ನಮ್ಮ ಆಧ್ಯಾತ್ಮಿಕ ಗುರುಗಳ ಬಗ್ಗೆ ಪರಿಗಣನೆಯಿಂದ ಇರುವುದು
ಸೆರ್ಕಾಂಗ್ ರಿನ್ಪೋಚೆ ಯಾವಾಗಲೂ ಎಲ್ಲಾ ಲಾಮಾಗಳ ಬಗ್ಗೆ ಕಾಳಜಿ ವಹಿಸುವುದು ಮತ್ತು ಅವರ ಸಮಯವನ್ನು ವ್ಯರ್ಥ ಮಾಡದಿರುವುದು ಮುಖ್ಯ ಎಂದು ಒತ್ತಿ ಹೇಳುತ್ತಿದ್ದರು. ಸ್ಪಿತಿಯ ಧರ್ಮನಿಷ್ಠ ಜನರ ಉದಾಹರಣೆಯನ್ನು ತಪ್ಪಿಸಲು ಅವರು ಸಲಹೆ ನೀಡುತ್ತಿದ್ದರು. ಅವರಿಗೆ ವಿಧ್ಯುಕ್ತ ಶಿರೋವಸ್ತ್ರಗಳನ್ನು (ಕಟ) ನೀಡಲು ಸಾಲಾಗಿ ನಿಂತಾಗ, ಸ್ಪಿತಿಯಲ್ಲಿರುವ ಅವರ ಭಕ್ತರು ಸಾಷ್ಟಾಂಗ ನಮಸ್ಕಾರ ಮಾಡುವ ಮೊದಲು, ಪ್ರತಿಯೊಬ್ಬರೂ ಒಂದೊಂದಾಗಿ, ನೇರವಾಗಿ ಅವರ ಮುಂದೆ ಬರುವವರೆಗೆ ಕಾಯುತ್ತಿದ್ದರು. ಅಂತಹ ಕಾರ್ಯವಿಧಾನವು ಗಂಟೆಗಳ ಕಾಲ ತೆಗೆದುಕೊಳ್ಳಬಹುದು. ಇದಲ್ಲದೆ, ಲಾಮಾಗೆ ಪ್ರಶ್ನೆಗಳನ್ನು ಕೇಳುವಾಗ, ರಿನ್ಪೋಚೆ ಎಂದಿಗೂ ದೊಡ್ಡ ದೊಡ್ಡ ಕಥೆಗಳನ್ನು ಹೇಳಬೇಡಿ ಅಥವಾ ಪ್ರದರ್ಶನ ನೀಡಬೇಡಿ ಎಂದು ಹೇಳುತ್ತಿದ್ದರು. ಅಂತಹ ಪ್ರಶ್ನೆಗಳನ್ನು ಅಕ್ಷರಶಃ ಭಾಷಾಂತರಿಸಬೇಡಿ, ಬದಲಿಗೆ ವಿಷಯವನ್ನು ನೇರವಾಗಿ ಸಂಪರ್ಕಿಸಿ ಎಂದು ಅವರು ನನಗೆ ಸೂಚಿಸಿದರು.
ಇದರ ಜೊತೆಗೆ, ರಿನ್ಪೋಚೆ ಸಂದರ್ಶಕರು ಯಾವಾಗಲೂ ಕಟಗಳೊಂದಿಗೆ ಮತ್ತು "ಅಸಹ್ಯ" ಎಂದು ಅವರು ಉಲ್ಲೇಖಿಸುವ ಕುಕೀಗಳ ಪೆಟ್ಟಿಗೆಗಳನ್ನು ಪ್ರಸ್ತುತಪಡಿಸುವುದನ್ನು ಬಯಸುತ್ತಿರಲಿಲ್ಲ. ಲಾಮಾಗೆ ಅರ್ಪಣೆ ಮಾಡಲು ಬಯಸುವವರು ಆ ವ್ಯಕ್ತಿ ಬಳಸಬಹುದಾದ ಅಥವಾ ಇಷ್ಟಪಡುವ ಒಳ್ಳೆಯ ವಿಷಯಗಳನ್ನು ಪ್ರಸ್ತುತಪಡಿಸಬೇಕು ಎಂದು ಅವರು ಹೇಳುತ್ತಿದ್ದರು. ಇದಲ್ಲದೆ, ಯಾರಾದರೂ ನನ್ನಂತೆ ಅವರನ್ನು ಆಗಾಗ್ಗೆ ಭೇಟಿಮಾಡುತ್ತಿದ್ದರೆ ನೋಡಿದರೆ, ಕಾಣಿಕೆಗಳನ್ನು ತರುವುದನ್ನು ನಿಲ್ಲಿಸುವಂತೆ ಅವರು ಹೇಳಿದರು. ಅವರಿಗೆ ಯಾವುದೂ ಬೇಕಾಗಿರಲಿಲ್ಲ ಅಥವಾ ಅಗತ್ಯವಿರಲಿಲ್ಲ.
