ಜೀವನದಲ್ಲಿನ ಸಮಸ್ಯೆಗಳು
ನಮ್ಮಲ್ಲಿ ಬಹುತೇಕವಾಗಿ ಎಲ್ಲರೂ ನಮ್ಮ ನಮ್ಮ ಜೀವನದಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ ಎಂದು ಭಾವಿಸುತ್ತೇವೆ. ನಾವು ಸಂತೋಷವಾಗಿರಲು ಬಯಸುತ್ತೇವೆ. ನಮಗೆ ಯಾವುದೇ ಸಮಸ್ಯೆಗಳು ಇರಬೇಕೆಂದು ಬಯಸುವುದಿಲ್ಲ, ಆದರೆ ನಾವು ನಿರಂತರವಾಗಿ ಅನೇಕ ವಿಭಿನ್ನ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಕೆಲವೊಮ್ಮೆ ನಾವು ಖಿನ್ನತೆಗೆ ಒಳಗಾಗುತ್ತೇವೆ; ನಾವು ತೊಂದರೆಗಳನ್ನು ಎದುರಿಸುತ್ತೇವೆ ಮತ್ತು ನಮ್ಮ ಕೆಲಸದಲ್ಲಿ ನಾವು ನಿರಾಶೆಗೊಳ್ಳುತ್ತೇವೆ, ನಮ್ಮ ಸಾಮಾಜಿಕ ಸ್ಥಾನಮಾನಗಳು, ನಮ್ಮ ಜೀವನ ಪರಿಸ್ಥಿತಿಗಳು ಅಥವಾ ಕುಟುಂಬ ಸನ್ನಿವೇಶಗಳಿಂದ ನಿರಾಶೆಗೊಳ್ಳುತ್ತೇವೆ. ನಮಗೆ ಬೇಕಾದುದನ್ನು ಪಡೆಯದಿರುವ ಸಮಸ್ಯೆಗಳಿವೆ. ನಾವು ಯಶಸ್ವಿಯಾಗಲು ಬಯಸುತ್ತೇವೆ. ನಮ್ಮ ಕುಟುಂಬಗಳಿಗೆ ಮತ್ತು ನಮ್ಮ ವ್ಯವಹಾರಗಳಲ್ಲಿ ಒಳ್ಳೆಯದೇ ಆಗಬೇಕೆಂದು ನಾವು ಬಯಸುತ್ತೇವೆ, ಆದರೆ ಇದು ಯಾವಾಗಲೂ ಸಂಭವಿಸುವುದಿಲ್ಲ. ನಂತರ, ನಮಗೆ ಈ ಸಮಸ್ಯೆಗಳು ಬಂದಾಗ, ನಾವು ಅತೃಪ್ತರಾಗುತ್ತೇವೆ. ಕೆಲವೊಮ್ಮೆ ನಾವು ಬಯಸದ ವಿಷಯಗಳು ನಮಗೆ ಸಂಭವಿಸುತ್ತವೆ, ಉದಾಹರಣೆಗೆ ನಾವು ವಯಸ್ಸಾದಾಗ ಅನಾರೋಗ್ಯಕ್ಕೆ ಒಳಗಾಗುತ್ತೇವೆ ಅಥವಾ ತುಂಬಾ ದುರ್ಬಲರಾಗುತ್ತೇವೆ, ಅಥವಾ ನಮ್ಮ ಶ್ರವಣ ಅಥವಾ ದೃಷ್ಟಿ ಕಳೆದುಕೊಳ್ಳುತ್ತೇವೆ. ನಿರ್ವಿವಾದವಾಗಿ, ಯಾರೂ ಹಾಗೆ ಆಗಬೇಕೆಂದು ಬಯಸುವುದಿಲ್ಲ.
ನಮ್ಮ ಕೆಲಸದಲ್ಲಿ ನಮಗೆ ಸಮಸ್ಯೆಗಳಿವೆ. ಕೆಲವೊಮ್ಮೆ ವಿಷಯಗಳು ಕೆಟ್ಟದಾಗಿ ನಡೆಯುತ್ತವೆ ಮತ್ತು ನಮ್ಮ ವ್ಯವಹಾರವು ಕುಸಿಯುತ್ತದೆ ಅಥವಾ ವಿಫಲಗೊಳ್ಳುತ್ತದೆ. ಅದು ನಿಸ್ಸಂದೇಹವಾಗಿ ನಾವು ಬಯಸದ ವಿಷಯ, ಆದರೆ ಅದು ಖಂಡಿತ ಸಂಭವಿಸುತ್ತದೆ. ಕೆಲವೊಮ್ಮೆ ನಮಗೆ ಹಾನಿಯಾಗುತ್ತದೆ, ನಾವು ನಮ್ಮನ್ನು ನೋಯಿಸಿಕೊಳ್ಳುತ್ತೇವೆ; ನಮಗೆ ಅಪಘಾತಗಳು ಸಂಭವಿಸುತ್ತವೆ; ನಾವು ಅನಾರೋಗ್ಯಕ್ಕೆ ಒಳಗಾಗುತ್ತೇವೆ. ಇವೆಲ್ಲವೂ ನಾವು ಎದುರಿಸುತ್ತಿರುವ ಸಮಸ್ಯೆಗಳಾಗಿರುತ್ತವೆ.
ಇವುಗಳ ಜೊತೆಗೆ, ನಾವು ಅನೇಕ ಭಾವನಾತ್ಮಕ ಮತ್ತು ಮಾನಸಿಕ ಸಮಸ್ಯೆಗಳನ್ನು ಸಹ ಎದುರಿಸುತ್ತೇವೆ. ಇವುಗಳು ನಾವು ಇತರರೊಂದಿಗೆ ಚರ್ಚಿಸಲು ಅಥವಾ ಬಹಿರಂಗಪಡಿಸಲು ಇಷ್ಟಪಡದ ವಿಷಯಗಳಾಗಿರಬಹುದು. ಆದರೆ ನಮ್ಮೊಳಗೆ, ನಮ್ಮ ಮಕ್ಕಳೊಂದಿಗೆ ನಮ್ಮ ನಿರೀಕ್ಷೆಗಳು, ನಮ್ಮ ಚಿಂತೆಗಳು ಅಥವಾ ನಮ್ಮ ಆತಂಕಗಳ ವಿಷಯದಲ್ಲಿ ನಮ್ಮನ್ನು ತೊಂದರೆಗೊಳಿಸುತ್ತಿರುವ ಕೆಲವು ವಿಷಯಗಳಿವೆ ಎಂದು ನಾವು ಕಂಡುಕೊಳ್ಳುತ್ತೇವೆ, ಅದು ನಮಗೆ ಬಹಳಷ್ಟು ತೊಂದರೆಗಳನ್ನು ನೀಡುತ್ತದೆ. ಇವುಗಳನ್ನು ನಾವು ಸಂಸ್ಕೃತದಲ್ಲಿ "ಅನಿಯಂತ್ರಿತವಾಗಿರುವ ಪುನರಾವರ್ತಿತ ಸನ್ನಿವೇಶಗಳು ಅಥವಾ ಸಮಸ್ಯೆಗಳು" ಎಂದು ಕರೆಯುತ್ತೇವೆ: ಸಂಸಾರ.
ಅನಿಯಂತ್ರಿತವಾಗಿ ಪುನರಾವರ್ತಿತವಾಗುವ ಸಮಸ್ಯೆಗಳು ಸಂಸಾರ
ನನ್ನ ಹಿನ್ನೆಲೆ ಮತ್ತು ತರಬೇತಿಯು ಭಾಷಾಂತರಕಾರದಲ್ಲಿ ಆಗಿದೆ, ಮತ್ತು ಭಾಷಾಂತರಕಾರನಾಗಿ ನಾನು ಪ್ರಪಂಚದಾದ್ಯಂತ ವಿವಿಧ ದೇಶಗಳಿಗೆ ಪ್ರಯಾಣಿಸಿ ಬೌದ್ಧಧರ್ಮದ ಬಗ್ಗೆ ಭಾಷಾಂತರಿಸಲು ಮತ್ತು ಉಪನ್ಯಾಸ ನೀಡಿದ್ದೇನೆ. ಬೌದ್ಧಧರ್ಮದ ಬಗ್ಗೆ ಸಾಕಷ್ಟು ತಪ್ಪು ತಿಳುವಳಿಕೆ ಇದೆ ಎಂದು ನಾನು ಕಂಡುಕೊಂಡಿದ್ದೇನೆ. ಬೌದ್ಧಧರ್ಮದ ಬಗ್ಗೆ ತಪ್ಪು ತಿಳುವಳಿಕೆಯು ಹೆಚ್ಚಾಗಿ ಮೂಲ ಪದಗಳು ಮತ್ತು ವಿಚಾರಗಳನ್ನು ಭಾಷಾಂತರಿಸಲು ಆಯ್ಕೆ ಮಾಡಲಾದ ಇಂಗ್ಲಿಷ್ ಪದಗಳಿಂದಾಗಿದೆ ಎಂದು ತೋರುತ್ತದೆ. ಈ ಪದಗಳಲ್ಲಿ ಹಲವು, ಕಳೆದ ಶತಮಾನದಲ್ಲಿ ವಿಕ್ಟೋರಿಯನ್ ಮಿಷನರಿಗಳಿಂದ ಆರಿಸಲ್ಪಟ್ಟಿದ್ದು, ಅವುಗಳನ್ನು ಅರ್ಥೈಸಲ್ಪಟ್ಟ ರೀತಿಯು ಏಷ್ಯನ್ ಭಾಷೆಗಳಲ್ಲಿನ ಮೂಲ ಪದಗಳು ಹೊಂದಿದ್ದ ಅರ್ಥಗಳಿಂದ ಬಹಳಾ ದೂರವಿದೆ. ಉದಾಹರಣೆಗೆ, ನಾವು ಸಮಸ್ಯೆಗಳ ಬಗ್ಗೆ ಮಾತನಾಡುತ್ತಿದ್ದೇವೆ. ಅದನ್ನು ಸಾಮಾನ್ಯವಾಗಿ "ದುಃಖ" ಎಂದು ಅನುವಾದಿಸಲಾಗುತ್ತದೆ. ನಾವು ದುಃಖದ ಬಗ್ಗೆ ಮಾತನಾಡಿದರೆ, ಬೌದ್ಧಧರ್ಮವು ಬಹಳಾ ನಿರಾಶಾವಾದಿ ಧರ್ಮ ಎಂಬ ಕಲ್ಪನೆಯನ್ನು ಬಹಳಷ್ಟು ಜನರು ಪಡೆಯುತ್ತಾರೆ, ಏಕೆಂದರೆ ಅದು ಎಲ್ಲರ ಜೀವನವೂ ದುಃಖದಿಂದ ತುಂಬಿದೆ ಎಂದು ಹೇಳುತ್ತದೆ. ನಮಗೆ ಸಂತೋಷವಾಗಿರಲು ಹಕ್ಕಿಲ್ಲ ಎಂದು ಅದು ಹೇಳುತ್ತದೆ. ನಾವು ಆರಾಮದಾಯಕ, ಉತ್ತಮ ಸ್ಥಿತಿಯಲ್ಲಿರುವ ಮತ್ತು ಶ್ರೀಮಂತರಾಗಿರುವ ಯಾರೊಂದಿಗಾದರೂ ಮಾತನಾಡಿದರೆ, ಮತ್ತು ನಾವು ಅವರಿಗೆ, "ನಿಮ್ಮ ಜೀವನವು ದುಃಖದಿಂದ ತುಂಬಿದೆ" ಎಂದು ಹೇಳಿದರೆ, ಆ ವ್ಯಕ್ತಿಯು ಬಹಳಾ ಗಲಿಬಿಲಿಗೊಂಡು, ಸಂಕುಚಿತವಾಗಿ ವರ್ತಿಸುತ್ತಾನೆ. ಅವರು ವಾದಿಸಬಹುದು ಮತ್ತು ಹೀಗೆ ಹೇಳಬಹುದು: "ನೀವು ಏನು ಹೇಳುತ್ತೀದ್ದೀರಿ? ನನ್ನ ಬಳಿ ವೀಡಿಯೊ ರೆಕಾರ್ಡರ್ ಇದೆ, ನನ್ನ ಬಳಿ ಒಳ್ಳೆಯ ಕಾರು ಇದೆ ಮತ್ತು ಒಳ್ಳೆಯ ಕುಟುಂಬವಿದೆ. ನಾನು ದುಃಖದಲ್ಲಿಲ್ಲ."
"ದುಃಖ" ಎಂಬ ಪದವು ಬಹಳಾ ಭಾರವಾದ ಪದವಾಗಿರುವುದರಿಂದ ಅವರ ಪ್ರತಿಕ್ರಿಯೆಯನ್ನು ಸಮರ್ಥಿಸಬಹುದು. ಬದಲಿಗೆ, ನಾವು ಅದೇ ಬೌದ್ಧ ಪರಿಕಲ್ಪನೆಯನ್ನು "ಸಮಸ್ಯೆಗಳು" ಎಂದು ಭಾಷಾಂತರಿಸಿದರೆ, ಮತ್ತು ನಂತರ ನಾವು ಯಾರಿಗಾದರೂ: "ನೀವು ಯಾರೇ ಆಗಿರಲಿ, ನೀವು ಎಷ್ಟೇ ಶ್ರೀಮಂತರಾಗಿದ್ದರೂ, ನಿಮಗೆ ಎಷ್ಟು ಮಕ್ಕಳಿದ್ದರೂ, ಪ್ರತಿಯೊಬ್ಬರಿಗೂ ಜೀವನದಲ್ಲಿ ಕೆಲವು ಸಮಸ್ಯೆಗಳಿವೆ" ಎಂದು ಹೇಳಿದರೆ, ಇದು ಎಲ್ಲರೂ ಸ್ವೀಕರಿಸಲು ಸಿದ್ಧರಿರುವ ವಿಷಯ. ಆದ್ದರಿಂದ, ಟಿಬೆಟಿಯನ್ ಸಂಪ್ರದಾಯದಿಂದ ಈ ಬೌದ್ಧ ವಿವರಣೆಗಳನ್ನು ನಾವು ಸಾಮಾನ್ಯವಾಗಿ ಬಳಸುವ ಪದಗಳಿಗಿಂತ ಸ್ವಲ್ಪ ವಿಭಿನ್ನ ಪದಗಳಲ್ಲಿ ಚರ್ಚಿಸುತ್ತೇನೆ.
ಅನಿಯಂತ್ರಿತವಾಗಿ ಮರುಕಳಿಸುವ ಸಮಸ್ಯೆಗಳು ಸಂಸಾರ. ಸಡಿಲ ಅರ್ಥದಲ್ಲಿ, "ಸಂಸಾರ" ಎಂಬುದು ನಮಗೆ ಯಾವುದೇ ನಿಯಂತ್ರಣವಿಲ್ಲದ ಮತ್ತು ಮರುಕಳಿಸುತ್ತಲೇ ಇರುವ ಸಂದರ್ಭಗಳನ್ನು ಸೂಚಿಸುತ್ತದೆ - ಉದಾಹರಣೆಗೆ, ಯಾವಾಗಲೂ ನಿರಾಶೆಗೊಂಡಿರುವುದು ಅಥವಾ ಯಾವಾಗಲೂ ಚಿಂತೆ ಮತ್ತು ಆತಂಕಗಳನ್ನು ಹೊಂದಿರುವುದು. ಅವುಗಳಿಗೆ ನಿಜವಾದ ಕಾರಣಗಳು ಯಾವುವು? ಬುದ್ಧನು ನಾವು ಎದುರಿಸುತ್ತಿರುವ ನಿಜವಾದ ಸಮಸ್ಯೆಗಳ ಬಗ್ಗೆ ಮಾತ್ರವಲ್ಲ, ಅವುಗಳಿಗೆ ನಿಜವಾದ ಕಾರಣಗಳಿವೆ ಮತ್ತು ಅವುಗಳನ್ನು ನಿಲ್ಲಿಸಲು ಸಾಧ್ಯ ಎಂಬುದರ ಕುರಿತು ಮಾತನಾಡಿದರು. ಅವುಗಳನ್ನು ನಿಲ್ಲಿಸುವ, ಅವುಗಳ ನಿಜವಾದ ನಿಲುಗಡೆಗಳನ್ನು ಸಾಧಿಸುವ ಮಾರ್ಗವೆಂದರೆ ನಿಜವಾದ ಮಾರ್ಗವನ್ನು ಅನುಸರಿಸುವುದು, ಅಂದರೆ ನಿಜವಾದ ಮಾರ್ಗ ಮನಸ್ಸುಗಳನ್ನು ಅಭಿವೃದ್ಧಿಪಡಿಸುವುದು, ಕಾರಣಗಳನ್ನು ನಿವಾರಿಸುವ ತಿಳುವಳಿಕೆಯ ಮಾರ್ಗಗಳು. ನಾವು ಕಾರಣಗಳನ್ನು ನಿವಾರಿಸಿದ ನಂತರ, ನಾವು ಸಮಸ್ಯೆಗಳನ್ನು ನಿವಾರಿಸಿದ್ದೇವೆ.
ಸಮಸ್ಯೆಗಳ ಮೂಲ: ಘನ ಗುರುತನ್ನು ಗ್ರಹಿಸುವುದು
ಜೀವನದಲ್ಲಿ ನಾವು ಎದುರಿಸುತ್ತಿರುವ ಈ ಅನಿಯಂತ್ರಿತವಾಗಿ ಪುನರಾವರ್ತಿತ ಸಮಸ್ಯೆಗಳಿಗೆ ನಿಜವಾದ ಕಾರಣವೆಂದರೆ ನಮಗೆ ವಾಸ್ತವದ ಅರಿವಿಲ್ಲ. ನಾವು ನಿಜವಾಗಿಯೂ ಯಾರು, ಇತರರು ನಿಜವಾಗಿಯೂ ಯಾರು, ಜೀವನದ ಅರ್ಥವೇನು, ಜಗತ್ತಿನಲ್ಲಿ ನಿಜವಾಗಿಯೂ ಏನು ನಡೆಯುತ್ತಿದೆ ಎಂಬುದರ ಬಗ್ಗೆ ನಮಗೆ ಅರಿವಿಲ್ಲ. ನಾನು "ಅಜ್ಞಾನ" ಕ್ಕಿಂತ "ಅರಿವು" ಎಂಬುದನ್ನು ಬಳಸುತ್ತೇನೆ. "ಅಜ್ಞಾನ" ಎಂದರೆ ನೀವು ಮೂರ್ಖರು ಮತ್ತು ನಿಮಗೆ ಅರ್ಥವಾಗುವುದಿಲ್ಲ ಎಂದು ಯಾರೋ ಹೇಳುತ್ತಿರುವಂತೆ ತೋರುತ್ತದೆ. ಅದರ ಬದಲು, ನಮಗೆ ಅರಿವಿಲ್ಲ, ಮತ್ತು ನಮಗೆ ಅರಿವಿಲ್ಲದ ಕಾರಣ, ನಾವು ಇದನ್ನು ಮಾನಸಿಕ ಮಟ್ಟದಲ್ಲಿ ಅಭದ್ರತೆ ಎಂದು ಅನುಭವಿಸುತ್ತೇವೆ. ಈ ಅಭದ್ರತೆಯಿಂದಾಗಿ, ನಾವು ಒಂದು ರೀತಿಯ "ನಾನು" ಎಂಬ ಘನ ಗುರುತಿನ ಒಂದು ವಸ್ತುವನ್ನು ಗ್ರಹಿಸುತ್ತೇವೆ: "ನಾನು ಯಾರೆಂದು ಅಥವಾ ನಾನು ಹೇಗೆ ಅಸ್ತಿತ್ವದಲ್ಲಿದ್ದೇನೆ ಎಂದು ನನಗೆ ತಿಳಿದಿಲ್ಲ, ಆದ್ದರಿಂದ ನಾನು ನಿಜವಾದದ್ದನ್ನು ಅಥವಾ ನನ್ನ ಬಗ್ಗೆ ಕೇವಲ ಒಂದು ಕಲ್ಪನೆಯನ್ನು ಹಿಡಿದು ಇದು ನಾನು, ಇದು ನಿಜವಾಗಿಯೂ ನಾನು ಎಂದು ಹೇಳುತ್ತೇನೆ."
ಉದಾಹರಣೆಗೆ, ನಾವು ತಂದೆಯಾಗಿ ಒಂದು ಗುರುತನ್ನು ಗ್ರಹಿಸಬಹುದು: "ಇದು ನಾನು, ನಾನೊಬ್ಬ ತಂದೆ, ನನ್ನ ಕುಟುಂಬ ನನ್ನನ್ನು ಗೌರವಿಸಬೇಕು. ನನ್ನ ಮಕ್ಕಳು ನನ್ನ ಬಗ್ಗೆ ಗೌರವ ಮತ್ತು ವಿಧೇಯತೆಯ ಮನೋಭಾವವನ್ನು ಹೊಂದಿರಬೇಕು." ಜೀವನದಲ್ಲಿ ನಮ್ಮ ಸಂಪೂರ್ಣ ದೃಷ್ಟಿಕೋನವು ತಂದೆಯಾಗುವ ವಿಷಯದಲ್ಲಿದ್ದರೆ, ಅದು ನಿಸ್ಸಂದೇಹವಾಗಿ ನಮ್ಮನ್ನು ಕೆಲವು ತೊಂದರೆಗಳಲ್ಲಿ ಸಿಲುಕಿಸುತ್ತದೆ. ಏಕೆಂದರೆ ನಮ್ಮ ಮಕ್ಕಳು ಅದನ್ನು ಗೌರವಿಸದಿದ್ದರೆ, ಅಲ್ಲೊಂದು ಸಮಸ್ಯೆ ಇದೆ. ನಾವು ಕಚೇರಿಯಲ್ಲಿದ್ದರೆ, ಜನರು ನಮ್ಮನ್ನು "ತಂದೆ" ಅಥವಾ ಅಂತಹ ಗೌರವಕ್ಕೆ ಅರ್ಹ ವ್ಯಕ್ತಿ ಎಂದು ನೋಡುವುದಿಲ್ಲ. ಇದು ಮತ್ತೆ ತೊಂದರೆ ಉಂಟುಮಾಡಬಹುದು. ನಾನು ನನ್ನ ಕುಟುಂಬದಲ್ಲಿ ಆಡಳಿತಗಾರನಾಗಿದ್ದರೆ ಮತ್ತು ನಾನು ಕಚೇರಿಗೆ ಹೋದಾಗ, ಕಚೇರಿಯಲ್ಲಿರುವ ಇತರರು ನನ್ನನ್ನು ಕೀಳಾಗಿ ನೋಡಿದರೆ, ಕೀಳಾಗಿ ನಡೆಸಿಕೊಂಡರೆ ಮತ್ತು ನಾನು ಅವರಿಗೆ ಗೌರವ ತೋರಿಸಬೇಕಾದರೆ ಏನು ಮಾಡುವುದು? ನಾವು ತಂದೆ ಎಂಬ ಗುರುತನ್ನು ಬಹಳಾ ಬಿಗಿಯಾಗಿ ಗ್ರಹಿಸಿದರೆ ಮತ್ತು ಗೌರವವನ್ನು ಆಜ್ಞಾಪಿಸಿದರೆ, ಇತರರು ನಮ್ಮನ್ನು ಆ ರೀತಿ ನಡೆಸಿಕೊಳ್ಳದಿದ್ದಾಗ ನಾವು ಕಚೇರಿಯಲ್ಲಿ ಬಹಳಾ ಅತೃಪ್ತರಾಗಬಹುದು.
ನಾವು ಯಶಸ್ವಿಯಾದ ಉದ್ಯಮಿ ಎಂಬ ಗುರುತನ್ನು ಹೊಂದಿರಬಹುದು: "ನಾನೊಬ್ಬ ಯಶಸ್ವಿ ಉದ್ಯಮಿ. ನಾನು ಇರುವುದೇ ಹೀಗೆ; ಹೀಗೇ ಎಲ್ಲವೂ ಇರಬೇಕು.” ಆದರೆ, ನಮ್ಮ ವ್ಯವಹಾರ ವಿಫಲವಾದರೆ ಅಥವಾ ವ್ಯವಹಾರವು ಹದಗೆಟ್ಟಿದರೆ, ನಾವು ಸಂಪೂರ್ಣವಾಗಿ ಛಿದ್ರವಾಗುತ್ತೇವೆ. ಕೆಲವರು ತಮ್ಮ ವ್ಯವಹಾರ ವಿಫಲವಾದರೆ ಆತ್ಮಹತ್ಯೆ ಮಾಡಿಕೊಳ್ಳಬಹುದು ಅಥವಾ ಎಲ್ಲಾ ರೀತಿಯ ಭಯಾನಕ ಕೃತ್ಯಗಳನ್ನು ಎಸಗಬಹುದು, ಏಕೆಂದರೆ ಅವರು ಗ್ರಹಿಸುತ್ತಿರುವ ಈ ಬಲವಾದ ಗುರುತಿಲ್ಲದೆ, ಜೀವನವನ್ನು ನಡೆಸುವುದನ್ನು ಅವರು ಸಂಪೂರ್ಣವಾಗಿ ನೋಡಲು ಸಾಧ್ಯವಿಲ್ಲ.
ಅಥವಾ ನಾವು ನಮ್ಮ ಗುರುತನ್ನು ಪುರುಷತ್ವದ ಆಧಾರದ ಮೇಲೆ ಇಟ್ಟುಕೊಳ್ಳಬಹುದು: "ಇದೇ ನಾನು; ನಾನೇ ಪುರುಷತ್ವ, ಸುಂದರವಾದ, ಆಕರ್ಷಕ ವ್ಯಕ್ತಿ." ಆದರೆ ನಮಗೆ ವಯಸ್ಸಾಗಲು ಶುರುವಾಗಿ ನಮ್ಮ ಪುರುಷತ್ವವನ್ನು ಕಳೆದುಕೊಂಡ ನಂತರ, ಇದು ನಮ್ಮನ್ನು ಹುಚ್ಚರನ್ನಾಗಿ ಮಾಡಬಹುದು. ಅದು ಕೆಲವರ ಸ್ವಯಂ ಗುರುತಾಗಿದ್ದರೆ ಅವರು ಸಂಪೂರ್ಣವಾಗಿ ಪುಡಿಪುಡಿಯಾಗಬಹುದು. ಜೀವನದಲ್ಲಿ ಎಲ್ಲವೂ ಬದಲಾಗುತ್ತದೆ ಮತ್ತು ಈ ಗುರುತು ಶಾಶ್ವತವಲ್ಲ ಎಂದು ಅವರು ನೋಡಲು ಸಿದ್ಧರಿರುವುದಿಲ್ಲ.
