ಆಧ್ಯಾತ್ಮಿಕ ಶಿಕ್ಷಕರಲ್ಲಿ ನಂಬಿಕೆ ಮತ್ತು ಪೂರ್ಣ ಹೃದಯದ ಬದ್ಧತೆಯನ್ನು ಬೆಳೆಸಿಕೊಳ್ಳುವುದು
ಆಧ್ಯಾತ್ಮಿಕ ಶಿಕ್ಷಕರಿಗಾಗಿ ಪೂರ್ಣ ಹೃದಯದ ಬದ್ಧತೆಯನ್ನು ಬೆಳೆಸಿಕೊಳ್ಳುವುದು ಅತ್ಯಂತ ಕಷ್ಟಕರ ಮತ್ತು ಸೂಕ್ಷ್ಮವಾದ ಬೌದ್ಧ ಪದ್ಧತಿಗಳಲ್ಲಿ ಒಂದಾಗಿದೆ. ಅದನ್ನು ಸರಿಯಾಗಿ ಸ್ಥಾಪಿಸಲು ಮತ್ತು ನಿರ್ವಹಿಸಲು ಹೆಚ್ಚಿನ ಕಾಳಜಿ ಅಗತ್ಯ. ಒಮ್ಮೆ ಉತ್ತಮ ಆಧಾರದ ಮೇಲೆ ಅದನ್ನು ಕೂರಿಸಿದರೆ, ಅದನ್ನು ಕೆಡವಲು ಯಾರಿಂದಲೂ ಸಾಧ್ಯವಿಲ್ಲ. ಸೆರ್ಕಾಂಗ್ ರಿನ್ಪೋಚೆ, ಅವರ ಮತ್ತು ನನ್ನ ನಡುವೆ ಇರುವ ಸಂಬಂಧವು ಇಷ್ಟು ಸ್ಥಿರವಾಗಿರಲು ಅವರು ಬಹಳಾ ಶ್ರಮವಹಿಸಿದರು. ಒಂದು ಸಂಜೆ, ಮುಂಡ್ಗೋಡ್ನಲ್ಲಿ ನಡೆದ ದೊಡ್ಡ ಮೊನ್ಲಾಮ್ ಹಬ್ಬದ ಕೊನೆಯಲ್ಲಿ, ರಿನ್ಪೋಚೆ ಅಲ್ಲಿನ ಅವರ ಆಸ್ತಿಯ ಹಣಕಾಸಿನ ಬಗ್ಗೆ ಸಂಕೀರ್ಣವಾದ ಕಥೆಯನ್ನು ನನಗೆ ಹೇಳಿದರು. ಅವರ ಇತರ ಸಹಾಯಕರು ಇದನ್ನು ಅನಗತ್ಯವೆಂದು ಭಾವಿಸಿದರೂ, ನನಗೆ ಅದು ತಿಳಿದಿರುವುದು ಮುಖ್ಯ ಎಂದು ರಿನ್ಪೋಚೆ ಹೇಳಿದರು. ನಂತರ ನಾನು ಈ ವಿಷಯದ ಬಗ್ಗೆ ಅಸೂಯೆ ಪಟ್ಟವರ ಸುಳ್ಳು ವದಂತಿಗಳನ್ನು ಕೇಳಿದ್ದರೂ ಸಹ, ಅವರ ಸಮಗ್ರತೆಯ ಬಗ್ಗೆ ಅಥವಾ ನನ್ನ ಪೂರ್ಣ ಹೃದಯದ ಬದ್ಧತೆಯ ಬಗ್ಗೆ ನನಗೆ ಎಂದಿಗೂ ಅನುಮಾನ ಬರದಂತೆ ನೋಡಿಕೊಳ್ಳಲು ಅವರು ಬಯಸಿದ್ದರು.
ಆಧ್ಯಾತ್ಮಿಕ ಶಿಕ್ಷಕರಿಗಾಗಿ ಪೂರ್ಣ ಹೃದಯದಿಂದ ಬದ್ಧವಾಗುವ ಭವಿಷ್ಯಕ್ಕೆ, ಶಿಷ್ಯರು ಮತ್ತು ಗುರುಗಳ ನಡುವೆ ಸಂಪೂರ್ಣ ಮತ್ತು ದೀರ್ಘವಾದ ಪರಸ್ಪರ ಪರೀಕ್ಷೆಯ ಅಗತ್ಯವಿರುತ್ತದೆ. ಎಚ್ಚರಿಕೆಯಿಂದ ಪರಿಶೀಲಿಸಿದ ನಂತರ, ಶಿಷ್ಯರು ತಮ್ಮ ಲಾಮಾಗಳನ್ನು ಬುದ್ಧನಂತೆ ನೋಡಬೇಕಾಗಿದ್ದರೂ, ಆಧ್ಯಾತ್ಮಿಕ ಗುರುಗಳು ದೋಷರಹಿತರಾಗಿರುವುದಿಲ್ಲ. ಶಿಷ್ಯರು, ಶಿಕ್ಷಕರು ಏನು ಹೇಳುತ್ತಾರೆ ಎಂಬುದನ್ನು ಯಾವಾಗಲೂ ಪರಿಶೀಲಿಸಬೇಕು ಮತ್ತು ಅಗತ್ಯವಿದ್ದಲ್ಲಿ, ಹೆಚ್ಚಿನ ಸಲಹೆಗಳನ್ನು ನಯವಾಗಿ ನೀಡಬೇಕು. ಯಾವಾಗಲೂ ಜಾಗರೂಕರಾಗಿದ್ದು, ಅವರು ತಮ್ಮ ಲಾಮಾಗಳು ಹೇಳುವ ಅಥವಾ ಮಾಡುವ ವಿಚಿತ್ರವಾದ ಯಾವುದನ್ನಾದರೂ ಗೌರವದಿಂದ ಸರಿಪಡಿಸಬೇಕು.