ಪ್ರಶ್ನೆಗಳನ್ನು ಸರಿಯಾಗಿ ಕೇಳುವ ರೀತಿಯನ್ನು ಕಲಿಯುವುದು
ವಾಸ್ತವದಲ್ಲಿ, ಹೆಚ್ಚಿನ ಪಾಶ್ಚಿಮಾತ್ಯರಿಗೆ ಲಾಮಾಗಳಿಗೆ ಸರಿಯಾಗಿ ಪ್ರಶ್ನೆಗಳನ್ನು ಕೇಳುವುದು ಹೇಗೆಂದು ತಿಳಿದಿಲ್ಲ. ಸಾಮಾನ್ಯವಾಗಿ, ಅವರು ಮೂರ್ಖತನದಿಂದ ವಿಷಯಗಳನ್ನು ಕೇಳಿದಾಗ, ರಿನ್ಪೋಚೆ ಅವರನ್ನು ಸರಿಪಡಿಸುತ್ತಿದ್ದರು. ಉದಾಹರಣೆಗೆ, ಯಾರಾದರೂ ಸಬಲೀಕರಣಕ್ಕೆ ಹಾಜರಾಗಬೇಕೇ ಎಂದು ತಿಳಿದಿಲ್ಲದಿದ್ದರೆ, "ಈ ದೀಕ್ಷೆಗೆ ಹಾಜರಾಗುವುದು ಒಳ್ಳೆಯದೇ?" ಎಂದು ಕೇಳುವುದು ಹಾಸ್ಯಾಸ್ಪದವಾಗಿರುತ್ತದೆ. ಖಂಡಿತವಾಗಿಯೂ ಅದು ಒಳ್ಳೆಯದು; ಅದು ಕೆಟ್ಟದು ಎಂದು ಹೇಳಲು ಸಾಧ್ಯವಿಲ್ಲ. ಮತ್ತು ಯಾರಾದರೂ "ನಾನು ಹಾಜರಾಗಬೇಕೇ ಅಥವಾ ಬೇಡವೇ?" ಎಂದು ಕೇಳಿದರೆ, "ನಾನು ಹಾಜರಾಗಲು ಬದ್ಧನಾಗಿದ್ದೇನೆಯೇ ಅಲ್ಲವೇ?" ಎಂಬುದರ ಸೂಚ್ಯಾರ್ಥವಾಗಿದೆ. ಅಂತಹ ವಿಷಯಗಳ ಬಗ್ಗೆ ಆಧ್ಯಾತ್ಮಿಕ ಶಿಕ್ಷಕರ ಸಲಹೆಯನ್ನು ಪಡೆಯುವಲ್ಲಿ, "ನಾನು ಏನು ಮಾಡಬೇಕೆಂದು ನೀವು ಶಿಫಾರಸು ಮಾಡುತ್ತೀರಿ?" ಎಂದು ಕೇಳುವುದು ಉತ್ತಮ.
ಇದಲ್ಲದೆ, ಲಾಮಾ ಅವರನ್ನು ಸಂಪರ್ಕಿಸಿ ಅವರು ನೀಡುವ ಸಬಲೀಕರಣವನ್ನು ಪಡೆಯಲು ಅನುಮತಿ ಕೇಳುವಾಗ, "ನಾನು ದೀಕ್ಷೆಯನ್ನು ಪಡೆಯಬಹುದೇ ಅಥವಾ ಇಲ್ಲವೇ?" ಎಂದು ಕೇಳುವುದು ಮೂರ್ಖತನವಾಗಿರುತ್ತದೆ. ಇದು "ನಾನು ಸಮರ್ಥನಾಗಿದ್ದೇನೆಯೇ ಅಥವಾ ಇಲ್ಲವೇ?" ಎಂಬುದನ್ನು ಸೂಚಿಸುತ್ತದೆ, ಇದು ಸಂಪೂರ್ಣವಾಗಿ ಅಸಂಬದ್ಧವಾಗಿರುತ್ತದೆ. ಕೇಳುವ ಸರಿಯಾದ ವಿಧಾನವೆಂದರೆ "ದಯವಿಟ್ಟು ನಾನು ಸಬಲೀಕರಣವನ್ನು ಪಡೆಯಬಹುದೇ?" ವಿದೇಶಿ ದೇಶದಲ್ಲಿ ಉಳಿಯಲು ವೀಸಾ ವಿಸ್ತರಣೆಯನ್ನು ಕೋರುವಾಗ, ಒಬ್ಬ ಮೂರ್ಖ ಮಾತ್ರ "ನಾನು ಹೆಚ್ಚು ಕಾಲ ಇರಬಹುದೇ ಅಥವಾ ಇಲ್ಲವೇ?" ಎಂದು ಕೇಳುತ್ತಾನೆ. ವಿನಂತಿಸುವ ಪ್ರಬುದ್ಧ ಮಾರ್ಗವೆಂದರೆ "ನಿಮ್ಮ ದಯೆಯಿಂದ ಅನುಮತಿಯೊಂದಿಗೆ, ನಾನು ಹೆಚ್ಚು ಕಾಲ ಇರಲು ಬಯಸುತ್ತೇನೆ".
ಒಮ್ಮೆ ಟರ್ನರ್, ರಿನ್ಪೋಚೆಗೆ ಆಧ್ಯಾತ್ಮಿಕ ರಕ್ಷಕ ಆರು ತೋಳುಗಳ ಮಹಾಕಾಲನನ್ನು ಆಹ್ವಾನಿಸಲು ಅನುಮತಿ ನೀಡುವಂತೆ ಹಲವಾರು ತಿಂಗಳುಗಳ ಕಾಲ ಪದೇ ಪದೇ ಕಾಡಿದನು. ಅಂತಿಮವಾಗಿ, ರಿನ್ಪೋಚೆ ಒಪ್ಪಿಕೊಂಡಾಗ, ಟರ್ನರ್ ದೈನಂದಿನ ಪಠಣದ ಬದ್ಧತೆ ಏನೆಂದು ಅವರನ್ನು ಕೇಳಿದನು. ರಿನ್ಪೋಚೆ ಅವನನ್ನು ಹೊಡೆಯುವಷ್ಟು ಮುಂದಾದರು, ಬದ್ಧತೆಯಾಗಿ ಏನನ್ನಾದರೂ ಮಾಡಲು ಸಿದ್ಧನಿರಬೇಕು ಎಂದು ಗದರಿಸಿದರು.
