ್ತದೆ. ಬುದ್ಧನ ಶಿಷ್ಯ ಮಹಾಕಾಶ್ಯಪ ಈ ಕಠಿಣ ಶಿಸ್ತನ್ನು ಅನುಸರಿಸಿದ ಅತ್ಯಂತ ಪ್ರಸಿದ್ಧ ಸಾಧಕನಾಗಿದ್ದನು, ಅದರಲ್ಲಿ ಹೆಚ್ಚಿನದನ್ನು ಇಂದು ಹಿಂದೂ ಸಂಪ್ರದಾಯದಲ್ಲಿ ಪವಿತ್ರ ಪುರುಷರು, ಸಾಧುಗಳು ಆಚರಿಸುತ್ತಾರೆ. ಅವರ ಅಭ್ಯಾಸವು ಬುದ್ಧನ ಕಾಲದ ಅಲೆದಾಡುವ ಭಿಕ್ಷುಕ ಆಧ್ಯಾತ್ಮಿಕ ಅನ್ವೇಷಕರ ಸಂಪ್ರದಾಯದ ಮುಂದುವರಿಕೆಯಾಗಿದೆ ಎಂದು ತೋರುತ್ತದೆ.
ಮಹಾಯಾನ ಶಾಲೆಗಳು ಅಭ್ಯಾಸದ 12 ಗುಣಲಕ್ಷಣಗಳ ಇದೇ ರೀತಿಯ ಪಟ್ಟಿಯನ್ನು ಹೊಂದಿವೆ. ಈ ಪಟ್ಟಿಯು "ಭಿಕ್ಷೆಗೆ ಹೋಗುವಾಗ ಯಾವುದೇ ಮನೆಯನ್ನು ತಪ್ಪಿಸದಿರುವುದು" ಅನ್ನು ಬಿಟ್ಟುಬಿಡುತ್ತದೆ ಮತ್ತು ಬದಲಿಗೆ "ಕಸದ ಬುಟ್ಟಿಯಲ್ಲಿ ಬಿಸಾಡಲಾದ ನಿಲುವಂಗಿಗಳನ್ನು ಧರಿಸುವುದು" ಎಂಬುದನ್ನು ಸೇರಿಸುತ್ತದೆ, ಆದರೆ "ಭಿಕ್ಷೆಗೆ ಹೋಗುವುದು" ಮತ್ತು "ಒಬ್ಬರ ಭಿಕ್ಷೆಯ ಬಟ್ಟಲಿನಿಂದ ಮಾತ್ರ ತಿನ್ನುವುದು" ಎಂಬುದನ್ನು ಒಂದಾಗಿ ಪರಿಗಣಿಸುತ್ತದೆ. ಈ ಶಿಸ್ತಿನ ಬಹುಪಾಲನ್ನು ಮಹಾಯಾನ ಬೌದ್ಧಧರ್ಮ ಮತ್ತು ಹಿಂದೂ ಧರ್ಮದಲ್ಲಿ ಕಾಣಬಹುದಾಗಿದ್ದು, ಮಹಾನ್ ಸಾಧನೆ ಮಾಡಿದ ತಾಂತ್ರಿಕ ಸಾಧಕರಾದ ಮಹಾಸಿದ್ಧರ ಭಾರತೀಯ ಸಂಪ್ರದಾಯವು ಇದನ್ನು ಅನುಸರಿಸಿತು.