ಒಮ್ಮೆ, ರಿನ್ಪೋಚೆ ಫ್ರಾನ್ಸ್ನ ನಳಂದ ಮಠದಲ್ಲಿ ಪಾಶ್ಚಿಮಾತ್ಯ ಸನ್ಯಾಸಿಗಳಿಗೆ ಈ ಅಂಶವನ್ನು ಪ್ರದರ್ಶಿಸಲು ಪ್ರಯತ್ನಿಸಿದರು. ಒಂದು ಪ್ರವಚನದ ಸಮಯದಲ್ಲಿ, ಅವರು ಉದ್ದೇಶಪೂರ್ವಕವಾಗಿ ಸಂಪೂರ್ಣವಾಗಿ ತಪ್ಪಾಗಿ ಒಂದು ವಿಷಯವನ್ನು ವಿವರಿಸಿದರು. ಅವರು ಹೇಳಿದ್ದು ಅತಿರೇಕವಾಗಿ ಅಸಂಬದ್ಧವಾಗಿದ್ದರೂ, ಸನ್ಯಾಸಿಗಳೆಲ್ಲರೂ ಗೌರವಯುತವಾಗಿ ಅವರ ಮಾತುಗಳನ್ನು ತಮ್ಮ ನೋಟ್ಬುಕ್ಗಳಲ್ಲಿ ನಕಲು ಮಾಡಿದರು. ಮುಂದಿನ ಅಧಿವೇಶನದಲ್ಲಿ, ರಿನ್ಪೋಚೆ, ಈ ಸನ್ಯಾಸಿಗಳನ್ನು ಗದರಿಸಿ, ಪ್ರವಚನದ ಕೊನೆಯ ಗಂಟೆಯಲ್ಲಿ ಅವರು ಸಂಪೂರ್ಣವಾಗಿ ಹಾಸ್ಯಾಸ್ಪದವಾದ, ತಪ್ಪು ವಿಷಯಗಳನ್ನು ವಿವರಿಸಿದ್ದಾರೆ ಎಂದು ಹೇಳಿದರು. ಏಕೆ ಅವರನ್ನು ಒಬ್ಬರೂ ಪ್ರಶ್ನಿಸಲಿಲ್ಲ? ಸ್ವತಃ ಬುದ್ಧನೇ ಸಲಹೆ ನೀಡಿದಂತೆ, ಒಬ್ಬ ಶಿಕ್ಷಕನು ಹೇಳುವುದನ್ನು ಅವರು ಎಂದಿಗೂ ಕುರುಡಾಗಿ ಮತ್ತು ವಿಮರ್ಶೆಯಿಲ್ಲದೆ ಸ್ವೀಕರಿಸಬಾರದು ಎಂದು ತಿಳಿಸಿದರು. ಮಹಾನ್ ಗುರುಗಳು ಸಹ ಸಾಂದರ್ಭಿಕವಾಗಿ ನಾಲಿಗೆ ತಪ್ಪಿ ಮಾತನಾಡುತ್ತಾರೆ; ಅನುವಾದಕರು ಆಗಾಗ್ಗೆ ತಪ್ಪುಗಳನ್ನು ಮಾಡುತ್ತಾರೆ; ಮತ್ತು ವಿದ್ಯಾರ್ಥಿಗಳು ಯಾವಾಗಲೂ ನಿಖರವಲ್ಲದ ಮತ್ತು ಗೊಂದಲಮಯ ಟಿಪ್ಪಣಿಗಳನ್ನು ತೆಗೆದುಕೊಳ್ಳುತ್ತಾರೆ. ಏನಾದರೂ ವಿಚಿತ್ರವೆಂದು ತೋರಿದರೆ, ಅವರು ಯಾವಾಗಲೂ ಶ್ರೇಷ್ಠ ಪಠ್ಯಗಳಲ್ಲಿರುವ ಪ್ರತಿಯೊಂದು ಅಂಶವನ್ನು ಪ್ರಶ್ನಿಸಬೇಕು ಮತ್ತು ಪರಿಶೀಲಿಸಬೇಕು.
ಶ್ರೇಷ್ಠ ಬೌದ್ಧ ಗುರುಗಳ ಪಠ್ಯಗಳನ್ನೂ ಸಹ ವಿಶ್ಲೇಷಿಸುವುದು ಮತ್ತು ಪ್ರಶ್ನಿಸುವುದು
ವೈಯಕ್ತಿಕವಾಗಿ, ರಿನ್ಪೋಚೆ ಪ್ರಮಾಣಿತ ಬೌದ್ಧ ವ್ಯಾಖ್ಯಾನಗಳನ್ನು ಸಹ ಪ್ರಶ್ನಿಸಿದರು. ಹಾಗೆ ಮಾಡುವಾಗ, ಅವರು ತ್ಸೋಂಗ್ಖಾಪಾದ ಪೂರ್ವನಿದರ್ಶನವನ್ನು ಅನುಸರಿಸಿದರು. ಹದಿನಾಲ್ಕನೇ ಶತಮಾನದ ಈ ಸುಧಾರಕ, ಭಾರತೀಯ ಮತ್ತು ಟಿಬೆಟಿಯನ್ ಗುರುಗಳಿಂದ ಬಂದ ಅನೇಕ ಗೌರವಾನ್ವಿತ ಪಠ್ಯಗಳು ಪರಸ್ಪರ ವಿರುದ್ಧವಾಗಿವೆ ಅಥವಾ ತರ್ಕಬದ್ಧವಲ್ಲದ ಪ್ರತಿಪಾದನೆಗಳನ್ನು ಒಳಗೊಂಡಿವೆ ಎಂದು ಗಮನಿಸಿದರು. ತ್ಸೋಂಗ್ಖಾಪಾ ಈ ಅಂಶಗಳನ್ನು ಬಹಿರಂಗಪಡಿಸಿದರು ಮತ್ತು ಪರಿಶೀಲಿಸಿದರು, ಕಾರಣವನ್ನು ಹಿಡಿದಿಟ್ಟುಕೊಳ್ಳಲಾಗದ ವಿಷಯಗಳನ್ನು ತಿರಸ್ಕರಿಸಿದರು ಅಥವಾ ಹಿಂದೆ ತಪ್ಪಾಗಿ ಅರ್ಥೈಸಿಕೊಂಡಿದ್ದ ಭಾಗಗಳ ಹೊಸ, ಒಳನೋಟವುಳ್ಳ ವ್ಯಾಖ್ಯಾನಗಳನ್ನು ನೀಡಿದರು. ವಿಶಾಲವಾದ ಧರ್ಮಗ್ರಂಥದ ಜ್ಞಾನ ಮತ್ತು ಆಳವಾದ ಧ್ಯಾನ ಅನುಭವ ಹೊಂದಿರುವವರು ಮಾತ್ರ ಅಂತಹ ಹೊಸ ವಿಷಯಗಳನ್ನು ಆವಿಷ್ಕರಿಸಲು ಸಾಧ್ಯ. ಸೆರ್ಕಾಂಗ್ ರಿನ್ಪೋಚೆ ಅವರಲ್ಲಿ ಒಬ್ಬರು.