ಬದ್ಧತೆಗಳನ್ನು ಒಪ್ಪಿಕೊಳ್ಳುವ ಮೊದಲು ಅವುಗಳನ್ನು ಪರಿಶೀಲಿಸುವುದು
ಪಾಶ್ಚಿಮಾತ್ಯರು ದೀಕ್ಷೆ ಪಡೆದ ನಂತರವೇ ಪಠಣದ ಬದ್ಧತೆಯ ಬಗ್ಗೆ ಚೌಕಾಸಿ ಮಾಡಲು ಪ್ರಯತ್ನಿಸಿದಾಗ ರಿನ್ಪೋಚೆ ಬಹಳಾ ಅಸಮಾಧಾನಗೊಳ್ಳುತ್ತಿದ್ದರು. ಎಲ್ಲರ ಪ್ರಯೋಜನಕ್ಕಾಗಿ ಜ್ಞಾನೋದಯವನ್ನು ಪಡೆಯಲು ಅದರ ಅಭ್ಯಾಸದಲ್ಲಿ ತೊಡಗಿಸಿಕೊಳ್ಳುವ ಪ್ರಾಮಾಣಿಕ ಬಯಕೆಯಿಂದಾಗಿ, ಬುದ್ಧ-ವ್ಯಕ್ತಿಯು ಸಬಲೀಕರಣವನ್ನು ತೆಗೆದುಕೊಳ್ಳಲು ಬಯಸಬೇಕು ಎಂದು ಅವರು ಯಾವಾಗಲೂ ಒತ್ತಿ ಹೇಳುತ್ತಿದ್ದರು. "ಹಿತಕರ ಅನಿಸಿಕೆಗಳಿಗಾಗಿ" ಅಥವಾ ಉಳಿದವರೆಲ್ಲರೂ ಹೋಗುತ್ತಿರುವುದರಿಂದ ಹಾಜರಾಗುವುದು ಅಸಂಬದ್ಧವೆಂದು ಅವರು ಭಾವಿಸಿದರು. ಇನ್ನೊಂದು ಅನುಚಿತವಾದ ವಿಷಯವೆಂದರೆ ಕೇವಲ ಒಂದು ಸಣ್ಣ ಪರಿಚಿತತಾ ಏಕಾಂತವಾಸ ಮಾಡುವ ಉದ್ದೇಶದಿಂದ ಹೋಗಿ, ನಂತರ ಧ್ಯಾನ ಅಭ್ಯಾಸದ ಬಗ್ಗೆ ಮರೆತುಬಿಡುವುದು. ಒಂದು ನಿರ್ದಿಷ್ಟ ತಾಂತ್ರಿಕ ಅಭ್ಯಾಸದ ಬಗೆಗಿರುವ ಕಾಳಜಿಯು ಜೀವಿತಾವಧಿಯವರೆಗೆ ಇರುತ್ತದೆ.
ರಿನ್ಪೋಚೆ ಆಧ್ಯಾತ್ಮಿಕ ಅಭ್ಯಾಸಗಳು ಮತ್ತು ಶಿಕ್ಷಕರೊಂದಿಗೆ ತೊಡಗಿಸಿಕೊಳ್ಳುವ ಮೊದಲು ಅವನ್ನು ಸಂಪೂರ್ಣವಾಗಿ ಪರಿಶೀಲಿಸಬೇಕೆಂದು ಮತ್ತು ಆಮೇಲಿನ ತನಕ ಕಾಯಬಾರದು ಎಂದು ಒತ್ತಿ ಹೇಳಿದರು. ಪಾಶ್ಚಾತ್ಯರಲ್ಲಿ ರಿನ್ಪೋಚೆ ಕಂಡ ಪ್ರಮುಖ ದೋಷವೆಂದರೆ ಇದು. ನಾವು ಅಕಾಲಿಕವಾಗಿ ವಿಷಯಗಳಿಗೆ ಧಾವಿಸುವ ಪ್ರವೃತ್ತಿಯನ್ನು ಹೊಂದಿರುತ್ತೇವೆ. ಹೆಪ್ಪುಗಟ್ಟಿದ ಸರೋವರದ ಮೇಲೆ ಓಡಿಹೋಗುವ ಹುಚ್ಚನಂತೆ ಮತ್ತು ನಂತರ ಮಂಜುಗಡ್ಡೆಯು ನಮ್ಮ ಭಾರವನ್ನು ಹೊರುವಷ್ಟು ಬಲವಾಗಿದೆಯೇ ಎಂದು ಪರಿಶೀಲಿಸಲು ಕೋಲಿನಿಂದ ಚುಚ್ಚುವಂತೆ ನಾವಾಗಿರಬಾರದು ಎಂದು ರಿನ್ಪೋಚೆ ಎಚ್ಚರಿಸಿದರು.
ಯಾರ ಬೋಧನೆಗಳಿಗಾದರೂ ಜನರು ಹಾಜರಾಗಬಹುದು ಮತ್ತು ಸಭ್ಯತೆಯಿಂದ, ಗುರುವಿನ ಸನ್ಯಾಸಿ ನಿಲುವಂಗಿಗಳಿಗೆ ಅಥವಾ ಕೋಣೆಯಲ್ಲಿ ಬುದ್ಧನ ವರ್ಣಚಿತ್ರಕ್ಕೆ ನಮಸ್ಕರಿಸಬಹುದು ಎಂದು ರಿನ್ಪೋಚೆ ಹೇಳಿದರು. ಆದರೆ ಆ ಗುರುವಿನ ಶಿಷ್ಯನಾಗುವುದು ಇನ್ನೊಂದು ವಿಷಯ. ನಾನು ಯಾವುದೇ ಲಾಮಾಗೆ ಅನುವಾದಿಸಬಲ್ಲೆ, ಆದರೆ ಯಾರಿಗಾದರೂ ಕೆಲಸ ಮಾಡುವುದರಿಂದ ಆ ವ್ಯಕ್ತಿಯನ್ನು ನನ್ನ ಆಧ್ಯಾತ್ಮಿಕ ಗುರುವನ್ನಾಗಿ ಮಾಡುವುದಿಲ್ಲ ಎಂದು ಅವರು ನನಗೆ ಹೇಳಿದರು. ನಾನು ತಾಂತ್ರಿಕ ಸಬಲೀಕರಣವನ್ನು ಅನುವಾದಿಸಿದರೂ ಸಹ ಇದೇ ಸತ್ಯ ಎಂದು ಅವರು ವಿವರಿಸಿದರು. ಗುರುಗಳ ಬಗೆಗಿರುವ ಒಬ್ಬರ ವರ್ತನೆಯು ಮುಖ್ಯವಾಗಿರುತ್ತದೆ.