ನಾವು ಸಾಂಪ್ರದಾಯಿಕ ವ್ಯಕ್ತಿ ಎಂದು ನಾವು ಭಾವಿಸಬಹುದು, ಆದ್ದರಿಂದ ಎಲ್ಲವೂ ಸಾಂಪ್ರದಾಯಿಕ ವಿಧಾನಗಳ ಪ್ರಕಾರ ನಡೆಯಬೇಕು ಎಂದು ಯೋಚಿಸಬಹುದು. ಸಮಾಜ ಬದಲಾದಾಗ ಮತ್ತು ಯುವಜನರು ನಮ್ಮ ಗುರುತನ್ನು ಆಧರಿಸಿದ ಸಂಪ್ರದಾಯಗಳನ್ನು ಅನುಸರಿಸುವುದನ್ನು ನಿಲ್ಲಿಸಿದಾಗ, ನಾವು ಬಹಳಾ ಕೋಪಗೊಳ್ಳಬಹುದು, ಬಹಳಾ ಅಸಮಾಧಾನಗೊಳ್ಳಬಹುದು, ಬಹಳಾ ನೋವಿಗೊಳಗಾಗಬಹುದು. ನಮ್ಮ ಸಾಂಪ್ರದಾಯಿಕ ಚೀನೀ ಪದ್ಧತಿಗಳನ್ನು, ನಾವು ಬೆಳೆದ ಸಾಂಪ್ರದಾಯಿಕ ವಿಧಾನವನ್ನು ಅನುಸರಿಸದ ಜಗತ್ತಿನಲ್ಲಿ ನಾವು ಹೇಗೆ ಬದುಕಬಹುದು ಎಂಬುದನ್ನು ನಮಗೆ ನಿಜವಾಗಿಯೂ ಊಹಿಸಲು ಸಾಧ್ಯವಿಲ್ಲ.
ಮತ್ತೊಂದೆಡೆ, ಒಬ್ಬ ಯುವಕನಾಗಿ ನಾವು ಆಧುನಿಕ ವ್ಯಕ್ತಿಯಾಗಿ ನಮ್ಮ ಗುರುತನ್ನು ಆಧರಿಸಿರಬಹುದು: "ನಾನು ಪ್ರಪಂಚದ ಆಧುನಿಕ ವ್ಯಕ್ತಿ; ನನಗೆ ಈ ಸಾಂಪ್ರದಾಯಿಕ ಮೌಲ್ಯಗಳ ಅಗತ್ಯವಿಲ್ಲ." ನಾವು ಇದನ್ನು ತುಂಬಾ ಬಿಗಿಯಾಗಿ ಗ್ರಹಿಸಿದರೆ ಮತ್ತು ನಂತರ ನಮ್ಮ ಪೋಷಕರು ಸಾಂಪ್ರದಾಯಿಕ ಮೌಲ್ಯಗಳನ್ನು ಅನುಸರಿಸಬೇಕು ಮತ್ತು ಅವುಗಳನ್ನು ಸಾಂಪ್ರದಾಯಿಕ ರೀತಿಯಲ್ಲಿ ನಡೆಸಿಕೊಳ್ಳಬೇಕು ಎಂದು ಒತ್ತಾಯಿಸಲು ಪ್ರಾರಂಭಿಸಿದರೆ, ಆಧುನಿಕ ಯುವಕನಾಗಿ, ನಾವು ಬಹಳಾ ಕೋಪಗೊಳ್ಳಬಹುದು. ನಾವು ಅದನ್ನು ವ್ಯಕ್ತಪಡಿಸದಿರಬಹುದು, ಆದರೆ ನಮ್ಮ ಗುರುತು ಆಧುನಿಕ ವ್ಯಕ್ತಿಯಾಗಿರುವುದರಿಂದ, ಚೀನೀ ಹೊಸ ವರ್ಷದ ದಿನದಂದು ನಮ್ಮ ಪೋಷಕರನ್ನು ಭೇಟಿ ಮಾಡುವ ಅಗತ್ಯವಿಲ್ಲ ಎಂದು ನಾವು ಒಳಗೆ ಭಾವಿಸುತ್ತೇವೆ; ನಾವು ಈ ಎಲ್ಲಾ ಸಾಂಪ್ರದಾಯಿಕ ಕೆಲಸಗಳನ್ನು ಮಾಡುವ ಅಗತ್ಯವಿಲ್ಲ ಎಂದು ಭಾವಿಸುತ್ತೇವೆ, ಆದ್ದರಿಂದ ನಮಗೆ ಬಹಳಷ್ಟು ಸಮಸ್ಯೆಗಳು ಎದುರಾಗುತ್ತವೆ.
ನಾವು ನಮ್ಮ ವೃತ್ತಿಯೊಂದಿಗೆ ಗುರುತಿಸಿಕೊಳ್ಳಬಹುದು. ನಂತರ ನಮ್ಮ ವ್ಯವಹಾರ ವಿಫಲವಾದರೆ ಮತ್ತು ನಾವು ಹೊಂದಿದ್ದ ಈ ಒಂದು ವೃತ್ತಿಯ ಪರಿಭಾಷೆಯಲ್ಲಿ ಮಾತ್ರ ನಮ್ಮ ಬಗ್ಗೆ ಯೋಚಿಸಿದರೆ, ನಾವು ಹೊಂದಿಕೊಳ್ಳುವುದಿಲ್ಲ. ನಾವು ಮೊದಲು ಮಾಡಿದ ಆ ಕೆಲಸವನ್ನು ಮಾಡಲು ಸಾಧ್ಯವಾಗದಿದ್ದಾಗ, ನಮ್ಮ ಪ್ರಪಂಚವು ಕೊನೆಗೊಳ್ಳಲಿದೆ ಎಂದು ನಮಗೆ ಅನಿಸುತ್ತದೆ. ಬೇರೆ ವೃತ್ತಿಯನ್ನು ಪ್ರವೇಶಿಸುವುದು ಸಾಧ್ಯ ಮತ್ತು ನಾವು ಯಾವಾಗಲೂ ಒಂದೇ ರೀತಿಯ ವೃತ್ತಿಯಲ್ಲಿ ಇರಬೇಕಾಗಿಲ್ಲ ಎಂದು ನಮಗೆ ನೋಡಲಾಗುವುದಿಲ್ಲ.
ಈ ವಿಭಿನ್ನ ರೀತಿಯ ಗುರುತುಗಳನ್ನು ನಮ್ಮನ್ನು ಸುರಕ್ಷಿತವಾಗಿರಿಸುವ ಒಂದು ಮಾರ್ಗವಾಗಿ ನಾವು ಗ್ರಹಿಸುತ್ತೇವೆ. ನಾವು ಯಾರು, ನಾವು ಯಾವ ರೀತಿಯ ನಿಯಮಗಳನ್ನು ಅನುಸರಿಸುತ್ತೇವೆ, ಜೀವನದಲ್ಲಿ ಯಾವ ರೀತಿಯ ವಿಷಯಗಳನ್ನು ಬಯಸುತ್ತೇವೆ ಎಂಬುದರ ಕುರಿತು ನಾವು ಕೆಲವು ವಿಚಾರಗಳನ್ನು ಹೊಂದಿರುತ್ತೇವೆ. ಇದು ಶಾಶ್ವತ, ಇದೆಲ್ಲವೂ ಧೃಡ, ಇದು ನಿಜವಾಗಿಯೂ ನಾನು ಎಂದು ನಾವು ಭಾವಿಸುತ್ತೇವೆ. ಏನಾಗುತ್ತದೆ ಎಂದರೆ, ನಮ್ಮ ಈ ಪರಿಕಲ್ಪನೆಯ ಆಧಾರದ ಮೇಲೆ, ಈ ಸ್ವ-ಚಿತ್ರಣ, ಈ ಗುರುತನ್ನು ಬೆಂಬಲಿಸುವ ಮಾರ್ಗಗಳಾಗಿ ಎಲ್ಲಾ ರೀತಿಯ ಗೊಂದಲಮಯ ಭಾವನೆಗಳು ಉದ್ಭವಿಸುತ್ತವೆ. ಏಕೆಂದರೆ ನಾವು ಇನ್ನೂ ಆ ಗುರುತಿನ ಬಗ್ಗೆ ಅಸುರಕ್ಷಿತರಾಗಿರುತ್ತೇವೆ, ಆದ್ದರಿಂದ ನಾವು ಅದನ್ನು ಸಾಬೀತುಪಡಿಸಬೇಕು ಮತ್ತು ಪ್ರತಿಪಾದಿಸಬೇಕು ಎಂದು ನಾವು ಭಾವಿಸುತ್ತೇವೆ.
ಉದಾಹರಣೆಗೆ, "ನಾನು ಕುಟುಂಬದ ತಂದೆ" ಎಂದು ನಾವು ಭಾವಿಸಿದರೆ, ನಾವು ಕುಟುಂಬದಲ್ಲಿ ತಂದೆ ಎಂದು ಭಾವಿಸುವುದು ಸಾಕಾಗುವುದಿಲ್ಲ; ನಾವು ಆ ಅಧಿಕಾರವನ್ನು ಸಹ ಪ್ರತಿಪಾದಿಸಬೇಕು. ನಾವು ಕುಟುಂಬದ ಮೇಲೆ ನಮ್ಮ ಅಧಿಕಾರವನ್ನು ಪ್ರತಿಪಾದಿಸಬೇಕು ಮತ್ತು ಎಲ್ಲರೂ ನಮ್ಮನ್ನು ಗೌರವಿಸುವಂತೆ ನೋಡಿಕೊಳ್ಳಬೇಕು, ಏಕೆಂದರೆ ನಾವು ಇನ್ನೂ ತಂದೆಯೆಂದು ಎಲ್ಲರಿಗೂ ಸಾಬೀತುಪಡಿಸಬೇಕು. ಅದನ್ನು ನಾವು ತಿಳಿದುಕೊಳ್ಳುವುದು ಸಾಕಾಗುವುದಿಲ್ಲ. ಈ ಗುರುತಿಗೆ ಬೆದರಿಕೆ ಇದೆ ಎಂದು ನಾವು ಭಾವಿಸಿದರೆ, ನಾವು ತುಂಬಾ ರಕ್ಷಣಾತ್ಮಕವಾಗಬಹುದು, ಅಥವಾ ಅದನ್ನು ಸಾಬೀತುಪಡಿಸಲು ನಾವು ಆಕ್ರಮಣಕಾರಿಯಾಗಬಹುದು. "ನಾನು ಯಾರೆಂದು ಸಾಬೀತುಪಡಿಸಬೇಕು. ನನ್ನ ಪೌರುಷ ಮತ್ತು ಸೌಂದರ್ಯವನ್ನು ನಾನು ಸಾಬೀತುಪಡಿಸಬೇಕು," ಆದ್ದರಿಂದ ನಾವು ಹೊರಗೆ ಹೋಗಿ ಇನ್ನೊಬ್ಬ ಹೆಂಡತಿಯನ್ನು ಕಟ್ಟಿಕೊಳ್ಳಬೇಕು, ಅಥವಾ ಯುವತಿಯೊಂದಿಗೆ ಪ್ರೇಮ ಸಂಬಂಧ ಹೊಂದಬೇಕು, ಇದು ನಾವು ಯಾರು, ನಮ್ಮ ಅಸ್ತಿತ್ವವನ್ನು ಸಾಬೀತುಪಡಿಸುತ್ತದೆ ಎಂದು ಯೋಚಿಸುತ್ತೇವೆ.
ಗೊಂದಲಮಯ ಭಾವನೆಗಳು ಮತ್ತು ವರ್ತನೆಗಳು
ಆಕರ್ಷಣೆ ಮತ್ತು ಹಂಬಲದ ಬಯಕೆ
ಗೊಂದಲಮಯ ಭಾವನೆಗಳು ಮತ್ತು ವರ್ತನೆಗಳು ಉದ್ಭವಿಸುವ ಮನಸ್ಸಿನ ಸ್ಥಿತಿಗಳಾಗಿವೆ, ಅದರೊಂದಿಗೆ ನಾವು ಘನ ಗುರುತನ್ನು ಸಾಬೀತುಪಡಿಸಲು ಅಥವಾ ನಿರ್ವಹಿಸಲು ಪ್ರಯತ್ನಿಸುತ್ತೇವೆ. ಈ ಗೊಂದಲದ ಭಾವನೆಗಳು ಹಲವಾರು ವಿಧಗಳಾಗಿರಬಹುದು, ಉದಾಹರಣೆಗೆ ಆಕರ್ಷಣೆ ಮತ್ತು ಹಂಬಲದ ಬಯಕೆ. ನಾವು ಏನನ್ನಾದರೂ ಪಡೆಯಬೇಕಾದಾಗ, ನಮ್ಮ ಸುತ್ತಲಿನ, ನಮ್ಮ ಗುರುತನ್ನು ರಕ್ಷಿಸಲು ಹಂಬಲದ ಬಯಕೆ ಉದ್ಭವಿಸುತ್ತದೆ. ಉದಾಹರಣೆಗೆ, ನನ್ನ ಗುರುತು ನನ್ನ ಕುಟುಂಬದ ತಂದೆ ಅಥವಾ ಪಿತೃಪಕ್ಷವಾಗಿದ್ದರೆ, ನಾನು ಹೀಗೆ ಯೋಚಿಸಬಹುದು: "ನನಗೆ ಗೌರವ ಸಿಗಬೇಕು; ಹೊಸ ವರ್ಷದಲ್ಲಿ ಮಕ್ಕಳು ಬರುವಂತೆ ಮಾಡಬೇಕು ಮತ್ತು ನಾನು ಹೇಳುವ ಎಲ್ಲವನ್ನೂ ಅವರು ಪಾಲಿಸುವಂತೆ ಮಾಡಬೇಕು." ಹೇಗಾದರೂ ನನಗೆ ಸಾಕಷ್ಟು ಗೌರವ ಸಿಗುವಂತೆ ಸಾಧ್ಯವಾದರೆ, ಇದು ನನ್ನಲ್ಲಿ ಬಹಳಾ ಸುರಕ್ಷಿತ ಭಾವನೆಯನ್ನು ಮೂಡಿಸುತ್ತದೆ ಎಂದು ನಾನು ಭಾವಿಸುತ್ತೇನೆ. ಮತ್ತು ನನಗೆ ಆ ಗೌರವ ನಿಸ್ಸಂದೇಹವಾಗಿ ಸಿಗದಿದ್ದಾಗ ನನಗೆ ನೋವಾಗುತ್ತದೆ ಮತ್ತು ನಾನು ಬಹಳಾ ಕೋಪಗೊಳ್ಳಬಹುದು.
ಇದಲ್ಲದೆ ನನ್ನ ಗುರುತು ನಾನು ಅದೃಷ್ಟಶಾಲಿ ವ್ಯಕ್ತಿ ಎಂದು ನಾನು ಭಾವಿಸಬಹುದು: "ನನಗೆ ಯಾವಾಗಲೂ ಅದೃಷ್ಟವಿರಬೇಕು ಮತ್ತು ನಾನು ಯಾವಾಗಲೂ ಮಹ್ಜಾಂಗ್ನಲ್ಲಿ ಗೆಲ್ಲಬೇಕು." ಇದು ನನ್ನ ಗುರುತು ಆಗಿದ್ದರೆ, ನಾನು ಯಾವಾಗಲೂ ಮಹ್ಜಾಂಗ್ನಲ್ಲಿ ಗೆದ್ದರೆ, ಯಾವಾಗಲೂ ವಿವಿಧ ರೀತಿಯ ಜೂಜಾಟದಲ್ಲಿ ಗೆಲ್ಲುತ್ತಿದ್ದರೆ, ಅದು ನನಗೆ ಸುರಕ್ಷಿತ ಭಾವನೆಯನ್ನು ನೀಡುತ್ತದೆ ಎಂದು ನಾನು ಭಾವಿಸುತ್ತೇನೆ. ಅಥವಾ ನಾನು ಯಾವಾಗಲೂ ಭವಿಷ್ಯ ಹೇಳುವವನ ಬಳಿಗೆ ಹೋಗಬೇಕಾಗಬಹುದು ಅಥವಾ ಚೀನೀ ಬೌದ್ಧ ದೇವಾಲಯದಲ್ಲಿ ಭವಿಷ್ಯ ಹೇಳುವ ಕೋಲುಗಳನ್ನು ಎಸೆಯಬೇಕಾಗಬಹುದು, ಅದು ನಾನು ಯಶಸ್ವಿಯಾಗಿದ್ದೇನೆ, ನಾನು ಸರಿ ಎಂದು ಪುನರುಚ್ಚರಿಸುತ್ತದೆ. ನನ್ನ ಸ್ವಂತ ವ್ಯವಹಾರ ಸಾಮರ್ಥ್ಯಗಳಲ್ಲಿ ನಾನು ಬಹಳಾ ಅಭದ್ರನಾಗಿದ್ದೇನೆ, ನಾನು ಯಶಸ್ವಿಯಾಗುತ್ತೇನೆ ಎಂದು ಭಾವಿಸಲು ನನಗೆ ಸಾಧ್ಯವಿಲ್ಲ. ನಾನು ಯಾವಾಗಲೂ ಹೆಚ್ಚಿನ ಚಿಹ್ನೆಗಳನ್ನು, ದೇವರುಗಳಿಂದ ಹೆಚ್ಚಿನ ಚಿಹ್ನೆಗಳನ್ನು ಅಥವಾ ನನ್ನನ್ನು ಸುರಕ್ಷಿತವಾಗಿರಿಸಲು ಯಾರಿಂದಾದರೂ ಹೆಚ್ಚಿನ ಚಿಹ್ನೆಗಳನ್ನು ಪಡೆಯಬೇಕು, ಆದ್ದರಿಂದ ನಾನು ಹೀಗೆ ಯಾವಾಗಲೂ ಪ್ರಚೋದಿತವಾಗಿ ಪ್ರಯತ್ನಿಸಬೇಕಾಗುತ್ತದೆ.
"ನನ್ನ ವ್ಯವಹಾರದಲ್ಲಿ ಅಧಿಕಾರದಲ್ಲಿರುವ ವ್ಯಕ್ತಿ ನಾನೇ. ನಾನು ಅಧಿಕಾರದತ್ತ ಆಕರ್ಷಿತನಾಗಿದ್ದೇನೆ ಮತ್ತು ಅಧಿಕಾರವು ನನ್ನನ್ನು ಸುರಕ್ಷಿತವಾಗಿರಿಸುತ್ತದೆ" ಎಂದು ನಾನು ಭಾವಿಸಬಹುದು. ಆ ಮನೋಭಾವವು ಹಲವಾರು ವಿಭಿನ್ನ ಮಾನಸಿಕ ಚೌಕಟ್ಟುಗಳಿಂದ ಉದ್ಭವಿಸುತ್ತಿರಬಹುದು. ನಾನು ಶಕ್ತಿಶಾಲಿ ವ್ಯಕ್ತಿ ಎಂಬ ಭಾವನೆ ಅಥವಾ ನಾನು ನಿಜವಾಗಿಯೂ ಶಕ್ತಿಶಾಲಿ ವ್ಯಕ್ತಿಯಲ್ಲ, ಬದಲಿಗೆ ನನಗೆ ಬೆಂಬಲ ನೀಡಲು ಆ ಶಕ್ತಿ ಬೇಕು ಎಂಬ ಭಾವನೆಯನ್ನು ಆಧರಿಸಿರಬಹುದು. ಆಗ ನಮಗೆ "ನನ್ನ ಕಚೇರಿಯಲ್ಲಿರುವ ಪ್ರತಿಯೊಬ್ಬರೂ ನನಗೆ ವಿಧೇಯರಾಗುವಂತೆ ಸಾಧ್ಯವಾದರೆ, ನಾನು ಬಯಸಿದ ರೀತಿಯಲ್ಲಿ ಕೆಲಸಗಳನ್ನು ಮಾಡಲು ಸಾಧ್ಯವಾದರೆ, ಅದು ನನ್ನನ್ನು ಸುರಕ್ಷಿತವಾಗಿರಿಸುತ್ತದೆ" ಎಂದು ಅನಿಸುತ್ತದೆ. ಅಥವಾ, ನಾವು ಮನೆಯಲ್ಲಿ ಸೇವಕರನ್ನು ಹೊಂದಿದ್ದರೆ, ನಾನು ಅಧಿಕಾರದ ಸ್ಥಾನದಲ್ಲಿದ್ದೇನೆ ಎಂದು ಸಾಬೀತುಪಡಿಸಲು, ಅವರು ನನಗೆ ಬೇಕಾದ ರೀತಿಯಲ್ಲೇ ಕೆಲಸ ಮಾಡಬೇಕು ಎಂಬ ಕಲ್ಪನೆಗೆ ನಾನು ಆಕರ್ಷಿತನಾಗಿ, ನಿಯಂತ್ರಣದಲ್ಲಿರುವಂತೆ ಸಾಬೀತುಪಡಿಸಲು ಅವರಿಗೆ ಅನಗತ್ಯವಾದ ಕೆಲಸಗಳನ್ನು ಮಾಡಲು ಆದೇಶಿಸಲು ಪ್ರಾರಂಭಿಸಬಹುದು.
ಗಮನದ ಬಗೆಗಿನ ಮೋಹಕ್ಕೂ ಒಳಗಾಗಬಹುದು. ಯುವಕನಾಗಿ, ನಾವು ಹೀಗೆ ಭಾವಿಸಬಹುದು: "ನನ್ನ ಗುರುತು ಆಧುನಿಕ, ಯುವ ಫ್ಯಾಶನ್ ಡ್ರೆಸ್ಸರ್, ನಾನು ಯಾವಾಗಲೂ ಇತ್ತೀಚಿನ ಫ್ಯಾಷನ್ಗಳು, ಇತ್ತೀಚಿನ ವೀಡಿಯೊಗಳು, ಇತ್ತೀಚಿನ ಸಿಡಿಗಳು, ಎಲ್ಲಾ ಫ್ಯಾಷನ್ ನಿಯತಕಾಲಿಕೆಗಳಲ್ಲಿ ನಡೆಯುತ್ತಿರುವ ಇತ್ತೀಚಿನ ವಿಷಯಗಳೊಂದಿಗೆ ನವೀಕೃತವಾಗಿರಲು ಸಾಧ್ಯವಾದರೆ, ಅದು ನನ್ನ ಗುರುತನ್ನು ಸುರಕ್ಷಿತಗೊಳಿಸುತ್ತದೆ."
ನಾವು ಗಮನಹರಿಸಬಹುದಾದ ಹಲವು ವಿಭಿನ್ನ ಮಾರ್ಗಗಳಿವೆ, ಹಲವು ವಿಭಿನ್ನ ವಿಷಯಗಳಿವೆ ಮತ್ತು ನಾನು ನನ್ನ ಸುತ್ತಲೂ ಎಲ್ಲವನ್ನೂ ಪಡೆದುಕೊಂಡು, ಸಾಕಷ್ಟು ಹಣ, ಸಾಕಷ್ಟು ಆಸ್ತಿ, ಸಾಕಷ್ಟು ಶಕ್ತಿ, ಸಾಕಷ್ಟು ಗಮನ ಅಥವಾ ಸಾಕಷ್ಟು ಪ್ರೀತಿಯನ್ನು ಬೆಳೆಸಿಕೊಂಡರೆ, ಅದು ನನ್ನನ್ನು ಸುರಕ್ಷಿತವಾಗಿಸುತ್ತದೆ ಎಂದು ಭಾವಿಸಬಹುದು. ಖಂಡಿತವಾಗಿಯೂ ಅದು ಕೆಲಸ ಮಾಡುವುದಿಲ್ಲ. ವಾಸ್ತವದಲ್ಲಿ ಅದು ಎಂದಾದರೂ ಕೆಲಸ ಮಾಡಿದರೆ, ನಾವು ಒಂದು ಹಂತದಲ್ಲಿ ನಮ್ಮ ಬಳಿ ಸಾಕಷ್ಟು ಇದೆ ಮತ್ತು ನಾವು ಸಂಪೂರ್ಣವಾಗಿ ತೃಪ್ತರಾಗಿದ್ದೇವೆ ಎಂದು ಭಾವಿಸುತ್ತೇವೆ. ಆದರೆ ನಮ್ಮ ಬಳಿ ಸಾಕಷ್ಟು ಇದೆ ಎಂದು ನಾವು ಎಂದಿಗೂ ಭಾವಿಸುವುದಿಲ್ಲ ಮತ್ತು ನಾವು ಯಾವಾಗಲೂ ಹೆಚ್ಚಿನದನ್ನು ಬಯಸುತ್ತೇವೆ ಮತ್ತು ನಮಗೆ ಅದು ಸಿಗದಿದ್ದಾಗ ನಾವು ಕೋಪಗೊಳ್ಳುತ್ತೇವೆ. ಕೋಪವು ಹಲವು ವಿಭಿನ್ನ ರೀತಿಯಲ್ಲಿ ಬರುತ್ತದೆ.