ಉದಾಹರಣೆಗೆ, ಅವರ ಸಾವಿಗೆ ಮುನ್ನ, ರಿನ್ಪೋಚೆ ನನಗೆ ಕರೆ ಮಾಡಿ ತ್ಸೋಂಗ್ಖಾಪಾ ಅವರ ಅತ್ಯಂತ ಕಷ್ಟಕರವಾದ ತಾತ್ವಿಕ ಪಠ್ಯಗಳಲ್ಲಿ ಒಂದಾದ ‘ದಿ ಎಸೆನ್ಸ್ ಆಫ್ ಎಕ್ಸಲೆಂಟ್ ಎಕ್ಸ್ಪ್ಲನೆಶನ್ ಆಫ್ ಇಂಟರ್ಪ್ರಿಟೇಬಲ್ ಅಂಡ್ ಡೆಫಿನಿಟಿವ್ ಮೀನಿಂಗ್ಸ್’ (ಅರ್ಥೈಸಬಹುದಾದ ಮತ್ತು ನಿರ್ಣಾಯಕ ಅರ್ಥಗಳ ಅತ್ಯುತ್ತಮ ವಿವರಣೆಯ ಸಾರ) (ಡ್ರಾಂಗ್-ಂಗೆಸ್ ಲೆಗ್ಸ್-ಬ್ಶಾದ್ ಸ್ನೈಂಗ್-ಪೋ) ನಿಂದ ಒಂದು ಭಾಗವನ್ನು ತೋರಿಸಿದರು. ರಿನ್ಪೋಚೆ ತಮ್ಮ ದೈನಂದಿನ ಅಭ್ಯಾಸದ ಭಾಗವಾಗಿ ಪ್ರತಿದಿನ ನೆನಪಿನಿಂದ ಈ ನೂರಾರು ಪುಟಗಳ ಗ್ರಂಥವನ್ನು ಪಠಿಸುತ್ತಿದ್ದರು. ಈ ಭಾಗವು ಮನಸ್ಸಿನಿಂದ ಗೊಂದಲವನ್ನು ತೆಗೆದುಹಾಕುವ ಹಂತಗಳನ್ನು ಮತ್ತು ನಿರ್ದಿಷ್ಟವಾಗಿ, ಗೊಂದಲದ "ಬೀಜಗಳು" ಎಂಬ ವಿಷಯವನ್ನು ಒಳಗೊಂಡಿರುತ್ತದೆ. ಪ್ರಮಾಣಿತ ವ್ಯಾಖ್ಯಾನಗಳು ಈ ಬೀಜಗಳನ್ನು ಬದಲಾಗುತ್ತಿರುವ ವಿದ್ಯಮಾನಗಳೆಂದು ವ್ಯಾಖ್ಯಾನಿಸುತ್ತವೆ, ಅವು ಭೌತಿಕವಾದದ್ದಲ್ಲ ಅಥವಾ ಏನನ್ನಾದರೂ ತಿಳಿದುಕೊಳ್ಳುವ ಮಾರ್ಗವಲ್ಲ. ಈ ಅಂಶವನ್ನು ಅರ್ಥೈಸಲು, ನಾನು ಈ ಪದವನ್ನು "ಬೀಜಗಳು" ಎಂಬುದರ ಬದಲಿಗೆ "ಪ್ರವೃತ್ತಿಗಳು" ಎಂದು ಅನುವಾದಿಸುತ್ತಿದ್ದೆ. ತರ್ಕ, ಅನುಭವ ಮತ್ತು ಪಠ್ಯದಿಂದ ಇತರ ಭಾಗಗಳನ್ನು ಉಲ್ಲೇಖಿಸಿ, ಅಕ್ಕಿಯ ಬೀಜವು ಅಕ್ಕಿಯೇ ಎಂದು ರಿನ್ಪೋಚೆ ವಿವರಿಸಿದರು. ಆದ್ದರಿಂದ, ಗೊಂದಲದ ಬೀಜವು ಗೊಂದಲದ "ಕುರುಹು" ಆಗಿರುತ್ತದೆ. ಈ ಕ್ರಾಂತಿಕಾರಿ ವ್ಯಾಖ್ಯಾನವು ಸುಪ್ತಾವಸ್ಥೆಯನ್ನು ಅರ್ಥಮಾಡಿಕೊಳ್ಳುವುದು ಮತ್ತು ಅದರೊಂದಿಗೆ ಹೇಗೆ ಕೆಲಸ ಮಾಡುವುದು ಎಂಬುದರ ಕುರಿತಾದ ಆಳವಾದ ಪರಿಣಾಮಗಳನ್ನು ಹೊಂದಿರುತ್ತದೆ.
ರಿನ್ಪೋಚೆ ಅವರ ಜೀವನ ಶೈಲಿಯ ಸರಳತೆ
ಸೆರ್ಕಾಂಗ್ ರಿನ್ಪೋಚೆ ಅವರ ನವೀನ ಪ್ರತಿಭೆಯ ಹೊರತಾಗಿಯೂ, ಅವರು ಎಲ್ಲಾ ಸಮಯದಲ್ಲೂ ಮತ್ತು ಎಲ್ಲಾ ರೀತಿಯಲ್ಲಿ ನಮ್ರತೆ ಮತ್ತು ನಟನೆಯ ಬಿಡುವುದಾಗಿ ಒತ್ತಿ ಹೇಳಿದರು. ಹೀಗಾಗಿ, ಅವರು ಮುಂಡ್ಗೋಡ್ನಲ್ಲಿರುವ ಅವರ ಮಠದಲ್ಲಿನ ಅತ್ಯುನ್ನತ ಲಾಮಾ ಆಗಿದ್ದರೂ, ರಿನ್ಪೋಚೆ ಆಡಂಬರದ ಭವ್ಯವಾದ ಮನೆಯನ್ನು ನಿರ್ಮಿಸಲಿಲ್ಲ, ಕೇವಲ ಒಂದು ಸರಳ ಗುಡಿಸಲಷ್ಟೆ. ಧರ್ಮಶಾಲಾದಲ್ಲಿರುವ ಅವರ ಮನೆಯೂ ಅತ್ಯಂತ ಸಾಧಾರಣವಾಗಿತ್ತು, ನಾಲ್ಕು ಜನರಿಗೆ ಕೇವಲ ಮೂರು ಕೊಠಡಿಗಳು, ಆಗಾಗ್ಗೆ ಅತಿಥಿಗಳು, ಎರಡು ನಾಯಿಗಳು ಮತ್ತು ಒಂದು ಬೆಕ್ಕು ಇತ್ತು.