ಸ್ಥಾಪಿತ ಬೌದ್ಧ ಸಂಪ್ರದಾಯದಿಂದ ಬೇರ್ಪಟ್ಟು ಮತ್ತೊಂದು ಕ್ರಮವನ್ನು ರೂಪಿಸುವುದು ಅಥವಾ ಆಧುನಿಕ ಪರಿಭಾಷೆಯಲ್ಲಿ ಬಹುಶಃ ಪ್ರತ್ಯೇಕ ಧರ್ಮ ಕೇಂದ್ರವನ್ನು ರೂಪಿಸುವುದು ಸಮಸ್ಯೆಯಾಗಿರಲಿಲ್ಲ. ಹಾಗೆ ಮಾಡುವುದನ್ನು ಐದು ಘೋರ ಅಪರಾಧಗಳಲ್ಲಿ ಒಂದಾದ "ಸನ್ಯಾಸಿ ಸಮುದಾಯದಲ್ಲಿ ಒಡಕು" ಸೃಷ್ಟಿಸುವಂತೆ ನೋಡಲಾಗಲಿಲ್ಲ. ದೇವದತ್ತನು ಅಂತಹ ಒಡಕನ್ನು ಸೃಷ್ಟಿಸಿದನು, ಏಕೆಂದರೆ ಅವನನ್ನು ಅನುಸರಿಸಿದ ಗುಂಪು ಬುದ್ಧನ ಸನ್ಯಾಸಿ ಸಮುದಾಯದ ಬಗ್ಗೆ ತೀವ್ರ ದ್ವೇಷವನ್ನು ಹೊಂದಿತ್ತು ಮತ್ತು ಅವರನ್ನು ತೀವ್ರವಾಗಿ ಟೀಕಿಸಿತು. ಕೆಲವು ವರದಿಗಳ ಪ್ರಕಾರ, ಈ ಒಡಕಿನ ದುಷ್ಟತನವು ಹಲವಾರು ಶತಮಾನಗಳ ಕಾಲ ಉಳಿದಿತ್ತು.
ಈ ಒಡಕಿನ ವಿವರಣೆಯು ಬುದ್ಧನು ಅತ್ಯಂತ ಸಹಿಷ್ಣು ವ್ಯಕ್ತಿಯಾಗಿದ್ದನು ಮತ್ತು ಮೂಲಭೂತವಾದಿಯಲ್ಲ ಎಂಬುದನ್ನು ತೋರಿಸುತ್ತದೆ. ಅವನ ಅನುಯಾಯಿಗಳು ಅವನು ಅವರಿಗೆ ನಿಗದಿಪಡಿಸಿದ್ದಕ್ಕಿಂತ ಕಠಿಣವಾದ ಶಿಸ್ತು ಸಂಹಿತೆಯನ್ನು ಅಳವಡಿಸಿಕೊಳ್ಳಲು ಬಯಸಿದರೆ, ಅದು ಪರವಾಗಿರಲಿಲ್ಲ; ಮತ್ತು ಅವರಿಗೆ ಅಂತಹ ಯಾವುದೇ ಆಸೆ ಇಲ್ಲದಿದ್ದರೆ, ಅದು ಕೂಡ ಸರಿಯೇ. ಬುದ್ಧನು ಕಲಿಸಿದ್ದನ್ನು ಪಾಲಿಸಲು ಯಾರೂ ಬದ್ಧರಾಗಿರಲಿಲ್ಲ. ಒಬ್ಬ ಸನ್ಯಾಸಿ ಅಥವಾ ಸನ್ಯಾಸಿನಿ ಸನ್ಯಾಸಿಗಳ ಸಮುದಾಯವನ್ನು ಬಿಡಲು ಬಯಸಿದರೆ, ಅದು ಕೂಡ ಸರಿಯಾಗಿತ್ತು. ಆದರೆ, ಅತ್ಯಂತ ವಿನಾಶಕಾರಿ ವಿಷಯವೆಂದರೆ ಬೌದ್ಧ ಸಮುದಾಯವನ್ನು, ವಿಶೇಷವಾಗಿ ಸನ್ಯಾಸಿ ಸಮುದಾಯವನ್ನು, ಎರಡು ಅಥವಾ ಹೆಚ್ಚಿನ ಗುಂಪುಗಳಾಗಿ ವಿಭಜಿಸುವುದು, ಅದು ದ್ವೇಷವನ್ನು ಹುಟ್ಟಿಸುವುದು ಮತ್ತು ಪರಸ್ಪರ ಅಪಖ್ಯಾತಿ ಮತ್ತು ಹಾನಿಯುಂಟು ಮಾಡಲು ಪ್ರಯತ್ನಿಸುವುದು. ನಂತರ ಒಂದು ಬಣವನ್ನು ಸೇರಿ ಅದರ ದ್ವೇಷ ಅಭಿಯಾನದಲ್ಲಿ ಭಾಗವಹಿಸುವುದು ಸಹ ಬಹಳಾ ಹಾನಿಕಾರಕವಾಗಿರುತ್ತದೆ. ಆದರೆ, ಒಂದು ಗುಂಪು ವಿನಾಶಕಾರಿ ಅಥವಾ ಹಾನಿಕಾರಕ ಕ್ರಿಯೆಗಳಲ್ಲಿ ತೊಡಗಿದ್ದರೆ ಅಥವಾ ಹಾನಿಕಾರಕ ಶಿಸ್ತನ್ನು ಅನುಸರಿಸುತ್ತಿದ್ದರೆ, ಆ ಗುಂಪಿಗೆ ಸೇರುವ ಅಪಾಯಗಳ ವಿರುದ್ಧ ಜನರನ್ನು ಎಚ್ಚರಿಸುವುದು ಸಹಾನುಭೂತಿಯ ಉದ್ದೇಶವಾಗಿರುತ್ತದೆ, ಆದರೆ ಅದರ ಉದ್ದೇಶವನ್ನು ಎಂದಿಗೂ ಕೋಪ, ದ್ವೇಷ ಅಥವಾ ಸೇಡು ತೀರಿಸಿಕೊಳ್ಳುವ ಬಯಕೆಯೊಂದಿಗೆ ಬೆರೆಸಬಾರದು.