ವಿಕರ್ಷಣೆ ಮತ್ತು ಹಗೆತನ
ಒಂದು ಘನ ಗುರುತನ್ನು ಸುರಕ್ಷಿತವಾಗಿಸಲು ನಾವು ಬಳಸುವ ಇನ್ನೊಂದು ಕಾರ್ಯವಿಧಾನವೆಂದರೆ ವಿಕರ್ಷಣೆ, ಹಗೆತನ ಮತ್ತು ಕೋಪ: "ನನಗೆ ಇಷ್ಟವಿಲ್ಲದ, ನನ್ನ ಗುರುತನ್ನು ಬೆದರಿಸುತ್ತಿರುವ ಕೆಲವು ವಿಷಯಗಳನ್ನು ನಾನು ನನ್ನಿಂದ ದೂರವಿಡಲು ಸಾಧ್ಯವಾದರೆ, ಅದು ನನ್ನನ್ನು ಸುರಕ್ಷಿತವಾಗಿಸುತ್ತದೆ." ಆದ್ದರಿಂದ ನಾನು ನನ್ನ ರಾಜಕೀಯ ದೃಷ್ಟಿಕೋನಗಳು ಅಥವಾ ನನ್ನ ಜನಾಂಗ ಅಥವಾ ನನ್ನ ಸಂಸ್ಕೃತಿಯ ಮೇಲೆ ನನ್ನ ಗುರುತನ್ನು ಆಧರಿಸಿದ್ದರೆ: "ನಾನು ಬೇರೆ ದೃಷ್ಟಿಕೋನ ಹೊಂದಿರುವ, ಬೇರೆ ಬಣ್ಣದ ಚರ್ಮ ಹೊಂದಿರುವ, ಬೇರೆ ಧರ್ಮದ ಯಾರನ್ನಾದರೂ ದೂರ ಮಾಡಿದರೆ, ಅದು ನನ್ನನ್ನು ಸುರಕ್ಷಿತವಾಗಿಸುತ್ತದೆ." ಅಥವಾ ನನ್ನ ಸೇವಕರು ನಾನು ಬಯಸುವ ರೀತಿಯಿಂದ ಸ್ವಲ್ಪ ವಿಭಿನ್ನವಾಗಿ ಕೆಲಸಗಳನ್ನು ಮಾಡುತ್ತಿದ್ದರೆ ಅಥವಾ ನನ್ನ ಕಚೇರಿಯಲ್ಲಿ ಕೆಲಸ ಮಾಡುವವರು ನಾನು ಬಯಸುವ ರೀತಿಗಿಂತ ಕಾರ್ಯನಿರ್ವಹಿಸುತ್ತಿದ್ದರೆ, ನಾವು ಹೀಗೆ ಭಾವಿಸುತ್ತೇವೆ, "ನಾನು ಅವುಗಳನ್ನು ಸರಿಪಡಿಸಲು ಸಾಧ್ಯವಾದರೆ, ನಾನು ಅದನ್ನು ಬದಲಾಯಿಸಲು ಸಾಧ್ಯವಾದರೆ, ಅದು ನನ್ನನ್ನು ಸುರಕ್ಷಿತವಾಗಿಸುತ್ತದೆ." ನನ್ನ ಪತ್ರಿಕೆಗಳನ್ನು ಮೇಜಿನ ಮೇಲೆ ಒಂದು ನಿರ್ದಿಷ್ಟ ರೀತಿಯಲ್ಲಿ ಜೋಡಿಸಿರುವುದು ನನಗೆ ಇಷ್ಟ, ಆದರೆ ನನ್ನ ಕಚೇರಿಯಲ್ಲಿರುವ ಆ ಇನ್ನೊಬ್ಬ ವ್ಯಕ್ತಿಯು ಅವುಗಳನ್ನು ಬೇರೆ ರೀತಿಯಲ್ಲಿ ಜೋಡಿಸುತ್ತಿದ್ದಾನೆ. ಹೇಗೋ ಇದು ನಮಗೆ ಬೆದರಿಕೆ ಹಾಕುತ್ತಿದೆ ಎಂದು ನಾವು ಭಾವಿಸುತ್ತೇವೆ: "ನಾನು ಅವರನ್ನು ನನ್ನ ರೀತಿಯಲ್ಲಿ ನಡೆಯುವಂತೆ ಮಾಡಲು ಸಾಧ್ಯವಾದರೆ, ಅದು ನನಗೆ ಸುರಕ್ಷಿತ ಭಾವನೆಯನ್ನು ನೀಡುತ್ತದೆ." ಇದು ಏನು ವ್ಯತ್ಯಾಸವನ್ನುಂಟು ಮಾಡುತ್ತದೆ? ಈ ರೀತಿಯಾಗಿ, ನಮ್ಮನ್ನು ಬೆದರಿಸುವ ಎಲ್ಲವನ್ನೂ ನಮ್ಮಿಂದ ದೂರವಿಡುವ ಪ್ರಯತ್ನದಲ್ಲಿ ನಾವು ಇತರರ ಮೇಲೆ ನಮ್ಮ ದ್ವೇಷವನ್ನು ನಿರ್ದೇಶಿಸುತ್ತೇವೆ.
ಅಥವಾ, ನಾವು ಯಾವಾಗಲೂ ಸರಿಯಾಗಿರುವುದರ ಮೇಲೆ ನಮ್ಮ ಗುರುತನ್ನು ಆಧರಿಸಿದಾಗ, ಯಾರಾದರೂ ನಮ್ಮನ್ನು ನಿರಾಕರಿಸಿದಾಗ ಅಥವಾ ಟೀಕಿಸಿದಾಗ, ನಾವು ಬಹಳಾ ರಕ್ಷಣಾತ್ಮಕವಾಗಿ, ಪ್ರತಿಕೂಲವಾಗಿ ಕೋಪಗೊಳ್ಳುತ್ತೇವೆ. ನಮ್ಮನ್ನು ಬೆಳೆಯುವಂತೆ ಮತ್ತು ಸುಧಾರಿಸಿಕೊಳ್ಳುವಂತೆ, ಈ ವ್ಯಕ್ತಿಯ ಟೀಕೆಯನ್ನು ಕೃತಜ್ಞತೆಯಿಂದ ಸ್ವೀಕರಿಸುವ ಬದಲು - ಅಥವಾ ಅವರ ಟೀಕೆ ಅನ್ಯಾಯವಾಗಿದ್ದರೂ ಸಹ, ನಮ್ಮನ್ನು ನಾವು ಪರೀಕ್ಷಿಸಿಕೊಳ್ಳಲು ಮತ್ತು ನಾವು ತಪ್ಪಿತಸ್ಥರಲ್ಲ ಎಂದು ಖಚಿತಪಡಿಸಿಕೊಳ್ಳಲು ಈ ಅವಕಾಶವನ್ನು ಬಳಸಿಕೊಳ್ಳುವ ಬದಲು - ನಾವು ಆ ವ್ಯಕ್ತಿಯ ಮೇಲೆ ಕಠಿಣ ಪದಗಳಿಂದ ದಾಳಿ ಮಾಡುತ್ತೇವೆ, ಅಥವಾ ಆ ವ್ಯಕ್ತಿಯನ್ನು ನಿರ್ಲಕ್ಷಿಸಿ, ಅವರೊಂದಿಗೆ ಮಾತನಾಡದೆ ನಿಷ್ಕ್ರಿಯ ರೀತಿಯಲ್ಲಿ ಪ್ರತಿಕೂಲ ರೀತಿಯಲ್ಲಿ ವರ್ತಿಸುತ್ತೇವೆ. ನಾವು ಈ ರೀತಿ ವರ್ತಿಸುತ್ತೇವೆ ಏಕೆಂದರೆ ನಾವು ಅಸುರಕ್ಷಿತ ಮತ್ತು ಬೆದರಿಕೆಗೆ ಒಳಗಾಗಿದ್ದೇವೆ. ಆ ವ್ಯಕ್ತಿಯು ಯಾವಾಗಲೂ ಸರಿಯಾಗಿರುವ "ನನ್ನನ್ನು" ತಿರಸ್ಕರಿಸುತ್ತಿದ್ದಾನೆ ಎಂದು ನಾವು ಭಾವಿಸುತ್ತೇವೆ, ಆದ್ದರಿಂದ ಈ ಘನ "ನನ್ನನ್ನು" ರಕ್ಷಿಸಲು, ನಾವು ಆ ವ್ಯಕ್ತಿಯನ್ನು ತಿರಸ್ಕರಿಸುತ್ತೇವೆ.
ಮುಚ್ಚಿದ ಮನಸ್ಸಿನ ನಿಷ್ಕಪಟತೆ
ಇನ್ನೊಂದು ಕಾರ್ಯವಿಧಾನವೆಂದರೆ ಮುಚ್ಚಿದ ಮನಸ್ಸಿನ ನಿಷ್ಕಪಟತೆ, ಇದು ಮೂಲಭೂತವಾಗಿ ನಮ್ಮ ಸುತ್ತಲೂ ಗೋಡೆಗಳನ್ನು ನಿರ್ಮಿಸುತ್ತಿದೆ: “ಏನಾದರೂ ನನಗೆ ಬೆದರಿಕೆ ಹಾಕುತ್ತಿದ್ದರೆ, ನನ್ನ ಗುರುತನ್ನು ಬೆದರಿಸುತ್ತಿದ್ದರೆ, ಅದು ಅಸ್ತಿತ್ವದಲ್ಲಿಲ್ಲವೆಂಬಂತೆ ನಾನು ನಟಿಸುತ್ತೇನೆ.” ನಮಗೆ ನಮ್ಮ ಕುಟುಂಬದೊಂದಿಗೆ ತೊಂದರೆಗಳಿವೆ, ಕೆಲಸದಲ್ಲಿ ತೊಂದರೆಗಳಿವೆ, ಆದರೆ ನಾವು ಕಲ್ಲಾಗಿರುವ ಮುಖದೊಂದಿಗೆ, ನಮಗೆ ಯಾವುದೇ ತೊಂದರೆಯಿಲ್ಲವೆಂಬಂತೆ ಮನೆಗೆ ಹಿಂದಿರುಗುತ್ತೇವೆ. ನಾವು ಅದನ್ನು ಚರ್ಚಿಸಲು ಬಯಸುವುದಿಲ್ಲ; ನಾವು ದೂರದರ್ಶನವನ್ನು ಆನ್ ಮಾಡಿ ಸಮಸ್ಯೆ ಅಸ್ತಿತ್ವದಲ್ಲಿಲ್ಲವೆಂಬಂತೆ ನಟಿಸುತ್ತೇವೆ. ಇದು ಮುಚ್ಚಿದ ಮನಸ್ಸಿನ ವರ್ತನೆ. ನಮ್ಮ ಮಕ್ಕಳು ತಮ್ಮಲ್ಲಿರುವ ಸಮಸ್ಯೆಗಳನ್ನು ಚರ್ಚಿಸಲು ಬಯಸುತ್ತಾರೆ ಮತ್ತು ನಾವು ಅವರನ್ನು ದೂರ ತಳ್ಳುತ್ತೇವೆ. “ನನ್ನ ಗುರುತು ಎಂದರೆ ನಮ್ಮ ಕುಟುಂಬಕ್ಕೆ ಯಾವುದೇ ಸಮಸ್ಯೆಗಳಿಲ್ಲ; ನಮ್ಮ ಕುಟುಂಬ ಪರಿಪೂರ್ಣ; ಅದು ಎಲ್ಲಾ ಸಾಂಪ್ರದಾಯಿಕ ಮೌಲ್ಯಗಳನ್ನು ಅನುಸರಿಸುತ್ತದೆ. ಏನೋ ತೊಂದರೆಯಿದೆ ಎಂದು ಸೂಚಿಸಿ, ನಮ್ಮಲಿರುವ ಸಮತೋಲನವನ್ನು ಮತ್ತು ಸಾಮರಸ್ಯವನ್ನು ಹಾಳುಮಾಡಬೇಕೆಂದಿದ್ದೀರಾ?” ಸಮಸ್ಯೆಯನ್ನು ನಿಭಾಯಿಸುವ ಏಕೈಕ ಮಾರ್ಗವೆಂದರೆ ಅದು ಅಸ್ತಿತ್ವದಲ್ಲಿಲ್ಲವೆಂಬಂತೆ ನಟಿಸುವುದು ಎಂದು ನಾವು ಭಾವಿಸುತ್ತೇವೆ. ಈ ರೀತಿಯ ಮನೋಭಾವವನ್ನು ಮುಚ್ಚಿದ ಮನಸ್ಸಿನ ನಿಷ್ಕಪಟತೆ ಎಂದು ಕರೆಯಲಾಗುತ್ತದೆ.
ನಮ್ಮ ಮನಸ್ಸಿಗೆ ಬರುವ ಪ್ರಚೋದನೆಗಳು ಕರ್ಮದ ಅಭಿವ್ಯಕ್ತಿಗಳು
ನಾವು ಈ ವಿಭಿನ್ನ ರೀತಿಯ ಗೊಂದಲಮಯ ಭಾವನೆಗಳಿಂದ ಪೀಡಿತರಾದಾಗ, ಮುಂದಿನ ವಿಷಯವೆಂದರೆ ವಿವಿಧ ಪ್ರಚೋದನೆಗಳು ನಮ್ಮ ಮನಸ್ಸಿಗೆ ಬರುತ್ತವೆ. ಕರ್ಮ ಎಂದರೆ ಇದೇ. "ಕರ್ಮ" ಎಂದರೆ ವಿಧಿ ಅಥವಾ ಹಣೆಬರಹ ಅಲ್ಲ. ದುರದೃಷ್ಟವಶಾತ್, ಬಹಳಷ್ಟು ಜನರು ಅದು ಇದನ್ನು ಅರ್ಥೈಸುತ್ತದೆ ಎಂದು ಭಾವಿಸುತ್ತಾರೆ. ಯಾರೊಬ್ಬರ ವ್ಯವಹಾರ ವಿಫಲವಾದರೆ ಅಥವಾ ಯಾರಾದರೂ ಕಾರಿಗೆ ಡಿಕ್ಕಿ ಹೊಡೆದರೆ, ನಾವು "ಅಯ್ಯೋ ಇದೊಂದು ದುರದೃಷ್ಟ, ಇದು ಅವರ ಕರ್ಮ" ಎಂದು ಹೇಳಬಹುದು. ಇದು " ದೇವರ ಇಚ್ಛೆ" ಎಂದು ಹೇಳಿದಂತೆ ಇರುತ್ತದೆ.
ಕರ್ಮದ ವಿಷಯವಾಗಿ ನಾವು ಇಲ್ಲಿ ದೇವರ ಇಚ್ಛೆ ಅಥವಾ ವಿಧಿಯ ಬಗ್ಗೆ ಮಾತನಾಡುತ್ತಿಲ್ಲ. ನಾವು ಪ್ರಚೋದನೆಗಳ ಬಗ್ಗೆ ಮಾತನಾಡುತ್ತಿದ್ದೇವೆ, ನಮ್ಮ ಮನಸ್ಸಿಗೆ ಬರುವ ವಿವಿಧ ಪ್ರಚೋದನೆಗಳು ನಮ್ಮನ್ನು ಕೆಲಸಗಳನ್ನು ಮಾಡಲು ಕರೆದೊಯ್ಯುತ್ತವೆ. ಉದಾಹರಣೆಗೆ, ನಮ್ಮ ವ್ಯವಹಾರದಲ್ಲಿ ಒಂದು ನಿರ್ದಿಷ್ಟ ನಿರ್ಧಾರ ತೆಗೆದುಕೊಳ್ಳಲು ನಮ್ಮ ಮನಸ್ಸಿಗೆ ಬಂದ ಪ್ರಚೋದನೆಯು, ಕೆಟ್ಟ ನಿರ್ಧಾರವಾಗಿ ಪರಿಣಮಿಸಿತು. ಅಥವಾ ನನ್ನ ಮಕ್ಕಳು ನನಗೆ ಗೌರವ ತೋರಿಸಬೇಕು ಎಂದು ಆಜ್ಞೆ ಮಾಡುವ ಪ್ರಚೋದನೆ. ಅಥವಾ ನನ್ನ ಕಚೇರಿ ಕೆಲಸಗಾರರು ತಮ್ಮದೇ ಆದ ರೀತಿಯಲ್ಲಿ ಅಲ್ಲ, ನನ್ನ ರೀತಿಯಲ್ಲೇ ಕೆಲಸ ಮಾಡಬೇಕೆಂದು ಅವರ ಮೇಲೆ ಕೂಗಾಡುವ ಪ್ರಚೋದನೆ. ಕಲ್ಲು ಮುಖಮಾಡಿ, ದೂರದರ್ಶನವನ್ನು ಆನ್ ಮಾಡಿ ಬೇರೆಯವರ ಮಾತನ್ನು ಕೇಳದಿರುವಂತಹ ಮತ್ತೊಂದು ಪ್ರಚೋದನೆ ನನ್ನ ಮನಸ್ಸಿಗೆ ಬರಬಹುದು. ಈ ರೀತಿಯ ಪ್ರಚೋದನೆಗಳು, ಕರ್ಮಗಳು ನಮ್ಮ ಮನಸ್ಸಿಗೆ ಬರುತ್ತವೆ, ನಾವು ಅವುಗಳಿಂದ ಪ್ರಚೋದಿತವಾಗಿ ವರ್ತಿಸುತ್ತೇವೆ ಮತ್ತು ಅದು ನಮ್ಮ ಅನಿಯಂತ್ರಿತವಾಗಿ ಮರುಕಳಿಸುವ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಇದೇ ಅದರ ಕಾರ್ಯವಿಧಾನ.
ಕೆಲಸದಲ್ಲಿ ನಮ್ಮ ಸ್ಥಾನದ ಬಗ್ಗೆ ಅಥವಾ ನಮ್ಮ ಕುಟುಂಬದಲ್ಲಿನ ಸಮಸ್ಯೆಗಳ ಬಗ್ಗೆ ನಾವು ಯಾವಾಗಲೂ ಆತಂಕ ಮತ್ತು ಚಿಂತಿತರಾಗುವ ಸಮಸ್ಯೆಯನ್ನು ಹೊಂದಿರಬಹುದು. "ನಾನು ಯಶಸ್ವಿಯಾಗಬೇಕು ಮತ್ತು ಯಶಸ್ವಿಯಾಗುವ ಮೂಲಕ ನನ್ನ ಹೆತ್ತವರನ್ನು ಅಥವಾ ಸಮಾಜವನ್ನು ಸಂತೋಷಪಡಿಸಬೇಕು" ಎಂಬ ಘನ ಗುರುತನ್ನು ಗ್ರಹಿಸುವ ಆಧಾರದ ಮೇಲೆ, ಆತಂಕದ ಸಮಸ್ಯೆ ಅಸ್ತಿತ್ವದಲ್ಲಿದೆ ಎಂಬುದನ್ನು ನಿರಾಕರಿಸುವ ಮೂಲಕ ನಾವು ಆ ಗುರುತನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸುತ್ತೇವೆ. ನಾವು ಮುಚ್ಚಿದ ಮನಸ್ಸಿನವರು ಮತ್ತು ಮುಚ್ಚಿದ ಹೃದಯದವರಾಗುತ್ತೇವೆ. ನಂತರ, ನಮ್ಮ ಕುಟುಂಬದಲ್ಲಿ ಅಥವಾ ಕೆಲಸದಲ್ಲಿ ಎಲ್ಲಾ ರೀತಿಯ ತೊಂದರೆಗಳು ನಡೆಯುತ್ತಿದ್ದರೂ, ಇವು ಮೇಲ್ಮೈಯಲ್ಲಿಯೇ ಇರುತ್ತವೆ ಮತ್ತು ಎಲ್ಲರೂ ನಗುಮೊಗವನ್ನು ಧರಿಸುತ್ತಾರೆ. ಆದರೆ ಒಳಗೆ, ಈ ಎಲ್ಲಾ ಚಿಂತೆಗಳು ಮತ್ತು ಉದ್ವಿಗ್ನತೆಗಳಿರುತ್ತವೆ, ಅದು ನಂತರ ಹಿಂಸಾಚಾರದ ದೃಶ್ಯಕ್ಕೆ ಕಾರಣವಾಗುವ ಪ್ರಚೋದನೆಯಾಗಿ ಸ್ಫೋಟಗೊಳ್ಳಬಹುದು, ಆಗಾಗ್ಗೆ ನಮ್ಮ ಕುಟುಂಬದಲ್ಲಿ ಅಥವಾ ಕೆಲಸದಲ್ಲಿ ಈ ವಿಷಯದಲ್ಲಿ ಭಾಗಿಯಾಗದವರ ಮೇಲೆ ಬೀಳಬಹುದು. ಇದು ನಂತರ, ಅಗಾಧ ಸಮಸ್ಯೆಗಳಿಗೆ ಕಾರಣವಾಗುತ್ತದೆ.
ಇವು ನಮ್ಮ ಅನಿಯಂತ್ರಿತವಾಗಿ ಮರುಕಳಿಸುವ ಸಮಸ್ಯೆಗಳನ್ನು ಉಂಟುಮಾಡುವ ವಿಭಿನ್ನ ಕಾರ್ಯವಿಧಾನಗಳಾಗಿವೆ. ಇವು ಗಂಭೀರ ಭಾವನೆಗಳ ವ್ಯವಹಾರವಾದ್ದರಿಂದ, ಸಹಜವಾಗಿಯೇ ಈ ಪ್ರಶ್ನೆ ಉದ್ಭವಿಸುತ್ತದೆ - ಎಲ್ಲಾ ಭಾವನೆಗಳು ತೊಂದರೆ ಕೊಡುವವೇ? ಎಲ್ಲಾ ಭಾವನೆಗಳು ನಮಗೆ ಸಮಸ್ಯೆಗಳನ್ನು ನೀಡುವ ವಸ್ತುಗಳೇ?
ರಚನಾತ್ಮಕ ಭಾವನೆಗಳು
ಪ್ರೀತಿ, ಹೃತ್ಪೂರ್ವತೆ, ವಾತ್ಸಲ್ಯ, ಸಹಿಷ್ಣುತೆ, ತಾಳ್ಮೆ ಮತ್ತು ದಯೆಯಂತಹ ಕೆಲವು ಸಕಾರಾತ್ಮಕ ಮತ್ತು ರಚನಾತ್ಮಕ ಭಾವನೆಗಳು ಮತ್ತು ಹಂಬಲ, ಹಗೆತನ, ಮುಚ್ಚಿದ ಮನಸ್ಸು, ಹೆಮ್ಮೆ, ದುರಹಂಕಾರ, ಅಸೂಯೆ ಮುಂತಾದ ನಕಾರಾತ್ಮಕ ಅಥವಾ ವಿನಾಶಕಾರಿ ಭಾವನೆಗಳ ನಡುವಿನ ವ್ಯತ್ಯಾಸವನ್ನು ನಾವು ಗುರುತಿಸಬೇಕು. ಪಾಲಿ, ಸಂಸ್ಕೃತ ಅಥವಾ ಟಿಬೆಟಿಯನ್ ಭಾಷೆಗಳಲ್ಲಿ ಭಾವನೆಗಳಿಗೆ ಯಾವುದೇ ಪದವಿಲ್ಲ. ನಾವು ಸಕಾರಾತ್ಮಕ ಅಥವಾ ನಕಾರಾತ್ಮಕ ಭಾವನೆಗಳ ಬಗ್ಗೆ ಮಾತನಾಡಬಹುದು, ಆದರೆ ಇಂಗ್ಲಿಷ್ನಲ್ಲಿರುವಂತೆ ಅವೆರಡನ್ನೂ ಒಳಗೊಳ್ಳುವ ಯಾವುದೇ ಸಾಮಾನ್ಯ ಪದವಿಲ್ಲ.
ಕೆಲವು ಭಾವನೆಗಳು ಅಥವಾ ವರ್ತನೆಗಳು ಉತ್ಪತ್ತಿಯಾದಾಗ ನಮಗೆ ಅನಾನುಕೂಲ ಅಥವಾ ಆತಂಕವನ್ನುಂಟುಮಾಡುತ್ತವೆ, ಅವು ತೊಂದರೆಗೊಳಿಸುವ ಭಾವನೆಗಳು ಅಥವಾ ಗೊಂದಲಮಯ ವರ್ತನೆಗಳಾಗಿರುತ್ತವೆ. ಉದಾಹರಣೆಗೆ, ನಮಗೆ ಒಂದು ವಸ್ತುವಿನ ಮೇಲೆ ಅಥವಾ ಒಬ್ಬರ ಮೇಲೆ ವ್ಯಾಮೋಹ ಅಥವಾ ಗೀಳು ಇರಬಹುದು ಮತ್ತು ಅದು ನಮಗೆ ತುಂಬಾ ಆತಂಕವನ್ನುಂಟು ಮಾಡಬಹುದು. ನಾವು ಗೌರವವನ್ನು ಪಡೆಯಲು ತುಂಬಾ ಆಸಕ್ತಿ ಹೊಂದಿರಬಹುದು, ಅಥವಾ ನಾವು ಯಾರೊಂದಿಗಾದರೂ ಪ್ರೀತಿ, ಗಮನ ಅಥವಾ ಅನುಮೋದನೆಯನ್ನು ಪಡೆದುಕೊಳ್ಳುತ್ತೇವೆ ಏಕೆಂದರೆ ನಾವು ಆ ವ್ಯಕ್ತಿಗೆ ಅಂಟಿಕೊಂಡಿದ್ದೇವೆ ಮತ್ತು ಅವರ ಅನುಮೋದನೆಯನ್ನು ಗ್ರಹಿಸುತ್ತೇವೆ, ಹೀಗೆ ನಮ್ಮನ್ನು ಯೋಗ್ಯರು ಮತ್ತು ಸುರಕ್ಷಿತರು ಎಂದು ಭಾವಿಸುತ್ತೇವೆ - ಇವೆಲ್ಲವೂ ಹಾತೊರೆಯುವ ಬಯಕೆಯ ತೊಂದರೆಗೊಳಿಸುವ ಭಾವನಾತ್ಮಕ ಮನೋಭಾವದ ವಿಷಯದಲ್ಲಿ ಬರುವ ತೊಂದರೆಗಳಾಗಿರುತ್ತವೆ. ನಾವು ಪ್ರತಿಕೂಲವಾದಾಗಲೆಲ್ಲಾ ನಮಗೆ ಬಹಳಾ ಆತಂಕವಾಗುತ್ತದೆ; ಅಥವಾ ನಾವು ಮುಚ್ಚಿದ ಮನಸ್ಸಿನವರಾಗಿದ್ದರೆ, ಅದು ಕೂಡ ಒಂದು ಅಹಿತಕರ ಭಾವನೆಯಾಗಿರುತ್ತದೆ. ಈ ಎಲ್ಲಾ ವರ್ತನೆಗಳು ತೊಂದರೆ ಉಂಟುಮಾಡುವವು. ಆದ್ದರಿಂದ ನಾವು ನಕಾರಾತ್ಮಕ ಭಾವನೆಗಳಿಂದ ಸಕಾರಾತ್ಮಕ ಭಾವನೆಗಳನ್ನು ಪ್ರತ್ಯೇಕಿಸಬೇಕು, ಉದಾಹರಣೆಗೆ ಪ್ರೀತಿ.