ಅಕಾಲಿಕವಾಗಿ ಸನ್ಯಾಸಿ ಅಥವಾ ಸನ್ಯಾಸಿನಿಯಾಗುವುದನ್ನು ತಪ್ಪಿಸುವುದು
ಅನೇಕ ಪಾಶ್ಚಿಮಾತ್ಯರು, ಅವರ ಜೀವನದುದ್ದಕ್ಕೂ ನಿಜವಾಗಿಯೂ ಬೌದ್ಧ ಸನ್ಯಾಸಿಗಳು ಮತ್ತು ಸನ್ಯಾಸಿನಿಯರಾಗಲು ಬಯಸುತ್ತಾರೆಯೇ ಎಂಬುದನ್ನು ಪರಿಶೀಲಿಸದೆ ಅದಕ್ಕೆ ಬದ್ದರಾಗಲು ಮುಂದಾಗುತ್ತಾರೆ ಎಂದು ರಿನ್ಪೋಚೆ ಭಾವಿಸಿದರು. ಆಗಾಗ್ಗೆ, ತಮ್ಮ ದೀಕ್ಷೆಯು ತಮ್ಮ ಹೆತ್ತವರ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಅಥವಾ ಭವಿಷ್ಯದಲ್ಲಿ ಅವರು ತಮ್ಮನ್ನು ತಾವು ಹೇಗೆ ಪೋಷಿಸಿಕೊಳ್ಳುತ್ತಾರೆ ಎಂಬುದನ್ನು ಪರಿಗಣಿಸಲು ವಿಫಲರಾಗುತ್ತಾರೆ. ಸಹಜವಾಗಿ, ಯಾರಾದರೂ ಹಿಂದಿನ ಮಹಾನ್ ತ್ಯಾಗಿಗಳಂತೆ ಇದ್ದರೆ, ಅವನು ಅಥವಾ ಅವಳು ಕುಟುಂಬ ಅಥವಾ ಹಣದಂತಹ ಅಂಶಗಳ ಬಗ್ಗೆ ಯೋಚಿಸುವ ಅಗತ್ಯವಿಲ್ಲ. ಆದರೆ, ನಾವು ಮಿಲಾರೆಪಾಸ್ ಅಂತಹವರೆ ಇಲ್ಲವೆ ಎಂಬುದು ನಮಗೇ ತಿಳಿದಿರುತ್ತದೆ.
ಈ ಸಂದರ್ಭದಲ್ಲಿ, ರಿನ್ಪೋಚೆ ಆಗಾಗ್ಗೆ ಡ್ರುಬ್ಕಾಂಗ್ ಗೆಲೆಗ್-ಗ್ಯಾಟ್ಸೊ ಅವರ ಉದಾಹರಣೆಯನ್ನು ಉಲ್ಲೇಖಿಸುತ್ತಾರೆ. ಈ ಮಹಾನ್ ಟಿಬೆಟಿಯನ್ ಗುರು ತನ್ನ ಯೌವನದಲ್ಲಿ ಸನ್ಯಾಸಿಯಾಗಲು ಬಯಸಿದ್ದರು, ಆದರೆ ಅವರ ಕುಟುಂಬವು ಅದನ್ನು ನಿರಾಕರಿಸಿತು ಮತ್ತು ತುಂಬಾ ಅಸಮಾಧಾನಗೊಂಡಿತು. ಆದ್ದರಿಂದ ಅವರು ತಮ್ಮ ಹೆತ್ತವರ ಜೀವಿತಾವಧಿಯಲ್ಲಿ ಉತ್ತಮವಾಗಿ ಸೇವೆ ಸಲ್ಲಿಸಿದರು ಮತ್ತು ಅವರು ನಿಧನರಾದಾಗ, ಅವರು ತಮ್ಮ ಆನುವಂಶಿಕತೆಯನ್ನು ಯೋಗ್ಯ ಕಾರಣಗಳಿಗೆ ದಾನ ಮಾಡಿದರು. ಆಗ ಮಾತ್ರ ಅವರು ಸನ್ಯಾಸಿಯಾದರು.
ರಿನ್ಪೋಚೆ ಯಾವಾಗಲೂ ನಮ್ಮ ಹೆತ್ತವರನ್ನು ಗೌರವಿಸುವುದು ಮತ್ತು ಅವರಿಗಾಗಿ ಸೇವೆ ಸಲ್ಲಿಸುವುದನ್ನು ಒತ್ತಿ ಹೇಳಿದರು. ಪಾಶ್ಚಿಮಾತ್ಯ ಬೌದ್ಧರಾದ ನಾವು, ಹಿಂದಿನ ಜನ್ಮಗಳಲ್ಲಿ ನಮ್ಮೆಲ್ಲರನ್ನೂ ನಮ್ಮ ತಾಯಿ ಮತ್ತು ತಂದೆ ಎಂದು ಗುರುತಿಸಿ ಅವರ ದಯೆಗೆ ಪ್ರತಿಫಲ ನೀಡುವ ಬಗ್ಗೆ ಹೆಮ್ಮೆಯಿಂದ ಮಾತನಾಡುತ್ತೇವೆ. ಆದರೆ ವೈಯಕ್ತಿಕ ಮಟ್ಟದಲ್ಲಿ, ನಮ್ಮಲ್ಲಿ ಅನೇಕರು ಈ ಜೀವನದ ನಮ್ಮ ಪೋಷಕರೊಂದಿಗೆ ಚೆನ್ನಾಗಿ ಹೊಂದಿಕೊಂಡಿರುವುದಿಲ್ಲ. ನಮ್ಮ ಹೆತ್ತವರಿಗೆ ಸೇವೆ ಸಲ್ಲಿಸುವುದು ಮತ್ತು ದಯೆ ತೋರುವುದು ನಿಜಕ್ಕೂ ಒಂದು ದೊಡ್ಡ ಬೌದ್ಧ ಪದ್ಧತಿ ಎಂದು ರಿನ್ಪೋಚೆ ಕಲಿಸಿದರು.