ಬುದ್ಧನ ಮರಣ
ವಿಮೋಚನೆಯ ಸಾಧನೆಯೊಂದಿಗೆ, ಬುದ್ಧನು ಅನಿಯಂತ್ರಿತವಾದ ಸಾಮಾನ್ಯ ಮರಣವನ್ನು ಅನುಭವಿಸಬಾರದಿತ್ತು, ಆದಾಗ್ಯೂ, 81 ನೇ ವಯಸ್ಸಿನಲ್ಲಿ, ಬುದ್ಧನು ತನ್ನ ಅನುಯಾಯಿಗಳಿಗೆ ಅಶಾಶ್ವತತೆಯನ್ನು ಕಲಿಸುವುದು ಮತ್ತು ತನ್ನ ದೇಹವನ್ನು ತೊರೆಯುವುದು ಪ್ರಯೋಜನಕಾರಿ ಎಂದು ನಿರ್ಧರಿಸಿದನು. ಹಾಗೆ ಮಾಡುವ ಮೊದಲು, ಅವನು ತನ್ನ ಸಹಾಯಕ ಆನಂದನಿಗೆ ಹೆಚ್ಚು ಕಾಲ ಬದುಕಲು ಮತ್ತು ಕಲಿಸಲು ಕೇಳಲು ಅವಕಾಶವನ್ನು ನೀಡಿದನು, ಆದರೆ ಬುದ್ಧನು ನೀಡಿದ ಸುಳಿವು ಆನಂದನಿಗೆ ಅರ್ಥವಾಗಲಿಲ್ಲ. ಬುದ್ಧನು ವಿನಂತಿಸಿದಾಗ ಮಾತ್ರ ಕಲಿಸುತ್ತಾನೆ ಮತ್ತು ಯಾರೂ ಕೇಳದಿದ್ದರೆ ಅಥವಾ ಆಸಕ್ತಿ ಹೊಂದಿಲ್ಲದಿದ್ದರೆ, ಅವನು ಬೇರೆಡೆಗೆ ಹೋಗುತ್ತಾನೆ, ಅಲ್ಲಿ ಅವನು ಹೆಚ್ಚು ಪ್ರಯೋಜನಕಾರಿಯಾಗಬಹುದು ಎಂಬುದನ್ನು ಇದು ತೋರಿಸುತ್ತದೆ. ಶಿಕ್ಷಕನ ಉಪಸ್ಥಿತಿ ಮತ್ತು ಬೋಧನೆಗಳು ವಿದ್ಯಾರ್ಥಿಗಳ ಮೇಲೆ ಅವಲಂಬಿತವಾಗಿರುತ್ತದೆ.