ಬೌದ್ಧ ಸಂಪ್ರದಾಯದಲ್ಲಿ ಪ್ರೀತಿಯನ್ನು ಸಕಾರಾತ್ಮಕ ಭಾವನೆ ಎಂದು ವ್ಯಾಖ್ಯಾನಿಸಲಾಗಿದೆ, ಇದರೊಂದಿಗೆ ನಾವು ಇತರರು ಸಂತೋಷವನ್ನು ಮತ್ತು ಸಂತೋಷದ ಕಾರಣಗಳನ್ನು ಹೊಂದಬೇಕೆಂದು ಬಯಸುತ್ತೇವೆ. ಇದು ನಾವೆಲ್ಲರೂ ಸಮಾನರು ಮತ್ತು ಎಲ್ಲರೂ ಸಮಾನವಾಗಿ ಸಂತೋಷವಾಗಿರಲು ಬಯಸುತ್ತೇವೆ ಮತ್ತು ಯಾರೂ ಯಾವುದೇ ಸಮಸ್ಯೆಗಳನ್ನು ಹೊಂದಲು ಬಯಸುವುದಿಲ್ಲ ಎಂಬ ತಾರ್ಕಿಕತೆಯನ್ನು ಆಧರಿಸಿರುತ್ತದೆ. ಎಲ್ಲರಿಗೂ ಸಂತೋಷವಾಗಿರಲು ಸಮಾನ ಹಕ್ಕಿದೆ. ನಾವು ನಮ್ಮನ್ನು ಹೇಗೆ ನೋಡಿಕೊಳ್ಳಲು ಮತ್ತು ಪೋಷಿಸಲು ಬಯಸುತ್ತೇವೋ ಹಾಗೆಯೇ ಇತರರಿಗೂ ಮಾಡುವುದೇ ಪ್ರೀತಿ. ಇತರರು ಸಂತೋಷವಾಗಿರಬೇಕೆಂಬ ಕಾಳಜಿ ಅವರು ಏನು ಮಾಡುತ್ತಾರೆ ಎಂಬುದರ ಮೇಲೆ ಅವಲಂಬಿತವಾಗಿರುವುದಿಲ್ಲ. ಇದು ತಾಯಿಯ ಪ್ರೀತಿಯಂತಿದೆ, ಮಗು ತನ್ನ ಬಟ್ಟೆಗಳನ್ನು ಕೊಳಕುಗೊಳಿಸಿದಾಗ ಅಥವಾ ಅವಳ ಮೇಲೆ ವಾಂತಿ ಮಾಡಿದಾಗಲೂ ಸಹ ಅವಳು ತನ್ನ ಮಗುವನ್ನು ಪ್ರೀತಿಸುತ್ತಾಳೆ. ಮಗು ಅನಾರೋಗ್ಯಕ್ಕೆ ಒಳಗಾಗಿ ಅವಳ ಮೇಲೆ ವಾಂತಿ ಮಾಡಿದ್ದು ಮುಖ್ಯವಲ್ಲ, ಆ ಕಾರಣಕ್ಕಾಗಿ ತಾಯಿ ಮಗುವನ್ನು ಪ್ರೀತಿಸುವುದನ್ನು ನಿಲ್ಲಿಸುವುದಿಲ್ಲ. ಮಗು ಸಂತೋಷವಾಗಿರಬೇಕೆಂಬ ತಾಯಿಗೆ ಇನ್ನೂ ಅದೇ ಕಾಳಜಿ, ಅದೇ ಆಸೆ ಇರುತ್ತದೆ. ಆದರೆ ನಾವು ಹೆಚ್ಚಾಗಿ ಪ್ರೀತಿ ಎಂದು ಕರೆಯುವುದು ಅವಲಂಬನೆ ಅಥವಾ ಅಗತ್ಯದ ಅಭಿವ್ಯಕ್ತಿಯಾಗಿರುತ್ತದೆ. “ನಾನು ನಿನ್ನನ್ನು ಪ್ರೀತಿಸುತ್ತೇನೆ” ಎಂದರೆ “ನನಗೆ ನೀನು ಬೇಕು, ನನ್ನನ್ನು ಎಂದಿಗೂ ಬಿಡಬೇಡ, ನನಗೆ ನೀನ್ನಿಲ್ಲದೆ ಬದುಕಲು ಸಾಧ್ಯವಿಲ್ಲ, ಮತ್ತು ನೀನು ಹಾಗೆ ಮಾಡುವುದು ಹೀಗೆ ಮಾಡುವುದು ಉತ್ತಮ, ಒಳ್ಳೆಯ ಹೆಂಡತಿ ಅಥವಾ ಒಳ್ಳೆಯ ಗಂಡನಾಗಿರು, ಯಾವಾಗಲೂ ಪ್ರೇಮಿಗಳ ದಿನದಂದು ನನಗೆ ಹೂವುಗಳನ್ನು ನೀಡಿ, ನನಗೆ ಇಷ್ಟವಾದದ್ದನ್ನು ಮಾತ್ರ ಮಾಡಿ. ನೀನು ಹಾಗೆ ಮಾಡದಿದ್ದರೆ, ನಾನು ನಿನ್ನನ್ನು ದ್ವೇಷಿಸುತ್ತೇನೆ ಏಕೆಂದರೆ ನೀನು ನಾನು ಬಯಸಿದ್ದನ್ನು ಮಾಡಲಿಲ್ಲ, ನನಗೆ ನಿನ್ನ ಅಗತ್ಯವಿದ್ದಾಗ ನೀನು ಇರಲಿಲ್ಲ.”
ಅಂತಹ ಮನೋಭಾವವು ಗೊಂದಲಮಯ ಭಾವನೆಯಾಗಿದೆ ಮತ್ತು ಪ್ರೀತಿಯ ಬೌದ್ಧ ಕಲ್ಪನೆಯಲ್ಲ. ಯಾರಾದರೂ ನಮಗೆ ಹೂವುಗಳನ್ನು ಕಳುಹಿಸುತ್ತಾರೋ ಇಲ್ಲವೋ, ಅವರು ನಮ್ಮ ಮಾತನ್ನು ಕೇಳುತ್ತಾರೋ ಇಲ್ಲವೋ, ಅವರು ನಮ್ಮೊಂದಿಗೆ ದಯೆ ಮತ್ತು ಆಹ್ಲಾದಕರವಾಗಿ ಅಥವಾ ಭಯಂಕರವಾಗಿ ವರ್ತಿಸುತ್ತಾರೋ ಮತ್ತು ನಮ್ಮನ್ನು ತಿರಸ್ಕರಿಸುತ್ತಾರೋ ಇಲ್ಲವೋ ಎಂಬುದನ್ನು ಹೊರತಾದ ಕಾಳಜಿ ಪ್ರೀತಿಗೆ ಸಂಬಂಧಿಸಿರುತ್ತದೆ. ಅವರು ಸಂತೋಷವಾಗಿರಬೇಕೆಂಬುದಕ್ಕಾಗಿ ಇರುವ ಕಾಳಜಿ. ಪ್ರೀತಿ ಮತ್ತು ಅಂತಹುದೇ ಭಾವನೆಗಳ ಬಗ್ಗೆ ಮಾತನಾಡುವಾಗ, ಅದು ಸಕಾರಾತ್ಮಕ ಮತ್ತು ತೊಂದರೆ ನೀಡುವ ಪ್ರಕಾರ ಎರಡೂ ಇರಬಹುದು ಎಂಬುದನ್ನು ನಾವು ಅರಿತುಕೊಳ್ಳಬೇಕು.
ಕೋಪವು ಯಾವಾಗಲೂ ಗೊಂದಲಮಯ ಭಾವನೆಯಾಗಿರುತ್ತದೆ
ಕೊನೆಗೂ ನಾವು ಕೋಪದ ಬಗ್ಗೆ ಚರ್ಚಿಸುತ್ತಿದ್ದೇವೆ. ಕೋಪದೊಂದಿಗೆ ಏನಾಗುತ್ತಿದೆ? ಕೋಪವು ಯಾವಾಗಲೂ ತೊಂದರೆಗೊಳಿಸುವ ವಿಷಯ. ಕೋಪಗೊಳ್ಳುವುದರಿಂದ ಯಾರೂ ಸಂತೋಷಪಡುವುದಿಲ್ಲ. ಕೋಪಗೊಳ್ಳುವುದರಿಂದ ನಮ್ಮಲ್ಲಿ ಉತ್ತಮ ಭಾವನೆ ಮೂಡುವುದಿಲ್ಲ. ಅದು ನಮ್ಮ ಆಹಾರವನ್ನು ರುಚಿಕರಗೊಳಿಸುವುದಿಲ್ಲ. ನಾವು ಕೋಪಗೊಂಡಾಗ ಮತ್ತು ಅಸಮಾಧಾನಗೊಂಡಾಗ, ನಮಗೆ ಆರಾಮದಾಯಕವಾಗಿರುವುದಿಲ್ಲ ಮತ್ತು ನಮಗೆ ನಿದ್ರೆ ಮಾಡಲು ಸಾಧ್ಯವಾಗುವುದಿಲ್ಲ. ನಾವು ದೊಡ್ಡ ರಂಪಾಟ ಮಾಡಿ, ಕಿರುಚಿ ಅರಚಬೇಕಾಗಿಲ್ಲ, ಆದರೆ ನಮ್ಮ ಕಚೇರಿಯಲ್ಲಿ ಅಥವಾ ನಮ್ಮ ಕುಟುಂಬದಲ್ಲಿ ನಡೆಯುತ್ತಿರುವ ವಿಷಯದ ಬಗ್ಗೆ ನಾವು ಒಳಗೊಳಗೆ ತುಂಬಾ ಕೋಪಗೊಂಡಿದ್ದರೆ, ಅದು ಕೆಟ್ಟ ಜೀರ್ಣಕ್ರಿಯೆ ಅಥವಾ ಹುಣ್ಣಿಗೆ ಕಾರಣವಾಗುತ್ತದೆ ಅಥವಾ ರಾತ್ರಿಯಲ್ಲಿ ನಮಗೆ ನಿದ್ರೆ ಮಾಡಲು ಬಿಡುವುದಿಲ್ಲ. ಕೋಪವನ್ನು ತಡೆಹಿಡಿಯುವುದರಿಂದ ನಾವು ಅನೇಕ ತೊಂದರೆಗಳನ್ನು ಅನುಭವಿಸುತ್ತೇವೆ ಮತ್ತು ನಾವು ನಿಜವಾಗಿಯೂ ಆ ಕೋಪವನ್ನು ವ್ಯಕ್ತಪಡಿಸಿದರೆ ಮತ್ತು ಇತರರಿಗೆ ತುಂಬಾ ಪ್ರತಿಕೂಲ ನೋಟ ಮತ್ತು ಪ್ರತಿಕೂಲ ಕಂಪನಗಳನ್ನು ನೀಡಿದರೆ, ಬೆಕ್ಕುಗಳು ಮತ್ತು ನಾಯಿಗಳು ಸಹ ನಮ್ಮ ಸುತ್ತಲೂ ಇರಲು ಬಯಸುವುದಿಲ್ಲ. ನಮ್ಮ ಉಪಸ್ಥಿತಿಯಿಂದ, ನಮ್ಮ ಕೋಪದಿಂದ ಅವು ಅನಾನುಕೂಲಗೊಳಗಾಗುತ್ತವೆ, ಆದ್ದರಿಂದ ಅವು ನಿಧಾನವಾಗಿ ದೂರ ಸರಿಯುತ್ತವೆ.
ಕೋಪವು ಯಾವುದೇ ನಿಜವಾದ ಪ್ರಯೋಜನಗಳನ್ನು ಹೊಂದಿರದ ವಿಷಯ. ನಮ್ಮ ಕೋಪ ಎಷ್ಟು ಪ್ರಬಲವಾಗಿದೆ ಅಥವಾ ನಿರಾಶೆಗೊಂಡಿದೆಯೆಂದರೆ, ನಾವು ಅದನ್ನು ಹೇಗಾದರೂ ಹೊರಹಾಕಬೇಕಾಗುತ್ತದೆ ಮತ್ತು ನಾವು ಸ್ಫೋಟಗೊಂಡು ಯಾರನ್ನಾದರೂ ಶಪಿಸಬೇಕಾಗುತ್ತದೆ, ಅಥವಾ ಅವರ ವಿರುದ್ಧ ಏನಾದರೂ ದುಷ್ಟ ಮೋಡಿ ಎಸೆದರೆ, ಇದು ನಿಜವಾಗಿಯೂ ನಮಗೆ ಹಿತವಾದ ಭಾವನೆಯನ್ನು ನೀಡುತ್ತದೆಯೇ? ಬೇರೆಯವರು ನೋಯುತ್ತಿರುವುದನ್ನು ಮತ್ತು ಅಸಮಾಧಾನಗೊಳ್ಳುವುದನ್ನು ನೋಡುವುದು ನಮಗೆ ಉತ್ತಮ ಭಾವನೆಯನ್ನು ನೀಡುತ್ತದೆಯೇ? ಅಥವಾ ನಾವು ಗೋಡೆಗೆ ಗುದ್ದಬೇಕು ಎಂದು ಭಾವಿಸುವಷ್ಟು ಕೋಪಗೊಳ್ಳುತ್ತೇವೆ. ಗೋಡೆಗೆ ಗುದ್ದುವುದು ನಿಜವಾಗಿಯೂ ನಮಗೆ ಉತ್ತಮ ಭಾವನೆಯನ್ನು ನೀಡುತ್ತದೆಯೇ? ಇಲ್ಲ, ನಿಸ್ಸಂದೇಹವಾಗಿ ಇಲ್ಲ, ಅದು ನೋವುಂಟು ಮಾಡುತ್ತದೆ. ವಾಸ್ತವದಲ್ಲಿ, ಕೋಪವು ನಮಗೆ ಯಾವುದೇ ರೀತಿಯಲ್ಲಿ ಸಹಾಯ ಮಾಡುವುದಿಲ್ಲ. ನಾವು ಟ್ರಾಫಿಕ್ನಲ್ಲಿ ಸಿಲುಕಿಕೊಂಡಾಗ ನಾವು ಬಹಳಾ ಕೋಪಗೊಂಡು ನಮ್ಮ ಹಾರ್ನ್ ಅನ್ನು ಬಾರಿಸಲು ಪ್ರಾರಂಭಿಸಿದರೆ, ಮತ್ತು ಎಲ್ಲರ ಮೇಲೆ ಕಿರುಚಲು ಮತ್ತು ಶಪಿಸಲು ಪ್ರಾರಂಭಿಸಿದರೆ, ಅದರಿಂದ ಏನು ಪ್ರಯೋಜನ? ಅದು ನಮಗೆ ಉತ್ತಮ ಭಾವನೆಯನ್ನು ನೀಡಿತೆ? ಅದು ಕಾರುಗಳನ್ನು ವೇಗವಾಗಿ ಓಡಿಸುವಂತೆ ಮಾಡಿದೆಯೇ? ಇಲ್ಲ, ಅದು ಎಲ್ಲರ ಮುಂದೆ ನಾವು ಮುಖ ಕಳೆದುಕೊಳ್ಳುವಂತೆ ಮಾಡಿತು ಏಕೆಂದರೆ ಅವರು "ಹಾರ್ನ್ ಬೀಪ್ ಮಾಡುವ ಈ ಮೂರ್ಖ ಯಾರು?" ಎಂದು ಕೇಳುತ್ತಾರೆ. ಇದು ನಿಜವಾಗಿಯೂ ಆ ಪರಿಸ್ಥಿತಿಗೆ ಸಹಾಯ ಮಾಡುವುದಿಲ್ಲ.
ಕೋಪವನ್ನು ನಿವಾರಿಸುವುದು: ನಮ್ಮ ಜೀವನದ ಗುಣಮಟ್ಟವನ್ನು ಬದಲಾಯಿಸುವುದು
ಮೊದಲನೆಯದಾಗಿ, ನಮ್ಮ ಕೋಪ ಮತ್ತು ನಮ್ಮ ಎಲ್ಲಾ ಗೊಂದಲದ ಭಾವನೆಗಳು ಮತ್ತು ವರ್ತನೆಗಳನ್ನು ನಿವಾರಿಸಲು ನಮ್ಮ ಮೇಲೆ ಕೆಲಸ ಮಾಡಲು ನಮ್ಮನ್ನು ಪ್ರೇರೇಪಿಸುವ ಒಂದು ನಿರ್ದಿಷ್ಟ ಪ್ರೇರಣೆ ಅಥವಾ ಆಧಾರವನ್ನು ನಾವು ಹೊಂದಿರಬೇಕು. ನಮಗೆ ಅದನ್ನು ಮಾಡಲು ಯಾವುದೇ ಕಾರಣವಿಲ್ಲದಿದ್ದರೆ, ನಾವು ಅದನ್ನು ಏಕೆ ಮಾಡಬೇಕು? ಆದ್ದರಿಂದ ಪ್ರೇರಣೆಯನ್ನು ಹೊಂದಿರುವುದು ಮುಖ್ಯ.
"ನಾನು ಸಂತೋಷವಾಗಿರಲು ಮತ್ತು ಯಾವುದೇ ಸಮಸ್ಯೆಗಳಿದೆ ಇರಲು ಬಯಸುತ್ತೇನೆ. ನನ್ನ ಜೀವನದ ಗುಣಮಟ್ಟವನ್ನು ಸುಧಾರಿಸಲು ನಾನು ಬಯಸುತ್ತೇನೆ. ನನ್ನ ಜೀವನವು ತುಂಬಾ ಆಹ್ಲಾದಕರವಾಗಿಲ್ಲ ಏಕೆಂದರೆ ನಾನು ಯಾವಾಗಲೂ ನನ್ನೊಳಗೆ ಅಸಮಾಧಾನ ಮತ್ತು ಹಗೆತನವನ್ನು ಅನುಭವಿಸುತ್ತೇನೆ. ಆಗಾಗ್ಗೆ, ನಾನು ಕೋಪಗೊಳ್ಳುತ್ತಿರುತ್ತೇನೆ. ಬಹುಶಃ ನಾನು ಅದನ್ನು ವ್ಯಕ್ತಪಡಿಸುವುದಿಲ್ಲ, ಆದರೆ ಅದು ಇದೆ ಮತ್ತು ಅದು ನನ್ನನ್ನು ಬಹಳಾ ದುಃಖಿತನನ್ನಾಗಿ ಮಾಡುತ್ತದೆ, ಯಾವಾಗಲೂ ತುಂಬಾ ಅಸಮಾಧಾನಗೊಳಿಸುತ್ತಿದೆ ಮತ್ತು ಅದು ಉತ್ತಮ ಜೀವನದ ಗುಣಮಟ್ಟವಲ್ಲ. ಇದಲ್ಲದೆ, ಇದು ನನಗೆ ಕೆಟ್ಟ ಜೀರ್ಣಕ್ರಿಯೆಯನ್ನು ನೀಡುತ್ತಿದೆ ಮತ್ತು ಅದು ನನಗೆ ಅನಾರೋಗ್ಯವನ್ನುಂಟುಮಾಡುತ್ತದೆ. ನಾನು ಇಷ್ಟಪಡುವ ಆಹಾರವನ್ನು ಸಹ ಆನಂದಿಸಲು ನನಗೆ ಸಾಧ್ಯವಿಲ್ಲ."
ಏನೇ ಆಗಲಿ, ನಮ್ಮ ಜೀವನದ ಗುಣಮಟ್ಟವು ನಮ್ಮ ಕೈಯಲ್ಲಿದೆ. ಬುದ್ಧನು ಕಲಿಸಿದ ದೊಡ್ಡ ಸಂದೇಶಗಳಲ್ಲಿ ಒಂದು, ನಮ್ಮ ಜೀವನದ ಗುಣಮಟ್ಟದ ಬಗ್ಗೆ ನಾವು ಏನಾದರೂ ಮಾಡಬಹುದು. ನಾವು ನಮ್ಮ ಜೀವನವನ್ನು ಎಲ್ಲಾ ಸಮಯದಲ್ಲೂ ದುಃಖದಲ್ಲಿ ಬದುಕಬೇಕಾಗಿಲ್ಲ. ನಾವು ಅದರ ಬಗ್ಗೆ ಏನಾದರೂ ಮಾಡಬಹುದು.
ಆಗ ನಾವು ಯೋಚಿಸುತ್ತೇವೆ, “ನನ್ನ ಜೀವನದ ಗುಣಮಟ್ಟವನ್ನು ಈಗ ಅಥವಾ ಈ ಕ್ಷಣದ ಅಲ್ಪಾವಧಿಯಲ್ಲಿ ಮಾತ್ರವಲ್ಲದೆ ದೀರ್ಘಾವಧಿಯಲ್ಲೂ ಸುಧಾರಿಸಲು ನಾನು ಬಯಸುತ್ತೇನೆ. ವಿಷಯಗಳು ಇನ್ನೂ ಕೆಟ್ಟದಾಗಲು ನಾನು ಬಿಡಲು ಬಯಸುವುದಿಲ್ಲ. ಏಕೆಂದರೆ, ಉದಾಹರಣೆಗೆ, ನಾನು ಈಗ ನನ್ನ ದ್ವೇಷ ಮತ್ತು ಅಸಮಾಧಾನವನ್ನು ನಿವಾರಿಸದಿದ್ದರೆ ಮತ್ತು ನಾನು ಅದನ್ನು ಒಳಗೆ ಇಟ್ಟುಕೊಂಡರೆ, ಅದು ಇನ್ನಷ್ಟು ಹದಗೆಡುತ್ತದೆ ಮತ್ತು ನನಗೆ ಹುಣ್ಣಾಗಬಹುದು. ನಾನು ಸ್ಫೋಟಗೊಂಡು ಯಾರನ್ನಾದರೂ ಶಾಪ ಅಥವಾ ಮೋಡಿ ಮಾಡುವಂತಹ ಭಯಾನಕವಾದದ್ದನ್ನು ಮಾಡಬಹುದು ಮತ್ತು ನಿಜಕ್ಕೂ ಅವರನ್ನು ನಾಶಮಾಡಲು ಪ್ರಯತ್ನಿಸಬಹುದು. ಅದು ಇನ್ನೊಬ್ಬ ವ್ಯಕ್ತಿಯು ನನ್ನ ಮತ್ತು ನನ್ನ ಕುಟುಂಬದ ಮೇಲೆ ಶಾಪ ಹಾಕುವ ಮೂಲಕ ಸೇಡು ತೀರಿಸಿಕೊಳ್ಳಲು ಕಾರಣವಾಗಬಹುದು ಮತ್ತು ಹೀಗೆ, ಹೊಸ ವೀಡಿಯೊ ಅಥವಾ ಚಲನಚಿತ್ರಕ್ಕಾಗಿ ಬೇಕಾದ ಪರಿಪೂರ್ಣ ಸ್ಕ್ರಿಪ್ಟ್ ಇದೆ.”
ಇದು ನಾವು ಬಯಸದ ವಿಷಯ ಎಂದು ನಾವು ಮೊದಲೇ ಭಾವಿಸಿದರೆ, ನಾವು ಅದರ ಮೇಲೆ ಕೆಲಸ ಮಾಡುತ್ತೇವೆ ಮತ್ತು ಸಮಸ್ಯೆಗಳು ಉಲ್ಬಣಗೊಳ್ಳದಂತೆ ನಮ್ಮ ಕೋಪವನ್ನು ನಿವಾರಿಸಲು ಪ್ರಯತ್ನಿಸುತ್ತೇವೆ. ಇದಲ್ಲದೆ, ನಾವು ನಮ್ಮ ಸಮಸ್ಯೆಗಳನ್ನು ಕಡಿಮೆ ಮಾಡಲು ಮಾತ್ರವಲ್ಲ, ಇನ್ನೂ ಉತ್ತಮವಾಗಿ, ಎಲ್ಲಾ ಸಮಸ್ಯೆಗಳನ್ನು ಸಂಪೂರ್ಣವಾಗಿ ನಿವಾರಿಸಲು ಬಯಸಬಹುದು ಏಕೆಂದರೆ ಸ್ವಲ್ಪ ಪ್ರಮಾಣದ ಹಗೆತನ ಮತ್ತು ಅಸಮಾಧಾನವನ್ನು ಅನುಭವಿಸುವುದು ಸಹ ಮೋಜಿನ ಸಂಗತಿಯಲ್ಲ: "ಎಲ್ಲಾ ಸಮಸ್ಯೆಗಳಿಂದ ಮುಕ್ತರಾಗಲು ನಾನು ಬಲವಾದ ಸಂಕಲ್ಪವನ್ನು ಬೆಳೆಸಿಕೊಳ್ಳಬೇಕು."
ಸ್ವತಂತ್ರರಾಗಲು ದೃಢಸಂಕಲ್ಪ
ಸಾಮಾನ್ಯವಾಗಿ ನಾನು "ಸ್ವತಂತ್ರರಾಗಲು ದೃಢಸಂಕಲ್ಪ" ಎಂದು ಕರೆಯುವುದನ್ನು "ತ್ಯಾಗ" ಎಂದು ಅನುವಾದಿಸಲಾಗುತ್ತದೆ, ಇದು ದಾರಿತಪ್ಪಿಸುವ ಅನುವಾದವಾಗಿದೆ. ಇದು ನಾವು ಎಲ್ಲವನ್ನೂ ತ್ಯಜಿಸಿ ಗುಹೆಯಲ್ಲಿ ವಾಸಿಸಬೇಕು ಎಂಬ ಭಾವನೆಯನ್ನು ನೀಡುತ್ತದೆ. ಇಲ್ಲಿ ಖಂಡಿತವಾಗಿಯೂ ಇದನ್ನು ವ್ಯಾಖ್ಯಾನಿಸುತ್ತಿಲ್ಲ. ಚರ್ಚಿಸಲಾಗುತ್ತಿರುವುದು ನಮ್ಮ ಸಮಸ್ಯೆಗಳನ್ನು ಪ್ರಾಮಾಣಿಕವಾಗಿ ಮತ್ತು ಧೈರ್ಯದಿಂದ ನೋಡುವುದು ಮತ್ತು ಅವುಗಳೊಂದಿಗೆ ಬದುಕುವುದು ಎಷ್ಟು ಹಾಸ್ಯಾಸ್ಪದವಾಗಿದೆ ಎಂಬುದನ್ನು ಅರ್ಥಮಾಡಿಕೊಂಡು, "ನಾನು ಹೀಗೆ ಮುಂದುವರಿಯಲು ಬಯಸುವುದಿಲ್ಲ. ನನಗೆ ಸಾಕಾಗಿದೆ. ನನಗೆ ಅವುಗಳಿಂದ ಬೇಸರವಾಗಿದೆ; ನನಗೆ ಅವುಗಳಿಂದ ಬೇಜಾರಾಗಿದೆ. ನಾನು ಹೊರಬರಬೇಕು" ಎಂದು ನಿರ್ಧರಿಸುವುದಾಗಿದೆ.