ಯಾರಾದರೂ ಮೊದಲೇ ಸಂಪೂರ್ಣವಾಗಿ ಪರಿಶೀಲಿಸಿ, ನಂತರ ಸನ್ಯಾಸಿ ಅಥವಾ ಸನ್ಯಾಸಿನಿಯಾದರೆ, ಅಥವಾ ಯಾರಾದರೂ ಈಗಾಗಲೇ ಸನ್ಯಾಸಿ ದೀಕ್ಷೆಯನ್ನು ಪಡೆದಿದ್ದರೆ, ರಿನ್ಪೋಚೆ ಬಾವಲಿಯಂತೆ ಅದನ್ನು ಅರ್ಧದಾರಿಯಲ್ಲೇ ಬಿಡಬಾರದು ಎಂದು ವಿವರಿಸಿದರು. ಬಾವಲಿಯು, ಪಕ್ಷಿಗಳ ನಡುವೆ ಇರುವಾಗ ಮತ್ತು ಅವರು ಮಾಡುತ್ತಿರುವುದನ್ನು ಅನುಸರಿಸಲು ಬಯಸದಿದ್ದಾಗ, ಅದು "ಓಹ್, ನಾನು ಅದನ್ನು ಮಾಡಲು ಸಾಧ್ಯವಿಲ್ಲ. ನನಗೆ ಹಲ್ಲುಗಳಿವೆ" ಎಂದು ಹೇಳುತ್ತದೆ. ಇಲಿಗಳ ನಡುವೆ ಇರುವಾಗ, ಅದು "ಓಹ್, ನಾನು ಅದನ್ನು ಮಾಡಲು ಸಾಧ್ಯವಿಲ್ಲ. ನನಗೆ ರೆಕ್ಕೆಗಳಿವೆ" ಎಂದು ಹೇಳುತ್ತದೆ. ಈ ಉದಾಹರಣೆಗೆ ಸಮಾನವಾಗಿರುವುದು, ಅನುಕೂಲಕ್ಕಾಗಿ ಸನ್ಯಾಸಿಗಳ ನಿಲುವಂಗಿಯನ್ನು ಬಳಸುವುದಾಗಿರುತ್ತದೆ. ಅಂತಹ ವ್ಯಕ್ತಿಗಳು ತಮ್ಮನ್ನು ತಾವು ಆರ್ಥಿಕವಾಗಿ ಬೆಂಬಲಿಸುವಂತಹ ಸಾಮಾನ್ಯ ಕಾರ್ಯಗಳನ್ನು ಇಷ್ಟಪಡದಿದ್ದಾಗ, ಅವರು ತಮ್ಮ ನಿಲುವಂಗಿಯ ನೆಪವನ್ನು ಬಳಸುತ್ತಾರೆ. ದೀರ್ಘ ಆಚರಣೆಗಳಿಗೆ ಹಾಜರಾಗುವುದು ಅಥವಾ ನಿಲುವಂಗಿಯಲ್ಲಿ ಪ್ರಯಾಣಿಸುವಂತಹ ಮುಂತಾದ ಸನ್ಯಾಸಿಗಳ ಕಾರ್ಯಗಳು ಅಥವಾ ರೂಪಗಳ ಬಗ್ಗೆ ಅವರಿಗೆ ಕಾಳಜಿ ಇಲ್ಲದಿದ್ದಾಗ, ನಾವು ಪಾಶ್ಚಿಮಾತ್ಯರು ಎಂಬ ನೆಪವನ್ನು ಬಳಸುತ್ತಾರೆ. ರಿನ್ಪೋಚೆ ಹೇಳುವಂತೆ, "ನೀವು ಯಾರನ್ನು ಮೂರ್ಖರಾಗಿಸಲು ಪ್ರಯತ್ನಿಸುತ್ತಿದ್ದೀರಿ?"
ಆಧ್ಯಾತ್ಮಿಕ ಅಭ್ಯಾಸದಲ್ಲಿ ತೊಡಗಿಸಿಕೊಳ್ಳುವುದು ಉದ್ಯೋಗವನ್ನು ಹುಡುಕದಿರುವುದಕ್ಕಾಗಿ ಇರುವ ಒಂದು ನೆಪವಲ್ಲ
ಬೌದ್ಧ ಸಾಧಕರು ಕೆಲಸ ಮಾಡಬಾರದು ಎಂಬುದು ಇದರ ಅರ್ಥವಲ್ಲ ಎಂದು ರಿನ್ಪೋಚೆ ವಿವರಿಸಿದರು. ಸಾಮಾನ್ಯರಾಗಿರಲಿ ಅಥವಾ ದೀಕ್ಷೆ ಪಡೆದಿರಲಿ, ಪ್ರತಿಯೊಬ್ಬರೂ ಪ್ರಾಯೋಗಿಕವಾಗಿರಬೇಕು ಮತ್ತು ವಾಸ್ತವಿಕವಾಗಿ ಯೋಚಿಸಬೇಕು. ನಾವು ನಮ್ಮ ಮನಸ್ಸು ಮತ್ತು ಮಾತನ್ನು ಹೇಗೆ ಆಕ್ರಮಿಸಿಕೊಳ್ಳುತ್ತೇವೆ ಎಂಬುದು ನಮ್ಮ ದೇಹವನ್ನು ಹೇಗೆ ಆಕ್ರಮಿಸಿಕೊಳ್ಳುತ್ತೇವೆ ಎನ್ನುವುದಕ್ಕಿಂತ ಹೆಚ್ಚು ಮುಖ್ಯ ಎಂದು ರಿನ್ಪೋಚೆ ಕಲಿಸಿದರು. ಆದ್ದರಿಂದ ತಮ್ಮನ್ನು ತಾವು ಪೋಷಿಸಿಕೊಳ್ಳಬೇಕಾದ ತೀವ್ರ ಅಭ್ಯಾಸಿಗರಿಗೆ, ಅವರು ಕೆಳಮಟ್ಟದ ಕೆಲಸಗಳನ್ನು ಮಾಡುವಂತೆ ಸಲಹೆ ನೀಡಿದರು. ಕೆಲಸ ಮಾಡುವಾಗ, ನಾವು ಮಂತ್ರಗಳನ್ನು