ಕುಶಿನಗರದಲ್ಲಿ, ಚುಂಡ ಎಂಬ ಪೋಷಕನ ಮನೆಯಲ್ಲಿ, ಬುದ್ಧನು ತನಗೆ ಮತ್ತು ಅವನ ಸನ್ಯಾಸಿಗಳಿಗೆ ಅರ್ಪಿಸಿದ ಊಟವನ್ನು ತಿಂದ ನಂತರ ಮಾರಣಾಂತಿಕವಾಗಿ ಅಸ್ವಸ್ಥನಾದನು. ಬುದ್ಧನು ತನ್ನ ಮರಣಶಯ್ಯೆಯಲ್ಲಿದ್ದಾಗ, ತನ್ನ ಸನ್ಯಾಸಿಗಳಿಗೆ ಯಾವುದೇ ಸಂದೇಹಗಳು ಅಥವಾ ಉತ್ತರಿಸಲಾಗದ ಪ್ರಶ್ನೆಗಳಿದ್ದರೆ, ಅವರು ತನ್ನ ಧರ್ಮ ಬೋಧನೆಗಳು ಮತ್ತು ನೈತಿಕ ಶಿಸ್ತನ್ನು ಅವಲಂಬಿಸಬೇಕೆಂದು ಹೇಳಿದನು, ಅಂದಿನಿಂದ ಅದು ಅವರ ಗುರುವಾಗಿತ್ತು. ಎಲ್ಲಾ ಉತ್ತರಗಳನ್ನು ಒದಗಿಸಲು ಯಾವುದೇ ಸಂಪೂರ್ಣ ಅಧಿಕಾರವಿರುವುದಿಲ್ಲವಾದ್ದರಿಂದ, ಪ್ರತಿಯೊಬ್ಬ ವ್ಯಕ್ತಿಯು ಬೋಧನೆಗಳಿಂದ ಸ್ವತಃ ವಿಷಯಗಳನ್ನು ಕಂಡುಹಿಡಿಯಬೇಕು ಎಂದು ಬುದ್ಧನು ಸೂಚಿಸಿದನು. ನಂತರ, ಬುದ್ಧನು ಸಾವನಪ್ಪಿದರು.
ಚುಂಡನು, ತಾನು ಬುದ್ಧನಿಗೆ ವಿಷ ಹಾಕಿದ್ದಾನೆಂದು ಭಾವಿಸಿ ಸಂಪೂರ್ಣವಾಗಿ ವಿಚಲಿತನಾಗಿದ್ದನು, ಆದರೆ ಆನಂದನು ಅವನನ್ನು ಸಮಾಧಾನಪಡಿಸಿದನು, ವಾಸ್ತವದಲ್ಲಿ ಬುದ್ಧನ ಸಾವಿನ ಮೊದಲು ಅವರ ಅಂತಿಮ ಭೋಜನವನ್ನು ಅರ್ಪಿಸಿದ್ದರಿಂದ ಅವನು ದೊಡ್ಡ ಸಕಾರಾತ್ಮಕ ಶಕ್ತಿ ಅಥವಾ "ಅರ್ಹತೆ"ಯನ್ನು ಗಳಿಸಿದ್ದಾನೆ ಎಂದು ಹೇಳಿದನು.
ನಂತರ ಬುದ್ಧನನ್ನು ದಹನ ಮಾಡಲಾಯಿತು, ಮತ್ತು ಅವನ ಚಿತಾಭಸ್ಮವನ್ನು ಸ್ತೂಪಗಳಲ್ಲಿ ಇರಿಸಲಾಯಿತು - ಅವಶೇಷಗಳ ಸ್ಮಾರಕಗಳು – ಇವು ವಿಶೇಷವಾಗಿ ನಾಲ್ಕು ಪ್ರಮುಖ ಬೌದ್ಧ ಯಾತ್ರಾ ಸ್ಥಳಗಳಾದವು:
- ಲುಂಬಿನಿ - ಬುದ್ಧ ಜನಿಸಿದ ಸ್ಥಳ
- ಬೋಧಗಯಾ - ಬುದ್ಧ ಜ್ಞಾನೋದಯವನ್ನು ಪಡೆದ ಸ್ಥಳ
- ಸಾರನಾಥ - ತನ್ನ ಮೊದಲ ಧರ್ಮ ಬೋಧನೆಯನ್ನು ನೀಡಿದ ಸ್ಥಳ
- ಕುಶಿನಗರ - ಅವರು ನಿಧನರಾದ ಸ್ಥಳ.