ಇಲ್ಲಿ ಅಭಿವೃದ್ಧಿಪಡಿಸಬೇಕಾದ ಮನೋಭಾವವೆಂದರೆ ಸ್ವತಂತ್ರರಾಗಲು ದೃಢಸಂಕಲ್ಪ ಮತ್ತು ಅದರೊಂದಿಗೆ, ನಮ್ಮ ಹಳೆಯ, ಗೊಂದಲಮಯ ಆಲೋಚನೆ, ಮಾತು ಮತ್ತು ನಡವಳಿಕೆಯನ್ನು ತ್ಯಜಿಸುವ ಇಚ್ಛೆ. ಇದು ಅತ್ಯಂತ ಮುಖ್ಯ. ನಾವು ನಮ್ಮ ಮನಸ್ಸನ್ನು ಬಹಳ ಬಲವಾಗಿ ರೂಪಿಸಿಕೊಳ್ಳದಿದ್ದರೆ ನಾವು ನಮ್ಮ ಎಲ್ಲಾ ಶಕ್ತಿಯನ್ನು ಅದರಲ್ಲಿ ಹಾಕುವುದಿಲ್ಲ. ನಾವು ನಮ್ಮ ಎಲ್ಲಾ ಶಕ್ತಿಯನ್ನು ಅದರಲ್ಲಿ ಹಾಕುವವರೆಗೆ, ಸ್ವತಂತ್ರರಾಗಲು ಇರುವ ನಮ್ಮ ಪ್ರಯತ್ನವು ಕೇವಲ ಅರ್ಧ ಮನಸ್ಸಿನದ್ದಾಗಿರುತ್ತದೆ ಮತ್ತು ನಾವು ಎಂದಿಗೂ ಎಲ್ಲಿಗೂ ಹೋಗುವುದಿಲ್ಲ. ನಾವು ಸಂತೋಷವನ್ನು ಪಡೆಯಲು ಬಯಸುತ್ತೇವೆ, ಆದರೆ ನಮ್ಮ ನಕಾರಾತ್ಮಕ ಅಭ್ಯಾಸಗಳು ಮತ್ತು ಭಾವನೆಗಳಂತಹ ಯಾವುದನ್ನೂ ಬಿಟ್ಟುಕೊಡುವುದಿಲ್ಲ. ಅದು ಎಂದಿಗೂ ಯಶಸ್ವಿಯಾಗುವುದಿಲ್ಲ. ಆದ್ದರಿಂದ, ನಮ್ಮ ಸಮಸ್ಯೆಗಳನ್ನು ನಿಲ್ಲಿಸಿ ಅವುಗಳನ್ನು ಮತ್ತು ಅವುಗಳ ಕಾರಣಗಳನ್ನು ತ್ಯಜಿಸಲು ಸಿದ್ಧರಿರಬೇಕು ಎಂಬ ದೃಢ ನಿರ್ಧಾರವನ್ನು ತೆಗೆದುಕೊಳ್ಳುವುದು ಬಹಳ ಮುಖ್ಯ.
ಮುಂದಿನ ಉನ್ನತ ಮಟ್ಟದಲ್ಲಿ ನಾವು ಹೀಗೆ ಯೋಚಿಸಬೇಕು: “ನನಗಾಗಿ ಸಂತೋಷವನ್ನು ಕಂಡುಕೊಳ್ಳಲು ಮಾತ್ರವಲ್ಲ, ನನ್ನ ಸುತ್ತಲಿನ ಎಲ್ಲರ ಹಿತದೃಷ್ಟಿಯಿಂದ ನಾನು ನನ್ನ ಕೋಪವನ್ನು ನಿವಾರಿಸಬೇಕು. ನನ್ನ ಕುಟುಂಬ, ಸ್ನೇಹಿತರು, ಸಹೋದ್ಯೋಗಿಗಳು ಮತ್ತು ಸಮಾಜದ ಹಿತದೃಷ್ಟಿಯಿಂದ, ನಾನು ನನ್ನ ಕೋಪವನ್ನು ನಿವಾರಿಸಬೇಕು. ಇತರರ ಬಗೆಗಿನ ಪರಿಗಣನೆಯಿಂದ ನಾನು ಇದನ್ನು ಜಯಿಸಬೇಕು. ಅವರಿಗೆ ತೊಂದರೆ ಕೊಡಲು ಮತ್ತು ಅವರನ್ನು ಅಸಂತೋಷಗೊಳಿಸಲು ನಾನು ಬಯಸುವುದಿಲ್ಲ. ನಾನು ನನ್ನ ಕೋಪವನ್ನು ವ್ಯಕ್ತಪಡಿಸಿದರೆ ಅದು ನನ್ನ ಮುಖವನ್ನು ಕಳೆದುಕೊಳ್ಳುವಂತೆ ಮಾಡುತ್ತದೆ, ಜೊತೆಗೆ ಅದು ನನ್ನ ಇಡೀ ಕುಟುಂಬಕ್ಕೂ ಅವಮಾನವನ್ನು ತರುತ್ತದೆ. ಇದು ನನ್ನ ಎಲ್ಲಾ ಸಹಚರರಿಗೆ ಅವಮಾನವನ್ನು ತರುತ್ತದೆ. ಆದ್ದರಿಂದ, ಅವರ ಬಗ್ಗೆ ಪರಿಗಣನೆಯಿಂದ, ನಾನು ನನ್ನ ಕೋಪವನ್ನು ನಿಯಂತ್ರಿಸಲು ಮತ್ತು ನಿಭಾಯಿಸಲು ಮತ್ತು ಅದನ್ನು ನಿವಾರಿಸಲು ಕಲಿಯಬೇಕು.”
"ಈ ಕೋಪವನ್ನು ನಾನು ನಿವಾರಿಸಬೇಕು ಏಕೆಂದರೆ ಅದು ಇತರರಿಗೆ ಸಹಾಯ ಮಾಡುವುದನ್ನು ತಡೆಯುತ್ತದೆ. ನನ್ನ ಮಕ್ಕಳು ಅಥವಾ ಕೆಲಸದಲ್ಲಿರುವ ಜನರು ಅಥವಾ ನನ್ನ ಹೆತ್ತವರಂತಹ ಇತರರಿಗೆ ನನ್ನ ಸಹಾಯದ ಅಗತ್ಯವಿದ್ದರೆ, ಮತ್ತು ನಾನು ಕೋಪ ಅಥವಾ ಹಗೆತನದಿಂದ ಸಂಪೂರ್ಣವಾಗಿ ಅಸಮಾಧಾನಗೊಂಡಿದ್ದರೆ ಅಥವಾ ತೊಂದರೆಗೊಳಗಾಗಿದ್ದರೆ, ನಾನು ಅವರಿಗೆ ಹೇಗೆ ಸಹಾಯ ಮಾಡಲು ಸಾಧ್ಯ?" ಅದು ಒಂದು ಪ್ರಮುಖ ಅಡಚಣೆಯಾಗಿದೆ, ಆದ್ದರಿಂದ ಈ ವಿವಿಧ ಹಂತದ ಪ್ರೇರಣೆಯನ್ನು ಪ್ರಾಮಾಣಿಕವಾಗಿ ಅಭಿವೃದ್ಧಿಪಡಿಸಲು ನಮ್ಮ ಮೇಲೆ ಕೆಲಸ ಮಾಡುವುದು ಬಹಳ ಮುಖ್ಯ.
ಕೋಪವನ್ನು ನಿಭಾಯಿಸಲು ಇರುವ ವಿಧಾನವು ಎಷ್ಟೇ ಅತ್ಯಾಧುನಿಕವಾಗಿದ್ದರೂ, ಅದನ್ನು ಅನ್ವಯಿಸಲು ನಮ್ಮಲ್ಲಿ ಬಲವಾದ ಪ್ರೇರಣೆ ಇಲ್ಲದಿದ್ದರೆ, ನಾವು ಅದನ್ನು ಪಾಲಿಸುವುದಿಲ್ಲ. ಮತ್ತು, ನಾವು ಕಲಿಯುವ ವಿಧಾನಗಳನ್ನು ನಾವು ಅನ್ವಯಿಸದಿದ್ದರೆ, ಅದರ ಅರ್ಥವೇನು? ಆದ್ದರಿಂದ, ಮೊದಲ ಹೆಜ್ಜೆಯು, ಪ್ರೇರಣೆಯ ವಿಷಯವಾಗಿ ಯೋಚಿಸುವುದಾಗಿರುತ್ತದೆ.
ಕೋಪವನ್ನು ಜಯಿಸುವ ವಿಧಾನಗಳು
ಕೋಪವನ್ನು ಜಯಿಸಲು ನಾವು ಬಳಸಬಹುದಾದ ನಿಜವಾದ ವಿಧಾನಗಳು ಯಾವುವು? ಕೋಪವನ್ನು ಜೀವಂತ ಅಥವಾ ನಿರ್ಜೀವವಾದ ಯಾವುದಾದರೂ ವಿಷಯದ ವಿರುದ್ಧ ಹಿಂಸಾಚಾರವನ್ನು ಸೃಷ್ಟಿಸಲು ಬಯಸುವ ಪ್ರಕ್ಷುಬ್ಧ ಮನಸ್ಸಿನ ಸ್ಥಿತಿ ಎಂದು ವ್ಯಾಖ್ಯಾನಿಸಲಾಗಿದೆ. ನಾವು ಒಬ್ಬ ವ್ಯಕ್ತಿ, ಪ್ರಾಣಿ, ಸನ್ನಿವೇಶ ಅಥವಾ ಯಾವುದಾದರೂ ವಸ್ತುವಿನ ಮೇಲೆ ಕೇಂದ್ರೀಕರಿಸಿ ಅದನ್ನು ಇಷ್ಟಪಡದಿದ್ದರೆ, ಮತ್ತು ಅದರ ಕಡೆಗೆ ಸ್ವಲ್ಪ ಹಿಂಸೆ ಮತ್ತು ಆಂದೋಲನವನ್ನು ವ್ಯಕ್ತಪಡಿಸಲು ಬಯಸಿದರೆ, ಅದು ಹಿಂಸಾತ್ಮಕ ರೀತಿಯಲ್ಲಿ ಬದಲಾಗುವಂತೆ ಮಾಡುವುದು ಕೋಪ. ಆದ್ದರಿಂದ, ಕೋಪವು ಅಸಹಿಷ್ಣುತೆ ಮತ್ತು ತಾಳ್ಮೆಯ ಕೊರತೆಯ ಸ್ಥಿತಿಯಾಗಿದ್ದು, ನಾವು ಸಹಿಸಲಾಗದ ಯಾವುದನ್ನಾದರೂ ಹಾನಿ ಮಾಡುವ ಬಯಕೆಯೊಂದಿಗೆ ಸಂಯೋಜಿಸಲ್ಪಟ್ಟಿರುತ್ತದೆ. ಇದರ ವಿರುದ್ಧವಾಗಿ, ಒಂದೆಡೆ ತಾಳ್ಮೆಯಿದೆ, ಇದು ಅಸಹಿಷ್ಣುತೆಗೆ ವಿರುದ್ಧವಾಗಿದೆ ಮತ್ತು ಮತ್ತೊಂದೆಡೆ, ಪ್ರೀತಿ. ಪ್ರೀತಿಯು ಬೇರೆಯವರು ಸಂತೋಷವಾಗಿರಬೇಕೆಂಬ ಬಯಕೆಯಾಗಿರುವುದರಿಂದ, ಪ್ರೀತಿಯು ಅವರಿಗೆ ಹಾನಿ ಮಾಡಬೇಕೆಂದು ಬಯಸುವುದಕ್ಕೆ ವಿರುದ್ಧವಾಗಿದೆ.
ನಾವು ಇಷ್ಟಪಡದ ಏನಾದರೂ ನಮಗೆ ಸಂಭವಿಸುವ ಸಂದರ್ಭಗಳಲ್ಲಿ ನಾವು ಹೆಚ್ಚಾಗಿ ಕೋಪಗೊಳ್ಳುತ್ತೇವೆ. ಜನರು ನಾವು ವರ್ತಿಸಬೇಕೆಂದು ಬಯಸುವ ರೀತಿಯಲ್ಲಿ ವರ್ತಿಸುತ್ತಿಲ್ಲ. ಉದಾಹರಣೆಗೆ, ಅವರು ನಮಗೆ ಗೌರವವನ್ನು ತೋರಿಸುತ್ತಿಲ್ಲ, ಅವರು ಕೆಲಸದಲ್ಲಿ ನಮ್ಮ ಆದೇಶಗಳನ್ನು ಅನುಸರಿಸುತ್ತಿಲ್ಲ, ಅಥವಾ ಅವರು ವ್ಯವಹಾರದಲ್ಲಿ ನಮಗಾಗಿ ಏನನ್ನಾದರೂ ಮಾಡುವುದಾಗಿ ಭರವಸೆ ನೀಡಿದ್ದಾರೆ ಮತ್ತು ಅವರು ಅದನ್ನು ನಿಭಾಯಿಸುತ್ತಿಲ್ಲ. ಅವರು ನಾವು ನಿರೀಕ್ಷಿಸಿದಂತೆ ಮಾಡದ ಕಾರಣ, ನಾವು ಅವರ ಮೇಲೆ ತುಂಬಾ ಕೋಪಗೊಳ್ಳುತ್ತೇವೆ. ಇನ್ನೊಂದು ಉದಾಹರಣೆಯಾಗಿ, ಯಾರಾದರೂ ನಮ್ಮ ಕಾಲಿನ ಮೇಲೆ ಕಾಲಿಡಬಹುದು, ಮತ್ತು ನಾವು ಅವರ ಮೇಲೆ ಕೋಪಗೊಳ್ಳುತ್ತೇವೆ ಏಕೆಂದರೆ ಅದು ನಮಗೆ ಇಷ್ಟವಿಲ್ಲ. ಆದರೆ, ನಾವು ಕೋಪಗೊಳ್ಳದೆ ಅಂತಹ ಸಂದರ್ಭಗಳನ್ನು ನಿಭಾಯಿಸಲು ವಿವಿಧ ಮಾರ್ಗಗಳಿವೆ.
ಶಾಂತಿದೇವ ಅವರ ತಾಳ್ಮೆಯನ್ನು ಬೆಳೆಸಿಕೊಳ್ಳುವ ಸಲಹೆ
ಎಂಟನೇ ಶತಮಾನದ ಶ್ರೇಷ್ಠ ಭಾರತೀಯ ಬೌದ್ಧ ಗುರು ಶಾಂತಿದೇವ ಅವರು ಸಹಾಯ ಮಾಡಲು ಅನೇಕ ಚಿಂತನೆಗಳನ್ನು ನೀಡಿದರು. ಅವರು ಬರೆದದ್ದನ್ನು ವಿವರಿಸಬೇಕೆಂದರೆ, ಅವರು ಹೀಗೆ ಹೇಳಿದರು: “ಕಠಿಣ ಪರಿಸ್ಥಿತಿಯಲ್ಲಿ ನಾವು ಅದನ್ನು ಬದಲಾಯಿಸಲು ಏನಾದರೂ ಮಾಡಬಹುದಾದರೆ, ಚಿಂತಿಸಿ ಕೋಪಗೊಳ್ಳುವುದು ಏಕೆ, ಅದನ್ನು ಬದಲಾಯಿಸಿ. ನಾವು ಏನೂ ಮಾಡಲು ಸಾಧ್ಯವಾಗದಿದ್ದರೆ, ಚಿಂತಿಸಿ ಕೋಪಗೊಳ್ಳುವುದು ಏಕೆ? ಅದನ್ನು ಬದಲಾಯಿಸಲು ಸಾಧ್ಯವಾಗದಿದ್ದರೆ, ಕೋಪವು ಸಹಾಯ ಮಾಡುವುದಿಲ್ಲ.”
ಉದಾಹರಣೆಗೆ, ನಾವು ಪೆನಾಂಗ್ನಿಂದ ಸಿಂಗಾಪುರಕ್ಕೆ ವಿಮಾನವನ್ನು ಹತ್ತಲು ಬಯಸುತ್ತೇವೆ, ಆದರೆ ನಾವು ವಿಮಾನ ನಿಲ್ದಾಣಕ್ಕೆ ಬಂದಾಗ ವಿಮಾನವು ಓವರ್ಬುಕ್ ಆಗಿದೆ ಮತ್ತು ಈಗಾಗಲೇ ತುಂಬಿದೆ. ಕೋಪಗೊಳ್ಳುವುದರಲ್ಲಿ ಅರ್ಥವಿಲ್ಲ. ಕೋಪವು ನಮಗೆ ವಿಮಾನ ಹತ್ತಲು ಸಹಾಯ ಮಾಡುವುದಿಲ್ಲ. ಆದರೆ, ಪರಿಸ್ಥಿತಿಯನ್ನು ಬದಲಾಯಿಸಲು ನಾವು ಮಾಡಬಹುದಾದ ಒಂದು ವಿಷಯವಿದೆ - ನಾವು ಮುಂದಿನ ವಿಮಾನವನ್ನು ತೆಗೆದುಕೊಳ್ಳಬಹುದು. ಕೋಪಗೊಳ್ಳುವುದು ಏಕೆ? ಮುಂದಿನ ವಿಮಾನಕ್ಕಾಗಿ ಬುಕಿಂಗ್ ಮಾಡಿ, ಸಿಂಗಾಪುರದಲ್ಲಿರುವ ಸ್ನೇಹಿತರಿಗೆ ದೂರವಾಣಿ ಮಾಡಿ, ನಾವು ನಂತರ ಬರುತ್ತಿದ್ದೇವೆ ಎಂದು ತಿಳಿಸಿ; ಅಲ್ಲಿಗೆ ಅದು ಮುಗಿಯಿತು. ಸಮಸ್ಯೆಯನ್ನು ನಿಭಾಯಿಸಲು ನಾವು ಮಾಡಬಹುದಾದ ಕೆಲಸ ಇದು. ನಮ್ಮ ಟೆಲಿವಿಷನ್ ಕೆಲಸ ಮಾಡದಿದ್ದರೆ, ಕೋಪಗೊಂಡು ಅದನ್ನು ಯಾಕೆ ಒದೆಯಬೇಕು ಮತ್ತು ಶಪಿಸಬೇಕು? ಅದನ್ನು ಸರಿಪಡಿಸಿ. ಇದು ಬಹಳಾ ಸ್ಪಷ್ಟವಾದ ವಿಷಯ. ನಾವು ಬದಲಾಯಿಸಬಹುದಾದ ಪರಿಸ್ಥಿತಿ ಇದ್ದರೆ; ಕೋಪಗೊಳ್ಳುವ ಅಗತ್ಯವಿಲ್ಲ, ಅದನ್ನು ಬದಲಾಯಿಸಿ.
ಪರಿಸ್ಥಿತಿಯನ್ನು ಬದಲಾಯಿಸಲು ನಾವು ಏನೂ ಮಾಡಲು ಸಾಧ್ಯವಾಗದಿದ್ದರೆ, ಉದಾಹರಣೆಗೆ ನಾವು ರಶ್ ಅವರ್ ಟ್ರಾಫಿಕ್ನಲ್ಲಿ ಸಿಲುಕಿಕೊಂಡಿದ್ದರೆ, ನಾವು ಅದನ್ನು ಒಪ್ಪಿಕೊಳ್ಳಬೇಕು. ನಮ್ಮ ಕಾರಿನ ಮುಂಭಾಗದಲ್ಲಿ ನಮ್ಮ ಮುಂದೆ ಇರುವ ಎಲ್ಲಾ ಕಾರುಗಳನ್ನು ಜ್ಯಾಪ್ ಮಾಡಲು ಅಥವಾ ಯಾವುದೋ ಜಪಾನೀಸ್ ಕಾರ್ಟೂನ್ನಂತೆ ಟ್ರಾಫಿಕ್ನಿಂದ ಹಾರಿಹೋಗಲು ಲೇಸರ್ ಬೀಮ್ ಗನ್ ಇಲ್ಲ. ಆದ್ದರಿಂದ, ನಾವು ಹೀಗೆ ಯೋಚಿಸುತ್ತಾ ಅದನ್ನು ವಿನಯಶೀಲವಾಗಿ ಸ್ವೀಕರಿಸಬೇಕು: "ಸರಿ ನಾನು ಟ್ರಾಫಿಕ್ನಲ್ಲಿದ್ದೇನೆ, ನಾನು ರೇಡಿಯೊವನ್ನು ಹಾಕುತ್ತೇನೆ, ಅಥವಾ ನಾನು ಕ್ಯಾಸೆಟ್ ರೆಕಾರ್ಡರ್ ಅನ್ನು ಹಾಕಿಕೊಂಡು ಕೆಲವು ಬೌದ್ಧ ಬೋಧನೆಗಳನ್ನು ಅಥವಾ ಕೆಲವು ಸುಂದರವಾದ ಸಂಗೀತವನ್ನು ಕೇಳುತ್ತೇನೆ." ಹೆಚ್ಚಿನ ಸಮಯ, ನಾವು ಯಾವಾಗ ರಶ್ ಅವರ್ ಟ್ರಾಫಿಕ್ನಲ್ಲಿ ಸಿಲುಕಿಕೊಳ್ಳುತ್ತೇವೆ ಎಂದು ನಮಗೆ ತಿಳಿದಿರುತ್ತದೆ, ಆದ್ದರಿಂದ ನಾವು ಕೇಳಲು ಟೇಪ್ ತೆಗೆದುಕೊಂಡು ನಮ್ಮನ್ನು ಸಿದ್ಧಪಡಿಸಿಕೊಳ್ಳಬಹುದು. ನಾವು ಅಂತಹ ಟ್ರಾಫಿಕ್ನಲ್ಲಿ ಚಾಲನೆ ಮಾಡಬೇಕು ಎಂದು ನಮಗೆ ತಿಳಿದಿದ್ದರೆ, ಆ ಸಮಯವನ್ನು ನಾವು ಉತ್ತಮವಾಗಿ ಬಳಸಿಕೊಳ್ಳಬಹುದು. ನಮ್ಮ ಕಚೇರಿಯಲ್ಲಿ ಅಥವಾ ನಮ್ಮ ಕುಟುಂಬದೊಂದಿಗೆ ಅಥವಾ ಯಾವುದಾದರೂ ಸಮಸ್ಯೆಗಳ ಬಗ್ಗೆ ಯೋಚಿಸಬಹುದು ಮತ್ತು ಅವುಗಳಿಗೆ ಉತ್ತಮ ಪರಿಹಾರವನ್ನು ಕಂಡುಹಿಡಿಯಲು ಪ್ರಯತ್ನಿಸಬಹುದು.
ಕಠಿಣ ಪರಿಸ್ಥಿತಿಯನ್ನು ಬದಲಾಯಿಸಲು ನಮಗೆ ಏನೂ ಮಾಡಲು ಸಾಧ್ಯವಾಗದಿದ್ದರೆ, ಅದನ್ನು ಉತ್ತಮವಾಗಿ ಬಳಸಿಕೊಳ್ಳಲು ಪ್ರಯತ್ನಿಸಿ. ಕತ್ತಲೆಯಲ್ಲಿ ನಮ್ಮ ಕಾಲಿನ ಬೆರಳಿಗೆ ನೋವುಂಟಾದರೆ, ನಾವು ಮೇಲಕ್ಕೆ ಕೆಳಕ್ಕೆ ಹಾರಿ ಕಿರುಚಿದರೆ, ಅದು ಉತ್ತಮವಾಗುತ್ತದೆಯೇ? ಅಮೇರಿಕನ್ ಭಾಷೆಯಲ್ಲಿ ನಾವು ಅದನ್ನು "ನೋವಿನ ನೃತ್ಯ ಮಾಡುವುದು” ಎಂದು ಕರೆಯುತ್ತೇವೆ. ನೀವು ಬಹಳಾ ನೋವುಂಡು, ಮೇಲೆ-ಕೆಳಗೆ ಜಿಗಿದು ನರ್ತಿಸುತ್ತೀರಿ; ಆದರೆ ಅದರಿಂದ ನೋವು ಹೋಗುವುದಿಲ್ಲ. ಅದರ ಬಗ್ಗೆ ನಮ್ಮಿಂದ ಮಾಡಲು ಸಾಧ್ಯವಾಗುವುದು ಕಡಿಮೆ. ನಮಗೆ ಸಾಧ್ಯವಾಗುವುದು ನಾವು ಮಾಡುತ್ತಿರುವುದನ್ನು ಮುಂದುವರಿಸುವುದು ಮಾತ್ರ. ನೋವು ಶಾಶ್ವತವಲ್ಲ. ಅದು ಹಾದುಹೋಗುವ ವಿಷಯ. ಅದು ಶಾಶ್ವತವಾಗಿ ಉಳಿಯುವುದಿಲ್ಲ ಮತ್ತು ಮೇಲಕ್ಕೆ ಮತ್ತು ಕೆಳಕ್ಕೆ ಹಾರಿ ಕಿರುಚುವುದು ಮತ್ತು ಕೂಗುವುದು ನಮಗೆ ಒಳ್ಳೆಯದಲ್ಲ. ನಮಗೆ ಏನು ಬೇಕು? ಎಲ್ಲರೂ ಬಂದು "ಅಯ್ಯೋ ಪಾಪ, ನೀನು ನಿನ್ನ ಕಾಲಿನ ಬೆರಳಿಗೆ ನೋವುಂಟುಮಾಡಿಕೊಂಡಿದ್ದೀಯ" ಎಂದು ಹೇಳಬೇಕೆಂದು ನಾವು ಬಯಸುತ್ತೇವೆಯೇ? ಒಂದು ಮಗು ಅಥವಾ ಮಗು ತನ್ನನ್ನು ತಾನೇ ನೋಯಿಸಿಕೊಂಡರೆ, ಅದರ ತಾಯಿ ಬಂದು ಅದನ್ನು ಮುತ್ತಿಕ್ಕಿ ಅದನ್ನು ಉತ್ತಮಗೊಳಿಸುತ್ತಾಳೆ. ಆದ್ದರಿಂದ ಜನರು ನಮ್ಮನ್ನು ಮಗುವಿನಂತೆ ಇದೇ ರೀತಿ ನಡೆಸಿಕೊಳ್ಳಬೇಕೆಂದು ನಾವು ನಿರೀಕ್ಷಿಸುತ್ತೇವೆಯೇ?