ರಿನ್ಪೋಚೆ ತಮ್ಮ ಶ್ರೇಷ್ಠತೆಯ ಯಾವುದೇ ಪ್ರದರ್ಶನವನ್ನು ತಪ್ಪಿಸಿದಂತೆಯೇ, ತಮ್ಮ ಶಿಷ್ಯರು ಕೂಡ ಅವರ ಶ್ರೇಷ್ಠತೆಯನ್ನು ಪ್ರದರ್ಶಿಸುವುದನ್ನು ತಡೆಯಲು ಸಹ ಅವರು ಪ್ರಯತ್ನಿಸಿದನು. ಉದಾಹರಣೆಗೆ, ಹಲವಾರು ಧ್ಯಾನ ಅಭ್ಯಾಸಗಳು ಒಬ್ಬರ ಆಧ್ಯಾತ್ಮಿಕ ಗುರುವಿನೊಂದಿಗಿನ ಸಂಬಂಧದ ಸುತ್ತ ಕೇಂದ್ರೀಕೃತವಾಗಿರುತ್ತದೆ, ಉದಾಹರಣೆಗೆ ಗುರು-ಯೋಗ ಎಂದು ಕರೆಯಲ್ಪಡುವ ವಿಸ್ತಾರವಾದ ದೃಶ್ಯೀಕರಣಗಳನ್ನು ಮಾಡುವುದು ಮತ್ತು ಲಾಮಾ ಅವರ ಸಂಸ್ಕೃತ ಹೆಸರನ್ನು ಹೊಂದಿರುವ ಮಂತ್ರವನ್ನು ಪುನರಾವರ್ತಿಸುವುದು. ಗುರು-ಯೋಗ ಅಭ್ಯಾಸಗಳಲ್ಲಿ, ರಿನ್ಪೋಚೆ ಯಾವಾಗಲೂ ತಮ್ಮ ಶಿಷ್ಯರಿಗೆ ದಲೈ ಲಾಮಾ ಅವರನ್ನು ದೃಶ್ಯೀಕರಿಸಲು ಸೂಚಿಸುತ್ತಿದ್ದರು. ಅವರ ಹೆಸರಿನ ಮಂತ್ರವನ್ನು ಕೇಳಿದಾಗ, ರಿನ್ಪೋಚೆ ಯಾವಾಗಲೂ ತಮ್ಮ ತಂದೆಯ ಹೆಸರನ್ನು ಪುನರಾವರ್ತಿಸಲು ನೀಡುತ್ತಿದ್ದರು. ರಿನ್ಪೋಚೆ ಅವರ ತಂದೆ ಸೆರ್ಕಾಂಗ್ ಡೋರ್ಜೆ-ಚಾಂಗ್, ಇಪ್ಪತ್ತನೇ ಶತಮಾನದ ಆರಂಭದಲ್ಲಿನ ಶ್ರೇಷ್ಠ ವೈದ್ಯರು ಮತ್ತು ಶಿಕ್ಷಕರಲ್ಲಿ ಒಬ್ಬರು. ಅವರು ತಮ್ಮ ಕಾಲದ ಕಾಲಚಕ್ರ ವಂಶಾವಳಿಯ ಧಾರಕರಾಗಿದ್ದರು, ಅಂದರೆ ಅವರು ಮುಂದಿನ ಪೀಳಿಗೆಗೆ ಅದರ ಜ್ಞಾನ ಮತ್ತು ಧ್ಯಾನ ಅನುಭವದ ಸಂಪೂರ್ಣತೆಯನ್ನು ರವಾನಿಸುವ ಜವಾಬ್ದಾರಿಯನ್ನು ಹೊಂದಿರುವ ಗುರುತಿಸಲ್ಪಟ್ಟ ಗುರುಗಳಾಗಿದ್ದರು.
ಎಲ್ಲಾ ದುಂದುಗಾರಿಕೆಯನ್ನು ತಪ್ಪಿಸುವಲ್ಲಿ ಮಹಾತ್ಮ ಗಾಂಧಿಯವರ ಉದಾಹರಣೆಯನ್ನು ಅನುಸರಿಸುವುದು
ರಿನ್ಪೋಚೆ ಅವರ ಸಾಧಾರಣ ಶೈಲಿಯು ಇತರ ಹಲವು ವಿಧಗಳಲ್ಲಿ ಪ್ರಕಟವಾಗುತ್ತಿತ್ತು. ಉದಾಹರಣೆಗೆ, ರಿನ್ಪೋಚೆ ಪ್ರಯಾಣಿಸಿದಾಗ, ಅವರು ಮಹಾತ್ಮ ಗಾಂಧಿಯವರ ಮಾದರಿಯನ್ನು ಅನುಸರಿಸುತ್ತಿದರು. ಬೇರೆ ರೀತಿಯಲ್ಲಿ ಮಾಡುವ ಅವಶ್ಯಕತೆ ಇಲ್ಲದಿದ್ದರೆ, ಭಾರತೀಯ ರೈಲುಗಳಲ್ಲಿ ಮೂರನೇ ದರ್ಜೆಯ ಮೂರನೇ ಹಂತದ ಬೋಗಿಗಳಲ್ಲಿ ಸವಾರಿ ಮಾಡುವಂತೆ ಅವರು ಒತ್ತಾಯಿಸುತ್ತಿದ್ದರು. ದುರ್ವಾಸನೆ ಬೀರುವ ಶೌಚಾಲಯದ ಪಕ್ಕದಲ್ಲಿ ಮಲಗುವುದಾಗಿದ್ದರೂ ಸಹ ಇದು ನಿಜವಾಗಿತ್ತು, ನಾವು ಧರ್ಮಶಾಲಾದಿಂದ ಪಶ್ಚಿಮಕ್ಕೆ ನಮ್ಮ ಮೊದಲ ಪ್ರವಾಸದಲ್ಲಿ ದೆಹಲಿಗೆ ಹೋದಾಗ ಇದು ಸಂಭವಿಸಿತ್ತು. ಈ ಸಾಮಾನ್ಯ ರೀತಿಯಲ್ಲಿ ಪ್ರಯಾಣಿಸುವುದು ಅತ್ಯುತ್ತಮವಾಗಿದೆ ಏಕೆಂದರೆ ಇದು ಸಹಾನುಭೂತಿಯನ್ನು ಬೆಳೆಸಲು ಸಹಾಯ ಮಾಡುತ್ತದೆ ಎಂದು ರಿನ್ಪೋಚೆ ಹೇಳಿದರು. ಮೂರು ವರ್ಗಗಳು ಒಂದೇ ಸಮಯದಲ್ಲಿ ಗಮ್ಯಸ್ಥಾನವನ್ನು ತಲುಪುತ್ತವೆ, ಹಾಗಾದರೆ ಹಣವನ್ನು ಏಕೆ ವ್ಯರ್ಥ ಮಾಡಬೇಕು? ಪ್ರಥಮ ದರ್ಜೆ ರೈಲು ಟಿಕೆಟ್ಗಳ ಮೂಲಕ ಅಥವಾ ಅವರನ್ನು ಅಲಂಕಾರಿಕ ದುಬಾರಿ ರೆಸ್ಟೋರೆಂಟ್ಗಳಿಗೆ ಕರೆದೊಯ್ಯುವ ಮೂಲಕ ಜನರು ಅವರ ಮೇಲೆ ಹಣವನ್ನು ವ್ಯರ್ಥ ಮಾಡುವುದನ್ನು ರಿನ್ಪೋಚೆ ನಿಜವಾಗಿಯೂ ಇಷ್ಟಪಡುತ್ತಿರಲಿಲ್ಲ.