ಸಾರಾಂಶ
ವಿವಿಧ ಬೌದ್ಧ ಸಂಪ್ರದಾಯಗಳು ಬುದ್ಧನ ಜೀವನದ ವಿಭಿನ್ನ ವೃತ್ತಾಂತಗಳನ್ನು ಕಲಿಸುತ್ತವೆ. ಈ ವ್ಯತ್ಯಾಸಗಳು, ಪ್ರತಿಯೊಂದು ಸಂಪ್ರದಾಯವು ಬುದ್ಧನನ್ನು ಹೇಗೆ ಗ್ರಹಿಸುತ್ತವೆ ಮತ್ತು ಅವನ ಉದಾಹರಣೆಯಿಂದ ನಾವು ಏನು ಕಲಿಯಬಹುದು ಎಂಬುದನ್ನು ಸೂಚಿಸುತ್ತವೆ.
- ಹೀನಯಾನ ಆವೃತ್ತಿಗಳು - ಇವು ಐತಿಹಾಸಿಕ ಬುದ್ಧನ ಬಗ್ಗೆ ಮಾತ್ರ ಮಾತನಾಡುತ್ತವೆ. ಬುದ್ಧನು ಜ್ಞಾನೋದಯವನ್ನು ತಲುಪಲು ತನ್ನ ಮೇಲೆ ಹೇಗೆ ತೀವ್ರವಾಗಿ ಕೆಲಸ ಮಾಡಿದನು ಎಂಬುದನ್ನು ತೋರಿಸುವ ಮೂಲಕ, ಸಾಮಾನ್ಯ ಜನರಾಗಿಯೂ ನಾವು ಅದೇ ರೀತಿ ಮಾಡಬಹುದು ಮತ್ತು ನಾವು ಸ್ವತಃ ಪ್ರಯತ್ನ ಮಾಡಲು ಕಲಿಯುತ್ತೇವೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳುತ್ತೇವೆ.
- ಸಾಮಾನ್ಯ ಮಹಾಯಾನ ಆವೃತ್ತಿಗಳು - ಬುದ್ಧನು ಈಗಾಗಲೇ ಹಲವು ವರ್ಷಗಳ ಹಿಂದೆ ಜ್ಞಾನೋದಯವನ್ನು ಪಡೆದಿರುವನು. 12 ಜ್ಞಾನೋದಯ ಕಾರ್ಯಗಳೊಂದಿಗೆ ಜೀವನವನ್ನು ಪ್ರಕಟಿಸುವ ಮೂಲಕ, ಜ್ಞಾನೋದಯವು ಎಲ್ಲರ ಹಿತದೃಷ್ಟಿಯಿಂದ ಶಾಶ್ವತವಾಗಿ ಕೆಲಸ ಮಾಡುವುದನ್ನು ಒಳಗೊಂಡಿರುತ್ತದೆ ಎಂದು ಅವರು ನಮಗೆ ಕಲಿಸುತ್ತಾನೆ.
- ಅನುತ್ತರಯೋಗ ತಂತ್ರದ ವಿವರಣೆಗಳು - ಬುದ್ಧನು ಶಾಕ್ಯಮುನಿಯಾಗಿ ಏಕಕಾಲದಲ್ಲಿ ಪ್ರಕಟವಾಗಿ, ದೂರಗಾಮಿ ವಿವೇಚನಾತ್ಮಕ ಅರಿವಿನ ಸೂತ್ರಗಳನ್ನು (ಪ್ರಜ್ಞಾಪರಮಿತ ಸೂತ್ರಗಳು) ಬೋಧಿಸುವಂತೆ ಮತ್ತು ವಜ್ರಾಧರ ತಂತ್ರಗಳನ್ನು ಬೋಧಿಸಿದನು. ಇದು, ತಂತ್ರದ ಅಭ್ಯಾಸವು ಶೂನ್ಯತೆಯ ಮಧ್ಯಮಕ ಬೋಧನೆಗಳನ್ನು ಸಂಪೂರ್ಣವಾಗಿ ಆಧರಿಸಿದೆ ಎಂಬುದನ್ನು ಸೂಚಿಸುತ್ತದೆ.
ಹೀಗಾಗಿ, ಬುದ್ಧನ ಜೀವನದ ಪ್ರತಿಯೊಂದು ಆವೃತ್ತಿಗಳಿಂದ ನಾವು ಅನೇಕ ಉಪಯುಕ್ತ ವಿಷಯಗಳನ್ನು ಕಲಿಯಬಹುದು ಮತ್ತು ಅನೇಕ ವಿಭಿನ್ನ ಹಂತಗಳಲ್ಲಿ ಸ್ಫೂರ್ತಿ ಪಡೆಯಬಹುದು.