ನಮ್ಮ ಸರದಿಗಾಗಿ ಸರದಿಯಲ್ಲಿ ಅಥವಾ ಬಸ್ಸಿಗಾಗಿ ಕಾಯುತ್ತಿರುವಾಗ, ನಾವು ಅಶಾಶ್ವತತೆಯ ಬಗ್ಗೆ ಯೋಚಿಸಿದರೆ – ಅಂದರೆ ನಾನು ಯಾವಾಗಲೂ ಸರದಿಯಲ್ಲಿ 32 ಅಥವಾ 9 ನೇ ಸಂಖ್ಯೆಯಲ್ಲಿರುವುದಿಲ್ಲ, ಅಂತಿಮವಾಗಿ ನನ್ನ ಸರದಿ ಬಂದೇ ಬರುತ್ತದೆ, ಅದು ಪರಿಸ್ಥಿತಿಯನ್ನು ಸಹಿಸಿಕೊಳ್ಳಲು ನಮಗೆ ಸಹಾಯ ಮಾಡುತ್ತದೆ ಮತ್ತು ನಾವು ಆ ಸಮಯವನ್ನು ಬೇರೆ ರೀತಿಯಲ್ಲಿ ಬಳಸಬಹುದು. ಭಾರತದಲ್ಲಿ ಒಂದು ಮಾತು ಇದೆ: "ಕಾಯುವಿಕೆಯಲ್ಲಿ ತನ್ನದೇ ಆದ ಒಂದು ನಿರ್ದಿಷ್ಟ ಆನಂದವಿದೆ." ಇದು ನಿಜ, ಏಕೆಂದರೆ ನಾವು ನಮ್ಮ ಸರದಿಗಾಗಿ ಸರದಿಯಲ್ಲಿ ಅಥವಾ ಬಸ್ಗಾಗಿ ಕಾಯಬೇಕಾದರೆ, ಸರತಿಯಲ್ಲಿರುವ ಅಥವಾ ಬಸ್ ನಿಲ್ದಾಣದಲ್ಲಿ, ಕಚೇರಿಯಲ್ಲಿ ನಡೆಯುತ್ತಿರುವ ವಿಷಯಗಳ ಬಗ್ಗೆ ಅಥವಾ ಇನ್ನಾವುದೇ ವಿಷಯಗಳ ಬಗ್ಗೆ ಅರಿವು ಮೂಡಿಸಲು ಆ ಸಮಯವನ್ನು ಬಳಸಬಹುದು. ಇದು ಇತರರ ಬಗ್ಗೆ ಕಾಳಜಿ ಮತ್ತು ಸಹಾನುಭೂತಿಯನ್ನು ಬೆಳೆಸಿಕೊಳ್ಳಲು ನಮಗೆ ಸಹಾಯ ಮಾಡುತ್ತದೆ. ನಾವು ಅಲ್ಲಿದ್ದರೆ, ಅರ್ಧ ಗಂಟೆಯನ್ನು ಶಪಿಸುವುದಕ್ಕಿಂತ ಹೆಚ್ಚಾಗಿ ಸಮಯವನ್ನು ರಚನಾತ್ಮಕವಾಗಿ ಬಳಸಬಹುದು.
ಶಾಂತಿದೇವರ ಮತ್ತೊಂದು ಸಲಹೆ ನಮಗೆ ಹೇಳುತ್ತದೆ: "ಯಾರಾದರೂ ನಮಗೆ ಕೋಲಿನಿಂದ ಹೊಡೆದರೆ, ನಾವು ಯಾರ ಮೇಲೆ ಕೋಪಗೊಳ್ಳುತ್ತೇವೆ? ನಾವು ಆ ವ್ಯಕ್ತಿಯ ಮೇಲೆ ಕೋಪಗೊಳ್ಳುತ್ತೇವೆಯೇ ಅಥವಾ ಕೋಲಿನ ಮೇಲೆ ಕೋಪಗೊಳ್ಳುತ್ತೇವೆಯೇ?" ತಾರ್ಕಿಕವಾಗಿ ಯೋಚಿಸಿದರೆ, ನಾವು ಕೋಪಗೊಳ್ಳುವುದು ಕೋಲಿನ ಮೇಲೆಯೇ ಆಗಿರಬೇಕು, ಏಕೆಂದರೆ ನಮಗೆ ನೋವುಂಟುಮಾಡಿದ್ದು ಕೋಲು! ಆದರೆ, ಅದು ಮೂರ್ಖತನ. ಕೋಲಿನಿಂದ ಯಾರೂ ಕೋಪಗೊಳ್ಳುವುದಿಲ್ಲ; ನಾವು ಆ ವ್ಯಕ್ತಿಯ ಮೇಲೆ ಕೋಪಗೊಳ್ಳುತ್ತೇವೆ. ನಾವು ಆ ವ್ಯಕ್ತಿಯ ಮೇಲೆ ಏಕೆ ಕೋಪಗೊಳ್ಳುತ್ತೇವೆ? ಏಕೆಂದರೆ ಕೋಲನ್ನು ಆ ವ್ಯಕ್ತಿಯೇ ಕುಶಲತೆಯಿಂದ ಬಳಸಿರುತ್ತಾನೆ. ಅದೇ ರೀತಿ, ನಾವು ಹೆಚ್ಚು ಯೋಚಿಸಿದರೆ, ಆ ವ್ಯಕ್ತಿಯು ಅವನ ಅಥವಾ ಅವಳ ಗೊಂದಲದ ಭಾವನೆಗಳ ಪ್ರಚೋದನೆಯಡಿ ಕಾರ್ಯನಿರ್ವಹಿಸಿದ್ದಾನೆ. ಆದ್ದರಿಂದ ನಾವು ಕೋಪಗೊಳ್ಳಲಿದ್ದರೆ, ಆ ವ್ಯಕ್ತಿಯ ಗೊಂದಲದ ಭಾವನೆಗಳ ಮೇಲೆ ಕೋಪಗೊಳ್ಳಬೇಕು, ಅದು ಅವನನ್ನು ಅಥವಾ ಅವಳನ್ನು ಕೋಲಿನಿಂದ ಹೊಡೆಯುವಂತೆ ಮಾಡಿತು.
ನಂತರ ನಾವು ಯೋಚಿಸುತ್ತೇವೆ: “ಈ ಗೊಂದಲಮಯ ಭಾವನೆ ಎಲ್ಲಿಂದ ಬಂದಿತು? ಅದು ಎಲ್ಲಿಂದಲೋ ಹುಟ್ಟಿಕೊಂಡಿಲ್ಲ. ಅದನ್ನು ಪ್ರಚೋದಿಸಲು ನಾನು ಏನನ್ನಾದರೂ ಮಾಡಿರಬೇಕು. ನಾನು ಇನ್ನೊಬ್ಬ ವ್ಯಕ್ತಿ ನನ್ನ ಮೇಲೆ ಕೋಪಗೊಳ್ಳುವಂತೆ ಮತ್ತು ನಂತರ ನನ್ನನ್ನು ಕೋಲಿನಿಂದ ಹೊಡೆಯುವಂತೆ ಮಾಡಿರಬೇಕು. ಹಾಗೆ, ನಾನು ಯಾರನ್ನಾದರೂ ನನಗೆ ಸಹಾಯ ಮಾಡಲು ಕೇಳಿರಬಹುದು ಮತ್ತು ಅವನು ಅಥವಾ ಅವಳು ನಿರಾಕರಿಸಿದಾಗ, ನಾನು ಕೋಪಗೊಂಡಿರಬಹುದು. ಅದರಿಂದ ನನಗೆ ನೋವಾಯಿತು. ಸರಿ, ನಾನು ಅದರ ಬಗ್ಗೆ ಯೋಚಿಸಿದರೆ, ಅದು ವಾಸ್ತವವಾಗಿ ನನ್ನದೇ ತಪ್ಪು. ನಾನು ತುಂಬಾ ಸೋಮಾರಿಯಾಗಿದ್ದೆ ಮತ್ತು ಅದನ್ನು ನಾನೇ ಮಾಡಲಿಲ್ಲ. ನಾನು ಈ ಇನ್ನೊಬ್ಬ ವ್ಯಕ್ತಿಯನ್ನು ನನಗೆ ಒಂದು ಉಪಕಾರ ಮಾಡಲು ಕೇಳಿದೆ ಮತ್ತು ಅವನು ಅಥವಾ ಅವಳು ನಿರಾಕರಿಸಿದಾಗ ನನಗೆ ಕೋಪ ಬಂದಿತು. ನಾನು ಅಷ್ಟು ಸೋಮಾರಿಯಾಗಿರದಿದ್ದರೆ, ನಾನು ಈ ವ್ಯಕ್ತಿಯನ್ನು ಎಂದಿಗೂ ಕೇಳುತ್ತಿರಲಿಲ್ಲ, ಮತ್ತು ಇಡೀ ಸಮಸ್ಯೆ ಎಂದಿಗೂ ಉದ್ಭವಿಸುತ್ತಿರಲಿಲ್ಲ. ನಾನು ಕೋಪಗೊಳ್ಳಬೇಕೆಂದಿದ್ದರೆ, ಈ ವ್ಯಕ್ತಿಯನ್ನು ಉಪಕಾರ ಮಾಡಲು ಕೇಳಲು ನಾನು ಬಹಳಾ ಮೂರ್ಖ ಮತ್ತು ಸೋಮಾರಿಯಾಗಿದ್ದಕ್ಕಾಗಿ ನಾನು ನನ್ನ ಮೇಲೆಯೇ ಕೋಪಗೊಳ್ಳಬೇಕು.”
ನಮ್ಮ ತಪ್ಪಲ್ಲದಿದ್ದರೂ ಸಹ, ಇತರ ವ್ಯಕ್ತಿಯನ್ನು ಕುಶಲತೆಯಿಂದ ನಿರ್ವಹಿಸುವ ಈ ಗೊಂದಲಮಯ ಭಾವನೆಯಿಂದ ನಾವು ಮುಕ್ತರಾಗಿದ್ದೇವೆಯೇ ಎಂಬುದನ್ನು ನಾವು ನೋಡಬೇಕು, ಉದಾಹರಣೆಗೆ, ಸ್ವಾರ್ಥ: “ಅವನು ನನಗೆ ಉಪಕಾರ ಮಾಡಲು ನಿರಾಕರಿಸಿದನು. ಸರಿ, ನಾನು ಯಾವಾಗಲೂ ಇತರರಿಗೆ ಉಪಕಾರ ಮಾಡುತ್ತೇನೆಯೇ? ನಾನು ಯಾವಾಗಲೂ ಇತರರಿಗೆ ಸಹಾಯ ಮಾಡಲು ಒಪ್ಪುವ ಮತ್ತು ತಕ್ಷಣ ಹಾಗೆ ಮಾಡುವ ವ್ಯಕ್ತಿಯೇ? ನಾನು ಹಾಗಲ್ಲದಿದ್ದರೆ, ಇತರರು ಯಾವಾಗಲೂ ಎಲ್ಲವನ್ನೂ ಬಿಟ್ಟು ನನಗಾಗಿ ಸಹಾಯ ಮಾಡುತ್ತಾರೆ ಎಂದು ಏಕೆ ನಿರೀಕ್ಷಿಸಬೇಕು?” ಇದು ಕೋಪವನ್ನು ನಿಭಾಯಿಸುವ ಇನ್ನೊಂದು ಮಾರ್ಗವಾಗಿದೆ.
ನಾನು ಮೊದಲೇ ಹೇಳಿದಂತೆ ಕೋಪವನ್ನು ಯಾವಾಗಲೂ ಇನ್ನೊಬ್ಬ ವ್ಯಕ್ತಿಯನ್ನು ಹೊಡೆಯುವುದರಿಂದ ಅಥವಾ ಅವರ ಮೇಲೆ ಕೂಗುವುದು, ಕಿರುಚುವುದರ ಮೂಲಕ ವ್ಯಕ್ತಪಡಿಸಬೇಕಾಗಿಲ್ಲ. ಕೋಪವು ಒಂದು ತೊಂದರೆಗೊಳಿಸುವ ಭಾವನೆಯಾಗಿದ್ದು, ವ್ಯಾಖ್ಯಾನದ ಪ್ರಕಾರ, ಅದು ಉದ್ಭವಿಸಿದಾಗ ನಮಗೆ ಅನಾನುಕೂಲತೆಯನ್ನುಂಟು ಮಾಡುತ್ತದೆ. ಆದ್ದರಿಂದ ನಾವು ಅದನ್ನು ಒಳಗೆ ಇಟ್ಟುಕೊಂಡಿದ್ದರೂ ಮತ್ತು ಅದನ್ನು ಎಂದಿಗೂ ವ್ಯಕ್ತಪಡಿಸದಿದ್ದರೂ ಸಹ, ಕೋಪವು ನಮ್ಮೊಳಗೆ ಬಹಳ ವಿನಾಶಕಾರಿಯಾಗಿ ಕಾರ್ಯನಿರ್ವಹಿಸುತ್ತದೆ. ಮತ್ತು ನಮ್ಮನ್ನು ತುಂಬಾ ಅಸಮಾಧಾನಗೊಳಿಸುತ್ತದೆ. ನಂತರ ಅದು ಬಹಳಾ ವಿನಾಶಕಾರಿ ರೀತಿಯಲ್ಲಿ ಹೊರಬರುತ್ತದೆ. ನಮ್ಮೊಳಗೆ ವ್ಯಕ್ತಪಡಿಸದೆ ಇರುವ ಕೋಪವನ್ನು ನಿಭಾಯಿಸಲು ಸಾಧ್ಯವಾಗಲು, ನಾನು ವಿವರಿಸಿದ ವಿಧಾನಗಳನ್ನೇ ನಾವು ಅನ್ವಯಿಸಬೇಕಾಗಿದೆ. ನಾವು ನಮ್ಮ ಮನೋಭಾವವನ್ನು ಬದಲಾಯಿಸಬೇಕು. ನಾವು ತಾಳ್ಮೆಯನ್ನು ಬೆಳೆಸಿಕೊಳ್ಳಬೇಕು.
ವಿವಿಧ ರೀತಿಯ ತಾಳ್ಮೆ
ಗುರಿ ಪ್ರಕಾರದ ತಾಳ್ಮೆ
ಹಲವಾರು ರೀತಿಯ ತಾಳ್ಮೆಗಳಿವೆ. ಮೊದಲನೆಯದು ಗುರಿ ಪ್ರಕಾರದ ತಾಳ್ಮೆ. ನೀವು ಗುರಿಯನ್ನು ಹೊಂದಿಸದಿದ್ದರೆ, ಯಾರೂ ಅದರ ಮೇಲೆ ಗುಂಡು ಹಾರಿಸುವುದಿಲ್ಲ ಎಂಬ ಕಲ್ಪನೆ. ಅಮೆರಿಕಾದಲ್ಲಿ, ಮಕ್ಕಳ ಒಂದು ಚಿಕ್ಕ ಆಟವಿದೆ. ಅವರು ತಮ್ಮ ಸ್ನೇಹಿತನ ಪ್ಯಾಂಟ್ನ ಸೀಟಿನ ಮೇಲೆ ಕಾಗದದ ತುಂಡನ್ನು ಪಿನ್ ಮಾಡುತ್ತಾರೆ ಅಥವಾ ಅಂಟಿಸುತ್ತಾರೆ. ಕಾಗದದ ಮೇಲೆ ಅವರು "ನನ್ನನ್ನು ಒದೆಯಿರಿ" ಎಂದು ಬರೆಯುತ್ತಾರೆ ಮತ್ತು ಇದನ್ನು "ನನ್ನನ್ನು ಒದೆಯಿರಿ" ಚಿಹ್ನೆ ಎಂದು ಕರೆಯಲಾಗುತ್ತದೆ. ನಂತರ ಈ ಚಿಕ್ಕ ಮಗುವಿನ ಹಿಂಭಾಗದಲ್ಲಿ ಈ "ನನ್ನನ್ನು ಒದೆಯಿರಿ" ಚಿಹ್ನೆಯನ್ನು ಯಾರು ನೋಡುತ್ತಾರೋ ಅವರು ಮಗುವನ್ನು ಒದೆಯುತ್ತಾರೆ. ಅದೇ ರೀತಿ, ಈ ರೀತಿಯ ತಾಳ್ಮೆಯಿಂದ, ನಾವು ಹಿಂದೆ ನಮ್ಮ ಸ್ವಂತ ನಕಾರಾತ್ಮಕ ಮತ್ತು ವಿನಾಶಕಾರಿ ಕ್ರಿಯೆಗಳ ಮೂಲಕ ಅಂತಹ "ನನ್ನನ್ನು ಒದೆಯಿರಿ" ಚಿಹ್ನೆಯನ್ನು ನಮ್ಮ ಸ್ವಂತ ಬೆನ್ನಿನ ಮೇಲೆ ಹೇಗೆ ಜೋಡಿಸಿದ್ದೆವು ಮತ್ತು ಇದು ಈಗ ನಮಗೆ ಎಲ್ಲಾ ರೀತಿಯ ಸಮಸ್ಯೆಗಳಿಗೆ ಕಾರಣವಾಗಿದೆ ಎಂಬುದನ್ನು ಯೋಚಿಸುತ್ತೇವೆ.
ಉದಾಹರಣೆಗೆ, ನಾವು ಬೀದಿಯಲ್ಲಿ ದರೋಡೆಗೆ ಒಳಗಾಗಿದ್ದೇವೆ ಎಂದು ಭಾವಿಸೋಣ. ನಾವು ಹೀಗೆ ಯೋಚಿಸುತ್ತೇವೆ, “ಹಿಂದಿನ ಜನ್ಮಗಳಲ್ಲಿ ನಾನು ನಕಾರಾತ್ಮಕವಾಗಿ ಮತ್ತು ವಿನಾಶಕಾರಿಯಾಗಿ ವರ್ತಿಸುವ ಮೂಲಕ ಗುರಿಯನ್ನು ಹೊಂದಿಸದಿದ್ದರೆ, ಆ ಕತ್ತಲೆಯ ಬೀದಿಯಲ್ಲಿ ಒಬ್ಬ ಕಳ್ಳ ನನ್ನನ್ನು ದೋಚಲು ಮತ್ತು ಹೊಡೆಯಲು ಕಾಯುತ್ತಿದ್ದ ಸಮಯದಲ್ಲಿ, ಅಲ್ಲಿಗೆ ಹೋಗುವಂತೆ ನನ್ನ ಮನಸ್ಸಿನಲ್ಲಿ ಪ್ರಚೋದನೆ ಉದ್ಭವಿಸುತ್ತಿರಲಿಲ್ಲ. ಸಾಮಾನ್ಯವಾಗಿ ನಾನು ಅಲ್ಲಿಗೆ ಹೋಗುತ್ತಿರಲಿಲ್ಲ, ಆದರೆ ಆ ರಾತ್ರಿ ನಾನು ಆ ಕತ್ತಲೆಯ ಬೀದಿಯಲ್ಲಿ ಹೋಗಬೇಕೆಂದು ಅನಿಸಿತು. ಸಾಮಾನ್ಯವಾಗಿ ನಾನು ಮುಂಚಿತವಾಗಿ ಮನೆಗೆ ಹೋಗುತ್ತಿದ್ದೆ, ಆದರೆ ಆ ರಾತ್ರಿ ನನ್ನ ಸ್ನೇಹಿತರೊಂದಿಗೆ ಸ್ವಲ್ಪ ಹೊತ್ತು ಇರುವ ಪ್ರಚೋದನೆ ಬಂದಿತು. ಇದಲ್ಲದೆ, ಯಾರಾದರೂ ಬರಲು ಕಾಯುತ್ತಿದ್ದ ದರೋಡೆಕೋರನೊಬ್ಬ ಇದ್ದ ಸಮಯದಲ್ಲೇ ನಾನು ಆ ಬೀದಿಗೆ ಹೋಗಿದ್ದೆ. ಆ ಪ್ರಚೋದನೆ ನನ್ನ ತಲೆಗೆ ಏಕೆ ಬಂದಿತು? ಹಿಂದೆ ನಾನು ಈ ವ್ಯಕ್ತಿಗೆ ನೋವುಂಟುಮಾಡುವ ಏನನ್ನಾದರೂ ಮಾಡಿರಬೇಕು ಮತ್ತು ಅದು ಈಗ ಕಾರಣ ಮತ್ತು ಪರಿಣಾಮದ ದೃಷ್ಟಿಯಿಂದ ಪಕ್ವವಾಗುತ್ತಿದೆ.”
ಪ್ರಚೋದನೆಗಳು ಕರ್ಮದ ಅಭಿವ್ಯಕ್ತಿಯಾಗಿ ನಮ್ಮ ಮನಸ್ಸಿಗೆ ಬರುತ್ತವೆ. ಆದ್ದರಿಂದ ನಾವು ಹೀಗೆ ಯೋಚಿಸಬಹುದು: “ನನ್ನ ಹಿಂದಿನ ನಕಾರಾತ್ಮಕ ಕರ್ಮವನ್ನು ನಾನು ಖಾಲಿ ಮಾಡುತ್ತಿದ್ದೇನೆ. ನಾನು ಬಹಳಾ ಸುಲಭವಾಗಿ ಹೊರಬರುತ್ತಿದ್ದೇನೆ ಎಂದು ನಾನು ತುಂಬಾ ಸಂತೋಷಪಡಬೇಕು, ಏಕೆಂದರೆ ಇದು ಇನ್ನೂ ಕೆಟ್ಟದಾಗಿರಬಹುದು. ಈ ವ್ಯಕ್ತಿ ನನ್ನನ್ನು ಕೇವಲ ದೋಚಿದ್ದಾನೆ, ಆದರೆ ಅವನು ನನಗೆ ಗುಂಡು ಹಾರಿಸಬಹುದಿತ್ತು. ಆದ್ದರಿಂದ, ಈ ನಕಾರಾತ್ಮಕತೆಯು ಬಹಳಾ ಸುಲಭವಾಗಿ ಈಗ ಹಣ್ಣಾಗಿದೆ ಮತ್ತು ನಾನು ಅದನ್ನು ಮುಗಿಸಿದ್ದೇನೆ ಎಂದು ನನಗೆ ತುಂಬಾ ನಿರಾಳವಾಗಬೇಕು. ಇದು ಅಷ್ಟು ಕೆಟ್ಟದ್ದಾಗಿರಲಿಲ್ಲ ಮತ್ತು ಇದನ್ನು ನಿವಾರಿಸುವುದು ಒಳ್ಳೆಯದು, ಅದನ್ನು ನನ್ನ ಬೆನ್ನ ಮೇಲಿಂದ ತೆಗೆಯುವುದು ಒಳ್ಳೆಯದು. ನನಗೆ ಇನ್ನು ಮುಂದೆ ಈ ಕರ್ಮದ ಸಾಲವಿಲ್ಲ.”
ಈ ರೀತಿಯ ಆಲೋಚನೆ ಬಹಳಾ ಸಹಾಯಕವಾಗಿದೆ. ಒಮ್ಮೆ ನಾನು ವಾರಾಂತ್ಯದ ರಜೆಯಲ್ಲಿ ಸ್ನೇಹಿತನೊಂದಿಗೆ ಬೀಚ್ಗೆ ಹೋಗಿದ್ದ ನೆನಪಿದೆ. ನಾವು ಹಲವು ಗಂಟೆಗಳ ಕಾಲ ಕಾರು ಚಲಾಯಿಸುತ್ತಿದ್ದೆವು. ಇದು ನಗರದಿಂದ ಒಂದು ಲಾಂಗ್ ಡ್ರೈವ್ ಆಗಿತ್ತು. ನಾವು ಸುಮಾರು ಒಂದೂವರೆ ಗಂಟೆಗಳ ಕಾಲ ಚಾಲನೆ ಮಾಡಿದ ನಂತರ, ಕಾರಿನಿಂದ ತಮಾಷೆಯ ಶಬ್ದ ಕೇಳಿಸಿತು. ನಾವು ರಸ್ತೆಬದಿಯಲ್ಲಿರುವ ನಿಲ್ದಾಣದಲ್ಲಿ, ಮೆಕ್ಯಾನಿಕ್ ಬಳಿಗೆ ಹೋದೆವು. ಮೆಕ್ಯಾನಿಕ್ ಕಾರನ್ನು ನೋಡಿ ಆಕ್ಸಲ್ನಲ್ಲಿ ಬಿರುಕು ಇದೆ ಮತ್ತು ನಾವು ಮುಂದುವರಿಯಲು ಸಾಧ್ಯವಿಲ್ಲ ಎಂದು ಹೇಳಿದರು; ನಮ್ಮನ್ನು ದೊಡ್ಡ ನಗರಕ್ಕೆ ಹಿಂತಿರುಗಿಸಲು ನಾವು ಟೋ ಟ್ರಕ್ ಅನ್ನು ತೆಗೆದುಕೊಳ್ಳಬೇಕಾಯಿತು. ವಾರಾಂತ್ಯದ ವಿಶ್ರಾಂತಿಗಾಗಿ ಈ ಸುಂದರವಾದ ಬೀಚ್ ರೆಸಾರ್ಟ್ಗೆ ಹೋಗಬೇಕಾಗಿದ್ದ ನಾನು ಮತ್ತು ನನ್ನ ಸ್ನೇಹಿತ ತುಂಬಾ ಕೋಪಗೊಂಡು ಅಸಮಾಧಾನಗೊಳ್ಳಬಹುದಿತ್ತು. ಆದರೆ ನಾವು ಅದನ್ನು ಸಂಪೂರ್ಣವಾಗಿ ವಿಭಿನ್ನವಾಗಿ ನೋಡಿದೆವು: “ವಾವ್, ಇದು ಅದ್ಭುತವಾಗಿದೆ! ಇದು ಎಷ್ಟು ಅದ್ಭುತವಾಗಿದೆ, ಏಕೆಂದರೆ ನಾವು ಮುಂದುವರಿದಿದ್ದರೆ, ನಾವು ಚಾಲನೆ ಮಾಡುವಾಗ ಆಕ್ಸಲ್ ಮುರಿದುಹೋಗಬಹುದಿತ್ತು. ನಮಗೆ ಭೀಕರ ಅಪಘಾತ ಸಂಭವಿಸಿ ಇಬ್ಬರೂ ಸಾಯಬಹುದಿತ್ತು. ಆದ್ದರಿಂದ ಅದು ಈ ರೀತಿ ಹಣ್ಣಾಗಿರುವುದು ಎಷ್ಟು ಅದ್ಭುತವಾಗಿದೆ. ನಾವು ಬಹಳಾ ಸುಲಭವಾಗಿ ತಪ್ಪಿಸಿಕೊಂಡೆವು.” ಆದ್ದರಿಂದ, ನಮ್ಮ ಮನಸ್ಸಿನಿಂದ ನಿರಾಳವಾಗಿ, ನಾವು ಟೋ ಟ್ರಕ್ನೊಂದಿಗೆ ನಗರಕ್ಕೆ ಹಿಂತಿರುಗಿದೆವು ಮತ್ತು ಅಲ್ಲಿಗೆ ಹೋದ ನಂತರ, ನಾವು ಇನ್ನೊಂದು ಕಾರನ್ನು ಎರವಲು ಪಡೆದು ಬೇರೊಂದು ಪ್ಲಾನ್ ಮಾಡಿದೆವು.