ಒಮ್ಮೆ, ರಿನ್ಪೋಚೆ ಸ್ಪಿತಿಯಿಂದ ಧರ್ಮಶಾಲಾಗೆ ಹಿಂತಿರುಗುತ್ತಿದ್ದಾಗ, ನಾನು ಮತ್ತು ಇತರ ಹಲವಾರು ಶಿಷ್ಯರು ಇಂಡಿಯನ್ ಬಜಾರ್ನಲ್ಲಿ ಅವರನ್ನು ಸ್ವಾಗತಿಸಲು ಕಾಯುತ್ತಿದ್ದೆವು. ರಿನ್ಪೋಚೆ ಇಲ್ಲದ ಅನೇಕ ಕಾರುಗಳು ಮತ್ತು ಬಸ್ಗಳು ಹೋದ ನಂತರ, ಒಂದು ಕೊಳಕಾದ ಹಳೆಯ ಟ್ರಕ್ ಮಾರುಕಟ್ಟೆ ಸ್ಥಳಕ್ಕೆ ಬಂದಿತು. ಸೆರ್ಕಾಂಗ್ ರಿನ್ಪೋಚೆ ಟ್ರಕ್ನ ಕಿಕ್ಕಿರಿದ ಕ್ಯಾಬ್ನಲ್ಲಿ ಕೈಯಲ್ಲಿ ಪ್ರಾರ್ಥನಾ ಮಣಿಗಳನ್ನು ಹಿಡಿದು ಕುಳಿತಿದ್ದರು. ಅವರು ಮತ್ತು ಅವರ ಸಹಾಯಕರು ಸೌಕರ್ಯ ಅಥವಾ ನೋಟದ ಬಗ್ಗೆ ಕಾಳಜಿ ವಹಿಸದೆ, ಈ ಸಾರಿಗೆಯಲ್ಲಿ ಸ್ಪಿತಿಯಿಂದ ಮೂರು ದಿನಗಳ ಕಾಲ ಸವಾರಿ ಮಾಡಿದ್ದರು.
ರಿನ್ಪೋಚೆ ಮುಂಡ್ಗೋಡ್ನಲ್ಲಿ ನಡೆದ ಮಹಾ ಮೊನ್ಲಾಮ್ ಉತ್ಸವದಿಂದ ನನ್ನೊಂದಿಗೆ ಧರ್ಮಶಾಲಾಕ್ಕೆ ಮತ್ತು ತನ್ನ ಸಹಾಯಕರೊಂದಿಗೆ ಹಿಂತಿರುಗುತ್ತಿದ್ದಾಗ, ನಾವು ಪೂನಾದಲ್ಲಿ ರೈಲಿಗಾಗಿ ದಿನವಿಡೀ ಕಾಯಬೇಕಾಯಿತು. ಸ್ಥಳೀಯ ಟಿಬೆಟಿಯನ್ ಸ್ವೆಟರ್ ಮಾರಾಟಗಾರ ನಮಗೆ ಬಳಸಲು ನೀಡಿದ್ದ ಅತ್ಯಂತ ಗದ್ದಲದ ಮತ್ತು ಬಿಸಿಯಾದ ಮೂರನೇ ದರ್ಜೆಯ ಹೋಟೆಲ್ ಕೋಣೆಯಲ್ಲಿ ಅವರು ಸಂತೋಷದಿಂದ ಉಳಿದರು. ಭಾರತದಲ್ಲಿ ಪ್ರಯಾಣಿಸುವಾಗ ರಾತ್ರಿಯ ಬಸ್ಗಳನ್ನು ತೆಗೆದುಕೊಳ್ಳುವಂತೆ ರಿನ್ಪೋಚೆ ಆಗಾಗ್ಗೆ ಸೂಚಿಸುತ್ತಿದ್ದರು, ಏಕೆಂದರೆ ಅವು ಅಗ್ಗ ಮತ್ತು ಸುಲಭವಾಗಿದ್ದವು. ಕಿಕ್ಕಿರಿದ ಬಸ್ ನಿಲ್ದಾಣಗಳಲ್ಲಿ ಕಾಯಲು ಅವರಿಗೆ ಎಂದಿಗೂ ಮನಸ್ಸಿರಲಿಲ್ಲ. ತಮ್ಮನ್ನು ತಾವು ಕಾರ್ಯನಿರತವಾಗಿರಿಸಲು ಸಾಕಷ್ಟು ಧ್ಯಾನ ಅಭ್ಯಾಸಗಳಿವೆ ಎಂದು ಅವರು ನಮಗೆ ಹೇಳಿದರು. ಅವರ ಸುತ್ತಲಿನ ಶಬ್ದ, ಅವ್ಯವಸ್ಥೆ ಮತ್ತು ಕೊಳಕು ಅವರ ಏಕಾಗ್ರತೆಯನ್ನು ಎಂದಿಗೂ ತೊಂದರೆಗೊಳಿಸಲಿಲ್ಲ.