ಪುನರಾವರ್ತಿಸಬಹುದು ಮತ್ತು ಬೆಚ್ಚಗಿನ ಭಾವನೆಗಳು ಮತ್ತು ದಯೆಯ ಆಲೋಚನೆಗಳನ್ನು ವಿಸ್ತರಿಸಬಹುದು. ಕೆಲಸದ ಸಮಯದಲ್ಲಿ ಬೋಧನೆಗಳ ಬಗ್ಗೆ ಯೋಚಿಸುವುದು ತುಂಬಾ ಕಷ್ಟಕರವಾಗಿದ್ದರೆ ಮತ್ತು ನಾವು ತಾಂತ್ರಿಕ ಸಬಲೀಕರಣಗಳನ್ನು ಪಡೆದಿದ್ದರೆ, ನಾವು ಕನಿಷ್ಠ ನಮ್ಮ ಸ್ವ-ಚಿತ್ರಗಳನ್ನು ಪರಿವರ್ತಿಸಬಹುದು. ದಿನವಿಡೀ, ನಾವು ಬುದ್ಧ-ವ್ಯಕ್ತಿಗಳಾಗಿ ಮತ್ತು ನಮ್ಮ ಪರಿಸರವನ್ನು ಆಧ್ಯಾತ್ಮಿಕ ಬೆಳವಣಿಗೆಗೆ ಸಂಪೂರ್ಣವಾಗಿ ಅನುಕೂಲಕರವಾದ ಶುದ್ಧ ಭೂಮಿಗಳಾಗಿ ಕಲ್ಪಿಸಿಕೊಳ್ಳಲು ಪ್ರಯತ್ನಿಸಬಹುದು. ನಂತರ, ಮುಂಜಾನೆ ಮತ್ತು ರಾತ್ರಿಯಲ್ಲಿ, ನಾವು ಸಾಧನಗಳ ವಿಸ್ತಾರವಾದ ದೃಶ್ಯೀಕರಣಗಳನ್ನು ಅಭ್ಯಾಸ ಮಾಡಬಹುದು. ರಿನ್ಪೋಚೆ ಯಾವಾಗಲೂ ಬೌದ್ಧಧರ್ಮವನ್ನು ಜೀವನದಿಂದ ಬೇರ್ಪಡಿಸಿಟ್ಟ ವಿಷಯವನ್ನಾಗಿ ನೋಡಬಾರದು ಎಂದು ಒತ್ತಿ ಹೇಳಿದರು.
ಹಲವು ವರ್ಷಗಳ ಕಾಲ, ಟರ್ನರ್ ಇಂಗ್ಲೆಂಡ್ನಲ್ಲಿ ನಿರುದ್ಯೋಗಿಯಾಗಿ, ಸಾಮಾಜಿಕ ಕಲ್ಯಾಣದಡಿ, ತನ್ನ ಹೆಂಡತಿ ಮತ್ತು ಇಬ್ಬರು ಮಕ್ಕಳೊಂದಿಗೆ ವಾಸಿಸುತ್ತಿದ್ದನು. ಅವನು ತನ್ನ ಬಹುತೇಕ ಎಲ್ಲಾ ಸಮಯವನ್ನು ತೀವ್ರವಾದ ಏಕಾಂತವಾಸದಲ್ಲಿ ಕಳೆಯುತ್ತಿದ್ದನು. ಬೋಧನೆಗಳನ್ನು ಅಭ್ಯಾಸ ಮಾಡಲು ಸಾಧ್ಯವಾದಾಗ ಕೆಲಸದಲ್ಲಿ ಏಕೆ ಸಮಯ ವ್ಯರ್ಥ ಮಾಡಬೇಕು ಎಂದು ಅವನು ಯೋಚಿಸಿದನು? ಹಿಂದೆ ಅವನು, ರಿನ್ಪೋಚೆಯಿಂದ ಸಂಪತ್ತಿಗೆ ಸಂಬಂಧಿಸಿದ ರಕ್ಷಣೆಯ ಪ್ರತೀಕವಾದ ಬಿಳಿ ಮಹಾಕಾಲನ ಅನುಮತಿ ಸಮಾರಂಭವನ್ನು ಪಡೆದಿದ್ದನು ಮತ್ತು ಅವನ ಆರ್ಥಿಕ ಸಮಸ್ಯೆಗಳು ಪರಿಹಾರವಾಗಲಿ ಎಂದು ಪ್ರತಿದಿನ ಪ್ರಾರ್ಥಿಸುತ್ತಿದ್ದನು. ರಿನ್ಪೋಚೆಗೆ ಇದರಿಂದ ಸ್ವಲ್ಪವೂ ಸಂತೋಷವಾಗಲಿಲ್ಲ. ಅನಾರೋಗ್ಯದಿಂದ ಬಳಲುತ್ತಿರುವ ವ್ಯಕ್ತಿಯು ಗುಣಮುಖನಾಗಲು ಔಷಧ ಬುದ್ಧನಿಗೆ ಪ್ರಾರ್ಥಿಸುವಂತೆಯೇ ಆದರೆ ಯಾವುದೇ ಔಷಧಿಯನ್ನು ಎಂದಿಗೂ ತೆಗೆದುಕೊಳ್ಳದಿರುವಂತೆ ಇತ್ತು ಎಂದು ಅವರು ಹೇಳಿದರು. ಅವರು ಟರ್ನರ್ಗೆ ಕೆಲಸ ಪಡೆಯಲು ಮತ್ತು ಬೆಳಿಗ್ಗೆ ಮತ್ತು ರಾತ್ರಿಯಲ್ಲಿ ಕಡಿಮೆ ಸಮಯಕಾಲ ಮಾತ್ರ ತನ್ನ ತೀವ್ರವಾದ ಅಭ್ಯಾಸಗಳನ್ನು ಮಾಡುವಂತೆ ಹೇಳಿದರು. ನಂತರವೇ ಬಿಳಿ ಮಹಾಕಲನನ್ನು ಆಹ್ವಾನಿಸುವುದರಿಂದ ಅವನ ಕೆಲಸವು ಆರ್ಥಿಕವಾಗಿ ಯಶಸ್ವಿಯಾಗಲು ಸಹಾಯ ಮಾಡುತ್ತದೆ.