ನಾವು ಆ ರೀತಿಯ ಪರಿಸ್ಥಿತಿಯನ್ನು ಅನುಭವಿಸಲು ಹಲವು ಮಾರ್ಗಗಳಿವೆ ಎಂದು ನೀವು ನೋಡಬಹುದು. ಕೋಪಗೊಂಡು ಅಸಮಾಧಾನಗೊಳ್ಳುವುದು ಯಾವುದೇ ಸಹಾಯ ಮಾಡುತ್ತಿರಲಿಲ್ಲ. ನಾವು ಅದನ್ನು ಈ ಪರಿಭಾಷೆಯಲ್ಲಿ ನೋಡಬಹುದಾದರೆ: “ಇದು ನನ್ನ ಹಿಂದಿನ ನಕಾರಾತ್ಮಕ ಕರ್ಮವನ್ನು ಖಾಲಿ ಮಾಡುತ್ತಿದೆ. ಈ ಕರ್ಮದ ಸಾಲ ಈಗ ಹಣ್ಣಾಗಿದೆ. ಅದ್ಭುತ, ಇದು ಮುಗಿದಿದೆ. ಇದು ಇನ್ನೂ ಹದಗೆಟ್ಟಬಹುದಿತ್ತು,” ಇದು ಅದನ್ನು ನಿರ್ವಹಿಸುವ ಹೆಚ್ಚು ಬುದ್ಧಿವಂತವಾದ ಮಾರ್ಗವಾಗಿದೆ.
ಪ್ರೀತಿ ಮತ್ತು ಕರುಣೆ ತಾಳ್ಮೆಯ ಒಂದು ಪ್ರಕಾರ
"ಪ್ರೀತಿ ಮತ್ತು ಕರುಣೆ ತಾಳ್ಮೆ" ಎಂಬ ತಾಳ್ಮೆಯೂ ಇದೆ. ಈ ತಾಳ್ಮೆಯಿಂದ, ನಮ್ಮ ಮೇಲೆ ಕೋಪಗೊಳ್ಳುವ ಅಥವಾ ನಮ್ಮ ಮೇಲೆ ಕೂಗುವ ಮತ್ತು ಕಿರುಚುವ ಯಾರನ್ನಾದರೂ ನಾವು ಹುಚ್ಚ ವ್ಯಕ್ತಿ, ಮಾನಸಿಕವಾಗಿ ತೊಂದರೆಗೊಳಗಾದ ವ್ಯಕ್ತಿ ಎಂದು ಪರಿಗಣಿಸುತ್ತೇವೆ. ಈ ರೀತಿಯ ತಾಳ್ಮೆಯನ್ನು, ಇತರರ ಮುಂದೆ ನಮ್ಮನ್ನು ಮುಜುಗರಕ್ಕೀಡುಮಾಡುವ ಅಥವಾ ಟೀಕಿಸಿ ಅವಮಾನಿಸುವವರ ಮೇಲೆ ನಾವು ಕೋಪಗೊಳ್ಳುವಂತಹವರ ಮೇಲೆಯೂ ಅನ್ವಯಿಸಬಹುದು. ಉದಾಹರಣೆಗೆ, ಒಂದು ಗಿಳಿ ಇತರರ ಮುಂದೆ ನಮ್ಮನ್ನು ಟೀಕಿಸಿದರೆ, ಅದು ನಮ್ಮನ್ನು ಅವಮಾನಿಸುವುದಿಲ್ಲವೇ? ಹಕ್ಕಿಯ ಮೇಲೆ ಕೋಪಗೊಳ್ಳಲು ಯಾವುದೇ ಕಾರಣವಿಲ್ಲ. ಅದು ಮೂರ್ಖತನದ ಪ್ರತಿಕ್ರಿಯೆಯಾಗಿರುತ್ತದೆ. ಅದೇ ರೀತಿ, ಒಬ್ಬ ಹುಚ್ಚ ವ್ಯಕ್ತಿಯು ನಮ್ಮ ಮೇಲೆ ಕಿರುಚಲು ಮತ್ತು ಅರಚಲು ಪ್ರಾರಂಭಿಸಿದರೆ, ನಾವು ಅದರಿಂದ ನಿಜವಾಗಿಯೂ ಮುಖ ಕಳೆದುಕೊಳ್ಳುವುದಿಲ್ಲ. ಮಕ್ಕಳು ಸಾಂದರ್ಭಿಕವಾಗಿ ಕೋಪಗೊಳ್ಳುತ್ತಾರೆ ಎಂದು ಎಲ್ಲರಿಗೂ ತಿಳಿದಿದೆ. ರೋಗಿಯು ಕೋಪಗೊಂಡಾಗ ಮನೋವೈದ್ಯರು ರೋಗಿಯ ಮೇಲೆ ಕೋಪಗೊಳ್ಳುವುದಿಲ್ಲ, ಬದಲಿಗೆ ರೋಗಿಯ ಬಗ್ಗೆ ಕರುಣೆಯನ್ನು ಅನುಭವಿಸುತ್ತಾರೆ.
ಅದೇ ರೀತಿ, ನಮ್ಮನ್ನು ಅಸಮಾಧಾನಗೊಳಿಸುವ, ನಮ್ಮ ಮೇಲೆ ಕೋಪಗೊಳ್ಳುವ ಅಥವಾ ಮುಜುಗರಕ್ಕೀಡು ಮಾಡುವ ಯಾರೇ ಆಗಿರಲಿ, ಅವರ ಬಗ್ಗೆ ನಾವು ಸಹಾನುಭೂತಿಯನ್ನು ಅನುಭವಿಸಲು ಪ್ರಯತ್ನಿಸಬೇಕು. ವಾಸ್ತವದಲ್ಲಿ, ಅವಮಾನಗೊಳಗಾಗುವರು ಅವರು ಎಂಬುದನ್ನು ನಾವು ಅರಿತುಕೊಳ್ಳಬೇಕು. ನಾವು ಮುಖ ಕಳೆದುಕೊಳ್ಳುವವರಲ್ಲ. ಈ ವ್ಯಕ್ತಿ ತನ್ನನ್ನು ತಾನು ಸಂಪೂರ್ಣ ಮೂರ್ಖನನ್ನಾಗಿ ಮಾಡಿಕೊಳ್ಳುತ್ತಿದ್ದಾನೆ ಎಂದು ಎಲ್ಲರೂ ನೋಡುತ್ತಾರೆ. ಹಾಗಾದರೆ, ಕೋಪದ ಬದಲು ಆ ವ್ಯಕ್ತಿಯ ಬಗ್ಗೆ ನಮಗೆ ಸಹಾನುಭೂತಿ ಇರಬೇಕು.
ಯಾರಾದರೂ ನಮ್ಮನ್ನು ಹೊಡೆಯಲು ಪ್ರಯತ್ನಿಸುತ್ತಿದ್ದರೆ, ನಾವು ಅವನನ್ನು ತಡೆಯಲು ಪ್ರಯತ್ನಿಸುವುದಿಲ್ಲ ಎಂಬುದು ಇದರ ಅರ್ಥವಲ್ಲ. ನಮ್ಮ ಮಗು ಕಿರುಚುತ್ತಿದ್ದರೆ, ನಾವು ಅವನನ್ನು ಅಥವಾ ಅವಳನ್ನು ಶಾಂತಗೊಳಿಸಲು ಪ್ರಯತ್ನಿಸುತ್ತೇವೆ. ಅವನು ನಮಗೆ ಅಥವಾ ಇತರರಿಗೆ ಹಾನಿ ಮಾಡುವುದನ್ನು ಮತ್ತು ತನಗೆ ಹಾನಿ ಮಾಡಿಕೊಳ್ಳುವುದನ್ನು ತಡೆಯಲು ನಾವು ಬಯಸುತ್ತೇವೆ. ಮುಖ್ಯ ವಿಷಯವೆಂದರೆ ಇದನ್ನು ಕೋಪದಿಂದ ಮಾಡುವುದಿಲ್ಲ. ನಮ್ಮ ಮಗು ತುಂಟತನದಿಂದ ವರ್ತಿಸುತ್ತಿದ್ದರೆ, ನಾವು ಅವನನ್ನು ಅಥವಾ ಅವಳನ್ನು ಕೋಪದಿಂದ ಅಲ್ಲ, ಬದಲಿಗೆ ಮಗುವಿನ ಸಲುವಾಗಿ ಶಿಸ್ತುಬದ್ಧಗೊಳಿಸುತ್ತೇವೆ. ಮಗುವು ಮುಖ ಕಳೆದುಕೊಳ್ಳದಂತೆ ನಾವು ಸಹಾಯ ಮಾಡಲು ಬಯಸುತ್ತೇವೆ ಮತ್ತು ಜನರು ನಮ್ಮ ಮಗುವಿನ ಬಗ್ಗೆ ಕೆಟ್ಟದಾಗಿ ಯೋಚಿಸಬಾರದು ಎಂದು ನಾವು ಬಯಸುತ್ತೇವೆ. ಕೋಪದಿಂದ ಅಲ್ಲ, ಕಾಳಜಿಯಿಂದ ನಾವು ಮಗುವನ್ನು ಶಿಸ್ತುಬದ್ಧಗೊಳಿಸಲು ಬಯಸುತ್ತೇವೆ.
ಗುರು-ಶಿಷ್ಯ ರೀತಿಯ ಪ್ರಕಾರ
ನಂತರ "ಗುರು-ಶಿಷ್ಯ ಪ್ರಕಾರದ ತಾಳ್ಮೆ" ಇದೆ. ಗುರುವಿಲ್ಲದೆ ಶಿಷ್ಯ ಕಲಿಯಲು ಸಾಧ್ಯವಿಲ್ಲ, ಮತ್ತು ಯಾರೂ ನಮ್ಮನ್ನು ಪರೀಕ್ಷಿಸದಿದ್ದರೆ, ನಾವು ತಾಳ್ಮೆಯನ್ನು ಬೆಳೆಸಿಕೊಳ್ಳಲು ಸಾಧ್ಯವಿಲ್ಲ ಎಂಬ ಅಂಶವನ್ನು ಇದು ಆಧರಿಸಿದೆ. ಹತ್ತನೇ ಶತಮಾನದಲ್ಲಿ, ಬೌದ್ಧಧರ್ಮವನ್ನು ಪುನರುಜ್ಜೀವನಗೊಳಿಸಲು ಸಹಾಯ ಮಾಡಲು ಮಹಾನ್ ಭಾರತೀಯ ಗುರು ಅತಿಶಾ ಅವರನ್ನು ಟಿಬೆಟ್ಗೆ ಆಹ್ವಾನಿಸಲಾಯಿತು. ಈ ಭಾರತೀಯ ಗುರು ತಮ್ಮೊಂದಿಗೆ ಒಬ್ಬ ಭಾರತೀಯ ಅಡುಗೆ ಭಟ್ಟನನ್ನು ಕರೆತಂದರು. ಭಾರತೀಯ ಅಡುಗೆ ಭಟ್ಟ ಸರಿಯಾಗಿ ಅಥವಾ ಗೌರವಯುತವಾಗಿ ಏನನ್ನೂ ಮಾಡುತ್ತಿರಲಿಲ್ಲ; ಅವನು ಸಂಪೂರ್ಣವಾಗಿ ಅಸಹ್ಯಕರ ಮತ್ತು ಬಹಳಾ ಅಹಿತಕರನಾಗಿದ್ದನು. ಟಿಬೆಟಿಯನ್ ಜನರು ಅತಿಶನನ್ನು ಬಹಳಾ ಗೌರವಿಸುತ್ತಿದ್ದರು ಮತ್ತು ಆದ್ದರಿಂದ ಅವರನ್ನು ಕೇಳಿದರು: “ಗುರುಗಳೇ, ನೀವು ಈ ಅಸಹ್ಯಕರ ಅಡುಗೆಯವರನ್ನು ಭಾರತದಿಂದ ನಿಮ್ಮೊಂದಿಗೆ ಏಕೆ ಕರೆ ತಂದಿದ್ದೀರಿ? ನೀವು ಅವನನ್ನು ಏಕೆ ಹಿಂತಿರುಗಿಸಬಾರದು? ನಾವು ನಿಮಗಾಗಿ ಅಡುಗೆ ಮಾಡಬಹುದು; ನಾವು ತುಂಬಾ ಚೆನ್ನಾಗಿ ಅಡುಗೆ ಮಾಡಬಹುದು.” ಅತಿಶಾ ಹೀಗೆ ಉತ್ತರಿಸಿದರು: “ಓಹ್, ಅವನು ನನ್ನ ಅಡುಗೆಯವನಷ್ಟೇ ಅಲ್ಲ. ಅವನು ನನ್ನ ತಾಳ್ಮೆಯ ಶಿಕ್ಷಕನಾಗಿರುವುದರಿಂದ ನಾನು ಅವನನ್ನು ಕರೆದುಕೊಂಡು ಬಂದಿದ್ದೇನೆ!”
ಅದೇ ರೀತಿ, ನಮ್ಮ ಕಚೇರಿಯಲ್ಲಿ ಯಾರಾದರೂ ಅಸಹ್ಯಕರವಾಗಿದ್ದರೆ, ಯಾವಾಗಲೂ ನಮಗೆ ಕಿರಿಕಿರಿ ಉಂಟುಮಾಡುವ ವಿಷಯಗಳನ್ನು ಹೇಳುತ್ತಿದ್ದರೆ, ನಾವು ಈ ವ್ಯಕ್ತಿಯನ್ನು ನಮ್ಮ ತಾಳ್ಮೆಯ ಶಿಕ್ಷಕ ಎಂದು ನೋಡಬಹುದು. ಯಾವಾಗಲೂ ಬೆರಳುಗಳನ್ನು ಬಾರಿಸುವಂತಹ ತುಂಬಾ ಕಿರಿಕಿರಿಗೊಳಿಸುವ ಅಭ್ಯಾಸಗಳನ್ನು ಕೆಲವರು ಹೊಂದಿರುತ್ತಾರೆ. ಯಾರೂ ನಮ್ಮನ್ನು ಪರೀಕ್ಷಿಸದಿದ್ದರೆ, ನಾವು ನಮ್ಮನ್ನು ಹೇಗೆ ಬೆಳೆಸಿಕೊಳ್ಳಲು ಸಾಧ್ಯ? ವಿಮಾನ ನಿಲ್ದಾಣ ಅಥವಾ ಬಸ್ ನಿಲ್ದಾಣದಲ್ಲಿ ದೀರ್ಘ ವಿಳಂಬದಂತಹ ಕಠಿಣ ಸಂದರ್ಭಗಳನ್ನು ನಾವು ಎದುರಿಸಿದರೆ, ತಾಳ್ಮೆಯನ್ನು ಅಭ್ಯಾಸ ಮಾಡಲು ಇದನ್ನು ಒಂದು ಸುವರ್ಣ ಅವಕಾಶವಾಗಿ ಬಳಸಬಹುದು: "ಆಹ್! ನಾನು ನಿಭಾಯಿಸಲು ತರಬೇತಿ ಪಡೆಯುತ್ತಿದ್ದೇನೆ. ನಾನು ತಾಳ್ಮೆಯನ್ನು ಬೆಳೆಸಲು ತರಬೇತಿ ಪಡೆಯುತ್ತಿದ್ದೇನೆ ಮತ್ತು ಈಗ ನಾನು ಅದನ್ನು ನಿಜವಾಗಿಯೂ ಮಾಡಬಹುದೇ ಎಂದು ನೋಡಲು ಒಂದು ಅವಕಾಶವಿದೆ." ಅಥವಾ ಕಚೇರಿಯಿಂದ ಕೆಲವು ಮುಖ್ಯವಾದ ಕಾಗದಪತ್ರಗಳನ್ನು ಪಡೆಯುವಲ್ಲಿ ನಮಗೆ ತೊಂದರೆಗಳಿದ್ದರೆ, ನಾವು ಇದನ್ನು ನಮ್ಮ ಸವಾಲಾಗಿ ಸ್ವೀಕರಿಸಬಹುದು. "ಇದು ನಾನು ಸ್ವಲ್ಪ ಸಮಯದಿಂದ ಸಮರ ಕಲೆಗಳಲ್ಲಿ ತರಬೇತಿ ಪಡೆಯುತ್ತಿದ್ದು, ಅಂತಿಮವಾಗಿ ನನ್ನ ಕೌಶಲ್ಯಗಳನ್ನು ಬಳಸಲು ಅವಕಾಶ ಸಿಕ್ಕಂತೆ ಇದೆ. ನನಗೆ ಸಂತೋಷವಾಗಿದೆ." ಅದೇ ರೀತಿ, ನಾವು ತಾಳ್ಮೆ ಮತ್ತು ಸಹಿಷ್ಣುತೆಯಿಂದಿರಲು ನಮ್ಮನ್ನು ತರಬೇತಿ ಮಾಡಿಕೊಳ್ಳುತ್ತಿದ್ದರೆ, ಈ ರೀತಿಯ ಅಸಹ್ಯಕರ ಪರಿಸ್ಥಿತಿಯನ್ನು ಎದುರಿಸಿದಾಗ, ನಾವು ಅದನ್ನು ಬಹಳ ಸಂತೋಷದಿಂದ ನೋಡುತ್ತೇವೆ: "ಆಹ್! ಇಲ್ಲಿ ಒಂದು ಸವಾಲು ಇದೆ. ನಾನು ಅದನ್ನು ನಿಭಾಯಿಸಬಹುದೇ ಮತ್ತು ಕೋಪಗೊಳ್ಳದೆ, ಒಳಗೊಳಗೂ ಕೆಟ್ಟದಾಗಿ ಭಾವಿಸದಿರಲು ಸಾದ್ಯವೇ ಎಂದು ನೋಡೋಣ."
ನಮ್ಮ ತಾಳ್ಮೆಯನ್ನು ಕಳೆದುಕೊಳ್ಳದಿರುವುದು ಸಮರ ಕಲೆಗಳಲ್ಲಿನ ಮುಖಾಮುಖಿಗಿಂತ ಹೆಚ್ಚಿನ ಸವಾಲೊಡ್ಡುತ್ತವೆ. ಏಕೆಂದರೆ ನಾವು ನಮ್ಮ ಮನಸ್ಸು, ನಮ್ಮ ಭಾವನೆಗಳೊಂದಿಗೆ ಸವಾಲನ್ನು ಎದುರಿಸಬೇಕು, ನಮ್ಮ ದೇಹ ಮತ್ತು ದೈಹಿಕ ನಿಯಂತ್ರಣದಿಂದ ಮಾತ್ರವಲ್ಲ. ಇತರರು ನಮ್ಮನ್ನು ಟೀಕಿಸಿದರೆ, ಅದರ ಬಗ್ಗೆ ಕೋಪಗೊಳ್ಳುವ ಬದಲು, ಆ ಟೀಕೆಯನ್ನು ನಮ್ಮ ಅಭಿವೃದ್ಧಿಯ ಮಟ್ಟದಲ್ಲಿ ನಾವು ಎಲ್ಲಿದ್ದೇವೆ ಎಂದು ನೋಡಲು ಒಂದು ಅವಕಾಶವಾಗಿ ನೋಡಬೇಕು. "ನನ್ನನ್ನು ಟೀಕಿಸುತ್ತಿರುವ ಈ ವ್ಯಕ್ತಿಯು ನನ್ನ ಬಗ್ಗೆ ತೋರಿಸುತ್ತಿರುವ ಕೆಲವು ವಿಷಯಗಳಿಂದ ನಾನು ಕಲಿಯಬಹುದು." ಈ ಅರ್ಥದಲ್ಲಿ, ನಾವು ಟೀಕೆಗಳನ್ನು ಸಹಿಸಿಕೊಳ್ಳಲು ಪ್ರಯತ್ನಿಸಬೇಕು ಮತ್ತು ನಮ್ಮ ಮನೋಭಾವವನ್ನು ಬದಲಾಯಿಸುವ ಮೂಲಕ ಅದನ್ನು ಹೇಗೆ ನಿಭಾಯಿಸಬೇಕೆಂದು ಕಲಿಯಬೇಕು. ನಾವು ತುಂಬಾ ಅಸಮಾಧಾನಗೊಂಡರೆ, ಅದು ಕೆಲವು ಹುಚ್ಚರು ನಮ್ಮನ್ನು ಟೀಕಿಸಿ ಕೂಗುವುದಕ್ಕಿಂತ ಹೆಚ್ಚಿನ ಮುಖಭಂಗವಾಗುವಂತೆ ಮಾಡಬಹುದು.
ವಸ್ತುಗಳ ಸ್ವರೂಪದೊಂದಿಗೆ ತಾಳ್ಮೆ
ಕೋಪವನ್ನು ನಿಭಾಯಿಸುವ ಮತ್ತು ತಾಳ್ಮೆಯನ್ನು ಬೆಳೆಸುವ ಇನ್ನೊಂದು ಮಾರ್ಗವೆಂದರೆ "ವಸ್ತುಗಳ ಸ್ವರೂಪದೊಂದಿಗೆ ತಾಳ್ಮೆ." ಕೆಟ್ಟದಾಗಿ ಮತ್ತು ಅಸಭ್ಯವಾಗಿ ವರ್ತಿಸುವುದು ಬಾಲಿಶ ಜನರ ಸ್ವಭಾವ. ಬೆಂಕಿ ಇದ್ದರೆ, ಅದರ ಸ್ವಭಾವವು ಬಿಸಿಯಾಗಿರುವುದು ಮತ್ತು ಸುಡುವುದು. ನಾವು ಈ ಬೆಂಕಿಯಲ್ಲಿ ನಮ್ಮ ಕೈಯನ್ನು ಹಾಕಿ ಸುಟ್ಟುಕೊಂಡರೆ, ನಾವು ಏನನ್ನು ನಿರೀಕ್ಷಿಸಲು ಸಾಧ್ಯ? ಬೆಂಕಿ ಬಿಸಿಯಾಗಿರುತ್ತದೆ; ಅದಕ್ಕಾಗಿಯೇ ಬೆಂಕಿ ಉರಿಯುತ್ತದೆ. ಊಟದ ಸಮಯದಲ್ಲಿ ನಾವು ಪಟ್ಟಣದಾದ್ಯಂತ ವಾಹನ ಚಲಾಯಿಸಿದರೆ, ನಾವು ಏನನ್ನು ನಿರೀಕ್ಷಿಸುತ್ತೇವೆ? ಇದು ಊಟದ ಸಮಯ ಮತ್ತು ಭಾರೀ ಟ್ರಾಫಿಕ್ ಇರುತ್ತದೆ – ವಸ್ತುಗಳ ಸ್ವಭಾವ ಹೀಗಿದೆ. ನಾವು ಒಂದು ಚಿಕ್ಕ ಮಗುವನ್ನು ಟ್ರೇ ಅಥವಾ ಒಂದು ಕಪ್ ಬಿಸಿ ಚಹಾವನ್ನು ತೆಗೆದುಕೊಂಡು ಹೋಗಲು ಕೇಳಿದಾಗ ಅವನು ಅದನ್ನು ಚೆಲ್ಲಿದರೆ, ನಾವು ಏನನ್ನು ನಿರೀಕ್ಷಿಸಲಾಗುತ್ತದೆ? ಅದೊಂದು ಮಗು ಮತ್ತು ಮಗು ಏನನ್ನೂ ಚೆಲ್ಲಬಾರದು ಎಂದು ನಾವು ನಿರೀಕ್ಷಿಸಲು ಸಾಧ್ಯವಿಲ್ಲ. ಅದೇ ರೀತಿ, ನಾವು ಇತರ ಜನರನ್ನು ನಮಗೆ ಉಪಕಾರ ಮಾಡಲು ಅಥವಾ ನಮ್ಮ ವ್ಯವಹಾರಕ್ಕಾಗಿ ಏನನ್ನಾದರೂ ಮಾಡಲು ಕೇಳಿದರೆ, ನಾವು ಒಪ್ಪಂದ ಮಾಡಿಕೊಳ್ಳುತ್ತೇವೆ, ಮತ್ತು ನಂತರ ಅವರು ನಮ್ಮನ್ನು ನಿರಾಸೆಗೊಳಿಸುತ್ತಾರೆ, ಆಗ ನಾವು ಏನು ನಿರೀಕ್ಷಿಸುತ್ತಿದ್ದೆವು? ಜನರು ಬಾಲಿಶರು; ನಾವು ಇತರರನ್ನು ನಂಬಲು ಸಾಧ್ಯವಿಲ್ಲ. ಮಹಾನ್ ಭಾರತೀಯ ಗುರು ಶಾಂತಿದೇವ ಹೇಳಿದರು: “ನೀವು ಸಕಾರಾತ್ಮಕ ಮತ್ತು ರಚನಾತ್ಮಕವಾದದ್ದನ್ನು ಮಾಡಲು ಬಯಸಿದರೆ, ಅದನ್ನು ನೀವೇ ಮಾಡಿ. ಬೇರೆಯವರನ್ನು ಅವಲಂಬಿಸಬೇಡಿ. ಏಕೆಂದರೆ ನೀವು ಬೇರೆಯವರನ್ನು ಅವಲಂಬಿಸಿದರೆ, ಅವನು ಅಥವಾ ಅವಳು ನಿಮ್ಮನ್ನು ನಿರಾಶೆಗೊಳಿಸುವುದಿಲ್ಲ ಎಂಬುದರಲ್ಲಿ ಖಚಿತತೆಯಿಲ್ಲ.” ಅಂತಹ ಸಂದರ್ಭಗಳನ್ನು ನಾವು ಈ ರೀತಿ ನೋಡಬಹುದು: “ಸರಿ, ನಾನು ಏನು ನಿರೀಕ್ಷಿಸಿದ್ದೆ? ಇತರರನ್ನು ನಿರಾಸೆಗೊಳಿಸುವುದು ಜನರ ಸ್ವಭಾವವಾಗಿದ್ದರೆ, ನಾನು ಕೋಪಗೊಳ್ಳಲು ಯಾವುದೇ ಕಾರಣವಿಲ್ಲ.”