ರಿನ್ಪೋಚೆ ಎಂದಿಗೂ ಒಂದೇ ಸ್ಥಳದಲ್ಲಿ ಹೆಚ್ಚು ಕಾಲ ಇರುತ್ತಿರಲಿಲ್ಲ, ಆದರೆ ಆಗಾಗ್ಗೆ ಸುತ್ತಾಡುತ್ತಿದ್ದರು. ಬಾಂಧವ್ಯವನ್ನು ಹೋಗಲಾಡಿಸಲು ಇದು ಒಳ್ಳೆಯದು ಎಂದು ಅವರು ಹೇಳುತ್ತಿದ್ದರು. ಹೀಗಾಗಿ, ಪ್ರವಾಸದಲ್ಲಿರುವಾಗ, ನಾವು ಒಂದು ಮನೆಯಲ್ಲಿ ಕೆಲವು ದಿನಗಳಿಗಿಂತ ಹೆಚ್ಚು ಕಾಲ ಇರುತ್ತಿರಲಿಲ್ಲ, ಏಕೆಂದರೆ ನಾವು ನಮ್ಮ ಸ್ವಾಗತವನ್ನು ಮೀರಿ, ನಮ್ಮ ಆತಿಥೇಯರಿಗೆ ಹೊರೆಯಾಗುತ್ತೇವೆ. ಹಿರಿಯ ಟಿಬೆಟಿಯನ್ ಸನ್ಯಾಸಿಗಳು ಗುರುಗಳಾಗಿರುವ ಬೌದ್ಧ ಕೇಂದ್ರದಲ್ಲಿ ನಾವು ತಂಗಿದಾಗಲೆಲ್ಲಾ, ರಿನ್ಪೋಚೆ ಆ ಸನ್ಯಾಸಿಯನ್ನು ತಮ್ಮ ಆತ್ಮೀಯ ಸ್ನೇಹಿತರಂತೆ ಪರಿಗಣಿಸುತ್ತಿದ್ದರು. ಅವರು ತಮ್ಮ ಹೃದಯಪೂರ್ವಕ ಸಂಬಂಧಗಳನ್ನು ಕೇವಲ ಒಬ್ಬ ವಿಶೇಷ ವ್ಯಕ್ತಿಗೆ ಎಂದಿಗೂ ಸೀಮಿತಗೊಳಿಸಲಿಲ್ಲ.
ತನ್ನ ವೈಯಕ್ತಿಕ ಅಭ್ಯಾಸವನ್ನು ಖಾಸಗಿಯಾಗಿಟ್ಟುಕೊಳ್ಳುವುದು
ಜನರು ತಮ್ಮ ಅಭ್ಯಾಸಗಳ ಬಗ್ಗೆ ಆಡಂಬರದಿಂದ ಹೆಮ್ಮೆಪಡುವುದನ್ನು ರಿನ್ಪೋಚೆ ನಿಜವಾಗಿಯೂ ಇಷ್ಟಪಡುತ್ತಿರಲಿಲ್ಲ. ನಾವು ಧ್ಯಾನದ ಏಕಾಂತವಾಸವನ್ನು ಕೈಗೊಳ್ಳಲು ಉದ್ದೇಶಿಸಿದ್ದರೂ ಅಥವಾ ನಾವು ಒಂದನ್ನು ಮುಗಿಸಿದ್ದರೂ ಸಹ ಅದನ್ನು ಘೋಷಿಸಬಾರದು ಎಂದು ಅವರು ಹೇಳಿದರು. ಅಂತಹ ವಿಷಯಗಳನ್ನು ಖಾಸಗಿಯಾಗಿ ಇಡುವುದು ಮತ್ತು ನಾವು ಏನು ಮಾಡುತ್ತಿದ್ದೇವೆಂದು ಯಾರಿಗೂ ತಿಳಿಯದಂತೆ ಮಾಡುವುದು ಉತ್ತಮ. ಇಲ್ಲದಿದ್ದರೆ, ಜನರು ನಮ್ಮ ಬಗ್ಗೆ ಮಾತನಾಡುವುದರಿಂದ ಹೆಮ್ಮೆ ಅಥವಾ ಇತರರ ಅಸೂಯೆ ಮತ್ತು ಸ್ಪರ್ಧೆಯಂತಹ ಅನೇಕ ಅಡೆತಡೆಗಳು ಉಂಟಾಗುತ್ತವೆ. ಯಾವ ಬುದ್ಧ-ಮೂರ್ತಿ ತ್ಸೋಂಗ್ಖಾಪಾ ಅವರ ಮುಖ್ಯ ತಾಂತ್ರಿಕ ಆಚರಣೆ ಎಂದು ಯಾರಿಗೂ ತಿಳಿದಿರಲಿಲ್ಲ. ಅವರ ಶಿಷ್ಯ ಕೆದ್ರಬ್ ಜೆ ಅವರು ತಮ್ಮ ಸಾವಿಗೆ ಮುನ್ನ ತಮ್ಮ ಆಂತರಿಕ-ನೈವೇದ್ಯ ಪಾತ್ರೆಯಿಂದ ಅರವತ್ತೆರಡು ಕಾಣಿಕೆಗಳನ್ನು ನೀಡುತ್ತಿರುವುದನ್ನು ಗಮನಿಸಿದಾಗ ಮಾತ್ರ ಅದು , ಬುದ್ಧ-ಮೂರ್ತಿ ಆಂತರಿಕ ಆನಂದವನ್ನು ಸಾಕಾರಗೊಳಿಸುವ ಚಕ್ರಸಂವರ ಎಂದು ಅವರು ಊಹಿಸಿದರು. ಅದೇ ರೀತಿ, ಸೆರ್ಕಾಂಗ್ ರಿನ್ಪೋಚೆ ಕಾಲಚಕ್ರ ತಜ್ಞ ಎಂದು ಮೆಚ್ಚುಗೆ ಪಡೆದಿದ್ದರೂ ಸಹ ಅವರ ಮುಖ್ಯವಾದ ವೈಯಕ್ತಿಕ ಅಭ್ಯಾಸವನ್ನು ಯಾರೂ ತಿಳಿದಿರಲಿಲ್ಲ.