ಯಾವಾಗಲೂ ಪ್ರಾಯೋಗಿಕ ಮತ್ತು ದಕ್ಷವಾಗಿರುವುದು
ಜನರು ಪ್ರಾಯೋಗಿಕ ಮತ್ತು ದಕ್ಷರಾಗಿರುವುದು ಮತ್ತು ಕನಸಿನಲೋಕದಲ್ಲಿರದೆ ಇರುವುದನ್ನು ರಿನ್ಪೋಚೆ ಇಷ್ಟಪಡುತ್ತಿದ್ದರು. ಹೀಗಾಗಿ, ಅವರು ಯಾವಾಗಲೂ ಅಭ್ಯಾಸಗಳು ಮತ್ತು ಜಪವನ್ನು ತ್ವರಿತವಾಗಿ ಮಾಡಲು ಆದ್ಯತೆ ನೀಡುತ್ತಿದ್ದರು. ಒಮ್ಮೆ, ಮಿಲನ್, ಇಟಲಿಯ ಘೆಫೆಲಿಂಗ್ ಕೇಂದ್ರದ ವಿದ್ಯಾರ್ಥಿಗಳು, ರಿನ್ಪೋಚೆ ಅವರನ್ನು ಧ್ಯಾನ ಅಧಿವೇಶನದ ನೇತೃತ್ವ ವಹಿಸಲು ಮತ್ತು ಕ್ರಮವಾದ ಹಂತಗಳು (ಲ್ಯಾಮ್-ರಿಮ್) ಮತ್ತು ಅವಲೋಕಿತೇಶ್ವರನ ಅಭ್ಯಾಸದ ಕುರಿತು ತಮ್ಮ ಕೋರ್ಸ್ ಅನ್ನು ಮುಕ್ತಾಯಗೊಳಿಸುವಂತೆ ಕೇಳಿಕೊಂಡರು. ರಿನ್ಪೋಚೆ ಒಪ್ಪಿಕೊಂಡರು ಮತ್ತು ಆರು ಪಟ್ಟು ಪ್ರಕ್ರಿಯೆಯ ಮೂಲಕ ಅವಲೋಕಿತೇಶ್ವರರಾಗಿ ತಮ್ಮನ್ನು ತಾವು ಸೃಷ್ಟಿಸಿಕೊಳ್ಳಲು ಮತ್ತು ನಂತರ ಲ್ಯಾಮ್-ರಿಮ್ನ ಹಲವಾರು ಡಜನ್ ಅಂಶಗಳ ಬಗ್ಗೆ ಧ್ಯಾನ ಮಾಡಲು ಮತ್ತು ಇದನ್ನೆಲ್ಲ ಎರಡು ನಿಮಿಷಗಳ ಕಾಲ ಮಾಡಲು ನಿರ್ದೇಶಿಸಿದರು. ವಿದ್ಯಾರ್ಥಿಗಳು ತಮ್ಮ ಅಪನಂಬಿಕೆಯನ್ನು ವ್ಯಕ್ತಪಡಿಸಿದಾಗ ಮತ್ತು ಅವರು ಇದಕ್ಕೆಲ್ಲ ನೀಡಿದ ಸಮಯ ಎಷ್ಟು ಕಡಿಮೆ ಎಂದು ಪ್ರತಿಭಟಿಸಿದಾಗ, ರಿನ್ಪೋಚೆ ಪಶ್ಚಾತ್ತಾಪಪಟ್ಟು, "ಸರಿ, ಇದನ್ನು ಮೂರು ನಿಮಿಷಗಳ ಕಾಲ ಮಾಡಿ" ಎಂದು ಹೇಳಿದರು. ನಂತರ ಒಬ್ಬ ಉತ್ತಮ ಅಭ್ಯಾಸಕಾರ, ಕುದುರೆಯನ್ನು ಹತ್ತುವಾಗ ತಡಿ ಮೇಲೆ ತನ್ನ ಪಾದವನ್ನು ಇಡಲು ತೆಗೆದುಕೊಳ್ಳುವ ಸಮಯದಲ್ಲಿ ಸಂಪೂರ್ಣ ಲ್ಯಾಮ್-ರಿಮ್ ಅನ್ನು ಆವರಿಸಬಹುದು ಎಂದು ವಿವರಿಸಿದರು. ಸಾವು ಬಂದಾಗ, ಚೆನ್ನಾಗಿ ಕುಳಿತು ನಿಧಾನವಾಗಿ, ಕ್ರಮೇಣವಾಗಿ ಪ್ರಕ್ರಿಯೆಯ ಮೂಲಕ ದೃಶ್ಯೀಕರಣವನ್ನು ಸ್ಥಾಪಿಸಲು ಸಮಯವಿರುವುದಿಲ್ಲ.