ವಾಸ್ತವತೆಯ ತಾಳ್ಮೆಯ ಗೋಳ
ಕೋಪದ ವಿರುದ್ಧ ಬಳಸುವ ಕೊನೆಯ ವಿಧಾನವನ್ನು “ವಾಸ್ತವತೆಯ ತಾಳ್ಮೆಯ ಗೋಳ” ಎಂದು ಕರೆಯಲಾಗುತ್ತದೆ, ಅಂದರೆ ವಾಸ್ತವವಾಗಿ ಏನು ನಡೆಯುತ್ತಿದೆ ಎಂಬುದನ್ನು ನೋಡುವುದು. ನಾವು ನಮ್ಮನ್ನು, ಇತರರನ್ನು ಮತ್ತು ವಸ್ತುಗಳನ್ನು ಕೆಲವು ಘನ ಗುರುತನ್ನು ಹೊಂದಿರುವಂತೆ ನಾಮಕರಣ ಮಾಡುತ್ತೇವೆ. ಇದು ನಮ್ಮ ಕಲ್ಪನೆಯಲ್ಲಿ ನಮ್ಮ ಯಾವುದೋ ಒಂದು ಅಂಶದ ಸುತ್ತಲೂ ಒಂದು ದೊಡ್ಡ ಘನ ರೇಖೆಯನ್ನು ಎಳೆದುಕೊಂಡು, ಆ ಅಂಶದ ಮೇಲೆ ಅದು ನಮ್ಮ ಘನ ಗುರುತು ಎಂದು ಪ್ರಕ್ಷೇಪಿಸುವಂತಿದೆ: "ಇದು ನಾನು; ನಾನು ಯಾವಾಗಲೂ ಹೀಗೇ ಇರಬೇಕು." ಉದಾಹರಣೆಗೆ, "ನಾನು ಜಗತ್ತಿಗೆ ದೇವರು ನೀಡಿದ ಕೊಡುಗೆ," ಅಥವಾ "ನಾನು ಸೋತವನು, ವಿಫಲನು." ಅಥವಾ ನಾವು ಬೇರೆಯವರ ಸುತ್ತಲೂ ಒಂದು ದೊಡ್ಡ ಘನ ರೇಖೆಯನ್ನು ಹಾಕಿ ಹೀಗೆ ಹೇಳುತ್ತೇವೆ: "ಅವನು ಅಸಹ್ಯಕರ. ಅವನು ಒಳ್ಳೆಯವನಲ್ಲ, ಅವನು ತೊಂದರೆ ಕೊಡುವವನು." ಆದರೆ, ಅದು ಈ ವ್ಯಕ್ತಿಯ ನಿಜವಾದ, ಘನ ಗುರುತಾಗಿದ್ದರೆ, ಅವನು ಯಾವಾಗಲೂ ಈ ರೀತಿ ಅಸ್ತಿತ್ವದಲ್ಲಿರಬೇಕಾಗಿತ್ತು. ಅವನು ಚಿಕ್ಕ ಮಗುವಾಗಿದ್ದಾಗಲೂ ಈ ರೀತಿಯಲ್ಲಿ ಅಸ್ತಿತ್ವದಲ್ಲಿರಬೇಕಾಗಿತ್ತು. ಅವನು ಎಲ್ಲರಿಗೂ, ಅವನ ಹೆಂಡತಿಗೆ, ಅವನ ನಾಯಿಗೆ, ಅವನ ಬೆಕ್ಕಿಗೆ ಮತ್ತು ಅವನ ಹೆತ್ತವರಿಗೆ ಸಹ ಅಸಹ್ಯಕರವಾಗಿರಬೇಕು, ಏಕೆಂದರೆ ಅವನು ನಿಜವಾಗಿಯೂ ಅಸಹ್ಯಕರ ವ್ಯಕ್ತಿ.
ಜನರು ತಮ್ಮ ಧೃಡವಾದ, ನಿಜವಾದ ಗುರುತು ಅಥವಾ ಸ್ವಭಾವವನ್ನು ಗುರುತಿಸುವ ದೊಡ್ಡ ಘನ ರೇಖೆಯೊಂದಿಗೆ ಅಸ್ತಿತ್ವದಲ್ಲಿಲ್ಲ ಎಂದು ನಾವು ನೋಡಬಹುದಾದರೆ, ಅದು ಮತ್ತೆ ನಮಗೆ ನಿರಾಳವಾಗಲು ಅನುವು ಮಾಡಿಕೊಡುತ್ತದೆ ಮತ್ತು ನಾವು ಅವರ ಮೇಲೆ ಅಷ್ಟೊಂದು ಕೋಪಗೊಳ್ಳುವುದಿಲ್ಲ. ಈ ವ್ಯಕ್ತಿಯ ಅಸಹ್ಯಕರ ವರ್ತನೆ ಕೇವಲ ಒಂದು ಆಕಸ್ಮಿಕ ಘಟನೆಯಾಗಿತ್ತು - ಅದು ಆಗಾಗ್ಗೆ ಸಂಭವಿಸಿದರೂ ಸಹ – ಇದು ಅವನು ಯಾವಾಗಲೂ ಇರಬೇಕಾದ ರೀತಿಯಾಗಿರುವುದಿಲ್ಲ ಎಂದು ನಾವು ನೋಡುತ್ತೇವೆ.
ಪ್ರಯೋಜನಕಾರಿ ಅಭ್ಯಾಸಗಳನ್ನು ಬೆಳೆಸಿಕೊಳ್ಳುವುದು
ಕಷ್ಟಕರ ಸಂದರ್ಭಗಳಲ್ಲಿ, ಈ ಎಲ್ಲಾ ಅಂಶಗಳನ್ನು ಅನ್ವಯಿಸುವುದು ಅಷ್ಟು ಸುಲಭವಲ್ಲದಿರಬಹುದು. ಈ ಎಲ್ಲಾ ವಿವಿಧ ತಾರ್ಕಿಕ ವಿಧಾನಗಳನ್ನು "ತಡೆಗಟ್ಟುವ ಕ್ರಮಗಳು" ಎಂದು ಕರೆಯಲಾಗುತ್ತದೆ. "ಧರ್ಮ" ಎಂಬ ಪದವನ್ನು ನಾನು ಹೀಗೆ ಅನುವಾದಿಸುತ್ತೇನೆ. "ಧರ್ಮ" ಎನ್ನುವುದು ಸಮಸ್ಯೆಗಳನ್ನು ತಡೆಗಟ್ಟಲು ನಾವು ತೆಗೆದುಕೊಳ್ಳುವ ಕ್ರಮವಾಗಿದೆ. ಈ ವಿಭಿನ್ನ ರೀತಿಯ ತಾಳ್ಮೆಯನ್ನು ಪ್ರಯೋಜನಕಾರಿ ಅಭ್ಯಾಸಗಳಾಗಿ ಬೆಳೆಸಲು ಪ್ರಯತ್ನಿಸುವ ಮೂಲಕ ನಾವು ಕೋಪಗೊಳ್ಳದಂತೆ ರಕ್ಷಿಸಿಕೊಳ್ಳಲು ಬಯಸುತ್ತೇವೆ. "ಧ್ಯಾನ" ಎಂದರೆ ಇದೇ. ಧ್ಯಾನಕ್ಕಾಗಿ ಟಿಬೆಟಿಯನ್ ಪದವು "ಏನನ್ನಾದರೂ ಅಭ್ಯಾಸ ಮಾಡುವುದು" ಎಂಬ ಪದದಿಂದ ಬಂದಿದೆ, ಪ್ರಯೋಜನಕಾರಿಯಾದದ್ದಕ್ಕೆ ನಮ್ಮನ್ನು ನಾವು ಒಗ್ಗಿಸಿಕೊಳ್ಳುವುದು.
ಮೊದಲನೆಯದಾಗಿ, ನಾವು ವಿವಿಧ ರೀತಿಯ ತಾಳ್ಮೆಯ ಬಗ್ಗೆ ಈ ವಿವಿಧ ವಿವರಣೆಗಳನ್ನು ಕೇಳಬೇಕು. ನಂತರ, ನಾವು ಅವುಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಅವು ಅರ್ಥಪೂರ್ಣವಾಗಿದೆಯೇ ಎಂದು ನೋಡಲು ಅವುಗಳ ಬಗ್ಗೆ ಯೋಚಿಸಬೇಕು. ಅವು ಅರ್ಥಪೂರ್ಣವಾಗಿದ್ದರೆ ಮತ್ತು ನಾವು ಅವುಗಳನ್ನು ಅರ್ಥಮಾಡಿಕೊಂಡರೆ, ಮತ್ತು ಅವುಗಳನ್ನು ಅನ್ವಯಿಸಲು ನಮಗೆ ಪ್ರೇರಣೆಯೂ ಇದ್ದರೆ, ನಾವು ಅವುಗಳನ್ನು ಪೂರ್ವಾಭ್ಯಾಸ ಮಾಡುವ ಮತ್ತು ಅಭ್ಯಾಸ ಮಾಡುವ ಮೂಲಕ ಅವುಗಳನ್ನು ಪ್ರಯೋಜನಕಾರಿ ಅಭ್ಯಾಸವಾಗಿ ಬೆಳೆಸಲು ಪ್ರಯತ್ನಿಸುತ್ತೇವೆ.
ಮೊದಲ ಹೆಜ್ಜೆಯಾಗಿ ಈ ಅಂಶಗಳನ್ನು ಪರಿಶೀಲಿಸುವ ಮೂಲಕ ಇದನ್ನು ಮಾಡಲಾಗುತ್ತದೆ. ಈ ಅಂಶಗಳನ್ನು ಪರಿಶೀಲಿಸಿದ ನಂತರ, ನಾವು ಆ ರೀತಿಯಲ್ಲಿ ವಿಷಯಗಳನ್ನು ನೋಡಲು ಮತ್ತು ಅನುಭವಿಸಲು ಪ್ರಯತ್ನಿಸಬೇಕು. ನಮ್ಮ ಕಲ್ಪನೆಯನ್ನು ಬಳಸಿಕೊಂಡು ನಮ್ಮ ಮನಸ್ಸಿನಲ್ಲಿ ಸನ್ನಿವೇಶಗಳನ್ನು ಕಲ್ಪಿಸಿಕೊಳ್ಳಬೇಕು. ನಾವು ಸಾಮಾನ್ಯವಾಗಿ ಕೋಪಗೊಳ್ಳುವ ಮತ್ತು ಅಸಮಾಧಾನಗೊಳ್ಳುವ ಪರಿಸ್ಥಿತಿಯನ್ನು ನಾವು ಊಹಿಸಬಹುದು. ಉದಾಹರಣೆಗೆ, ನಮ್ಮ ಕಚೇರಿಯಲ್ಲಿ ಯಾರಾದರೂ ನಮಗೆ ಇಷ್ಟವಿಲ್ಲದ ರೀತಿಯಲ್ಲಿ ಕೆಲಸಗಳನ್ನು ಮಾಡಬಹುದು. ಮೊದಲು, ಈ ವ್ಯಕ್ತಿಯನ್ನು ಅವನು ಅಥವಾ ಅವಳು ಇರುವಂತೆಯೇ, ಸಂತೋಷವಾಗಿರಲು ಬಯಸುವ ಮತ್ತು ಅಸಂತೋಷವಾಗದೆ ಇರಲು ಬಯಸುವ ಮನುಷ್ಯನಾಗಿ ನೋಡಲು ಪ್ರಯತ್ನಿಸಿ. ಅವನು ತನ್ನ ಕೈಲಾದಷ್ಟು ಪ್ರಯತ್ನಿಸುತ್ತಿದ್ದರೂ, ಅವನು ಮಗುವಿನಂತೆ ಇದ್ದಾನೆ ಮತ್ತು ಅವನು ಏನು ಮಾಡುತ್ತಿದ್ದಾನೆಂದು ಅವನಿಗೆ ನಿಜವಾಗಿಯೂ ತಿಳಿದಿಲ್ಲ. ನಾವು ಅವನನ್ನು ಈ ರೀತಿ ನೋಡಲು ಮತ್ತು ಅನುಭವಿಸಲು ಪ್ರಯತ್ನಿಸಿದರೆ ಮತ್ತು ಮನೆಯಲ್ಲಿ ಶಾಂತವಾಗಿ ಕುಳಿತಾಗ ನಮ್ಮ ಮನಸ್ಸಿನಲ್ಲಿ ಅದನ್ನು ಪೂರ್ವಾಭ್ಯಾಸ ಮಾಡಿದರೆ, ಇದನ್ನು ಹೆಚ್ಚು ಮಾಡಿದಷ್ಟು, ನಾವು ಕಚೇರಿಯಲ್ಲಿದ್ದಾಗ ಮತ್ತು ಅವನು ಅಸಹ್ಯಕರವಾಗಿ ವರ್ತಿಸಲು ಪ್ರಾರಂಭಿಸಿದಾಗ ನಾವು ಹೆಚ್ಚು ಸಕಾರಾತ್ಮಕ ರೀತಿಯಲ್ಲಿ ಪ್ರತಿಕ್ರಿಯಿಸುತ್ತೇವೆ. ಅವನ ಮೇಲೆ ಕೋಪಗೊಳ್ಳುವ ಪ್ರಚೋದನೆಯ ಬದಲು, ನಮ್ಮ ಮನಸ್ಸಿಗೆ ಹೊಸ ಪ್ರಚೋದನೆ ಬರುತ್ತದೆ - ಹೆಚ್ಚು ತಾಳ್ಮೆಯಿಂದಿರಲು, ಹೆಚ್ಚು ಸಹಿಷ್ಣುವಾಗಿರಲು ಪ್ರಚೋದನೆ.
ಅವನ ತುಂಟತನದ ನಡವಳಿಕೆಯೊಂದಿಗೆ ತಾಳ್ಮೆಯನ್ನು ಬೆಳೆಸಿಕೊಳ್ಳಲು ಅವನನ್ನು ಮಗುವಿನಂತೆ ನೋಡುವುದನ್ನು ಅಭ್ಯಾಸ ಮಾಡಿದ ನಂತರ, ನಾವು ಒಂದು ಹೆಜ್ಜೆ ಮುಂದೆ ಹೋಗಬಹುದು. ಅವನು ಈ ರೀತಿಯ ಅಸಹ್ಯಕರ ರೀತಿಯಲ್ಲಿ ವರ್ತಿಸಿದಾಗ, ಅವನೇ ಮುಖ ಕಳೆದುಕೊಳ್ಳುತ್ತಾನೆ ಎಂದು ನಾವು ನೋಡಬಹುದು. ಹೀಗಾಗಿ, ನಾವು ಅವನ ಬಗ್ಗೆ ಸಹಾನುಭೂತಿಯನ್ನು ಬೆಳೆಸಿಕೊಳ್ಳುತ್ತೇವೆ. ಧ್ಯಾನದ ಮೂಲಕ ಈ ರೀತಿ ನೋಡುವ ಮತ್ತು ಅನುಭವಿಸುವ ಅಭ್ಯಾಸವನ್ನು ನಾವು ಬೆಳೆಸಿಕೊಳ್ಳಬಹುದು. ತಾಳ್ಮೆಯಿಂದ ನೋಡುವುದು ಮತ್ತು ಅನುಭವಿಸುವುದು ಪ್ರಯೋಜನಕಾರಿ ಅಭ್ಯಾಸವಾದಾಗ, ಅದು ನಮ್ಮ ಒಂದು ಭಾಗವಾಗುತ್ತದೆ. ನಾವು ಎದುರಿಸಬೇಕಾದ ಕಷ್ಟಕರ ಸಂದರ್ಭಗಳಿಗೆ ಪ್ರತಿಕ್ರಿಯಿಸುವ ನಮ್ಮ ನೈಸರ್ಗಿಕ ಮಾರ್ಗವಾಗುತ್ತದೆ. ಕೋಪಗೊಳ್ಳಲು ನಮ್ಮ ಮನಸ್ಸಿನಲ್ಲಿ ಒಂದು ಪ್ರಚೋದನೆ ಬಂದಾಗ, ಒಂದು ಅಂತರವಿರುತ್ತದೆ. ನಾವು ಅದನ್ನು ತಕ್ಷಣವೇ ನಿರ್ವಹಿಸುವುದಿಲ್ಲ ಮತ್ತು ಹೆಚ್ಚು ಪ್ರಯೋಜನಕಾರಿ ರೀತಿಯಲ್ಲಿ ಕಾರ್ಯನಿರ್ವಹಿಸಲು ಹೆಚ್ಚು ಸಕಾರಾತ್ಮಕ ಪ್ರಚೋದನೆಗಳು ಉದ್ಭವಿಸುತ್ತವೆ.
ಬೌದ್ಧಧರ್ಮದ ಕುರಿತಾದ ಉಪನ್ಯಾಸಗಳಲ್ಲಿ, ನಾವು ಸಾಮಾನ್ಯವಾಗಿ ಉಸಿರಾಟದ ಸಂವೇದನೆಯ ಮೇಲೆ ಕೇಂದ್ರೀಕರಿಸುತ್ತೇವೆ ಮತ್ತು ಪ್ರತಿ ಭಾಷಣದ ಆರಂಭದಲ್ಲಿ ನಮ್ಮ ಉಸಿರನ್ನು ಇಪ್ಪತ್ತೊಂದಕ್ಕೆ ಎಣಿಸುತ್ತೇವೆ. ಕೋಪಗೊಳ್ಳಲು ಹೊರಟಿರುವ ನಮ್ಮನ್ನು ನಾವು ಮೊದಲು ಗಮನಿಸಿದಾಗ ಈ ಅಭ್ಯಾಸವು ತುಂಬಾ ಸಹಾಯಕವಾಗಿದೆ. ಇದು ಏನನ್ನಾದರೂ ಹೇಳುವ ನಕಾರಾತ್ಮಕ ಪ್ರಚೋದನೆಯನ್ನು ನಾವು ತಕ್ಷಣವೇ ನಿರ್ವಹಿಸದ ಅಂತರವನ್ನು ಸೃಷ್ಟಿಸುತ್ತದೆ, ಉದಾಹರಣೆಗೆ, ಮತ್ತು ನಾವು ಕೋಪಗೊಳ್ಳಲು ಮತ್ತು ಅಸಮಾಧಾನಗೊಳ್ಳಲು ಬಯಸಿದರೆ ಅದನ್ನು ಮರುಪರಿಶೀಲಿಸಲು ಇದು ಸ್ವಲ್ಪ ಅಂತರವನ್ನು ನೀಡುತ್ತದೆ. "ನಾನು ನಿಜವಾಗಿಯೂ ರಂಪಾಟ ಮಾಡಲು ಬಯಸುತ್ತೇನೆಯೇ ಅಥವಾ ಈ ಪರಿಸ್ಥಿತಿಯನ್ನು ನಿಭಾಯಿಸಲು ಉತ್ತಮ ಮಾರ್ಗವಿದೆಯೇ?" ಎಂದು ನಾವು ಯೋಚಿಸುತ್ತೇವೆ. ಧ್ಯಾನ ಮತ್ತು ಹೆಚ್ಚು ಪ್ರಯೋಜನಕಾರಿ ಅಭ್ಯಾಸಗಳನ್ನು ಬೆಳೆಸಿಕೊಳ್ಳುವ ಪರಿಣಾಮವಾಗಿ, ನಾವು ಸಂದರ್ಭಗಳನ್ನು ಹೆಚ್ಚು ತಾಳ್ಮೆಯಿಂದ ನೋಡುತ್ತೇವೆ ಮತ್ತು ಅವುಗಳ ಬಗ್ಗೆ ಹೆಚ್ಚು ಸಹಿಷ್ಣುತೆಯನ್ನು ಅನುಭವಿಸುತ್ತೇವೆ. ಹೆಚ್ಚು ಸಕಾರಾತ್ಮಕ ಪರ್ಯಾಯಗಳು ನಮ್ಮ ತಲೆಗೆ ಬರುತ್ತವೆ ಮತ್ತು ನಾವು ಸ್ವಾಭಾವಿಕವಾಗಿ ಅವುಗಳನ್ನು ಆಯ್ಕೆ ಮಾಡುತ್ತೇವೆ, ಏಕೆಂದರೆ ನಾವು ಸಂತೋಷವಾಗಿರಲು ಬಯಸುತ್ತೇವೆ ಮತ್ತು ಈ ಪರ್ಯಾಯ ಮಾರ್ಗಗಳು ನಮಗೆ ಆ ಫಲಿತಾಂಶವನ್ನು ತರುತ್ತವೆ ಎಂದು ನಮಗೆ ತಿಳಿದಿದೆ.
ಇದನ್ನು ಮಾಡಲು, ನಮಗೆ ಏಕಾಗ್ರತೆ ಬೇಕು. ಅದಕ್ಕಾಗಿಯೇ ಬೌದ್ಧಧರ್ಮದಲ್ಲಿ ಏಕಾಗ್ರತೆಯನ್ನು ಬೆಳೆಸಲು ಹಲವು ವಿಭಿನ್ನ ಧ್ಯಾನ ವಿಧಾನಗಳಿವೆ. ಈ ವಿಧಾನಗಳನ್ನು ಕೇವಲ ಅಮೂರ್ತ ಅಭ್ಯಾಸವಾಗಿ ಕಲಿಯಲಾಗುವುದಿಲ್ಲ; ಅವುಗಳನ್ನು ಬಳಸಲು ಮತ್ತು ಅನ್ವಯಿಸಲು ಮಾಡಲಾಗುತ್ತದೆ. ನಾವು ಅವುಗಳನ್ನು ಯಾವಾಗ ಅನ್ವಯಿಸುತ್ತೇವೆ? ನಾವು ಅವುಗಳನ್ನು ಕಷ್ಟಕರ ಸಂದರ್ಭಗಳಲ್ಲಿ, ನಾವು ಅಸಹ್ಯಕರ ಜನರು ಅಥವಾ ಅಸಹ್ಯಕರ ಪರಿಸ್ಥಿತಿಗಳೊಂದಿಗೆ ವ್ಯವಹರಿಸುವಾಗ ಅನ್ವಯಿಸುತ್ತೇವೆ. ನಮ್ಮ ಮನಸ್ಸನ್ನು ತಾಳ್ಮೆಯಿಂದ ಇಟ್ಟುಕೊಳ್ಳುವುದರ ಮೇಲೆ ಕೇಂದ್ರೀಕರಿಸಲು ಅವು ನಮಗೆ ಸಹಾಯ ಮಾಡುತ್ತವೆ.
ಸಾರಾಂಶ
ಕೇವಲ ಸ್ವಯಂ ನಿಯಂತ್ರಣ ಮತ್ತು ಶಿಸ್ತನ್ನು ಬಳಸುವ ಮೂಲಕ ನಾವು ನಕಾರಾತ್ಮಕ, ವಿನಾಶಕಾರಿ ನಡವಳಿಕೆಯಿಂದ ನಮ್ಮನ್ನು ನಿಗ್ರಹಿಸಿಕೊಳ್ಳುವುದಿಲ್ಲ. ನಾವು ಇದನ್ನು ಕೇವಲ ಸ್ವಯಂ ನಿಯಂತ್ರಣ ಮತ್ತು ಶಿಸ್ತಿನಿಂದ ಮಾಡಿದರೆ, ಕೋಪವು ನಮ್ಮೊಳಗೆ ಉಳಿಯುತ್ತದೆ. ನಾವು ಹೊರಗೆ ಬಹಳಾ ಬಲವಾದ ಮುಖವನ್ನು ಧರಿಸುತ್ತೇವೆ, ಆದರೆ ಒಳಗೆ ಕೋಪವು ಉರಿಯುತ್ತಿರುತ್ತದೆ ಮತ್ತು ಅದು ನಮ್ಮಲ್ಲಿ ಹುಣ್ಣನ್ನು ಉಂಟುಮಾಡುತ್ತದೆ. ಆದರೆ, ಇದಕ್ಕೆ ವಿರುದ್ಧವಾಗಿ, ನಾವು ಈ ವಿಧಾನಗಳನ್ನು ಸರಿಯಾಗಿ ಬಳಸಿದಾಗ, ಕೋಪವು ಉದ್ಭವಿಸುವುದಿಲ್ಲ. ಕೋಪವನ್ನು ನಿಯಂತ್ರಿಸುವುದು ಮತ್ತು ಅದನ್ನೆಲ್ಲಾ ಒಳಗೆ ಇಟ್ಟುಕೊಳ್ಳುವುದು ಮುಖ್ಯವಲ್ಲ; ಅದು ನಮ್ಮ ತಲೆಗೆ ಬರುವ ಪ್ರಚೋದನೆಗಳನ್ನು ಬದಲಾಯಿಸುವ ವಿಷಯವಾಗಿದೆ. ನಾವು ಎಲ್ಲವನ್ನೂ ಒಳಗೆ ಇಟ್ಟುಕೊಂಡು, ನಾವು ಎದುರಿಸಬೇಕಾದ ನಕಾರಾತ್ಮಕ ಪ್ರಚೋದನೆಗಳು ಉದ್ಭವಿಸುವ ಬದಲು, ಸಕಾರಾತ್ಮಕ ಪ್ರಚೋದನೆಗಳು ಉದ್ಭವಿಸುತ್ತವೆ.
ನಾವು ಇದನ್ನು ಮಾಡಲು ಸಾಧ್ಯವಾದರೆ, ನಮ್ಮ ಪ್ರೇರಣೆಯನ್ನು ಅವಲಂಬಿಸಿ, ನಾವು ನಮ್ಮ ಸಮಸ್ಯೆಗಳಿಂದ ನಮ್ಮನ್ನು ಮುಕ್ತಗೊಳಿಸಿಕೊಳ್ಳಬಹುದು ಮತ್ತು ಭವಿಷ್ಯದಲ್ಲಿ ವಿಷಯಗಳು ಹದಗೆಡುವುದಿಲ್ಲ. ಅಥವಾ, ನಮಗೆ ಯಾವುದೇ ಸಮಸ್ಯೆಗಳಿಲ್ಲ, ಅಥವಾ, ಬಲವಾದ ಮತ್ತು ಅತ್ಯಂತ ಮುಂದುವರಿದ ಪ್ರೇರಣೆಯೊಂದಿಗೆ, ನಾವು ನಮ್ಮ ಕುಟುಂಬಕ್ಕೆ, ನಮ್ಮ ಸ್ನೇಹಿತರಿಗೆ, ನಮ್ಮ ಸುತ್ತಮುತ್ತಲಿನ ಜನರಿಗೆ ಸಮಸ್ಯೆಗಳನ್ನು ಉಂಟುಮಾಡುವುದಿಲ್ಲ ಮತ್ತು ನಾವು ಇತರರಿಗೆ ಪೂರ್ಣವಾಗಿ ಸಹಾಯ ಮಾಡಲು ಸಾಧ್ಯವಾಗುತ್ತದೆ. ನಾವು ನಮ್ಮ ಗೊಂದಲಮಯ ಭಾವನೆಗಳು ಮತ್ತು ಸಮಸ್ಯೆಗಳಿಂದ ಸೀಮಿತವಾಗಿರುವುದಿಲ್ಲವಾದ್ದರಿಂದ ನಾವು ಹೀಗೆ ಮಾಡಲು ಸಾಧ್ಯವಾಗುತ್ತದೆ. ಹೀಗಾಗಿ ನಾವು ನಮ್ಮ ಎಲ್ಲಾ ಸಾಮರ್ಥ್ಯಗಳನ್ನು ಅರಿತುಕೊಳ್ಳಲು ಸಾಧ್ಯವಾಗುತ್ತದೆ.