ರಿನ್ಪೋಚೆ ಆಗಾಗ್ಗೆ, ತಮ್ಮ ತಾಂತ್ರಿಕ ಅಭ್ಯಾಸವನ್ನು ಸಂಪೂರ್ಣವಾಗಿ ಮರೆಮಾಡಿದ ಕದಂಪ ಗೆಶೆಗಳ ಬಗ್ಗೆ ಹೇಳುತ್ತಿದ್ದರು, ಅವರು ಎಷ್ಟರ ಮಟ್ಟಿಗೆ ಮರೆಮಾಡಿದ್ದರೆಂದರೆ, ಅವರು ಸತ್ತ ನಂತರ ಜನರು ಅವರ ನಿಲುವಂಗಿಯ ಮೂಲೆಯಲ್ಲಿ ಹೊಲಿಯಲಾದ ಸಣ್ಣ ವಜ್ರ ಮತ್ತು ಗಂಟೆಯನ್ನು ಕಂಡುಕೊಂಡಾಗ ಮಾತ್ರ ಅವರು ಏನು ಅಭ್ಯಾಸ ಮಾಡುತ್ತಿದ್ದಾರೆಂದು ಅವರಿಗೆ ಅರಿವಾಗುತ್ತಿತ್ತು. ರಿನ್ಪೋಚೆ ಈ ಮಾದರಿಯ ಪ್ರಕಾರ ತನ್ನ ಜೀವನವನ್ನು ನಡೆಸುತ್ತಿದ್ದರು. ರಿನ್ಪೋಚೆ ಸಾಮಾನ್ಯವಾಗಿ ತನ್ನ ಮನೆಯಲ್ಲಿ ಎಲ್ಲರಿಗಿಂತ ಅರ್ಧ ಗಂಟೆ ಮೊದಲು ಮಲಗಿ ಬೆಳಿಗ್ಗೆ ಅವರ ನಂತರ ಎದ್ದೇಳುತ್ತಿದ್ದರು. ಆದರೆ ಅವರ ಸೇವಕರು ಮತ್ತು ನಾನು, ಎಲ್ಲರೂ ನಿದ್ರಿಸಿದ ನಂತರವೂ ಅವರ ಕೋಣೆಯಲ್ಲಿ ಬೆಳಕು ಆನ್ ಆಗಿರುವುದನ್ನು ಮತ್ತು ಮನೆಯವರು ಎಚ್ಚರಗೊಳ್ಳುವ ಸ್ವಲ್ಪ ಸಮಯದ ಮೊದಲು ಮಾತ್ರ ಆರಿದ್ದನ್ನು ಆಗಾಗ್ಗೆ ಗಮನಿಸಿದ್ದೆವು.
ಒಮ್ಮೆ, ಜರ್ಮನಿಯ ಜಾಗೆಂಡಾರ್ಫ್ನಲ್ಲಿ, ರಿನ್ಪೋಚೆ ಅವರ ಹಿರಿಯ ಸಹಾಯಕ ಚೊಂಡ್ಜೆಲಾ, ರಿನ್ಪೋಚೆ ಅವರೊಂದಿಗೆ ಮಲಗುವ ಕೋಣೆಯನ್ನು ಹಂಚಿಕೊಂಡರು. ನಿದ್ರಿಸುತ್ತಿರುವಂತೆ ನಟಿಸುವಾಗ, ಚೊಂಡ್ಜೆಲಾ ರಿನ್ಪೋಚೆ ಮಧ್ಯರಾತ್ರಿಯಲ್ಲಿ ಎದ್ದು ನರೋಪಾದ ಆರು ಅಭ್ಯಾಸಗಳಿಗೆ ಸಂಬಂಧಿಸಿದ ವಿವಿಧ ಕಠಿಣ ಭಂಗಿಗಳನ್ನು ತೆಗೆದುಕೊಳ್ಳುವುದನ್ನು ವೀಕ್ಷಿಸಿದರು. ಹಗಲಿನ ವೇಳೆಯಲ್ಲಿ ರಿನ್ಪೋಚೆಗೆ ಸಾಮಾನ್ಯವಾಗಿ ಎದ್ದೇಳಲು ಮತ್ತು ಸುತ್ತಾಡಲು ಸಹಾಯದ ಅಗತ್ಯವಿದ್ದರೂ, ಈ ಯೋಗ ವ್ಯಾಯಾಮಗಳಲ್ಲಿ ತೊಡಗಿಸಿಕೊಳ್ಳುವ ಶಕ್ತಿ ಮತ್ತು ನಮ್ಯತೆ ಅವರಿಗಿತ್ತು.
ತನ್ನ ಉತ್ತಮ ಗುಣಗಳನ್ನು ಮರೆಮಾಡುವುದು
ರಿನ್ಪೋಚೆ ಯಾವಾಗಲೂ ತಮ್ಮ ಉತ್ತಮ ಗುಣಗಳನ್ನು ಮರೆಮಾಚಲು ಪ್ರಯತ್ನಿಸುತ್ತಿದ್ದರು. ವಾಸ್ತವದಲ್ಲಿ ಅವರು ತಮ್ಮ ಗುರುತನ್ನು ಅಪರಿಚಿತರಿಗೆ ಬಹಿರಂಗಪಡಿಸಲು ಸಹ ಇಷ್ಟಪಡುವುದಿಲ್ಲ. ಒಮ್ಮೆ, ವಯಸ್ಸಾದ ಇಂಡೋನೇಷ್ಯಾದ ದಂಪತಿಗಳು ಪ್ಯಾರಿಸ್ನಿಂದ ಆಮ್ಸ್ಟರ್ಡ್ಯಾಮ್ಗೆ ತಮ್ಮ ಕಾರಿನಲ್ಲಿ ನಮಗೆ ಪ್ರಯಾಣವನ್ನು ನೀಡಿದರು. ಆಮ್ಸ್ಟರ್ಡ್ಯಾಮ್ಗೆ ಬಂದ ನಂತರ, ದಂಪತಿಗಳು ರಿನ್ಪೋಚೆ ಅವರನ್ನು ತಮ್ಮ ಮನೆಗೆ ಊಟಕ್ಕೆ ಆಹ್ವಾನಿಸಿದರು. ನಂತರ, ಸ್ಥಳೀಯ ಬೌದ್ಧ ಕೇಂದ್ರದ ಜನರು ರಿನ್ಪೋಚೆ ಅವರ ಬೋಧನೆಗಳಿಗೆ ಆಹ್ವಾನಿಸಲು ದಂಪತಿಗಳಿಗೆ ದೂರವಾಣಿ ಕರೆ ಮಾಡಿದಾಗ ಮಾತ್ರ ಅವರಿಗೆ ಅವರ ಅತಿಥಿ ನಿಜವಾಗಿಯೂ ಯಾರೆಂದು ಅರಿವಾಯಿತು. ಅವರು ಕೇವಲ ಒಬ್ಬ ಸಾಮಾನ್ಯವಾದ ವೃದ್ಧ, ಸ್ನೇಹಪರ ಸನ್ಯಾಸಿ ಎಂದು ಅವರು ಭಾವಿಸಿದ್ದರು.