ನಮ್ಮ ಬೌದ್ಧ ಆಚರಣೆಯಲ್ಲಿ ವಾಸ್ತವಿಕವಾಗಿರುವುದು
ಬೌದ್ಧ ಆಚರಣೆಯ ಎಲ್ಲಾ ಅಂಶಗಳಲ್ಲಿ ವಾಸ್ತವಿಕವಾಗಿರಬೇಕಾದ ಅಗತ್ಯವನ್ನು ರಿನ್ಪೋಚೆ ಒತ್ತಿ ಹೇಳಿದರು. ನಾವು ಇತರರಿಗೆ ಪ್ರಯೋಜನವನ್ನು ನೀಡಲು ಪ್ರಯತ್ನಿಸುತ್ತಿರುವ ಮಹತ್ವಾಕಾಂಕ್ಷಿ ಬೋಧಿಸತ್ವರಾಗಿದ್ದರೆ ಇದು ಬಹಳಾ ಮುಖ್ಯವಾಗಿರುವ ವಿಷಯವಾಗಿರುತ್ತದೆ. ನಮ್ಮ ಕಡೆಯಿಂದ ನಾವು ಯಾವಾಗಲೂ ಸಹಾಯ ಮಾಡಲು ಸಿದ್ಧರಿರಬೇಕು, ಆದರೆ ಇತರರು ನಮ್ಮ ಸಹಾಯಕ್ಕೆ ಮುಕ್ತರಾಗಿರುವುದು ಮತ್ತು ಅಂತಿಮವಾಗಿ ನಮ್ಮ ಪ್ರಯತ್ನಗಳ ಯಶಸ್ಸು ಅವರ ಕರ್ಮವನ್ನು - ಅವರ ಮನಸ್ಸನ್ನು ಹತೋಟಿಗೆ ತಂದ ಹಿಂದಿನ ಮಾದರಿಗಳು - ಅವಲಂಬಿಸಿರುತ್ತದೆ ಎಂಬುದನ್ನು ನಾವು ನೆನಪಿನಲ್ಲಿಡಬೇಕು. ಆದ್ದರಿಂದ, ನಮಗೆ ಸಂಬಂಧಿಸದ ವಿಷಯಗಳಲ್ಲಿ ಅಥವಾ ಇತರರು ನಮ್ಮ ಸಹಾಯವನ್ನು ಪಡೆಯಲು ಆಸಕ್ತಿ ಹೊಂದಿಲ್ಲದಿದ್ದಾಗ ಸಹಾಯ ಮಾಡಲು ಮುಂದಾಗುವುದರ ವಿರುದ್ಧ ರಿನ್ಪೋಚೆ ಎಚ್ಚರಿಸಿದರು. ನಮ್ಮ ಹಸ್ತಕ್ಷೇಪವು ಅಸಮಾಧಾನವನ್ನು ಉಂಟುಮಾಡುತ್ತದೆ ಮತ್ತು ನಮ್ಮ ಸಹಾಯ ವಿಫಲವಾದರೆ, ನಾವೇ ಎಲ್ಲಾ ಆರೋಪಗಳನ್ನು ಸ್ವೀಕರಿಸುತ್ತೇವೆ.
ಬೌದ್ಧ ಕೇಂದ್ರಗಳಿಗೆ ಸಲಹೆ
ಪಾಶ್ಚಿಮಾತ್ಯ ಬೌದ್ಧ ಕೇಂದ್ರಗಳ ಬಗ್ಗೆ ರಿನ್ಪೋಚೆ ಇದೇ ವಿಧಾನವನ್ನು ಸಲಹೆ ನೀಡಿದರು. ಸಾಲಗಳು ಮತ್ತು ಕಾರ್ಯಗತಗೊಳಿಸಲು ಅಥವಾ ಪೂರ್ಣಗೊಳಿಸಲು ಸಾಧ್ಯವಾಗದ ಯೋಜನೆಗಳ ಭರವಸೆಗಳಿಂದ ತಮ್ಮ ಮೇಲೆ ತಾವೆ ಹೊರೆ ಹಾಕಿಕೊಳ್ಳುವುದನ್ನು ತಪ್ಪಿಸುವಂತೆ ಅವರು ಹೇಳಿದರು. ಸಣ್ಣದಾಗಿ ಮತ್ತು ಆಡಂಬರವಿಲ್ಲದೆ ಪ್ರಾರಂಭಿಸಲು ಮತ್ತು ದೂರದ ಹಳ್ಳಿಗಾಡಿನ ಪ್ರದೇಶಗಳಲ್ಲಿ ನೆಲೆಗೊಳ್ಳುವ ಪ್ರಲೋಭನೆಯನ್ನು ವಿರೋಧಿಸಲು ಅವರು ಹೇಳಿದರು. ಬೌದ್ಧ ಕೇಂದ್ರಗಳು ನಗರವಾಸಿಗಳು ತಲುಪಲು ಮತ್ತು ನಿವಾಸಿಗಳು ಹತ್ತಿರದಲ್ಲಿ ಕೆಲಸವನ್ನು ಹುಡುಕುವಂತೆ ಅನುಕೂಲಕರವಾಗಿರಬೇಕು. ಆ ಗುಂಪು ಯಾವಾಗ ಬೇಕಾದರೂ ಕೇಂದ್ರವನ್ನು ಮಾರಾಟ ಮಾಡಬಹುದು ಮತ್ತು ಅಗತ್ಯವಿದ್ದರೆ ದೊಡ್ಡದನ್ನು ಖರೀದಿಸಬಹುದು, ಆದರೆ ಎಲ್ಲವೂ ಸರಿಯಾದ ಸಮಯದಲ್ಲಿ ಆಗುತ್ತದೆ.
ಬೌದ್ಧ ಕೇಂದ್ರಗಳ ಉದ್ದೇಶವು ಸರ್ಕಸ್ನಂತೆ ಆಡಂಬರದ ಜಾಹೀರಾತಿನೊಂದಿಗೆ ದೊಡ್ಡ ಜನಸಮೂಹವನ್ನು ಆಕರ್ಷಿಸುವುದಲ್ಲ. ರಿನ್ಪೋಚೆ ಯಾವಾಗಲೂ ಪ್ರಾಮಾಣಿಕ ವಿದ್ಯಾರ್ಥಿಗಳ ಸಣ್ಣ ಗುಂಪುಗಳಿಗೆ ಆದ್ಯತೆ ನೀಡುತ್ತಿದ್ದರು. ಇದಲ್ಲದೆ, ಆಧ್ಯಾತ್ಮಿಕ ಗುರುವನ್ನು ಆಯ್ಕೆಮಾಡುವಾಗ, ಮುಖ್ಯ ವಿಷಯವೆಂದರೆ ವ್ಯಕ್ತಿಯು ಎಷ್ಟು ಮನರಂಜನೆ ನೀಡುತ್ತಾನೆ ಅಥವಾ ಅವನು ಅಥವಾ ಅವಳು ಹೇಳುವ ಕಥೆಗಳು ಎಷ್ಟು ತಮಾಷೆಯಾಗಿವೆ ಎಂಬುದು ಅಲ್ಲ. ನಾವು ನಗಲು ಅಥವಾ ವಿಲಕ್ಷಣವಾದದ್ದನ್ನು ನೋಡಲು ಬಯಸಿದರೆ, ನಾವು ಸರ್ಕಸ್ನಲ್ಲಿರುವ ವಿದೂಷಕರನ್ನು ನೋಡಲು ಹೋಗಬಹುದು ಅಥವಾ ಸೈಡ್ಶೋಗೆ ಭೇಟಿ ನೀಡಬಹುದು.