ಇದೇ ಮನೋಭಾವದಲ್ಲಿ, ರಿನ್ಪೋಚೆ ಕೆಲವೊಮ್ಮೆ ವಿದೇಶ ಪ್ರವಾಸ ಮಾಡುವಾಗ ಮಕ್ಕಳೊಂದಿಗೆ ಚೆಸ್ ಆಡುತ್ತಿದ್ದರು, ಅಥವಾ ಅವರು ತಮ್ಮ ಕಿರಿಯ ಸಹಾಯಕ ನ್ಗಾವಾಂಗ್ ಅವರನ್ನು ಆಟವಾಡಿಸುತ್ತಿದ್ದರು ಮತ್ತು ಅವರು ಎರಡೂ ಕಡೆಯವರಿಗೆ ಸಹಾಯ ಮಾಡುತ್ತಿದ್ದರು. ಮಕ್ಕಳು ಅವರನ್ನು ದಯೆಯಿಂದ ವಯಸ್ಸಾದ ಅಜ್ಜ ಎಂದು ಮಾತ್ರ ಭಾವಿಸಿದ್ದರು. ಒಮ್ಮೆ, ಕ್ರಿಸ್ಮಸ್ ಸಮಯದಲ್ಲಿ, ರಿನ್ಪೋಚೆ ಜರ್ಮನಿಯ ಮ್ಯೂನಿಚ್ನ ಬೀದಿಗಳಲ್ಲಿ ತಮ್ಮ ಕೆಂಪು ನಿಲುವಂಗಿಯಲ್ಲಿ ನಡೆದಾಡುತ್ತಿದ್ದಾಗ, ಮಕ್ಕಳು ಅವರನ್ನು ಸಾಂತಾಕ್ಲಾಸ್ ಎಂದು ಭಾವಿಸಿ ಹಿಂಬಾಲಿಸಿದರು.
ರಿನ್ಪೋಚೆ ಅವರಿಗೆ ಇಂಗ್ಲಿಷ್ ಚೆನ್ನಾಗಿ ತಿಳಿದಿದೆ ಎಂಬ ಅಂಶವನ್ನು ಸಹ ಮರೆಮಾಚಿದರು. ರಿನ್ಪೋಚೆ ನಿಧನರಾಗುವ ಒಂದು ತಿಂಗಳ ಮೊದಲು, ಸ್ಪಿತಿಯಲ್ಲಿ ಕಾಲಚಕ್ರ ದೀಕ್ಷೆಯ ನಂತರ, ಧರ್ಮಶಾಲಾಗೆ ಮರಳಲು ನಾನು ಟಾಬೊ ಮಠದಲ್ಲಿ ಅವರಿಂದ ರಜೆ ತೆಗೆದುಕೊಂಡಿದ್ದೆ. ನಾನು ಪಾಶ್ಚಿಮಾತ್ಯರ ಗುಂಪಿಗೆ ಬಸ್ ಬಾಡಿಗೆಗೆ ಪಡೆದಿದ್ದೆ ಮತ್ತು ಹೋಗುವ ಸಮಯ ಬಂದಿತು. ಆದರೆ, ಕೊನೆಯ ಕ್ಷಣದಲ್ಲಿ ಒಬ್ಬ ವಿದೇಶಿಯು ಕಣಿವೆಯಿಂದ ಇಪ್ಪತ್ತು ಮೈಲಿ ದೂರದಲ್ಲಿರುವ ಕೈ ಮಠಕ್ಕೆ ಭೇಟಿ ನೀಡಲು ಹೋಗಿದ್ದಳು ಮತ್ತು ನಿರೀಕ್ಷಿತ ಸಮಯದಲ್ಲಿ ಹಿಂತಿರುಗಲಿಲ್ಲ. ನಾನು ಅವಳನ್ನು ಹುಡುಕಲು ಕೈಗೆ ಹೋದಾಗ, ಒಬ್ಬ ಇಟಾಲಿಯನ್ ಶಿಷ್ಯ ರಿನ್ಪೋಚೆ ಅವರನ್ನು ನೋಡಲು ಅನುವಾದಕನಿಲ್ಲದೆ ಹೋದನು. ಈ ಹಿಂದೆ ಯಾವುದೇ ವಿದೇಶಿಯರೊಂದಿಗೆ ಇಂಗ್ಲಿಷ್ನಲ್ಲಿ ಒಂದೇ ಒಂದು ಪದವನ್ನು ಮಾತನಾಡದ ರಿನ್ಪೋಚೆ, ಇಟಾಲಿಯನ್ ವ್ಯಕ್ತಿಯ ಕಡೆಗೆ ತಿರುಗಿ ಪರಿಪೂರ್ಣ ಇಂಗ್ಲಿಷ್ನಲ್ಲಿ "ಅಲೆಕ್ಸ್ ಎಲ್ಲಿದ್ದಾನೆ?" ಎಂದು ಕೇಳಿದರು. ಆ ವ್ಯಕ್ತಿಯು "ಆದರೆ ರಿನ್ಪೋಚೆ, ನೀವು ಇಂಗ್ಲಿಷ್ ಮಾತನಾಡುವುದಿಲ್ಲ" ಎಂದು ಉದ್ಗರಿಸಿದಾಗ, ರಿನ್ಪೋಚೆ ಕೇವಲ ನಕ್ಕರು.